Wednesday, 18 September 2019

ಸಂವಿಧಾನದ ಮುಂದಿರುವ ಸವಾಲುಗಳು-ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್



ಸಂವಿಧಾನ ಭಾರತೀಯರ ಮಹಾಗ್ರಂಥ. ವಿವಿಧ ಧರ್ಮಗಳ, ಜಾತಿಯ, ಸಂಸ್ಕøತಿಯ, ಭಾಷೆಯ, ನಂಬಿಕೆಗಳ, ಅಭಿಪ್ರಾಯಗಳ, ಆಚಾರ, ವಿಚಾರಗಳ, ಆಹಾರ ಪದ್ಧತಿಗಳ, ಉಡುಪುಗಳ ಜನರನ್ನು ಒಟ್ಟಿಗೆ ಮುನ್ನಡೆಸುತ್ತಿರುವುದು ಭಾರತದ ಸಂವಿಧಾನ. ಪ್ರಜಾಪ್ರಭುತ್ವ, ಜಾತ್ಯತೀತÀತೆ, ಸಾಮಾಜಿಕ ನ್ಯಾಯವೆಂಬ ಸಿದ್ಧಾಂತಗಳನ್ನು ಬಿತ್ತಿ, ಬೆಳೆಸುತ್ತಿರುವುದು ಭಾರತದ ಸಂವಿಧಾನ. ನಾವೆಲ್ಲರೂ ಅನುಭವಿಸುತ್ತಿರುವ ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಎದುರಿಸುವ ಸಮಸ್ಯೆಗಳಿಗೆ ಹಲವು ಸಾಂವಿಧಾನಿಕ ಪರಿಹಾರಗಳನ್ನು ನೀಡಿರುವುದು ಭಾರತದ ಸಂವಿಧಾನ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳಲ್ಲಿ ಈ ದೇಶದ ಜನರು ಭಾಗವಹಿಸುವಂತೆ ಮಾಡಿರುವುದು ಭಾರತದ ಸಂವಿಧಾನ. ಜನ ಸಾಮಾನ್ಯರ ಕನಿಷ್ಠ ಅವಶ್ಯಕತೆಗಳನ್ನು ಸ್ವಲ್ಪ ಮಟ್ಟಿಗಾದರೂ ಪೂರೈಸಿರುವುದು ಭಾರತ ಸಂವಿಧಾನದ ಆಶಯವಾದ ಕಲ್ಯಾಣ ರಾಜ್ಯದ ಮೌಲ್ಯ. ಧರ್ಮ, ಜನಾಂಗೀಯ, ಜಾತಿ, ಲಿಂಗ, ಭಾಷೆ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಿ ಎಲ್ಲರಿಗೂ ಸಮಾನ ರಕ್ಷಣೆ ಮತ್ತು ಅವಕಾಶಗಳನ್ನು ನೀಡಿರುವುದು ಭಾರತದ ಸಂವಿಧಾನ. ಆದ್ದರಿಂದ, ನಾವು ಸುರಕ್ಷಿತವಾಗಿ ಬದುಕಲು, ನಮಗೋಸ್ಕರ, ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಸಂವಿಧಾನವನ್ನು, ಅದರ ಆಶಯಗಳನ್ನು ರಕ್ಷಿಸಬೇಕು. 


ನಮ್ಮ ಸಂವಿಧಾನವನ್ನು ನಾವು ಕಳೆದುಕೊಂಡರೆ ಅಂರ್ತಯುದ್ಧ ನಡೆದು ಭಾರತ ದೇಶ ಛಿದ್ರ ಛಿದ್ರವಾಗಿ ಹೋಳಾಗುತ್ತದೆ. ಪ್ರಜಾಪ್ರಭುತ್ವ, ಜಾತ್ಯತೀತÀತೆ, ಸಾಮಾಜಿಕ ನ್ಯಾಯವೆಂಬ ಸಿದ್ಧಾಂತಗಳು ನಾಶವಾಗಿ ಅರಾಜಕತೆ, ಮತೀಯವಾದ, ಕೋಮುವಾದ, ಮೂಲಭೂತವಾದವೆಂಬ ಅಮಾನವೀಯ ಸಿದ್ಧಾಂತಗಳು ರಾರಾಜಿಸುತ್ತವೆ. ಜನಸಾಮಾನ್ಯರು ಗಳಿಸಿದ ಹಕ್ಕುಗಳನ್ನು ಕಳೆದುಕೊಂಡು ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ಜೀವಿಸಬೇಕಾಗುತ್ತದೆ. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಬಡವರು ಶೋಷಣೆ, ದಬ್ಬಾಳಿಕೆ, ಕ್ರೌರ್ಯ, ಹಿಂಸೆ, ಅಭದ್ರತೆಗಳಿಗೆ ಬಲಿಯಾಗಬೇಕಾಗುತ್ತದೆ. ರೂಲ್ ಆಫ್ ಲಾ ಹೋಗಿ ಜಂಗಲ್ ಲಾ ವ್ಯವಸ್ಥೆ ಬರುತ್ತದೆ. ಆದ್ದರಿಂದ, ನಮ್ಮ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕಾಗಿದೆ.

ಹಾಗಾದರೆ ಇಂತಹ ಗಂಭೀರ ಪರಿಸ್ಥಿತಿಯಲ್ಲಿ ನಮ್ಮ ಕರ್ತವ್ಯವೇನು? 
ಮೊತ್ತ ಮೊದಲಿಗೆ ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಬೇಕು, ಅರ್ಥೈಸಬೇಕು. ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಬದುಕಿನ ವಿಧಾನವಾಗಿಸಿಕೊಳ್ಳಬೇಕು. ನಮ್ಮ ಕುಟುಂಬದ ಸದಸ್ಯರಿಗೆ ಸಂವಿಧಾನದ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ನಮ್ಮ ಸುತ್ತಮುತ್ತಲಿನ ಬಂಧು, ಬಳಗ, ಗೆಳೆಯರಲ್ಲಿ, ವಿದ್ಯಾರ್ಥಿ ಯುವಜನರ ಮಧ್ಯೆ ನಮ್ಮ ಸಂವಿಧಾನದ ತಿಳುವಳಿಕೆಯನ್ನು ಹಂಚಿಕೊಳ್ಳಬೇಕು. ಸಂವಿಧಾನದ ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸಲಿಕ್ಕೆ ಪ್ರಯತ್ನಿಸಬೇಕು. ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು. 
ನಮ್ಮ ಸಂವಿಧಾನದ ಉಳಿವಿಗಾಗಿ, ದೇಶದ ಸಮಗ್ರತೆಗಾಗಿ ಮತ್ತು ಜನತೆಯ ಕಲ್ಯಾಣಕ್ಕಾಗಿ ನಾವೆಲ್ಲರೂ ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧರಾಗೋಣ. 
                          

ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ 
                                                                                                             ಆಗಸ್ಟ್ 2018

ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ ಸಂವೇದನೆ- ‘ಮೌನಗರ್ಭದ ಒಡಲು’

ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ 
ಸಂವೇದನೆ- ‘ಮೌನಗರ್ಭದ ಒಡಲು’
                                                            -ಡಾ. ಬಂಜಗೆರೆ ಜಯಪ್ರಕಾಶ
                                                                              (ಕೃತಿಗೆ ಬರೆದ ಮುನ್ನುಡಿಯಿಂದ)
`ಮಾತಿಗೆ ಒಂದೇ ಭಾವ
ಮೌನಕ್ಕೆ ನೂರು ನೂರು ನೂರು ಭಾವ (ಮೌನಗರ್ಭದ ಒಡಲು)
ಮೌನಕ್ಕೆ ನೂರು ನೂರಾರು ಭಾವ ಎಂದು ಮಾಧವಿ ಬರೆದಿರುವುದು ಕೇವಲ ಕಾವ್ಯಾಲಂಕಾರವಲ್ಲ ಎನಿಸುತ್ತದೆ ನನಗೆ. ಮಾತಿಗೆ ಒಂದರ್ಥ. ಹೆಚ್ಚೆಂದರೆ ಎರಡು ಅಥವಾ ಮೂರು ಧ್ವನ್ಯಾರ್ಥಗಳಿರಬಹುದು. ಆದರೆ ಮೌನದ ಅರ್ಥ ಸಾಧ್ಯತೆ ಅಸೀಮವಾದುದು. ಒಂದು ಮೌನ ನುಡಿಯುವ ಭಾμÉ ಅಪಾರವಾದದ್ದು. ಝೆನ್ ಪಂಥದಲ್ಲೂ ಮೌನಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಅದು ವಿವರಿಸಲಾಗದ ಸಂದಿಗ್ಧ. ವಿವರಿಸಿದರೂ ಅರ್ಥಮಾಡಿಸಲಾಗದ ಸಂಕಷ್ಟ. ಅಥವಾ ವಿವರಿಸಲು ಏನಿದೆ? ಅನುಭವವನ್ನು ಹಾಗೆ ಮಾತಿನ ನಾವೆ ಹತ್ತಿಸಿ ದಡ ಸೇರಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಝೆನ್ ಪಂಥದ ನಿಲುವು. ಅನುಭವದ ಆಳ, ಹರಿವು ಹೆಚ್ಚಿದಷ್ಟೂ ಅದಕ್ಕೆ ಮಾತಿನ ರೂಪಕೊಡುವುದು ಹೆಚ್ಚು ಕಷ್ಟ.

 ತೆಳು ಅನುಭವಗಳು ಮಾತುಗಳಾಗಿ ಪಟಪಟನೆ ಹೊಮ್ಮಬಹುದಾದರೂ ಅನುಭವದಾಳದಲ್ಲಿ ಮುಳುಗಿದ ಅರ್ಥ ಅಷ್ಟು ಸುಲಭವಾಗಿ ಚಿಮ್ಮಲಾರದು. ಝೆನ್ ಮಾತುಗಳಿಗೆ ಅರ್ಥ ಸಾಧ್ಯತೆಯ ಮಿತಿಯೇ ಒಂದು ತೊಡಕು. ಹೇಳಿದರೂ ಹೇಳಬೇಕಾದುದನ್ನು ಹೇಳಿದಂತಾಗುವುದಿಲ್ಲ. ಹೇಳಬೇಕಾದುದನ್ನು ಹೇಳದಿದ್ದ ಮೇಲೆ ಮಾತಿಗಿಂತ ಮೌನವೇ ಪ್ರಶಸ್ತವಲ್ಲವೇ. ಮೌನವನ್ನು ಪರಿಭಾವಿಸುವವರು ಅವರ ಸಾಧ್ಯತೆಗೆ ತಕ್ಕಂತೆ ಭಾವಿಸಬಹುದು. ಅರ್ಥೈಸಬಹುದು. ಅಥವಾ ಅರ್ಥ ಮಾಡಿಕೊಳ್ಳದೆಯೂ ಉಳಿಯಬಹುದು. ಮಾತುಗಳಾಡಿದ ಮಾತ್ರಕ್ಕೆ ಅದನ್ನು ಎದುರಿನವರು ಕೇಳಿಸಿಕೊಳ್ಳುತ್ತಾರೆಂಬ ಖಾತ್ರಿ ಇಲ್ಲ. ಕೇಳಿಸಿಕೊಂಡರೂ ಅರ್ಥ ಮಾಡಿಕೊಳ್ಳುತ್ತಾರೆಂಬ, ಅರ್ಥ ಮಾಡಿಕೊಂಡರೂ ಸ್ಪಂದಿಸುತ್ತಾರೆಂಬ ಭರವಸೆ ಇಲ್ಲ. ಹಾಗಾಗಿ ಮೌನವೆನ್ನುವುದು ಒಂದು ಅನಿವಾರ್ಯ ಆಶ್ರಯ.
ಆದರೆ ಮೌನ ಸುಮ್ಮನುಳಿಯುವುದಿಲ್ಲ. ಮಾತಾಗದಿದ್ದರೂ ಅದು ಮನಸ್ಸಾಗಿ ನುಡಿಯುತ್ತದೆ. ಕಲೆಯಾಗಿ, ಕಸೂತಿಯಾಗಿ, ಹಾಡಾಗಿ, ನರ್ತನವಾಗಿ, ಹಸೆಯಾಗಿ, ರಂಗವಲ್ಲಿಯಾಗಿ, ಜೋಗುಳವಾಗಿ, ಕಣ್ಣೋಟವಾಗಿ ನುಡಿಯುತ್ತದೆ. ಆದರೆ ಮೌನವಾಗಿರುವುದು ಝೆನ್‍ಗೆ ಒಂದು ಆಯ್ಕೆ. ಒಂದು ಅಧಿಕಾರ. ಇದಿರಿನ ಅಂಕುಶವಿಲ್ಲದ ಸ್ವಾಯತ್ತತೆ. ಅದನ್ನು ನುಡಿಯಲೇಬೇಕೆಂದು ನಿರ್ಬಂಧಿಸುವುದು ಸಾಧ್ಯವಿರದ ಮಾತು. ತಲೆದಂಡವಾದರೂ ನುಡಿಯದೇ ಉಳಿದ ನಿದರ್ಶನಗಳೆಷ್ಟೋ ಆ ಪಂಥದಲ್ಲಿವೆ. ಅದು ಸತ್ಯದ ಸಾಕ್ಷಾತ್ಕಾರದ ದಾರಿ. ಸ್ವಯಂ ಬೋಧೆಯಾಗದ ಹೊರತು, ಸ್ವಯಂ ಜ್ಞಾನೋದಯವಾಗದ ಹೊರತು ನುಡಿಯಿಂದ ಉಪಯೋಗವೇನು ಎಂಬ ಅಚಲ ನಿಲುವು ಅದರದ್ದು. ಆದರೆ ಹೆಣ್ಣು ಲೋಕದ ಮೌನ ಆಯ್ಕೆಯಿಂದ ಬಂದದ್ದಲ್ಲ, ಅನಿವಾರ್ಯತೆಯಿಂದ ಉಂಟಾದದ್ದು. ನುಡಿಯಲು ನೂರು ಮಾತಿವೆ, ಆದರೆ ಅದಕ್ಕೆ ಆಸ್ಪದವಿಲ್ಲ. ಈ ನಡುವೆ ಏನಾದರೂ ನುಡಿದರೂ ನಿಜವಾದುದನ್ನು ನುಡಿಯುವಂತಿಲ್ಲ. ನುಡಿದರೆ ದಂಡನೆ ತಪ್ಪದು. ಹೆಚ್ಚು ನುಡಿದರೂ ಮರ್ಯಾದೆಯ ಮೇರೆಯನ್ನು ಮೀರಿದಂತೆ ಎನ್ನುವಂತಹ ಬಂಧನದ ಹೇರಿಕೆ. ಹಾಗಾಗಿ ಹೆಣ್ಣು ಲೋಕಕ್ಕೆ ನೂರು ಅನುಭವಗಳಿವೆ, ಅನಿಸಿಕೆಗಳಿವೆ, ಆಲೋಚನೆಗಳಿವೆ, ಅಭಿಪ್ರಾಯಗಳೂ ಇವೆ. ಅವು ಲೋಕಕ್ಕೆ ಬೇಕಿಲ್ಲ. ಲೋಕ ಅವುಗಳನ್ನು ಮಾನ್ಯ ಮಾಡುವುದೂ ಇಲ್ಲ. ಹಾಗಾಗಿ ನುಡಿಯದೇ ಉಳಿಯಬೇಕಾದ ಒತ್ತಡ ಹೆಣ್ಣೊಳಗೆ ಕಲೆಯಾಗಿ, ದುಡಿಮೆಯಾಗಿ, ಪ್ರೀತಿಯ ಹೊನಲಾಗಿ, ಬದುಕಿನ ಪ್ರೀತಿಯಾಗಿ, ಮಾನವೀಯ ಸ್ಪಂದನವಾಗಿ ಹೇಗೋ ತನ್ನನ್ನು ತಾನು ಕಂಡರಿಸಿ ಕೊಳ್ಳುತ್ತದೆ. ಅದು ಒಂದು ಅಸಾಧ್ಯ ಸಾಧ್ಯತೆಯ ಹಾದಿ. ಅದು ಪಿಸುಮಾತಾಗಿ, ನಗೆಯಾಗಿ, ಬಿಂಕವಾಗಿ, ಬೆಡಗಾಗಿ ಹೊಮ್ಮಬಹುದು. ಪ್ರತಿಭಟನೆಯಾಗಿ, ನಿರಸನವಾಗಿ, ಧಿಕ್ಕಾರವಾಗಿ ಕೂಡ ಪರ್ಯವಸಾನವಾಗಬಹುದು.
ಆದರೆ ಮೌನವೆಂದರೆ ಶೂನ್ಯವಲ್ಲ. ಮೌನವೆಂದರೆ ಅರ್ಥರಾಹಿತ್ಯತೆಯಲ್ಲ. ಮೌನವೆಂದರೆ ಜೀವಚ್ಛವದ ಪಾಡಲ್ಲ. ಇದನ್ನು ಹಲವು ಬಗೆಯಾಗಿ, ಹಲವು ರೂಪಕಗಳಲ್ಲಿ ಖಚಿತ ನಿಲುವಿನೊಂದಿಗೆ, ದೃಷ್ಟಿಕೋನದೊಂದಿಗೆ, ಅಸ್ಮಿತೆ ಪ್ರತಿಪಾದನೆಯ ಧೋರಣೆಯೊಂದಿಗೆ ಮಾಧವಿಯವರು ಈ ಸಂಕಲನದಲ್ಲಿ ಅಭಿವ್ಯಕ್ತಿಸಿದ್ದಾರೆ. ಬಂಡಾಯ ಕಾವ್ಯದ ಆರಂಭದ ದಿನಗಳಲ್ಲಿ ವೈಚಾರಿಕವಾದ ಆದರ್ಶವಾದದ ಪ್ರತಿಪಾದನೆ ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿತು. ಅದರೊಳಗಿದ್ದ ಧಿಕ್ಕಾರದ ಮನಃಸ್ಥಿತಿ ಬಹಳಮಟ್ಟಿಗೆ ವಾಚ್ಯವಾಗಿತ್ತು. ಆದರೆ ಅದಕ್ಕೆ ಸಾಂದರ್ಭಿಕ ಅನಿವಾರ್ಯತೆ ಇತ್ತು. ಹಾಗೆಯೇ ಬಂಡಾಯ ಸಾಹಿತ್ಯದ ಜೊತೆಯಲ್ಲಿ ಆರಂಭಗೊಂಡ ಮಹಿಳಾವಾದಿ ಕಾವ್ಯದ ಧಾಟಿಯೂ ಹೆಣ್ತನದ ಪ್ರತಿಪಾದನೆಯನ್ನು ನಿಚ್ಚಳವಾಗಿ, ದಿಟ್ಟವಾಗಿ ಸಾಕಷ್ಟು ವಾಚ್ಯವಾಗಿ  ಅಭಿವ್ಯಕ್ತಿಸಿತು. ಈಗ ಆ ರಭಸ ಇಲ್ಲ. ಧೋರಣೆಗಳು, ಆಶಯಗಳು, ಅನುಭವದ ಪರಿಧಿಯಲ್ಲಿ ಮಾಗಿ, ಕಾವ್ಯಾರ್ಥದ ಸಾಧ್ಯತೆಗಳನ್ನು ಒಳಗೊಳ್ಳುತ್ತಾ, ತಮ್ಮ ಅಭಿವ್ಯಕ್ತಿ ಸಾಧ್ಯತೆಯ ವಿಸ್ತಾರಗಳನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿವೆ. ಅದರಲ್ಲೂ ಈ ತಲೆಮಾರಿನ ಲೇಖಕ-ಲೇಖಕಿಯರು ತಮ್ಮ ಅನುಭವ ಮಂಡನೆಗೆ ಬಳಸುತ್ತಿರುವ ಭಾμÉ ಹಾಗೂ ರೂಪಕಗಳು, ಕಾವ್ಯಾಲಂಕಾರಗಳು ಹೆಚ್ಚು ಧ್ವನಿ ಸಾಧ್ಯತೆಯನ್ನು ಒಳಗೊಳ್ಳತೊಡಗಿವೆ. ಕಾವ್ಯವನ್ನು ತಮ್ಮ ಅಭಿವ್ಯಕ್ತಿ ಸಾಧ್ಯತೆಯ ಸಾಧನವನ್ನಾಗಿ ಬಳಸಿಕೊಳ್ಳುವುದರಲ್ಲಿ ಪಾರಂಪರಿಕ ಸಾಂಸ್ಕೃತಿಕ ಪರಿಕರಗಳನ್ನು ಬಳಸಿಕೊಳ್ಳುತ್ತಲೇ ಹೊಸ ಆಶಯಗಳ ಹಂಬಲವನ್ನು ಅನಾವರಣಗೊಳಿಸುವ ಸಾಮಥ್ರ್ಯವನ್ನು ಇವು ಪಡೆದುಕೊಳ್ಳತೊಡಗಿವೆ.
     ಹಾಗಾಗಿಯೇ ಇಂದು ಹೊಸ ತಲೆಮಾರಿನ ಕಾವ್ಯ ನೇರವಾಗಿ ತನ್ನನ್ನು ಬಂಡಾಯ ಕಾವ್ಯ, ಮಹಿಳಾ ಕಾವ್ಯ ಎಂದು ಕರೆದುಕೊಳ್ಳಬೇಕಾದ ಅಗತ್ಯತೆ ಇಲ್ಲದೆಯೇ ಬದಲಾವಣೆಯ ಆಶಯಗಳನ್ನು ಮಂಡಿಸುವಲ್ಲಿ ಸಶಕ್ತಗೊಂಡಿದೆ. ಹೆಣ್ತನದ ಪರಿಸ್ಥಿತಿಯನ್ನು ಸಾಂಕೇತಿಕಗೊಳಿಸಿ ಪ್ರಾದೇಶಿಕ ಅನುಭವ ಸೀಮೆಯನ್ನು ಬಳಸಿಕೊಂಡು ಅರ್ಥಸಾಧ್ಯತೆ ಪಡೆದುಕೊಂಡಿರುವ ಮಾಧವಿಯವರ ಪತ್ರೊಡೆ ಕವಿತೆ ಇಂತಹವುಗಳಲ್ಲೊಂದು. ಮೊಲೆಯೆರಡೆ ಸಾಕು, ಕನ್ಯತ್ವದ ಋಜುವಾತು, ನಡುವೆ ಸುಳಿವಾತ್ಮ, ಏಳು ಬಣ್ಣ ಸೇರಿ, ಅವತಾರ ಮುಂತಾದವುಗಳೆಲ್ಲ ಈ ಬಗೆಯ ಕವಿತೆಗಳಾಗಿವೆ. ಹೆಣ್ಣಿನ ಅಸ್ತಿತ್ವದ ಪರಿಯನ್ನು, ಸಾರ್ಥಕತೆಯನ್ನು, ಸಂಕಷ್ಟವನ್ನು, ಸಂತಸವನ್ನು, ವೈಶಿಷ್ಟ್ಯವನ್ನು ಹಲವು ಬಗೆಯಾಗಿ ಧ್ವನಿಸುವ ಈ ಕವಿತೆಗಳು ಮಾಧವಿಯವರ ಕಾವ್ಯಶಕ್ತಿಗೆ ನಿದರ್ಶನಗಳೆಂದು ನಾನು ಭಾವಿಸುತ್ತೇನೆ. ಎಲ್ಲಿಯೂ ವಾಚ್ಯವಾಗದೆ, ವಿವರಣೆಯಾಗದೆ, ಕ್ಲೀμÉ ಎನಿಸದೆ ಹೀಗೆ ಹೇಳಬಲ್ಲ ಸಾಮಥ್ರ್ಯ ಕೇವಲ ಓದಿನಿಂದ ಬಂದದ್ದಲ್ಲ. ಬದುಕಿನ ಅನುಭವದ ಮೂಸೆಯಲ್ಲಿ ಮಾಗಿದ ಮನಸ್ಸಿನ ಹಬೆಯಲ್ಲಿ ಮೂಡಿನಿಂತ ಅಕ್ಷರಾಕೃತಿಗಳು ಇವು.

 ದನಿಯೇನೋ ಮೆಲುವಾದುದು ಆದರೆ ನಿಲುವು ಗಟ್ಟಿಯಾದುದು. ವರ್ಣನೆಯೇನೋ ನಿರಲಂಕಾರ ಆದರೆ ಅದರ ಅರ್ಥಸಾಧ್ಯತೆ ಹಲವು ಆಕಾರ. ಹೀಗೆ ತಣ್ಣಗೆ ಆದರೆ ಮನಸ್ಸಿಗೆ ನಾಟುವಂತೆ ಹೇಳುವ ಪರಿಪಾಕ ಮಾಧವಿಯವರಿಗೆ ದಕ್ಕಿದೆ. ಅದನ್ನು ಅಷ್ಟು ಜತನವಾಗಿ ಅವರು ಮೈಗೂಡಿಸಿಕೊಂಡಿದ್ದಾರೆ. ದಲಿತ ಕಾವ್ಯ, ಬಂಡಾಯ ಕಾವ್ಯ, ಹೆಣ್ಣು ಕಾವ್ಯ ಮುಂತಾಗಿ ಮೂಗು ಮುರಿಯುವ ಕಾಲ ಇದಲ್ಲ ಎಂದು ಹೇಳುವುದಕ್ಕೆ ಮಾಧವಿಯೂ ಸೇರಿದಂತೆ ನಮ್ಮ ತಲೆಮಾರಿನ ಹಲವು ಕವಿ- ಕವಯಿತ್ರಿಯರು ಸವಾಲಿನಂತೆ ನಿಂತಿದ್ದಾರೆ. ರಿಯಾಯಿತಿಗಳಿಂದ ಪರಿಗಣಿಸಬೇಕಾದ, ಉದಾರ ಮನಸ್ಸಿನ ಲೆಕ್ಕಾಚಾರದಿಂದ ಗುರುತಿಸಬೇಕಾದ ಧ್ವನಿಗಳಲ್ಲ ಇವು. ಇವಕ್ಕೆ ಸಿದ್ಧಾಂತ, ಪಂಥ, ಲಿಂಗ, ಪಕ್ಷ, ಪ್ರದೇಶ, ಜಾತಿ ಮತ್ತು ಮತ ಇವುಗಳ ರಕ್ಷಣೆ ಇಲ್ಲದೆಯೂ ಕನ್ನಡ ಕಾವ್ಯಕ್ಕೆ ಮೆರುಗು ನೀಡಬಲ್ಲ ಅಭಿವ್ಯಕ್ತಿ ಪರಂಪರೆಯಾಗಿ ಇದು ಬೆಳೆದಿದೆ. ಹಾಗೆ ಬೆಳೆದು ಬಂದಿರುವುದಕ್ಕೆ ಒಂದು ನಿದರ್ಶನ ಮಾಧವಿಯವರ ಮೌನಗರ್ಭದ ಒಡಲು ಸಂಕಲನ. 
ಭತ್ತದೊಳಗಿದೆ ಬ್ರಹ್ಮಾಂಡ, ಹೊದ್ಲು ಅರಳುವ ಪರಿ, ಪರದೆಯ ಪಂಜರ, ನೋಯದವರಿಗೇನು ಗೊತ್ತು, ತಾಯ ಮೊಲೆ ಹಾಲು ವಿಷವಲ್ಲ, ಗಂಡಿಗೆ ಹೆಣ್ಣು ಮಾಯೆ, ಗುನ್ಹೇಗಾರ, ಕಣ್ಣಿಗಿಲ್ಲ ಆಯುಷ್ಯದ ಹಂಗು, ಮುಖವಿಲ್ಲದ ಚಹರೆಗಳು, 
ಮತಾಂತರಿಯ ಅಹವಾಲು ಮುಂತಾದವುಗಳು ಸಾಮಾಜಿಕ ಆಯಾಮವುಳ್ಳ, ತಮ್ಮನ್ನು ತಾವು ಸಮಕಾಲೀನಗೊಳಿಸಿಕೊಂಡು ಪ್ರಸ್ತುತಗೊಳ್ಳುವ ಕವಿತೆಗಳು. ಇವುಗಳಲ್ಲಿ ಈ ಮೊದಲಿನ ವಿಭಾಗದ ಕವಿತೆಗಳಿಗಿರುವ ಅರ್ಥಸಾಧ್ಯತೆಗಳೇ ಇದ್ದರೂ ಇವು ಆಶಯಾತ್ಮಕ ಕವಿತೆಗಳಾಗಿಯೇ ಹೆಚ್ಚು ಗೆದ್ದಿವೆ. ಇವುಗಳಿಗೆ ಖಾಸಗೀತನಕ್ಕಿಂತಲೂ ಹೊರಜಗತ್ತಿನ ಆವರಣದ ಲೇಪ ಕೊಂಚ ಹೆಚ್ಚಾಗಿದೆ. ಅಂದ ಮಾತ್ರಕ್ಕೆ ಇವು ಸೋತಿರುವ ಕವಿತೆಗಳಲ್ಲ. ಆದರೆ ಇದೊಂದು ರೂಢಿಗತವಾದ ಹಾದಿ. ಆದರೂ ಮಾಧವಿಯವರ ವೈಯಕ್ತಿಕ ಪ್ರತಿಭೆಯ ಛಾಪು ಇಲ್ಲಿ ಮಸುಕಾಗಿಲ್ಲ ಎನ್ನುವುದೂ ಮುಖ್ಯ.
ಪ್ರೇಮ ಹಾಗೂ ವಿರಹದ ಕೆಲವು ಕವಿತೆಗಳು ಈ ಸಂಕಲನದಲ್ಲಿವೆ. ಪ್ರತಿಯೊಬ್ಬರ ಭಾವದಲ್ಲೂ ಬಂದು ಹೋಗುವ ಬದುಕಿನ ಈ ನಿಜಗಳು ಮಾಧವಿಯವರಲ್ಲಿ ಕೂಡ ಕವಿತೆಗಳಾಗಿವೆ. ಇವುಗಳನ್ನು ವಿಶಿಷ್ಟವೆನ್ನಲಾಗದಿದ್ದರೂ ಬದುಕಿನ ಸಹಜ ಯಾನದ ಪ್ರತಿಸ್ಪಂದನಗಳಾಗಿ, ಸ್ವಂತ ವ್ಯಕ್ತಿತ್ವದ ಅನಾವರಣಗಳಾಗಿ ಓದಲು ಅರ್ಥಪೂರ್ಣವಾಗಿವೆ.
ಒಟ್ಟಾರೆ ಮೌನಗರ್ಭದ ಒಡಲು ನನ್ನ ಓದಿನಲ್ಲಿ ಒಂದು ಉತ್ತಮ ಕಾವ್ಯಕೃತಿಯಾಗಿ, ಅರ್ಥವಂತಿಕೆಯ ಸಾಧ್ಯತೆಯನ್ನು ಅರಹುವ ಅಭಿವ್ಯಕ್ತಿಯಾಗಿ, ತನ್ನ ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ ಸಂವೇದನೆಯಾಗಿ ಕಂಡಿದೆ. ಮಾಧವಿ ಭಂಡಾರಿಯವರು ಈ ಸಂಕಲನದಲ್ಲಿ ಬರೆದಿರುವ `ಅಮ್ಮ' ಮತ್ತು `ಅಪ್ಪ' ಎಂಬ ಎರಡು ಕವಿತೆಗಳು ನನ್ನ
ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿವೆ. ಒಬ್ಬ ಮಗಳಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ, ಸಾಹಿತಿಯಾಗಿ ಹಾಗೂ ಮಮಕಾರಗಳುಳ್ಳ ಹೆಣ್ಣಾಗಿ ತಾಯಿತಂದೆಯನ್ನು ಕಂಡರಿಸುವ ಈ ವಿಧಾನ ನನಗೆ ತುಂಬಾ ಆಪ್ತವೆನಿಸಿವೆ. ಇದಕ್ಕೆ ಕಾರಣಗಳು ಏನೇ ಇರಬಹುದಾದರೂ ಆ ಎರಡು ಕವಿತೆಗಳು ಒಂದು ರೀತಿಯಲ್ಲಿ ಕಣ್ತೆರೆಯಿಕೆಯ ದರ್ಶನಗಳಂತಿವೆ. ಆಪ್ತ ಸಂವಾದಗಳೂ ಆಗಿವೆ.
ಮಾಧವಿಯವರು ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ನಮ್ಮ ಸಮಿತಿಯ ಸದಸ್ಯೆಯಾಗಿ ಹಲವು ಹೊಸತನದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಪ್ರಾಧಿಕಾರಕ್ಕೂ, ನಮ್ಮ ತಂಡಕ್ಕೂ ಹೆಸರು ತಂದವರು. ಬಿಡುವಿರದ ಕೆಲಸ, ಕೈಕೊಡುವ ಆರೋಗ್ಯ, ಸಾಕಷ್ಟು ಪ್ರತಿಕೂಲ ಸನ್ನಿವೇಶಗಳ ನಡುವೆಯೇ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ನಡೆಸಿದವರು, ನಡೆಸಲು ಹೆಗಲು ಕೊಟ್ಟವರು. ಆತ್ಮೀಯ ನಡವಳಿಕೆ, ಸ್ನೇಹಪೂರ್ವಕ ಸಾಹಚರ್ಯ ಹಾಗೂ ದಿಟ್ಟ ಗಂಭೀರ ನಿಲುವುಗಳಿಂದ ನನ್ನ ಮೆಚ್ಚುಗೆಗೆ ಪಾತ್ರರಾದ ಒಡನಾಡಿ ಅವರು. ನಮ್ಮ ಪುಸ್ತಕ ಪ್ರಾಧಿಕಾರದ ಇಡೀ ಸಮಿತಿ ಒಮ್ಮೆ ಕಾರವಾರಕ್ಕೆ, ಮತ್ತೊಮ್ಮೆ ಶ್ರೀಶೈಲಕ್ಕೆ ಯಾತ್ರೆ ಮಾಡಬೇಕೆಂದಿದ್ದೆವು. ಆ ಯಾತ್ರೆಯ ಹರಕೆ ಅದೇಕೋ ಫಲಿಸದೆ ಕನಸಾಗಿಯೇ ಉಳಿಯಿತು. ನಾವಿನ್ನೂ ಉಳಿದಿದ್ದೇವಲ್ಲ, ಈ ಹರಕೆಗಳು ಎಂದಾದರೂ ಫಲಿಸದಿರುತ್ತವೆಯೇ.

`ಮೌನಗರ್ಭದ ಒಡಲು' ಕೃತಿಗೆ ನನ್ನ ಪ್ರತಿಕ್ರಿಯೆಯ ಮಾತುಗಳನ್ನು ಆಶಿಸಿದ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

Monday, 16 September 2019

ಸಂವಿಧಾನವನ್ನು ಬದಲಾಯಿಸಬಹುದೇ

ಸಂವಿಧಾನವನ್ನು ಬದಲಾಯಿಸಬೇಕು ಎನ್ನುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸಬಹುದೇ? ಆಯಾ ಸರ್ಕಾರ ತಮಗೆ ಬೇಕಾದ ಸಂವಿಧಾನವನ್ನು ತಂದುಕೊಳ್ಳಬಹುದೇ?
ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಸಂವಿಧಾನವೇ ಅನುಚ್ಚೆÃದ ೩೬೮ರಲ್ಲಿ ಸಂಸತ್ತಿಗೆ ಈ ಅಧಿಕಾರವನ್ನು ನೀಡಿದೆ. ಕಳೆದ ೭೦ ವರ್ಷಗಳಲ್ಲಿ ೧೦೪ ತಿದ್ದುಪಡಿಗಳನ್ನು ಮಾಡಲಾಗಿದೆ. ಬದಲಾಗುತ್ತಿರುವ ಕಾಲಮಾನ, ಹೊಸ ಪರಿಸ್ಥಿತಿ ಹಾಗೂ ಸಮಸ್ಯೆಗಳಿಗೆ ಅನುಗುಣವಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿಗಳನ್ನು ತಂದುಕೊಳ್ಳಬಹುದು.ಆದರೆ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನವನ್ನಾಗಲಿ ಅದರ ಮೂಲತತ್ವಗಳನ್ನಾಗಲಿ ಅಮೂಲಾಗ್ರವಾಗಿ ಬದಲಾಯಿಸುವಂತಿಲ್ಲ.
ಅನುಚ್ಚೆÃದ ೩೬೮ರಲ್ಲಿ ತಿದ್ದುಪಡಿ ಮಾಡಲು ನೀಡಿರುವ ಅಧಿಕಾರವು ನಿರುಪಾಧಿಕವೇ ಅಥವಾ ನಿರ್ಬಂಧಗಳಿಗೆ ಒಳಪಟ್ಟಿದೆಯೇ ಎಂಬ ಪ್ರಶ್ನೆ ೧೯೭೩ರಲ್ಲಿ ಕೇಶವಾನಂದ ಭಾರತಿ ಮಹಾಸ್ವಾಮಿಗಳು ಎಂಬ ಪ್ರಕರಣದಲ್ಲಿ ಸರ್ವೊÃಚ್ಛ ನ್ಯಾಯಾಲಯದ ಮುಂದೆ ಬಂತು. ಈ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಸರ್ವೊÃಚ್ಚ ನ್ಯಾಯಾಲಯವು ಸಂವಿಧಾನದಲ್ಲಿ ಅಂತರ್ಗತವಾಗಿರುವ ಮೂಲತತ್ವಗಳನ್ನು ಹೆಕ್ಕಿ, ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. ಅದರಂತೆ, ಸಂವಿಧಾನದ ಪರಮಾಧಿಕಾರ, ಭಾರತದ ಸಾರ್ವಭೌಮತ್ವ, ಸಂಸದೀಯ ಪ್ರಜಾಪ್ರಭುತ್ವ, ಕಲ್ಯಾಣ ರಾಜ್ಯದ ಪರಿಕಲ್ಪನೆ, ಧರ್ಮ ನಿರಪೇಕ್ಷತೆ, ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಕಿತ್ತುಹಾಕುವ ಅಧಿಕಾರ ಸಂಸತ್ತಿಗೆ ಇಲ್ಲವೆಂದು ಘೋಷಿಸಲಾಗಿದೆ.
ಅದರಂತೆ, ಅನುಚ್ಚೆÃದ ೩೬೮ರಲ್ಲಿ ನೀಡಿರುವ ಅಧಿಕಾರವನ್ನು ಬಳಸಿ ಸಂಸತ್ತು ಈಗಿರುವ ಸಂವಿಧಾನವನ್ನು ಕಿತ್ತುಹಾಕಿ ಮತ್ತೊಂದು ಹೊಸ ಸಂವಿಧಾನವನ್ನು ತರಲು ಅವಕಾಶವಿಲ್ಲ.
ಸಂವಿಧಾನ ಜಾರಿಗೆ ಬಂದ ನಂತರ ನಾವು ಸಾಕಷ್ಟು ಸಾಧನೆಗಳನ್ನು ಮಾಡಿದ್ದೆÃವೆ. ಆದರೂ, ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ಜೊತೆಗೆ ದೇಶ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಮತ್ತು ಸಮಸ್ಯೆಗಳಿಗೆ ಕಾರಣ ನಮ್ಮ ಸಂವಿಧಾನ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ ಇದು ತಪ್ಪು ತಿಳಿವಳಿಕೆ. ನಮ್ಮ ಸಂವಿಧಾನವನ್ನು ಜಾರಿಗೊಳಿಸುತ್ತಿರುವ ಜನರಲ್ಲಿಯೇ ದೋಷವಿದೆ. ೧೯೪೯ರಲ್ಲಿ ಕರಡು ಸಂವಿಧಾನವನ್ನು ಅಂಗೀಕಾರಕ್ಕೆ ಮಂಡಿಸಿದಾಗ ಡಾ.ಅಂಬೇಡ್ಕರ್‌ರವರು ಎಚ್ಚರಿಕೆಯ ಮಾತು ಹೇಳಿದ್ದರು: ‘ಸಂವಿಧಾನ ಎಷ್ಟೆÃ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಒಳ್ಳೆಯದು ಕೂಡ ಕೆಟ್ಟದಾಗಿ ಬಿಡುತ್ತದೆ’ ಎಂದು. ಹಾಗಾಗಿ ಸಂವಿಧಾನವನ್ನು ಅನುಷ್ಠಾನಗೊಳಿಸುವ ಜನರು ಅದಕ್ಕೆ ಬದ್ಧರಾಗಿ ಇರಬೇಕು. ಅವರು ಸರಿ ಇಲ್ಲದೆ ಹೋದರೆ ಸಂವಿಧಾನವೇ ತಪ್ಪಾಗಿ ಕಾಣಿಸುತ್ತದೆ.

ಸಂವಿಧಾನ ಓದು ಪುಸ್ತಕ





Wednesday, 8 May 2019

Annana nenapu -vittal Bhandari

http://avadhimag.com/?paged=2&cat=489http://avadhimag.com/?paged=2&cat=489

ಕಾರ್ಡ್ ಬರೆಯಲು ವಿಳಾಸ ಗೊತ್ತಿಲ್ಲದಿದ್ದರೇನಂತೆ..!

ಅಣ್ಣನ ನೆನಪು-39
“ಆರ್. ವಿ ಯವರು ಮೂರು ನೆಲೆಗಳಿಂದ ಮುಖ್ಯವಾಗುತ್ತಾರೆ. ಸಂಘಟನೆ, ಸಾಹಿತ್ಯ ಮತ್ತು ಸ್ನೇಹ – ಈ ಮೂರು ನೆಲೆಗಳ ಮೂಲಕ ರಾಜಧಾನಿಯಾಚೆಗೆ ಸೃಜನಶೀಲ ಬದ್ಧತೆಯಿಂದ ಬದುಕಿ ಸ್ಥಳೀಯ ಸಾಂಸ್ಕಸ್ಕೃತಿಕ ಕ್ರಿಯೆಯಿಂದ ನಾಡಿಗೆ ಸಾಂಸ್ಕೃತಿಕ ಕೊಡುಗೆ ಕೊಟ್ಟ ಭಂಡಾರಿಯಂತವರ ಮಹತ್ವವನ್ನು ನಾವು ಅರ್ಥ ಮಾಡಿಕೊಳ್ಳುವುದು ಅಗತ್ಯ. ಜಿಲ್ಲೆ, ತಾಲೂಕು ಮತ್ತು ಹಳ್ಳಿಗಳಲ್ಲಿ ನೆಲೆಸಿ ಸುದ್ದಿ ಮಾಧ್ಯಮಗಳಿಂದ ದೂರ ಉಳಿದು ಕಟ್ಟುವ ಕೆಲಸದಲ್ಲಿ ತೊಡಗಿದ ಎಷ್ಟೋ ಜನರು ನಮ್ಮಲ್ಲಿ ಇದ್ದಾರೆ. ಮುನ್ನೆಲೆಯಲ್ಲಿ ಪ್ರಸಿದ್ಧರಾದವರು, ಸಾಂಸ್ಕೃತಿಕ ಚರಿತ್ರೆಯ ಭಾಗವಾದಷ್ಟು ಪ್ರಮಾಣದಲ್ಲಿ ಈ ಸ್ಥಳೀಯ ಸಂಸ್ಕೃತಿಯ ಕ್ರಿಯಾಶೀಲರು ಆಗುವುದಿಲ್ಲ.” ಇದು ಅಣ್ಣ ತೀರಿಕೊಂಡಾಗ ಡಾ. ಬರಗೂರು ರಾಮಚಂದ್ರಪ್ಪನವರು ಉದಯವಾಣಿಯಲ್ಲಿ ಬರೆದ ಲೇಖನದ ಒಂದು ತುಣುಕು.
“ಬರಗೂರು ರಾಮಚಂದ್ರಪ್ಪ ಬಂಡಾಯದ ಮುಖ್ಯ ಲೇಖಕರಲ್ಲಿ ಒಬ್ಬರು. ಕಾದಂಬರಿಕಾರರಾಗಿ ಕೂಡ ಅಷ್ಟೇ ಪ್ರಮುಖರಾಗುತ್ತಾರೆ. ಮುಖ್ಯವಾಗಿ ಸಮಾಜವಾದಿ ವಾಸ್ತವವಾದಿ ಲೇಖಕರಾಗಿರುವುದರಿಂದ ಸಾಹಿತ್ಯದಲ್ಲಿ ಅವರು ಎತ್ತುವ ಸಮಸ್ಯೆ ಮತ್ತು ದಾಖಲೆ ಉಳಿದವರಿಗೆಲ್ಲಾ ದಿಕ್ಸೂಚಿಯಾಗುವಂತಾಗುವುದು. ..ಸೀತಕ್ಕನ ಹೊಟ್ಟೆಯಲ್ಲಿ ಹೊರೆಯುತ್ತಿರುವ ‘ಸೂರ್ಯ’ಪ್ಪನ ಹಾಗೆ ಬರಗೂರು ಸರ್ವಶಕ್ತಿಯನ್ನೂ ಹುರಿಗೂಡಿಸಿ ಹರಳುಗಟ್ಟಿ, ಬರುವ ಹೊಸ ಕಾದಂಬರಿಯ ಆಶೆಯನ್ನು ‘ಸೂರ್ಯ’ನ ಒಡಲಿನಲ್ಲಿ ಹೊತ್ತಿದೆ ಎಂಬುದು ನನ್ನ ನಿರೀಕ್ಷೆಯಾಗಿದೆ.” ಇದು ಅಣ್ಣ ಬರಗೂರ ಅವರ ಕಾದಂಬರಿಯ ಬಗ್ಗೆ ಬರೆಯುವಾಗ ಬಹುಹಿಂದೆ ವ್ಯಕ್ತಪಡಿಸಿದ ಅಭಿಪ್ರಾಯ ಹೌದು, ಡಾ. ಬರಗೂರು ಅವರ ಕುರಿತು ಅಣ್ಣನ ಬಾಯಲ್ಲಿ ಅಭಿಮಾನ, ಗೌರವ ಮತ್ತು ಪ್ರೀತಿಯ ಮಾತುಗಳನ್ನು ಹಲವು ಬಾರಿ ಕೇಳಿದ್ದಿದೆ. ಇದು ಆತನ ಕೊನೆಯ ದಿನದವರೆಗೂ ಮುಂದುವರಿದಿತ್ತು.
ಬಂಡಾಯ ಸಾಹಿತ್ಯ ಪ್ರಾರಂಭವಾದ ಮೊದಲ ದಿನಗಳಿಂದಲೇ ಇಬ್ಬರೂ ಸ್ನೇಹಿತರು. ಹೀಗೆ ಸ್ನೇಹ ಬೆಸೆಯುವಲ್ಲಿ ಸಂಘಟನೆಯ ಕುರಿತ ಇಬ್ಬರು ಬದ್ಧತೆಯೊಂದಿಗೆ ಇಬ್ಬರಲ್ಲಿಯೂ ಇರುವ ಸಮಾನ ಗುಣಗಳೂ ಕಾರಣವಾಗಿದ್ದವು.
ಒಮ್ಮೆ ಬರಗೂರು ಅವರನ್ನು ನಮ್ಮ ಮನೆಯ ಊಟಕ್ಕೆ ಕರೆಯಬೇಕು. ಅವರ ಕುರಿತು ಒಂದು ವಿಚಾರ ಸಂಕಿರಣ ಮಾಡಬೇಕೆಂದು ಕೊನೆಯ ದಿನದವರೆಗೂ ಹಂಬಲಿಸಿದ್ದ. ಅವರು ಬಂದಾಗ ಊಟಕ್ಕೆ ಏನೇನು ಮಾಡಬೇಕೆಂದೂ ಆತ ಹೇಳಿದ್ದು ಈಗ ನೆನಪು. ಆದರೆ ಆ ದಿನ ಕೊನೆಗೂ ಬರಲಿಲ್ಲ. ತುಂಬಾ ಸಲ ಈ ಕಾರ್ಯಕ್ರಮಕ್ಕೆ ಡಾ. ಬರಗೂರು ಅವರ ದಿನಾಂಕವನ್ನು ಕೇಳಿ ಪತ್ರ ಬರೆದೆವು. ಆದರೆ ಬರಗೂರು ಅವರ ಸಮಯ ಹೊಂದಾಣಿಕೆ ಆಗಿಲ್ಲ. ಮತ್ತು ಆ ಸಂದರ್ಭದಲ್ಲಿ ಅಣ್ಣನ ಅನಾರೋಗ್ಯವು ಉಲ್ಬಣಗೊಂಡಿತು.
ಒಮ್ಮೆ ಕಾರ್ಯಕ್ರಮಕ್ಕೆ ಬರುವಂತೆ ವಿನಂತಿಸಿ ಆರ್.ವಿ ಯವರ ಹಲವು ಪತ್ರಗಳು ಬಂದಿದ್ದವು. ‘ನನ್ನ ಕುರಿತು ಒಂದು ವಿಚಾರ ಸಂಕಿರಣ ನಡೆಸಿ ಅದರಲ್ಲಿ ನಾನು ಭಾಗವಹಿಸುವುದು ನನಗೆ ಮುಜುಗರವಾಯಿತು. ಹಾಗಾಗಿಯೂ ನಾನು ಬರಲು ಮನಸ್ಸು ಮಾಡಿಲ್ಲ’ ಎಂದು ಬರಗೂರು ಅವರು ನನ್ನೊಂದಿಗೆ ಒಮ್ಮೆ ಹೇಳಿದ್ದಿದೆ. ಹಾಗೆ ಅವರು ಅಣ್ಣನಿಗೆ ಒಂದು ಪತ್ರ ಬರೆದಿದ್ದರು
ಪ್ರಿಯರಾದ ಡಾ. ಆರ್.ವಿ. ಭಂಡಾರಿ ಅವರಿಗೆ
ನಮಸ್ಕಾರಗಳು.
ನಿಮ್ಮ ಪತ್ರ ತಲುಪಿದೆ. ನಾನು ಖಂಡಿತ ಅಕ್ಟೋಬರ್ ನಲ್ಲಿ ನಿಮ್ಮ ಕಡೆಗೆ ಬರುತ್ತೇನೆ. ಮೂರು ವರ್ಷಗಳಿಂದ ನಾನು ಸಮಾರಂಭಕ್ಕೆ ದಿನಾಂಕವನ್ನು ಕೊಟ್ಟಿಲ್ಲ ಎಂದಿದ್ದೀರಿ. ನಿಜ. ನನ್ನ ಸಂಕೋಚವನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ. ನಾನು ಯಾವತ್ತೂ ನನ್ನ ಮತ್ತು ನನ್ನ ಕೃತಿಗಳ ಬಗ್ಗೆ ನಡೆಯುವ ಚರ್ಚೆಯ ಸಂದರ್ಭದಲ್ಲಿ ಖುದ್ದು ಹಾಜರಿರುವುದಿಲ್ಲ. ನಿಜಕ್ಕೂ ನನಗೆ ಈ ಬಗ್ಗೆ ಆಸಕ್ತಿಯಿಲ್ಲ. ಹೀಗಾಗಿ ದಿನಾಂಕ ಮುಂದೂಡುತ್ತಾ ಬಂದೆ. ಈಗಲೂ ನನ್ನ ಕೃತಿಯ ಅಥವಾ ನನ್ನ ಸಂಬಂಧದ ಸಭೆಗೆ ನನ್ನನ್ನು ಬಿಟ್ಟರೆ ತುಂಬಾ ಸಂತೋಷವಾಗುತ್ತದೆ.
ಆದರೂ ನಾನು ನಿಮ್ಮ ಪ್ರೀತಿ ವಿಶ್ವಾಸಗಳಿಗೆ ಮಣಿದು ನೀವು ಕರೆದಲ್ಲಿಗೆ ಬರುತ್ತೇನೆ. ಅಕ್ಟೋಬರ್ ನಲ್ಲಿ ಗ್ಯಾರಂಟಿ ಬರುವೆ. ನನ್ನ ಬಗ್ಗೆ ನನ್ನ ಎದುರೇ ವಿಚಾರಗೋಷ್ಠಿ ಬೇಡ ಅಂತ ಈಗಲೂ ನನ್ನ ಅನಿಸಿಕೆ. ಮೊದಲು ನೀವು ಹುಷಾರಾಗಿ. ನೂರ್ಕಾಲ ಬಾಳಿ. ಅದಕ್ಕಿಂತ ಬೇರೆ ಭಾಗ್ಯ ಯಾವುದಿದೆ.
ಇಂತು ವಿಶ್ವಾಸಿ
ಗ್ರಾಮೀಣ ಭಾಗದ ಪ್ರತಿಭೆಗಳನ್ನು, ಅಂಚಿನಲ್ಲಿ ಕೆಲಸ ಮಾಡುತ್ತಿರುವವರನ್ನೂ ಗುರುತಿಸುವಲ್ಲಿ ಯಾವಾಗಲೂ ಡಾ. ಬರಗೂರು ರಾಮಚಂದ್ರಪ್ಪನವರು ಮುಖ್ಯರಾಗುತ್ತಾರೆ. ಇದರ ಭಾಗವಾಗಿಯೇ ಅವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅಣ್ಣನನ್ನು ಅದರ ಸದಸ್ಯನನ್ನಾಗಿಸಿಕೊಂಡರು. ಒಂದು ವೇಳೆ ಬರಗೂರರವರು ಅಧ್ಯಕ್ಷರಾಗಿಲ್ಲದಿದ್ದರೆ ಅಣ್ಣ ಅಕಾಡೆಮಿಯ ಸದಸ್ಯನಾಗುತ್ತಿರಲಿಲ್ಲ. ಆತ ಹೇಳಿದ ಎಲ್ಲಾ ಕಾರ್ಯಕ್ರಮಗಳು ಆಗ ಉ.ಕ ದಲ್ಲಿ ನಡೆಯಿತು. ಹಿಂದೆ ನಾನು ಹೇಳಿದಂತೆ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮದ ದೃಷ್ಟಿಯಿಂದ ಉ.ಕ ಕ್ಕೆ ಇದೊಂದು ಮಹತ್ವದ ಕಾಲ.
ಅಣ್ಣ ನಮ್ಮನ್ನು ಅಗಲಿದ ನಂತರ ‘ಸಹಯಾನ’ (ಡಾ. ಆರ್.ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ) ಎನ್ನುವ ಟ್ರಸ್ಟ್ ಪ್ರಾರಂಭಿಸಿದಾಗ ಅದರ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಂಕೋಲೆಯ ವಿಷ್ಣು ನಾಯ್ಕ ಅವರ ಮನೆಯಲ್ಲಿ ಸೇರಿದ್ದೆವು. ಅಲ್ಲಿಂದಲೇ ಬರಗೂರು ಅವರನ್ನು ದೂರವಾಣಿಯ ಮೂಲಕ ಸಹಯಾನದ ಗೌರವಾಧ್ಯಕ್ಷರಾಗಿರುವಂತೆ ವಿನಂತಿಸಿಕೊಂಡೆವು. ಅಣ್ಣನ ಹೆಸರಿನ ಟ್ರಸ್ಟ್ ಆಗಿರುವುದರಿಂದ ಒಪ್ಪೇಒಪ್ಪಿಕೊಳ್ಳುತ್ತಾರೆನ್ನುವ ವಿಶ್ವಾಸವೂ ಇತ್ತು.
“ಸಾಮಾನ್ಯವಾಗಿ ನಾನು ಯಾವುದೇ ಟ್ರಸ್ಟ್, ಇತ್ಯಾದಿ ಸಂಸ್ಥೆಯ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ಆದರೆ ಭಂಡಾರಿಯವರ ಹೆಸರಿನ ಸಂಸ್ಥೆಯಲ್ಲಿ ಇರಬೇಕು ಎನ್ನುವ ನಿಮ್ಮ ಬೇಡಿಕೆಯನ್ನು ನಾನು ತಿರಸ್ಕರಿಸಲಾರೆ. ಅವರ ಮೇಲಿನ ಪ್ರೀತಿ ಮತ್ತು ಸ್ನೇಹದ ಭಾಗವಾಗಿ ಅದನ್ನು ಒಪ್ಪಿಕೊಳ್ಳುತ್ತೇನೆ.” ಎಂದು ಸಂಸ್ಥೆಗೆ ಸೂಕ್ತ ಮಾರ್ಗದರ್ಶನ ಮಾಡಿದರು. ಆಮೇಲೆ ಸಹಯಾನದಲ್ಲಿ ನಡೆದ ಸಹಯಾನ ಸಾಹಿತ್ಯೋತ್ಸವದಲ್ಲಿ ಕೂಡ (“ಚಳುವಳಿ: ಹೊಸ ತಲೆಮಾರು” ಎನ್ನುವ ವಿಷಯದ ಕುರಿತ ಉತ್ಸವದಲ್ಲಿ) ಪಾಲ್ಗೊಂಡು ಅಧ್ಯಕ್ಷತೆ ವಹಿಸಿಕೊಂಡರು. ಬಂದು ಹೋಗುವ ಪ್ರಯಾಣ ವೆಚ್ಚವನ್ನೂ ಸ್ವೀಕರಿಸಲಿಲ್ಲ.
ಸಂಘಟನೆಯ ಸಂದರ್ಭದಲ್ಲಿ ಮಾತ್ರವಲ್ಲ, ವೈಯಕ್ತಿಕವಾಗಿ ಯಾವುದಾದರೂ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿಯೂ ಪರಸ್ಪರರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಅವರಿಗೆ ಸರ್ಕಾರದಡಿಯ ಯಾವುದೇ ಸಂಸ್ಥೆಯ ಮುಖ್ಯಸ್ಥರಾಗಲು, ಪ್ರತಿನಿಧಿಯಾಗಲು ಆಹ್ವಾನ ಬಂದಾಗಲೂ ಪರಸ್ಪರರ ನಡುವೆ ಪತ್ರ ವ್ಯವಹಾರ ಮತ್ತು ದೂರವಾಣಿ ಸಂಭಾಷಣೆ ನಡೆಯುತ್ತಿತ್ತು. ಅವರು ಬರೆದ ಮಹತ್ವದ ಪತ್ರವನ್ನು ನಮಗೂ ಓದಲು ಕೊಡುತ್ತಿದ್ದ ಅಣ್ಣ, ಅವರೊಂದಿಗೆ ನಡೆದ ದೂರವಾಣಿಯ ಸಂಭಾಷಣೆಯ ಮುಖ್ಯಾಂಶವನ್ನು ಹೇಳುತ್ತಿದ್ದ.
ಅಕಾಡೆಮಿಯ ಪ್ರತಿ ಸಭೆಗೆ ಹೋಗಿ ಬಂದ ಮೇಲೆ ಕೂಡ ಬರಗೂರು ಅವರ ಹೊಸ ಹೊಸ ಆಲೋಚನೆ ಮತ್ತು ಅವರು ಸೈದ್ಧಾಂತಿಕ ಸ್ಪಷ್ಟತೆಯ ಬಗ್ಗೆ, ಅಕಾಡೆಮಿಯಲ್ಲಿರುವ ಪ್ರಜಾಸತ್ತಾತ್ಮಕ ಕೆಲಸ ಮತ್ತು ಪಾರದರ್ಶಕತೆಯ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದ. ಹಾಗೆಂದು ಅವರಿಬ್ಬರೂ ಪರಸ್ಪರರನ್ನು ಗೌರವಿಸಿಕೊಳ್ಳುವುದರೊಂದಿಗೆ ಭಿನ್ನಾಭಿಪ್ರಾಯವನ್ನು ಆರೋಗ್ಯಪೂರ್ಣವಾಗಿ ಚರ್ಚಿಸಿಕೊಳ್ಳುತ್ತಿದ್ದರು. ಅದು ಸೈದ್ಧಾಂತಿಕ ಚೌಕಟ್ಟಿನಲ್ಲಿಯೇ ಇರುತ್ತಿತ್ತು.ಒಮ್ಮೆ ‘ಅಭಿಮಾನಿ’ ಪತ್ರಿಕೆಯಲ್ಲಿ ಬರಗೂರು ಅವರು ‘ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಲು ಓಡಾಡುತ್ತಿದ್ದಾರೆ’ ಎಂದು ಟೀಕಿಸಿ ಲೇಖನ ಬಂದಿತ್ತು. ಬಹುಶಃ ಆಗ ಅಣ್ಣ ಆ ಕುರಿತು ಪತ್ರ ಬರೆದು ತನ್ನ ಅಸಮಾಧಾನವನ್ನು ಹೊರಹಾಕಿರಬೇಕು. (ಆ ಪತ್ರ ನನ್ನಲ್ಲಿ ಇಲ್ಲ) ಅದಕ್ಕೆ ತಕ್ಷಣ (1985 ರಲ್ಲಿ) ಬರಗೂರು ಸರ್ ಅವರು ಪತ್ರ ಬರೆದು “ನನ್ನ ಕುರಿತು ತಾವು ಅನುಮಾನಪಟ್ಟಿದ್ದು ಬೇಸರ ತಂದಿತು. ಅದಕ್ಕೆ ಪತ್ರಿಕೆಯಲ್ಲಿಯೇ ಉತ್ತರಿಸಿದ್ದೇನೆ. ನೋಡಿ ಬರೆಯಿರಿ’ ಎಂದು ಬರೆದರು ಮಾತ್ರವಲ್ಲ,
07-01-85
ಪ್ರಿಯ ಶ್ರೀ ಭಂಡಾರಿಯವರೆ,
ನಿಮ್ಮ ಪತ್ರ ಇದೇ ತಾನೆ ತಲುಪಿತು. ನಾನು ಹೆಚ್ಚು ಇಷ್ಟಪಡುವ ನೀವೇ ನನ್ನ ಬಗ್ಗೆ ಅನುಮಾನ ಪಟ್ಟಿರಬಹುದೆಂದು ಅನ್ನಿಸಿ ನಿಜಕ್ಕೂ ನೋವಾಯಿತು. ‘ಅಭಿಮಾನಿ’ಯಲ್ಲಿ ನನ್ನ ಬಗ್ಗೆ ಇರುವುದಾದರೂ ಏನು? ಮೊದಲಿನಷ್ಟು ನಾನು ಹರಿತವಾಗಿಲ್ಲ ಎಂದು. ನಾನು ಕಾವಲು ಸಮಿತಿ ಅಧ್ಯಕ್ಷತೆಗಾಗಿ ನನ್ನ ನಾಲಿಗೆಯನ್ನು ಮಾರಿಕೊಳ್ಳುತ್ತೇನೆಯೇ? ನೀವೇ ತೀರ್ಮಾನಿಸಿ. ಇಷ್ಟಕ್ಕೂ ‘ಅಭಿಮಾನಿ’ಯಲ್ಲಿ ನನ್ನ ಬಗ್ಗೆ ಬರೆಯುವಾಗ ಈಗಲೂ ಜನತಾ ಪಕ್ಷ ಸರ್ಕಾರವನ್ನು ಟೀಕಿಸುತ್ತಿದ್ದೇನೆ ಎಂಬುದನ್ನೂ ಹೇಳಿದ್ದಾರೆ. ಅಂದ ಮೇಲೆ ನನ್ನ ಬಗ್ಗೆ ಟೀಕಿಸುವುದು ಏನಿದೆ ಹೇಳಿ. ಜೊತೆಗೆ ಬರೆದವರ ಮನೋಧರ್ಮವನ್ನೂ ನೀವು ಯೋಚಿಸಬೇಕು.
ಒಂದೇ ಒಂದು ಮಾತು ಹೇಳಬಯಸುವೆ. ನನ್ನನ್ನು, ನನ್ನ ನಾಲಿಗೆ, ಲೇಖನಿಯನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ.
ವಿಶ್ವಕನ್ನಡ ಮೇಳದ ಸಂಬಂಧದಲ್ಲಿ ನನಗೆ ಕೊಡ ಮಾಡಿದ ಒಂದು ಲಕ್ಷ ರೂ.ಗಳ ಸಾಕ್ಷ್ಯಚಿತ್ರ ಯೋಜನೆಯನ್ನೇ ನಿರಾಕರಿಸಿದ ನಾನು ಆಮಿಷಕ್ಕೆ ಒಳಗಾಗುತ್ತೇನೆಯೇ? ಅದೂ 75 ಸಾವಿರ ರೂ. ಸಾಲ ಹೊತ್ತಿರುವ ನಾನು ಇಂಥದನ್ನೂ ನಿರಾಕರಿಸಿದೆ – ಆದರೆ ಕಾಮಾಲೆ ಕಣ್ಣುಗಳಿಗೆ ಇದು ಕಾಣುವುದಿಲ್ಲ.”
ಅಲ್ಲೇ ಕೊನೆಗೆ “ಫೆಬ್ರವರಿ ಮೊದಲವಾರ ಬೆಂಗಳೂರಿನಲ್ಲಿ ‘ಬಂಡಾಯ ಸಂಸ್ಕಸ್ಕೃತಿ ವಾರ’ ಮಾಡುತ್ತೇವೆ, ವಿವರ ಕಳುಹಿಸುತ್ತೇವೆ’ ಎಂದು ಸಂಘಟನೆಯ ಸಂಬಂಧಿ ಹೇಳಿಕೆಯ ಮೂಲಕವೇ ಮುಕ್ತಾಯ ಮಾಡಿದ್ದರು. ಹೀಗೆ ವೈಯಕ್ತಿಕ ಚರ್ಚೆಯೂ ಸಂಘಟನೆಯ ವಿಷಯದಲ್ಲಿಯೇ ಮುಕ್ತಾಯ ಆಗುತ್ತಿತ್ತು.
1992 ರಲ್ಲಿ ಅವರು ಅಣ್ಣನಿಗೆ ಬರೆದ ಪತ್ರ ಹೀಗಿದೆ.
ಪ್ರಿಯ ಶ್ರೀ ಭಂಡಾರಿ ಅವರೆ –
ನಿಮ್ಮ ತುಂಬು ಮನಸ್ಸಿನ ಪತ್ರ ನೆನ್ನೆ ತಾನೆ ಬಂದಿದೆ. ನಿಮ್ಮ ಹೃದಯ ತುಂಬಿದ ಮಾತುಗಳಿಗೆ ಏನು ಹೇಳಲಿ? ನನ್ನಲ್ಲಿ ಸ್ನೇಹ ಮತ್ತು ಸಿದ್ಧಾಂತದ ಸ್ಥೈರ್ಯವನ್ನು ನಿಮ್ಮ ಪತ್ರ ಹೆಚ್ಚಿಸಿದೆ ಎಂದು ಮಾತ್ರ ಹೇಳಬಲ್ಲೆ.
ನಾನು ಹತ್ತು-ಹನ್ನೆರಡು ವರ್ಷಗಳಿಂದ ಸಾಲ ಶೂಲದಲ್ಲಿ ಸಿಕ್ಕಿ ಒದ್ದಾಡುತ್ತ ಬಂದಿದ್ದರೂ ಬಂಡಾಯ ಸಾಹಿತ್ಯ ಸಂಘಟನೆಯನ್ನು ಪ್ರೀತಿಸಿದೆ. ನಿಮ್ಮಂಥ ವಿರಳ ವ್ಯಕ್ತಿಗಳ ಸ್ನೇಹ ಪಡೆದೆ. ಇದಕ್ಕಿಂತ ಇನ್ನೇನು ಬೇಕು? ಎಷ್ಟೋ ದಿನ ನನ್ನ ಹೆಂಡತಿ-ಮಕ್ಕಳಿಗಷ್ಟೇ ಊಟವಾಗಿ ನಾನು ಸುಳ್ಳು ನೆಪದಲ್ಲಿ ಉಪವಾಸವಿದ್ದ ದಿನಗಳನ್ನು ಇಂಥ ಸ್ನೇಹ ಸಂಬಂಧಗಳು ಮರೆಸುತ್ತ ಬಂದಿವೆ.
ಈಗ ನನ್ನ ಸ್ಥಿತಿ ಸ್ವಲ್ಪ ಪರವಾಗಿಲ್ಲವಾದರೂ ನೆನಪುಗಳು ಸತ್ತಿಲ್ಲ.
ಹಾವುಗಳ ನಡುವೆ ಹೂವಾಗಬೇಕಾದ ಈ ಬದುಕು ನನಗೆ ಸಾಕಷ್ಟು ಕಲಿಸಿದೆ. ಅದಕ್ಕಾಗಿ ಬದುಕಿಗೆ-ಬಂಡಾಯಕ್ಕೆ ನಾನು ಬದ್ಧ – ಇದು ನಿಮ್ಮ ನೆಲೆಯೂ ಹೌದು.
ನಮ್ಮ ಸ್ನೇಹ ಬೆಳೆಯುತ್ತಲೇ ಇರಲಿ. ಆಕಾಶಕ್ಕೆ ಆತಂಕವಾಗಲಿ.
ತಮ್ಮ ವಿಶ್ವಾಸಿ
ಈ ಎರಡು ಪತ್ರವನ್ನು ಇಲ್ಲಿ ಕೊಟ್ಟಿದ್ದೇಕೆಂದರೆ ಪರಸ್ಪರ ವಿಮರ್ಶಾತ್ಮಕವಾಗಿ ಚರ್ಚಿಸುತ್ತಿದ್ದರು ಮತ್ತು ಈ ಚರ್ಚೆ ಅವರ ಸ್ನೇಹಕ್ಕೆ ಯಾವ ಅಡ್ಡಿಯೂ ಆಗಿರಲಿಲ್ಲ. ಬದಲಾಗಿ ಇನ್ನಷ್ಟು ಬೆಳೆಸಿದವು.
ಬಹುಶಃ ತಿಂಗಳಿಗೆ ಕನಿಷ್ಠ 4-5 ಪತ್ರವಾದರೂ ಅಣ್ಣನಿಂದ ಬರಗೂರು ಅವರಿಗೆ ಹೋಗುತ್ತಿತ್ತು…. ಇಂತಹ ಒಂದು ಆದರ್ಶದ ಸ್ನೇಹ ಅವರದು. ಪ್ರೊ. ಬರಗೂರು ಎಂದರೆ ಅವನಿಗೆ ಒಂದು ಧೈರ್ಯ ಕೂಡ ಆಗಿತ್ತು. ಏನೇ ಸಮಸ್ಯೆ ಬಂದರೂ, ಸಮಸ್ಯೆ ಹೇಳಿ ಇವನಲ್ಲಿ ಯಾರೇಬಂದರೂ, “ನಿಲ್ಲಿ, ಬರಗೂರು ಅವರಿಗೆ ಹೇಳೋಣ” ಎನ್ನುತ್ತಿದ್ದ, ಸಲಹೆ ಪಡೆಯುತ್ತಿದ್ದ. ಈಗಲೂ ಅಣ್ಣನ ಕುರಿತು ಅವರ ಭಾವ ಬದಲಾಗಿಲ್ಲ.
ಅವರ ಕಷ್ಟದ ಸಂದರ್ಭದಲ್ಲಿಯೂ ಅಣ್ಣ ಸಹಕರಿಸಿದ್ದ. ಅವರು ಮನೆ ಕಟ್ಟುವ ಸಂದರ್ಭದಲ್ಲಿ ತುಂಬಾ ತೊಂದರೆಯಲ್ಲಿದ್ದರು. ಆಗ ಅಣ್ಣ ನಿವೃತ್ತನಾಗಿದ್ದ. ಆ ನಿವೃತ್ತಿಯಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ತೆಗೆದುಕೊಂಡು ಹೋಗಿ ಡಾ. ಬರಗೂರು ಅವರಿಗೆ ನೀಡಿದ್ದ. ಎಲ್ಲರೂ ನಿವೃತ್ತಿಯ ನಂತರ ಬಂದ ಹಣವನ್ನು ಬ್ಯಾಂಕಿನಲ್ಲಿ ಇಟ್ಟರೆ ಅಣ್ಣ ತನ್ನ ಸ್ನೇಹಕ್ಕೆ ಅದನ್ನು ನೀಡಿದ್ದ. ಈ ಘಟನೆಯನ್ನು ಬರಗೂರು ಅವರು ಅವನ ನಿಧನಾನಂತರ ಬರೆದ ಲೇಖನಲ್ಲಿ ನೆನಪಿಸಿಕೊಂಡಿದ್ದು ಹೀಗೆ:
“ಎಲ್ಲ ಪ್ರಗತಿಪರ ಚಳುವಳಿಯ ಜೊತೆ ಸಂಬಂಧವಿಟ್ಟುಕೊಂಡು ಕ್ರಿಯಾತ್ಮಕ ಕೊಡುಗೆ ನೀಡಿದರು. ಸ್ವಾರ್ಥಕ್ಕಾಗಿ ಸೈದ್ಧಾಂತಿ ಆಶಯವನ್ನು ಆಪೋಷನ ಮಾಡುವವರ ಮಧ್ಯೆ ನಿಸ್ವಾರ್ಥ ಜೀವಿಯಾಗಿ ಉಳಿದರು. ಯಾವತ್ತೂ ತಮ್ಮ ಸೈದ್ಧಾಂತಿ ಬದ್ಧತೆಗೆ ಚ್ಯುತಿ ತಾರದೇ ಬೆಳಗಿದರು.
ಭಂಡಾರಿಯವರದ್ದು ಅಬ್ಬರದಲ್ಲಿ ಅನಾವರಣಗೊಳ್ಳುವ ಸ್ನೇಹವಲ್ಲ. ಅಂತರಂಗದ ಆಪ್ತಭಾವದ ಸ್ನೇಹ. ಒಂದು ಪ್ರಸಂಗವನ್ನು ಹೇಳಬಯಸುತ್ತೇನೆ. ನಾನು ಮನೆ ಕಟ್ಟಿಸುತ್ತಿದ್ದ ಸಂದರ್ಭ. ಭಂಡಾರಿಯವರು ನನ್ನನ್ನು ಕಾಣಲು ಬಂದರು. ನನ್ನ ನಿವೃತ್ತಿಯ ನಂತರ 60,000 ರೂಪಾಯಿ ಬಂದಿದೆ. ಅದರಲ್ಲಿ ನಿಮಗೆ 30,000 ರೂಪಾಯಿ ಕೊಡುತ್ತೇನೆ. ಅದನ್ನು ನನ್ನ ಮಗಳ ಮದುವೆಯ ಸಂಸರ್ಭದಲ್ಲಿ ವಾಪಸ್ ಕೊಟ್ಟರೆ ಸಾಕು. ಎಂದು ಮೂವತ್ತು ಸಾವಿರ ರೂಪಾಯಿ ಮುಂದಿಟ್ಟರು. ನನಗೆ ಮಾತೇ ಹೊರಡಲಿಲ್ಲ. ನಾನು ಕಷ್ಟದಲ್ಲಿದ್ದೇನೆಂದು ಅವರಿಗೆ ಗೊತ್ತಾಗಿತ್ತು. ಕೆಲ ಸ್ನೇಹಿತರನ್ನು ಕೇಳಿ ಸಾಲಪಡೆದಿದ್ದು ಅವರಿಗೆ ತಿಳಿದಿತ್ತು. ಹಾಗಾಗಿಯೇ ನಾನು ಕೇಳದೆಯೇ ಅವರು ಅವರು ಹಣ ತಂದುಕೊಟ್ಟರು. (ನಾನೂ ಸಕಾಲಕ್ಕೆ ಹಿಂತಿರುಗಿಸಿದೆ.) ಇದು ಅವರ ಸ್ನೇಹದ ಒಂದು ಉದಾಹರಣೆ”
ಬಹುಶಃ ಅವರಿಬ್ಬರ ನಡುವಿನ ಸ್ನೇಹಕ್ಕೆ ಇದೊಂದು ಘಟನೆ ಸಾಕು ಅಂದುಕೊಂಡಿದ್ದೇನೆ.
ಲೇಖನದ ಕೊನೆಗೆ ಅವರು ಬರೆಯುತ್ತಾರೆ.
“ಇನ್ನು ಕಾರ್ಡು ಬರುವುದಿಲ್ಲ. ಅವರಿಗೆ ಕಾರ್ಡ್ ಬರೆಯೋಣವೆಂದರೆ ವಿಳಾಸ ಗೊತ್ತಿಲ್ಲ..”
ಕಾರ್ಡ್ ಬರೆಯಲು ವಿಳಾಸ ಗೊತ್ತಿಲ್ಲದಿದ್ದರೇನಂತೆ, ತಮ್ಮಿಬ್ಬರ ಸ್ನೇಹಭಾವಕ್ಕೆ ಪ್ರತ್ಯೇಕ ವಿಳಾಸ ಬೇಕಾಗಿಲ್ಲ…