Saturday 14 March 2020

ಶೂ ಕಂಡುಹಿಡಿದ ಕಥೆ -ಸುಧಾ ಆಡುಕಳ

ಮಕ್ಕಳ ರವೀಂದ್ರ ನಾಟಕಕ್ಕಾಗಿ ಗುರುದೇವ ರವೀಂದ್ರರ 
"ಶೂ ಕಂಡುಹಿಡಿದ ಕಥೆ" ಎಂಬ ಕವನವನ್ನು ಅಳವಡಿಸಿಕೊಂಡಿದ್ದೆವು. ಅದು ಅಲ್ಲಿ ಮಕ್ಕಳಿಗೆ ಹಿತವಾಗುವ ಹಾಸ್ಯದ ಶೈಲಿಯಲ್ಲಿ ದೃಶ್ಯೀಕರಣಗೊಂಡಿತ್ತು.  ಅದನ್ನು ಯಥಾವತ್ತಾಗಿ ಕವನವಾಗಿಸಲು ಮಾಡಿದ ವಿನಮ್ರ ಪ್ರಯತ್ನವಿದು. ಸುಖಾಂತ ಚೌಧರಿಯವರ ಇಂಗ್ಲಿಷ್ ಅನುವಾದದಿಂದ ಆಯ್ದುಕೊಂಡ ಸಾಲುಗಳು.

ಶೂ ಕಂಡುಹಿಡಿದ ಕಥೆ

"ಇದೇನಿದು ಗೋಬು" ಅಬ್ಬರಿಸಿದ ರಾಜ ಹೋಬು
"ನನ್ನ ಪಾದಗಳ್ಯಾಕೆ ಧೂಳಾಗಿವೆ?
ನಿನ್ನೆಯಿಂದ ಅದನ್ನೇ ಯೋಚಿಸಿದೆ
ಸಂಬಳ ಬೇಕು ನಿಮಗೆ ರಾಶಿ, ರಾಶಿ
ಕಾಳಜಿ ಬೇಡವೇನು ರಾಜನಿಗಾಗಿ?
ನನ್ನ ಭೂಮಿಯ ಧೂಳೇ ನನ್ನ ಕಾಲಿಗೆ ತಾಗಿ
ನಿದ್ದೆಗೆಡಿಸಿದೆ ನೋಡಿ ರಾತ್ರಿಯಿಡೀ
ರಾಜನ ಆಜ್ಞೆಯಿದು ಕೇಳಿ, ಪರಿಹಾರ ಮಾಡಿ
ಇಲ್ಲವಾದರೆ ಪ್ರಾಣ ಉಳಿಯಲಾರದು ನೋಡಿ'

ಗೋಬುವಿನ ಗಂಟಲಾರಿತು, 
ಮೈಯಿಡೀ ಬೆವರಿತು
ಪಂಡಿತರ ಮುಖ ಬಾಡಿತು
ಪ್ರಮುಖರ ನಿದ್ದೆ ಹಾರಿತು
ಅಡುಗೆಮನೆಯ ಬೆಂಕಿ ಆರಿತು
ಹಸಿವೆ ಇಲ್ಲದಾಯಿತು
ಒದ್ದೆಯಾದ ಬಿಳಿಯ ಗಡ್ಡ
ದುಃಖಬೆರೆತ ಕಣ್ಣ ನೋಟ
ಗೋಬು ಕೊನೆಗೂ ಹೇಳಿದ
" ಧೂಳು ನಿಮ್ಮ ಪಾದದಲ್ಲಿ ಇರಲಿ ದೊರೆ
ಪಾದಧೂಳಿ ಕರುಣಿಸಿ ನಮ್ಮನೆಲ್ಲಾ ಪೊರೆ"

ಗೋಬುವಿನ ಮಾತಿಗೆ ದೊರೆ ಭಾವಪರವಶ
ಮರುಕ್ಷಣವೇ ವಾಸ್ತವಕೆ ಇಳಿದು ಮತ್ತೆ ಹೇಳಿದ
"ಪಾದಕೆಲ್ಲ ಧೂಳು ತಾಗಿ ತುರಿಕೆ ಹತ್ತಿದೆ
ಮೊದಲು ಈ ಧೂಳಿನಿಂದ ಮುಕ್ತಿ ಬೇಕಿದೆ
ಧೂಳು ಮೊದಲು ನಿವಾರಿಸಿ, ಮತ್ತೆ ಬೇರೆ ಯೋಚಿಸಿ
ಎಲ್ಲಿ ಹೋದರು ನಮ್ಮ ಆಸ್ಥಾನ ವಿಜ್ಞಾನಿಗಳು?
ಹೆಸರಿಗಿಂತ ಉದ್ದ, ಉದ್ದ ಡಿಗ್ರೀ ಪಡೆದವರು
ಧೂಳಿನಿಂದ ಮುಕ್ತಿ ದೊರೆತರೇ ಸರಿ
ಇಲ್ಲವಾದರೆ ನಿಮ್ಮ ಸಂಬಳಕ್ಕೆ ಕತ್ತರಿ"

ಜ್ಣಾನಿ ವಿಜ್ಞಾನಿಗಳ ಸಮ್ಮೇಳನ
ಕನ್ನಡಕಧಾರಿಗಳ ವಿಚಾರ ಮಂಥನ
ಹತ್ತೊಂಭತ್ತು ನಶ್ಯ ಡಬ್ನ ಖಾಲಿಯಾಯಿತು
ಬರೆಯಲಿಟ್ಟ ಹಾಳೆ ಖಾಲಿಯುಳಿಯಿತು
ಚರ್ಚಿಸಿ, ಯೋಚಿಸಿ, ವಿಚಾರಿಸಿ....
ಬರೆದರೊಂದು ವಾಕ್ಯವ
"ಧೂಳಿಲ್ಲದಿದ್ದರೆ ಬೆಳೆಯೆಲ್ಲಿ?"
ರಾಜನದನು ಓದಿದ, ಕೋಪದಿಂದ ಕಿರುಚಿದ
"ಎಲ್ಲಿ ನಮ್ಮ ಪಂಡಿತರು? ಸರ್ವ ಶಾಸ್ತ್ರ ಕೋವಿದರು?"

ಪಂಡಿತರು ನಡುಗಿದರು, ಕಸಬರಿಗೆ ತರಿಸಿದರು
ಒಂದೆ , ಎರಡೆ, ಮೂರೆ? ಹದಿನೇಳುವರೆ ಸಾವಿರ
ಇಡಿಯ ರಾಕ್ಯ ಗುಡಿಸಿದರು, ಧೂಳ ಮೋಡ ಎಬ್ಬಿಸಿದರು
ಸೂರ್ಯ ಮೋಡದಲ್ಲಿ ಕರಗಿ, ಕಣ್ಣು ಬಿಡದೆ ಜನರು ಹೆದರಿ
ರಾಜನನೆಯವರೆಗೂ ಧೂಳು ತುಂಬಿತು
ಕೆಮ್ಮಿನ ಶಬ್ದ ಇಡಿಯ ನಾಡ ತುಂಬಿತು
ರಾಜ ಕೆಮ್ಮತ್ತ ನುಡಿದ, "ಮೂರ್ಖ ಜನಗಳೆ,
ಧೂಳು ತೊಲಗಿಸಿರೆಂದರೆ ಮತ್ತಿಷ್ಟು ತುಂಬಿಸಿದಿರಿ
ತಕ್ಷಣವೇ ಧೂಳು ಹೋಗಲಿಲ್ಲವೆಂದರೆ
ನಿಮ್ಮ ತಲೆಯು ಇದ್ದ ಜಾಗದಲ್ಲಿರದು ಖರೆ"

ಇಪ್ಪತ್ತೊಂದು ಲಕ್ಷ ಜನರ ಕರೆದು ತಂದರು
ಹಳ್ಳ, ಕೊಳ್ಳ, ನದಿಗಳಿಂದ ನೀರು ತಂದರು
ಕೆರೆ, ಬಾವಿ, ಸರೋವರಗಳಿಂದ ನೀರು ತಂದರು
ಬೀದಿ, ಬೀದಿಗಳನ್ನೆಲ್ಲ ತಿಕ್ಕಿ ತೊಳೆದರು
ನೀರ ಜೀವಿಗಳೆಲ್ಲ ತೆವಳತೊಡಗಿದವು
ಊರ ಜನರೆಲ್ಲ ಈಜತೊಡಗಿದರು
ಅಂಗಡಿ ಮುಂಗಟ್ಟುಗಳು ತೇಲಿ ಹೋದವು
ಅರಮನೆಯ ಅಂಗಳದಿ ನೆರೆಯು ಬಂದಿತು
ರಾಜ ಕ್ರೋಧದಿಂದ ಹೊರಗೆ ಬಂದು ಕೂಗಿದ
"ಧೂಳು ತೆಗೆಯಿರೆಂದರೆ ಕೆಸರು ತುಂಬಿಸಿದಿರಿ
ಸಮಸ್ಯೆ ಬಗೆಹರಿಯದಿರೆ ಶಿರವ ಕೊಡಲು ಸಿದ್ಧರಿರಿ"

ಎಲ್ಲಾ ಹತಾಶೆಯಲ್ಲಿ ಮತ್ತೆ ಸೇರಿದರು
ಜೀವವುಳಿಸಿಕೊಳ್ಳಲು ಉಪಾಯ ಯೋಚಿಸಿದರು
ನೆಲಕೆ ಹೊದಿಕೆ ಹೊದಿಸಿಬಿಡುವುದೊಂದೆ ದಾರಿ ಉಳಿದಿದೆ
ಚಮ್ಮಾರನೊಬ್ಬನ ಕೆಲಸದಲ್ಲಿ ನಮ್ಮ ಜೀವ ಅಡಗಿದೆ
ಹುಡುಕಲೆಂದು ಹೊರಟರು ಚಮ್ಮಾರರ ಬೀದಿಗೆ
ಎಲ್ಲ ಓಡಿಬಿಟ್ಟಿದ್ದರು ಇವರು ಬರುವ ಸುದ್ದಿಗೆ
ನಡೆಯಲಾರದ ಮುದಿಯ ಚಮ್ಮಾರರ ನಾಯಕ
ಕುಳಿತಲ್ಲೇ ಕೇಳಿದ, "ಏನು ನಿಮ್ಮ ಮಾಯಕ?"
ಹೊತ್ತು ತಂದರವನನು ರಾಜನಾಸ್ಥಾನಕೆ
ಇವನೆ ಸರಿ ಹೊದಿಸಲು ಚರ್ಮ ಇಡಿಯ ರಾಜ್ಯಕೆ

ರಾಜ ಅಜ್ಞಾಪಿಸಲು ಅಣಿಯಾಗಿ ನಿಂತ
ಚಮ್ಮಾರ ಕೈ ಮುಗಿದು ನಿಡಿದ ಮಾತ
"ಇಡಿಯ ರಾಜ್ಯಕ್ಯಾಕೆ ಹೊದಿಕೆ ನಿಮ್ಮ ಕಾಲ ಮುಚ್ಚಿಕೊಳ್ಳಿ"
ಮಂತ್ರಿ ಮುನಿದು ನುಡಿದ," ನಿನ್ನ ಬಾಯ ಮುಚ್ಚಿಕೋ.
ರಾಜ ತನ್ನ ಕಾಲ ಮುಚ್ಚಿಕೊಳ್ಳಬೇಕೆ ಮೂರ್ಖನೆ?"
ರಾಜ ತಡೆದ ಗೋಬುವನ್ನು ತನ್ನ ಕಾಲು ನೀಡಿದ
"ನೀನೆ ಮುಚ್ಚು ನೋಡಿಬಿಡುವ" ಎಂದು ಆಜ್ಞೆ ನೀಡಿದ
ಹತಿಯಾರ ತೆಗೆದ ಚಮ್ಮಾರ ಪಾದರಕ್ಷೆಯೊಂದ ಮಾಡಿದ
ಧರಿಸಿ ನಡೆದ ರಾಜ ಅವಗೆ ಉಡುಗೊರೆಯ ನೀಡಿದ
"ನಿಮ್ಮದೆಲ್ಲ ಎಂಥ ಜ್ಞಾನ? ನೋಡಿ ಈ ಜ್ಞಾನಿಯ
ಜೀವನದ ಜ್ಞಾನ ಅರೆದು ಕುಡಿದ ನಿಜ ಅನುಭಾವಿಯ"
ಇಡಿಯ ರಾಜ ಗಡಣ ತನ್ನ ತಲೆಯ ತಗ್ಗಿಸಿತು
ಚಮ್ಮಾರನಿಂದ ಒಂದು ಇಡಿಯ ರಾಜ್ಯ ಉಳಿಯಿತು