Sunday 15 December 2019

ದೇಶದ ಕಾಯಿದೆಗಳು ಸlಧರ್ಮದ ಹೆಸರಲ್ಲಿ ಕೆಲವರನ್ನು ಹೊರಗಿಟ್ಟು ರೂಪಿತವಾಗುತ್ತಿವೆ.

ನಾನು ನನ್ನ ಬಾಲ್ಯ-ತಾರುಣ್ಯಗಳನ್ನು ಹಲವು ಜಾತಿ ಧರ್ಮ ಭಾಷೆಗೆ ಸೇರಿದ ಮಂದಿ, ಹೊಟ್ಟೆಪಾಡಿಗಾಗಿ ನಿತ್ಯ ಹೋರಾಡುವ  ಗಲ್ಲಿಗಳಲ್ಲಿ ಕಳೆದೆ. ಅದುವೇ ಸಮಾಜವನ್ನು ನೋಡಲು ನನಗೊಂದು ತಾತ್ವಿಕ ದೃಷ್ಟಿಕೋನ ಒದಗಿಸಿತು. ಮುಂದೆ ನಾನು ಓದಿದ ಮತ್ತು ಕಲಿಸಿದ ಸಾಹಿತ್ಯವು, ಈ ಸಾಮಾಜಿಕ ವಾಸ್ತವಿಕತೆಯ ಮುಂದುವರಿಕೆಯಾಗಿತ್ತು. ಬಳಿಕ  ಭಾರತದ ಜನಸಮುದಾಯಗಳು ತಮ್ಮ ಧರ್ಮ ಜಾತಿ ಭಾಷೆಗಳ ಗಡಿಗಳಾಚೆ ಬಂದು ಕಟ್ಟಿದ ಕೂಡು ಸಂಸ್ಕೃತಿಯ ಶೋಧ ಮಾಡಿದೆ. ಅದಕ್ಕಾಗಿ ಭಾರತವನ್ನು ನಿರಾಳವಾಗಿ ಅಲೆದಾಡಿದೆ. ನನ್ನ ಹುಡುಕಾಟವು ಭಾರತದ ಮತೀಯ ಹಿಂಸೆಗಳು ಮೂಡಿಸಿದ ನಿರಾಶೆಯಲ್ಲಿ ಮಾಡಿದ ಭರವಸೆಯ ಬೇಸಾಯವಾಗಿತ್ತು.  ಆದರೆ ನಿನ್ನೆ ಪಾರ್ಲಿಮೆಂಟು ಪಾಸುಮಾಡಿದ ಪೌರತ್ವ ಕಾಯಿದೆ, ನನ್ನೀ ಬಾಲ್ಯಾನುಭವದ ಬುನಾದಿ, ಸಾಹಿತ್ಯಾಭ್ಯಾಸ, ಸಾಂಸ್ಕೃತಿಕ ಶೋಧಗಳ ಅಂತಸ್ಥವನ್ನೇ ಅಲುಗಿಸುತ್ತ ವಿಚಿತ್ರ  ಕಂಪನ ಹುಟ್ಟಿಸಿದೆ.  ಪಾರ್ಲಿಮೆಂಟು  ಮುಂದೆ ಪಾಸು ಮಾಡಲಿರುವ ಪೌರತ್ವ ಕಾಯಿದೆ ಇನ್ಯಾವ ಸನ್ನಿವೇಶ ಹುಟ್ಟಿಸಲಿದೆಯೋ ತಿಳಿಯದು. ಈತನಕ ದೇಶದ ಕಾಯಿದೆಗಳು ಸಮಸ್ತ ಪ್ರಜೆಗಳನ್ನು ಉದ್ದೇಶಿಸಿ ರೂಪಿತವಾಗುತ್ತಿದ್ದವು. ಈಗವು ಧರ್ಮದ ಹೆಸರಲ್ಲಿ ಕೆಲವರನ್ನು ಹೊರಗಿಟ್ಟು ರೂಪಿತವಾಗುತ್ತಿವೆ.  ಗ್ರೂಪ್ ಫೋಟೊದಿಂದ ಕೆಲವರ ಚಿತ್ರವನ್ನಷ್ಟೇ ಹೀಗೆ ಕತ್ತರಿಸಿ ಹೊರತೆಗೆಯಬಹುದೇ? ವಿವೇಕಾನಂದ ಕಬೀರ ಕುವೆಂಪು ಟಾಗೂರ ಗಾಂಧಿ ಅಂಬೇಡ್ಕರ್ ಲೋಹಿಯಾ ಮುಂತಾದ ಹಿರೀಕರು ಕಂಡರಿಸಿದ ಕೂಡುಭಾರತದ ಕಲ್ಪನೆಯನ್ನು, ನಾಡಿನ ವಿಶಾಲ ಸಮುದಾಯಗಳ ಒಳಗೆ ಇನ್ನೂ ಬತ್ತಿರದ ವಿವೇಕ-ಮನುಷ್ಯತ್ವ,  ಅಷ್ಟು ಸುಲಭಕ್ಕೆ ಬಿಟ್ಟುಗೊಡದು  ಎಂದು ನನ್ನ ನಂಬಿಕೆ.
 
ಜನಾಂಗದ್ವೇಷದಿಂದ ಜಗತ್ತಿನಲ್ಲಿ ಯಾವ ದೇಶವೂ ಘನತೆವೆತ್ತ ಸಮಾಜವನ್ನು ಕಟ್ಟಲು ಸಾಧ್ಯವಾಗಿಲ್ಲ. ಭಾರತದ ಅಸ್ತಿತ್ವ ಇರುವುದು ಅದರ ಬಹುತ್ವದ ಅರ್ಥಪೂರ್ಣ ನಿಭಾವಣೆಯಲ್ಲಿ. ಇದರ  ಖಬರಿಲ್ಲದವರು, ನಾಡಿಗೆ ಕೇಡನ್ನೇ ಎಸಗುವರು.

Thursday 12 December 2019

ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ: ಸರ್ವೇಶ್ವರ ದಯಾಳ ಸಕ್ಸೇನ.

ನಿನ್ನ ಮನೆಯ
ಒಂದು ಕೋಣೆಯಲ್ಲಿ ಬೆಂಕಿ ಬಿದ್ದಿದ್ದರೆ
ನೀನು ಮತ್ತೊಂದು
ಕೋಣೆಯಲ್ಲಿ ನಿದ್ರಿಸ ಬಲ್ಲೆಯಾ?

ನಿನ್ನ ಮನೆಯ
ಒಂದು ಕೋಣೆಯಲ್ಲಿ ಹೆಣಗಳು ಕೊಳೆಯುತ್ತಿದ್ದರೆ
ನೀನು ಮತ್ತೊಂದು ಕೋಣೆಯಲ್ಲಿ
ಪ್ರಾರ್ಥನೆ ಮಾಡ ಬಲ್ಲೆಯಾ?

ಹೌದು! ಎನ್ನುವುದಾದರೆ
ನಿನ್ನೊಂದಿಗೆ ನನಗೆ ಮಾತನಾಡುವುದು ಏನೂ ಉಳಿದಿಲ್ಲ.

ದೇಶ ಕಾಗದದಿಂದಾದ ನಕ್ಷೆಯಲ್ಲ
ಒಂದು ಭಾಗ ಹರಿದ ಮೇಲೂ
ಉಳಿದ ಭಾಗ ಮೊದಲಿನಂತೆ ಸ್ವಸ್ಥವಾಗಿರಲು
ಹಾಗು ನದಿ, ಪರ್ವತ, ನಗರ, ಹಳ್ಳಿಗಳೆಲ್ಲ
ಹಾಗೆಯೇ ತಂತಮ್ಮ ಜಾಗದಲ್ಲಿ ಒಟ್ಟಾಗಿ ಕಾಣಲು

ಇದನ್ನು ನೀನು
ಒಪ್ಪುವುದಿಲ್ಲವಾದರೆ
ನನಗೆ ನಿನ್ನೊಂದಿಗಿರಲು ಸಾಧ್ಯವಿಲ್ಲ.

ಈ ಜಗತ್ತಿನಲ್ಲಿ
ಮಾನವ ಜೀವಕ್ಕಿಂತ
ದೊಡ್ಡದು ಯಾವುದೂ ಇಲ್ಲ
ದೇವರು, ಜ್ಞಾನ, ಚುನಾವಣೆ
ಯಾವುದೂ ಅಲ್ಲ
ಕಾಗದದಲ್ಲಿ ಬರೆದ
ಯಾವುದೇ ಒಡಂಬಡಿಕೆಯನ್ನು
ಹರಿದು ಹಾಕಬಹುದು
ಭೂಮಿಯ ಏಳು ಪದರಗಳಡಿ
ಹೂತು ಹಾಕಲೂಬಹುದು

ಆತ್ಮಸಾಕ್ಷಿಯೇ
ಹೆಣಗಳ ರಾಶಿಯ ಮೇಲೆ ನಿಂತಿದ್ದರೆ
ಅಲ್ಲಿ ಅಂಧಕಾರವಿದೆ
ಬಂದೂಕಿನ ನಳಿಕೆಯಲ್ಲಿ
ಅಧಿಕಾರ ನಡೆಯುತ್ತಿದ್ದರೆ
ಅದು ಆಯುಧಗಳ ದಂಧೆಯಾಗಿದೆ

ನೀನಿದನ್ನು ಒಪ್ಪದಿದ್ದಲ್ಲಿ
ನಿನ್ನನ್ನು ಒಂದೂ ಕ್ಷಣವೂ ಸಹಿಸಲಾರೆ.

ನೆನಪಿಡು
ಒಂದು ಮಗುವಿನ ಹತ್ಯೆ
ಒಂದು ಹೆಂಗಸಿನ ಸಾವು
ಗುಂಡಿನಿಂದ ಛಿದ್ರಗೊಂಡ 
ಒಬ್ಬ ಮನುಷ್ಯನ ದೇಹ
ಅದು ಯಾವುದೇ ಸರ್ಕಾರದ ಪತನ ಮಾತ್ರವಲ್ಲ
ಅದು ಇಡೀ ರಾಷ್ಟ್ರದ ಪತನ.

ಹೀಗೇ ರಕ್ತ ಹರಿದು
ಭೂಮಿಯಲ್ಲಿ ಇಂಗುವುದಿಲ್ಲ
ಆಕಾಶದಲ್ಲಿ ಹಾರುವ
ಬಾವುಟವನ್ನೂ ಕಪ್ಪಾಗಿಸುತ್ತದೆ.

ಯಾವ ನೆಲದಲ್ಲಿ
ಸೈನಿಕರ ಬೂಟುಕಾಲುಗಳ ಗುರುತಿರುವುದೋ
ಅಲ್ಲಿ ಅವುಗಳ ಮೇಲೆ
ಹೆಣಗಳು ಬೀಳುತ್ತಿರುತ್ತವೋ
ಆ ನೆಲ ನಿನ್ನ ರಕ್ತದಲ್ಲಿ ಬೆಂಕಿಯಾಗಿ ಹರಿಯದಿದ್ದಲ್ಲಿ
ನೀನು ಬರಡಾಗಿರುವೆ ಎಂದು ತಿಳಿದುಕೋ
ನಿನಗಲ್ಲಿ ಉಸಿರಾಡಲೂ ಹಕ್ಕಿಲ್ಲ
ನಿನಗಾಗಿ ಈ ಜಗತ್ತೂ ಸಹ
ಇಲ್ಲವೆಂದೇ ತಿಳಿ.

ಕೊನೆಗೊಂದು ಮಾತು
ಸ್ಪಟಿಕದಷ್ಟೇ ಸ್ಪಷ್ಟ
ಯವುದೇ ಕೊಲೆಗಡುಕನನ್ನು ಎಂದಿಗೂ ಕ್ಷಮಿಸಬೇಡ
ಅವನು ನಿನ್ನ ಗೆಳೆಯನೆ ಆಗಿರಲಿ
ಧರ್ಮದ ಗುತ್ತಿಗೆ ಪಡೆದವನಿರಲಿ
ಅಥವಾ ಪ್ರಜಾತಂತ್ರದ ಸ್ವಯಂಘೋಷಿತ
ಕಾವಲುಗಾರನೇ ಆಗಿರಲಿ.

ಕವಿ: ಸರ್ವೇಶ್ವರ ದಯಾಳ ಸಕ್ಸೇನ.
ಕನ್ನಡಕ್ಕೆ: ಪಿ. ಸುನೀತ ಹೆಬ್ಬಾರ್

Tuesday 10 December 2019

ಪೌರತ್ವ ಮಸೂದೆ: ಧರ್ಮನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ

ಪ್ರಜಾವಾಣಿ ಸಂಪಾದಕೀಯ:
(11.12.2019)

*ಪೌರತ್ವ ಮಸೂದೆ: ಧರ್ಮನಿರಪೇಕ್ಷ ಪರಂಪರೆಗೆ ಕಪ್ಪುಚುಕ್ಕೆ*

ವಸಾಹತುಶಾಹಿಯ ಹಿಡಿತದಿಂದ ಹೊರಬರಲು ಧರ್ಮದ ಚೌಕಟ್ಟುಗಳನ್ನು ಮೀರಿ ಹೋರಾಟ ನಡೆಸಿದ ಭಾರತವು ಧರ್ಮದ ಆಧಾರದಲ್ಲಿ ವಿಭಜನೆ ಕಾಣಬೇಕಾಯಿತು. ಪರಿಣಾಮವಾಗಿ ಇಂದಿನ ಬಾಂಗ್ಲಾದೇಶವನ್ನೂ ಒಳಗೊಂಡ ಇಸ್ಲಾಮಿಕ್ ದೇಶ ಪಾಕಿಸ್ತಾನವು ಉದಯವಾಯಿತು. ಆ ಸಂದರ್ಭದಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಆಗಿಸಬೇಕು ಎಂಬ ಆಗ್ರಹಗಳು ಗಟ್ಟಿಯಾಗಿಯೇ ಕೇಳಿಬಂದಿದ್ದವು. ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದವರು ಮತ್ತು ದೇಶದ ಸಂವಿಧಾನವನ್ನು ರೂಪಿಸಿದವರು, ಈ ದೇಶದ ಪರಂಪರೆ ಕಲಿಸಿದ ಪಾಠಗಳನ್ನು ಗಮನದಲ್ಲಿ ಇರಿಸಿಕೊಂಡು, ಧರ್ಮನಿರಪೇಕ್ಷತೆ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ದೇಶದ ಸಂವಿಧಾನದ ಆತ್ಮದ ಸ್ಥಾನದಲ್ಲಿ ಇರಿಸಿದರು. ಆದರೆ, ಈ ದೇಶ ಪಾಲಿಸಿಕೊಂಡು ಬಂದಿರುವ ಧರ್ಮನಿರಪೇಕ್ಷತೆ ಹಾಗೂ ಸಮಾನತೆಯ ಅಣಕದಂತೆ ಕಾಣುತ್ತಿರುವ ‘ಪೌರತ್ವ (ತಿದ್ದುಪಡಿ) ಮಸೂದೆ– 2019’ ಸೋಮವಾರ ರಾತ್ರಿ ಲೋಕಸಭೆಯ ಅನುಮೋದನೆ ಪಡೆದುಕೊಂಡಿದೆ. ಈ ಮಸೂದೆಯು ಭಾರತದ ಪೌರತ್ವ ನೀಡುವ ವಿಚಾರದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುತ್ತದೆ, ದೇಶಗಳ ಆಧಾರದಲ್ಲಿ ತಾರತಮ್ಯ ಎಸಗುತ್ತದೆ. ಅಷ್ಟೇ ಅಲ್ಲ, ವ್ಯಕ್ತಿಯೊಬ್ಬ ಒಂದು ನಿರ್ದಿಷ್ಟ ಬಗೆಯ ದೌರ್ಜನ್ಯಕ್ಕೆ ಒಳಗಾಗಿದ್ದರೆ ಮಾತ್ರ ಆತನಿಗೆ ಭಾರತದ ಪೌರತ್ವ ನೀಡಲಾಗುವುದು ಎನ್ನುವ ಮೂಲಕವೂ ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ. ಈ ಮಸೂದೆಗೆ ರಾಜ್ಯಸಭೆಯ ಅನುಮೋದನೆ ಇನ್ನಷ್ಟೇ ಸಿಗಬೇಕಿದೆ. ಇದಕ್ಕೆ ಒಂದು ವೇಳೆ, ರಾಜ್ಯಸಭೆಯ ಅನುಮೋದನೆ ದೊರೆತು ಈ ತಿದ್ದುಪಡಿಗಳು ಮೂಲ ಕಾಯ್ದೆಯ ಭಾಗವಾದರೂ ಮೇಲ್ನೋಟಕ್ಕೇ ಕಾಣಿಸುವ ತಾರತಮ್ಯದ ಅಂಶಗಳ ಕಾರಣದಿಂದಾಗಿ ಇವು ನ್ಯಾಯಾಂಗದ ನಿಕಷಕ್ಕೆ ಒಳಪ‍ಡಬಹುದು. ಧರ್ಮನಿರಪೇಕ್ಷತೆಯು ಸಂವಿಧಾನದ ಮೂಲಸ್ವರೂಪಗಳಲ್ಲಿ ಒಂದು. ಅದರ ಉಲ್ಲಂಘನೆಗೆ ಎಷ್ಟೇ ಬಹುಮತ ಇರುವ ಸರ್ಕಾರಕ್ಕೂ ಅವಕಾಶ ಇಲ್ಲ. ಕೇಂದ್ರ ಸರ್ಕಾರವು ಈ ಮಸೂದೆಯನ್ನು ಕಳೆದ ವರ್ಷವೂ ಮಂಡಿಸಿತ್ತು. ಹಿಂದೆ ಮಂಡಿಸಿದ್ದ ಮಸೂದೆಗೆ ಹೋಲಿಸಿದರೆ ಈಗಿನ ಮಸೂದೆಯಲ್ಲಿ ಒಂದೆರಡು ಬದಲಾವಣೆಗಳು ಆಗಿವೆ. ಈಶಾನ್ಯ ಭಾರತದ ಕೆಲವು ಪ್ರದೇಶ
ಗಳನ್ನು ಬಹುಶಃ ರಾಜಕೀಯ ಕಾರಣಗಳಿಗಾಗಿ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಅಫ್ಗಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಧರ್ಮದ ಕಾರಣಕ್ಕೆ ದೌರ್ಜನ್ಯಕ್ಕೆ ತುತ್ತಾಗಿ, ಭಾರತಕ್ಕೆ 2014ರ ಡಿಸೆಂಬರ್ 31ಕ್ಕೂ ಮೊದಲು ಬಂದ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೈಸ್ತ ಸಮುದಾಯದ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವುದು ಈ ತಿದ್ದುಪಡಿಯ ಉದ್ದೇಶ. ಮಸೂದೆಯ ಉದ್ದೇಶವನ್ನು ಓದಿದಾಗ, ಅದರಲ್ಲಿನ ಲೋಪಗಳು ಮೇಲ್ನೋಟಕ್ಕೇ ಗೊತ್ತಾಗುತ್ತವೆ. ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಗಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಧರ್ಮದ ಕಾರಣಕ್ಕೆ ದೌರ್ಜನ್ಯಗಳು ನಡೆದಿರುವುದು ನಿಜವಾದರೂ, ಇತರ ಕಾರಣಗಳಿಗಾಗಿ ಅಲ್ಲಿ ದೌರ್ಜನ್ಯಕ್ಕೆ ಗುರಿಯಾದ ಸಮುದಾಯಗಳಿಗೆ ಸೇರಿದವರು ಭಾರತದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರೆ ಅವರಿಗೆ ಭಾರತದ ಪೌರತ್ವ ನೀಡುವುದಿಲ್ಲವೇಕೆ ಎಂಬ ಪ್ರಶ್ನೆ ಎದುರಾಗುತ್ತದೆ. ‘ಧರ್ಮದ ಆಧಾರದಲ್ಲಿ ವಿಭಜನೆ ಕಾಣುವ ಮೊದಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಭಾರತದ ಭಾಗವೇ ಆಗಿದ್ದವು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಧರ್ಮದ ಕಾರಣದಿಂದಾಗಿ ದೌರ್ಜನ್ಯಕ್ಕೆ ತುತ್ತಾದವರಿಗೆ ಆಶ್ರಯ ಕಲ್ಪಿಸುವುದು ಭಾರತದ ನೈತಿಕ ಜವಾಬ್ದಾರಿ’ ಎಂದು ತಿದ್ದುಪಡಿಯ ಪರವಾಗಿ ವಾದಿಸಬಹುದು. ಆದರೆ, ಈ ಎರಡು ದೇಶಗಳ ಜೊತೆಯಲ್ಲಿ ಅಫ್ಗಾನಿಸ್ತಾನವನ್ನು ಮಾತ್ರ ಸೇರಿಸಿಕೊಂಡಿದ್ದು ಏಕೆ, ಭಾರತದ ಜೊತೆ ಗಡಿ ಹಂಚಿಕೊಂಡಿರುವ ಇತರ ನೆರೆ ರಾಷ್ಟ್ರಗಳು ಏಕೆ ಮಸೂದೆಯ ವ್ಯಾಪ್ತಿಗೆ ಒಳಪಡಲಿಲ್ಲ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಭಾರತದ ಜೊತೆ ಗಡಿ ಹಂಚಿಕೊಂಡಿರುವ ಮ್ಯಾನ್ಮಾರ್‌ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಂ ಸಮುದಾಯದವರು ಕೂಡ ಧರ್ಮದ ಕಾರಣಕ್ಕೇ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಆದರೆ, ಆ ಸಮುದಾಯದವರು ಅಕ್ರಮವಾಗಿ ಭಾರತ ಪ್ರವೇಶಿಸಿದ್ದರೆ, ಅವರಿಗೆ ಪೌರತ್ವ ನೀಡುವ ಪ್ರಸ್ತಾವ ತಿದ್ದುಪಡಿಯಲ್ಲಿ ಇಲ್ಲ. ಇನ್ನೊಂದು ನೆರೆರಾಷ್ಟ್ರ ಶ್ರೀಲಂಕಾದಲ್ಲಿ ಭಾರತ ಮೂಲದ ತಮಿಳರು, ಭಾಷೆಯ ಕಾರಣಕ್ಕಾಗಿ ಮತ್ತು ಜನಾಂಗೀಯ ನೆಲೆಯಲ್ಲಿ ಕಿರುಕುಳ ಅನು
ಭವಿಸಿದ್ದಾರೆ. ಹೀಗಿರುವಾಗ, ಶ್ರೀಲಂಕಾದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ತಮಿಳರಿಗೆ ಪೌರತ್ವ ನೀಡುವ ಪ್ರಸ್ತಾವ ಕೂಡ ಮಸೂದೆಯಲ್ಲಿ ಇಲ್ಲ. ಈ ಮಸೂದೆಯು ಮುಸ್ಲಿಮರನ್ನು ಮಾತ್ರ ತನ್ನ ವ್ಯಾಪ್ತಿಯಿಂದ ಹೊರಗಿರಿಸುವ ಉದ್ದೇಶ ಹೊಂದಿದೆ. ಧರ್ಮದ ಆಧಾರದಲ್ಲಿ ತಾರತಮ್ಯ ಎಸಗುವ ಈ ಮಸೂದೆಯು ದೇಶದ ಧರ್ಮನಿರಪೇಕ್ಷ ಪರಂಪರೆಗೆ ಒಂದು ಕಪ್ಪುಚುಕ್ಕೆಯಂತೆ ಕಾಣಿಸುತ್ತಿದೆ.