Wednesday 25 September 2019

ಮುಂದಿನ ಜನ್ಮದಲ್ಲಿ ಲೇಖಕನಾಗಿ ಹುಟ್ಟಬೇಕೆಂಬುದು ನನ್ನ ಆಸೆ’ ಫಿಡೆಲ್


Image result for fidel castro
ಮೊನ್ನೆ ಫಿಡೆಲ್ ಕ್ಯಾಸ್ಟ್ರೊನ ಚಿತಾಭಸ್ಮವನ್ನು ಅವನ ನೆಚ್ಚಿನ ಕ್ರಾಂತಿಕಾರಿ ಚಿಂತಕ ಜೋಸ್ ಮಾರ್ತಿಯ ಸಮಾಧಿಯ ಪಕ್ಕದಲ್ಲಿಟ್ಟ ದಿನ, ಹಿಂದೊಮ್ಮೆ ಮಾರ್ಕ್ವೆಜ್ ಜೊತೆ ಮಾತಾಡುತ್ತಾ, ‘ಮುಂದಿನ ಜನ್ಮದಲ್ಲಿ ಲೇಖಕನಾಗಿ ಹುಟ್ಟಬೇಕೆಂಬುದು ನನ್ನ ಆಸೆ’ ಎಂದು ಫಿಡೆಲ್ ಹೇಳಿದ್ದು ನೆನಪಾಯಿತು. 

ಜಗತ್ತಿನ ಶ್ರೇಷ್ಠ ಲೇಖಕರಲ್ಲೊಬ್ಬನಾದ ಕೊಲಂಬಿಯಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ತನ್ನ ಗೆಳೆಯ, ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಬಗ್ಗೆ ಸದಾ ಹೃದಯ ತುಂಬಿ ಮಾತಾಡುತ್ತಿದ್ದ. ‘ಫಿಡೆಲ್ ಬಗ್ಗೆ ಮಾತಾಡುವಾಗ ನಾನು ತೀರ್ಮಾನ ಕೊಡುವ ಸ್ಥಾನದಲ್ಲಿ ನಿಂತು ಮಾತಾಡಲಾರೆ; ಭಾವನೆಗಳ ಲೋಕದಿಂದ ಮಾತ್ರ ಮಾತಾಡಬಲ್ಲೆ’ ಎಂದ ಮಾರ್ಕ್ವೆಜ್,  ‘ಈ ಜಗತ್ತಿನಲ್ಲಿ ನಾನು ಅತ್ಯಂತ ಪ್ರೀತಿಸುವ ವ್ಯಕ್ತಿ ಫಿಡೆಲ್’ ಎಂದಿದ್ದ. ಕ್ಯಾಸ್ಟ್ರೊಗಿಂತ ಎರಡು ವರ್ಷ ಮೊದಲೇ ತೀರಿಕೊಂಡ ಮಾರ್ಕ್ವೆಜ್ ನಿಲುವು ಕೊನೆಯವರೆಗೂ ಹಾಗೇ ಇದ್ದಂತಿತ್ತು.

ಒಮ್ಮೆ ಮಾರ್ಕ್ವೆಜ್ ಬರಹಗಾರರ ಕಮ್ಮಟದಲ್ಲಿ ಮಾತಾಡುತ್ತಿರುವಾಗ, ಲೇಖಕನೊಬ್ಬ ‘ಕ್ಯಾಸ್ಟ್ರೊ ಒಬ್ಬ ಸರ್ವಾಧಿಕಾರಿ’ ಎಂದಾಗ, ಮಾರ್ಕ್ವೆಜ್ ಹೇಳಿದ: ‘ಚುನಾವಣೆ ನಡೆಸುವುದೊಂದೇ ಪ್ರಜಾಪ್ರಭುತ್ವವಾದಿಯಾಗಿರುವ ಮಾರ್ಗವಲ್ಲ.’ ಆದರೆ ಗೆಳೆಯ ಮಾಡಿದ್ದನ್ನೆಲ್ಲ ಮಾರ್ಕ್ವೆಜ್ ಒಪ್ಪುತ್ತಿದ್ದನೆಂದಲ್ಲ. ಜೆಕೊಸ್ಲೊವಾಕಿಯದಲ್ಲಿ ಸೋವಿಯತ್ ಯೂನಿಯನ್ ಹಸ್ತಕ್ಷೇಪ ಮಾಡಿದ್ದನ್ನು ಕ್ಯಾಸ್ಟ್ರೊ ಬೆಂಬಲಿಸಿದರೆ, ಮಾರ್ಕ್ವೆಜ್ ಅದನ್ನು ಪ್ರತಿಭಟಿಸಿದ್ದ.

ಅಧಿಕಾರ ‘ಮಾನವನ ಅತ್ಯುನ್ನತ ಮಹತ್ವಾಕಾಂಕ್ಷೆ ಹಾಗೂ ಇಚ್ಛಾಶಕ್ತಿಯ ರೂಪ’ ಎಂದು ಅರಿತಿದ್ದ ಮಾರ್ಕ್ವೆಜ್, ಪ್ರಖ್ಯಾತ ಲೇಖಕನಾದ ಮೇಲೆ ಹಲವು ದೇಶಗಳ ರಾಜಕೀಯ ನಾಯಕರನ್ನು ಹತ್ತಿರದಿಂದ ಬಲ್ಲವನಾಗಿದ್ದ. ಆದರೆ ಫಿಡೆಲ್ ಜೊತೆಗಿನ ಅವನ ಸ್ನೇಹ ಬೆಳೆದದ್ದು ಸಾಹಿತ್ಯದ ಮೂಲಕ. ಒಂದು ರಾತ್ರಿ ಮಾರ್ಕ್ವೆಜ್ ಹಾಗೂ ಫಿಡೆಲ್ ಮಾತಾಡುತ್ತಾ ಕೂತಿದ್ದರು.

ಇನ್ನೇನು ಬೆಳಗಿನ ಜಾವ ಆಗುತ್ತಿರುವಂತೆ, ಫಿಡೆಲ್ ‘ಇವತ್ತು ಓದಬೇಕಾಗಿರುವ ಪುಸ್ತಕಗಳು ನನಗಾಗಿ ಕಾಯುತ್ತಿವೆ’ ಎನ್ನುತ್ತಾ ಮೇಲೆದ್ದು, ‘ಇವನ್ನೆಲ್ಲ ಓದಬೇಕಾದದ್ದು ಅನಿವಾರ್ಯ; ಆದರೆ ಬೋರಿಂಗ್ ಹಾಗೂ ಶ್ರಮದಾಯಕ ಕೂಡ’ ಎಂದ. ಅದಕ್ಕೆ ಮಾರ್ಕ್ವೆಜ್ ‘ನಡುನಡುವೆ ಒಳ್ಳೆಯ, ಆದರೆ ಕೊಂಚ ಲೈಟ್ ಆದ ಪುಸ್ತಕಗಳನ್ನು ಓದುವುದು ಆ ಭಾರವನ್ನು ಕಳೆಯುವ ಉಪಾಯ’ ಎಂದು ಪುಸ್ತಕಗಳ ಪಟ್ಟಿ ನೀಡಿದರೆ, ಫಿಡೆಲ್ ಅವನ್ನೆಲ್ಲ ಓದಿಬಿಟ್ಟಿದ್ದ; ಅಷ್ಟೇ ಅಲ್ಲ, ಅವುಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನೂ ಹೇಳತೊಡಗಿದ!

‘ಫಿಡೆಲ್ ಎಂಥ ದೈತ್ಯ ಓದುಗನೆಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ’ ಎನ್ನುವ ಮಾರ್ಕ್ವೆಜ್, ಅವತ್ತು ಬೆಳಗಿನ ಜಾವ ಫಿಡೆಲ್‌ಗೆ ತನ್ನ ‘ದಿ ಟೇಲ್ ಆಫ್ ಎ ಶಿಪ್ ರೆಕ್ಡ್ ಸೈಲರ್’ ಪುಸ್ತಕ ಕೊಟ್ಟ. ಮಾರನೆಯ ದಿನ ಹನ್ನೆರಡು ಗಂಟೆಯ ಹೊತ್ತಿಗೆ ಸಿಕ್ಕ ಫಿಡೆಲ್, ಆ ಪುಸ್ತಕದಲ್ಲಿದ್ದ ತಪ್ಪುಗಳನ್ನು ತೋರಿಸಿಕೊಟ್ಟ! ಫಿಡೆಲ್‌ಗೆ ಸಾಹಿತ್ಯಲೋಕ ಪ್ರಿಯವಾಗಿದ್ದುದನ್ನು ಕಂಡ ಮಾರ್ಕ್ವೆಜ್ ಅವನನ್ನು ಭೇಟಿಯಾಗುವಾಗಲೆಲ್ಲ ಹಲಬಗೆಯ ಪುಸ್ತಕಗಳನ್ನು ಒಯ್ಯತೊಡಗಿದ.

ಫಿಡೆಲ್ ಬರೆಯುವುದರ ಖುಷಿ ಕಂಡುಕೊಂಡಿದ್ದುದನ್ನೂ ಮಾರ್ಕ್ವೆಜ್ ಅರಿತ. ಫಿಡೆಲ್ ಕಾರಿನಲ್ಲಿ ಹೋಗುವಾಗ ನೋಟ್ ಬುಕ್ಕಿನಲ್ಲಿ ಬರೆಯುತ್ತಿದ್ದ. ಒಳ್ಳೆಯ ಲೇಖಕನಂತೆ ತಕ್ಕ ನುಡಿಗಟ್ಟಿಗಾಗಿ ತಡಕಾಡುತ್ತಿದ್ದ. ಬರೆದದ್ದನ್ನು ಹೊಡೆದುಹಾಕಿ ಮಾರ್ಜಿನ್ನಿನಲ್ಲಿ ಇನ್ನೇನೋ ಸೇರಿಸುತ್ತಿದ್ದ.  ಸರಿಯಾದ ಪದ ಸಿಕ್ಕುವ ತನಕ ಹಲವು ದಿನ ನಿಘಂಟುಗಳನ್ನು ಹುಡುಕುತ್ತಿದ್ದ; ಅವರಿವರನ್ನು ಕೇಳುತ್ತಿದ್ದ.

ಕ್ರಾಂತಿಕಾರಿ ಹೋರಾಟದ ಮೂಲಕ ಬಟಿಸ್ಟಾ ಸರ್ಕಾರವನ್ನು ಕಿತ್ತೊಗೆದ ಮೇಲೆ ಹವಾನಾದಲ್ಲಿ ಫಿಡೆಲ್ ಮಾಡಿದ ಏಳು ಗಂಟೆಯ ಭಾಷಣ ವಿಶ್ವದಾಖಲೆಯಿರಬಹುದು ಎನ್ನುವ ಮಾರ್ಕ್ವೆಜ್‌ಗೆ ಅವತ್ತು ಎಲ್ಲಿ ಹೋದರೂ ಫಿಡೆಲ್ ಭಾಷಣ ಕೇಳುತ್ತಲೇ ಇತ್ತು. ಅವನ ಮಾತಿನ, ವಾದದ ಮಾಂತ್ರಿಕ ಶಕ್ತಿ ಮಾರ್ಕ್ವೆಜ್‌ಗೆ ಅರಿವಾಗುತ್ತಾ ಹೋಯಿತು. ಫಿಡೆಲ್ ಒರಟು ದನಿ ಕೇಳಿದ ಡಾಕ್ಟರು ಇನ್ನು ಐದು ವರ್ಷಗಳಲ್ಲಿ ಅವನು ಮಾತು ಕಳೆದುಕೊಳ್ಳಲಿದ್ದಾನೆಂದು ಹೇಳಿದರು. 1962ರಲ್ಲೊಂದು ದಿನ ಫಿಡೆಲ್ ಮಾತು ನಿಂತು ಹೋಯಿತು; ಆದರೆ ಮರಳಿ ಬಂತು!   
ಚಿಂತನೆ, ಕ್ರಿಯೆ ಹಾಗೂ ಜನರ ಜೊತೆಗಿನ ಮಾತುಕತೆಯ ಮೂಲಕ ವಿಕಾಸಗೊಳ್ಳುತ್ತಿದ್ದ ಫಿಡೆಲ್ ಮಾತಿನ ವೈಶಿಷ್ಟ್ಯವನ್ನು ಮಾರ್ಕ್ವೆಜ್ ಮಾತಿನಲ್ಲೇ ಕೇಳಿ: ‘ಸಣ್ಣಗಿನ ದನಿಯಲ್ಲಿ, ಮಾತಾಡಲೋ ಬೇಡವೋ ಎಂಬ ಅನುಮಾನದಲ್ಲೇ ಫಿಡೆಲ್ ಮಾತು ಶುರುವಾಗುತ್ತಿತ್ತು. ಖಚಿತವಿರದ ದಿಕ್ಕಿನಲ್ಲಿ, ಮಂಜಿನಲ್ಲಿ ತಡವರಿಸುತ್ತಾ ಅವನ ಮಾತು ಮುಂದಡಿಯಿಡುತ್ತಿತ್ತು. ಅವನು ಇಂಚಿಂಚೇ ಬೇರು ಬಿಡುತ್ತಾ, ಹಟಾತ್ತನೊಮ್ಮೆ ದೊಡ್ಡ ಪಂಜದ ಹೊಡೆತದ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳಲಾರಂಭಿಸುತ್ತಿದ್ದ.

ಆಮೇಲೆ ಜನರ ಜೊತೆಗಿನ ಮಾತುಕತೆಯ ಮೂಲಕ ಅವರಿಂದ ಪಡೆಯುವುದೂ ಕೊಡುವುದೂ ಶುರುವಾಗುವುದು. ಇಂಥ ಉದ್ವಿಗ್ನತೆಯಲ್ಲಿ ಅವನ ಉತ್ತುಂಗ ಸ್ಥಿತಿ ಸೃಷ್ಟಿಯಾಗುವುದು. ಇದು ಅವನ ಸ್ಫೂರ್ತಿಯ ನೆಲೆ. ಈ ರಮ್ಯಘನತೆಯ ಉಜ್ವಲತೆಯನ್ನು ನೋಡದವರು, ಅನುಭವಿಸದವರು ಮಾತ್ರ ಅದನ್ನು ಅಲ್ಲಗಳೆಯಬಲ್ಲರು.’
ಮಾರ್ಕ್ವೆಜ್ ಕಂಡಂತೆ ಫಿಡೆಲ್ ಕಮ್ಯುನಿಸಮ್ಮಿನ ಕ್ಲೀಷೆಗಳನ್ನು, ವಾಸ್ತವದ ನಂಟು ಕಳಚಿಕೊಂಡ ಭಾಷೆಯನ್ನು ಬಳಸುವವನಲ್ಲ. ತನ್ನ ಪ್ರೀತಿಯ ಲೇಖಕ ಜೋಸ್ ಮಾರ್ತಿಯ ಮಾತುಗಳನ್ನು ಬಿಟ್ಟರೆ ಬೇರೆ ಲೇಖಕರನ್ನು ಅವನು ಹೆಚ್ಚು ಉಲ್ಲೇಖಿಸುವುದಿಲ್ಲ. ಜೋಸ್ ಮಾರ್ತಿಯ ಇಪ್ಪತ್ತೆಂಟು ಸಂಪುಟಗಳನ್ನೂ ಓದಿದ್ದ ಫಿಡೆಲ್, ಮಾರ್ತಿಯ ಚಿಂತನೆಯನ್ನು ಮಾರ್ಕ್ಸ್‌ವಾದಿ ಕ್ರಾಂತಿಯ ರಕ್ತನಾಳಗಳ ಜೊತೆ ಬೆರೆಯುವಂತೆ ಮಾಡಿದ. ಪ್ರತಿಕೂಲ ಸ್ಥಿತಿ ಎದುರಾದಾಗಲೆಲ್ಲ ಫಿಡೆಲ್ ತೀವ್ರವಾಗುತ್ತಾ ಹೋಗುತ್ತಿದ್ದ.

ಗೆಳೆಯನೊಬ್ಬ ಒಮ್ಮೆ ಫಿಡೆಲ್‌ಗೆ ಹೇಳಿದನಂತೆ: ‘ಪರಿಸ್ಥಿತಿ ತೀರಾ ಬಿಗಡಾಯಿಸಿರಬೇಕು; ಅದಕ್ಕೇ ಇಷ್ಟೊಂದು ಉಜ್ವಲವಾಗಿ ಕಾಣುತ್ತಿದ್ದೀಯ.’ ಮಾತಾಡುತ್ತಲೇ ಚಿಂತಿಸುವ, ಚಿಂತಿಸುತ್ತಲೇ ಮಾತಾಡಿ ಸ್ಪಷ್ಟತೆ ಪಡೆಯುವ ಫಿಡೆಲ್ ನಡುರಾತ್ರಿಯಲ್ಲಿ ಗೆಳೆಯನೊಬ್ಬನ ಮನೆಗೆ ಹೋಗಿ ‘ಐದು ನಿಮಿಷ ಮಾತ್ರ’ ಎಂದು ನಿಂತೇ ಮಾತಾಡತೊಡಗುತ್ತಾನೆ.

ಮಾತುಕತೆ ಉಕ್ಕಿಸಿದ ಎನರ್ಜಿಯಿಂದಾಗಿ ಗಂಟೆಗಟ್ಟಲೆ ಮಾತಾಡುತ್ತಾನೆ; ಕೊನೆಗೆ ಆರಾಮಕುರ್ಚಿಯಲ್ಲಿ ಕೂತು ‘ನಾನೀಗ ಹೊಸ ಮನುಷ್ಯನಾದೆ ಎನ್ನಿಸುತ್ತಿದೆ’ ಎನ್ನುತ್ತಾನೆ.
Image result for fidel castroಮಾರ್ಕ್ವೆಜ್ ಬರೆಯುತ್ತಾನೆ: ‘ಮಾತಾಡಿ ದಣಿದ ಫಿಡೆಲ್, ಮಾತಿನಲ್ಲೇ ದಣಿವಾರಿಸಿಕೊಳ್ಳುವುದು ಹೀಗೆ.’ ಮಾರ್ಕ್ವೆಜ್ ಪ್ರಕಾರ, ರಾಜಕಾರಣಿಯಾಗಿ ಫಿಡೆಲ್‌ನ ಅದ್ಭುತ ಶಕ್ತಿಯೆಂದರೆ ಒಂದು ಸಮಸ್ಯೆ ಎಲ್ಲಿ ಹುಟ್ಟಿ, ಹೇಗೆ ಬೆಳೆಯುತ್ತಿದೆ ಎಂಬುದನ್ನು ಆಳವಾಗಿ ಗ್ರಹಿಸುವುದು. ಅದು ಕೂಡ ಹಲಬಗೆಯ ಮಾತುಕತೆಗಳ ಮೂಲಕವೇ ಬೆಳೆಯುತ್ತಾ ಹೋಗುವುದು.

ಒಮ್ಮೆ ಹಲವು ತಿಂಗಳುಗಳ ಚಿಂತನೆ, ಮಾತುಕತೆಯ ಮೂಲಕ ಫಿಡೆಲ್, ಲ್ಯಾಟಿನ್ ಅಮೆರಿಕದ ದೇಶಗಳು ತೀರಿಸಬೇಕಾದ ಸಾಲ ಕುರಿತು ತರ್ಕಬದ್ಧವಾಗಿ ವಿವೇಚಿಸಿ, ‘ಆ ಸಾಲವನ್ನು ಲ್ಯಾಟಿನ್ ಅಮೆರಿಕನ್ ದೇಶಗಳು ತೀರಿಸಬೇಕಾಗಿಲ್ಲ’ ಎಂಬುದನ್ನು ತೋರಿಸಿದ.  ಇಂಥ ವಿವೇಚನೆಯ ಜೊತೆಗೆ ಫಿಡೆಲ್‌ಗಿದ್ದ ಅದ್ಭುತ ಶಕ್ತಿಯೆಂದರೆ ನೆನಪು.

ಬೆಳಗಾಗೆದ್ದು ಸುಮಾರು ಇನ್ನೂರು ಪುಟಗಳಷ್ಟು ಸುದ್ದಿಯೊಂದಿಗೆ ಫಿಡೆಲ್‌ನ ಬೆಳಗಿನ ಉಪಾಹಾರ; ಪ್ರತಿದಿನ ಓದಲೇಬೇಕಾದ ಕೊನೇಪಕ್ಷ ಐವತ್ತು ದಾಖಲೆಗಳು; ಜೊತೆಗೆ ಪುಸ್ತಕಗಳು. ಅವನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾನೆ, ಓದಲು ಅವನಿಗೆ ಎಲ್ಲಿಂದ ಟೈಮ್ ಸಿಗುತ್ತದೆ, ಅವನ ಓದಿನ ಸ್ಪೀಡ್ ಹೇಗಿರಬಹುದು... ಊಹಿಸುವುದು ಕಷ್ಟ. ಅವನ ಕಾರಿನಲ್ಲಿ ಯಾವಾಗಲೂ ಓದಲು ಒಂದು ಲೈಟ್ ಇರುತ್ತಿತ್ತು.

ಎಷ್ಟೋ ಸಲ ಫಿಡೆಲ್ ಬೆಳಗಿನ ಜಾವ ಓದಲು ಒಯ್ದ ಪುಸ್ತಕದ ಬಗ್ಗೆ ಬೆಳಗ್ಗೆಗಾಗಲೇ ಮಾತಾಡಿದ್ದಿದೆ.  ಆರ್ಥಿಕತೆಯ, ಚರಿತ್ರೆಯ ಪುಸ್ತಕಗಳೆಂದರೆ ಅವನಿಗೆ ಇಷ್ಟ. ಹಾಗೆಯೇ ತೀವ್ರ ಮಾತುಕತೆಗಳು. ಈ ಎಲ್ಲದರ ಮೂಲಕ ಫಿಡೆಲ್ ಹಲವು ದೇಶಗಳನ್ನು ಬಲ್ಲವನಾಗಿದ್ದ. ಅದರಲ್ಲೂ ಅಮೆರಿಕದ ಜನ, ಅಲ್ಲಿನ ಅಧಿಕಾರ ರಚನೆಗಳು, ಅಮೆರಿಕನ್ ಸರ್ಕಾರಗಳು ಕ್ಯೂಬಾಕ್ಕೆ ಒಡ್ಡುವ ಅಡೆತಡೆಗಳು, ಅವನ್ನು ಎದುರಿಸುವ ಮಾರ್ಗಗಳು ಎಲ್ಲವನ್ನೂ ಗ್ರಹಿಸುತ್ತಿದ್ದ. ತನ್ನ ಅಧಿಕಾರಿಗಳು ಸತ್ಯ ಬಚ್ಚಿಟ್ಟರೂ ಅದು ಫಿಡೆಲ್‌ಗೆ ತಿಳಿಯುತ್ತಿತ್ತು...

ಜಗತ್ತಿನ ಬಹುದೊಡ್ಡ ಲೇಖಕರಲ್ಲೊಬ್ಬನಾದ ಮಾರ್ಕ್ವೆಜ್ ಕೊಟ್ಟಿರುವ ಈ ಆತ್ಮೀಯ, ಅಥೆಂಟಿಕ್ ಫಿಡೆಲ್ ಚಿತ್ರಗಳನ್ನು ನೋಡುತ್ತಿದ್ದರೆ ಫಿಡೆಲ್ ಥರದ ನಾಯಕರೊಳಗಿನ ಚಾಲಕಶಕ್ತಿ ಹಾಗೂ ಇಂದಿನ ಬಂಡವಾಳಶಾಹಿಯ ಕ್ರೌರ್ಯವನ್ನು ಎದುರಿಸಲು ಚಿಂತಕ-ನಾಯಕರು ಹುಡುಕಿಕೊಡುವ ಹಾದಿಗಳು ಸ್ಪಷ್ಟವಾಗಿ ಕಾಣತೊಡಗುತ್ತವೆ.
ಕೊನೆ ಟಿಪ್ಪಣಿ: ‘ಮಧ್ಯಮಜೀವಿ’ಗಳಿಗೆ ಫಿಡೆಲ್ ಪಾಠಗಳು

ಇವತ್ತಿನ ಅಂಕಣದಲ್ಲಿ ಕ್ಯಾಸ್ಟ್ರೊನ ಬೌದ್ಧಿಕ ಮುಖಗಳನ್ನು ಹೆಚ್ಚು ಬಿಂಬಿಸಲು ಕಾರಣವಿದೆ. ಇವತ್ತು ಎಡವೂ ಅಲ್ಲದ, ಬಲವೂ ಅಲ್ಲದ ಮಾರ್ಗವೊಂದಿದೆ ಎಂದು ಮುಗ್ಧವಾಗಿ ನಂಬುವವರಿರಬಹುದು. ಆದರೆ ಎಡಪಂಥೀಯ ಚಿಂತನೆಯಿಲ್ಲದಿದ್ದರೆ ಕಳೆದ ನೂರು ವರ್ಷಗಳಲ್ಲಿ ಅನೇಕ ದೇಶಗಳ ಜನಜೀವನವೇ ಬದಲಾಗುತ್ತಿರಲಿಲ್ಲ. ಇದು ಫಿಡೆಲ್ ಮಾತು- ಕ್ರಿಯೆಗಳನ್ನು ಕಂಡಾಗಲೂ ಹೊಳೆಯುತ್ತದೆ.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕ್ಯಾಪಿಟಲಿಸಮ್ಮಿನಿಂದಾಗಿ ಹೆಚ್ಚಿರುವ ಸಂಪತ್ತಿನ ಭಯಾನಕ ಕೇಂದ್ರೀಕರಣ, ಅದು ಸೃಷ್ಟಿಸುತ್ತಿರುವ ಕಂದರ ಕುರಿತು ಜವಾಬ್ದಾರಿಯುತ ಎಡಪಂಥೀಯ ಚಿಂತಕರು ಬರೆಯದಿದ್ದರೆ ಯಾರಿಗೂ ಈ ಭೀಕರ ಮುಖಗಳ ಬಗ್ಗೆ ಸ್ಪಷ್ಟತೆ ಇರುತ್ತಿರಲಿಲ್ಲ.

1999ರಲ್ಲಿ ವೆನಿಜುವೆಲಾ ವಿಶ್ವವಿದ್ಯಾಲಯದಲ್ಲಿ ಫಿಡೆಲ್ ಮಾಡಿದ ‘ಬ್ಯಾಟಲ್ ಆಫ್ ಐಡಿಯಾಸ್’ ಭಾಷಣ ಒಂದನ್ನಷ್ಟೇ ಮಧ್ಯಮವರ್ಗದ ‘ಮಧ್ಯಮಮಾರ್ಗ’ಗಳ ಸೋಮಾರಿವಲಯ ಓದಿದರೂ ಸಾಕು: ಇವತ್ತಿನ ನಿಜವಾದ ಸವಾಲುಗಳೆದುರು ತಮ್ಮ ಜಾಣನುಡಿಗಟ್ಟುಗಳು ಎಷ್ಟು ಬೋಗಸ್ ಎಂಬುದು ಹೊಳೆಯುತ್ತದೆ.

ಮಾರ್ಕ್ಸ್ ಚಿಂತನೆಗಳಿಲ್ಲದಿದ್ದರೆ  ಇಲ್ಲಿ ಸ್ತ್ರೀವಾದವಾಗಲೀ, ಇನ್ನಿತರ ಬಗೆಯ ಸಮಾಜವಾದಗಳಾಗಲೀ ಹುಟ್ಟುವುದು ಕಷ್ಟವಿತ್ತು. ಅಂಬೇಡ್ಕರ್ ಮಾರ್ಕ್‌್ಸವಾದವನ್ನು ಒಪ್ಪದವರಂತೆ ಕಂಡರೂ, ಅವರ ಲೇಬರ್ ಪಾರ್ಟಿ, ‘ಪ್ರಭುತ್ವ ಸಮಾಜವಾದ’ದ ಕಲ್ಪನೆ, ಭೂ ರಾಷ್ಟ್ರೀಕರಣ, ಬುದ್ಧ-ಮಾರ್ಕ್‌್ಸರನ್ನು ಹೋಲಿಸಿದ ರೀತಿಗಳಲ್ಲಿ ಮಾರ್ಕ್‌್ಸವಾದದ ಪ್ರೇರಣೆಯಿತ್ತು. ದಲಿತ ಚಳವಳಿ ತನ್ನ ಉಜ್ವಲ ಘಟ್ಟದಲ್ಲಿ ಮಾರ್ಕ್‌್ಸವಾದದಿಂದ ತಾತ್ವಿಕ, ಸಂಘಟನಾತ್ಮಕ ಪ್ರೇರಣೆಗಳನ್ನು ಪಡೆದಿದ್ದನ್ನು ಮರೆಯಬಾರದು.

ಎಲ್ಲ ಬಗೆಯ ಚಿಂತನೆಗಳಿಗೂ ಸ್ಥಗಿತತೆ ಬರಬಹುದು. ಆದರೆ ಕ್ಯಾಸ್ಟ್ರೊ  ರೀತಿ ತಂತಮ್ಮ ನಾಡುಗಳ ವಾಸ್ತವಗಳಿಗೆ ತಕ್ಕಂತೆ ಚಿಂತನೆಗಳನ್ನು ಮರುರೂಪಿಸಿಕೊಳ್ಳುವ ಬೌದ್ಧಿಕತೆ; ಚಿಂತನೆಗಳನ್ನು ಜಾರಿಗೆ ತರಬಲ್ಲ ಪ್ರಾಕ್ಟಿಕಲ್ ಮಾರ್ಗಗಳಿಂದ ಮಾರ್ಕ್‌್ಸವಾದಕ್ಕೆ ಸಮಕಾಲೀನತೆ ಬರುತ್ತದೆಯೇ ಹೊರತು, ಅದರ ಗಿಳಿಪಾಠದಿಂದಾಗಲೀ, ಅದನ್ನು ಗ್ರಹಿಸಲಾಗದ ಸಲೀಸು ಮಧ್ಯಮಮಾರ್ಗದಿಂದಾಗಲೀ ಅಲ್ಲ.

ಈ ಕಾಲದ ಶ್ರೇಷ್ಠ ವಿಮರ್ಶಕರಲ್ಲೊಬ್ಬನಾದ ಟೆರಿ ಈಗಲ್ಟನ್ ಇಪ್ಪತ್ತೊಂದನೆಯ ಶತಮಾನದ ವಾಸ್ತವದಲ್ಲಿ ಕಾಲೂರಿ ನಿಂತು ಬರೆದಿರುವ ‘ವೈ ಮಾರ್ಕ್ಸ್ ವಾಸ್ ರೈಟ್’ ಪುಸ್ತಕವನ್ನು ಮುಕ್ತವಾಗಿ ಓದಿದರೆ ನಮ್ಮ ಅನೇಕ ಬೌದ್ಧಿಕ ಗೊಂದಲಗಳು ಕಡಿಮೆಯಾಗಬಲ್ಲವು. ಈ ಪುಸ್ತಕವನ್ನು ‘ಕಾರ್ಪೊರೇಟ್ ಕಾಲದಲ್ಲೂ ಮಾರ್ಕ್‌್ಸವಾದ ಪ್ರಸ್ತುತ’ (ಚಿಂತನ ಪುಸ್ತಕ) ಎಂದು ಆರ್.ಕೆ.ಹುಡಗಿ ಅನುವಾದಿಸಿದ್ದಾರೆ.

ಸಾಹಿತ್ಯ ವಿಮರ್ಶೆಯಲ್ಲಿ ಸರಳ ಕಮ್ಯುನಿಸಮ್ಮಿನ ನಿರ್ದೇಶನಗಳಿಂದ ಹುಟ್ಟುವ ಸಮಸ್ಯೆಗಳ ಜೊತೆಗೆ ಇಡೀ ಮಾರ್ಕ್‌್ಸವಾದವನ್ನೇ ಸಮೀಕರಿಸಿ ಗೊಂದಲಗೊಂಡು, ಗೊಂದಲ ಹಂಚುವವರು ಈ ಯುಗದ ಮಹತ್ವದ ಪಠ್ಯಗಳಲ್ಲೊಂದಾದ ‘ಕಮ್ಯುನಿಸ್ಟ್ ಮ್ಯಾನಿಫೆಸ್ಟೊ’ ಹಾಗೂ ಇನ್ನಿತರ ಮಾರ್ಕ್‌್ಸವಾದಿ ಪಠ್ಯಗಳನ್ನು ಇವತ್ತಿನ ಕ್ಯಾಪಿಟಲಿಸಮ್ಮಿನ ಭೀಕರ ಕುಣಿತದ ಕಾಲದಲ್ಲಿ ಓದಿ ಸ್ಪಷ್ಟತೆ ಪಡೆಯುವುದು ಒಳ್ಳೆಯದು. ಹಾಗೆಯೇ, ಸಾಹಿತ್ಯ ಸೃಷ್ಟಿಯ ಸ್ವಾಯತ್ತತೆಯಲ್ಲಿ ಖಚಿತ ನಂಬಿಕೆಯಿಟ್ಟಿದ್ದ ಮಾರ್ಕ್ವೆಜ್, ಕಮ್ಯುನಿಸ್ಟನಾದ ಫಿಡೆಲ್‌ನನ್ನು ಯಾಕೆ ದೊಡ್ಡ ನಾಯಕನೆಂದು ಒಪ್ಪಿಕೊಂಡಿದ್ದ ಎಂಬುದರ ಬಗೆಗೂ ಮುಕ್ತವಾಗಿ ಯೋಚಿಸಬೇಕು.
Dr. Nataraj Huliyar


Wednesday 18 September 2019

ಸಂವಿಧಾನವನ್ನು ತಿಳಿಯಪಡಿಸುವ ಸಣ್ಣ ಪ್ರಯತ್ನ:ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್

'ಸಂವಿಧಾನ ಓದು' ಪುಸ್ತಕಕ್ಕೆ ಬರೆದ ಲೇಖಕರ ಮಾತು
ನಮ್ಮ ಸಂವಿಧಾನ ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ. ಅನುಷ್ಠಾನಕ್ಕೆ ಬಂದು 68 ವರ್ಷಗಳು ಕಳೆದರೂ ನಮ್ಮ ಸಂವಿಧಾನ ಪ್ರಸ್ತುತವಾಗಿದೆ. ಆದರೂ, ನಮ್ಮ ದೇಶದ ಬಹುಪಾಲು ಜನ ಸಂವಿಧಾನವನ್ನು ಓದಲಿಲ್ಲ. ಸರ್ಕಾರಗಳು ಸಹ ದೇಶದ ಜನರಿಗೆ ಸಂವಿಧಾನವನ್ನು, ಸಂವಿಧಾನದ ಮೂಲ ಆಶಯಗಳನ್ನು  ತಿಳಿಯಪಡಿಸುವ ಕ್ರಮವಹಿಸಲಿಲ್ಲ. ಇತ್ತೀಚೆಗೆ ನಮ್ಮ ಶಿಕ್ಷಣದಲ್ಲಿ ಸಂವಿಧಾನವನ್ನು ತಿಳಿಯಪಡಿಸುವ ಸಣ್ಣ ಪ್ರಯತ್ನ ಪ್ರಾರಂಭವಾಗಿರುವುದು ಸಂತೋಷದ ಸಂಗತಿ.
ದೇಶದ ಕೆಲವು ವಿದ್ಯಾವಂತರು ಸಂವಿಧಾನವನ್ನು ಓದಿದ್ದಾರೆ. ಆದರೆ, ಸರಿಯಾದ ರೀತಿಯಲ್ಲಿ ಅರ್ಥೈಸಲಿಲ್ಲ. ಕೆಲವರು ಅರ್ಥೈಸಿದರೂ, ಅದರ ಆಧಾರದಂತೆ ನಡೆದುಕೊಳ್ಳಲಿಲ್ಲ. ಇದರ ಪರಿಣಾಮವಾಗಿ ಹಲವು ಸಮಸ್ಯೆಗಳು ಇನ್ನೂ ಪೂರ್ಣವಾಗಿ ಪರಿಹಾರವಾಗದೇ ಮುಂದುವರೆದಿವೆ. ಕೆಲವು ಹೊಸ ಸಮಸ್ಯೆಗಳು ಸೇರ್ಪಡೆಯಾಗಿವೆ. ಜೊತೆಗೆ ಹಲವು ಸವಾಲುಗಳು ನಮ್ಮನ್ನು ಕಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನದ ಮೂಲತತ್ವಗಳನ್ನೇ ಮರುಪರಿಶೀಲನೆ ಮಾಡಬೇಕೆಂಬ ಕೂಗು ಕೇಳಿಸುತ್ತಿದೆ! ಮತ್ತೊಂದು ಕಡೆ ಸಂವಿಧಾನವನ್ನು ಬದಲಾಯಿಸಬೇಕೆಂಬ ಕೂಗು ಸಹ ಕೇಳಿಸುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ದೇಶದ ಯುವಜನತೆ ಯಾವ ದಾರಿಯಲ್ಲಿ ಮುಂದುವರೆಯಬೇಕೆಂದು ತಿಳಿಯದೆ ಗೊಂದಲದಲ್ಲಿದ್ದಾರೆ. ನಮ್ಮ ಸಂವಿಧಾನವನ್ನು ಯಾವುದೇ ಭಾಷೆಯಲ್ಲಿ ಹತ್ತು ಬಾರಿ ಓದಿದರೂ ಬೇಗನೆ ಅರ್ಥವಾಗುವುದಿಲ್ಲ. ಕಾರಣ, ಅದೊಂದು ಕಥೆಯಲ್ಲ, ಕಾದಂಬರಿಯಲ್ಲ ಅಥವಾ ಕವಿತೆಯಲ್ಲ. ಅದೊಂದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕಾರ್ಯಕ್ರಮ. ಸಂವಿಧಾನ ಅರ್ಥವಾಗಲು ಅದರ ಹಿನ್ನೆಲೆ, ಪ್ರಸ್ತುತತೆ ತಿಳಿದಿರಬೇಕು. ಭಾರತ ದೇಶವನ್ನು ಅರ್ಥಮಾಡಿಕೊಳ್ಳದ ಹೊರತು, ಭಾರತದ ಸಂವಿಧಾನ ಅರ್ಥವಾಗುವುದಿಲ್ಲ. ಭಾರತದ ಸಂವಿಧಾನ ಅರ್ಥಮಾಡಿಕೊಳ್ಳದಿದ್ದರೆ, ಅದರ ಮೂಲತತ್ವಗಳು ತಿಳಿಯುವುದಿಲ್ಲ. ಸಂವಿಧಾನದ ಮೂಲ ತತ್ವಗಳೇ ನಮ್ಮ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ದಿನನಿತ್ಯದ ಕೆಲಸಗಳನ್ನು ಮುನ್ನಡೆಸುವುದು.
ಹಾಗಾಗಿ ನಮ್ಮ ಸಂವಿಧಾನವನ್ನು ಓದಿ ಸುಲಭವಾಗಿ ಅರ್ಥಮಾಡಿಕೊಳ್ಳಲು ಒಂದು ಕ್ರಮವನ್ನು ತಿಳಿಯಪಡಿಸುವ ಪ್ರಯತ್ನವನ್ನು ಈ ಕಿರುಹೊತ್ತಿಗೆಯಲ್ಲಿ ಮಾಡಲಾಗಿದೆ. ನಾವೆಲ್ಲರೂ ನಮ್ಮ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ, ಅದರಂತೆ ನಡೆದುಕೊಂಡರೆ ಕೆಲವೇ ವರ್ಷಗಳಲ್ಲಿ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಮತ್ತು ನಾವು ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬಹುದು. ನಾವೆಲ್ಲರೂ ಒಟ್ಟಿಗೆ ಶಾಂತಿಯಿಂದ, ನೆಮ್ಮದಿಯಿಂದ, ಯಾವುದೇ ಭಯಭೀತಿ ಇಲ್ಲದೇ ಜೀವಿಸಿ, ದೇಶವನ್ನು ಪ್ರಗತಿಯತ್ತ ಮುನ್ನಡೆಸಿ, ಒಂದು ಸಮ ಸಮಾಜವನ್ನು ಕಟ್ಟಬಹುದೆಂಬ ನಂಬಿಕೆ ನನ್ನದು.

ಅರ್ಥಪೂರ್ಣವಾದ ಮುನ್ನುಡಿಯನ್ನು ಬರೆದುಕೊಟ್ಟ ಈ ನಾಡಿನ ಚಿಂತಕರಾದ ಶ್ರೀಯುತ ಬರಗೂರು ರಾಮಚಂದ್ರಪ್ಪನವರು. ಅವರಿಗೆ ನನ್ನ ಕೃತಜ್ಞತೆಗಳು.
ನನ್ನ ಈ ಸಣ್ಣ ಪ್ರಯತ್ನದಲ್ಲಿ ಸಲಹೆ ಮತ್ತು ಸಹಕಾರವನ್ನು ನೀಡಿದ ಡಾ. ವಿಠ್ಠಲ ಭಂಡಾರಿ, ಡಾ. ಮೀನಾಕ್ಷಿ ಬಾಳಿ, ಕೆ.ಎಸ್.ವಿಮಲಾ, ಸತ್ಯಾ ಎಸ್. ಟಿ. ಸುರೇಂದ್ರ ರಾವ್ ಅವರಿಗೆ ನನ್ನ ಕೃತಜ್ಞತೆಗಳು.



ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ 
ಆಗಸ್ಟ್ 2018

ಸಂವಿಧಾನದ ಮುಂದಿರುವ ಸವಾಲುಗಳು-ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್



ಸಂವಿಧಾನ ಭಾರತೀಯರ ಮಹಾಗ್ರಂಥ. ವಿವಿಧ ಧರ್ಮಗಳ, ಜಾತಿಯ, ಸಂಸ್ಕøತಿಯ, ಭಾಷೆಯ, ನಂಬಿಕೆಗಳ, ಅಭಿಪ್ರಾಯಗಳ, ಆಚಾರ, ವಿಚಾರಗಳ, ಆಹಾರ ಪದ್ಧತಿಗಳ, ಉಡುಪುಗಳ ಜನರನ್ನು ಒಟ್ಟಿಗೆ ಮುನ್ನಡೆಸುತ್ತಿರುವುದು ಭಾರತದ ಸಂವಿಧಾನ. ಪ್ರಜಾಪ್ರಭುತ್ವ, ಜಾತ್ಯತೀತÀತೆ, ಸಾಮಾಜಿಕ ನ್ಯಾಯವೆಂಬ ಸಿದ್ಧಾಂತಗಳನ್ನು ಬಿತ್ತಿ, ಬೆಳೆಸುತ್ತಿರುವುದು ಭಾರತದ ಸಂವಿಧಾನ. ನಾವೆಲ್ಲರೂ ಅನುಭವಿಸುತ್ತಿರುವ ಮಾನವ ಹಕ್ಕುಗಳು, ಮೂಲಭೂತ ಹಕ್ಕುಗಳು ಮತ್ತು ಎದುರಿಸುವ ಸಮಸ್ಯೆಗಳಿಗೆ ಹಲವು ಸಾಂವಿಧಾನಿಕ ಪರಿಹಾರಗಳನ್ನು ನೀಡಿರುವುದು ಭಾರತದ ಸಂವಿಧಾನ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ಸ್ವತಂತ್ರ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳಲ್ಲಿ ಈ ದೇಶದ ಜನರು ಭಾಗವಹಿಸುವಂತೆ ಮಾಡಿರುವುದು ಭಾರತದ ಸಂವಿಧಾನ. ಜನ ಸಾಮಾನ್ಯರ ಕನಿಷ್ಠ ಅವಶ್ಯಕತೆಗಳನ್ನು ಸ್ವಲ್ಪ ಮಟ್ಟಿಗಾದರೂ ಪೂರೈಸಿರುವುದು ಭಾರತ ಸಂವಿಧಾನದ ಆಶಯವಾದ ಕಲ್ಯಾಣ ರಾಜ್ಯದ ಮೌಲ್ಯ. ಧರ್ಮ, ಜನಾಂಗೀಯ, ಜಾತಿ, ಲಿಂಗ, ಭಾಷೆ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಿ ಎಲ್ಲರಿಗೂ ಸಮಾನ ರಕ್ಷಣೆ ಮತ್ತು ಅವಕಾಶಗಳನ್ನು ನೀಡಿರುವುದು ಭಾರತದ ಸಂವಿಧಾನ. ಆದ್ದರಿಂದ, ನಾವು ಸುರಕ್ಷಿತವಾಗಿ ಬದುಕಲು, ನಮಗೋಸ್ಕರ, ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಸಂವಿಧಾನವನ್ನು, ಅದರ ಆಶಯಗಳನ್ನು ರಕ್ಷಿಸಬೇಕು. 


ನಮ್ಮ ಸಂವಿಧಾನವನ್ನು ನಾವು ಕಳೆದುಕೊಂಡರೆ ಅಂರ್ತಯುದ್ಧ ನಡೆದು ಭಾರತ ದೇಶ ಛಿದ್ರ ಛಿದ್ರವಾಗಿ ಹೋಳಾಗುತ್ತದೆ. ಪ್ರಜಾಪ್ರಭುತ್ವ, ಜಾತ್ಯತೀತÀತೆ, ಸಾಮಾಜಿಕ ನ್ಯಾಯವೆಂಬ ಸಿದ್ಧಾಂತಗಳು ನಾಶವಾಗಿ ಅರಾಜಕತೆ, ಮತೀಯವಾದ, ಕೋಮುವಾದ, ಮೂಲಭೂತವಾದವೆಂಬ ಅಮಾನವೀಯ ಸಿದ್ಧಾಂತಗಳು ರಾರಾಜಿಸುತ್ತವೆ. ಜನಸಾಮಾನ್ಯರು ಗಳಿಸಿದ ಹಕ್ಕುಗಳನ್ನು ಕಳೆದುಕೊಂಡು ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ಜೀವಿಸಬೇಕಾಗುತ್ತದೆ. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಬಡವರು ಶೋಷಣೆ, ದಬ್ಬಾಳಿಕೆ, ಕ್ರೌರ್ಯ, ಹಿಂಸೆ, ಅಭದ್ರತೆಗಳಿಗೆ ಬಲಿಯಾಗಬೇಕಾಗುತ್ತದೆ. ರೂಲ್ ಆಫ್ ಲಾ ಹೋಗಿ ಜಂಗಲ್ ಲಾ ವ್ಯವಸ್ಥೆ ಬರುತ್ತದೆ. ಆದ್ದರಿಂದ, ನಮ್ಮ ಸಂವಿಧಾನವನ್ನು ನಾವು ಉಳಿಸಿಕೊಳ್ಳಬೇಕಾಗಿದೆ.

ಹಾಗಾದರೆ ಇಂತಹ ಗಂಭೀರ ಪರಿಸ್ಥಿತಿಯಲ್ಲಿ ನಮ್ಮ ಕರ್ತವ್ಯವೇನು? 
ಮೊತ್ತ ಮೊದಲಿಗೆ ನಾವೆಲ್ಲರೂ ನಮ್ಮ ಸಂವಿಧಾನವನ್ನು ಓದಬೇಕು, ಅರ್ಥೈಸಬೇಕು. ಸಂವಿಧಾನದ ಮೂಲತತ್ವಗಳನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಅದರಂತೆ ನಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಬದುಕಿನ ವಿಧಾನವಾಗಿಸಿಕೊಳ್ಳಬೇಕು. ನಮ್ಮ ಕುಟುಂಬದ ಸದಸ್ಯರಿಗೆ ಸಂವಿಧಾನದ ಮಹತ್ವವನ್ನು ಮನವರಿಕೆ ಮಾಡಿಕೊಡಬೇಕು. ನಮ್ಮ ಸುತ್ತಮುತ್ತಲಿನ ಬಂಧು, ಬಳಗ, ಗೆಳೆಯರಲ್ಲಿ, ವಿದ್ಯಾರ್ಥಿ ಯುವಜನರ ಮಧ್ಯೆ ನಮ್ಮ ಸಂವಿಧಾನದ ತಿಳುವಳಿಕೆಯನ್ನು ಹಂಚಿಕೊಳ್ಳಬೇಕು. ಸಂವಿಧಾನದ ಪ್ರತಿಯೊಂದು ಆಶಯವನ್ನು ಅನುಷ್ಠಾನಗೊಳಿಸಲಿಕ್ಕೆ ಪ್ರಯತ್ನಿಸಬೇಕು. ಸಂವಿಧಾನ ಎದುರಿಸುತ್ತಿರುವ ಸವಾಲುಗಳನ್ನು ಹಿಮ್ಮೆಟ್ಟಿಸಬೇಕು. 
ನಮ್ಮ ಸಂವಿಧಾನದ ಉಳಿವಿಗಾಗಿ, ದೇಶದ ಸಮಗ್ರತೆಗಾಗಿ ಮತ್ತು ಜನತೆಯ ಕಲ್ಯಾಣಕ್ಕಾಗಿ ನಾವೆಲ್ಲರೂ ಎಲ್ಲ ರೀತಿಯ ತ್ಯಾಗಕ್ಕೆ ಸಿದ್ಧರಾಗೋಣ. 
                          

ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್ 
                                                                                                             ಆಗಸ್ಟ್ 2018

ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ ಸಂವೇದನೆ- ‘ಮೌನಗರ್ಭದ ಒಡಲು’

ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ 
ಸಂವೇದನೆ- ‘ಮೌನಗರ್ಭದ ಒಡಲು’
                                                            -ಡಾ. ಬಂಜಗೆರೆ ಜಯಪ್ರಕಾಶ
                                                                              (ಕೃತಿಗೆ ಬರೆದ ಮುನ್ನುಡಿಯಿಂದ)
`ಮಾತಿಗೆ ಒಂದೇ ಭಾವ
ಮೌನಕ್ಕೆ ನೂರು ನೂರು ನೂರು ಭಾವ (ಮೌನಗರ್ಭದ ಒಡಲು)
ಮೌನಕ್ಕೆ ನೂರು ನೂರಾರು ಭಾವ ಎಂದು ಮಾಧವಿ ಬರೆದಿರುವುದು ಕೇವಲ ಕಾವ್ಯಾಲಂಕಾರವಲ್ಲ ಎನಿಸುತ್ತದೆ ನನಗೆ. ಮಾತಿಗೆ ಒಂದರ್ಥ. ಹೆಚ್ಚೆಂದರೆ ಎರಡು ಅಥವಾ ಮೂರು ಧ್ವನ್ಯಾರ್ಥಗಳಿರಬಹುದು. ಆದರೆ ಮೌನದ ಅರ್ಥ ಸಾಧ್ಯತೆ ಅಸೀಮವಾದುದು. ಒಂದು ಮೌನ ನುಡಿಯುವ ಭಾμÉ ಅಪಾರವಾದದ್ದು. ಝೆನ್ ಪಂಥದಲ್ಲೂ ಮೌನಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ. ಅದು ವಿವರಿಸಲಾಗದ ಸಂದಿಗ್ಧ. ವಿವರಿಸಿದರೂ ಅರ್ಥಮಾಡಿಸಲಾಗದ ಸಂಕಷ್ಟ. ಅಥವಾ ವಿವರಿಸಲು ಏನಿದೆ? ಅನುಭವವನ್ನು ಹಾಗೆ ಮಾತಿನ ನಾವೆ ಹತ್ತಿಸಿ ದಡ ಸೇರಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಝೆನ್ ಪಂಥದ ನಿಲುವು. ಅನುಭವದ ಆಳ, ಹರಿವು ಹೆಚ್ಚಿದಷ್ಟೂ ಅದಕ್ಕೆ ಮಾತಿನ ರೂಪಕೊಡುವುದು ಹೆಚ್ಚು ಕಷ್ಟ.

 ತೆಳು ಅನುಭವಗಳು ಮಾತುಗಳಾಗಿ ಪಟಪಟನೆ ಹೊಮ್ಮಬಹುದಾದರೂ ಅನುಭವದಾಳದಲ್ಲಿ ಮುಳುಗಿದ ಅರ್ಥ ಅಷ್ಟು ಸುಲಭವಾಗಿ ಚಿಮ್ಮಲಾರದು. ಝೆನ್ ಮಾತುಗಳಿಗೆ ಅರ್ಥ ಸಾಧ್ಯತೆಯ ಮಿತಿಯೇ ಒಂದು ತೊಡಕು. ಹೇಳಿದರೂ ಹೇಳಬೇಕಾದುದನ್ನು ಹೇಳಿದಂತಾಗುವುದಿಲ್ಲ. ಹೇಳಬೇಕಾದುದನ್ನು ಹೇಳದಿದ್ದ ಮೇಲೆ ಮಾತಿಗಿಂತ ಮೌನವೇ ಪ್ರಶಸ್ತವಲ್ಲವೇ. ಮೌನವನ್ನು ಪರಿಭಾವಿಸುವವರು ಅವರ ಸಾಧ್ಯತೆಗೆ ತಕ್ಕಂತೆ ಭಾವಿಸಬಹುದು. ಅರ್ಥೈಸಬಹುದು. ಅಥವಾ ಅರ್ಥ ಮಾಡಿಕೊಳ್ಳದೆಯೂ ಉಳಿಯಬಹುದು. ಮಾತುಗಳಾಡಿದ ಮಾತ್ರಕ್ಕೆ ಅದನ್ನು ಎದುರಿನವರು ಕೇಳಿಸಿಕೊಳ್ಳುತ್ತಾರೆಂಬ ಖಾತ್ರಿ ಇಲ್ಲ. ಕೇಳಿಸಿಕೊಂಡರೂ ಅರ್ಥ ಮಾಡಿಕೊಳ್ಳುತ್ತಾರೆಂಬ, ಅರ್ಥ ಮಾಡಿಕೊಂಡರೂ ಸ್ಪಂದಿಸುತ್ತಾರೆಂಬ ಭರವಸೆ ಇಲ್ಲ. ಹಾಗಾಗಿ ಮೌನವೆನ್ನುವುದು ಒಂದು ಅನಿವಾರ್ಯ ಆಶ್ರಯ.
ಆದರೆ ಮೌನ ಸುಮ್ಮನುಳಿಯುವುದಿಲ್ಲ. ಮಾತಾಗದಿದ್ದರೂ ಅದು ಮನಸ್ಸಾಗಿ ನುಡಿಯುತ್ತದೆ. ಕಲೆಯಾಗಿ, ಕಸೂತಿಯಾಗಿ, ಹಾಡಾಗಿ, ನರ್ತನವಾಗಿ, ಹಸೆಯಾಗಿ, ರಂಗವಲ್ಲಿಯಾಗಿ, ಜೋಗುಳವಾಗಿ, ಕಣ್ಣೋಟವಾಗಿ ನುಡಿಯುತ್ತದೆ. ಆದರೆ ಮೌನವಾಗಿರುವುದು ಝೆನ್‍ಗೆ ಒಂದು ಆಯ್ಕೆ. ಒಂದು ಅಧಿಕಾರ. ಇದಿರಿನ ಅಂಕುಶವಿಲ್ಲದ ಸ್ವಾಯತ್ತತೆ. ಅದನ್ನು ನುಡಿಯಲೇಬೇಕೆಂದು ನಿರ್ಬಂಧಿಸುವುದು ಸಾಧ್ಯವಿರದ ಮಾತು. ತಲೆದಂಡವಾದರೂ ನುಡಿಯದೇ ಉಳಿದ ನಿದರ್ಶನಗಳೆಷ್ಟೋ ಆ ಪಂಥದಲ್ಲಿವೆ. ಅದು ಸತ್ಯದ ಸಾಕ್ಷಾತ್ಕಾರದ ದಾರಿ. ಸ್ವಯಂ ಬೋಧೆಯಾಗದ ಹೊರತು, ಸ್ವಯಂ ಜ್ಞಾನೋದಯವಾಗದ ಹೊರತು ನುಡಿಯಿಂದ ಉಪಯೋಗವೇನು ಎಂಬ ಅಚಲ ನಿಲುವು ಅದರದ್ದು. ಆದರೆ ಹೆಣ್ಣು ಲೋಕದ ಮೌನ ಆಯ್ಕೆಯಿಂದ ಬಂದದ್ದಲ್ಲ, ಅನಿವಾರ್ಯತೆಯಿಂದ ಉಂಟಾದದ್ದು. ನುಡಿಯಲು ನೂರು ಮಾತಿವೆ, ಆದರೆ ಅದಕ್ಕೆ ಆಸ್ಪದವಿಲ್ಲ. ಈ ನಡುವೆ ಏನಾದರೂ ನುಡಿದರೂ ನಿಜವಾದುದನ್ನು ನುಡಿಯುವಂತಿಲ್ಲ. ನುಡಿದರೆ ದಂಡನೆ ತಪ್ಪದು. ಹೆಚ್ಚು ನುಡಿದರೂ ಮರ್ಯಾದೆಯ ಮೇರೆಯನ್ನು ಮೀರಿದಂತೆ ಎನ್ನುವಂತಹ ಬಂಧನದ ಹೇರಿಕೆ. ಹಾಗಾಗಿ ಹೆಣ್ಣು ಲೋಕಕ್ಕೆ ನೂರು ಅನುಭವಗಳಿವೆ, ಅನಿಸಿಕೆಗಳಿವೆ, ಆಲೋಚನೆಗಳಿವೆ, ಅಭಿಪ್ರಾಯಗಳೂ ಇವೆ. ಅವು ಲೋಕಕ್ಕೆ ಬೇಕಿಲ್ಲ. ಲೋಕ ಅವುಗಳನ್ನು ಮಾನ್ಯ ಮಾಡುವುದೂ ಇಲ್ಲ. ಹಾಗಾಗಿ ನುಡಿಯದೇ ಉಳಿಯಬೇಕಾದ ಒತ್ತಡ ಹೆಣ್ಣೊಳಗೆ ಕಲೆಯಾಗಿ, ದುಡಿಮೆಯಾಗಿ, ಪ್ರೀತಿಯ ಹೊನಲಾಗಿ, ಬದುಕಿನ ಪ್ರೀತಿಯಾಗಿ, ಮಾನವೀಯ ಸ್ಪಂದನವಾಗಿ ಹೇಗೋ ತನ್ನನ್ನು ತಾನು ಕಂಡರಿಸಿ ಕೊಳ್ಳುತ್ತದೆ. ಅದು ಒಂದು ಅಸಾಧ್ಯ ಸಾಧ್ಯತೆಯ ಹಾದಿ. ಅದು ಪಿಸುಮಾತಾಗಿ, ನಗೆಯಾಗಿ, ಬಿಂಕವಾಗಿ, ಬೆಡಗಾಗಿ ಹೊಮ್ಮಬಹುದು. ಪ್ರತಿಭಟನೆಯಾಗಿ, ನಿರಸನವಾಗಿ, ಧಿಕ್ಕಾರವಾಗಿ ಕೂಡ ಪರ್ಯವಸಾನವಾಗಬಹುದು.
ಆದರೆ ಮೌನವೆಂದರೆ ಶೂನ್ಯವಲ್ಲ. ಮೌನವೆಂದರೆ ಅರ್ಥರಾಹಿತ್ಯತೆಯಲ್ಲ. ಮೌನವೆಂದರೆ ಜೀವಚ್ಛವದ ಪಾಡಲ್ಲ. ಇದನ್ನು ಹಲವು ಬಗೆಯಾಗಿ, ಹಲವು ರೂಪಕಗಳಲ್ಲಿ ಖಚಿತ ನಿಲುವಿನೊಂದಿಗೆ, ದೃಷ್ಟಿಕೋನದೊಂದಿಗೆ, ಅಸ್ಮಿತೆ ಪ್ರತಿಪಾದನೆಯ ಧೋರಣೆಯೊಂದಿಗೆ ಮಾಧವಿಯವರು ಈ ಸಂಕಲನದಲ್ಲಿ ಅಭಿವ್ಯಕ್ತಿಸಿದ್ದಾರೆ. ಬಂಡಾಯ ಕಾವ್ಯದ ಆರಂಭದ ದಿನಗಳಲ್ಲಿ ವೈಚಾರಿಕವಾದ ಆದರ್ಶವಾದದ ಪ್ರತಿಪಾದನೆ ಕವಿತೆಗಳಲ್ಲಿ ಅಭಿವ್ಯಕ್ತಗೊಂಡಿತು. ಅದರೊಳಗಿದ್ದ ಧಿಕ್ಕಾರದ ಮನಃಸ್ಥಿತಿ ಬಹಳಮಟ್ಟಿಗೆ ವಾಚ್ಯವಾಗಿತ್ತು. ಆದರೆ ಅದಕ್ಕೆ ಸಾಂದರ್ಭಿಕ ಅನಿವಾರ್ಯತೆ ಇತ್ತು. ಹಾಗೆಯೇ ಬಂಡಾಯ ಸಾಹಿತ್ಯದ ಜೊತೆಯಲ್ಲಿ ಆರಂಭಗೊಂಡ ಮಹಿಳಾವಾದಿ ಕಾವ್ಯದ ಧಾಟಿಯೂ ಹೆಣ್ತನದ ಪ್ರತಿಪಾದನೆಯನ್ನು ನಿಚ್ಚಳವಾಗಿ, ದಿಟ್ಟವಾಗಿ ಸಾಕಷ್ಟು ವಾಚ್ಯವಾಗಿ  ಅಭಿವ್ಯಕ್ತಿಸಿತು. ಈಗ ಆ ರಭಸ ಇಲ್ಲ. ಧೋರಣೆಗಳು, ಆಶಯಗಳು, ಅನುಭವದ ಪರಿಧಿಯಲ್ಲಿ ಮಾಗಿ, ಕಾವ್ಯಾರ್ಥದ ಸಾಧ್ಯತೆಗಳನ್ನು ಒಳಗೊಳ್ಳುತ್ತಾ, ತಮ್ಮ ಅಭಿವ್ಯಕ್ತಿ ಸಾಧ್ಯತೆಯ ವಿಸ್ತಾರಗಳನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿವೆ. ಅದರಲ್ಲೂ ಈ ತಲೆಮಾರಿನ ಲೇಖಕ-ಲೇಖಕಿಯರು ತಮ್ಮ ಅನುಭವ ಮಂಡನೆಗೆ ಬಳಸುತ್ತಿರುವ ಭಾμÉ ಹಾಗೂ ರೂಪಕಗಳು, ಕಾವ್ಯಾಲಂಕಾರಗಳು ಹೆಚ್ಚು ಧ್ವನಿ ಸಾಧ್ಯತೆಯನ್ನು ಒಳಗೊಳ್ಳತೊಡಗಿವೆ. ಕಾವ್ಯವನ್ನು ತಮ್ಮ ಅಭಿವ್ಯಕ್ತಿ ಸಾಧ್ಯತೆಯ ಸಾಧನವನ್ನಾಗಿ ಬಳಸಿಕೊಳ್ಳುವುದರಲ್ಲಿ ಪಾರಂಪರಿಕ ಸಾಂಸ್ಕೃತಿಕ ಪರಿಕರಗಳನ್ನು ಬಳಸಿಕೊಳ್ಳುತ್ತಲೇ ಹೊಸ ಆಶಯಗಳ ಹಂಬಲವನ್ನು ಅನಾವರಣಗೊಳಿಸುವ ಸಾಮಥ್ರ್ಯವನ್ನು ಇವು ಪಡೆದುಕೊಳ್ಳತೊಡಗಿವೆ.
     ಹಾಗಾಗಿಯೇ ಇಂದು ಹೊಸ ತಲೆಮಾರಿನ ಕಾವ್ಯ ನೇರವಾಗಿ ತನ್ನನ್ನು ಬಂಡಾಯ ಕಾವ್ಯ, ಮಹಿಳಾ ಕಾವ್ಯ ಎಂದು ಕರೆದುಕೊಳ್ಳಬೇಕಾದ ಅಗತ್ಯತೆ ಇಲ್ಲದೆಯೇ ಬದಲಾವಣೆಯ ಆಶಯಗಳನ್ನು ಮಂಡಿಸುವಲ್ಲಿ ಸಶಕ್ತಗೊಂಡಿದೆ. ಹೆಣ್ತನದ ಪರಿಸ್ಥಿತಿಯನ್ನು ಸಾಂಕೇತಿಕಗೊಳಿಸಿ ಪ್ರಾದೇಶಿಕ ಅನುಭವ ಸೀಮೆಯನ್ನು ಬಳಸಿಕೊಂಡು ಅರ್ಥಸಾಧ್ಯತೆ ಪಡೆದುಕೊಂಡಿರುವ ಮಾಧವಿಯವರ ಪತ್ರೊಡೆ ಕವಿತೆ ಇಂತಹವುಗಳಲ್ಲೊಂದು. ಮೊಲೆಯೆರಡೆ ಸಾಕು, ಕನ್ಯತ್ವದ ಋಜುವಾತು, ನಡುವೆ ಸುಳಿವಾತ್ಮ, ಏಳು ಬಣ್ಣ ಸೇರಿ, ಅವತಾರ ಮುಂತಾದವುಗಳೆಲ್ಲ ಈ ಬಗೆಯ ಕವಿತೆಗಳಾಗಿವೆ. ಹೆಣ್ಣಿನ ಅಸ್ತಿತ್ವದ ಪರಿಯನ್ನು, ಸಾರ್ಥಕತೆಯನ್ನು, ಸಂಕಷ್ಟವನ್ನು, ಸಂತಸವನ್ನು, ವೈಶಿಷ್ಟ್ಯವನ್ನು ಹಲವು ಬಗೆಯಾಗಿ ಧ್ವನಿಸುವ ಈ ಕವಿತೆಗಳು ಮಾಧವಿಯವರ ಕಾವ್ಯಶಕ್ತಿಗೆ ನಿದರ್ಶನಗಳೆಂದು ನಾನು ಭಾವಿಸುತ್ತೇನೆ. ಎಲ್ಲಿಯೂ ವಾಚ್ಯವಾಗದೆ, ವಿವರಣೆಯಾಗದೆ, ಕ್ಲೀμÉ ಎನಿಸದೆ ಹೀಗೆ ಹೇಳಬಲ್ಲ ಸಾಮಥ್ರ್ಯ ಕೇವಲ ಓದಿನಿಂದ ಬಂದದ್ದಲ್ಲ. ಬದುಕಿನ ಅನುಭವದ ಮೂಸೆಯಲ್ಲಿ ಮಾಗಿದ ಮನಸ್ಸಿನ ಹಬೆಯಲ್ಲಿ ಮೂಡಿನಿಂತ ಅಕ್ಷರಾಕೃತಿಗಳು ಇವು.

 ದನಿಯೇನೋ ಮೆಲುವಾದುದು ಆದರೆ ನಿಲುವು ಗಟ್ಟಿಯಾದುದು. ವರ್ಣನೆಯೇನೋ ನಿರಲಂಕಾರ ಆದರೆ ಅದರ ಅರ್ಥಸಾಧ್ಯತೆ ಹಲವು ಆಕಾರ. ಹೀಗೆ ತಣ್ಣಗೆ ಆದರೆ ಮನಸ್ಸಿಗೆ ನಾಟುವಂತೆ ಹೇಳುವ ಪರಿಪಾಕ ಮಾಧವಿಯವರಿಗೆ ದಕ್ಕಿದೆ. ಅದನ್ನು ಅಷ್ಟು ಜತನವಾಗಿ ಅವರು ಮೈಗೂಡಿಸಿಕೊಂಡಿದ್ದಾರೆ. ದಲಿತ ಕಾವ್ಯ, ಬಂಡಾಯ ಕಾವ್ಯ, ಹೆಣ್ಣು ಕಾವ್ಯ ಮುಂತಾಗಿ ಮೂಗು ಮುರಿಯುವ ಕಾಲ ಇದಲ್ಲ ಎಂದು ಹೇಳುವುದಕ್ಕೆ ಮಾಧವಿಯೂ ಸೇರಿದಂತೆ ನಮ್ಮ ತಲೆಮಾರಿನ ಹಲವು ಕವಿ- ಕವಯಿತ್ರಿಯರು ಸವಾಲಿನಂತೆ ನಿಂತಿದ್ದಾರೆ. ರಿಯಾಯಿತಿಗಳಿಂದ ಪರಿಗಣಿಸಬೇಕಾದ, ಉದಾರ ಮನಸ್ಸಿನ ಲೆಕ್ಕಾಚಾರದಿಂದ ಗುರುತಿಸಬೇಕಾದ ಧ್ವನಿಗಳಲ್ಲ ಇವು. ಇವಕ್ಕೆ ಸಿದ್ಧಾಂತ, ಪಂಥ, ಲಿಂಗ, ಪಕ್ಷ, ಪ್ರದೇಶ, ಜಾತಿ ಮತ್ತು ಮತ ಇವುಗಳ ರಕ್ಷಣೆ ಇಲ್ಲದೆಯೂ ಕನ್ನಡ ಕಾವ್ಯಕ್ಕೆ ಮೆರುಗು ನೀಡಬಲ್ಲ ಅಭಿವ್ಯಕ್ತಿ ಪರಂಪರೆಯಾಗಿ ಇದು ಬೆಳೆದಿದೆ. ಹಾಗೆ ಬೆಳೆದು ಬಂದಿರುವುದಕ್ಕೆ ಒಂದು ನಿದರ್ಶನ ಮಾಧವಿಯವರ ಮೌನಗರ್ಭದ ಒಡಲು ಸಂಕಲನ. 
ಭತ್ತದೊಳಗಿದೆ ಬ್ರಹ್ಮಾಂಡ, ಹೊದ್ಲು ಅರಳುವ ಪರಿ, ಪರದೆಯ ಪಂಜರ, ನೋಯದವರಿಗೇನು ಗೊತ್ತು, ತಾಯ ಮೊಲೆ ಹಾಲು ವಿಷವಲ್ಲ, ಗಂಡಿಗೆ ಹೆಣ್ಣು ಮಾಯೆ, ಗುನ್ಹೇಗಾರ, ಕಣ್ಣಿಗಿಲ್ಲ ಆಯುಷ್ಯದ ಹಂಗು, ಮುಖವಿಲ್ಲದ ಚಹರೆಗಳು, 
ಮತಾಂತರಿಯ ಅಹವಾಲು ಮುಂತಾದವುಗಳು ಸಾಮಾಜಿಕ ಆಯಾಮವುಳ್ಳ, ತಮ್ಮನ್ನು ತಾವು ಸಮಕಾಲೀನಗೊಳಿಸಿಕೊಂಡು ಪ್ರಸ್ತುತಗೊಳ್ಳುವ ಕವಿತೆಗಳು. ಇವುಗಳಲ್ಲಿ ಈ ಮೊದಲಿನ ವಿಭಾಗದ ಕವಿತೆಗಳಿಗಿರುವ ಅರ್ಥಸಾಧ್ಯತೆಗಳೇ ಇದ್ದರೂ ಇವು ಆಶಯಾತ್ಮಕ ಕವಿತೆಗಳಾಗಿಯೇ ಹೆಚ್ಚು ಗೆದ್ದಿವೆ. ಇವುಗಳಿಗೆ ಖಾಸಗೀತನಕ್ಕಿಂತಲೂ ಹೊರಜಗತ್ತಿನ ಆವರಣದ ಲೇಪ ಕೊಂಚ ಹೆಚ್ಚಾಗಿದೆ. ಅಂದ ಮಾತ್ರಕ್ಕೆ ಇವು ಸೋತಿರುವ ಕವಿತೆಗಳಲ್ಲ. ಆದರೆ ಇದೊಂದು ರೂಢಿಗತವಾದ ಹಾದಿ. ಆದರೂ ಮಾಧವಿಯವರ ವೈಯಕ್ತಿಕ ಪ್ರತಿಭೆಯ ಛಾಪು ಇಲ್ಲಿ ಮಸುಕಾಗಿಲ್ಲ ಎನ್ನುವುದೂ ಮುಖ್ಯ.
ಪ್ರೇಮ ಹಾಗೂ ವಿರಹದ ಕೆಲವು ಕವಿತೆಗಳು ಈ ಸಂಕಲನದಲ್ಲಿವೆ. ಪ್ರತಿಯೊಬ್ಬರ ಭಾವದಲ್ಲೂ ಬಂದು ಹೋಗುವ ಬದುಕಿನ ಈ ನಿಜಗಳು ಮಾಧವಿಯವರಲ್ಲಿ ಕೂಡ ಕವಿತೆಗಳಾಗಿವೆ. ಇವುಗಳನ್ನು ವಿಶಿಷ್ಟವೆನ್ನಲಾಗದಿದ್ದರೂ ಬದುಕಿನ ಸಹಜ ಯಾನದ ಪ್ರತಿಸ್ಪಂದನಗಳಾಗಿ, ಸ್ವಂತ ವ್ಯಕ್ತಿತ್ವದ ಅನಾವರಣಗಳಾಗಿ ಓದಲು ಅರ್ಥಪೂರ್ಣವಾಗಿವೆ.
ಒಟ್ಟಾರೆ ಮೌನಗರ್ಭದ ಒಡಲು ನನ್ನ ಓದಿನಲ್ಲಿ ಒಂದು ಉತ್ತಮ ಕಾವ್ಯಕೃತಿಯಾಗಿ, ಅರ್ಥವಂತಿಕೆಯ ಸಾಧ್ಯತೆಯನ್ನು ಅರಹುವ ಅಭಿವ್ಯಕ್ತಿಯಾಗಿ, ತನ್ನ ಸ್ವಂತಿಕೆಯ ಛಾಪನ್ನು ಪಡೆದುಕೊಂಡಿರುವ ಸಂವೇದನೆಯಾಗಿ ಕಂಡಿದೆ. ಮಾಧವಿ ಭಂಡಾರಿಯವರು ಈ ಸಂಕಲನದಲ್ಲಿ ಬರೆದಿರುವ `ಅಮ್ಮ' ಮತ್ತು `ಅಪ್ಪ' ಎಂಬ ಎರಡು ಕವಿತೆಗಳು ನನ್ನ
ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿವೆ. ಒಬ್ಬ ಮಗಳಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ, ಸಾಹಿತಿಯಾಗಿ ಹಾಗೂ ಮಮಕಾರಗಳುಳ್ಳ ಹೆಣ್ಣಾಗಿ ತಾಯಿತಂದೆಯನ್ನು ಕಂಡರಿಸುವ ಈ ವಿಧಾನ ನನಗೆ ತುಂಬಾ ಆಪ್ತವೆನಿಸಿವೆ. ಇದಕ್ಕೆ ಕಾರಣಗಳು ಏನೇ ಇರಬಹುದಾದರೂ ಆ ಎರಡು ಕವಿತೆಗಳು ಒಂದು ರೀತಿಯಲ್ಲಿ ಕಣ್ತೆರೆಯಿಕೆಯ ದರ್ಶನಗಳಂತಿವೆ. ಆಪ್ತ ಸಂವಾದಗಳೂ ಆಗಿವೆ.
ಮಾಧವಿಯವರು ನಾನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ನಮ್ಮ ಸಮಿತಿಯ ಸದಸ್ಯೆಯಾಗಿ ಹಲವು ಹೊಸತನದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಪ್ರಾಧಿಕಾರಕ್ಕೂ, ನಮ್ಮ ತಂಡಕ್ಕೂ ಹೆಸರು ತಂದವರು. ಬಿಡುವಿರದ ಕೆಲಸ, ಕೈಕೊಡುವ ಆರೋಗ್ಯ, ಸಾಕಷ್ಟು ಪ್ರತಿಕೂಲ ಸನ್ನಿವೇಶಗಳ ನಡುವೆಯೇ ಅತ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮಗಳನ್ನು ನಡೆಸಿದವರು, ನಡೆಸಲು ಹೆಗಲು ಕೊಟ್ಟವರು. ಆತ್ಮೀಯ ನಡವಳಿಕೆ, ಸ್ನೇಹಪೂರ್ವಕ ಸಾಹಚರ್ಯ ಹಾಗೂ ದಿಟ್ಟ ಗಂಭೀರ ನಿಲುವುಗಳಿಂದ ನನ್ನ ಮೆಚ್ಚುಗೆಗೆ ಪಾತ್ರರಾದ ಒಡನಾಡಿ ಅವರು. ನಮ್ಮ ಪುಸ್ತಕ ಪ್ರಾಧಿಕಾರದ ಇಡೀ ಸಮಿತಿ ಒಮ್ಮೆ ಕಾರವಾರಕ್ಕೆ, ಮತ್ತೊಮ್ಮೆ ಶ್ರೀಶೈಲಕ್ಕೆ ಯಾತ್ರೆ ಮಾಡಬೇಕೆಂದಿದ್ದೆವು. ಆ ಯಾತ್ರೆಯ ಹರಕೆ ಅದೇಕೋ ಫಲಿಸದೆ ಕನಸಾಗಿಯೇ ಉಳಿಯಿತು. ನಾವಿನ್ನೂ ಉಳಿದಿದ್ದೇವಲ್ಲ, ಈ ಹರಕೆಗಳು ಎಂದಾದರೂ ಫಲಿಸದಿರುತ್ತವೆಯೇ.

`ಮೌನಗರ್ಭದ ಒಡಲು' ಕೃತಿಗೆ ನನ್ನ ಪ್ರತಿಕ್ರಿಯೆಯ ಮಾತುಗಳನ್ನು ಆಶಿಸಿದ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

Monday 16 September 2019

ಸಂವಿಧಾನವನ್ನು ಬದಲಾಯಿಸಬಹುದೇ

ಸಂವಿಧಾನವನ್ನು ಬದಲಾಯಿಸಬೇಕು ಎನ್ನುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸಬಹುದೇ? ಆಯಾ ಸರ್ಕಾರ ತಮಗೆ ಬೇಕಾದ ಸಂವಿಧಾನವನ್ನು ತಂದುಕೊಳ್ಳಬಹುದೇ?
ಸಂಸತ್ತು ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಸಂವಿಧಾನವೇ ಅನುಚ್ಚೆÃದ ೩೬೮ರಲ್ಲಿ ಸಂಸತ್ತಿಗೆ ಈ ಅಧಿಕಾರವನ್ನು ನೀಡಿದೆ. ಕಳೆದ ೭೦ ವರ್ಷಗಳಲ್ಲಿ ೧೦೪ ತಿದ್ದುಪಡಿಗಳನ್ನು ಮಾಡಲಾಗಿದೆ. ಬದಲಾಗುತ್ತಿರುವ ಕಾಲಮಾನ, ಹೊಸ ಪರಿಸ್ಥಿತಿ ಹಾಗೂ ಸಮಸ್ಯೆಗಳಿಗೆ ಅನುಗುಣವಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿಗಳನ್ನು ತಂದುಕೊಳ್ಳಬಹುದು.ಆದರೆ ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನವನ್ನಾಗಲಿ ಅದರ ಮೂಲತತ್ವಗಳನ್ನಾಗಲಿ ಅಮೂಲಾಗ್ರವಾಗಿ ಬದಲಾಯಿಸುವಂತಿಲ್ಲ.
ಅನುಚ್ಚೆÃದ ೩೬೮ರಲ್ಲಿ ತಿದ್ದುಪಡಿ ಮಾಡಲು ನೀಡಿರುವ ಅಧಿಕಾರವು ನಿರುಪಾಧಿಕವೇ ಅಥವಾ ನಿರ್ಬಂಧಗಳಿಗೆ ಒಳಪಟ್ಟಿದೆಯೇ ಎಂಬ ಪ್ರಶ್ನೆ ೧೯೭೩ರಲ್ಲಿ ಕೇಶವಾನಂದ ಭಾರತಿ ಮಹಾಸ್ವಾಮಿಗಳು ಎಂಬ ಪ್ರಕರಣದಲ್ಲಿ ಸರ್ವೊÃಚ್ಛ ನ್ಯಾಯಾಲಯದ ಮುಂದೆ ಬಂತು. ಈ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಸರ್ವೊÃಚ್ಚ ನ್ಯಾಯಾಲಯವು ಸಂವಿಧಾನದಲ್ಲಿ ಅಂತರ್ಗತವಾಗಿರುವ ಮೂಲತತ್ವಗಳನ್ನು ಹೆಕ್ಕಿ, ಪಟ್ಟಿ ಮಾಡಿ ಪ್ರಸ್ತುತಪಡಿಸಿದೆ. ಅದರಂತೆ, ಸಂವಿಧಾನದ ಪರಮಾಧಿಕಾರ, ಭಾರತದ ಸಾರ್ವಭೌಮತ್ವ, ಸಂಸದೀಯ ಪ್ರಜಾಪ್ರಭುತ್ವ, ಕಲ್ಯಾಣ ರಾಜ್ಯದ ಪರಿಕಲ್ಪನೆ, ಧರ್ಮ ನಿರಪೇಕ್ಷತೆ, ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಕಿತ್ತುಹಾಕುವ ಅಧಿಕಾರ ಸಂಸತ್ತಿಗೆ ಇಲ್ಲವೆಂದು ಘೋಷಿಸಲಾಗಿದೆ.
ಅದರಂತೆ, ಅನುಚ್ಚೆÃದ ೩೬೮ರಲ್ಲಿ ನೀಡಿರುವ ಅಧಿಕಾರವನ್ನು ಬಳಸಿ ಸಂಸತ್ತು ಈಗಿರುವ ಸಂವಿಧಾನವನ್ನು ಕಿತ್ತುಹಾಕಿ ಮತ್ತೊಂದು ಹೊಸ ಸಂವಿಧಾನವನ್ನು ತರಲು ಅವಕಾಶವಿಲ್ಲ.
ಸಂವಿಧಾನ ಜಾರಿಗೆ ಬಂದ ನಂತರ ನಾವು ಸಾಕಷ್ಟು ಸಾಧನೆಗಳನ್ನು ಮಾಡಿದ್ದೆÃವೆ. ಆದರೂ, ಜನಸಾಮಾನ್ಯರ ಮೂಲಭೂತ ಸಮಸ್ಯೆಗಳ ಜೊತೆಗೆ ದೇಶ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲುಗಳಿಗೆ ಮತ್ತು ಸಮಸ್ಯೆಗಳಿಗೆ ಕಾರಣ ನಮ್ಮ ಸಂವಿಧಾನ ಎಂಬುದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ ಇದು ತಪ್ಪು ತಿಳಿವಳಿಕೆ. ನಮ್ಮ ಸಂವಿಧಾನವನ್ನು ಜಾರಿಗೊಳಿಸುತ್ತಿರುವ ಜನರಲ್ಲಿಯೇ ದೋಷವಿದೆ. ೧೯೪೯ರಲ್ಲಿ ಕರಡು ಸಂವಿಧಾನವನ್ನು ಅಂಗೀಕಾರಕ್ಕೆ ಮಂಡಿಸಿದಾಗ ಡಾ.ಅಂಬೇಡ್ಕರ್‌ರವರು ಎಚ್ಚರಿಕೆಯ ಮಾತು ಹೇಳಿದ್ದರು: ‘ಸಂವಿಧಾನ ಎಷ್ಟೆÃ ಉತ್ತಮವಾಗಿರಲಿ, ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಒಳ್ಳೆಯದು ಕೂಡ ಕೆಟ್ಟದಾಗಿ ಬಿಡುತ್ತದೆ’ ಎಂದು. ಹಾಗಾಗಿ ಸಂವಿಧಾನವನ್ನು ಅನುಷ್ಠಾನಗೊಳಿಸುವ ಜನರು ಅದಕ್ಕೆ ಬದ್ಧರಾಗಿ ಇರಬೇಕು. ಅವರು ಸರಿ ಇಲ್ಲದೆ ಹೋದರೆ ಸಂವಿಧಾನವೇ ತಪ್ಪಾಗಿ ಕಾಣಿಸುತ್ತದೆ.

ಸಂವಿಧಾನ ಓದು ಪುಸ್ತಕ