Friday 12 February 2021

ನಾವ್ಯಾಕೆ ಹೀಗಾಗಿದ್ದೇವೆ? - ಗಂಗಾರಾಮ ಚಾಂಡಾಲ

*💐ಪ್ರೀತಿಯ* SC/ST *ಭಂದುಗಳೇ💐* 

ನಾವ್ಯಾಕೆ ಹೀಗಾಗಿದ್ದೇವೆ? 

1.  *RSS* *ಬಿಜೆಪಿ* ಪ್ರಧಾನ ಮಂತ್ರಿ, ಕೇಂದ್ರ ಬಜೆಟ್ ನಲ್ಲಿ  ಪರಿಶಿಷ್ಟ ಜಾತಿ/ಪಂಗಡದವರ ಕಾರ್ಯಕ್ರಮಗಳಿಗೆ *50* %  ಕಡಿತಗೊಳಿಸಿದ. ನಮಗೆ ಕೋಪ ಬರುತ್ತಿಲ್ಲ; ಬೀದಿಗಿಳಿದು ಪ್ರತಿಭಟಿಸುತ್ತಿಲ್ಲ.

2. ವಿದ್ಯಾರ್ಥಿಗಳ *ಶಿಷ್ಯವೇತನ* ನಿಲ್ಲಿಸಿದ. ಕೋಪ ಬರುತ್ತಿಲ್ಲ.

3. ಮೀಸಲುನೀತಿಯನ್ನೇ ಬುಡುಮೇಲು ಮಾಡಿದ. ಕೋಪ ಬರುತ್ತಿಲ್ಲ. 

4. *ಗೋಮಾಂಸದ* ಹೆಸರಲ್ಲಿ ನಮ್ಮವರನ್ನು ಕೊಲ್ಲುವ ಹುನ್ನಾರ ಹೂಡಿದ. ಕೋಪ ಬರುತ್ತಿಲ್ಲ.

5. *ಭೀಮಾ ಕೋರೆಗಾಂವ್* ನಲ್ಲಿ ಶಾಂತಿಯುತ ವಿಜಯೋತ್ಸವ ಆಚರಿಸುವ *20000* *ದಲಿತರನ್ನು* ಜೈಲಿಗೆ ತಳ್ಳಿದ. ಕೋಪ ಬರುತ್ತಿಲ್ಲ.

6. ನಿರಪರಾಧಿ ಡಾ ಬಾಬಾಸಾಹೇಬ ಅಂಬೇಡಕರವರ ಮೊಮ್ಮಗ ಡಾ!! ಆನಂದ ತೇಲತುಮಡೆಯವರನ್ನು ಜೈಲಿಗೆ ತಳ್ಳಿದ. ನಮಗೆ ಕೋಪ ಬರುತ್ತಿಲ್ಲ.

7. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ *ಮೀಸಲಿಟ್ಟ19000 ಸಾವಿರ ಕೋಟಿ* ಹಣವನ್ನು ಬೇರೆಯವರ ಕಾರ್ಯಕ್ರಮಗಳಿಗೆ ವರ್ಗಾಯಿಸಿದ. ನಮಗೆ ಕೋಪ ಬರುತ್ತಿಲ್ಲ. 

8.  ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಬಲ ವರ್ಧನೆಗೆ ಇದ್ದ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಿ ಬಿಟ್ಟ. ನಮಗೆ ಕೋಪ ಬರುತ್ತಿಲ್ಲ.

9. ಸರ್ಕಾರಿ ಸ್ವಾಮ್ಯದ *ರೈಲ್ವೆ* *ವಿಮಾನನಿಲ್ದಾಣ* , *ಆಯಿಲ್* ಕಂಪನಿಗಳು, *BSNL* ಖಾಸಗಿಯವರಿಗೆ ಮಾರಿ ನಮ್ಮ ಲಕ್ಷ ಲಕ್ಷ ಮೀಸಲು ಹುದ್ದೆಗಳಿಗೆ ಬಹಿರಂಗವಾಗಿಯೇ ಸಂಚಕಾರ ತಂದ : ನಮಗೆ ಕೋಪ ಬರುತ್ತಿಲ್ಲ.

10. ಇತ್ತೀಚೆಗೆ *61ಲಕ್ಷ ಪರಿಶಿಷ್ಟ* *ಜಾತಿ* *ಪರಿಶಿಷ್ಟ* *ಪಂಗಡ* ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನಿಲ್ಲಿಸಿದ. ನಮಗೆ ಕೋಪ ಬರುತ್ತಿಲ್ಲ.

11. ಹೊಸ ಶಿಕ್ಷಣ ನೀತಿ -2020 ತಂದು ಪರಿಶಿಷ್ಟ ಜಾತಿ/ಪಂಗಡದವರಿಗೆ " *ಶಿಕ್ಷಣದ ಹಕ್ಕ* " ನ್ನೇ ವಂಚನೆ ಮಾಡುತ್ತಿದ್ದಾನೆ. ನಮಗೆ ಕೋಪ ಬರುತ್ತಿಲ್ಲ.

12. ನಮಗೆ ಡಾ ಬಾಬಾಸಾಹೇಬ ಅಂಬೇಡ್ಕರ್ ರವರು ಹೋರಾಟ ಮಾಡಿ ಗಳಿಸಿಕೊಟ್ಟ ಎಲ್ಲ ಹಕ್ಕುಗಳನ್ನು ಧೈರ್ಯವಾಗಿ ಹಿಂಪಡೆ. ನಮಗೆ ಕೋಪ ಬರುತ್ತಿಲ್ಲ. 

ಯಾಕೆ ಹೀಗಾಗಿದ್ದೇವೆ? 
 *RSS,. BJP*  ಮಾಡುತ್ತಿರುವ ದಲಿತ ವಿರೋಧಿ ನೀತಿಗಳನ್ನು ನೋಡಿ ಸುಮ್ಮನಿದ್ಧರೆ ನಮ್ಮ ಮುಂದಿನ ಪೀಳಿಗೆ .
ಯೋಚಿಸಿ.

ನಿಮ್ಮನ್ನು ಹಿಂದೂ ಧರ್ಮ ಅತಿಶೂದ್ರನೆಂದು ಕರೆದು ಅಸ್ಪೃಶ್ಯತೆ ಆಚರಣೆ ಮಾಡಿತು. ನೀವು ಈಗ ಕ್ಷಣಿಕ ವಾಗಿ ಆರೆಸಸ್ ಎಸೆಯುವ ಎಂಜಲು ನೆಕ್ಕುತ್ತಿರಬಹುದು. ಆದರೆ ಮುಂದಿನ ಪೀಳಿಗೆ ಅದೇ ಎಂಜಲನ್ನು ನೀವು ಬಿಟ್ಟು ಹೋದ ತಟ್ಟೆಯನ್ನು ಹಿಡಿದು ಮೇಲ್ಜಾತಿ ಯವರು ಎಸೆಯುವ ಅಳಸಿದ ಅನ್ನಕ್ಕಾಗಿ ಮನೆ ಮನೆ ಅಲೆಯಬೇಕಾಗುತ್ತದೆ. RSS ನಲ್ಲಿ ದಲಿತರೇ ಬಹುಪಾಲು ಕಾಲಾಳುಗಳಾಗಿದ್ದಿರಿ ಎಚ್ಚರವಹಿಸಿ. ನಿಮ್ಮ ಹೆಣಕ್ಕೆ ನೀವೇ ಹಳ್ಳ ತೋಡಿಕೊಳ್ಳುವ ಮುನ್ನ ಎಚ್ಚರಗೊಳ್ಳಿ. *ಹಿಂದೂ ಧರ್ಮ ದಲಿತರಿಗೆ ಸ್ಮಶಾನದಾರಿ*

Tuesday 9 February 2021

ʼಆಂದೋಲನ ಜೀವಿ....ವಾಟ್ಸೆಪ್ ನಿಂದ

ಸನ್ಮಾನ್ಯ ಪ್ರಧಾನಿಗಳು ತಮ್ಮ ಭಾಷಣದಲ್ಲಿ ʼಆಂದೋಲನ ಜೀವಿʼ ಎಂಬ ಪದವನ್ನು ವ್ಯಂಗ್ಯವಾಗಿ ಬಳಸಿದ್ದಾರೆ. ಭಾಷಣದ ಸಂದರ್ಭದಲ್ಲಿ ತುಂಬ ಹತಾಶರಾಗಿದ್ದಂತೆ ಕಾಣುತ್ತಿದ್ದ ಅವರಿಗೆ ತಾನು ಬೃಹತ್‌ ದೇಶವೊಂದನ್ನು ಪ್ರತಿನಿಧಿಸುತ್ತಿದ್ದೇನೆ ಎಂಬ ಬಗ್ಗೆ ತಿಳಿವಳಿಕೆ ಇದ್ದಂತೆ ಕಾಣಲಿಲ್ಲ. ಭಾರತದ ಸುದೀರ್ಘ ಚರಿತ್ರೆಯನ್ನೂ ಅವರು ಗಂಭೀರವಾಗಿ ಓದಿದಂತಿಲ್ಲ.  ಹೋಗಲಿ, ರಾಮಮಂದಿರಕ್ಕೆ ಜನಾಂದೋಲನ ನಡೆಯದೇ ಹೋಗಿದ್ದರೆ ಅವರಿಗೆ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ  ಶಿಲಾನ್ಯಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬ ಪ್ರಜ್ಞೆಯಾದರೂ ಇರಬೇಕಿತ್ತು. 

ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಕಾಲ ಕಾಲಕ್ಕೆ ಜನಾಂದೋಲನಗಳು ನಡೆಯುತ್ತಲೇ ಬಂದಿವೆ. ಅವು ಸರ್ವಾಧಿಕಾರಿಗಳನ್ನು ಅಧಿಕಾರದಿಂದ ಕಿತ್ತೊಗೆದಿವೆ. ಜನರಿಗೆ ವಿಮೋಚನೆಯ ಹಾದಿಗಳನ್ನು ತೋರಿಸಿವೆ. ಸರಕಾರದ ಕ್ರೂರ ಕಾನೂನುಗಳನ್ನು ಪ್ರಶ್ನಿಸಿವೆ. ಎಷ್ಟೋ ಬಾರಿ ಜನಾಂದೋಲನಗಳು ದೇಶದ ಜನರನ್ನು ಹತ್ತಿರ ತಂದು ಶಿಥಿಲವಾಗುತ್ತಿದ್ದ ರಾಷ್ಟ್ರೀಯ ಪ್ರಜ್ಞೆಯನ್ನು ಗಟ್ಟಿಗೊಳಿಸಿವೆ.  
ಮಧ್ಯಕಾಲೀನ ಭಾರತದ ಬಹುದೊಡ್ಡ ಆಂದೋಲನವೆಂದರೆ ಭಕ್ತಿ ಚಳುವಳಿ. ಕಲ್ಯಾಣದಲ್ಲಿ ನಡೆದ ವಚನ ಚಳುವಳಿಯು ಸಾವಿರ ವರ್ಷಗಳಾನಂತರವೂ ಜಾತಿ, ಧರ್ಮ, ಮಹಿಳೆ, ಮತ್ತು ಭಾಷೆಯ ಕುರಿತು ನಮ್ಮ ಅರಿವನ್ನು ವಿಸ್ತರಿಸುತ್ತಿದೆ. ಜನಾಂದೋಲನ ಕಟ್ಟಿದ ಆವತ್ತಿನ ಅನುಭವ ಮಂಟಪ ಇವತ್ತಿನ ಸಂಸತ್‌ ಭವನಕ್ಕಿಂತ ಹೆಚ್ಚು ಪ್ರೌಢವೂ ದಿಟ್ಟವೂ ಅಗಿತ್ತು. ದಾಸರು, ಸೂಫಿಗಳು ಮತ್ತು ಸಿಕ್ಖರು  ನಡೆಸಿದ ಆಂದೋಲನಗಳು ಭಾರತದ ಹಿಂದುಳಿದ ಜನವರ್ಗಕ್ಕೆ ವಿಮೋಚನೆಯ ಹಾದಿ ತೋರಿಸಿದುವು. ಸಂತ ಕಬೀರರು, ಚೈತನ್ಯ ಮಹಾಪ್ರಭುಗಳು, ನಾಮದೇವರು, ಸಂತ ತುಕಾರಾಮ ಮೊದಲಾದವರು ನಡೆಸಿದ ಭಕ್ತಿ ಆಂದೋಲನಗಳು ಭಾರತದ ಭವಿಷ್ಯವನ್ನು ರೂಪಿಸಿದ ಮಹಾ ಚಳುವಳಿಗಳು.  
ವಸಾಹತು ಕಾಲಘಟ್ಟದಲ್ಲಿ ಇಂಗ್ಲಿಷ್‌ ಕಲಿತ ಉದೀಯಮಾನ ವಿದ್ಯಾವಂತ ವರ್ಗವು ಬಗೆ ಬಗೆಯ ಆಂದೋಲನಗಳ ಮೂಲಕ ಆಧುನಿಕ ಭಾರತಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟವು. ಆ ಕಾಲದಲ್ಲಿ ಹುಟ್ಟಿಕೊಂಡ ಆರ್ಯ ಸಮಾಜ, ಬ್ರಹ್ಮ ಸಮಾಜ, ರಾಮಕೃಷ್ಣ ಮಿಶನ್‌ ಮೊದಲಾದ ಸಂಘಟನೆಗಳು ಹೊಸ ಭಾರತದ ಉದಯಕ್ಕೆ ನಾಂದಿ ಹಾಡಿದುವು, 
೧೯೦೫ರಲ್ಲಿ ಆರಂಭವಾದ ಸ್ವದೇಶೀ ಚಳುವಳಿಯು ( ಪ್ರಧಾನಿಗಳು ಹೇಳುವ ಆತ್ಮ ನಿರ್ಭರ ಅಲ್ಲ) ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಭದ್ರವಾದ ಬುನಾದಿಯನ್ನು ಒದಗಿಸಿತು. ಗಾಂಧೀಜಿಯ ನೇತೃತ್ವದಲ್ಲಿ ನಡೆದ ಅಹಿಂಸಾತ್ಮಕ  ಸತ್ಯಾಗ್ರಹ ಚಳುವಳಿಯು ಬಹುಶ: ಭಾರತ ದೇಶ ಕಂಡ ಬಹು ದೊಡ್ಡ ಜನಾಂದೋಲನ. ಇದು ʼಸೂರ್ಯಮುಳುಗದ ದೇಶʼ ಎಂಬ ಖ್ಯಾತಿಗೆ ಒಳಗಾಗಿದ್ದ ಬ್ರಿಟಿಷರನ್ನೇ ಮನೆಗೆ ಕಳಿಸಿತು. 
ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ನಡೆದ ಅನೇಕ ಆಂದೋಲನಗಳಿಗೆ ನಾನೇ ಸಾಕ್ಷಿಯಾಗಿದ್ದೇನೆ. ೧೯೭೩ರಲ್ಲಿ ಕೇರಳದಲ್ಲಿ ಆರಂಭವಾದ ಸೈಲೆಂಟ್‌ ವ್ಯಾಲೀ ಆಂದೋಲನ, ೧೯೭೦ರ ದಶಕದುದ್ದಕ್ಕೂ ನಡೆದ ಚಿಪ್ಕೋ ಚಳುವಳಿ, ೧೯೭೮ರಿಂದ ೧೯೯೪ರ ವರೆಗೆ ಮರಾಟ್ವಾಡಾ ವಿವಿಗೆ ಅಂಬೇಡ್ಕರ್‌ ಹೆಸರಿಡಲು ದಲಿತರ ನೇತೃತ್ವದಲ್ಲಿ ನಡೆದ ನಾಮಂತರಣ್‌ ಆಂದೋಲನ, ೧೯೮೦ರಲ್ಲಿ ಬಿಹಾರದಲ್ಲಿ ಅರಂಭವಾದ ಜಂಗಲ್‌ ಬಚಾವೋ ಆಂದೋಲನ, ೧೯೮೫ರಿಂದ ಆರಂಭವಾದ ನರ್ಮದಾ ಬಚಾವೋ ಆಂದೋಲನ, ೨೦೦೬ರ ಮೀಸಲಾತೀ ವಿರೋಧೀ ಚಳುವಳಿ, ೨೦೧೧ರಲ್ಲಿ ಅಣ್ಣಾ ಹಜಾರೆ ಅರಂಭಿಸಿದ ಜನ ಲೋಕ ಪಾಲ್‌ ಬಿಲ್‌ ( ಬ್ರಷ್ಟಾಚಾರ ವಿರೋಧಿ ಆಂದೋಲನ), ೨೦೧೨ರ ನಿರ್ಭಯಾ ಜನಾಂದೋಲನ, ೨೦೧೭ರ ಜಲ್ಲಿಕಟ್ಟು ಆಂದೋಲನ, ಮೀಟೂ ಚಳುವಳಿ ಮೊದಲಾದುವು ಭಾರತೀಯರ ಬದುಕಲ್ಲಿ ಹೊಸ ಭರವಸೆ ಮೂಡಿಸಿವೆ. ಪರಿಸರ ಚಳುವಳಿಗಳು, ಮತ್ತು ಮಹಿಳಾ ಚಳುವಳಿಗಳು ಇಲ್ಲದೇ ಹೋಗಿದ್ದರೆ ಇಂದಿನ ಭಾರತ ಇಂದಿನ ಹಾಗೆ ಇರುತ್ತಿರಲಿಲ್ಲ. 
ಈ ಜನಾಂದೋಲನಗಳಲ್ಲಿ ಭಾಗವಹಿಸಿದವರು ಕಾರ್ಪೊರೇಟ್‌ ಕಂಪೆನಿಯವರಲ್ಲ, ಬದಲು ಲಂಗೋಟಿ ತೊಟ್ಟ ಫಕೀರರು, ಬಡವರು. ಆಗಲೂ ಹಾಗೆ, ಈಗಲೂ ಹಾಗೆ. ಪ್ರಸ್ತುತ ರೈತರು ಚಳುವಳಿ ನಡೆಸುತ್ತಾ ಇಷ್ಟು ದಿನಗಳ ಕಾಲ ಬಲಿಷ್ಠ ಸರಕಾರದ ವಿರುದ್ಧ ಉಳಿದಿದ್ದಾರೆ. ಇದು ಆಂದೋಲನದ ಶಕ್ತಿ. 
ಆಂದೋಲನಕಾರರನ್ನು ಅಪಹಾಸ್ಯ ಮಾಡುವುದು ಅಪೇಕ್ಷಣೀಯವಲ್ಲ.

Friday 5 February 2021

ಭಿನ್ನ ಧ್ವನಿಗೆ ಇಲ್ಲಿಲ್ಲವೇ ಜಾಗ?ಸರ್ಕಾರದ ಭಾಷೆಯೇ ಪ್ರಜೆಗಳ ಭಾಷೆಯಾಗಬೇಕೇ?.....

ಭಿನ್ನ ಧ್ವನಿಗೆ ಇಲ್ಲಿಲ್ಲವೇ ಜಾಗ?
ಸರ್ಕಾರದ ಭಾಷೆಯೇ ಪ್ರಜೆಗಳ ಭಾಷೆಯಾಗಬೇಕೇ?

ಕಲೆ: ಭಾವು ಪತ್ತಾರ್‌


ಪುರುಷೋತ್ತಮ ಬಿಳಿಮಲೆ

ವಿ ದ್ವಾಂಸರಾದ ಪ್ರೊ. ಹಂಪ ನಾಗರಾಜಯ್ಯ ಅವರನ್ನು ಪೊಲೀಸರು ಸ್ಟೇಶನ್ನಿಗೆ ಕರೆಯಿಸಿಕೊಂಡು, ಸ್ಪಷ್ಟೀಕರಣ ಕೇಳಿ ಕಳುಹಿಸಿಕೊಟ್ಟ ವಿಷಯ ಈಚಿನದು. ಹಂಪನಾ ಅವರನ್ನು ನಾನು ಕಳೆದ 40 ವರ್ಷಗಳಿಂದ ಬಲ್ಲೆ. ಅವರೆಂದೂ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರಲ್ಲ, ಬದಲು ವ್ಯವಸ್ಥೆಯ ಪರವಾಗಿಯೇ ಇದ್ದವರು. ಅಂತ ಹಿರಿಯರು ಕಾರ್ಯಕ್ರಮವೊಂದರಲ್ಲಿ ರೈತರ ಮೇಲಿನ ಕಳಕಳಿಯಿಂದ ಹೇಳಿದ ಉಪಮೆಯೊಂದಕ್ಕೆ ವ್ಯವಸ್ಥೆ ಬೆಚ್ಚಿ ಬಿದ್ದಿದೆ ಎಂದರೆ ಈ ವ್ಯವಸ್ಥೆಯು ಯಾವ ಮಟ್ಟಿನ ಮನೋರೋಗದಿಂದ ನರಳುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಹಂಪನಾ ಅವರನ್ನು ಸ್ಟೇಶನ್ನಿಗೆ ಬರ ಹೇಳಿದ ಪೊಲೀಸರಿಗೆ ಅವರ‍್ಯಾರೆಂದು ತಿಳಿದಿರಲಾರದು. ಎಂ.ಎಂ.ಕಲಬುರ್ಗಿಯವರಿಗೆ ಗುಂಡು ಹಾಕಿದವನಿಗೂ ಕಲಬುರ್ಗಿಯವರ ಯೋಗ್ಯತೆಯ ಬಗ್ಗೆ ಗೊತ್ತಿರುವುದು ಸಾಧ್ಯವಿಲ್ಲ. ಆದರೆ, ಇವರೆಲ್ಲರಿಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುವ ಮಾತುಗಳ ಮೂಲಕ, ಹೇಗೆ ಮಾಡಿದರೆ ಈ ಕಾಲಕ್ಕೆ ಉಚಿತವಾಗಬಹುದು ಎಂಬ ಒಂದು ಬಗೆಯ ತಿಳಿವಳಿಕೆ ಮೂಡಿರುತ್ತದೆ. ಟಿ.ವಿ. ಚಾನೆಲ್‌ಗಳ ಅರಚಾಟ, ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಮಾಹಿತಿ, ಎಲ್ಲೆಂದರಲ್ಲಿ ಕೇಳಿ ಬರುತ್ತಿರುವ ದ್ವೇಷಪೂರಿತ ಭಾಷೆ, ರಾಜಕಾರಣಿಗಳು ಬಳಸುವ ಸೌಜನ್ಯರಹಿತ ನುಡಿಗಟ್ಟುಗಳು, ನಿರಂತರವಾಗಿ ನಡೆಯುತ್ತಿರುವ ಚಾರಿತ್ರ್ಯಹನನ ಇತ್ಯಾದಿಗಳು ನಮ್ಮ ನೆಲದ ಗುಣವನ್ನೇ ಬದಲಾಯಿಸಿವೆ. ಇಂಥ ಬೆಳವಣಿಗೆಗಳ ಕುರಿತು ಎಚ್ಚರ ಹುಟ್ಟಿಸುವ ಮಾನವಿಕಗಳನ್ನೇ  ‘ಅನುತ್ಪಾದಕ’ ಎಂದು ಘೋಷಿಸುವ ಮಟ್ಟಿಗೆ ಜನರು ಬದಲಾಗಿದ್ದಾರೆ. ಇಂಥಲ್ಲಿ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಲೇಖಕರಿಗೆ ಮಹತ್ವ ಕಡಿಮೆಯಾಗುತ್ತದೆ.

ಈ ನಡುವೆ, ನಾಡಿನ ಬಗೆಗೆ ತಿಳಿವಳಿಕೆಯನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರ್ಕಾರಗಳ  ಅತಿ ದೊಡ್ಡ ಕರ್ತವ್ಯ ಎಂಬುದನ್ನು ಸರ್ಕಾರಗಳೇ  ಮರೆತಿವೆ, ಮಾತ್ರವಲ್ಲ ಜನರಿಂದಲೂ ಅದನ್ನು ಮರೆಸಲು ನೇರವಾಗಿ ಮತ್ತು ಪರೋಕ್ಷವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ತಂತ್ರಗಳಿಗೆ ಬಲಿ ಬಿದ್ದ ಪ್ರಜೆಗಳೂ ಸರ್ಕಾರದ ಭಾಷೆಯನ್ನೇ ನಿಧಾನವಾಗಿ ಕಲಿಯಲು ಆರಂಭಿಸಿದ್ದಾರೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರ್ಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಆದರೆ ವರ್ತಮಾನ ಕಾಲದಲ್ಲಿ ಸರ್ಕಾರಗಳೇ ಅಂಥ ಪ್ರಕ್ರಿಯೆಗಳಿಗೆ ವಿರುದ್ಧವಾಗಿವೆ.

ನಮ್ಮ ಸಂವಿಧಾನ ಮತ್ತು ಕಾನೂನುಗಳನ್ನು ಹೇಗೆ ಬೇಕಾದರೂ ತಿರುಚುವ ಕಲೆಗಾರಿಕೆಯನ್ನು ನಮ್ಮ ಪ್ರಸಿದ್ಧ ವಕೀಲರುಗಳೇ ನಮಗೆ ಹೇಳಿಕೊಡುತ್ತಿರುವುದರಿಂದ, ಹಣವಿದ್ದರೆ ನಾವೀಗ ಸುರಕ್ಷಿತ ಮತ್ತು ಹೇಗೆ ಬೇಕಾದರೂ ಮಾತಾಡಬಹುದು ಎಂಬ  ನಂಬುಗೆ ವೇಗವಾಗಿ ಬೆಳೆಯುತ್ತಿದೆ. ಸರ್ಕಾರದ ಕೃಪೆಯಿದ್ದರೆ ‘ಗೋಲಿ ಮಾರೋ’ ಎಂದು ಸಾರ್ವಜನಿಕವಾಗಿಯೇ ಹೇಳಬಹುದು. ಇಲ್ಲದಿದ್ದರೆ ಮುನಾವರ್ ಫಾರೂಕಿಯ ಒಂದು ಜೋಕ್ ಕೂಡಾ ಕೇಳುವಂತಿಲ್ಲ.  

ಇಂಡಿಯನ್ ಪೀನಲ್ ಕೋಡ್ (ಐಪಿಸಿ) 124ಎ ಪ್ರಕಾರ ನಮ್ಮ ದೇಶದಲ್ಲಿ ಸುಮಾರು 70 ಕೇಸುಗಳನ್ನು ‘ದೇಶದ್ರೋಹ’ದ ಆಪಾದನೆಯ ಮೇಲೆ ದಾಖಲಿಸಲಾಗಿದೆ. 1860ರ ಹೊತ್ತಿಗೆ ದೇಶದಾದ್ಯಂತ ದಂಗೆಯೇಳುತ್ತಿದ್ದ ಸಮುದಾಯಗಳನ್ನು ಸದೆ ಬಡೆಯಲು ಬ್ರಿಟಿಷರು ಚಾಲ್ತಿಗೆ ತಂದ ಕಾನೂನನ್ನು ಈಗ ದೇಶದ ಪ್ರಜೆಗಳ ಮೇಲೆಯೇ ನಿರ್ದಯವಾಗಿ ಜಾರಿಗೆ ತರಲಾಗುತ್ತಿದೆ.

ಈ ಲೇಖನ ಬರೆಯುವ ಹೊತ್ತಿಗೆ ದೆಹಲಿ ಗಡಿಭಾಗದಲ್ಲಿ ಚಳವಳಿ ನಡೆಸುತ್ತಿರುವ ಕೆಲವು ರೈತ ನಾಯಕರ ಮೇಲೂ ದೇಶದ್ರೋಹದ ಕೇಸು ದಾಖಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರರ ದಾಖಲಾತಿ ವಿರುದ್ಧ ಸಂವಿಧಾನಾತ್ಮಕವಾಗಿಯೇ ಹೋರಾಡಿದವರ ಮತ್ತು ಭೂ ಸಂಬಂಧಿ ವ್ಯಾಜ್ಯಗಳಲ್ಲಿ ತೊಡಗಿಸಿಕೊಂಡ ಸಾವಿರಾರು ನಾಗರಿಕರ ಮೇಲೆಯೂ ದೇಶದ್ರೋಹದ ಕೇಸುಗಳನ್ನು ಜಡಿಯಲಾಗಿದೆ ಎಂದು ವರದಿಗಳು ತಿಳಿಸಿವೆ. ಇವರಲ್ಲಿ ಹೆಚ್ಚಿನವರು ಸರ್ಕಾರದ ಕ್ರಮಗಳನ್ನು ವಿಮರ್ಶೆ ಮಾಡಿದ್ದಾರೆಯೇ ವಿನಾ ದೇಶದ್ರೋಹದ ಕೆಲಸವೇನೂ ಮಾಡಿದಂತಿಲ್ಲ. ಆದರೆ ಐದು ವರ್ಷಕ್ಕೊಮ್ಮೆ ಅಧಿಕಾರಕ್ಕೆ ಬರುವ ಸರ್ಕಾರವು ತನ್ನನ್ನೇ ದೇಶದೊಂದಿಗೆ ಸಮೀಕರಿಸಿಕೊಂಡು ಈ ಕೆಲಸಗಳನ್ನು ಮಾಡಲು ಹಿಂಜರಿಯಲಿಲ್ಲ.

ಐಪಿಸಿ ಸೆಕ್ಷನ್ 153ಎ – ಗುಂಪುಗಳ ನಡುವೆ ದ್ವೇಷ ಉಂಟು ಮಾಡುವಂಥ ಮಾತುಗಳನ್ನು ‘ಅಪರಾಧ’ ಎಂದು ಹೇಳುತ್ತದೆ. ಆದರೆ ದ್ವೇಷದ ಮಾತುಗಳನ್ನಾಡಿಯೇ ಅಧಿಕಾರಕ್ಕೆ ಬಂದ ಎಷ್ಟು ಜನರ ಮೇಲೆ ಇಂಥ ಕೇಸುಗಳು ದಾಖಲಾಗಿವೆ? ಇದು ನಮ್ಮ ನ್ಯಾಯ ವ್ಯವಸ್ಥೆಯ ದೌರ್ಬಲ್ಯದ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಭಿನ್ನ ಧ್ವನಿಗಳನ್ನು ಅಡಗಿಸುವ ಹುನ್ನಾರ ಪ್ರಜಾಪ್ರಭುತ್ವವನ್ನು ಸಾಯಿಸಿ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಡುತ್ತದೆ.

ಹಂಪನಾ ಅವರಂಥ ಲೇಖಕರೇ ಸುಲಭವಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಅಮಾಯಕ  ವಿದ್ಯಾರ್ಥಿಗಳು ಆನಂತರದ ಸಾಲಿನಲ್ಲಿರುತ್ತಾರೆ. ಈ ವಿಷಯದಲ್ಲಿ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಉಳಿದವರೆಲ್ಲರೂ ಬಲಿಪಶುಗಳೇ. 1989ರಲ್ಲಿ ರಾಜೀವ್ ಗಾಂಧಿಯವರು ಮುಸ್ಲಿಮರ ಪ್ರತಿಭಟನೆಗೆ ಹೆದರಿ, ಸಲ್ಮಾನ್ ರಶ್ದಿಯವರ  ಸೆಟಾನಿಕ್ ವರ್ಸಸ್ ಅನ್ನು ನಿಷೇಧಿಸಿದರು.  1990 ಮತ್ತು 2000ರಲ್ಲಿ ಜಗತ್ಪ್ರಸಿದ್ಧ ಕಲಾವಿದ ಎಂ.ಎಫ್.ಹುಸೇನರ ಮೇಲೆ ಆಕ್ರಮಣ ಮಾಡಲಾಯಿತು. 2012ರಲ್ಲಿ ವ್ಯಂಗ್ಯ ಚಿತ್ರಕಾರ ಅಸೀಂ ತ್ರಿವೇದಿಯವರನ್ನು ಜೈಲಿಗೆ ತಳ್ಳಲಾಯಿತು. 2014ರಲ್ಲಿ ಗುಜರಾತಿನ ದೀನನಾಥ ಬಾತ್ರಾ ಎಂಬವರ ದೂರಿನ ಮೇಲೆ ವೆಂಡಿ ಡೋನಿಗರ್ ಅವರ ‘ದಿ ಹಿಂದೂಸ್’ ಪುಸ್ತಕವನ್ನು ಪೆಂಗ್ವಿನ್ ಹಿಂತೆಗೆದುಕೊಂಡಿತು.

2015ರಲ್ಲಿ ತಮಿಳು ಲೇಖಕ ಪೆರುಮಾಳ್ ಮುರುಗನ್ ಕೋಮುವಾದಿ ಶಕ್ತಿಗಳ ಉಪದ್ರವ ತಾಳಲಾರದೆ ‘ನಾನು ಸತ್ತಿದ್ದೇನೆ’ ಎಂದು ಘೋಷಿಸಿಕೊಂಡರು. ಅದು ಲೇಖಕನೊಬ್ಬನ ಆತ್ಮಹತ್ಯೆಗೆ ಸಮನಾಗಿತ್ತು. 2016ರಲ್ಲಿ ಮದ್ರಾಸ್ ಹೈಕೋರ್ಟು ಮುರುಗನ್ ಪರವಾಗಿ ತೀರ್ಪು ಕೊಟ್ಟರೂ ಅಷ್ಟು ಹೊತ್ತಿಗೆ ಲೇಖಕ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ದೆಹಲಿ ವಿಶ್ವವಿದ್ಯಾಲಯದ ಪಠ್ಯಕ್ರಮದಿಂದ ಎ.ಕೆ. ರಾಮಾನುಜನ್ ರಾಮಾಯಣದ ಮೇಲೆ ಬರೆದ ಪ್ರಬುದ್ಧ ಲೇಖನವನ್ನು ತೆಗೆದು ಹಾಕಲಾಯಿತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇದೀಗ ಉನ್ನತ ಮಟ್ಟದ ಚರ್ಚೆಗಳೇ ನಡೆಯುತ್ತಿಲ್ಲ.

‘ಮಾನನಷ್ಟ’ ಮೊಕದ್ದಮೆಗಳೂ ಈಚಿನ ದಿನಗಳಲ್ಲಿ ಬರಹಗಾರರ ಬಾಯಿ ಕಟ್ಟಿಸಿದೆ. ಪೀನಲ್ ಕೋಡಿನ 499 ಮತ್ತು 500ರ ಪ್ರಕಾರ ನಿಮ್ಮ ಮೇಲೆ ಯಾರು ಬೇಕಾದರೂ ಮೊಕದ್ದಮೆ ದಾಖಲಿಸಬಹುದು. ‘ಆ ಲೇಖನದಿಂದ ನನ್ನ ಭಾವನೆಗಳಿಗೆ ನೋವಾಗಿದೆ’ ಎಂದರೆ ಸಾಕು, ಈ ದಿನಗಳಲ್ಲಿ ಏನು ಬೇಕಾದರೂ ಅಗಬಹುದು. ‘ನಾನು ಕಂಡದ್ದನ್ನು, ಅನುಭವಿಸಿದ್ದನ್ನು ಬರೆಯದಿದ್ದರೆ ನನ್ನ ಭಾವನೆಗಳಿಗೆ ನೋವಾಗುತ್ತದೆ’ ಎಂದು ಯಾರೂ ಹೇಳುವಂತಿಲ್ಲ. ವರ್ಷಾನುಗಟ್ಟಲೆ ನಡೆಯಬಹುದಾದ ಕೋರ್ಟು ವ್ಯವಹಾರಗಳಿಗೆ ಹೆದರಿ ಲೇಖಕರು ಬರೆಯುವುದನ್ನೇ ನಿಲ್ಲಿಸಿಬಿಡುತ್ತಾರೆ. ವ್ಯವಸ್ಥೆಗೆ ಬೇಕಾದ್ದೂ ಅದುವೇ.

ಪ್ರಸಿದ್ಧ ಲೇಖಕರಾದ ಪರೊಂಜಯ್ ಥಾಕುರ್ತಾ ಮತ್ತು ಜ್ಯೋತಿರ್ಮಯ ಚೌಧುರಿ ಅವರು ಬರೆದ ಪುಸ್ತಕವೊಂದರ ಮೇಲೆ ಮುಕೇಶ್ ಅಂಬಾನಿಯವರ ರಿಲಯನ್ಸ್ ಕಂಪನಿ 1.64 ಕೋಟಿ ಡಾಲರ್‌ಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿತು. ಇದನ್ನು ಗಮನಿಸಿದ ಅನೇಕ ಲೇಖಕರು ಕಾರ್ಪೊರೇಟ್ ಕಂಪನಿಗಳ ವಿರುದ್ಧ ಬರೆಯುವುದನ್ನೇ ನಿಲ್ಲಿಸಿದರು. ಕಂಪನಿಗಳಿಗೆ ಬೇಕಾದದ್ದೂ ಅದುವೇ. ಪರಿಸರವಾದಿ ಪತ್ರಿಕೋದ್ಯಮಿ ಕೇಯ ಆಚಾರ್ಯರನ್ನೂ ಹೀಗೆಯೇ ಮಾಡಿ ಹೆದರಿಸಿ ಬಾಯಿ ಮುಚ್ಚಿಸಲಾಯಿತು. ಪರಿಣಾಮವಾಗಿ ಪರಿಸರ ನಾಶ ಸರಾಗವಾಯಿತು. ಇಂಥ ಬೆಳವಣಿಗೆಗಳ ನೇರ ಪರಿಣಾಮ ಜನರಿಗೆ ಸತ್ಯ ಹೇಳಬೇಕಾದ  ಪತ್ರಕರ್ತರ ಮೇಲಾಗಬೇಕಿತ್ತು. ಅದರೆ ಹೆಚ್ಚಿನ ಪತ್ರಕರ್ತರು ಸರ್ಕಾರದ ಪರವಾಗಿಯೇ ಮಾತಾಡುತ್ತಾ ಅಪಾಯದಿಂದ ಪಾರಾಗುತ್ತಿದ್ದಾರೆ.

ಚಾನೆಲ್ಲುಗಳಿಗೆ ದುಡ್ಡು ಹಾಕಿದವರು ಸರ್ಕಾರದಲ್ಲಿ ಶಾಮೀಲಾಗಿರುವುದರಿಂದ ಅವುಗಳಿಂದ ಹೆಚ್ಚಿನದನ್ನು ನಿರೀಕ್ಷಿಸುವುದೂ ತಪ್ಪು. ಜನಗಳಿಗೆ ಇವೆಲ್ಲ ಗೊತ್ತಿಲ್ಲವೆಂದಲ್ಲ. ಆದರೆ ಅವರಲ್ಲಿ ಹೆಚ್ಚಿನ ಪರ್ಯಾಯಗಳಿಲ್ಲ.  2020ರಲ್ಲಿ  ಜಗತ್ತಿನ 180 ದೇಶಗಳಲ್ಲಿ ನಮ್ಮ ದೇಶ ಪತ್ರಿಕಾ ಸ್ವಾತಂತ್ರ್ಯದ ದೃಷ್ಟಿಯಿಂದ 142ನೇ ಸ್ಥಾನದಲ್ಲಿ ನಿಂತಿರುವುದು ಆತಂಕಕಾರಿ ವಿಷಯವಾಗಿದೆ.

ಸರ್ಕಾರವನ್ನು ವಿಮರ್ಶೆ ಮಾಡಿದವರನ್ನೆಲ್ಲ ‘ರಾಷ್ಟ್ರದ್ರೋಹಿ’ ಎಂದು ಬಿಂಬಿಸಲು ನಮ್ಮಲ್ಲಿ ದೊಡ್ಡ ಪಡೆಯೇ ಕೆಲಸ ಮಾಡುತ್ತದೆ. ಇಂಟರ್ನೆಟ್‌ಗಳನ್ನು ಸರ್ಕಾರವೇ ಬೇಕೆಂದಾಗ ಸ್ಥಗಿತಗೊಳಿಸುತ್ತದೆ. ಜನರು ತಾವಾಗಿಯೇ ಬಾಯಿ ಮುಚ್ಚಿಕೊಳ್ಳುವಂತೆ ಮಾಡುವ ಹೊಸ ತಂತ್ರಗಾರಿಕೆಯನ್ನು ಭಾರತೀಯ ಸಮಾಜ ಕಂಡುಕೊಂಡಿದೆ. ಲೇಖಕ ಡಾ. ಆನಂದ್ ತೇಲ್ತುಂಬ್ಡೆ, ತೆಲುಗಿನ ಕವಿ, ವರವರ ರಾವ್, ಫರಿದಾಬಾದಿನ ಡಾ.ಸುಧಾ ಭಾರದ್ವಾಜ್, ನವದೆಹಲಿಯ ಗೌತಮ್ ನವ್‌ಲಖಾ, ಮುಂಬೈನ ವರ್ನಾನ್ ಗೋನ್ಸಾಲ್ವೆಸ್ ಹಾಗೂ ಅರುಣ್ ಫೆರೆರಾ, ರಾಂಚಿಯ 
ಸ್ಟ್ಯಾನ್ಲಿ ಸ್ವಾಮಿಯವರು ಈಗಾಗಲೇ ಜೈಲು ಸೇರಿದ್ದಾರೆ. ಅವರಿಗೆ ಜಾಮೀನು ಕೂಡಾ ಸಿಕ್ಕಿಲ್ಲ.

ಮಾನವ ಹಕ್ಕುಗಳ ಹೋರಾಟಗಾರರಾದ ಇವರ ಬಗ್ಗೆ ನ್ಯಾಯಾಲಯ ಏನು ಹೇಳುವುದೋ ಕಾದು ನೋಡಬೇಕಾಗಿದೆ. ಆದರೆ ಇವರ ಬಂಧನದಿಂದ, ಸರ್ಕಾರೀ  ಪ್ರಾಯೋಜಿತ ಲೇಖಕರು ಹೊರತುಪಡಿಸಿ ಉಳಿದ ಲೇಖಕರು ಬೆಚ್ಚಿಬಿದ್ದಿದ್ದಾರೆ. ಪ್ರೊ.ಅಮರ್ತ್ಯ ಸೇನ್, ನೋಮ್ ಚಾಮ್ಸ್ಕಿ, ಜೀನ್ ಡ್ರೆಜ್, ಬಿ.ಎಲ್. ಮುಂಗೇಕರ್, ರೋಮಿಲಾ ಥಾಪರ್ ಮೊದಲಾದ 5000ಕ್ಕೂ ಹೆಚ್ಚು ವಿದ್ವಾಂಸರು ಭಾರತದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ದಮನದ ವಿರುದ್ಧ ಮಾತಾಡಿದ್ದಾರೆ. ಇಂಥವರ ಮಹತ್ವ ತಿಳಿಯದವರು ಅವರನ್ನೂ ಅರ್ಬನ್‌ ನಕ್ಸಲ್‌ಗಳು ಎಂದು ಕರೆದು ಅವಮಾನಿಸಿದರು. ಇದರಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಬಲವಾದ ಪೆಟ್ಟು ಬಿದ್ದಿದೆ. 2020ರ ಮಾನವ ಹಕ್ಕುಗಳ ಸೂಚ್ಯಂಕದಲ್ಲಿ 162 ದೇಶಗಳಲ್ಲಿ ಭಾರತದ ಸ್ಥಾನ 111.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಒಂದೆಡೆ ಹಾಗೆ ನಡೆಯುತ್ತಿದ್ದರೆ, ಇನ್ನೊಂದೆಡೆಯಲ್ಲಿ ಜನರ ನಡುವೆ ಪರಸ್ಪರ ಅಸಹನೆ ಹುಟ್ಟಿಸುವಂಥ ವ್ಯವಸ್ಥೆ ಗಟ್ಟಿಯಾಗಿ ಬೆಳೆಯುತ್ತಿದೆ. ಇದು ಅಧಿಕಾರ ರಾಜಕಾರಣಕ್ಕೆ ಪೂರಕವಾಗಿರುವುದರಿಂದ ಸರ್ಕಾರವೂ ಈ ಬಗ್ಗೆ ಮೌನ ತಾಳಿದೆ. ಆರ್ನಬ್ ಗೋಸ್ವಾಮಿ ಮತ್ತು ಅತನನ್ನು ಅನುಸರಿಸುವವರು ಟಿಆರ್‌ಪಿಗಾಗಿ ನಡೆಸುವ ಏಕಪಕ್ಷೀಯ ಟಿ.ವಿ ಚರ್ಚೆಗಳು ಭಾರತೀಯ ಸಮಾಜದ ಮೇಲೆ ಉಂಟು ಮಾಡಿದ ಪರಿಣಾಮಗಳ ಬಗ್ಗೆ ಇನ್ನಷ್ಟೇ ಅಧ್ಯಯನ ನಡೆಯಬೇಕಾಗಿದೆ. ಮೇಲ್ನೋಟಕ್ಕೆ ಅವು ಭಾರತೀಯ ಸಮಾಜವನ್ನು ಒಂದು ಬಗೆಯ ಉದ್ರೇಕಕ್ಕೆ ತಳ್ಳಿವೆ. ಅಸಹನೆಯನ್ನು ವ್ಯಾಪಕವಾಗಿ ಬೆಳೆಸಿವೆ. ಮುಸ್ಲಿಮರನ್ನು ಅತಂತ್ರಗೊಳಿಸಿವೆ. ರಾಜಕೀಯವು ನಮ್ಮ ಕುಟುಂಬಗಳ ಒಳಗೆ ಪ್ರವೇಶಿಸಿ, ಛಿದ್ರಗೊಳಿಸಿದೆ. ಜನರಿಗೆ ಎಲ್ಲಿ, ಏನನ್ನು ಎಷ್ಟು ಮಾತಾಡಬೇಕೆಂಬ ಪ್ರಜ್ಞೆಯೇ ಇಲ್ಲವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಬಹುಶಃ ಸರ್ಕಾರಗಳು ಸಂವೇದನಾಶೀಲವಾಗಿ ವರ್ತಿಸುವ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರೆ ಹಂಪನಾ ಅವರಂಥವರೂ ಪೊಲೀಸ್ ಸ್ಟೇಶನ್ನಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಎಂಬಂತಾಗಿದೆ ಪರಿಸ್ಥಿತಿ. ಸರ್ಕಾರವು ತನ್ನ ಭಾಷೆಯನ್ನೇ ಪ್ರಜೆಗಳ ಭಾಷೆಯನ್ನಾಗಿ  ಪರಿವರ್ತಿಸಬಯಸಿದರೆ ಆಗ ಅಲ್ಲಿ ಸರ್ಕಾರ ಇರುತ್ತದೆ, ಪ್ರಜೆಗಳು ಇರುವುದಿಲ್ಲ. ಪ್ರಜೆಗಳೇ ಇಲ್ಲದ ಪ್ರಜಾಪ್ರಭುತ್ವವನ್ನು ನಾವೀಗ  ಕಟ್ಟಲು ಹೊರಟಿದ್ದೇವೆ.

v