Wednesday 4 November 2020

ತುರ್ತುಪರಿಸ್ಥಿತಿಯ ಛಾಯೆಯೂ ಅರ್ನಾಬ್ ಮಾಯೆಯೂನಾ ದಿವಾಕರ

ತುರ್ತುಪರಿಸ್ಥಿತಿಯ ಛಾಯೆಯೂ ಅರ್ನಾಬ್ ಮಾಯೆಯೂ

ನಾ ದಿವಾಕರ

“ಭೂತದ ಬಾಯಲ್ಲಿ ಭಗವದ್ಗೀತೆ,,,,” ಈ ಗಾದೆ ಮಾತಿಗೆ ಭಾರತವೇ ಜನ್ಮಭೂಮಿ. ಕರ್ಮಭೂಮಿಯೂ ಹೌದು. ಈ ಗಾದೆಯ ಅರ್ಥ ಏನು ಎಂದು ಕೇಳುವವರಿಗೆ ಭಾರತದ ರಾಜಕಾರಣಿಗಳ ಭಾಷಣ, ಹೇಳಿಕೆಗಳನ್ನು ಕೇಳುವಂತೆ ಸಲಹೆ ನೀಡಿದರೆ ಸಾಕು. ಅರ್ಥವಾಗಿಬಿಡುತ್ತದೆ. ಕಳೆದ ಆರು ವರ್ಷಗಳಲ್ಲಿ ಪ್ರಜಾತಂತ್ರ ಮೌಲ್ಯಗಳನ್ನು ಹಿಮಾಲಯದೆತ್ತರದಲ್ಲಿಟ್ಟು ವಿಶ್ವಮಾನ್ಯತೆ ಪಡೆದಿದ್ದ ಭಾರತದ ಆಡಳಿತ ವ್ಯವಸ್ಥೆ, ನ್ಯಾಯ ವ್ಯವಸ್ಥೆ ಮತ್ತು ಪ್ರಭುತ್ವಕ್ಕೆ ಇಂದು 1975ರ ಕರಾಳ ಛಾಯೆ ಆವರಿಸಿದಂತೆ ಕಾಣುತ್ತಿದೆ !!! ಈ ಹಿನ್ನೆಲೆಯಲ್ಲೇ ಮೇಲಿನ ಗಾದೆ ಮಾತು ಸಹ ನೆನಪಾಗುತ್ತಿದೆ.

ಜನಸಾಮಾನ್ಯರ ಪರಿಭಾಷೆಯಲ್ಲಿ ಬಚ್ಚಲುಬಾಯಿ ಎಂಬ ಪದವನ್ನು ಬಳಸುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಈ ಬಚ್ಚಲು ಬಾಯಿ ಎಂಬ ಪದದ ಅರ್ಥವನ್ನೂ ನಮ್ಮ ರಾಜಕೀಯ ನಾಯಕರುಗಳು ಮನವರಿಕೆ ಮಾಡಿಕೊಟ್ಟಿದ್ದಾರೆ. ಭಾರತ ಸ್ವಚ್ಚವಾಗುತ್ತಿದೆ ಆದರೆ ಅಧಿಕಾರ ರಾಜಕಾರಣದ ವಾರಸುದಾರರ, ಜನಪ್ರತಿನಿಧಿಗಳ ಬಚ್ಚಲು ಬಾಯಿ ಸಂಸ್ಕøತಿಯಿಂದ ಸಮಸ್ತ ಭಾರತವೇ ಕೊಳಕು ಎನಿಸುತ್ತಿದೆ. ಬಹುಶಃ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತವನ್ನು ಕೊಳಕು ಎಂದಾಗ ಇದೂ ಅವರ ಮನಸಿನಲ್ಲಿದ್ದಿರಬಹುದು ಈ ಹೊಲಸು ರಾಜಕಾರಣದ ಆಂತರಿಕ ಮಾಲಿನ್ಯವನ್ನು, ಬಾಹ್ಯ ಸ್ವರೂಪದ ತ್ಯಾಜ್ಯವನ್ನು ಹೊರಹಾಕಿ, ಪ್ರಜೆಗಳಲ್ಲಿ ಪ್ರಜಾತಂತ್ರ ಮೌಲ್ಯಗಳ ಬಗ್ಗೆ ಸುಪ್ರಜ್ಞೆ ಮೂಡಿಸುವ ಗುರುತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಡಿಜಿಟಲ್ ಯುಗದಲ್ಲಿ ಇದು ವಿದ್ಯುನ್ಮಾನ ಸುದ್ದಿಮನೆಗಳ ಆದ್ಯತೆಯೂ ಆಗಬೇಕಿದೆ.

ಇಂತಹ ಒಂದು ಪ್ರಯತ್ನಕ್ಕೆ ಅವಕಾಶವನ್ನೂ ನೀಡದಂತೆ ಮಾಧ್ಯಮ ಜಗತ್ತನ್ನೇ ಘನತ್ಯಾಜ್ಯ ಶಿಖರವನ್ನಾಗಿ ಮಾಡುವುದರಲ್ಲಿ ತಮ್ಮದೇ ಆದ ಕೊಡುಗೆ ಸಲ್ಲಿಸಿರುವ ಸುದ್ದಿವಾಹಿನಿಯ ಸಂಪಾದಕ ಅರ್ನಾಬ್ ಗೋಸ್ವಾಮಿ ಇಂದು ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಮುಂಜಾನೆಯ ಹೊತ್ತಿನಲ್ಲಿ, ಯಾವುದೇ ಪೂರ್ವ ಸೂಚನೆ ಇಲ್ಲದೆ, ಏಕಾಏಕಿ ಮನೆಗೆ ನುಗ್ಗಿ, ಮೂರು ವರ್ಷದ ಹಿಂದಿನ ಆತ್ಮಹತ್ಯೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವ ರೀತಿ ಒಪ್ಪುವಂತಹುದಲ್ಲ.   
ಟಿ ಆರ್ ಪಿ  ಹಗರಣದಲ್ಲಿ ಗೋಸ್ವಾಮಿಯ ವಿರುದ್ಧ ಗುರುತರ ಆರೋಪಗಳು ಇರುವುದನ್ನೂ ಮರೆಯುವಂತಿಲ್ಲ. ಆದರೆ ಇಂದಿನ ಘಟನೆ ಮುಂಬೈ ಪೊಲೀಸರ ಉದ್ಧಟತನ, ಮಹಾರಾಷ್ಟ್ರ ಸರ್ಕಾರದ ಪ್ರಜಾತಂತ್ರ ವಿರೋಧಿ ಧೋರಣೆಯ ಸಂಕೇತ.

ನಿಜ, ಆದರೆ ಹೀಗೆ ಹೇಳುವ ನೈತಿಕ ಹಕ್ಕು ಮತ್ತು ಹೊಣೆಗಾರಿಕೆ ಇರುವ ರಾಜಕೀಯ ನಾಯಕರು ನಮ್ಮ ನಡುವೆ ಇದ್ದಾರೆಯೇ ? ಗೋಸ್ವಾಮಿಯ ಬಂಧನದ ನಂತರ ರಿಪಬ್ಲಿಕ್ ವಾಹಿನಿಯ ನಿರೂಪಕರು ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದುದನ್ನು ( ಸುದ್ದಿಮನೆಯ ಕೂಗುಮಾರಿ ಪರಿಭಾಷೆಯಲ್ಲಿ ಅರಚುತ್ತಿದ್ದುದು ಎಂದು ಓದಿಕೊಳ್ಳಬಹುದು) ಕಂಡು “ ಭೂತದ,,,,,” ಗಾದೆ ನೆನಪಾಯಿತು. ಈ ಗಾದೆಯ ಬಗ್ಗೆಯೇ ಅಸಹ್ಯ ಬರುವಂತಾಗಿದ್ದು ಕೆಲವು ಕೇಂದ್ರ ಬಿಜೆಪಿ ಸಚಿವರ ಟ್ವಿಟರ್ ಸಂದೇಶಗಳನ್ನು ಕಂಡು. 

ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ “ ಹಿರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿಯ ಬಂಧನ ಖಂಡನಾರ್ಹವಾಗಿದ್ದು, ಚಿಂತೆಗೀಡುಮಾಡುವ ವಿಚಾರವಾಗಿದೆ. ನಾವು 1975ರ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆವು ”
ಕೇಂದ್ರ ಗೃಹ ಸಚಿವ ಅಮಿತ್‍ಶಾ “ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸುವ ಮೂಲಕ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಪ್ರಜಾತಂತ್ರಕ್ಕೆ ಅವಮಾನ ಮಾಡಿವೆ. ರಿಪಬ್ಲಿಕ್ ಟಿವಿ ವಿರುದ್ಧ ಅಧಿಕಾರ ದುರುಪಯೋಗ ಮಾಡಿದೆ. ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಸ್ತಂಭದ ಮೇಲೆ ಆಕ್ರಮಣ ನಡೆಸುವ ಮೂಲಕ ತುರ್ತುಪರಿಸ್ಥಿತಿಯನ್ನು ನೆನಪಿಸಿದೆ ”.
ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಪ್ರಕಾಶ್ ಜಾವಢೇಕರ್ “ ಮಹಾರಾಷ್ಟ್ರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದಿರುವ ಆಕ್ರಮಣವನ್ನು ನಾವು ಖಂಡಿಸುತ್ತೇವೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇದೇ ರೀತಿ ನಡೆಯುತ್ತಿದ್ದುದನ್ನು ಇದು ನೆನಪಿಸುತ್ತದೆ.”

ಈ ಮೂರೂ ಅಣಿಮುತ್ತುಗಳನ್ನು ಕೇಳಿಸಿಕೊಳ್ಳುವ ಕಿವಿಗಳೇ ಧನ್ಯ ಅಲ್ಲವೇ ? ನಿಜ, ಮಹಾರಾಷ್ಟ್ರ ಪೊಲೀಸರ ನಡೆ ಅಕ್ಷಮ್ಯ, ಸರ್ಕಾರದ ಧೋರಣೆ ಖಂಡನಾರ್ಹ ಆದರೆ ಶಿವಸೇನೆ ಪಳಗಿರುವ ಗರಡಿಯಲ್ಲೇ ಈ ಮೂವರೂ ನಾಯಕರು ಪಳಗಿರುವುದಲ್ಲವೇ ? ಅರ್ನಾಬ್ ಗೋಸ್ವಾಮಿಯ ವಿರುದ್ಧ ಗಂಭೀರ ಆರೋಪಗಳು ಇದ್ದುದೇ ಆದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಇದು ಶಿವಸೇನೆಯ ಸಂಸ್ಕೃತಿಗೆ ಹೊರತಾದದ್ದು ಎನ್ನುವುದನ್ನು ಬಿಜೆಪಿ ನಾಯಕರು ಮರೆತಿದ್ದಾರೆಯೇ ? ಇಂದು ಶಿವಸೇನೆ ಕಾಂಗ್ರೆಸ್ ಬಾಹುಗಳಲ್ಲಿದೆ. ಆದರೆ ಹುಟ್ಟಿದ ದಿನದಿಂದಲೂ ಬೆಳೆದಿದ್ದು ಸಂಘಪರಿವಾರದ ಮಡಿಲಲ್ಲೇ           ಅಲ್ಲವೇ ? 

ಈ ಗೋಸುಂಬೆಗಳನ್ನು ಬದಿಗಿಟ್ಟು ಭಾರತದ ಪ್ರಸ್ತುತ ಸನ್ನಿವೇಶವನ್ನು ಒಮ್ಮೆ ಗಮನಿಸೋಣ. ಇತ್ತೀಚೆಗೆ ತಾನೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದ ಪವರ್ ಟಿವಿ ವಾಹಿನಿಯನ್ನು ಮಾನ್ಯ ಮುಖ್ಯಮಂತ್ರಿಯವರು ಮುಚ್ಚಿಸಿಬಿಟ್ಟರು. ಈಗ ಮತ್ತೊಂದು ಹೆಸರಿನಲ್ಲಿ ಆರಂಭವಾಗಿದ್ದರೂ ಬಾಯಿ ಮುಚ್ಚಿಸಿದಂತೆ ಕಾಣುತ್ತಿದೆ. ಮಾಧ್ಯಮ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಇವೆಲ್ಲವನ್ನೂ ಗೌರವಿಸುತ್ತಲೇ ಅರ್ನಾಬ್ ಅವರನ್ನು ಬಂಧಿಸಿದ ರೀತಿಯನ್ನು ಖಂಡಿಸೋಣ. ಆದರೆ ದೇಶಾದ್ಯಂತ ಪತ್ರಕರ್ತರ ವಿರುದ್ಧ ರಣಬೇಟೆಯಾಡಿದ ಕೇಂದ್ರ ಸರ್ಕಾರದ ಕ್ರಮಗಳನ್ನು ಮೇಜು ಕುಟ್ಟಿ ಸ್ವಾಗತಿಸುತ್ತಾ ಭಟ್ಟಂಗಿಯಂತೆ ಪ್ರಭುತ್ವದ ಹೆಜ್ಜೆಗೆ ಗೆಜ್ಜೆಯಾಗಿ, ತಮ್ಮ ಪತ್ರಿಕಾ ವೃತ್ತಿಧರ್ಮವನ್ನೂ ಮರೆತು ವರ್ತಿಸಿದ ಅರ್ನಾಬ್ ಗೋಸ್ವಾಮಿಯಾಗಲೀ ಅಥವಾ ಇತರ ಬಿಜೆಪಿ ನಾಯಕರಾಗಲೀ ಈ ಪ್ರಕರಣದ ಬಗ್ಗೆ ಕನಿಷ್ಟ ಮಾತನಾಡುವ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆಯೇ ? ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ.

ಅರ್ನಾಬ್ ಗೋಸ್ವಾಮಿಯನ್ನು ಮೂರು ವರ್ಷದ ಹಿಂದಿನ ಆತ್ಮಹತ್ಯೆಯ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಿರುವುದೇ ಮಹಾರಾಷ್ಟ್ರ ಸರ್ಕಾರದ ಘೋರ ಅಪರಾಧ ಎಂದಾದರೆ, ಸುಮ್ಮನೆ ಗುಜರಾತ್‍ನ ಹಿರಿಯ ಅಧಿಕಾರಿ ಸಂಜೀವ್ ಭಟ್ ಅವರನ್ನು ನೆನೆಯಿರಿ. ಮೂವತ್ತು ವರ್ಷದ ಹಿಂದಿನ , ಮುಚ್ಚಿಹೋಗಿದ್ದ ಪ್ರಕರಣದ ಕಡತವನ್ನು ಹೆಕ್ಕಿ ತೆಗೆದು ಅವರನ್ನು ಬಂಧಿಸಿದಾಗ ಭಾರತದ ಎಷ್ಟು ಸುದ್ದಿಮನೆಗಳು ವಿರೋಧಿಸಿದ್ದವು ? ಮಾನ್ಯ ಗೋಸ್ವಾಮಿ ಎಲ್ಲಿದ್ದರು ಸ್ವಾಮಿ ? ಭಾರತದ ಜನಸಾಮಾನ್ಯರು ಮಾಸ್ಕ್ ಧರಿಸುತ್ತಿರುವುದು ಕೊರೋನಾ ಬಂದ ನಂತರ. ಭಾರತದ ಬಹುತೇಕ ಸುದ್ದಿಮಾಧ್ಯಮಗಳು 2014ರಿಂದಲೇ ಮಾಸ್ಕ್ ಧರಿಸಲಾರಂಭಿಸಿವೆ. 

ಸ್ವತಂತ್ರ ಭಾರತದ ಕಾನೂನು ವ್ಯವಸ್ಥೆಯಲ್ಲಿ ಎಫ್‍ಐಆರ್ ಎಂಬ ಪದ ಜನಸಾಮಾನ್ಯರ ಅರಿವಿಗೆ ನಿಲುಕದಷ್ಟು ಅಪರೂಪವಾಗಿತ್ತು. ಯಾವುದೋ ಗಂಭೀರ ಅಪರಾಧಗಳಲ್ಲಿ ಮಾತ್ರ ಈ ಪದ ಕೇಳಿಬರುತ್ತಿತ್ತು. ಆದರೆ ಕಳೆದ ಆರು ವರ್ಷಗಳಲ್ಲಿ ಎಫ್‍ಐಆರ್ ಎನ್ನುವುದು ಸಂತೆಯಲ್ಲಿನ ಸರಕಿನಂತೆ ಕಾಣುತ್ತಿದೆ. ದೇಶದ್ರೋಹದ ಆರೋಪ ಮತ್ತು ಎಫ್‍ಐಆರ್ ಅಧಿಕಾರಸ್ಥರ ಬತ್ತಳಿಕೆಯಲ್ಲಿರುವ ಸುಲಭ ಅಸ್ತ್ರಗಳಾಗಿರುವುದರಿಂದಲೇ ಕೊರೋನಾ ಸಂದರ್ಭದಲ್ಲೇ 55 ಪತ್ರಕರ್ತರ ವಿರುದ್ಧ 22 ಎಫ್‍ಐಆರ್ ದಾಖಲಿಸಲಾಗಿದೆ. ಮಾರ್ಚ್ 25 ರಿಂದ ಜೂನ್ 30ರ ಅವಧಿಯಲ್ಲಿ ಕೋವಿದ್19 ವರದಿಗಳಿಗೆ ಸಂಬಂಧಪಟ್ಟಂತೆ ಇಷ್ಟು ಎಫ್‍ಐಆರ್‍ ಗಳನ್ನು ಪತ್ರಕರ್ತರ ವಿರುದ್ಧ ದಾಖಲಿಸಲಾಗಿದೆ.

ದ ವೈರ್ ಪತ್ರಿಕೆಯ ಸಿದ್ಧಾರ್ಥ ವರದರಾಜನ್, ವಿನೋದ್ ದುವಾ, ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಸಂಸ್ಥೆಯ ಮಾಜಿ ನಿರ್ದೇಶಕ ಮತ್ತು ಅಂಕಣಕಾರ ಆಕರ್ ಪಟೇಲ್, ಸ್ಕ್ರೋಲ್ ಪತ್ರಿಕೆಯ ಸುಪ್ರಿಯಾ ಶರ್ಮ ಇವರು ಕೇಂದ್ರ ಸರ್ಕಾರದ ಪ್ರಹಾರಕ್ಕೆ ಬಲಿಯಾಗುತ್ತಿದ್ದಾರೆ. ಸುಪ್ರಿಯಾ ಶರ್ಮ ಅವರ ಅಪರಾಧ ಏನು ಗೊತ್ತೇ ? ಪ್ರಧಾನಮಂತ್ರಿ ಮೋದಿ ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ದತ್ತುಪಡೆದಿರುವ ವಾರಣಾಸಿಯ ದೊಹಾರಿ ಗ್ರಾಮದಲ್ಲಿನ ಜನಜೀವನವನ್ನು ತೆರೆದಿಟ್ಟಿದ್ದು. ಉತ್ತರಪ್ರದೇಶದಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ವರದಿ ಮಾಡಿದ್ದ ಪವನ್ ಕುಮಾರ್ ಜೈಸ್ವಾಲ್ ಮತ್ತೋರ್ವ ಎಫ್‍ಐಆರ್ ಬಲಿ. ಕೊರೋನಾ ಸಂದರ್ಭದಲ್ಲಿ ಮಹಾರಾಷ್ಟ್ರದ ವಲಸೆ ಕಾರ್ಮಿಕರ ಸಮಸ್ಯೆಗೆ ಕೋಮು ಬಣ್ಣ ನೀಡಿದ್ದ ಅರ್ನಾಬ್ ವಿರುದ್ಧ ದಾಖಲಿಸಿದ್ದ ಎಫ್‍ಐಆರ್ ಮುಂಬೈ ಹೈಕೋರ್ಟ್ ಕೃಪೆಯಿಂದ ರದ್ದಾಗಿದೆ. ಸೂಫಿ ಸಂತ ಮೊಯಿನುದ್ದಿನ್ ಕ್ರಿಸ್ಟಿಯನ್ನು ದರೋಡೆಕೋರ ಎಂದು ಅವಮಾನಿಸಿದ ಅಮೀಶ್ ದೇವಗನ್ ಸಹ ಕೋರ್ಟ್ ಕೃಪೆಗೆ ಪಾತ್ರರಾಗಿದ್ದಾರೆ. ಆದರೆ ತಮ್ಮ ಪತ್ರಿಕಾ ಧರ್ಮ ಪಾಲಿಸುತ್ತಾ ಜನಸಾಮಾನ್ಯರಿಗೆ ಸತ್ಯ ಹೇಳುವ ಆಕರ್ ಪಟೇಲ್, ವಿನೋದ್ ದುವಾ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ. 

ಅರ್ನಾಬ್ ಗೋಸ್ವಾಮಿ ಬಂಧನದ ವೈಖರಿಯನ್ನು ಖಂಡಿಸೋಣ. ಬಂಧನಕ್ಕೆ ಕಾರಣಗಳಿದ್ದರೆ ಬಿಡುಗಡೆಗೂ ಕಾರಣಗಳಿರುತ್ತವೆ. ಎಲ್ಲವೂ ಅಧಿಕಾರ ಪೀಠದ ಕೃಪೆಯನ್ನು ಆಧರಿಸಿರುತ್ತದೆ. ಯಾವುದೇ ಆರೋಪ ಇಲ್ಲದೆ, ವಾರಂಟ್ ಇಲ್ಲದೆ, ಏಕಾಏಕಿ ಬಂಧಿಸುವುದು ಘೋರ ಅಪರಾಧವೇನೋ ಹೌದು. ಇದು ಕಾನೂನು, ಸಂವಿಧಾನ, ಪೊಲೀಸ್ ನಿಯಮಾವಳಿ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡುವವರಿಗೆ ಅನ್ವಯಿಸುವ ಮಾತು. ಭೀಮಾ ಕೊರೆಗಾಂವ್ ಪ್ರಕರಣದ ಹಿನ್ನೆಲೆಯಲ್ಲಿ ಆನಂದ್ ತೇಲ್ತುಂಬ್ಡೆಯವರನ್ನು ಬಂಧಿಸಿದ ರೀತಿ ಜಗಜ್ಜಾಹೀರಾಗಿದೆ. ಈ ಬಂಧನದ ಸಮಯದಲ್ಲಿ ಗೋಸ್ವಾಮಿಯವರ ಕೂಗುಮಾರಿ ಸುದ್ದಿವಾಚನವನ್ನು  ಪ್ರಜ್ಞೆ ಇರುವವರು ಮರೆತಿರಲಾರರು. ಇತ್ತೀಚೆಗೆ 83ರ ವೃದ್ಧ, ಸಾಮಾಜಿಕ ಕಾರ್ಯಕರ್ತರಾದ ಸ್ಟಾನ್ ಸ್ವಾಮಿಯವರನ್ನು ಬಂಧಿಸಿದಾಗ, ಸುಧಾ ಭರದ್ವಾಜ್, ವರಾವರರಾವ್, ಉಮರ್ ಖಲೀದ್, ಗರ್ಭಿಣಿ ಮಹಿಳೆ ಸಫೂರ ಜರ್ಗರ್ ಅವರನ್ನು ಬಂಧಿಸಿದಾಗ ಗೋಸ್ವಾಮಿಯಾಗಲೀ, ತುರ್ತುಪರಿಸ್ಥಿತಿಯಲ್ಲಿ ಹೋರಾಡಿದ, ಇಂದಿನ ಟ್ವಿಟರ್ ವೀರರಾಗಲೀ ಖಂಡಿಸಿದ್ದರೇ ? ಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಒಂದು ಅಂಗ ಯಾರನ್ನೋ ನಗರ ನಕ್ಸಲರು ಎಂದು ಹೇಳಿಬಿಟ್ಟರೆ ಅವರನ್ನು ಯಾವ ಹೊತ್ತಿನಲ್ಲಾದರೂ, ಯಾವ ರೀತಿಯಲ್ಲಾದರೂ ಬಂಧಿಸಬಹುದು ಎಂದು ಸಂವಿಧಾನದಲ್ಲಿ                 ಹೇಳಲಾಗಿದೆಯೇ ? 

ಇದು ವ್ಯಕ್ತಿ ಅಥವಾ ಸಂಸ್ಥೆಯ ಪ್ರಶ್ನೆಯಲ್ಲ. ಮೌಲ್ಯಗಳ ಪ್ರಶ್ನೆ. ಗೋಸ್ವಾಮಿ ಯಾವ ಮೌಲ್ಯಗಳನ್ನು ಪ್ರತಿನಿಧಿಸುತ್ತಾರೆ, ಪ್ರತಿನಿಧಿಸುತ್ತಿದ್ದಾರೆ ? ಇವರನ್ನೇ ಅನುಕರಿಸಿ, ಅನುಸರಿಸುವ ಕನ್ನಡದ ಕೂಗುಮಾರಿ ಸುದ್ದಿಮನೆಗಳು ಯಾವ ಸಂಸ್ಕೃತಿಯನ್ನು ಅನುಸರಿಸುತ್ತಿವೆ ? ತುರ್ತುಪರಿಸ್ಥಿತಿಯಲ್ಲಿ ತಾವು ಪ್ರಜಾತಂತ್ರದ ಉಳಿವಿಗಾಗಿ ನಡೆಸಿದ ಹೋರಾಟವನ್ನು ಹೆಮ್ಮೆಯಿಂದ ನೆನೆಯುವ ಸಚಿವರು, ರಾಜಕೀಯ ನಾಯಕರು ಯಾವ ಸಂಸ್ಕೃತಿ ಅನುಸರಿಸುತ್ತಿದ್ದಾರೆ ? ಓರ್ವ ಗೋಸ್ವಾಮಿಯ ಬಂಧನದಿಂದ ತುರ್ತುಪರಿಸ್ಥಿತಿಯ ಛಾಯೆ ಕವಿದಂತೆ ಭಾವಿಸುವ ಕೇಂದ್ರ ಸಚಿವರಿಗೆ ಒಂದು ವರ್ಷದ ಕಾಲ ಗೃಹಬಂಧನದಲ್ಲಿದ್ದ ಕಾಶ್ಮೀರದ ಸಮಸ್ತ ಜನತೆ ಹೇಗೆ ಕಂಡಿದ್ದರು ? ಯಾವುದೇ ಅಪರಾಧ ಮಾಡದಿದ್ದರೂ ಸೆರೆಮನೆಯಲ್ಲಿರುವ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹೇಗೆ ಕಾಣುತ್ತಿದ್ದಾರೆ ? ನಡೆದಾಡುವ ಸ್ಥಿತಿಯಲ್ಲೂ ಇಲ್ಲದ ಸಾಯಿಬಾಬಾ ಅವರಂತಹ ವಿದ್ವಾಂಸರನ್ನು ಉಗ್ರಗಾಮಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿ, ಜಾಮೀನು ಸಹ ನೀಡದೆ ಇರುವ ಆಡಳಿತ ವ್ಯವಸ್ಥೆಗೆ ಮತ್ತು ಅಧಿಕಾರಪೀಠದ ವಾರಸುದಾರರಿಗೆ ಗೋಸ್ವಾಮಿಯ ಬಂಧನ ತುರ್ತುಪರಿಸ್ಥಿತಿಯನ್ನು ನೆನಪಿಸುವುದೆಂದರೆ, ಭಾರತ ಮೌಲಿಕವಾಗಿ, ನೈತಿಕವಾಗಿ ಹಾದಿ ತಪ್ಪಿದೆ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. 

“ ಬಂಧಿಸಲಿ ಬಿಡಿ, ತಪ್ಪು ಮಾಡದಿದ್ದರೆ ಬಿಡುಗಡೆಯಾಗುತ್ತಾರೆ,,,,,” ಮಧ್ಯಮ ವರ್ಗಗಳ ಹಿತವಲಯದಲ್ಲಿ, ಬೌದ್ಧಿಕ ವಲಯದಲ್ಲಿ, ಬುದ್ಧಿಜೀವಿಗಳಲ್ಲದವರಲ್ಲಿ ಮತ್ತು ವಂದಿಮಾಗಧ ಸುದ್ದಿಮನೆಗಳಲ್ಲಿ ಕೇಳಿಬರುವ ಈ ಹೇಳಿಕೆ ಅರ್ನಾಬ್ ಗೋಸ್ವಾಮಿಗೂ ಅನ್ವಯಿಸುತ್ತದೆ. ಅವರಿಗೆ ಪ್ರಭುತ್ವವೂ ನೆರವಾಗಬಹುದು, ನ್ಯಾಯಾಂಗವೂ ನೆರವಾಗಬಹುದು. ಇಂದಿನ ಭಾರತ ಕೇವಲ ಸಾಂವಿಧಾನಿಕ ಮೌಲ್ಯಗಳನ್ನು ಮಾತ್ರ ಕಳೆದುಕೊಳ್ಳುತ್ತಿಲ್ಲ, ಪ್ರಜಾತಂತ್ರ ಮೌಲ್ಯಗಳನ್ನೂ ಕಳೆದುಕೊಂಡಿದೆ. ಈ ಪ್ರಜ್ಞೆ ತಮ್ಮೊಳಗಿದ್ದು, ತಾವು ಪ್ರತಿನಿಧಿಸುವ  “ಪತ್ರಿಕೋದ್ಯಮ ಅಥವಾ ಮಾಧ್ಯಮ ” ಎನ್ನುವ ಮೌಲ್ಯಯುತ ಸ್ತಂಭಕ್ಕೆ ಬದ್ಧತೆಯಿಂದ ನಡೆದುಕೊಂಡಿದ್ದರೆ ಬಹುಶಃ ಅರ್ನಾಬ್ ಗೋಸ್ವಾಮಿ ಜನತೆಯ ಅನುಕಂಪಕ್ಕೆ ಅರ್ಹರಾಗುತ್ತಿದ್ದರೇನೋ !

ನೆನ್ನೆ ಬಿಜೆಪಿ-ಶಿವಸೇನೆ ಮಾಡಿರುವುದನ್ನೇ ಇಂದು ಶಿವಸೇನೆ-ಕಾಂಗ್ರೆಸ್ ಸರ್ಕಾರ ಮಾಡಿದೆ. ಇದು ಒಂದು ಸರ್ಕಾರ ಅಥವಾ ಒಬ್ಬ ಮುಖ್ಯಮಂತ್ರಿಯ ಪ್ರಶ್ನೆಯಲ್ಲ.. ಮೌಲ್ಯಗಳ ಪ್ರಶ್ನೆ. ಮೌಲ್ಯ ಎಂದರೇನು ? ಇದು ಇಂದಿನ ಸಂದರ್ಭದಲ್ಲಿ ಕಾಡಬೇಕಾದ ಗಹನವಾದ ಪ್ರಶ್ನೆ.
-0-0-0-

ರಾಜ್ಯ ನಾಗರಿಕ ಸೇವಾ ಅಧಿನಿಯಮ- 202೦ ಕರಡಿಗೆ ವಿರೋಧ

ಚಿಂತನ ಉ.ಕ 
ಸಹಯಾನ ಕೆರೆಕೋಣ
ಚಿಂತನ ರಂಗ ಅಧ್ಯಯನ ಕೇಂದ್ರ

ಪತ್ರಿಕಾ ಪ್ರಕಟಣೆ 

ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ ರಾಜ್ಯ ನಾಗರಿಕ ಸೇವಾ ಅಧಿನಿಯಮ- 202೦ ಇದು ಸಂಪೂರ್ಣವಾಗಿ  ಸರಕಾರಿ ನೌಕರರ ಸಾಹಿತ್ಯ, ಕಲೆ, ಸಾಂಸ್ಕೃತಿ ಅಭಿವ್ಯಕ್ತಿಯನ್ನೊಳಗೊಂಡ ಸೃಜನಶೀಲ ಚಟುವಟಿಕೆಯನ್ನೇ ಕಿತ್ತುಕೊಳ್ಳಲು ಮುಂದಾಗಿದೆ. ಈ ನಾಡಿನ ಎಚ್ಚೆತ್ತ ಪ್ರಜ್ಞೆ ಯಾಗಿ, ಸಂವಿಧಾನದ ಕಾವಲುಗಾರರಾಗಿ ಕೆಲಸ ಮಾಡುತ್ತಿರುವ ಈ ನಾಡಿನ ಕವಿ, ಬರಹಗಾರರ, ಕಲಾವಿದ ಮತ್ತು ನಟರ ಕೊಡುಗೆಯನ್ನು  ಗೌರವಿಸಲು ಒಪ್ಪದ ಈ ಕರಡು ಸಂವಿಧಾನ ವಿರೋಧಿಯಾದದ್ದು ಮತ್ತು ಸರ್ಕಾರಿ ನೌಕರರನ್ನು ಮತ್ತು ಅವರ ಕುಟುಂಬವನ್ನು ಸರಕಾರದ ಜೀತದಾಳಾಗಿಸುವ ಉದ್ದೇಶ ಹೊಂದಿರುವುದಾಗಿದೆ. ಹಾಗಾಗಿ ಚಿಂತನ ಉತ್ತರ ಕನ್ನಡ ಮತ್ತು ಸಹಯಾನ ಕೆರೆಕೋಣ ಮತ್ತು ಚಿಂತನ ರಂಗ ಅಧ್ಯಯನ ಕೇಂದ್ರ ಈ ಕರಡನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ ಮತ್ತು ಇದನ್ನು ಹಿಂತೆಗೆದುಕೊಳ್ಳಲು  ಆಗ್ರಹಿಸುತ್ತದೆ.

 ಈವರೆಗೆ ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಈ ನಿಯಮಾವಳಿಯನ್ನು  ತಿದ್ದುಪಡಿ ಮಾಡಿ ನೌಕರರ ಕುಟುಂಬವನ್ನು, ಅವರ ಅವಲಂಬಿತರನ್ನು ಇದರ ವ್ಯಾಪ್ತಿಗೆ ತಂದಿದೆ. ಮತ್ತು ಅವರು ಯಾವುದೇ ಹೋರಾಟ, ಪ್ರತಿಭಟನೆ, ಬರವಣಿಗೆಯಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ. ಹೀಗೆ ಸರ್ಕಾರಿ ನೌಕರರನ್ನು ಅವಲಂಬಿಸಿದ ಎಲ್ಲರೂ ಈ ಸೇವಾ ಅಧಿನಿಯಮದಲ್ಲಿ ಬರುವಂತೆ ಮಾಡಿರುವುದು ಕೂಡ ಹಾಸ್ಯಾಸ್ಪದವಾಗಿದೆ. 

ಭಾರತ ಸಂವಿಧಾನವು ವಿಧಿ ೧೯ರಡಿ ಭಾರತದ ಪ್ರಜೆಗಳಿಗೆ  ಕೊಡಮಾಡಿದ ಸ್ವಾತಂತ್ರ್ಯದ ಹಕ್ಕಿನಲ್ಲಿ "ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ"ವೂ ಒಂದು. ಹಾಗೆ ಅನುಚ್ಛೇದ 51 ಎ ದಲ್ಲಿ  ಪ್ರಜೆಗಳ ಕರ್ತವ್ಯದ ಬಗ್ಗೆ ಗಮನ ಸೆಳೆಯುತ್ತಾ "ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು ಇತರರಲ್ಲಿ ಬೆಳೆಸುವುದು" ಅತಿಮುಖ್ಯವಾದದ್ದು ಎಂದು ಹೇಳುತ್ತದೆ. 
ಆದರೆ ಈ ಕರಡಿನಲ್ಲಿ "ಯಾವುದೇ ರೀತಿಯ ಸಾಹಿತ್ಯಕ ಅಥವಾ ಕಲಾತ್ಮಕ ಅಥವಾ ವೈಜ್ಞಾನಿಕ ಕಾರ್ಯದಲ್ಲಿ ರೂಢಿಗತವಾಗಿ ತನ್ನನ್ನು ತೊಡಗಿಸಿಕೊಳ್ಳತಕ್ಕದ್ದಲ್ಲ" ಎಂದೂ  ಹೇಳುತ್ತದೆ. 
ಇನ್ನೊಂದೆಡೆ
 "ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸರ್ವೋಚ್ಛತೆಗೆ ಸ್ವತಃ ಬದ್ಧನಾಗಿರತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು" ಎಂದು ಸರಕಾರಿ ನೌಕರರ ವರ್ತನೆ ಬಗ್ಗೆ ಮೊದಲು ಹೇಳಿದ ಈ ಕರಡು ಆಳದಲ್ಲಿ ಸಂವಿಧಾನಕ್ಕೆ ವಿರೋಧಿಯಾದ, ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುವ ಅಜೆಂಡಾ ಹೊಂದಿದೆ. ಇದೊಂದು ಸಾಂಸ್ಕೃತಿಕ ಪ್ರಶ್ನೆ ಕೂಡ ಹೌದು. ಸಾಮಾನ್ಯ ಸರಕಾರಿ ನೌಕರರ ಮತ್ತು ನೌಕರಿಯಲ್ಲಿರುವ ಸಂವೇದನಾಶೀಲ ಲೇಖಕರು, ಕಲಾವಿದರ ಸ್ವಾತಂತ್ರವನ್ನು, ಅನ್ಯಾಯವನ್ನು ವಿರೋಧಿಸಿ ಮಾಡಬಹುದಾದ ಹೋರಾಟ, ಒತ್ತಾಯದಂತಹ ಸೌಲತ್ತುಗಳನ್ನು ಕಿತ್ತುಕೊಳ್ಳುವ ಈ ಕರಡು ವಾಪಸ್ ಆಗಬೇಕೆಂದು ಚಿಂತನ ಮತ್ತು ಸಹಯಾನ ಒತ್ತಾಯಿಸುತ್ತದೆ.

 ಬದುಕಿನಲ್ಲಿ ತಾನು ಮಾಡಿದ ಸಾಧನೆಗಾಗಿ ಗೌರವ ಪ್ರಶಸ್ತಿಗಳನ್ನು ಸ್ವೀಕರಿಸುವ ಅವಕಾಶವನ್ನು ಮತ್ತು ಸಂವಿಧಾನಬದ್ಧವಾಗಿ ತನಗೆ ಸಿಗಬೇಕಾದ ಹಕ್ಕುಗಳು ಮತ್ತು ಅವಕಾಶಗಳು ಸಿಗದಿದ್ದಾಗ ಅದರ ವಿರುದ್ಧ ತಾನು ಮಾಡಬಹುದಾದ ಪ್ರತಿಭಟನೆ, ಹಕ್ಕೊತ್ತಾಯದ ಕ್ರಮವನ್ನೂ ನಿಯಂತ್ರಿಸಲು ಹೊರಟಿರುವುದು ಖೇದಕರ. ಅದರಲ್ಲೂ ಎಲ್ಲರ ಹೋರಾಟದ ಮೂಲಕ ಗಳಿಸಿದ ರಾಜ್ಯೋತ್ಸವದ ಸಂದರ್ಭದಲ್ಲಿ ಇದನ್ನು ತಂದಿರುವುದು ಇಲಾಖೆಯ  ನೌಕರ ವಿರೋಧೀ, ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧೀ     ನಿಲುವಿಗೆ ಕೈಗನ್ನಡಿಯಾಗಿದೆ.
ಒಂದರ ಹಿಂದೊಂದರಂತೆ‌ ತರುತ್ತಿರುವ ಅವೈಜ್ಞಾನಿಕ ನೀತಿಗಳ ಜೊತೆ ಈಗ ಸಾಹಿತ್ಯ ಸಾಂಸ್ಕೃತಿಕ ಅಭಿವ್ಯಕ್ತಿಯ ಸ್ವಾತಂತ್ರ್ಯ ವನ್ನೂ ನಿಯಂತ್ರಿಸ ಹೊರಟಿರುವ ಕ್ರಮವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು  ಒತ್ತಾಯಿಸುತ್ತದೆ. ಮತ್ತು     ನಾಡಿನ ಸಂವೇದನಾಶೀಲ ಜನತೆ ಸರಕಾರವನ್ನು ಒತ್ತಾಯಿಸಬೇಕೆಂದು ಮನವಿ ಮಾಡುತ್ತದೆ.

 *ಶಾಂತಾರಾಮ ನಾಯಕ ಹಿಚ್ಕಡ* , ಅಧ್ಯಕ್ಷರು, ಸಹಯಾನ ಕೆರೆಕೋಣ.
 *ಕಿರಣ ಭಟ್* ಚಿಂ.ರಂ.ಅ.ಕೇಂದ್ರ 
 *ವಿಠ್ಠಲ ಭಂಡಾರಿ,*  ಸಂಚಾಲಕ, ಚಿಂತನ ಉತ್ತರ ಕನ್ನಡ

Friday 21 August 2020

ಆಟ ರೂಪುಗೊಂಡ ಮಾಟದ ಕುರಿತು- ಡಾ.ಶ್ರೀಪಾದ ಭಟ್

  ಆಟ ರೂಪುಗೊಂಡ ಮಾಟದ ಕುರಿತು

ತಾನು ಆಡುವ ಮಾತುಗಳನ್ನು ಮಂತ್ರದ0ತೇ ಪೋಣಿಸುವ, ಕೆತ್ತಿಡುವ ಪ್ರತಿ ಅಕ್ಷರದಲ್ಲಿಯೂ ಕಾವ್ಯವನ್ನು ಉಸಿರಾಡಿಸುವ, ವ್ಯಕ್ತಿ ಮತ್ತು ಸಮಾಜದ ಸ್ವಾಯತ್ತತೆ ಮತ್ತು ಸ್ವಾತಂತ್ರö್ಯದ ಸಮಾನ ಕಾಳಜಿಯನ್ನು ತನ್ನೆಲ್ಲ ಬರಹಗಳಲ್ಲಿ ಉಳಿಸಿಕೊಳ್ಳುತ್ತಿರುವ ಕಾವ್ಯಾ ಕಡಮೆ ನಾಗರಕಟ್ಟೆ ಇವಳ ನಾಟಕಗಳ ಸಂಕಲನಕ್ಕೆ ಸ್ವಾಗತ ಭಾಷಣ ಬರೆಯುತ್ತಿರುವದಕ್ಕೆ ಸಂತೋಷವಿದೆ ನನಗೆ. ಇಂದಿನ ಯುವತಲೆಮಾರು, ಮಾರುಕಟ್ಟೆಯ ಧಾವಂತದಲ್ಲಿ ತಲೆ ಮಾರಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕಾವ್ಯಳಂತಹ ಯುವ ಮನಸ್ಸು ಸೃಷ್ಟಿಸುವ ರೂಪಕಗಳ ಕುರಿತು ಖುಷಿಯಿದೆ ನನಗೆ. ಹೀಗಾಗಿ ತುಸು ಹೆಚ್ಚು ಉತ್ಸಾಹದಿಂದಲೇ ಮಾತನಾಡುತ್ತಿರುವೆ.

ಕಾವ್ಯಾಳ ಪ್ರಕಟವಾಗುತ್ತಿರುವ ಮೊದಲ ನಾಟಕಗಳ ಸಂಕಲನ ಇದು.  ಈ ಸಂಕಲನದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಪ್ರಥಮ ಪುರಸ್ಕಾರವನ್ನು ಪಡೆದ ‘ಆಟದೊಳಗೊಂದಾಟ’ ಮತ್ತು ದ್ವಿಪಾತ್ರಾಭಿನಯದ ‘ಡೋರ್ ನಂ ೮’ ಎಂಬ ಎರಡು ನಾಟಕಗಳಿವೆ.

ವಸ್ತು ಮತ್ತು ಅದರ ನಿರ್ವಹಣೆಯಲ್ಲಿ ರೂಢಿಗತವಾದ ಸಾಂಸ್ಥಿಕ ಜಡತೆಯನ್ನು ಮೀರುವ, ಕನ್ ವೆನ್ಷನಲ್ ಅಲ್ಲದ ಮಾರ್ಗವೊಂದರ ಪ್ರಾಮಾಣಿಕ ಹುಡುಕಾಟ ಇಲ್ಲಿದೆ. ಆಶಯ ಮತ್ತು ಆಕೃತಿಗಳೆರಡರಲ್ಲೂ ಹೊಸತನ್ನು ಕಾಣಿಸುವ, ಹೊಸ ಆಟ ಕಟ್ಟುವ ಧೈರ್ಯವನ್ನು ಮೈಮೇಲೆಳೆದುಕೊಂಡಿದೆ ಇದು.

‘ಆಟದೊಳಗೊಂದಾಟ’ದಲ್ಲಿ ಮನೆಮನೆಯ ಕತೆಯೇ ಇದೆ. ಕತೆ ತೋರುವ ಬಗೆ ಹೊಸದು. ಕುಟುಂಬ ವ್ಯವಸ್ಥೆಯ ಬಿರುಕುಗಳನ್ನು ಕಾಣಿಸುತ್ತಲೇ ಘಾಸಿಗೊಳ್ಳದಿರುವ ಸಂಬ0ಧಗಳ ಮಾದರಿಯ ಹುಡುಕಾಟ ಇದೆ ಇಲ್ಲಿ. ಬರಹಗಾರ್ತಿಯೊಬ್ಬಳು ರಚಿಸುತ್ತಿರುವ ನಾಟಕವೊಂದರಲ್ಲಿ ಅವಳದೇ ಕುಟುಂಬದ ಪ್ರತಿಬಿಂಬ ರೂಪು ಪಡೆಯಲು ಹವಣಿಸುತ್ತದೆ. ಆದರೆ ಅದನ್ನು ಹಾಗೆಯೇ ಆಗಗೊಡದೇ ಅದನ್ನು ಗತಿಬಿಂಬವಾಗಿಸಲು ಆಕೆ ಯತ್ನಿಸುತ್ತಾಳೆ ಮತ್ತು ರಚನೆ ಮುಂದುವರಿಯುತ್ತಲೇ ಇರುತ್ತದೆ.

ನಾಟಕಕಾರಳ ಕುಟುಂಬ ಮತ್ತು ಅವಳು ಚಿತ್ರಿಸುತ್ತಿರುವ ಕುಟುಂಬದ ಆಚೆಗೆ ಇನ್ನೊಂದು ನೋಟವಿದೆಯಲ್ಲಾ ಅದು ತುಂಬ ಸಹಾನುಭೂತಿಯದು ಇಲ್ಲಿ. ಬರಹಗಾರಳ ಕಣ್ಣಿನಿಂದ ಕುಟುಂಬವೊAದನ್ನು ನೋಡುತ್ತ, ಹಾಗೆ ನೋಡುತ್ತಿರುವ ಬರಹಗಾರ್ತಿಯ ಕುಟುಂಬವನ್ನೂ ಹೊರನಿಂತು ನೋಡುವ ಸಂಯಮ ಕಾವ್ಯಾಳಿಗಿದೆ. ಹೀಗಾಗಿಯೇ ನಾಟಕದ ಬಂಧಕ್ಕೊAದು ಸಂಕೀರ್ಣತೆಯೂ ಒದಗಿದೆ. ಇಲ್ಲಿಯ ಪ್ರತಿ (ಮಹಿಳಾ) ಪಾತ್ರಕ್ಕೂ ತನ್ನ ಬದುಕು, ವ್ಯಕ್ತಿತ್ವ, ಸಮಾಜ ಪಲ್ಲಟಗಳ ಅರಿವಿದೆ; ತಮ್ಮನ್ನು ತಾವು ನಿಂತು ನೋಡಿಕೊಳ್ಳುವ ಗುಣ ಇದೆ. ಸ್ವಾಭಿಮುಖಿ ನೋಟದ ಈ ಗುಣ ಪಾತ್ರಕ್ಕೆ ಮಾತ್ರವಲ್ಲ ಇಡೀ ನಾಟಕದ ಸಂವಿಧಾನಕ್ಕೇ ಇದೆ. ಲೇಖಕಿ ಪಾತ್ರಗಳ ಒಳಹೊಕ್ಕು ಅವನ್ನು ತನ್ನ ರಚನೆಗೆ ಒಗ್ಗಿಸಿಕೊಳ್ಳುತ್ತಿರುವ ಹೊತ್ತಿಗೇನೇ ಆ ಪಾತ್ರಗಳೂ ಅವಳ ಒಳಹೊಕ್ಕು ಆಟ ಕಟ್ಟುವ ವಿಧಾನವೇ ಘೋಷಣೆಯ ಮಟ್ಟದಿಂದ ನಾಟಕವನ್ನು ಎತ್ತಿವೆ. ಸಂಬAಧಗಳ ಸರಿ ತಪ್ಪುಗಳ ನಿರ್ಣಯಗಳ ನಡುವಿನ ಸತ್ಯದ ಹುಡುಕಾಟ ಮನೆಮನೆಯ ಕತೆಯ ಕಪ್ಪುಬಿಳುಪಿನ ಹಾದಿಯಿಂದ ಇವಳನ್ನು ತಪ್ಪಿಸಿವೆ.

ಕನ್ನಡ ನಾಟಕ ಪರಂಪರೆಯೊAದಿಗೆ ಕಾವ್ಯ ಸಂವಾದಿಸಿದ ಕ್ರಮದಲ್ಲಿಯೂ ವೈಶಿಷ್ಟö್ಯವಿದೆ. ಕಾರ್ನಾಡರ ‘ಮದುವೆ ಆಲ್ಬಂ’ ಮುಂತಾದ ಕುಟುಂಬ ನಾಟಕಗಳಿಗಿಂತಲೂ ಈ ನಾಟಕಗಳು ಸೂಕ್ಷö್ಮವಾಗಿವೆ. ಲಂಕೇಶರು ಕುಟುಂಬ ವ್ಯವಸ್ಥೆಯನ್ನು ಮನುಷ್ಯನ ಎಲ್ಲ ಕ್ಷÄದ್ರತೆಗಳ ಜತೆಗಿಟ್ಟು ನೋಡುತ್ತಾರೆ. ಅವರು ಕಟ್ಟಿದ ‘ಮನೆ ಮನೆ ಕತೆ’ ಹೊಸ ಮಾದರಿಯದೇ ಆಗಿದೆಯಾದರೂ ಅವರ ಸ್ವಭಾವವೇ ಆಗಿಹೋದ ಸಿನಿಕತೆಯ ನೋಟದಾಚೆ ಅವು ಬೆಳೆಯುವದಿಲ್ಲ. ಕಾವ್ಯಳ ರಚನೆ ಇದನ್ನೂ ಮೀರಿದೆ. ನಾಟಕವು ನಾಟಕದ ಕುರಿತು, ಪ್ರಕಾರವು ತನ್ನ ಪ್ರಕಾರದ ಕುರಿತು ಮಾಡಿಕೊಳ್ಳುವ ವಿಶ್ಲೇಷಣೆಯೂ ಪ್ರತಿಮಾತ್ಮಕವಾಗಿವೆ. ನಾಟಕಕಾರ, ಕವಿ, ಚಿತ್ರಕಾರ ಹೀಗೇ ಬೇರೆಬೇರೆ ‘ಏಸ್ಥೆಟಿಕ್' ನ ಪಾತ್ರಗಳÀನ್ನು ಬಳಸಿಕೊಂಡಿರುವದರಿAದ ಆಯಾ ಕ್ಷೇತ್ರದ ಸಾಮರ್ಥ್ಯ ಮೂಲವನ್ನೂ ಒಳಗೊಳ್ಳಲು ಇದು ಪ್ರಯತ್ನಿಸಿದೆ. ಬಹುತೇಕ ವಾಸ್ತವವಾದಿ ನಾಟಕಗಳು ಕಾಲ ದೇಶಗಳ ಹಂಗನ್ನು ದಾಟುವದಿಲ್ಲ. ಆದರೆ ಕಾವ್ಯ, ವಾಸ್ತವವನ್ನು ಹಿಡಿಯುವ ಕ್ರಮವೇ ಕವಿತೆಯದಾಗಿರುವದರಿಂದ ಇದಕ್ಕೊಂದು ಜಿಗಿತವಿದೆ. ಈ ಮಾತನ್ನು ಇಲ್ಲಿಯ ಎರಡೂ ನಾಟಕಗಳಿಗೂ ಅನ್ವಯಿಸಿ ಹೇಳಬಹುದು.

ಆಟದ ಒಳ ಹೊಕ್ಕು ಆಟವನ್ನು ಕಾಣುತ್ತ ಅದನ್ನು ಕಟ್ಟ ಹೊರಡುವ ಒಂದು ಧ್ಯಾನಸ್ಥ ದಾರಿಯತ್ತ ಕಾವ್ಯಾ ಚಲಿಸುತ್ತಿದ್ದಾಳೆ. ಇಲ್ಲಿ ಅದು ಸಿದ್ಧಿಸಿದೆ ಅಂತಲ್ಲ. ಹಾದಿ ಸರಿಯಾಗಿದೆ ಅಂತ. ಈ ಪಯಣದ ಹಾದಿಯಲ್ಲಿ ತಿದ್ದಿಕೊಳ್ಳುವದಕ್ಕೆ ಅಗತ್ಯವಾದ ಕೆಲ ಸಂಗತಿಗಳೂ ಇವೆ. ನಾಟಕ ಇನ್ನಷ್ಟು ವಿಲಂಬಿತ ಗತಿಯನ್ನು ಬೇಡುತ್ತದೆ. ಆಟ ನಿಧಾನಕ್ಕೇ ಶುರುವಾಗುತ್ತದೆ ಆದರೆ ಬೆಳೆಯುವ ಸಂದರ್ಭದಲ್ಲಿ ತುಸು ಅವಸರ ಕಾಣಿಸುತ್ತದೆ. ಇನ್ನಷ್ಟು ಬೆಳವಣಿಗೆ ಪ್ರತಿ ಸನ್ನಿವೇಶಕ್ಕೂ ಅಗತ್ಯ ಅನಿಸುತ್ತದೆ. ಪಾತ್ರಗಳಿಗೆ ಅವು ಈಗಿನ ಮನಸ್ಥಿತಿ ತಲುಪಲು ತುಸು ಕಾಲಾವಕಾಶ ಬೇಕಿತ್ತೆನಿಸುತ್ತದೆ. ನಾವಿರುವುದೇ ಅವಸರದ ಕಾಲವಾದ್ದರಿಂದ, ಅವಸರ ಕಾಲದ ಉತ್ಪನ್ನಗಳೂ ಸಾವಧಾನ ಸಾಧಿಸಿಕೊಳ್ಳುವದು ಕಷ್ಟ ಎನ್ನುತ್ತಾವೇನೋ ಇವು ಗೊತ್ತಿಲ್ಲ. ಅಪ್ಪಟ ಆಧುನಿಕ ಕಾಲದ ಲಯವು ಇದೇ ಏನೋ? ಆದರೂ ಆಧುನಿಕ ಕಾಲದ ಅವಸರದ ಬದುಕಿನ ಪ್ರವೃತ್ತಿಗಳನ್ನು ಮನಗಾಣಿಸಲು ಸಂವಹನದ ಅಗತ್ಯಕ್ಕಾಗಿ ತುಸು ಸಾವಧಾನ ಬೇಕು. ಇಲ್ಲಿ ಕೆಲವೆಡೆ ರಂಗ ಸೂಚನೆಗಳು ತುಸು ಹೆಚ್ಚೇ ಇವೆ. ಕೆಲವೆಡೆ ಎಲ್ಲವನ್ನೂ ರೂಪಕವಾಗಿಸುವ ತಹತಹವೂ ಇದೆ. ಆದರೂ ರೇಷ್ಮೆ ಬಟ್ಟೆಯೊಳಗೆ ಸುತ್ತಿಟ್ಟ ಹೊಲಸನ್ನ ಸುಗಂಧ ಪೂಸಿ ಮರೆಮಾಚುವ ಸ್ಥಿತಿಯ ಸಂಬAಧಗಳ, ವಿವಾಹದಂತಹ ಸಾಂಸ್ಥಿಕ ವ್ಯವಸ್ಥೆಯ ಪ್ರತಿಮೆಯನ್ನ ಕ್ಲಾಸಿಕ್ ಐರನಿಯಾಗಿ ರೂಪಿಸಲು ಹಾಗೂ ಅವನ್ನು ಕಟ್ಟಿಕೊಡಲು ಬಳಸಿದ ಮಾದರಿ ‘ಸುಡುವ ದಿವ್ಯವ ಹಿಡಿವ' ಘನತೆಯ ಯತ್ನವೇ ಸರಿ. 'ಬದುಕಿನಲ್ಲಿಲ್ಲದ ಅಂತ್ಯವನ್ನು ಕತೆಯಲ್ಲಿ ಕಾಣಹೊರಡುವದರಿಂದಲೇ ಕೃತಿಗಳಿಗೆ ಅಂತ್ಯ ಹುಡುಕೋದು ಕಷ್ಟ, 'ಮನುಷ್ಯ ಸಹಜವಾದ ಯಾವ ಗುಣವೂ ಕೆಟ್ಟದ್ದಲ್ಲ' ಎಂಬ ವಿವೇಕ ಕಾವ್ಯಳ ಬೆನ್ನಿಗಿದೆ ಅನ್ನೋದೇ ಸಂತೋಷ.

ದ್ವಿಪಾತ್ರಾಭಿನಯದ ‘ಡೋರ್ ನಂ ೮’ ಇನ್ನೂ ಸಂಕೀರ್ಣವಾದ ಹೊಸ ಕಾಲದ ಪಠ್ಯದ ಸಮರ್ಥ ಪ್ರತಿನಿಧಿ ಅನಿಸುತ್ತದೆ. ಪುರಾಣ ಕಾಲದಿಂದ ಇಂದಿನವರೆಗಿನ ಗಂಡು ಮನಸ್ಥಿತಿಯನ್ನು ಅದರೆಲ್ಲ ತ್ರಸ್ತ ಗುಣವನ್ನು ಇಲ್ಲಿಯೂ ಹೊಸದೊಂದು ಆಟದಲ್ಲಿ ಕಟ್ಟಲಾಗಿದೆ. ಹಲವು ಗೊಲ್ಲರ ತುಟಿ ತಾಗಬೇಕಾದ ಕೊಳಲಿನ ಅಗತ್ಯದ ಕುರಿತು ನಾಟಕ ಮಾತನಾಡುತ್ತದೆ. 

ನಗರವೊಂದರ ಚಾಳದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಕೃಷ್ಣ ಅರ್ಜುನ ವೇಷಧಾರಿಗಳಿಬ್ಬರ ನಡುವಿನ ಮಾತು-ಕತೆಯೇ ಇದರ ಹಂದರ. ಈ ಮಾತುಕತೆಯಲ್ಲಿ ಸಿಗುವ ಕಥನ ಸಶಕ್ತವಾದದ್ದು. ಈ ವೇಷಧಾರಿ ಕೃಷ್ಣ ಪಾರ್ಥರ ನಡುವೆ ಬದುಕಿನ ಭಗವದ್ಗೀತೆಯೇ ನಡೆದುಹೋಗುತ್ತದೆ.

ನಿಜವಾಗಿಯೂ ಕಲೆಯನ್ನು ಆಸ್ವಾದಿಸೋದು, ಅಭಿವ್ಯಕ್ತಿಸೋದು ಅಂದರೆ ಅದನ್ನು ಜೀವಿಸೋದು ಅಂತಾನೇಅರ್ಥ. ಅದಕ್ಕಾಗಿಯೇ ಸಮಾಜಕ್ಕೆ ಕಲೆಯ ಸಂಗಾತಬೇಕು. ‘ನಾನು ಬೇರೆ ಬೇರೆಬೇರೆ ಪಾತ್ರಗಳನ್ನು ಜೀವಿಸಿದ್ದೀನಿ. ಹಾಗಾಗಿ ಅವರೆಲ್ಲರನ್ನೂ ರ‍್ಥಮಾಡಿಕೊಳ್ಳಬಲ್ಲೆ’. . . ಒಮ್ಮೆ ಸೀರೆಯುಟ್ಟು ನೋಡು. ಹೆಣ್ಣು ಅರ್ಥ ಆದರೂ ಆದಾಳು ಅಂತಾನೆ ಇಲ್ಲಿಯ ಕೃಷ್ಣ. ಹೆಣ್ಣು, ಗಂಡಿನ ಯಾವ ಡ್ರೆಸ್ ಬೇಕಾದರೂ ಹಾಕ್ತಾಳೆ. ಅದಕ್ಕೇ ಇರಬೇಕು ಗಂಡಿನ ಯಾವ ಪಾತ್ರವನ್ನೂ ಅವಳು ಜೀವನದಲ್ಲಿ ನಿರ್ವಹಿಸ್ತಾಳೆ. ಆದರೆ ಗಂಡು? ಸೀರೆ ಉಡೋದನ್ನೂ ನಿರಾಕರಿಸ್ತಾನೆ; ಹೆಣ್ಣಾಗೋಕೆ ಆಗ್ತಾನೇ ಇಲ್ಲ.

ಇಲ್ಲಿಯ ಪ್ರಧಾನ ಭೂಮಿಕೆಯಲ್ಲಿ ‘ಪರಿಮಳ’ ಎನ್ನುವ ಹೆಣ್ಣೊಬ್ಬಳಿದ್ದಾಳೆ. ಆಕೆ ರಂಗದ ಮೇಲೆ ಕಾಣಿಸಿಕೊಳ್ಳೋದೇ ಇಲ್ಲ. ಇಲ್ಲದೆಯೂ ಪಾತ್ರವಾಗುವ ಪರಿ ಅಚ್ಚರಿ. ಪ್ರೀತಿಸಿದ ಪಾರ್ಥ ಅದೆಷ್ಟು ಬೇಗ ಅವಳನ್ನು ಸಂಶಯಿಸುತ್ತಾನೆ. ಆದರೆ ಬ್ರಹ್ಮಚಾರಿ ಕೃಷ್ಣ ಅವಳನ್ನು ಅರ್ಥಮಾಡಿಕೊಂಡರ‍್ತಾನೆ. ಮನೆಯ ಕೀಲಿಕೈ ಅದು ಮನಸಿನ ಕೀಲಿಕೈ. ಪಾರ್ಥನಿಗೆ ಅರಿವು ಮೂಡಿದ ಮೇಲೆ ಸಿಗತ್ತೆ. ಇಲ್ಲಿಯ ಕೀಲಿಕೈ ಹೆಣ್ತನವನ್ನೂ ಸೀರೆ, ತಡೆಗಳನ್ನು  ಪ್ರತಿಬಿಂಬಿಸುತ್ತದೆ. ಭಗವದ್ಗೀತೇಲಿ ಕೃಷ್ಣ ಪಾರ್ಥನಿಗೆ ಪುರುಷಾರ್ಥವನ್ನು  ಬೋಧಿಸುತ್ತಾನೆ. ಈ ನಾಟಕದ ಕೃಷ್ಣ ಪಾರ್ಥವೇಷಧಾರಿಗೆ ಬದುಕಿನ ಪಾಠವನ್ನು ಹೇಳಿಕೊಡ್ತಾನೆ. ಕೊನೆಯಲ್ಲಿ ಪಾರ್ಥವೇಷಧಾರಿ ಕೃಷ್ಣನ ವೇಷ ತೊಟ್ಟು ಅವನಂತೆಯೇ ಕೊಳಲೂದುತ್ತಾನೆ. ನಾಟಕ  ಹೆಣ್ಣುಗಂಡಿನ ವಿಶ್ವರೂಪದರ್ಶನ ಮಾಡಿಸುತ್ತದೆ.

ಒಪ್ಪಿತವಾದ, ರೂಢಿಗತ ಕತೆ ಹೇಳುವ ಸಂಪ್ರದಾಯದ ಮಾರ್ಗವನ್ನು ಯಾವ ಅಬ್ಬರವೂ ಇಲ್ಲದಂತೆ ಸಹಜ ಅನಿಸುವಂತೆ ಕಳಚುತ್ತ ಹೋಗುತ್ತಾಳೆ ಕಾವ್ಯಾ. ಬದುಕನ್ನ,  ಸಮಾಜವನ್ನ, ವ್ಯವಸ್ಥೆಯನ್ನ ಅದÀರ ಜಡತೆಗಾಗಿ ಲೇವಡಿ ಮಾಡಿದವರ, ವ್ಯಂಗ್ಯವಾಗಿಸಿದವರ, ಸಾಕಷ್ಟು ಸಿನಿಕತೆಯಿಂದ ಬದುಕ ನೋಡಿದವರ ಪರಂಪರೆಯೇ ಇದೆ ನಮ್ಮಲ್ಲಿ. ಕಾವ್ಯಾ ಭಿನ್ನವಾಗುವದು ಇಲ್ಲಿಯೇ. ಬದುಕಿನ ಆಶಯದ ಕುರಿತು, ಭರವಸೆಗಳ ಕುರಿತು ಇವಳು ಸಿನಿಕಳಾಗುವದಿಲ್ಲ. ‘ಮೈಗೆ ಆತುಕೊಳ್ಳುವದು ಹೋಗಲಿ ಕೈಗೆ ಕೈ ತಾಗಿಸದೆಯೂ ನಾವು ಬಹುದೂರ ನಡೆಯಬಲ್ಲೆವು ಜತೆಗೆ’ ಎನ್ನುವಷ್ಟು ಧನಾತ್ಮಕ ಧೋರಣೆ ಇವಳÀಲ್ಲಿದೆ. ಸಂಪ್ರದಾಯದ ಒಜ್ಜೆಯ ನಡೆಯನ್ನು ಮುರಿಯುವದರಲ್ಲಿ ತೋರುವಷ್ಟೇ ಉತ್ಸಾಹವನ್ನು, ರ‍್ಯಾಯವನ್ನು ಕಟ್ಟುವ ಕಾಯಕದಲ್ಲಿಯೂ ತೋರಿಸುತ್ತಾಳೆ ಈಕೆ ಮತ್ತು ಈ ಕಾಲದ ರ‍್ಯಾಯಗಳನ್ನು ತೀಕ್ಷ÷್ಣವಾಗಿ ವಿಮರ್ಶಿಸಬೇಕಾದ ಅಗತ್ಯವನ್ನೂ ಮುಂದಿಡುತ್ತಾಳೆೆ. ‘ಜೀನ್ಸ್ ತೊಟ್ಟ ದೇವರನ್ನು ಚಿತ್ರಿಸಬಲ್ಲ ಮತ್ತು ಅದು ವ್ಯಂಗ್ಯೋಪಮೆಯಾಗದAತೆ ನೋಡಬಲ್ಲ ವಿವೇಕ,  ಕಾಲದ ಕರೆಗೆ ಕಂಪಿನ ಕರೆಯ ಸಾಂಗತ್ಯವನ್ನು ಯಾವತ್ತೂ ಮೈ ಒಡೆಯದ ಹಾಗೆ ಕಾಪಿಟ್ಟುಕೊಳ್ಳುವ ಗುಣ ಇವಳ ವಿಶೇಷ. 

ಇಲ್ಲಿಯ ನಾಟಕಗಳ ಆಕಾರಕ್ಕೆ ಒಂದು ಕಾವ್ಯದ ಗುಣ ಇದೆ. ರೂಢಿಯಾಗಿರೋ ಮನೆ ಸೆಟ್ಟು ಇತ್ಯಾದಿಗಳಿಂದ ತಪ್ಪಿಸಿ ಜಿಗಿಯುವ ಗುಣವಿದೆ. ರಿಯಲಿಸಂ ನಿಂದ ಎಕ್ಸ್ಪ್ರೆಷನಿಸಂಗೆ ಅಥವಾ ರ‍್ರಿಯಲಿಸಂಗೆ ಜಿಗಿತ ಇದೆ. ಈ ಹೊಸ ಮಾದರಿ ಪೂರ್ಣವಾಗಿದಕ್ಕಿಯೇ ಹೋಗಿದೆ ಅಂತಲ್ಲ ಆದರೆ ಆಟವಂತೂ ಶುರುವಾಗಿದೆ; ಮತ್ತು ಸರಿಯಾಗಿಯೇ ಶುರುವಾಗಿದೆ. ಧ್ಯಾನಕ್ಕೆ ತಾರೀಕಿನ ಹಂಗಿಲ್ಲ ಎನ್ನುವದನ್ನು ಯಾವತ್ತೋ ಅರ್ಥ ಮಾಡಿಕೊಂಡ ಕಾವ್ಯಾ ಇನ್ನೂ ಹೊಸ ಹೊಸ ಆಟಗಳನ್ನು ಸಶಕ್ತವಾಗಿಯೇ ಕಟ್ಟಬಲ್ಲಳು. ಶುಭಾಶಯಗಳು. ಕಾವ್ಯಾ

                                                              

Sunday 19 July 2020

ಡಿ.ಎನ್. ಶಂಕರ ಭಟ್: ಕನ್ನಡ ಸ್ವರಾಜ್ಯದ ಹರಿಕಾರ. ಲೇಖಕ: ಮೇಟಿ ಮಲ್ಲಿಕಾರ್ಜುನ

ಭಾಷೆ ಕುರಿತ ಚರ್ಚೆ – 07 

ಕನ್ನಡ ನುಡಿ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಲ್ಲಿ ಒಂದು ದೊಡ್ಡ ಪಲ್ಲಟವನ್ನು ಡಿ.ಎನ್.ಶಂಕರ ಭಟ್ ಅವರು ಉಂಟುಮಾಡಿರುತ್ತಾರೆ. ಕರ್ನಾಟಕದ ಬಹುಜನರ ಬದುಕಿನ ದಾರಿಗಳಲ್ಲಿಯೇ ಈ ಪಲ್ಲಟವು ಅತ್ಯಂತ ಮಹತ್ವದ ನಡೆಯಾಗಿದೆ. ಶಂಕರಭಟ್ ಅವರು ಕನ್ನಡದ ಮಾತಿನ ಸ್ವರೂಪ, ಉಚ್ಚಾರಣೆಯನ್ನು ಕುರಿತು ಮಾತ್ನಾಡುವುದಿಲ್ಲ. ಬದಲಾಗಿ ಬರಹ ಕನ್ನಡ ಎದುರಿಸುತ್ತಿರುವ ಸವಾಲುಗಳು, ತೊಡಕುಗಳು ಹಾಗೂ ಈ ಬರಹ ಕನ್ನಡದ ವ್ಯಾಕರಣವನ್ನು ಕುರಿತು ಇವರು ತಮ್ಮ ವಿಚಾರಗಳನ್ನು ಕಳೆದ ಎರಡು ದಶಕಗಳಿಂದ ಅತ್ಯಂತ ಗಟ್ಟಿ ದನಿಯಲ್ಲಿ ಮಂಡಿಸುತ್ತಲೇ ಬಂದಿರುತ್ತಾರೆ. ಕನ್ನಡದ ರಚನೆ ಮತ್ತು ಬಳಕೆಯು ಸಂಸ್ಕೃತದ ಹೇರಿಕೆಯಿಂದ ತುಂಬಿ ಹೋಗಿರುವುದನ್ನು ಗುರುತಿಸಿ, ಈ ಭಾರದಿಂದ ಕನ್ನಡವನ್ನು ಬಿಡುಗಡೆಗೊಳಿಸುವ ಹಾಗೂ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವನ್ನು ಕಟ್ಟುವ ಕಾಯಕದಲ್ಲಿ ಭಟ್ ಅವರು ತೊಡಗಿಕೊಂಡಿದ್ದಾರೆ. ಈ ನಡೆಯನ್ನು ಸಂಸ್ಕೃತ ವಿರೋಧಿ ನಿಲುವನ್ನಾಗಿ ಗುರುತಿಸುವ ಹುನ್ನಾರವು ಇವತ್ತು ಕರ್ನಾಟಕದಲ್ಲಿ ನಡೆಯುತ್ತಿದೆ. ಆದರೆ ಶಂಕರಭಟ್ಟರು  ಕನ್ನಡದ ಪರವಾಗಿ ಮಾತ್ರ ತಿಳುವಳಿಕೆಯನ್ನು ಬೆಳೆಸುವ ಹಾಗೂ ಈ ತಿಳಿವನ್ನೇ ಕನ್ನಡದ ಅರಿಮೆಯ ತಿಳಿವನ್ನಾಗಿ ರೂಪಿಸಿ, ಕನ್ನಡದ ಸ್ವರಾಜ್ಯವನ್ನು ನೆಲೆಗೊಳಿಸುವ ಇರಾದೆಯನ್ನು ಹೊಂದಿರುತ್ತಾರೆ. ಕೇವಲ ಸಂಸ್ಕೃತದ ವ್ಯಾಕರಣದಿಂದ ಕನ್ನಡವನ್ನು ಬಿಡುಗಡೆಗೊಳಿಸುವ ಸೀಮಿತ ಗುರಿಗೆ ಭಟ್ಟರು ಬದ್ಧರಾಗದೇ, ಕನ್ನಡದ ಮೂಲಕವೇ ಎಲ್ಲ ಬಗೆಯ ತಿಳಿವನ್ನು ಪ್ರಕಟಿಸಲು ಸಾಧ್ಯವಾಗಬೇಕು ಎಂಬ ನಂಬಿಕೆಯನ್ನು ಇವರು ಹೊಂದಿರುತ್ತಾರೆ. 
ಈ ನಂಬಿಕೆಯನ್ನು ಸಾಕಾರಗೊಳಿಸಲು ಕನ್ನಡವು ಹೇಗೆ ಸಜ್ಜಾಗಬೇಕು ಎಂಬ ನಿಟ್ಟಿನಲ್ಲಿ, ಕನ್ನಡ ಬರಹದ ಸೊಲ್ಲರಿಮೆ, ಪದಕೋಶ, ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟುವ ಬಗೆಗಳು, ಇಂಗ್ಲಿಶಿನ ಪದಗಳಿಗೆ ಕನ್ನಡದ್ದೇ ಪದಗಳು, ಲಿಪಿಕ್ರಾಂತಿ ಹಾಗೂ ಪದಕ್ರಾಂತಿಗಳಂತಹ ಅತ್ಯಂತ ಮಹತ್ವದ ನಿಲುವುಗಳನ್ನು ಶಂಕರ್ ಭಟ್ಟರು ತೆಗೆದುಕೊಂಡಿದ್ದಾರೆ. ಕನ್ನಡ ಸಮುದಾಯಗಳ ಬೆಳವಣಿಗೆ ಎಂಬುದು, ಅದು ಕನ್ನಡ ನುಡಿ ಬೆಳವಣಿಗೆಯನ್ನು ನೆಮ್ಮಿಕೊಂಡಿರುವ ಸಂಗತಿಯಾಗಿದೆ. ವಿಜ್ಞಾನದಂತಹ ಬರಹಗಳಲ್ಲಿ ಸಂಸ್ಕೃತ ಪದಗಳ ಬಳಕೆಯ ಪ್ರಮಾಣ ಶೇಕಡಾ 80%ಕ್ಕಿಂತ ಹೆಚ್ಚಾಗಿರುವುದನ್ನು ನೋಡಬಹುದು. ಹಾಗಂತ ನುಡಿ ಎರವಲು ಬಗೆಗೆ ಶಂಕರಭಟ್ಟರು ಯಾವುದೇ ನಿರಾಕರಣೆಯನ್ನು ತೋರಿಸುವುದಿಲ. ಬದಲಾಗಿ ಕನ್ನಡದ ತಿಳಿವು, ಸಂವಹನ ಹಾಗೂ ಹೊಸಗಾಲದ ಅಗತ್ಯಗಳನ್ನು ಪೋರೈಸುವುದಕ್ಕೆ ಕನ್ನಡ ಹೇಗೆಲ್ಲ ಸಜ್ಜುಗೊಳ್ಳಬೇಕು ಎಂಬ ನಿಲುವೂ ಇವರ ಇಡೀ ಬರಹಗಳಲ್ಲಿ ಕಾಣುತ್ತದೆ. ಬರಹ ಕನ್ನಡದ ಬಹುತೇಕ ಪದಕೋಶವು ಕೇವಲ ಸಂಸ್ಕೃತದಿಂದ  ತುಂಬಿಹೋಗಿದೆ. ಆದರೆ ಕನ್ನಡ ನುಡಿಯು ಬೇರೆ ನುಡಿಗಳಿಂದ ಎರವಲು ಪಡೆದುಕೊಂಡು, ತನ್ನ ಕಸುವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಕೇವಲ ಸಂಸ್ಕೃತದಿಂದ ಮಾತ್ರ ಹೇರಳವಾಗಿ ಪದಗಳನ್ನು ಎರವಲು ಪಡೆಯುವುದರಿಂದ, ಕನ್ನಡದ ಸ್ವರಾಜ್ಯಕ್ಕೆ ಧಕ್ಕೆಯಾಗುತ್ತದೆ. ಶುದ್ಧತೆ ಎನ್ನುವುದು ಜನಬಳಕೆಯ ಯಾವುದೇ ನುಡಿಯ ಮೂಲ ಗುಣವೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಶುದ್ಧತೆಯ ನೆಲೆಯಿಂದ ಶಂಕರಭಟ್ಟರ ಕನ್ನಡದ ಬಗೆಗಿನ ಚಿಂತನೆಗಳನ್ನು ಬಿಡಿಸಿ ನೋಡುವ ಅಗತ್ಯವಿಲ್ಲ.      
ಡಿ.ಎನ್. ಶಂಕರಭಟ್ಟರು ಕಟ್ಟುತ್ತಿರುವ ತಿಳಿವಿನ ಮಾದರಿಗಳು ನಮಗೆ ಯಾಕೆ ಬೇಕು? ಅವುಗಳಿಂದ ಕನ್ನಡದ ಸಮುದಾಯಗಳ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳು ಉಂಟಾಗುತ್ತವೆ? ಈ ಪರಿಣಾಮಗಳು ಈ ನಾಡಿನ ಸಮುದಾಯಗಳ ಬದುಕಿಗೆ ಹೇಗೆ ಒತ್ತಾಸೆಯಾಗುತ್ತವೆ? ಕನ್ನಡದ ಮೂಲಕವೇ ಚಿಂತನೆಯನ್ನು ಕಟ್ಟಿ ಬೆಳೆಸಲು ಇವುಗಳು ಹೇಗೆ ದಾರಿಯಾಗಬಲ್ಲವು? ಎಂಬಿತ್ಯಾದಿ ವಿಷಯಗಳನ್ನು ಮಾತ್ರ ಇಲ್ಲಿ ಚರ್ಚಿಸಲು ಬಯಸುತ್ತೇನೆ. ಏಕೆಂದರೆ ಭಟ್ರ ಇಡೀ ತಾತ್ವಿಕತೆಯು ನೆಲೆಗೊಂಡಿರುವುದು ಕೂಡ ಈ ನಿಲುವುಗಳಲ್ಲಿಯೇ. 
ಕನ್ನಡವನ್ನು ಕುರಿತಾಗಿ ಚಿಂತಿಸುವುದೆಂದರೆ, ಅದು ಕೇವಲ ಲಿಪಿ ಮತ್ತು ಕಾಗುಣಿತಗಳ ಸ್ವರೂಪವನ್ನು ಯಾವ ಕಾಲಕ್ಕೂ ಬದಲಿಸದೆ ಹಾಗೇ ಮುಂದುವರಿಸಿಕೊಂಡು ನಡೆಯುವುದಲ್ಲ. ಆಯಾ ಕಾಲದ ಬದುಕಿನ ದಾರಿಗಳನ್ನು ಹೇಗೆ ರೂಪಿಸಿಕೊಳ್ಳಬೇಕು? ಇದಕ್ಕೆ ಒತ್ತಾಸೆಯಾಗಿ ಆ ಸಮೂಹಗಳ ನುಡಿಯನ್ನು ಹೇಗೆ ಸಜ್ಜುಗೊಳಿಸಬೇಕು? ನುಡಿಯೆಂಬುದು ಕೇವಲ ಮಾತಲ್ಲ, ಅದು ಬದುಕೂ ಆಗಿರುತ್ತೆ. ಈ ಬದುಕಿಗೆ ಬೇಕಾದ ಮೂಲತತ್ವಗಳು ಆಯಾ ನುಡಿಗಳಲ್ಲಿಯೆ ಹೇಗೆ ಹುದುಗಿರುತ್ತವೆ. ಎಂಬ ದಿಟವನ್ನು ಅರಿಯದೇ, ನುಡಿಯೊಂದನ್ನು ಕುರಿತು ಚಿಂತಿಸುವುದು ಅಗತ್ಯವಿಲ್ಲವೆಂದು ತೋರುತ್ತದೆ. ಆದರೆ ಡಿ.ಎನ್.ಎಸ್. ಭಟ್ ಮತ್ತು ಈ ಆಲೋಚನೆಯ ಕ್ರಮವನ್ನು ನಂಬಿದವರ ಮೊದಲ ಗುರಿಯೇ, ಸಮೂಹಗಳ ಬದುಕಿನ ವಿನ್ಯಾಸಗಳನ್ನು ಅರಿಯುವ ಮತ್ತು ಆಯಾ ಬದುಕಿಗೆ ತಕ್ಕುದಾದ ದಾರಿಗಳನ್ನು ಅವರವರ ನುಡಿಗಳ ಮೂಲಕವೇ ಕಾಣುವುದಾಗಿದೆ. ಎತ್ತುಗೆಗಾಗಿ ಕರ್ನಾಟಕದಲ್ಲಿ ಆಡಳಿತ ನುಡಿಯಾಗಿ ಕನ್ನಡವೇ ಇರಬೇಕು ಎಂದು ಅರೆ ಶತಮಾನಕ್ಕಿಂತಲೂ ಹೆಚ್ಚುಕಾಲ, ನಮ್ಮ ಸರಕಾರಗಳು ಒತ್ತಾಯಿಸುತ್ತಲೇ ಬಂದಿವೆ. ಆದರೆ ಪರಿಣಾಮ ಏನಾಗಿದೆಯೆಂದರೆ ಸೊನ್ನೆ. ಆಡಳಿತ ಇಲ್ಲವೇ ಸರಕಾರ ಎಂಬುದು ಜನರ ಬದುಕಿಗೆ ಹೊಣೆಯಾಗದೇ, ಕೇವಲ ಬದುಕಿನ ಸನ್ನಿವೇಶಗಳಲ್ಲಿ ಕನ್ನಡನುಡಿಯನ್ನು ಬಳಕೆಗೆ ಒತ್ತಾಯಿಸುವ ಮೂಲಕ ಏನನ್ನೂ ಗೆಲ್ಲಲು ಆಗುವುದಿಲ್ಲ. ಆಡಳಿತವು ಜನರಿಗೆ ಉತ್ತರದಾಯಿತ್ವವಾಗದೇ, ಕನ್ನಡ ಯಾವತ್ತಿಗೂ ನೆಲೆಗೊಳ್ಳಲಾರದು. ಹಾಗೊಂದು ಕನ್ನಡ ನೆಲೆಗೊಂಡರೆ, ಅದೊಂದು ಸಮೂಹಗಳ ಚಹರೆಯನ್ನು ಕಳೆದುಕೊಂಡ ಕನ್ನಡವಾಗುತ್ತದೆ. ಕನ್ನಡದ ಚಹರೆಗಳಿರುವುದು, ಈ ನುಡಿಯನ್ನೇ ನೆಮ್ಮಿಕೊಂಡು ಬದುಕುವ ಸಮುದಾಯಗಳಲ್ಲಿಯೇ ಹೊರತು ಕೇವಲ ನುಡಿಯಲ್ಲಿ ಅಲ್ಲ. ಗುರುತುಗಳು ಬದುಕಿನ ವಿನ್ಯಾಸಗಳಲ್ಲಿ ಹುದುಗಿರುತ್ತವೆ ಎಂಬ ವಾಸ್ತವನ್ನು ಈ ಮಾತುಗಳು ಹೇಳುತ್ತವೆ. ಆದರೆ ಇಂತಹ ಗುರುತುಗಳನ್ನು ಕಡೆಗಣಿಸುವ ಇಲ್ಲವೇ ಅಮಾನ್ಯಮಾಡುವ ಹುನ್ನಾರಗಳು ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿವೆ. ಕನ್ನಡ ನುಡಿಯು ಕೀಳರಿಮೆಯಿಂದ ಬಳಲುತ್ತಿರಲೂ ಕಾರಣವೇ ಈ ಚಾರಿತ್ರಿಕ ನಡೆಗಳು. ಹಾಗಾಗಿ ಕನ್ನಡಕ್ಕೆ ಅಂಟಿರುವ ಇಂತಹ ಕೀಳರಿಮೆಯ ಸೋಂಕನ್ನು ತೊಲಗಿಸುವ ಕ್ರಮಗಳನ್ನು ಶಂಕರಭಟ್ಟರು ಆಲೋಚನೆಯ ಕ್ರಮದಲ್ಲಿ ಕಾಣುತ್ತೇವೆ.
ಬೇರೆ ನುಡಿಗಳಿಂದ ಮಾತ್ರ ತಿಳಿವು ತೆಗೆದುಕೊಳ್ಳುವ ನುಡಿಯನ್ನಾಗಿ ಕನ್ನಡವನ್ನು ರೂಪಿಸಲಾಗಿದೆ. ಅಂದರೆ ಕನ್ನಡವೂ ಕೂಡ ಕೊಡುವ ನುಡಿಯಾಗಿ ಬೆಳೆದು ನಿಲ್ಲಬೇಕಿದೆ. ಯಾರಿಗೆ? ಏನನ್ನು? ಕನ್ನಡ ಕೊಡಬೇಕಿದೆ ಎಂದು ಕೇಳಿದರೆ, ಕರ್ನಾಟಕದ ಸಮೂಹಗಳಿಗೆ ಬದುಕಲು ಬೇಕಿರುವ ತಿಳಿವು, ವಿಚಾರ, ಕಲಿಕೆ, ಅನ್ನ, ಕೆಲಸವನ್ನು ಕನ್ನಡದ ಮೂಲಕವೇ ಪಡೆಯಬೇಕು ಎಂಬುದೇ ಈ ಮಾತಿನ ತಿರುಳು. ಏಕೆಂದರೆ ತಿಳುವಳಿಕೆ ಇರುವುದು ಕೇವಲ ತಿಳುವಳಿಕೆಗಾಗಿ ಮಾತ್ರವಲ್ಲ, ಅದು ಬದುಕಿಗಾಗಿ ಮತ್ತು ಬದುಕಿನ ಏಳ್ಗೆ ಹಾಗೂ ಬದಲಾಣೆಗಾಗಿ ನೆಲೆಗೊಳ್ಳಬೇಕು. ಯಾವುದೇ ನುಡಿ ತಿಳುವಳಿಕೆ ಸಮೂಹಗಳ ತಿಳುವಳಿಕೆಯಾಗದೇ ಅದರಿಂದ ಯಾರಿಗೂ ಏನು ಪ್ರಯೋಜವಿರುವುದಿಲ್ಲ. ಈ ದಿಟವನ್ನು ಸರಿಯಾಗಿ ಅರಿತುಕೊಂಡ ಶಂಕರಭಟ್ಟರು ಕನ್ನಡ ಮತ್ತು ಕನ್ನಡಿಗರಪರವಾಗಿ ಚಿಂತಿಸುತ್ತಿದ್ದಾರೆ. 
ಶಂಕರಭಟ್ಟರು ಈಗಾಗಲೇ ಕೈಗೊಂಡಿರುವ ನುಡಿ ಮತ್ತು ನುಡಿಯರಿಮೆ ಕುರಿತಾದ ಎಲ್ಲ ಬಗೆಯ ಬರಹಗಳಲ್ಲಿಯೂ, ಕರ್ನಾಟಕ ಸಮೂಹಗಳ ಬದುಕಿಗೆ ಬೇಕಾಗಿರುವ ತಿಳಿವಿನ ಮಾದರಿಗಳು ಅಡಕವಾಗಿವೆ. ಎತ್ತುಗೆಗಾಗಿ ಈ ಮಾತುಗಳನ್ನು ನೋಡಿ; “ಕನ್ನಡ ಬರಹ ಮೇಲ್ವರ್ಗದದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗಬೇಕು ಮತ್ತು ಕನ್ನಡ ಬರಹದ ಮೂಲಕ ಇವತ್ತು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿರುವ ಹಲವು ರೀತಿಯ ಪ್ರಯೋಜನಗಳನ್ನು ಎಲ್ಲಾ ವರ್ಗದ ಕನ್ನಡಿಗರಿಗೂ ಸಮಾನವಾಗಿ ಪಡೆಯುವ ಹಾಗಾಗಬೇಕು” - ಕನ್ನಡ ಬರಹವನ್ನು ಸರಿಪಡಿಸೋಣ! ಎಂಬೀ ಹೊತ್ತಿಗೆಯ ಮಾತುಗಳನ್ನು ನಿಗಾಯಿಟ್ಟು ನೋಡಿದರೆ, ಶಂಕರಭಟ್ಟರ ಕನ್ನಡ ಪರವಾದ ಕಾಳಜಿಗಳು ಎಂತಹವು ಅನ್ನುವುದು ನಮ್ಮರಿವಿಗೆ ಬರುತ್ತವೆ. ದಲಿತ ಮತ್ತು ತಳಸಮುದಯಗಳ ಪರವಾಗಿ ಹೋರಾಟ ನಡೆಸುವವರು ಭಟ್ಟರ ಈ ಚಿಂತನೆಗಳನ್ನು ಲೆಕ್ಕಿಸದೆ ಇರುವುದು ಕೇವಲ ಅಚ್ಚರಿಯ ಸಂಗತಿ ಮಾತ್ರವಲ್ಲ. ಅದೊಂದು ಚಾರಿತ್ರಿಕ ವ್ಯಂಗ್ಯವೂ ಹೌದು. ಈ ಹೊತ್ತಿನ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಿಗೆ ಬೇಕಾಗಿರುವ ಪ್ರಣಾಳಿಕೆಯೊಂದನ್ನು ಶಂಕರಭಟ್ಟರು ತಮ್ಮೀ ಬರಹಗಳ ಮೂಲಕ ರೂಪಿಸಿ ಕೊಟ್ಟಿದ್ದಾರೆ. ಭಟ್ಟರು ಬೀದಿಗಿಳಿಯದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುತ್ತಿದ್ದಾರೆ. ಇದು ಕೂಡ ಹೋರಾಟದ ಒಂದು ಮಾದರಿ. ಇದುವೇ ಕನ್ನಡದ್ದೇ ಮಾದರಿಯೂ ಆಗಿರುತ್ತದೆ.  
ದಲಿತ ಮತ್ತು ತಳಸಮುದಾಯಗಳನ್ನೇ ನೆಲೆಯಾಗಿಸಿಕೊಂಡು ಇಡೀ ಭಾರತದಲ್ಲಿಯೇ ನುಡಿಯರಿಮೆಯ ಚಿಂತನೆಗಳು ಬೆಳೆದು ಬಂದಿರುವುದು ಅತ್ಯಂತ ಕಡಿಮೆಯೆಂದೇ ಹೇಳಬೇಕು. ಇಂತಹವೊಂದು ಆಲೋಚನೆಯ ಕ್ರಮವನ್ನು ಕನ್ನಡದಲ್ಲಿ ಶಂಕರಭಟ್ಟರು  ಮೊದಲಾದವರು ಹುಟ್ಟು ಹಾಕಿರುತ್ತಾರೆ. ಕರ್ನಾಟಕ ಇಲ್ಲವೇ ಭಾರತದಲ್ಲಿ ನುಡಿ ಬಗೆಗಿನ ಯಾವುದೇ ತೀರ್ಮಾನವು ಇಡೀ ಸಮುದಾಯವನ್ನೇ ನೆಚ್ಚಿಕೊಂಡು ರೂಪುಗೊಳ್ಳುವದಿಲ್ಲ. ಬದಲಾಗಿ ಮೇಲು ಜಾತಿಯ ಇಲ್ಲವೇ ಅಧಿಕಾರ ನಂಟು ಹೊಂದಿರುವ ಜನ ಸಮೂಹಗಳ ನುಡಿ ಬಗೆಗಳು ಮಾತ್ರ ಶಿಕ್ಷಣ, ಸಾಹಿತ್ಯ, ಮಾಧ್ಯಮ ಹಾಗೂ ಇತರೆ ತಿಳಿವಿನ ವಲಯಗಳಲ್ಲಿ ಮುಂಚೂಣೆಗೆ ಬರುತ್ತವೆ. ಈ ಬೆಳವಣಿಗೆಗಳು ದಲಿತ. ಹಿಂದೂಳಿದ, ತಳಸಮುದಾಯಗಳ ನುಡಿ ಚಹರೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಮೇಲುಜಾತಿಗಳು ನುಡಿಯುವ ಮಾತಿನ ಪ್ರಕಾರಗಳು ಮೇಲುಹಿರಿಮೆಯನ್ನು ಪಡೆದರೆ, ದಲಿತ ಮುಂತಾದವರ ಮಾತುಗಳು ಕೀಳುಹಿರಿಮೆಗೆ ಒಳಗಾಗುತ್ತವೆ. ಈ ಸಾಂಕೇತಿಕ ಹಿಂಸೆಯನ್ನು ಹೋಗಲಾಡಿಸುವ ದಾರಿಗಳು ನುಡಿಯೊಳಗೇ ಹುದುಗಿರುತ್ತವೆ ಎಂಬ ದಿಟವನ್ನು ಕೂಡ ಶಂಕರಭಟ್ಟರು ತಮ್ಮ ಬರಹಗಳ ಮೂಲಕ ನಮ್ಮುಂದೆ ಮಂಡಿಸುಡುತ್ತಿದ್ದಾರೆ. ಹಾಗಾಗಿ ಮಾತು ಮತ್ತು ಬರಹದ ನುಡುವಣ ಅಂತರಗಳನ್ನು ಯಾಕೆ ಇಲ್ಲವಾಗಿಸಬೇಕು ಎಂಬಿವರ ಚಿಂತನೆಗಳು ಇಲ್ಲಿ ಮಹತ್ವವನ್ನು ಪಡೆಯುತ್ತವೆ. 
ಯಾಕೆ ಕಲಿಕೆಯ ವಲಯದಿಂದ ಕೆಲವೇ ಸಮೂಹಗಳ ಮಕ್ಕಳು ಹೊರಗುಳಿಯುತ್ತಾರೆ ಎಂಬ ಅನುಮಾನಕ್ಕೂ ಭಟ್ಟರ ಚಿಂತನೆಗಳಲ್ಲಿ ಸುಳಿವುಗಳು ಸಿಗುತ್ತವೆ. ಅಂದರೆ ಯಾವುದೇ ಸಾಮಾಜಿಕ ಮುಂಚಲನೆಗೂ ಮತ್ತು ಆಯಾ ಸಮೂಹಗಳು ನೆಚ್ಚಿಕೊಂಡಿರುವ ಒಳನುಡಿಗಳಿಗೂ ನೇರವಾದ ನಂಟಿರುತ್ತದೆ. ಒಳನುಡಿಯ ಸ್ವರೂಪ, ಕನ್ನಡ ನುಡಿಯ ಸ್ವರೂಪ ಮತ್ತು ಕಲಿಕೆಯ ಸಮಸ್ಯೆಗಳ ನಡುವಿನ ತೊಡಕುಗಳೆಂತಹವು, ಈ ತೊಡಕುಗಳೇ ತಳಸಮುದಾಯಗಳ ಮಕ್ಕಳ ನುಡಿ ಕಲಿಕೆಯ ಮೇಲೆ ಹೇಗೆಲ್ಲ ಸವಾರಿ ನಡೆಸುತ್ತಿವೆ ಅನ್ನುವ ಇಕ್ಕಟ್ಟುಗಳನ್ನು ಇವರ ನುಡಿಯರಿಮೆಯ ಚಿಂತನೆಗಳು ತೋರಿಸುತ್ತವೆ. ಯಾವ ನುಡಿಯನ್ನು ಕಲಿಯಬೇಕು ಮತ್ತು ಯಾವ ನುಡಿಯ ಮೂಲಕ ಕಲಿಯಬೇಕು ಎಂಬ ನಿಲುವಿಗೆ ಈ ಚಿಂತನೆಗಳಲ್ಲಿ ದಾರಿಗಳಿವೆ. ಏಕೆಂದರೆ ನುಡಿಯೆಂಬ ವಿದ್ಯಮಾನವು ವ್ಯಕ್ತಿ, ಸಮೂಹ ಮತ್ತು ಪರಂಪರೆ ಎಂಬ ಮೂರು ಬಗೆಯಲ್ಲಿ ಸಂಪನ್ಮೂಲವಾಗಿ ನೆಲೆಗೊಂಡಿರುತ್ತದೆ. ಈ ಮೂರು ನುಡಿ ಬಗೆಗಳ ನಡುವೆ ಸಮಾನ ಚಹರೆಗಳನ್ನು ರೂಪಿಸಿಕೊಳ್ಳುವ ಮೂಲಕ ನುಡಿಯೊಳಗೆಯೇ ಹುದಿಗಿರುವ ಸಾಮಾಜಿಕ ಅಸಮಾನತೆಯ ನೆಲೆಗಳನ್ನು ಹೋಗಲಾಡಿಸಲು ಅನುವಾಗುತ್ತದೆ. ಒಳನುಡಿಗಳ ನಡುವಣ ವ್ಯತ್ಯಾಸಗಳನ್ನು ಅಳಿಸಿ ಇಲ್ಲವೇ ಒರಸಿ ಹಾಕುವ ಹುನ್ನಾರಕ್ಕೆ ಕಡಿವಾಣ ಹಾಕಲೂ ಈ ಚಿಂತನೆಗಳಿಂದ ಬೆಂಬಲ ಸಿಗುತ್ತದೆ. ನುಡಿ ವ್ಯತ್ಯಾಸಗಳನ್ನು ಕುರಿತಾಗಿ ತಾಳಿಕೆಯ ಗುಣವನ್ನು ಬೆಳೆಸಿಕೊಳ್ಳುವ ದಾರಿಗಳು ಕೂಡ ಈ ಮೂಲಕ ನಮಗೆ ದೊರೆಯುತ್ತವೆ. 
ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಶು ನುಡಿಗಳ ನಡುವಣ ನಂಟು ಯಾವ ಬಗೆಯದು? ಆ ನಂಟಸ್ತಿಕೆಯ ಮರುಹೊಂದಾಣಿಕೆಯ ಸ್ವರೂಪ ಹೇಗಿರಬೇಕು? ಕನ್ನಡನುಡಿ ಓದನ್ನು ಬೆಳಸುವವರಿಗೆ ಕನ್ನಡ ನುಡಿ ರಚನೆಯೇ ಯಾಕೆ ಮಹತ್ವದ ಸಂಗತಿಯಾಗುತ್ತದೆ? ಎಂಬಿತ್ಯಾದಿ ಕೇಳ್ವಿಗಳಿಗೆ ತಕ್ಕುದಾದ ಬದಲುಗಳು ಶಂಕರಭಟ್ಟ ಅವರ ಚಿಂತನೆಗಳಲ್ಲಿ ಸಿಗುತ್ತವೆ. ಕನ್ನಡ ಪರವಾಗಿ ಮತ್ತು ಕನ್ನಡದ್ದೇ ತಿಳಿವಿನ ಮಾದರಿಗಳನ್ನು ರೂಪಿಸುವವರಿಗೆ, ಸಂಸ್ಕೃತ, ಇಂಗ್ಲಿಶು ಇಲ್ಲವೇ ಕನ್ನಡದ ವಿರೋಧಿಗಳೆಂದು ಹಣೆಪಟ್ಟಿಯನ್ನು ಲಗತ್ತಿಸುವುದು ಎಷ್ಟರಮಟ್ಟಿಗೆ ತಕ್ಕುದಾದ ನಿಲುವು? ಇಲ್ಲಿ ಶಂಕರಭಟ್ಟರು ಯಾವುದೇ ನುಡಿಯನ್ನು ವಿರೋಧಿಸುವ ಮತ್ತು ಕಡೆಗಣಿಸುವ ರಾಜಕಾರಣವನ್ನು ಮಾಡುತ್ತಿಲ್ಲ. ಬದಲಾಗಿ ನಮ್ಮ ಸಮೂಹಗಳಿಗೆ ಈ ಹೊತ್ತು ಜರೂರು ಅನ್ನಿಸಿರುವ ತಿಳಿವಿನ ದಾರಿಗಳನ್ನು ಹುಡುಕುತ್ತಿರುವರು. ಹಾಗಾಗಿ ಕನ್ನಡ ನುಡಿಯರಿಮೆ ಇಲ್ಲವೇ ಕನ್ನಡ ಭಾಷಾಶಾಸ್ತ್ರವೆಂದರೆ, ಅದು ಕೇವಲ ಕನ್ನಡದಲ್ಲಿ ನುಡಿಗಳ ಕುರಿತಾಗಿ ತಿಳುವಳಿಕೆಯನ್ನು ಬೆಳೆಸುವ ಕ್ರಮವಲ್ಲ. ಬದಲಾಗಿ ಕನ್ನಡದ್ದೇ ಮತ್ತು ಕನ್ನಡವನ್ನೇ ಕುರಿತಾದ ಅರಿಮೆ ಇಲ್ಲವೇ ಶಾಸ್ತ್ರವನ್ನು ರೂಪಿಸುವ ಬಗೆಯಾಗಿರುತ್ತದೆ. ಕನ್ನಡ ನುಡಿಯರಿಮೆಯ ಸರಿಯಾದ ಮತ್ತು ಹೊಸದಾದ ಚೌಕಟ್ಟನ್ನು ಕಟ್ಟಿಕೊಳ್ಳುವ ದಾರಿಯಾಗಿ ಡಿ.ಎನ್. ಶಂಕರಭಟ್ಟ ಅವರು ನಮ್ಮ ನುಡಿ ಸಮುದಾಯಕ್ಕೆ ಈಗ ಸಿಕ್ಕಿರುತ್ತಾರೆ. ಕನ್ನಡ ನುಡಿಯ ಜಾಯಮಾನಕ್ಕೆ ಒಗ್ಗುವ ಹಾಗೂ ಕನ್ನಡದ್ದೇ ಅರಿವಿನ ವಿನ್ಯಾಸಗಳನ್ನು ನೆಲೆಗೊಳಿಸುವ ಹೊಣೆಗಾರಿಕೆಯನ್ನು ಇವರು ಅತ್ಯಂತ ಇರಾದೆಯಿಂದ ನೆರವೇರಿಸುತ್ತಿದ್ದಾರೆ.  

*ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

Wednesday 15 July 2020

ಯಮುನಾ ಗಾಂವ್ಕರ್ ಅವರ ಅಬ್ಬೆ ಮಡಿಲು.-ರಂಜಾನ್ ದರ್ಗಾ

ಹಿರಿಯ ಪತ್ರಕರ್ತರಾದ ರಂಜಾನ್ ದರ್ಗಾ ರವರು ಯಮುನಾ ಗಾಂವ್ಕರ್ ರವರ ಕವನ ಸಂಕಲನ ಕುರಿತು ತಮ್ಮ ಮುನ್ನುಡಿಯಲ್ಲಿ ಹೇಳಿದ್ದು 
"ಹನ್ನೆರಡನೆಯ ಶತಮಾನದ ಶರಣ ಚೆನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ‘ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು’ ಎಂದು ತಿಳಿಸಿದ್ದಾರೆ. ಕವಿಗಳು ಕರುಣಾರಸವನ್ನೇ ಹರಿಸುತ್ತಾರೆ. ಆದರೆ ದುಃಖಾರ್ಥರ ಬದುಕನ್ನು ಬದಲಿಸುವಲ್ಲಿ ಅವರು ತಮ್ಮ ಜ್ಞಾನವನ್ನು ಕ್ರಿಯೆಗೆ ಇಳಿಸುವುದಿಲ್ಲ ಎಂದು ಸೂಚಿಸಿದ್ದಾರೆ. ಆದರೆ ಇಪ್ಪತ್ತೊಂದನೆಯ ಶತಮಾನದ ಯಮುನಾರಂಥವರು ಇದಕ್ಕೆ ಅಪವಾದವಾಗಿದ್ದಾರೆ. 
ತಮ್ಮ ಕಾವ್ಯಶಕ್ತಿಯನ್ನು ಜನಶಕ್ತಿಯಲ್ಲಿ ಒಂದಾಗಿಸುತ್ತ ಹೋರಾಟದ ಹಾದಿಯಲ್ಲಿ ಮುನ್ನಡೆದಿದ್ದಾರೆ. ‘ಒಳಗಣ್ಣ ಹೊರದಾರಿ ತೋರಿಸಿದೆ ಈ ಕವನ’ ಎಂದು ಹೇಳುವ ಮೂಲಕ ಯಮುನಾ ಕಾವ್ಯದ ಮೂಲ ಉದ್ದೇಶವನ್ನು ಸೂಚಿಸುತ್ತಾಳೆ.
 ಖುದ್ದು ಕುದಿದು ಬರೆಯುವೆ.
ಒಂದು ದಿನ 
ಬರುವೆ
ನಿನ್ನೊಳಗಿನ ಜ್ವಾಲೆ ಉದ್ದೀಪಿಸಲು
ಅಲ್ಲಿಯ ತನಕ ಆರಬೇಡ.
                     -ಆರಬೇಡ
 ಕೆಚ್ಚನ್ನು ತುಂಬಿಕೊಂಡಿರುವ ಈ ಕಾಮ್ರೇಡ್ ಕವಯಿತ್ರಿಗೆ ಶೋಷಣೆಯ ವಿರುದ್ಧದ ಹೋರಾಟವೇ ಒಂದು ಮಹಾಕಾವ್ಯವಾಗಿ ಕಾಣುತ್ತಿದೆ. ಅನ್ಯಾಯ, ಅಪಮಾನ, ಶೋಷಣೆ, ಕ್ರೌರ್ಯ ಮತ್ತು ದುಡಿಯುವ ವರ್ಗದ ಜೀವಹಿಂಡುವ ಅವಸ್ಥೆಯನ್ನು ಬುಡಮೇಲು ಮಾಡಬಯಸುವ ಸಂಗಾತಿ ಯಮುನಾ ಮಾನವೀಯ ಸ್ಪಂದನದ ಜ್ವಾಲೆಯನ್ನು ನಿರಂತರವಾಗಿ ಉದ್ದೀಪನಗೊಳಿಸುವ ಕ್ರಿಯೆಯಲ್ಲಿ ಮಗ್ನಳಾಗಿದ್ದಾಳೆ.
 ಕಮ್ಯೂನಿಜಂ ಶಕ್ತಿಯೆ ಅಂಥದ್ದು. ಅದು ಅನ್ಯಾಯವನ್ನು ಎದುರಿಸುವ ಧೈರ್ಯ ತುಂಬುತ್ತದೆ. ಆತ್ಮಗೌರವದ ಅರಿವು ಮೂಡಿಸುತ್ತದೆ. ಪ್ರಶ್ನಿಸುವ ಎದೆಗಾರಿಕೆಯನ್ನು ಹೆಚ್ಚಿಸುತ್ತದೆ. ಸಮೂಹ ಪ್ರಜ್ಞೆಯ ಮಹತ್ವವನ್ನು ಸಾರುತ್ತದೆ. ಇಂಥ ಎಲ್ಲ ಗುಣಗಳನ್ನು ಯಮುನೆಯ ಕಾವ್ಯನದಿ ಒಳಗೊಂಡಿದೆ.
 ಜಗತ್ತಿನ ನೋವಿಗೆ ಸ್ಪಂದಿಸಿ, ಹೋರಾಡಿ ಸಾಮ್ರಾಜ್ಯಶಾಹಿಗಳ ಕ್ರೌರ್ಯದ ವಿರುದ್ಧ ಗೆಲವು ಸಾಧಿಸಿದ ಸಂಗಾತಿಗಳ ಹೋರಾಟದ ಬದುಕಿನಿಂದ ಈಕೆ ಸ್ಫೂರ್ತಿಗೊಂಡಿದ್ದಾಳೆ. ಇಂಥ ವಿಶ್ವಚೈತನ್ಯವನ್ನು ಹೃದಯದೊಳಗೆ ತುಂಬಿಕೊಂಡು ಅದನ್ನೇ ಕಾವ್ಯ ಮತ್ತು ಹೋರಾಟದ ಮೂಲಕ ತನ್ನ ಗ್ರಾಮಾಂತರದ ಜನಸಮುದಾಯಕ್ಕೆ ಹಂಚುತ್ತಿದ್ದಾಳೆ. ಅವಳು ಪಾದರಸದಂತೆ ಚಲನಶೀಲ ಗುಣವುಳ್ಳವಳು. ಜೀವದ್ರವ್ಯದಿಂದ ಕೂಡಿ ಕ್ರಿಯಾಶೀಲತೆ ಅವಳದು. ತನ್ನ ಜೀವನ ಸಂಗಾತಿ ವಿಠ್ಠಲನಿಗೆ ಸರಿಸಾಟಿಯಾಗಿ ಹೋರಾಟದ ಹಾದಿ ತುಳಿದಿದ್ದಾಳೆ. ಅವಳಿಗೆ ಹೋರಾಟ ಎಂಬುದು ತಾಯ್ತನದ ಪ್ರತೀಕವಾಗಿದೆ. ಈ ಪರಿಕಲ್ಪನೆ ಅವಳು ಕನ್ನಡ ಕಾವ್ಯಲೋಕಕ್ಕೆ ಕೊಟ್ಟ ಕಾಣಿಕೆ ಎಂದು ಹೇಳುವೆ.
 ತಾಯ್ತನದ ಸಮುದ್ರವನ್ನೇ ಹೃದಯದಲಿ
ಇಳಿಬಿಟ್ಟವ ನೀನು
ಮಗ್ಗುಲ ಮುಳ್ಳು ಬಡವರ ಬರಿಗಾಲಿಗೆರಗಲು
ಬಿಡದವ ನೀನು.
                              _ಫಿಡೆಲ್ ಕ್ಯಾಸ್ಟ್ರೋ
 ಅಂತಃಕರಣವು ಕ್ರಾಂತಿಯ ಜೀವಾಳವಾಗಿದೆ. ಜ್ಞಾನಿಗಳು, ವಿಜ್ಞಾನಿಗಳು, ಕಲಾವಿದರು, ಕುಲೀನರು ಎಂದು ಕರೆಯಿಸಿಕೊಳ್ಳುವವರು ಮತ್ತು ಆಗರ್ಭ ಶ್ರೀಮಂತರು ಕೂಡ ತಮ್ಮೊಳಗೆ ಕಾಡುವ ಅಂತಃಕರಣದಿಂದಾಗಿಯೆ ಕಮ್ಯೂನಿಜಂನ ತೆಕ್ಕೆಗೆ ಬಂದಿದ್ದಾರೆ. ಫಿಡೆಲ್ ಕ್ಯಾಸ್ಟ್ರೋ, ಚೇ ಗುವೆರಾ, ಹೊ ಚಿ ಮಿನ್, ಭಗತ್ ಸಿಂಗ್, ಮಾಕ್ರ್ಸ್, ಎಂಗೆಲ್ಸ್, ಲೆನಿನ್, ರೋಸಾó ಲಗ್ಸಂಬರ್ಗ್, ಪಾಬ್ಲೊ ನೆರೂದಾ ನಂಬೂದಿರಿಪಾಡ್, ಭೂಪೇಶ ಗುಪ್ತಾ, ಕಯ್ಯೂರಿನ ವೀರರು ಮುಂತಾದವರ ಹೃದಯಗಳಲ್ಲಿ ತಾಯ್ತನದ ಸಮುದ್ರವಿದ್ದದ್ದರಿಂದಲೇ ಹೊಸ ಜಗತ್ತಿನ ಉದಯದತ್ತ ಮಾನವಕುಲವನ್ನು ಸಾಗಿಸಲು ಅವರಿಂದ ಸಾಧ್ಯವಾಗಿದೆ.
 ಬಂಡವಾಳಶಾಹಿಗಳು ಜಗತ್ತನ್ನು ವಸ್ತುಮೋಹಿಗಳನ್ನಾಗಿಸುವಲ್ಲಿ ತಲ್ಲೀನರಾಗಿದ್ದಾರೆ. ಕೊಳ್ಳುಬಾಕ ಸಂಸ್ಕøತಿಯನ್ನು ಹಬ್ಬಿಸುವುದರ ಮೂಲಕ ಅವರು ಜಗತ್ತಿನ ಎಲ್ಲ ಸಂಸ್ಕøತಿಗಳ ಮೇಲೆ ವಿಜಯವನ್ನು ಸಾಧಿಸುತ್ತಿದ್ದಾರೆ. ಆ ಮೂಲಕ ವಸ್ತುಗಳ ಬೆಲೆಯ ಮುಂದೆ ಮನುಷ್ಯನ ಬೆಲೆ ನಿರರ್ಥಕವಾದುದು ಎಂಬುದನ್ನು ಸಾಧಿಸುವ ನಿಟ್ಟಿನಲ್ಲಿ ಸತತವಾಗಿ ಕ್ರಿಯಾಶೀಲವಾಗಿದ್ದಾರೆ. ಇಂಥ ವಿಷಮಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯಮುನಾಳ ಕಾವ್ಯ ತಲ್ಲೀನವಾಗಿದೆ.
 ಫಳಫಳ ಹೊಳೆಯುವ ಚತುಷ್ಪಥದಲಿ
ಬೊಕ್ಕೆಗಳೆದ್ದು ಸೋತ ಬರಿಗಾಲುಗಳು
ನನ್ನವರದೇ... ನನ್ನವರದೇ.
                         -ನನ್ನವರದೇ ನನ್ನವರದೇ
 ದೇಶದಲ್ಲಿ ಅಭಿವೃದ್ಧಿಯಾಗಿದೆ ಎಂಬುದನ್ನು ಚತುಷ್ಪಥ ಹೇಳುತ್ತಿದೆ. ಆದರೆ ಸರ್ವತೋಮುಖ ಅಭಿವೃದ್ಧಿಯಾಗಿಲ್ಲ ಎಂಬುದನ್ನು ಬರಿಗಾಲುಗಳು ಸಾರುತ್ತಿವೆ. ಈ ರೀತಿಯಲ್ಲಿ ‘ಸೋತ ಬರಿಗಾಲುಗಳು ನನ್ನವರದೇ’ ಎನ್ನುವುದು ಬದುಕಿನಲ್ಲಿ ವಿಶಿಷ್ಟ ಅರ್ಥವನ್ನು ಸೃಷ್ಟಿಸುತ್ತದೆ. ಜಾತಿ, ಮತ, ಪಂಥ, ಧರ್ಮ, ದೇಶ, ಭಾಷೆಯನ್ನು ಮೀರಿದ ಸಂಬಂಧವನ್ನು ಇದು ಸೃಷ್ಟಿಸುತ್ತದೆ. ವಿಶ್ವಮಾನವ ಪ್ರಜ್ಞೆಯನ್ನು ಮೂಡಿಸುತ್ತದೆ.
 ಇಂದು ನಮ್ಮ ದೇಶದಲ್ಲಿ ಬಂಡವಾಳಶಾಹಿಗಳು ಬಹುರಾಷ್ಟ್ರೀಯ ಬಂಡವಾಳಶಾಹಿಗಳಾಗಿ ಬೆಳೆಯುವುದನ್ನೇ ಅಭಿವೃದ್ಧಿ ಎಂದು ಸಾಧಿಸಲಾಗುತ್ತಿದೆ. ಹೀಗೆ ಸಾಮ್ರಾಜ್ಯಶಾಹಿ ವ್ಯವಸ್ಥೆ ನಮ್ಮ ದೇಶದಲ್ಲಿ ಕಾಲಿಡುತ್ತಿದೆ. ಅದಕ್ಕಾಗಿ ಎಂಥ ಹಿಂಸಾಯಂತ್ರವನ್ನು ಕೂಡ ಬಳಸಲು ಆಳುವ ವರ್ಗ ಹೇಸುತ್ತಿಲ್ಲ. ಎರಡನೇ ಮಹಾಯುದ್ಧಕ್ಕೆ ಮೊದಲು ಹಿಟ್ಲರ್ ಜರ್ಮನಿಯಲ್ಲಿ ಬಳಸಿದ ತಂತ್ರಗಳನ್ನೇ ಇಲ್ಲಿಯೂ ಬಳಸಲಾಗುತ್ತಿದೆ. ಜರ್ಮನಿಯಲ್ಲಿ ಹಿಟ್ಲರ್ ಬೆಳೆದದ್ದು ಅಲ್ಲಿನ ಯಹೂದಿ ಜನಾಂಗವನ್ನು ಮತ್ತು ಕಮ್ಯೂನಿಸ್ಟರನ್ನು ದ್ವೇಷಿಸುತ್ತ ಎಂಬುದು ಜಗತ್ತಿಗೇ ಗೊತ್ತಿದೆ. ಜರ್ಮನಿಯಲ್ಲಿ ಜನಾಂಗವಾದವನ್ನು ಮುಂದೆ ಮಾಡಿ ದ್ವೇಷ ಸಂಸ್ಕøತಿಯ ಬೆಳೆಸಲಾಯಿತು. ಭಾರತದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷಸಂಸ್ಕøತಿ ಹಬ್ಬುತ್ತಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಕಮ್ಯೂನಿಸ್ಟರು ಈ ದ್ವೇಷಸಂಸ್ಕøತಿಗೆ ಗುರಿಯಾಗುವ ಎಲ್ಲ ಲಕ್ಷಣಗಳು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಾತಾವರಣದಲ್ಲಿ ಹೊರಹೊಮ್ಮುತ್ತಿವೆ. 
 ಆಗಲೇ ಹೆಗಲ ಮೇಲೆ ಹೆಣ ಬಂದು ಕೂತಿದೆ
ದ್ವೇಷದ ಗಡಿಯೊಳಗೆ ಮನುಷ್ಯನ ಹುಡುಕುತ್ತ.....
                          -ಕಾಲ - ಸಮಕಾಲೀನ
 ಸಾವಿನ ವಾರಸುದಾರರು ಮಾನವತೆಯ ಬೇಟೆಯಲ್ಲಿ ತೊಡಗಿದ್ದಾರೆ. ಲಫಂಗರು ಹಾಡಹಗಲೇ ರಸ್ತೆಯ ಮೇಲೆ, ಪೊಲೀಸರ ಮುಂದೆಯೆ, ಗೋರಕ್ಷಕರ ಸೋಗಿನಲ್ಲಿ ಅಮಾಯಕ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಅವರ ಕ್ರೂರ ಕೃತ್ಯಕ್ಕೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ವ್ಯವಸ್ಥೆಯು ತಳಸ್ತರದಲ್ಲಿ ಕ್ರೌರ್ಯವನ್ನು ಮತ್ತು ಮೇಲ್ ಸ್ತರದಲ್ಲಿ ಧರ್ಮದ ಹೆಸರಿನಲ್ಲಿ ಸುಂದರ ಭವಿಷ್ಯದ ಭ್ರಮೆಗಳನ್ನು ಸೃಷ್ಟಿಸುತ್ತಿದೆ. ಕ್ರೌರ್ಯವೇ ಧರ್ಮವಾದಾಗ ಕೋಮುವಾದಿಗಳು ಮತ್ತು ಉಗ್ರಗಾಮಿಗಳು ವಿಜೃಂಭಿಸುತ್ತಾರೆ. 
ಅದು ಬಿದ್ದಿದ್ದಲ್ಲ ಬೀಳಿಸಿದ್ದು
ಸದ್ದು ಕೇಳದ ಕಿವುಡುತನದಲ್ಲಿ...
ಅದು ನಿಂತೇ ಇತ್ತು ದೃಢವಾಗಿ
ಸುಂದರವಿತ್ತು ಸೌಹಾರ್ದ ನೋಟ
ಪಕ್ಷಿ ಸಾಕ್ಷಿಗಳೇ ಚಿಲಿಪಿಲಿ
ಉಲಿದು ತಂಗಿ ಗೂಡು ಕಟ್ಟಿ
ಮರಿ ಸಂಸಾರ ಹೂಡಿ ಮುಂದೆ ಹಾರುತ್ತಿದ್ದವು
ಆದರೀಗ ಅದಿಲ್ಲ.

ಕೆಡವಿದಲ್ಲಿ ಗಾಯವಿದೆ
ಕಟ್ಟಡ ಗೋಡೆ ಮೇಲೇಳುತ್ತಿದೆ
ಹಕ್ಕಿ ಕೂರದ ಹಾಗೆ.
                        -ಗರಿ ಮುರಿದು ಬಿದ್ದಲ್ಲೆಲ್ಲ
 ಈ ತೆರನಾದ ಅಭಿವೃದ್ಧಿಯನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸಹಜ ಬದುಕು ಕಳೆದುಹೋಗುತ್ತಿದೆ. ಎಲ್ಲೆಲ್ಲೂ ಕೃತ್ರಿಮತೆ ಎದ್ದು ಕಾಣುತ್ತಿದೆ. ಶಾಂತಿ ಮತ್ತು ಸೌಹಾರ್ದದ ಬದುಕಿಗೆ ಬೆಂಕಿ ಇಟ್ಟು ತಮ್ಮ ಸುಲಿಗೆ ಸಾಮ್ರಾಜ್ಯದ ಕನಸುಗಳನ್ನು ಸಾಕಾರಗೊಳಿಸುವಂಥ ನವಭಾರತದ ನಿರ್ಮಾಣ ಮಾಡುವಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಲ್ಲೀನವಾಗಿವೆ. ಇಂಥ ಭಯಾನಕ ಸ್ಥಿತಿಯನ್ನು ಮರ, ಪಕ್ಷಿ ಮತ್ತು ಗೂಡಿನಿಂದ ಕೂಡಿದ ರೂಪಕದೊಂದಿಗೆ ಕವಯಿತ್ರಿ ತಣ್ಣನೆಯ ಶಬ್ದಗಳಲ್ಲಿ ವರ್ಣಿಸುತ್ತ ಓದುಗರ ಹೃದಯದಲ್ಲಿ ತಾಪದ ಜ್ವಾಲೆಗಳನ್ನು ಸೃಷ್ಟಿಸುತ್ತಾಳೆ. ಹಕ್ಕಿಗಳು ಕೂರದ ಹಾಗೆ ಕಟ್ಟಡದ ಗೋಡೆಗಳು ಮೇಲೇಳುವ ಸ್ಥಿತಿ ಭಾರತಕ್ಕೆ ಬಂದೊದಗಿದೆ. ಜನ ಜಾಗೃತವಾಗುವ ವರೆಗೆ ಎಲ್ಲವನ್ನೂ ಕಳೆದುಕೊಳ್ಳುತ್ತಲೇ ಇರುತ್ತಾರೆ. ಹೋರಾಟ ತೀವ್ರವಾಗುವ ವರೆಗೂ ಇದು ಹೀಗೇ ಮುಂದುವರಿಯುತ್ತದೆ.
 ಮೈ ಮನಕೆ
ಅಂಟಿದೆ ಅನಾದಿಯ ಸುಟ್ಟ ಗಾಯದ ಕಲೆ
ಮುಚ್ಚಿಟ್ಟ ಅಬ್ಬೆಯ ವಸ್ತ್ರಕ್ಕೆ ಮತ್ತೆ ತಗುಲಿದೆ...
ಬೆಂಕಿ
ಗೀರುವ ಕಡ್ಡಿ ಮಾತ್ರ ಸುಟ್ಟು ಹೋಗುತ್ತಿಲ್ಲ.
ಮತ್ತೆ ಮತ್ತೆ ಹಸಿನಾಥ
ಅರೆ ಕೊಳೆತ ಹೆಣಗಳವು.
ಮಠದ ವಠಾರಗಳಲ್ಲಿ
ಮಸೀದಿಯ ಸಂಧಿಗಳಲ್ಲಿ
ಇಗರ್ಜಿಯ ವಾಡೆಗಳಲ್ಲಿ
ಸೌಧದ ಪ್ರಾಂಗಣದಲ್ಲಿ
ಪಿಶಾಚಗ್ರಸ್ಥ ಸ್ಮಾರಕಗಳಲ್ಲಿ.
                    -ಬೆಂಕಿಯನ್ನೇ ದೀಪವಾಗಿಸುವ

 ಎಲ್ಲೆಡೆ ಕ್ರೌರ್ಯ ಮತ್ತು ಅಶಾಂತಿಯೆ ಎದ್ದು ಕಾಣುತ್ತಿದೆ. ದೇಶಕ್ಕೆ ಬೆಂಕಿ ಹಚ್ಚಲು ಗೀರಿದ ಕಡ್ಡಿ ಮಾತ್ರ ಸುಟ್ಟುಹೋಗುತ್ತಿಲ್ಲ. ಆದರೆ ಅದಕ್ಕೆ ತಾಗುವುದೆಲ್ಲವೂ ಸುಟ್ಟು ಹೋಗುತ್ತಿವೆ. ಮಠ, ಮಂದಿರ, ಮಸೀದಿ, ಚರ್ಚುಗಳು ಅಸಹಾಯಕರಂತೆ ಮೌನವಾಗಿವೆ. ಅವುಗಳನ್ನು ನಂಬಿದವರು ಹೆಣವಾಗುವಂಥ ವಿಕೃತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಫ್ಯಾಸಿಸಂ ತಲೆ ಎತ್ತುವ ಸಂದರ್ಭದಲ್ಲಿನ ಲಕ್ಷಣಗಳಿವು. 
 ಸ್ಥಿತಪ್ರಜ್ಞ ಗೀತೆಯ ಬೋಧೆ
ನನ್ನೊಳಗಿನ ಕ್ರೌರ್ಯ
                  -ಕ್ರೌರ್ಯ
 ಬೀದಿಯ ಮೇಲೆ ರಕ್ತ ಹರಿಯುವಾಗ ಸ್ಥಿತಪ್ರಜ್ಞನಾಗಿರುವುದು ಕ್ರೌರ್ಯ ಎಂಬುದನ್ನು ಸಂವೇದಾನಶೀಲ ಕಾಮ್ರೇಡ್ ಯಮುನಾ ಬಹಳ ಮಾರ್ಮಿಕವಾಗಿ ನುಡಿದಿದ್ದಾಳೆ. ಕಳೆದ ಐದು ಸಾವಿರ ವರ್ಷಗಳ ಇತಿಹಾಸದಲ್ಲಿ ಈ ಸ್ಥಿತಪ್ರಜ್ಞೆಯ ಟೆಕ್ನಿಕ್ ಬಳಸಿಯೆ ದೇಶದ ಪ್ರತಿಶತ 90 ರಷ್ಟು ಜನರ ಸುಲಿಗೆಯನ್ನು ಅವ್ಯಾಹತವಾಗಿ ಮಾಡುತ್ತ ಬರಲಾಗುತ್ತಿದೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಪಟ್ಟಭದ್ರರು ಜನಸಮುದಾಯವನ್ನು ಮಾನಸಿಕ ಗುಲಾಮಗಿರಿಗೆ ತಳ್ಳುತ್ತಲೇ ಇದ್ದಾರೆ. ಇಂದು ವಿದ್ಯನ್ಮಾನ ಮಾಧ್ಯಮಗಳ ಮೂಲಕ ಈ ದಂಧೆ ಇನ್ನೂ ವಿಕಾರ ಸ್ವರೂಪದಲ್ಲಿ ಪಸರಿಸುತ್ತಿದೆ.
 ಕವನ ಬರೆಯುವ ಸಮಯವಲ್ಲವಿದು
ಹೊರಗೆ ಗದ್ದಲವಿದೆ
ಜಗಳವಿದೆ; ರಕ್ತಪಾತವಿದೆ
ಮತ್ತೆ ಮನದೊಳಗೆ 
ಜಂಝಾವಾತವಿದೆ.
ಇದು ಕವನ ಬರೆಯುವ ಸ್ಥಳವೂ ಅಲ್ಲ
ಇಲ್ಲಿ ಈಗಷ್ಟೇ ಅತ್ಯಾಚಾರ ಆಗಿದೆ
ದೇವಗುಡಿಯ ಹಿಂಭಾಗದ ಗೋಡೆಗೊರಗಿದೆ
ಆ ಹೆಣ.
ಬೆಳಗಿನ ಅಜಾó ಆಗುವಾಗಲೇ
ಪ್ರಾಣಿಯ ತಲೆ 
ಮಸೀದಿಯ ಮೆಟ್ಟಿಲ ಮೇಲೆ ಅಂಗಾತ ಬಿದ್ದಿದೆ.
ಇಗರ್ಜಿಯ ಕ್ರಾಸಿಗೆ ಯಾರೋ ರಕ್ತ ಲೇಪಿಸಿದ್ದಾರೆ.
ಇಲ್ಲಿ ಕವನ ಬರೆಯಲು ಸ್ಥಳವಿಲ್ಲ.
                                -ಸಮಯವಲ್ಲವಿದು
 ಹೀಗೆ ನಮ್ಮ ದೈನಂದಿನ ಬದುಕಿನ ದುರಂತವನ್ನು ಪಾಬ್ಲೊ ನೆರೂದಾ ಹಾಗೆ ಕಣ್ಣಿಗೆ ಕಟ್ಟುವಂತೆ ಶಬ್ದಗಳಲ್ಲಿ ಹಿಡಿದಿಡುತ್ತಾಳೆ. ವಾಸ್ತವದ ಕುರಿತು ನಮ್ಮನ್ನು ಎಚ್ಚರಿಸುತ್ತಾಳೆ. ಇದು ಯಾವುದರ ಮುನ್ಸೂಚನೆ ಎಂಬುದನ್ನು ಸೂಚಿಸುತ್ತಾಳೆ. ಮತ್ತೆ ಮತ್ತೆ ನಮ್ಮ ಮನದಲ್ಲಿ ಹಿಟ್ಲರನ ಜರ್ಮನಿ ಸುಳಿಯುವಂತೆ ಮಾಡುತ್ತಾಳೆ.  
 ಬೀದಿಗೆ ಬಂದು ಮಾತನಾಡಬೇಕಿದೆ.
ಕಲ್ಲು ಹೊಡೆಯ ಬಹುದು, ಬೂಟು ತೂರಬಹುದು
ದೊಣ್ಣೆರಾಶಿ ಬೀಳಬಹುದು ನಡುಬೀದಿಯಲ್ಲಿ
ಆದರೂ ಮಾತಾಡಬೇಕಿದೆ.

ಹಾಡೇ ಹಗಲು ಹೆಣ ಬೀಳಬಹುದು
ಕತ್ತಿ ಚಾಕು ಕೆಲಸ ತ್ರಿಶೂಲ ಮಾಡಬಹುದು
ನಾಡಿ ಬದಲು ಲಾಡಿ ಬಿಚ್ಚಿ ನೋಡಬಹುದು
ಆದರೂ ಮಾತಾಡಬೇಕಿದೆ...

ಕೊಲೆಗಾರನ ಪತ್ತೆಯಾಗುವ ತನಕ
ಶಿಕ್ಷೆಯಾಗುವ ತನಕ
ಮತ್ತೆ ಮತ್ತೆ ಮಾತಾಡಬೇಕಿದೆ
ಮುರುಟಿದ ಕನಸನ್ನು
ಮರಗೆಟ್ಟ ಮನಸನ್ನು
ಕೂಡಿಸಬೇಕಿದೆ ತೇವದಿಂದ...
                        -ಮಾತಾಡಬೇಕಿದೆ
 ಕವಯಿತ್ರಿಯ ಅದಮ್ಯ ಶಕ್ತಿಯ ದ್ಯೋತಕವಾಗಿ ಈ ಕವನ ಓದುಗರ ಮನದಾಳಕ್ಕಿಳಿಯುತ್ತದೆ. ಇಲ್ಲಿ ಮಾತೆಂಬುದು ಕ್ರಿಯೆಯ ಪ್ರತೀಕವಾಗಿದೆ. ಫ್ಯಾಸಿಸ್ಟರು ಮಾತನ್ನು ಅಪರಾಧ ಎಂದು ವ್ಯಾಖ್ಯಾನಿಸುತ್ತಾರೆ. ಅವರು ಹೇಳಿದಂತೆ ಕೇಳಿಕೊಂಡು ಮೌನವಾಗಿ ಬದುಕುವುದೊಂದೇ ಮಾರ್ಗವಾಗಿರುತ್ತದೆ. ಮಾತೇ ಕ್ರಾಂತಿಯಾದಾಗ ತ್ರಿಶೂಲಗಳು ಕತ್ತಿ ಚಾಕುಗಳ ಅವತಾರ ತಾಳುತ್ತವೆ. ಹಾಡೇ ಹಗಲು ಹೆಣ ಬೀಳುತ್ತವೆ. ಅದರೂ ಮಾತಾಡಲೇಬೇಕು ಎಂಬುದು ಈ ಕಾವ್ಯದ ಆಶಯವಾಗಿದೆ. ವಿಧ್ವಂಸಕ ಕೃತ್ಯಗಳ ಮಧ್ಯದಲ್ಲಿ ಕೂಡ ಕನಸುಗಳನ್ನು ಹೆಣೆಯುವಲ್ಲಿ ಮತ್ತು ಮನಸ್ಸುಗಳನ್ನು ಕೂಡಿಸುವಲ್ಲಿ ಕವಯಿತ್ರಿ ತಲ್ಲೀನಳಾಗಿದ್ದಾಳೆ.
 ಕಾವ್ಯವೇ ನೀ ಜೋಗಿಯಾಗಿ ಬಿಡು
ಹಂಗಿನ ಭಯ ಬಿಟ್ಟು
ಅಡಿಯಾಳ್ತನದ ಸಂಕಲೆ ಎಸೆದು
ಬೀದಿ ಬೀದಿಯಲಿ ಸಂಚರಿಸು.

ಹಸಿದವರ ರಟ್ಟೆಯಲಿ
ಮಕ್ಕಳ ಭಾವದಲಿ
ಹೆಂಗಳೆಯರ ಕಣ್ಣಗೂಡಿನಲಿ
ದರಿದ್ರರ ಗುಡಿಸಲಲಿ
ಶಕ್ತಿಯ ಕೊಡು.
               -ಜೋಗಿಯಾಗು

 ಬಂಡವಾಳಶಾಹಿ ವ್ಯವಸ್ಥೆ ಕವಿಗಳನ್ನೂ ಖರೀದಿಸುತ್ತದೆ. ಅಂತೆಯೆ ಜೋಗಿಯಾಗೆಂದು ಕಾವ್ಯಕ್ಕೆ ಯಮುನಾ ಕರೆ ಕೊಡುತ್ತಾಳೆ. ಹಂಗಿಲ್ಲದ ಕಾವ್ಯ ಮಾತ್ರ ಬೀದಿಯಲ್ಲಿ ಜನರ ಮಧ್ಯೆ ಬಂದು ನಿಲ್ಲುವ ಶಕ್ತಿಯನ್ನು ಹೊಂದಿರುತ್ತದೆ. ಜನಸಮುದಾಯಕ್ಕೆ ಹೋರಾಡುವ ಶಕ್ತಿಯನ್ನು ಕೊಡುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಚಿಲಿಯ ಕವಿ ಪಾಬ್ಲೊ ನೆರೂದಾ ನಿಗೂಢವಾಗಿ ನಿಧನರಾದಾಗ 50 ಸಾವಿರ ಜನ ಮೈದಾನದಲ್ಲಿ ಕೈ ಕೈ ಹಿಡಿದು ‘ಎಲ್ ಪ್ಯಾಬ್ಲೊ ವುನಿದೊ ಹಮಾಸ್ಸಿರಾ ವೆನ್ಸಿದೊ’ (ಒಗ್ಗಟ್ಟಾದ ಜನರನ್ನು ಸೋಲಿಸಲು ಸಾಧ್ಯವಿಲ್ಲ) ಎಂಬ ಒಂದು ಸಾಲಿನ ಹಾಡನ್ನು ಹಾಡುವುದರ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದರು. ಆ ಹಾಡು ವಿಶ್ವದ ಕ್ರಾಂತಿಕಾರಿಗಳಲ್ಲಿ ಹೊಸ ಚೈತನ್ಯ ಮೂಡಿಸಿತು.
 ಸಂಗಾತಿ... ಕವನ ಹುಟ್ಟುವಾಗ ಜೀವ ಹಿಂಡಲಿಲ್ಲ
ಅದು ನನ್ನ ಪ್ರೇಮಿಸಿತು ಶಬ್ದಾರ್ಥದಲ್ಲಿ
ನಿನಗಿಂತ ಮೊದಲೇ
ಬಯಲಲ್ಲಿ ಗುಹೆಯಲ್ಲಿ ಕತ್ತಲಲ್ಲಿ
ಕಾಡಿದ್ದು ನಿಜ
ಬೇಗ ಮನಸ್ಸು ಬಿಚ್ಚು ಎಂದು.
ಒಪ್ಪುವೆ
ಅದು ಬಳಿ ಸುಳಿವ ಸುಳಿವಿದ್ದಾಗ
ನಿನ್ನ ಆಲಿಂಗನದಲ್ಲಿ
ನನ್ನ ಬೆಸುಗೆ ಇರಲಿಲ್ಲ 
ಮೋಸವೂ ಇರಲಿಲ್ಲ ನಿನಗೆ
ನಾನೇ
ಕವನವಾಗಿದ್ದೆ.
                           -ನಿನ್ನ ಜೊತೆ ನನ್ನ ಕವನ
 ಈ ಕವಯಿತ್ರಿಯದು ಪ್ರಗಲ್ಭ ಪ್ರೇಮ. ವೈಯಕ್ತಿಕ ಬದುಕನ್ನೂ ಕಾವ್ಯವಾಗಿಸುವ ಪ್ರತಿಭೆ ಇದು. ಹೀಗೆ ಬಡತನ, ಬಾಲ್ಯ, ಹೆಣ್ತನ, ಪರಿಸರ ಮತ್ತು ಯುದ್ಧದ ಕ್ರೌರ್ಯದಿಂದಾಗಿ ಬಳಲಿದ ಜಪಾನ್, ಪ್ಯಾಲೆಸ್ಟೀನ್ ಮುಂತಾದ ದೇಶಗಳು ಅವಳ ಕಾವ್ಯದ ವಸ್ತುಗಳಾಗಿವೆ.
 ಅವಳು ಹೆಣ್ಣಾಗಿದ್ದಕ್ಕೆ 
ಮೌನಕ್ಕೂ ಮಾತಿನ ಶಕ್ತಿ.
               -ಅವಳು ಮಾತ್ರ
 ಪುರಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮೌನದ ಮೂಲಕವೂ ಮಾತನಾಡ ಬಲ್ಲಳು ಎಂಬುದು ಆಕೆಯ ಅದಮ್ಯಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಕಾಲಕಸವಾಗಿ ಕಾಣುವಂಥ ಸಂದರ್ಭದಲ್ಲಿ ಕೂಡ ಗಾಂಭೀರ್ಯ ಮತ್ತು ಘನತೆಯೊಂದಿಗೆ ಹೆಣ್ಣು ತನ್ನತನವನ್ನು ಕಾಪಾಡಿಕೊಂಡು ಬಂದದ್ದು ಅವಳ ಇಂಥ ಶಕ್ತಿಯಿಂದಲೇ ಇರಬೇಕು.
 ಹೀಗೆ ಕಾವ್ಯದ ಮೂಲಕ ಹೋರಾಟಕ್ಕೆ ಸ್ಫೂರ್ತಿ ನೀಡುತ್ತ ಮತ್ತು ಹೋರಾಟದಲ್ಲೂ ಕಾವ್ಯವನ್ನು ಕಾಣುತ್ತ ಬದುಕನ್ನು ಸಹ್ಯಗೊಳಿಸುವಲ್ಲಿ ತಲ್ಲೀನಳಾಗಿರುವ ಕಾಮ್ರೇಡ್ ಯಮುನಾ ಗಾಂವ್ಕರ್ ಹೆಚ್ಚು ಹೆಚ್ಚು ಕಾವ್ಯಕೃಷಿ ಮಾಡುತ್ತ ಹೋರಾಟದ ಹಾದಿಯಲ್ಲಿ ಜನಸಾಗರ ಸೃಷ್ಟಿಯಾಗುವಂತೆ ಮಾಡಲಿ.
                                     ರಂಜಾನ್ ದರ್ಗಾ
01.05.2017

Saturday 4 July 2020

ಏಕವಚನದ ಬೆರಗು- ವಿಠ್ಠಲ ಭಂಡಾರಿ, ಕೆರೆಕೋಣ


  ಒಂದು ದಿನ ಹೀಗಾಯ್ತು. ನಮ್ಮ ಮನೆಹೊಳ್ಳಿಯ ಆರಾಮಖುರ್ಚಿಯಲ್ಲಿ ಕುಳಿತು ಅಣ್ಣ (ಆರ್.ವಿ.ಭಂಡಾರಿ) ಯಾರೊಂದಿಗೋ ಮಾತನಾಡುತ್ತಿದ್ದ. ಒಳಗಿನಿಂದ ಅವರ ಮಾತು ಆಲಿಸುತ್ತಿದ್ದ ನನಗೆ ಆಶ್ಚರ್ಯ ಕಾದಿತ್ತು. ಅಣ್ಣನೆದುರು ಕುಳಿತವರು ಯಾರು? ಎಲ್ಲಿಯವರು?. ಯಾಕೆಂದರೆ ಇಬ್ಬರೂ ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ತೀರಾ ಹತ್ತಿರದ ನೆಂಟರನ್ನು ಬಿಟ್ಟರೆ ಅಣ್ಣ ಯಾರಿಗೂ ಏಕವಚನ ಬಳಸುತ್ತಿರಲಿಲ್ಲ. ಶಾಲೆಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಆತ ಏಕವಚನ ಬಳಸುತ್ತಿರಲಿಲ್ಲ. ಈಕಡೆಯಿಂದಲೂ ಹಾಗೆ, ತೀರಾ ಹತ್ತಿರದವರನ್ನು, ಬಾಲ್ಯದ ಒಡನಾಡಿಗಳನ್ನು ಬಿಟ್ಟರೆ ಸಾಮಾನ್ಯವಾಗಿ ಆತನಿಗೆ ಏಕವಚನ ಯಾರು ಬಳಸುತ್ತಿರಲಿಲ್ಲ. ಯಾಕೆಂದರೆ ಊರಲ್ಲಿ ಆತ ಮಾಸ್ತರ್. ಹೊರಗಡೆ ಹೋರಾಟಗಾರ, ಸಾಹಿತಿ ಎನ್ನುವ ಗೌರವ. ಆದರೆ ಹೊರಗಡೆ ಏಕವಚನದ ಲೋಕಾಭಿರಾಮದ ಮಾತುಗಳನ್ನು ಆಲಿಸುತ್ತಾ ಹೊರಬಂದು ನೋಡಿದರೆ ಅಪರಿಚಿತ ಮುಖ. “ಈತ ಜೈರಾಮ್ ಹೆಗಡೆ, ನನ್ನ ಸ್ನೇಹಿತ. ಒಳ್ಳೆಯ ಕವಿ ಮತ್ತು ಪತ್ರಕರ್ತ” ಎಂದು ಪರಿಚಯಿಸಿದ. ಅವರ ಸ್ನೇಹಶೀಲ ಮಾತು, ನಗು, ಸಣ್ಣ ತಮಾಷೆ ಖುಷಿಕೊಟ್ಟಿತು.  ಬಹುಬೇಗ ಅವರು ನನಗೂ ಆತ್ಮೀಯರಾದರು. ಅಣ್ಣ ಮತ್ತು ಜೈರಾಮ ಹೆಗಡೆಯವರು ಭೇಟಿಯಾಗಿ ಏಕವಚನದಲ್ಲಿ ಮಾತನಾಡಿಕೊಳ್ಳುವುದನ್ನು ನಾನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಣ್ಣನಿಗೆ ಏಕವಚನದಲ್ಲಿ ಮಾತನಾಡುವುದನ್ನು ಕೇಳಿಸಿಕೊಳ್ಳುವುದು ನನಗೆ ಯಾಕೋ ಯಾವತ್ತೂ ಖುಷಿಯ ಸಂಗತಿಯಾಗಿತ್ತು. -ಅಲ್ಲೊಂದು ಹುದ್ದೆ, ಅಂತಸ್ತಿನ ಯಾವ ಕಂದಕವೂ ಇಲ್ಲದ ಆತ್ಮೀಯ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ಕಾರಣಕ್ಕಿರಬೇಕು. ಅವನಿಗೆ ಏಕವಚನದಲ್ಲಿ ಮಾತನಾಡುವ ಸಾಹಿತಿಗಳೆಂದರೆ ಜಯರಾಮ ಹೆಗಡೆಯವರೊಬ್ಬರೇ ಇರಬೇಕು ಎನ್ನುವುದು ನನ್ನ ನೆನಪು.
  ಜಯರಾಮ ಹೆಗಡೆಯವರು ಬಹುಶಃ ಒಂದೆರಡು ವರ್ಷ ನಾವೆಲ್ಲಾ  ಕಲಿತ ನಮ್ಮೂರಿನ ಎಸ್.ಕೆ.ಪಿ ಜೂನಿಯರ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದರು. ಅದೊಂದು ಅನುದಾನಿತ ಖಾಸಗಿ ಕಾಲೇಜು. ‘ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ ಆತ ಅಲ್ಲೇ ಇರಬಹುದಾಗಿತ್ತು’ ಎಂದು ಅಣ್ಣ ಹೇಳುತ್ತಿದ್ದ. ಅರೇಅಂಗಡಿ ಸಣ್ಣ ಊರಾಗಿರುವುದರಿಂದ ಅಲ್ಲಿರುವ ಬೆರಳೆಣಿಕೆಯಷ್ಟು ಸಾಹಿತ್ಯಾಸಕ್ತರು ಒಟ್ಟಾಗುವುದು ಸಹಜ. ಶಾಲೆ ಬಿಟ್ಟೊಡನೆ ಆ ಕಾಲದ ಪ್ರಸಿದ್ಧ ಅಧ್ಯಾಪಕ ಜಿ.ಆರ್ ಭಟ್ ಅವರ ರೂಮಿನಲ್ಲಿ ದಿನನಿತ್ಯ ಸಾಹಿತ್ಯ ಚರ್ಚೆ ಮತ್ತು ಕರ್ನಾಟಕ ಸಂಘದ ಕಾರ್ಯಕ್ರಮ, ತಾಳಮದ್ದಲೆ..ಇತ್ಯಾದಿÀ ರೂಪುರೇಷೆ ಸಿದ್ಧಗೊಳ್ಳುತ್ತಿತ್ತು. ಇದೂ ಒಂದು ರೀತಿಯಲ್ಲಿ ಧಾರವಾಡದಲ್ಲಿದ್ದಂತೆ ಸಣ್ಣ ಗೆಳೆಯರ ಬಳಗ. ಆ ಕಾಲದಿಂದಲೂ ಅವರು ನಮ್ಮ ಕುಟುಂಬದೊAದಿಗೆ ಆತ್ಮೀಯ ಸಂಬAಧ ಉಳಿಸಿಕೊಂಡು ಬಂದಿದ್ದರು.
  ನಾನು ಸಂಘಟನಾ ಕೆಲಸಕ್ಕೆ ಹಾಸನದ ಕಡೆ ಹೋದಾಗ ‘ಶಿರಸಿ’ ಅಥವಾ ‘ಉತ್ತರ ಕನ್ನಡ’ದ ಸುದ್ದಿ ಬರುತ್ತಿದ್ದಂತೆ ಹಲವು ಲೇಖಕರು, ಸಂಘಟನೆಯ ಮುಖಂಡರು ಜಯರಾವi ಹೆಗಡೆಯವರನ್ನು ವಿಚಾರಿಸುತ್ತಿದ್ದರು. ಅಲ್ಲಿ ಅವರು ರೈತ ಹೋರಾಟಗಾರರಾಗಿ, ಪತ್ರಿಕೆಯ ಸಂಪಾದಕರಾಗಿ ಒಳ್ಳೆಯ ಹೆಸರು ಸಂಪಾದಿಸಿದ್ದರು. ಇತ್ತೀಚೆಗೆ ಸಿರ್ಸಿಗೆ ಬಂದಾಗ ಭಾನು ಮುಷ್ತಾಕ್ ಅವರು ಹೆಗಡೆಯವರನ್ನು ಖುದ್ದಾಗಿ ಭೇಟಿಯಾಗಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದನ್ನು ನೋಡಿದ್ದೇನೆ. ಅವರ ಪತ್ರಿಕಾ ವ್ಯವಸಾಯ ಅರ್ಥಪೂರ್ಣವಾಗಿ ಪ್ರಾರಂಭವಾಗಿದ್ದು ಅಲ್ಲೇ ಎಂದುಕೊಂಡಿದ್ದೇನೆ. ಅಲ್ಲಿಂದ ನಮ್ಮ ಜಿಲ್ಲೆಗೆ ಬಂದು ಅವರು ಜನಮಾಧ್ಯಮ ಪ್ರಾರಂಭಿಸಿ ಕಾಲು ಶತಮಾನಗಳು ಕಳೆದವು ಎನ್ನುವುದು ನಮಗೂ ಸಂಭ್ರಮದ ಸಂಗತಿ. ಮಾಧ್ಯಮ ಲೋಕದಲ್ಲಿ ಇದ್ದೆ ಅವರು ಅದರ ಮಿತಿಯನ್ನೂ ಅರಿತವರು ಮಾಧ್ಯಮಗಳು ವ್ಯಾಪಾರೀಕರಣಕ್ಕೆ ತೆರೆದುಕೊಂಡು ಕೆಟ್ಟ ಉದ್ಯಮದ ಸ್ವರೂಪ ಪಡೆದುಕೊಂಡಿರುವ (ಉದ್ಯಮ ಮತ್ತು ವ್ಯಾಪಾರೀಕರಣದಿಂದ ಬರುವ ಎಲ್ಲಾ ಅಪಮೌಲ್ಯಗಳಿಗೆ, ಅನೈತಿಕತೆಗೆ ಪಾಲುದಾರರಾಗುತ್ತಿರುವ) ಹೊತ್ತಿನಲ್ಲಿ ನಿಜವಾದ ಅರ್ಥದಲ್ಲಿ ಒಂದು ಜನಪರ, ಅಭಿವೃದ್ಧಿಶೀಲ ಪತ್ರಿಕಾ ವ್ಯವಸಾಯ ನಡೆಸಿದ ಜೈರಾಮ ಹೆಗಡೆಯವರನ್ನು ಅಭಿನಂದಿಸುವುದು ನನಗಂತೂ ಖುಷಿಯ ಸಂಗತಿ. ಆ ಮೂಲಕ ಪತ್ರಿಕಾ ವ್ಯವಸಾಯವನ್ನು ‘ಸೇವೆ’ ಅಂದುಕೊAಡಿರುವ ಕಾಲಘಟ್ಟದಿಂದ ‘ಉದ್ಯಮ’ ಎಂದುಕೊಳ್ಳುವ ಈವರೆಗಿನ ಒಟ್ಟೂ ಬೆಳವಣಿಗೆಯನ್ನು ಕಣ್ಮುಂದೆ ತಂದುಕೊಳ್ಳಲು ಸಾಧ್ಯ. ಜೈರಾಮ ಹೆಗಡೆಯವರ ‘ಆತ್ಮಕತೆ’ ಆಕಾಲ ಎದುರಿಸಿದ ಬಿಕ್ಕಟ್ಟುಗಳನ್ನು, ರೂಢಿಸಿಕೊಂಡ ರ‍್ಯಾಯಗಳನ್ನು ದಾಖಲಿಸುವ ಒಂದು ಚಾರಿತ್ರಿಕ ಬರಹ ಆಗಿರಬಹುದು.(ನಾನು ಬೇಗ ಓದಬೇಕು.) ಅವರ ಸಂಪಾದಕೀಯವನ್ನು ಒಟ್ಟಾಗಿ ನೋಡಿದರೂ ಈ ಹೊಳಹುಗಳನ್ನು ನೋಡಬಹುದು.
ತಾನೊಬ್ಬ ಪತ್ರಿಕೆಯ ಸಂಪಾದಕನೆನ್ನುವ ಯಾವ ಹಮ್ಮೂ ಇಲ್ಲದೆ ಹೆಗಡೆಯವರು ಶಿರಸಿಯಲ್ಲಿ ನಮ್ಮೆಲ್ಲ ಜನಪರ ಚಳುವಳಿಗಳ ಜೊತೆ ನಿಂತವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ, ಗಲಭೆ ಪ್ರಾರಂಭವಾದ ದಿನದಲ್ಲಿ ಒಂದು ಸೌಹಾರ್ದ ವಾತಾವರಣ ಸೃಷ್ಟಿಸುವ ಪ್ರಧಾನ ಕಾರಣಕ್ಕೆ ಹುಟ್ಟಿಕೊಂಡ ಲೇಖಕರು, ಪತ್ರಕರ್ತರು, ವಿವಿಧ ವಲಯದ ಚಿಂತಕರನ್ನು ಒಳಗೊಂಡ ಒದು ಸಾಂಸ್ಕೃತಿಕ ಸಂಘಟನೆಯಾದ  ‘ಚಿಂತನ ಉತ್ತರ ಕನ್ನಡ’ದ ಮೊದಲ ಸಮಾವೇಶದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಚಿಂತನ ಕನ್ನಡ ಪುಸ್ತಕ ಮಳಿಗೆಯನ್ನು ಪಂಡಿತ್ ಗ್ರಂಥಾಲಯದ ಒಂದು ಭಾಗದಲ್ಲಿ ಪ್ರಾರಂಭಿಸಿದಾಗ, ಕಿರು ಪುಸ್ತಕ ಮಾಲೆಯನ್ನು ಪ್ರಾರಂಭಿಸಿದಾಗ  ಅವರು ಕಾರ್ಯಕರ್ತರಂತೆ ನಮ್ಮೊಂದಿಗೆ ಇದ್ದರು. ಸ್ವತಃ ಬಂದು ವರದಿ ಮಾಡಿದ್ದಿದೆ. ಜಯರಾವi ಹೆಗಡೆಯವರು ಸಂಘಟನೆ ಮುನ್ನೆಲೆಗೆ ತಂದ ವೈಚಾರಿಕತೆಯ ಜೊತೆಗೆ ಈವರೆಗೂ ನಿಂತರು. ಅವರೇ ಸಂಪಾದಕರಾಗಿರುವ ‘ಜನ ಮಾಧ್ಯಮ’ದಲ್ಲಿ ಪ್ರತಿ ಕಾರ್ಯಕ್ರಮಕ್ಕೂ ಅಂತಹ ದೊಡ್ಡ ಸ್ಥಳ ನೀಡಿದರು. ಜಿಲ್ಲೆಯಲ್ಲಿ ‘ಚಿಂತನ’ದ ಬೆಳವಣಿಗೆಯಲ್ಲಿ ಅವರ ಕೊಡುಗೆ ಕೂಡ ಮಹತ್ವದ್ದು. ಹಮ್ಮಿಕೊಂಡ ಕಾರ್ಯಕ್ರಮ ಮತ್ತು ಅದರ ಮಹತ್ವದ ಬಗ್ಗೆ ಸಂಪಾದಕೀಯ ಬರೆದು ಪ್ರೋತ್ಸಾಹಿಸಿದವರು. ಚಿಂತನದ ಮೊದಲ ಸಮಾವೇಶದಿಂದ ಮೊದಲ್ಗೊಂಡು ಮೊನ್ನೆ ಮೊನ್ನೆ ಶಿರಸಿಯಲ್ಲಿ ಸಂಘಟಿಸಿದ ‘ಸಂವಿಧಾನ ನಡೆ’ ಜಾಥಾ ಮತ್ತು ಸಮಾವೇಶದವರೆಗೆ ನಮ್ಮೊಂದಿಗಿದ್ದು ಅಗತ್ಯ ಸಲಹೆ ಸೂಚನೆ ನೀಡಿದವರು.
ಅಣ್ಣನೊಂದಿಗೆ ಅವರ ಪಯಣ ಅರೇಅಂಗಡಿಯ ಜೂನಿಯರ್ ಕಾಲೇಜಿನಿಂದ ಪ್ರಾರಂಭವಾಗಿ, ಅದು ಬಂಡಾಯ ಸಾಹಿತ್ಯ ಸಂಘಟನೆಯನ್ನು ಹಾಯ್ದು, ‘ಜನಮಾಧ್ಯಮ’ ಪತ್ರಿಕೆಯವರೆಗೂ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡೇ ಸಾಗಿತು. ಉತ್ತರ ಕನ್ನಡದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟುವಾಗ ಆರ್.ವಿ. ಭಂಡಾರಿ, ಜಿ.ಎಸ್. ಅವಧಾನಿ, ವಿ. ಜೆ. ನಾಯಕ, ಶಾಂತಾರಾಮ ನಾಯಕ, ವಿಷ್ಣು ನಾಯಕ, ವಿ. ಮುನಿವೆಂಕಟಪ್ಪ,  ಮಾಸ್ತಿ ಗೌಡ, ನಜೀರ್ ಚಂದಾವರ, ಕಶ್ಯಪ ಪರ್ಣಕುಟಿ, ಶಶಿಧರ್ ಭಟ್, ವಿಠ್ಠಲ ಪೇರುಮನೆ, ಬಿ.ಟಿ.ಶ್ರೀಪಾದ, ಸುಬ್ರಾಯ ಮತ್ತೀಹಳ್ಳಿ, ಪ್ರಕಾಶ ಕಡಮೆ, ಕೃಷ್ಣ ಹಿಚ್ಕಡ, ಮೋಹನ ಕುರುಡಗಿ, ಶಂಕರ..... ಮುಂತಾದವರೊಂದಿಗೆ ಜಯರಾಮ ಹೆಗಡೆಯವರೂ ಸಕ್ರಿಯರಾಗಿದ್ದರು. ಬಂಡಾಯ ಅನ್ನುವುದನ್ನು ಹೊಸತಲೆಮಾರಿನ ಬರಹಗಾರರ ಮನೋಧರ್ಮವಾಗಿಸಿದ ಶೇಯಸ್ಸು ಇವರೆಲ್ಲರಿಗೆ ಸೇರಬೇಕು. ಬೇರೆಬೇರೆ ಕಾರಣಕ್ಕೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಯಾವುದೇ ಸಂದರ್ಭವನ್ನು ಇವರು ಈಗಲೂ ಬಿಟ್ಟುಕೊಡುವವರಲ್ಲ. ಆಗ ಬಂಡಾಯ ಸಾಹಿತ್ಯ ಸಂಘಟಿಸುವ ಬಹುತೇಕ ಕವಿಗೋಷ್ಠಿಯಲ್ಲಿ (ಜಿಲ್ಲೆಯಲ್ಲಾದರೂ ಹಲವು ಬಾರಿ ಹೊರಜಿಲ್ಲೆಯಲ್ಲಾದರೂ) ಜಯರಾವi ಹೆಗಡೆಯವರ ಕವಿತೆ ಇರಲೇಬೇಕು. ಹಾಗಂತ ಹೆಸರಿಗಾಗಿ ಅವರೆಂದೂ ಹಪಹಪಿಸಿದವರಲ್ಲ. ಕರೆಯೋಲೆಯಲ್ಲಿ ಹೆಸರಿಲ್ಲದಿದ್ದರೂ ಕಾರ್ಯಕ್ರಮದಲ್ಲಿ ಇಡೀ ದಿನ ಹಾಜರಿದ್ದು ಎಲ್ಲರ ಮಾತು ಕೇಳುವ ಅಪರೂಪದ ಸಹೃದಯತೆ ಅವರದು. ಬಂಡಾಯ ಸಾಹಿತ್ಯ ಇಂದು ಸಂಘಟನಾ ರೂಪದಲ್ಲಿ ಶಿಥಿಲವಾಗಿದ್ದರೂ ಅದು ರೂಪಿಸಿದ ಆಲೋಚನಾ ಕ್ರಮ, ಜೀವಪರ ಕಾಳಜಿ ಈಎಲ್ಲಾ ಲೇಖಕರಲ್ಲಿ ಈಗಲೂ ಇರುವುದನ್ನು ಕಾಣುತ್ತೇವೆ. ಹಾಸನದಲ್ಲಿ ಪತ್ರಕರ್ತರಾಗಿ ರೂಢಿಸಿಕೊಂಡು ಬಂದ ಸಮಾಜವಾದಿ ಆಲೋಚನಾಕ್ರಮ ಬಂಡಾಯ ಚಳುವಳಿಯ ಜೊತೆ ಹೆಚ್ಚು ಗಟ್ಟಿಗೊಂಡಿತು. ಇದನ್ನು ಅವರ ಎಲ್ಲಾ ಕೃತಿಗಳಲ್ಲಿ, ಬರೆದ ಸಂಪಾದಕೀಯದಲ್ಲಿ ಸ್ಪಷ್ಟವಾಗಿಯೇ ಗುರುತಿಸಬಹುದು.
ನಾನು ವಿದ್ಯಾರ್ಥಿ ಸಂಘಟನೆಯಲ್ಲಿ (SFI) ಮತ್ತು ಯುವಜನ ಸಂಘಟನೆಯಲ್ಲಿ (DYFI) ಕೆಲಸ ಮಾಡುತ್ತಿದ್ದ ಕಾಲ. ಶಿರಸಿ ನಮ್ಮ ಕೇಂದ್ರಸ್ಥಾನ ಕೂಡ ಆಗಿತ್ತು. ಸಂಘಟನೆ ಹೆಚ್ಚು ಕ್ರಿಯಾಶೀಲವಾಗಿದ್ದು ಕೂಡ ಇಲ್ಲಿಯೇ. ಎಂಎಸ್ ಧಾರೇಶ್ವರ, ಮಂಜುನಾಥ ಪುಲ್ಕರ್, ಪಿ.ಜಿ. ಮಶಾಲ್ದಿ, ಬಂಗಾರೇಶ್ವರ ಗೌಡ......ಮುಂತಾದವರು ನಡೆಸಿದ ಹೋರಾಟಗಳಿಂದ ಈ ನೆಲ  ಎಡಪಂಥೀಯ ಆಲೋಚನೆಯ ಸಂಘಟನೆ ಕಟ್ಟಲು ಉಳಿದ ಪ್ರದೇಶಕ್ಕಿಂತ ಹೆಚ್ಚು ಪೂರಕವಾಗಿತ್ತು. ನಮ್ಮ ಜಿಲ್ಲಾ ಕೇಂದ್ರ ಕಾರವಾರವಾದರೂ ಒಂದು ರೀತಿಯಿಂದ ಶಿರಸಿಯೇ ಕೇಂದ್ರವಾಗಿತ್ತು. ಹಾಗಾಗಿಯೇ ಜಿಲ್ಲೆಯ ಅತಿ ಹೆಚ್ಚು ಪತ್ರಿಕೆಗಳು ನಡೆಯುತ್ತಿದ್ದುದು ಶಿರಸಿಯಲ್ಲಿಯೆ. ಆಗ ಜಯರಾಮ ಹೆಗಡೆಯವರೊಂದಿಗೆ ಹೆಚ್ಚು ಸಂಪರ್ಕ ಬಂತು. ಯಾವುದೇ ಕಾರ್ಯಕ್ರಮದ ಸುದ್ದಿ ನೀಡಲು, ಹೇಳಿಕೆ ನೀಡಲು ಜನಮಾಧ್ಯಮ ಮತ್ತು ಮುನ್ನಡೆ ಪತ್ರಿಕಾ ಕಚೇರಿಗೆ ಹೋಗುತ್ತಿದ್ದೆವು. ಕೆಲವು ಬಾರಿ ಪತ್ರಿಕಾ ಹೇಳಿಕೆಯನ್ನು ಬರೆಯುವುದು ಹೇಗೆ ಎಂದು ನಮಗೆ ಪಾಠ ಮಾಡಿದ ನೆನಪು ಇದೆ. ಹಾಗೆ ಸುದ್ದಿ ಬಂದ ಪತ್ರಿಕೆಯ ಒಂದೆರಡು ಪ್ರತಿ ಕೊಡುತ್ತಿದ್ದರು. ನಮಗೆ ಪತ್ರಿಕೆ ಮುದ್ರಣ ಗೊಳ್ಳುವ ಖಾಲಿ ಪೇಪರ್ ಮೇಲೆ ಕಣ್ಣು. ಪೋಸ್ಟರ್ ಬರೆಯಲು ಇದು ಉಪಯೋಗ.  ಅಂಗಡಿಯಿAದ ಹಣ ಕೊಟ್ಟು ಖರೀದಿ ಮಾಡುವಷ್ಟು ಸಾಮರ್ಥ್ಯ ಆಗ ಇರಲಿಲ್ಲ. ಸಂಜೆ ಬಂದಾಗ ಅವರೊಂದಿಗೆ ಮಾತನಾಡಿದ್ದು, ಅವರು ನನ್ನ ಅಪ್ಪನ ಬಗ್ಗೆ ವಿಚಾರಿಸಿದ್ದನ್ನು ನೋಡಿ ಈತ ಸಂಪಾದಕರಿಗೆ ಹತ್ತಿರದವನೆಂದುಕೊAಡು ಅಲ್ಲಿಯ ಕೆಲಸಗಾರರು ಪೇಪರ ಕೊಡುತ್ತಿದ್ದರು. ಹಾಗಾಗಿ ಸಂಪಾದಕರಿದ್ದರೆ ಸುದ್ದಿ ಕೊಡುತ್ತಿದ್ದೆವು. ಇಲ್ಲದಿದ್ದರೆ ಖಾಲಿ ಪೇಪರ್ ಎತ್ತಿಕೊಂಡು ಬರುತ್ತಿದ್ದೆವು. ಶಿರಸಿಯ ಉಳಿದೆರಡು ಪತ್ರಿಕೆಗಳು ಪ್ರತಿಗಾಮಿ ಆಲೋಚನೆಯನ್ನು ಹಾಸಿ ಹೊದೆದುಕೊಂಡಿರುವುದರಿAದ ನಾವು ಜನ ಮಾಧ್ಯಮದ ಕಟ್ಟಾ ಬೆಂಬಲಿಗರಾಗಿದ್ದೆವು. ನಮ್ಮ ಸುದ್ದಿ ಸರಿಯಾಗಿ ಬರದಿದ್ದಾಗ ಜಗಳವಾಡಿದ್ದೂ ಇದೆ. ಈ ಜಗಳ ನಮ್ಮ ನಡುವಿನ ವಿಶ್ವಾಸಕ್ಕೆ, ಪ್ರೀತಿಗೆ ಯಾವ ತಡೆಯನ್ನು ಒಡ್ಡಿಲ್ಲ. ಈ ಜಗಳ ತಾತ್ಕಾಲಿಕವಾಗಿತ್ತು.  ಅವರ ಆಲೋಚನೆ  ಪೂರ್ತಿ ಕೆಂಪಲ್ಲದಿದ್ದರೂ ಆಗಾಗ ಅವರು ಹಾಕುವ ಕೆಂಪಂಗಿ ಕೂಡ ಅವರನ್ನು ಹೆಚ್ಚು ಪ್ರೀತಿಸುವಂತೆ ಮಾಡಿರಬೇಕು.
  ಆಮೇಲೆ ನಾನು ಸಿದ್ದಾಪುರ ಕಾಲೇಜಿಗೆ ಉಪನ್ಯಾಸಕನಾಗಿ ಬಂದಮೇಲೆ ಸಂಘಟನೆಯ ಕೆಲಸಕ್ಕಾಗಿ ಹೆಚ್ಚೆಚ್ಚು ಶಿರಸಿ ಕಡೆಗೆ ಇರುತ್ತಿದ್ದೆ. ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೆ. ಸಾಮಾನ್ಯವಾಗಿ ಚರ್ಚೆ ರಾಜಕಾರಣದ ಸುತ್ತಲೇ ಇರುತ್ತಿತ್ತು. ‘ನಿಮ್ಮ ಪತ್ರಿಕೆಯನ್ನು ಸ್ವಲ್ಪ ಆಕರ್ಷಕವಾಗಿ ಮಾಡಿ, ಅದರ ಪ್ರಸರಣವೂ ಹೆಚ್ಚಿಸಬಾರದೇ?’ ಎಂದು ಹಲವು ಬಾರಿ ಕೇಳಿದ್ದೆ. ಮುಗುಳ್ನಕ್ಕಿದ್ದರು. “ಪತ್ರಿಕೆಗಳು ಈಗ ಬದುಕಿಕೊಳ್ಳಲು ಪತ್ರಿಕಾ ಧರ್ಮವನ್ನೂ ಅಲಕ್ಷಿಸಿ ತಮ,ಗೆ ಬದುಕಲು ಬೇಕಾದ ಮಾರ್ಗ ಹಿಡಿದಿವೆ; ಜಾಹಿರಾತಿಗಾಗಿ ಸತ್ಯ ಮರೆಮಾಚುವುದು, ರಾಜಕೀಯ ಪಕ್ಷಗಳಿಗೆ ತಮ್ಮ ಪತ್ರಿಕೆಯನ್ನು ಮುಖವಾಣಿಯನ್ನಾಗಿಸುವುದು ಅಥವಾ ರಾಜಕಾರಣಿಗಳಿಗೆ ಪತ್ರಿಕೆ ಮಾರಿ ತಾವು ಹೆಸರಿಗೆ ಮಾತ್ರ ಸಂಪಾದಕರಾಗಿ ರಾಜಕಾರಣಿಗಳ ಬಾಲಬಡುಕರಾಗುವುದು; ಹಣ ಮಾಡುವುದೇ ಪತ್ರಿಕೋದ್ಯಮದ ಮುಖ್ಯಗುರಿಯೇ ಹೊರತು ಸಮಾಜಸುಧಾರಣೆಯಲ್ಲವೆಂದು ಬಲವಾಗಿ ನಂಬಿರುವುದು; ಈ ವಿಷವೃತ್ತದಲ್ಲಿ ಪತ್ರಿಕೆಗಳಿರುವಾಗ ಯಾರಾದರೂ ಸಮಾಜದ ಓರೆಕೋರೆ ಸರಿಪಡಿಸುವ ಉದ್ದೇಶದ ಪತ್ರಕರ್ತನಿದ್ದರೆ ಆತ ಪತ್ರಿಕೆ ಮುಚ್ಚಬೇಕು ಅಥವಾ ಆತ್ಮ ಹತ್ಯೆ ಮಾಡಿಕೊಳ್ಳಬೇಕು ಇಂಥ ಪರಿಸ್ಥಿತಿ ಇದೆ.(೧೭-೨-೨೦೦೩ರಂದು ಬರೆದ ಸಂಪಾದಕೀಯದಿಂದ) ಆ ಮುಗುಳ್ನಗುವಿನಲ್ಲೂ ಹಣಕಾಸಿನ ಬಿಕ್ಕಟ್ಟಿನಿಂದ ಪತ್ರಿಕೆಯನ್ನು ಅಂದುಕೊಂಡಂತೆ ಬೆಳೆಸಲಾರದ ಅಸಹಾಯಕತೆಯೂ ತ್ತು ನೈತಿಕತೆಯನ್ನು ಕಳೆದುಕೊಳ್ಳುತ್ತಿರುವ ಈ ವೃತ್ತಿಯ ಜೊತೆ ಬಹುದಿನ ಏಗಲಾರದ ಮನೋಸ್ಥಿತಿಗೆ ಸವರು ಬಂದಿದ್ದರು ಎನ್ನುವುದು ಈ ಮೇಲಿನ ಅವರ ಮಾತು ಧ್ವನಿಸುತ್ತದೆ. ಹಲವು ಕನಸುಗಳೊಂದಿಗೆ ತಾನೇ ಆಯ್ಕೆ ಮಾಡಿಕೊಂಡು ಮುನ್ನಡೆಸಿದ, ಬದುಕಾಗಿಸಿಕೊಂಡ ಪತ್ರಿಕೆಯೊಂದರ ಮಾಲಿಕತ್ವವನ್ನು ಇಳಿ ವಯಸ್ಸಿನಲ್ಲಿ  ಬೇರೆಯವರಿಗೆ ಕೊಟ್ಟಾಗಲಂತೂ ನನಗೆ ತುಂಬಾ ಬೇಸರವಾಗಿತ್ತು. ಅದನ್ನು ಹಲವುಬಾರಿ ಅವರಲ್ಲಿ ತೋಡಿಕೊಂಡಿದ್ದೆ ಕೂಡ. ಆದರೆ ಅವರ ನೋವನ್ನು ಕೆದಕುವ ಮನಸ್ಸಾಗಿರಲಿಲ್ಲ.
  ಇತ್ತೀಚಿಗಂತೂ ಶಿರಸಿಯನ್ನು ಕೋಮುವಾದ ಮತ್ತು ಮೂಲಭೂತವಾದದ ಪ್ರಯೋಗಶಾಲೆಯನ್ನಾಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಸುತ್ತಿರುವುದು ಪ್ರಜ್ಙಾವಂತರ ಗಮನಕ್ಕೆ ಬಂದಿರುತ್ತದೆ. ಇದರ ಹಿಂದೆ ಸಂಸ್ಕೃತಿಯ ಕುರಿತ ಪ್ರೀತಿ, ಅಭಿಮಾನಕ್ಕಿಂತ ಚುನಾವಣಾ ರಾಜಕೀಯದ ಹುನ್ನಾರವೇ ಹೆಚ್ಚಿರುವುದು. ಇಂದಿನ ಈ ಬೆಳವಣಿಗೆಗೆ ಹತ್ತಾರು ವರ್ಷದ ಇತಿಹಾಸವಿದೆ. ಇದಕ್ಕೆ ಶಿರಸಿಯ ಕೆಲವು ಪತ್ರಿಕೆಯ ಕೊಡುಗೆಯೂ ಇದೆ. ಜಿಲ್ಲೆಯ ಸೌಹಾರ್ದ ನೆಲೆಗೆ ಭಂಗ ತರುವ ಕೆಲಸ ನಡೆದಾಗಲೆಲ್ಲ ಜೈರಾಮ ಹೆಗಡೆಯವರು ಎಚ್ಚರಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ. “ಕಾಲಕಾಲಕ್ಕೆ ಧರ್ಮಗ್ರಂಥಗಳ ಪುನರ್ ಮೌಲ್ಯೀಕರಣ ಕೂಡ ಆಗುತ್ತಲೇ ಹೋಗಬೇಕಾಗುತ್ತದೆ.......ವೈಜ್ಞಾನಿಕ ಬೆಳವಣಿಗೆಯ ಬೆಳಕಿನಲ್ಲಿ ಧರ್ಮಗ್ರಂಥಗಳ ಪುನರ್ ಮೌಲ್ಯೀಕರಣಕ್ಕೆ ತೊಡಗಬೇಕಾಗಿದೆ. ಯಾಕೆಂದರೆ ವಿಜ್ಞಾನ ಮನುಷ್ಯನಿಗೆ ವರವಾಗುವ ಜೊತೆಗೆ ಅನೇಕ ಹಾನಿ ಮಾಡಲು ಕಾರಣವಾಗಿದ್ದರೂ ಅದು ಸತ್ಯವಾಗಿದೆ....ಎಲ್ಲಾ ಧರ್ಮಗ್ರಂಥಗಳನ್ನು ರಚಿಸಿದವನು ಮನುಷ್ಯನೇ ವಿನಃ ದೇವರಲ್ಲ.”(ಆಯ್ದ ಸಂಪಾದಕೀಯಗಳು; ೨೦೧೬;ಪು.೨೦೭-೮) ಎನ್ನುವ ನಿಲುವಾಗಲೀ, “ಹಿಂದೂ ಧರ್ಮದ ಪ್ರತಿಪಾದಕರು ಬೇರೆ ಧರ್ಮಗಳ ಬಗ್ಗೆ ಅಸಹನೆ ತೋರುವ ಮೊದಲು ಹಿಂದೂ ಧರ್ಮದಲ್ಲಿರುವ ಜಾತಿಗಳಲ್ಲಿನ ಮೇಲು ಅಸಮಾನತೆ ಹೋಗಲಾಡಿಸಲು ಏನು ಕೆಲಸ ಮಾಡುತ್ತಿದ್ದಾರೆ? ಎಂಬ ಸಮಯದಲ್ಲಿ ಸಹಜವಾಗಿ ಏಳುತ್ತದೆ.”(ಅದೇ:೨೦೬) ಎನ್ನುವ ಮೂಲಭೂತ ಪ್ರಶ್ನೆ ಎತ್ತುವ ಅವರ ಸ್ವಭಾವವಾಗಲೀ “ ಹಿಂದೂ ಧರ್ಮದೊಳಗಿನ ದೋಷವನ್ನು ಮೊದಲು ಸರಿಪಡಿಸಿಕೊಳ್ಳುವ ಪ್ರಯತ್ನಕ್ಕಿಳಿಯಬೇಕು. ಮತಾಂತರ ವಿರುದ್ಧ ವೀರಾವೇಶ ಮಾತಾಡುವುದರ ಬದಲು ಹಿಂದೂ ಧರ್ಮದಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಜಾತಿಯ, ಮೇಲು, ಕೀಳು, ಅಸಮಾನತೆ, ಶೋಷಣೆ, ಬಡತನ ನಿವಾರಣೆಗೆ ಸಕ್ರಿಯವಾಗಿ ಕೆಲಸ ಮಾಡುವುದು ಅಪೇಕ್ಷಣೀಯ.ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಪಂಚಮರ ಎಂದು ಕರೆಸಿಕೊಳ್ಳುವ ದಲಿತರ ಶೋಷಣೆ ಅವರ ಮೇಲಿನ ಹಲ್ಲೆ, ಕೀಳು ಭಾವನೆ ನಿಲ್ಲಿಸುವಂತೆ ನೋಡಿಕೊಳ್ಳಬೇಕಾಗಿದೆ.” (ಅದೇ:೧೮೩) ಎಂದು ಕೋಮುವಾದಿ ಶಕ್ತಿಗಳಿಗೆ ಹಾಕುವ ಎದುರೇಟಾಗಲೀ ಇದು ಜೈರಾಮ ಹೆಗಡೆಯವರು ಅನುದಿನ ಕಾಪಿಟ್ಟುಕೊಂಡ ಬಂದ ಸಾಮಾಜಿಕ ಎಚ್ಚರ. ಕೋಮುವಾದವನ್ನು ಮಾತ್ರವಲ್ಲ ಜಾತಿವಾದ, ಕಂದಾಚಾರ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ, ಸಂವಿಧಾನ ವಿರೋಧಿ ನಡವಳಿಕೆ, ಜಾಗತೀಕರಣ... ಹೀಗೆ ಅರ್ಥಪೂರ್ಣವಾಗಿ  ವಿರೋಧಿಸುತ್ತಲೇ ಬಂದವರು. ಸಾಮಾನ್ಯವಾಗಿ ಪತ್ರಿಕೆಯ ಸಂಪಾದಕರಾದ ಸಂದರ್ಭದಲ್ಲಿ ಕೆಲವರು ಹಣದ ಆಮಿಷಕ್ಕೆ, ಸ್ಥಾನದ ಮತ್ತು ಆಸ್ತಿಯ ಆಮಿಷಕ್ಕೆ ಬಲಿಯಾಗುತ್ತಾರೆ. ಆದರೆ ಜಯರಾಮ ಹೆಗಡೆಯವರ ಪತ್ರಿಕಾ ಕಛೇರಿ ಪ್ರಾರಂಭದಿಂದ ಕೊನೆಯವರೆಗೂ ಯಾವ ವೈಭವವಿಲ್ಲದೆ - ಹಣ ಮಾಡಿದ ಒಂದೇ ಒಂದು ಕುರುಹೂ ಇರದಂತೆ- ಹಾಗೇ ಇತ್ತು. ಬಡತನವೇ ರೂಪುತಳೆದಂತೆ. ಶ್ರೀಮಂತಿಕೆಗೆ ಸಡ್ಡು ಹೊಡೆದಂತೆ.
ವಿಠ್ಠಲ ಭಂಡಾರಿ, ಕೆರೆಕೋಣ

Friday 15 May 2020

‘ಆತ್ಮ ನಿರ್ಭರ್ ಅಭಿಯಾನ್’* *ಮತ್ತು ಭಾಷೆ, ಅಧಿಕಾರ, ಹೆಜಮನಿ*

*‘ಆತ್ಮ ನಿರ್ಭರ್ ಅಭಿಯಾನ್’* *ಮತ್ತು  ಭಾಷೆ, ಅಧಿಕಾರ, ಹೆಜಮನಿ*
 
ದೇಶದಲ್ಲಿ ಕಳೆದೊಂದು ದಿನದಲ್ಲಿ, ಮಾಧ್ಯಮಗಳಲ್ಲಿ ಮತ್ತು ಜನರ ನಡುವೆ ಮುಂಚೂಣಿಗೆ ಬಂದ ಪದಗುಚ್ಚವೆಂದರೆ ‘ಆತ್ಮ ನಿರ್ಭರ ಅಭಿಯಾನ್’. ಪ್ರಧಾನ ಮಂತ್ರಿಗಳು ದೇಶವನ್ನು ಉದ್ದೇಶಿಸಿ ಮಾತನಾಡುತ್ತ ಬಳಸಿದ ಈ ಪದಗುಚ್ಚ ಕೇಳುಗರಲ್ಲಿ ಅಚ್ಚರಿ ಹುಟ್ಟಿಸಿತು. ಮಾಧ್ಯಮಗಳೂ ಕೂಡ ನಿಧಾನವಾಗಿ ಇದಕ್ಕೆ ಅರ್ಥ ಹೇಳತೊಡಗಿದವು. ಇನ್ನು ಪ್ರಧಾನಿಗಳ ನಡೆನುಡಿಗಳನ್ನು ನಿತ್ಯ ಹಿಂಬಾಲಿಸುವ ಜನರಲ್ಲಿಯೂ ಅದು ಗೊಂದಲು ಮೂಡಿಸಿತು. ಅವರನ್ನು ವಿರೋಧಿಸುವ ಮತ್ತು ಟೀಕಿಸುವವರಲ್ಲಿಯೂ ಗೊಂದಲ ಮೂಡಿಸಿತು. ಇದು ತಮಾಶೆಗಳಿಗೆ, ವ್ಯಂಗ್ಯಚಿತ್ರಗಳಿಗೆ ಅವಕಾಶ ಒದಗಿಸಿತು. 

ಇದು ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ಚರ್ಚೆಯಾಗಿ ದೊಡ್ಡ ಸಂಚಲನ ಸೃಷ್ಟಿಸಿತು. ಇದು ದೇಶದ ಹಣಕಾಸು ಸಚಿವರಿಗೂ ತಲುಪಿ ಅವರೂ ಕೂಡ ಆರ್ಥಿಕ ನೆರವಿನ ಯೋಜನೆಗಳನ್ನು ಘೋಷಿಸಲು ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ವಿವರಣೆ  ಕೊಟ್ಟರು. ತಾವು ದಕ್ಷಿಣ ಭಾರತದಿಂದ ಬಂದಿದ್ದು ದಕ್ಷಿಣ ಭಾರತದ ಭಾಷೆಗಳಾದ ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅದಕ್ಕಿರುವ ‘ಅರ್ಥ’ಗಳನ್ನು ವಿವರಿಸಿದರು. ಅಷ್ಟರಮಟ್ಟಿಗೆ ಅಪರಿಚಿತವಾದ ಪದಗುಚ್ಚ ಗೊಂದಲ ಹುಟ್ಟಿಸಿದ್ದು ನಿಜ ಎಂಬುದು ಸಾಬೀತಾಯಿತು. ಪ್ರಧಾನಿಗಳು ಏನು ಹೇಳಿದರೂ ಎಂಬುದಕ್ಕಿಂತ ಹೇಳಿದ್ದಕ್ಕೆ ಬಳಸಿದ ಪದಗಳ ಬಗೆಗೆ ಹೆಚ್ಚು ಚರ್ಚಿಸಿದ್ದು ವಿಚಿತ್ರ ಸಂಗತಿ.

ಈ ಪದಗುಚ್ಚದ ವಿಷಯದಲ್ಲಿ ಗೊಂದಲ ಮೂಡಲು ಕಾರಣವೇನು? ಇದಕ್ಕೆ ಕಾರಣವಿದೆ. ಅದೇನೆಂದರೆ, ಈ ಪದಗುಚ್ಚವು ಮೂಲತಃ ಸಂಸ್ಕøತದ್ದು. ಇದನ್ನು ಯಾವುದೇ ಭಾರತೀಯ ಭಾಷೆಗಳಲ್ಲಿ ಜನಸಾಮಾನ್ಯರು ಬಳಸುವಂತೆ ಕಾಣುತ್ತಿಲ್ಲ. ಸಂಸ್ಕøತ ಪದಕೋಶದಲ್ಲಿರುವ ಗ್ರಂಥಸ್ತವಾದ ಪದಗುಚ್ಚ ಇದು. ಪಂಡಿತರು ವೈಯಾಕರಣಿಗಳು ಬಳಸಬಹುದಾದ ಪದ. ಹಾಗಾಗಿ ಈ ಪದವನ್ನು ಪ್ರಧಾನಿಗಳು ಬಳಸಿದಾಗ ಜನರು ತಬ್ಬಿಬ್ಬಾದರು. ಸಂಸ್ಕøತ ಪದವಾದುದರಿಂದ ಕನ್ನಡ ನಿಘಂಟಿನಲ್ಲಿ ‘ಆತ್ಮ’ ‘ನಿರ್ಭರ’ ಪದಗಳಿಗೆ ಅರ್ಥ ಹುಡುಕಿದಾಗ ಅಲ್ಲಿ ನಿರ್ಭರ ಪದಕ್ಕೆ ‘ವೇಗ, ರಭಸ, ಕ್ರೌರ್ಯ, ಹೆಚ್ಚಾದ, ಪೂರ್ಣವಾದ, ತುಂಬಿದ, ಅಧಿಕ’ ಎಂಬ ಅರ್ಥಗಳು ಕಾಣಿಸಿದವು! ಇನ್ನು ಆತ್ಮ ಪದಕ್ಕೆ ನಾನಾರ್ಥಗಳಿದ್ದು ಅವು ಕೂಡ ಸರಿಹೊಂದಲಿಲ್ಲ. ಯಾವ ಅರ್ಥಗಳೂ ಪ್ರಧಾನಿಗಳು ಬಳಸಿದ ಅರ್ಥಕ್ಕೆ ಸಮವಾಗಿ ಕಾಣಿಸಲಿಲ್ಲ. ಕೊನೆಗೆ ಮಾಧ್ಯಮಗಳು ಸೆಲ್ಪ್ ರಿಲಯನ್ಸ್, ಸ್ವಾವಲಂಬಿ ಎಂದು ಬಳಸಲು ತೊಡಗಿದ ನಂತರವಷ್ಟೇ ‘ಆತ್ಮ ನಿರ್ಭರ್’ ಪದಗುಚ್ಚಕ್ಕೆ ಒಂದು ಅರ್ಥ ‘ಪ್ರಾಪ್ತ’ವಾಗತೊಡಗಿತು.

ಅಂದರೆ ಜನಸಾಮಾನ್ಯರಲ್ಲಿ ಜನಪ್ರಿಯವಾಗಿ ಬಳಕೆಯಲ್ಲಿ ಇಲ್ಲದ ಪದಗಳನ್ನು ಹುಡುಕಿ ಏಕಾಏಕಿ ಬಳಸಿದಾಗ ಆಗಬಹುದಾದ ಸಂವಹನದ ತೊಡಕುಗಳೇನು? ಎಂಬುದು ಇದರಿಂದ ತಿಳಿಯುತ್ತದೆ. ಹಾಗೆಯೇ ಇದೇ ಪದಗುಚ್ಚವನ್ನು ಪ್ರಧಾನಿಗಳಲ್ಲದೆ ಬೇರೆ ಯಾರೇ ಆಗಿದ್ದರೂ ಆ ಪದವನ್ನು ಬಳಸಿದ್ದರೆ ಇದರ ಬಗೆಗೆ ಇಷ್ಟೊಂದು ಚರ್ಚೆ ನಡೆಯುತ್ತಿತ್ತೇ? ಖಂಡಿತವಾಗಯೂ ಇಲ್ಲ. ಅಂದರೆ ಅಧಿಕಾರದಲ್ಲಿರುವವರು ಬಳಸುವ ಭಾಷೆ, ಅದರ ನುಡಿಗಟ್ಟುಗಳು ಹೇಗೆ ಜನರನ್ನು ಪ್ರಭಾವಿಸುತ್ತವೆ; ಅವರ ಮಾನಸಕ್ಕೆ ಇಳಿಯುತ್ತವೆ; ಅಲ್ಲಿ ಅವು ಸ್ಥಾನಪಡೆದು ಮನಸ್ಸನ್ನು ಆಳುತ್ತವೆ ಎಂಬುದು ಮುಖ್ಯ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಇದು ಪ್ರಧಾನಿಗಳು ಪ್ರಾಸಂಗಿಕವಾಗಿ ಬಳಸಿದ ಪರಿಭಾಷೆಯಲ್ಲ. ಬದಲಿಗೆ ಬಹಳ ಉದ್ದೇಶಪೂರಕವಾಗಿ, ಪೂರ್ಣ ಸಿದ್ದತೆಯೊಂದಿಗೆ ಅದಕ್ಕೆ ರಾಜಕೀಯಾರ್ಥಿಕ ಅರ್ಥದ ಲೇಪನಗಳನ್ನು ಕೊಟ್ಟು ಖಚಿತ ಉದ್ದೇಶದೊಂದಿಗೆ ಬಳಸಿದ ಪದಗುಚ್ಚ. 

ಇಲ್ಲಿ ಅಧಿಕಾರಸ್ಥರು ತಾವು ಜನರಿಗೆ ಅರ್ಥವಾಗುವ ಭಾಷೆಯನ್ನು ಬಳಸಬೇಕು ಎಂಬುದಕ್ಕಿಂತ ತಾವೂ ಏನು ಹೇಳಬೇಕು ಎಂದು ಬಯಸುತ್ತಾರೆಯೋ ಅದನ್ನು ಮಾತ್ರವೇ ಬಳಸುತ್ತಾರೆ. ಅಧಿಕಾರದಲ್ಲಿರುವವರು ಹಾಗೆ ಬಳಸಿದ ಮತ್ತು ಚಿಂತಿಸಿದ ವಿಚಾರಗಳೇ ಜನರ ಮನದಲ್ಲಿ ಬಲವಾಗಿ ಬೇರೂರುತ್ತವೆ. ಜನರಿಗೆ ಅರ್ಥವಾಗಬೇಕು ಎಂಬುದಕ್ಕಿಂತ ತಾವು ಏನನ್ನು ಅರ್ಥಪಡಿಸಲು ಬಯಸುತ್ತಾರೆಯೋ ಅದನ್ನು ಹೇರುತ್ತಾರೆ ಎಂಬುದು ನಿಜ.

ಹಾಗೆ ಬೇರೂರುವ ಹೊತ್ತಿನಲ್ಲಿ ಅದು ಕೇವಲ ಪದವಾಗಿ ಬೇರೂರುವುದಿಲ್ಲ. ಬದಲಿಗೆ ಅದು ತಿಳುವಳಿಕೆಯಾಗಿ, ವಿಚಾರಧಾರೆಯಾಗಿ, ತತ್ವವಾಗಿ ಬೇರೂತ್ತದೆ. ಮತ್ತು ನಂತರ ಜನರ ಮನಸ್ಸನ್ನು ಆಳುತ್ತದೆ ಮತ್ತು ನಿಯಂತ್ರಿಸುತ್ತದೆ. ಜನರ ಭಾಷೆ ಅಧಿಕಾರಸ್ಥರ ಟಂಕಸಾಲೆಯಲ್ಲಿ ಹೇಗೆ ಟಂಕೀಕರಣಗೊಳ್ಳುತ್ತದೆ ಎಂಬುದಕ್ಕೆ ಕೂಡ ಇದು ಒಳ್ಳೆಯ ಎತ್ತುಗೆ. ಅಧಿಕಾರಸ್ಥರನ್ನು ನಂಬುವ ಮತ್ತು ಅನುಸರಿಸುವ ಜನರು ಇಂತಹ ಟಂಕಿತ ಪದಗುಚ್ಚಗಳನ್ನು ಉರುಹೊಡೆದು ಉಚ್ಚರಿಸುವುದೂ ಉಂಟು. ಆದರೆ ಈ ಬಗೆಗೆ ಅಧಿಕಾರಸ್ಥರನ್ನು ಅನುಸರಿಸುವ ಜನರಿಗೆ ಎಚ್ಚರವಿರುವುದಿಲ್ಲ. ಅವರನ್ನು ಕುರುಡಾಗಿ ನಂಬುತ್ತಿರುತ್ತಾರೆ. ಇಂತಹ ನಂಬಿಕೆಗಳನ್ನು ಹುಟ್ಟಿಸಲೆಂದೇ ಅಪರಿಚಿತವಾದ ಯಾರಿಗೂ ಸುಲಭಕ್ಕೆ ಅರ್ಥವಾಗದಂತಹ ಭಾಷೆಯನ್ನು ಪ್ರಭುತ್ವ ಬಳಸುತ್ತಲೇ ಇರುತ್ತದೆ. ಈಚೆಗೆ ಭಾರತೀಯ ಸಮಾಜದಲ್ಲಿ ಇಂತಹ ಪದಗುಚ್ಚಗಳನ್ನು ಒಂದರ ಮೇಲೆ ಒಂದು ಬಂಡೆಗಳನ್ನು ಮತ್ತೆ ಮತ್ತೆ ಎಸೆಯಲಾಗುತ್ತದೆ. ಹಾಗೆ ಎಸೆದ ಮೇಲೆ ಅವುಗಳಿಗೆ ಅರ್ಥದ ಬಣ್ಣ ಕಟ್ಟಲಾಗುತ್ತಿದೆ. ಇಂತಹ ಉರು ಹೊಡೆದ ಪಾಠಗಳು ಸಮಾಜವನ್ನು ನಿಡುಗಾಲದಲ್ಲಿ ಅಪಾಯಕ್ಕೆ ತಳ್ಳುತ್ತವೆ. 
 
ಮೇಲೆ ಹೇಳಿದಂತೆ ಇದೇ ರೀತಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಯಾವುದೇ ಒಂದು ಹೊಸ ಭಾಷೆ, ಪದ ಇಲ್ಲವೆ ಪದಗುಚ್ಚವನ್ನು ಬಳಸಿದರೆ ಅದು ವೇಗವಾಗಿ ಮುಂಚೂಣಿಗೆ ಬರಲು ಸಾಧ್ಯವೇ? ಅದಕ್ಕೆ ಜನಮಾನ್ಯತೆ ದೊರೆಯುವುದೇ? ಸಾಧ್ಯವೇ ಇಲ್ಲ. ಒಂದು ವೇಳೆ ಅಂತಹ ಪದಗುಚ್ಚವನ್ನು ಜನರು ಬಳಸಿದರೂ ಕೂಡ ಅದು ಚಲಾವಣೆಯಲ್ಲಿ ಉಳಿಯಲು ಸುದೀರ್ಘ ಕಾಲಬೇಕಾಗುತ್ತದೆ. ಅದು ಬೇಗ ಜನರಿಗೆ ಪರಿಚಯವಾಗಲು ಸಾಧ್ಯವಿಲ್ಲ. ಕೆಲವು ಬಾರಿ ಹೊಸಕಲ್ಪನೆಗಳನ್ನು ಪರಿಚಯಿಸಿದಾಗ ಜನರಿಗೆ ಅರ್ಥವಾಗದು ಎಂದು ವಾದಿಸಿ ಅದರ ಬಳಕೆಯನ್ನೇ ನಿಷೇಧಿಸಲಾಗುತ್ತದೆ. ಅಂದರೆ ಪ್ರಬಲರು, ಅಧಿಕಾರಸ್ಥರ ಭಾಷೆ ಬಹುಬೇಗ ಜನರನ್ನು ಪ್ರಭಾವಿಸಿದಂತೆ ದುರ್ಬಲರು, ಜನಸಾಮಾನ್ಯರು ಯಾವುದೇ ಹೊಸ ಪದ ಇಲ್ಲವೇ ಹೊಸ ವಿಚಾರವನ್ನು ಮಂಡಿಸಿದರೂ ಅದು ಜನರನ್ನು ಪ್ರಭಾವಿಸದು. ಅಂದರೆ ‘ಅಧಿಕಾರ, ಹೆಜಮನಿಗಳು’ ಇತರೆ ಹಲವು ಸಂಗತಿಗಳನ್ನು ನಿಯಂತ್ರಿಸಿದಂತೆ ಭಾಷೆಯನ್ನು ನಿಯಂತ್ರಿಸುವ ಪ್ರಭಾವಿಸುವ ಕೆಲಸ ಮಾಡುವುದನ್ನು ಈ ಸಂದರ್ಭದಲ್ಲಿ ಗಮನಿಸಬಹುದಾಗಿದೆ. ‘ಪ್ರಜಾಪ್ರಭುತ್ವ’ ವ್ಯವಸ್ಥೆ’ಯಿರುವ ದೇಶದಲ್ಲಿಯೇ ಈ ಬಗೆಯಾದರೆ ಇನ್ನು ಸರ್ವಾಧಿಕಾರ ವ್ಯವಸ್ಥೆಯಿರುವ ದೇಶಗಳಲ್ಲಿ ಭಾಷೆ ಹೇಗೆ ಟಂಕೀಕರಣಗೊಳ್ಳುತ್ತದೆ ಮತ್ತು ಅದು ಸಮುದಾಯಗಳ ಮೇಲೆ ಪ್ರಭಾವ ಬೀರಲಿದೆ ಎಂಬುದನ್ನು ಊಹಿಸುವುದು ಅಸಾಧ್ಯವೇನಲ್ಲ. ಅಂದರೆ ಭಾಷೆ ಕೂಡ ಯಾವುದೇ ಸಮಾಜದಲ್ಲಿ ಸ್ವಾಯತ್ತವಾಗಿ ಉಳಿದಿರದೆ ಅದು ಅಧಿಕಾರಸ್ಥರ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ನೆನಪಿಡಬೇಕಾಗುತ್ತದೆ.  

ಹಾಗೆಯೇ ಪ್ರಭುತ್ವ ಹೊಸ ರಾಜಕೀಯ ಸಂಕಥನಗಳನ್ನು ಹುಟ್ಟಿಸಿ ಅಪರಿಚಿತ ಪರಿಭಾಷೆಗಳ ಮೂಲಕ ಜನರನ್ನು ತಬ್ಬಿಬ್ಬುಗೊಳಿಸಿ ಮೂಕರನ್ನಾಗಿಸುತ್ತದೆ. ಇಂತಹ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿ ಇತರ ಸರಕುಗಳು ಮಾರಾಟವಾದಂತೆ ಭಾಷೆ ಕೂಡ ಅತ್ಯಂತ ವೇಗವಾಗಿ ಮಾರಾಟವಾಗಿ ಜನರನ್ನು ತಲುಪುತ್ತದೆ. ಆದರೆ ಅದೇ ವೇಳೆ ದುರ್ಬಲ ಜನರ ವಿಚಾರಗಳು, ದುಃಖದುಮ್ಮಾನಗಳು ಮಾತ್ರ ಎಲ್ಲ ಕಾಲದಲ್ಲಿದ್ದಂತೆ ಈಗಲೂ ಅವು ಅಧಿಕಾರಸ್ಥರನ್ನು ತಲುಪಲಾರವು. ಇದು ಬಲವಿದ್ದವರ ಭಾಷೆ ಮೇಲುಗೈ ಸಾಧಿಸುವ ಮತ್ತು ಬಲವಿಲ್ಲದವರು ಶರಣಾಗುವ ಬಗೆಯನ್ನು ತಿಳಿಸುತ್ತದೆ. ಅಂದರೆ ಬಲವಿದ್ದವರು ಅಧಿಕಾರ ಬಲದಿಂದ ‘ಆತ್ಮ ನಿರ್ಭರ್ ಅರ್ಥಾತ್ ಸ್ವಾವಲಂಬನೆ’ ಸಾಧಿಸಿದರೆ, ದುರ್ಬಲರು ಯಾವತ್ತೂ ಪರಾವಲಂಬಿಗಳಾಗಿಯೇ ಉಳಿಯುತ್ತಾರೆ. ಆಗ ಇಂತಹ ಅಭಿಯಾನಗಳು ಸಬಲರನ್ನು ಇನ್ನಷ್ಟು ಸಬಲಗೊಳಿಸುತ್ತವೆ ಮತ್ತು ಅವರ ಆತ್ಮವನ್ನು ಮತ್ತಷ್ಟು ಬರ್ಬರಗೊಳಿಸುತ್ತವೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಈಗ ನಿಜವಾಗಿಯೂ ಸ್ವಾವಲಂಬನೆ ಸಾಧಿಸಬೇಕಿರುವುದು ಯಾರು?

*ರಂಗನಾಥ ಕಂಟನಕುಂಟೆ*

Sunday 3 May 2020

ತಳಮಟ್ಟದಲ್ಲಿ ಅಪನಂಬಿಕೆಗಳಿಲ್ಲ....ಸೌಹಾರ್ದ ಪರಂಪರೆ ನಮ್ಮದು- ವಿಠ್ಠಲ ಭಂಡಾರಿ


ಕಾಕತಾಳೀಯವಾಗಿ ಸಂಭವಿಸುವ ಹಲವು ಸಂಗತಿಗಳನ್ನು ಧರ್ಮ ಜಾತಿಗೆ ಒತ್ತಾಯಪೂರ್ವಕವಾಗಿ ತಳಕುಹಾಕುವ ಹುನ್ನಾರ ಒಂದೆಡೆ ನಡೆಯುತ್ತಿದ್ದರೆ ಇನ್ನೊಂದೆಡೆ ಸಾಮಾನ್ಯ ಜನರ ದಿನನಿತ್ಯದ ನಡವಳಿಕೆಗಳು ರೋಗಗ್ರಸ್ಥ ಮನಸ್ಥಿತಿಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಅಪ್ರಜ್ಞಾಪೂರ್ವಕವಾದ ಕೆಲಸ ಮಾಡುತ್ತಿದೆ ಎನ್ನುವುದು ಸಂತೋಷದ ಸಂಗತಿ. ಪೂರಕವಾದ ಒಂದೆರಡು ಭಿನ್ನ ಘಟನೆಗಳನ್ನು ನೆನಪಿಸುತ್ತಿದ್ದೇನೆ.
ಘಟನೆ:1- ಕೋವಿಡ್ 19 ವ್ಯಾಪಕ ಪ್ರಸರಣದ ಸಂದರ್ಭ, ಇಂದು ಒಂದು ರೀತಿಯ ಭೀತಿಯ ವಾತಾವರಣ ಸೃಷ್ಟಿಸಿದೆ. ರೋಗದ ಕುರಿತ ಮಾಹಿತಿಯ ಕೊರತೆ, ಹಲವು ಮಾಧ್ಯಮದ ಟಿಆರ್ಪಿ ಸಮರ, ಆಡಳಿತದ ನಿರ್ಲಕ್ಷ್ಯ, ಅಸಮರ್ಪಕ ನಿರ್ವಹಣೆ ಮತ್ತು ಮುಂದಾಲೋಚನೆಯ ಕೊರತೆಯಿಂದಾಗಿ ಸಾಮಾನ್ಯರ ಬದುಕು ಮೂರಾಬಟ್ಟೆ ಆಗುವ ಸಂದರ್ಭದಲ್ಲಿ ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು ಬಡ, ಸಂತ್ರಸ್ಥ ಕುಟುಂಬಗಳಿಗೆ ಸಹಾಯ ಹಸ್ತ(ಸಹಾಯ ನೀಡುವಲ್ಲಿ ಕೆಲವರಿಗೆ ಪ್ರತ್ಯೇಕ ಒಳ ಅಜೆಂಡಾ ಇದೆ ಅನ್ನುವುದು ಬೇರೆ ಸಂಗತಿ)ನೀಡುತ್ತಿವೆ.  ಒಂದೆರಡು ದಿನಗಳ ಹಿಂದೆ ನಮ್ಮ ಕಾಲೇಜಿನ ಅಧ್ಯಾಪಕರು ಸೇರಿ ಜನಗಳಿಗೆ ಒಂದಿಷ್ಟು ದಿನಸಿ ಕೊಡೋಣವೆಂದು ತೀರ್ಮಾನಿಸಿದೆವು; ಅದು ಸಣ್ಣ ಪ್ರಮಾಣದಲ್ಲಿ. ಲಾಕ್ ಡೌನ್ ಇರುವುದರಿಂದ ನಾವೇ ಹೋಗಿ ಫಲಾನುಭವಿಗಳನ್ನು ಆರಿಸುವಂತಿರಲಿಲ್ಲ. ಸಹಾಯದ ಅಗತ್ಯ ಇರುವ ಕುಟುಂಬಗಳ ಒಂದು ಯಾದಿ ತಯಾರಿಸಿ ಕೊಡಲು ಒಂದಿಬ್ಬರು ಪರಿಚಿತ ಅಂಗನವಾಡಿ ಕಾರ್ಯಕರ್ತೆಯರಿಗೆ ವಿನಂತಿಸಿದೆವು. ಅವರಿಬ್ಬರೂಹಿಂದೂಸಮುದಾಯದ ಅನುಯಾಯಿಗಳು.  ಎರಡು ದಿನದಲ್ಲಿ ಯಾದಿ ಬಂದು ತಲುಪಿತು. ಇನ್ನೊಬ್ಬ ಮುಸ್ಲಿಂ ಸಮುದಾಯದ ಅನುಯಾಯಿ ವ್ಯಕ್ತಿಗೆ ಹೇಳಲಾಗಿತ್ತು. ಅವರೂ ಒಂದು ಯಾದಿ ನೀಡಿದರು. ‘ತಮ್ಮತಮ್ಮ ಯಾದಿಯಲ್ಲಿ ಎಲ್ಲಾ ಜಾತಿ ಧರ್ಮದವರ ಹೆಸರೂ ಇರಬೇಕು, ನಿಮ್ಮ ನಿಮ್ಮ ಸಮುದಾಯದ ಹೆಸರು ಮಾತ್ರ ಇರದಿರಲಿಎಂದು ಹೇಳಬೇಕೆನ್ನಿಸಿದರೂ ಅವರಿಗೆ ಹಾಗೆ ಹೇಳಿರಲಿಲ್ಲ.
ಆದರೆ ಇಬ್ಬರೂ ಸಿದ್ಧಪಡಿಸಿದ ಯಾದಿಯಲ್ಲಿ ಮುಕ್ಕಾಲು ಪಾಲಿಗಿಂತÀ ಹೆಚ್ಚು ಜನ ಅವರು ಆಚರಿಸುವ ಧರ್ಮ ಮತ್ತು ಜಾತಿಯ ಆಚೆಯ ಕುಟುಂಬದ ಬಡವರ ಹೆಸರಿತ್ತು. ದಿನನಿತ್ಯ ಪತ್ರಿಕೆ, ಟಿವಿಗಳಲ್ಲಿ ಕರೋನಾದ ಆವಾಂತರಕ್ಕಿಂತ ಧರ್ಮವಾರು ಲೆಕ್ಕ, ಪರಸ್ಪರ ಅಪನಂಬಿಕೆ ಹುಟ್ಟಿಸುವ ಕೆಲಸ ಮತ್ತು ಸ್ಥಳೀಯವಾಗಿ ಪರಸ್ಪರರಲ್ಲಿ ಅಪನಂಬಿಕೆ ಹುಟ್ಟಿಸುವ ಕೆಲಸ ಗುಪ್ತವಾಗಿ ಇನ್ನೊಂದೆಡೆ ನಡೆಯುತ್ತಿರುವಾಗ ಕೆಳಹಂತದಲ್ಲಿ ಬಡವರು ಮತ್ತು ದುರ್ಬಲರನ್ನು ಗುರುತಿಸುವಾಗ ಕಿಂಚಿತ್ತೂ ದ್ವೇಷದ ಭಾವನೆ ಇರಲಿಲ್ಲ. ಪರಸ್ಪರ ಗೌರವ, ಪ್ರೀತಿ, ಸೌಹಾರ್ದತೆಯ ಭಾವಗಳು ತುಂಬಿದ್ದವು. ನೋವುಂಡವರಿಗೆ ಧರ್ಮದ ಬೇಲಿ ತೊಡಿಸಲು ಇವರ ಮನಸ್ಸು ಒಪ್ಪುತ್ತಿರಲಿಲ್ಲ. ಒಂದಿಷ್ಟು ದಿನಸಿ ಹಂಚಿ ಬರುವಾಗ ಒಬ್ಬ ಶಿಕ್ಷಣೋದ್ಯಮಿಗಳು ಸಿಕ್ಕರು. ‘ದಿನಸಿ ಹಂಚುತ್ತಿದ್ದೇವೆಅಂದೆ. ಒಳ್ಳೆಯದು, ‘ಇದು ಸಕಾಲ ಸಹಾಯ ಮಾಡುವುದಕ್ಕೆಅನ್ನುತ್ತಲೇಅವರಿಗೆ ಎಲ್ಲಿಂದಲೋ ತುಂಬಾ ಸಹಾಯ ಬರುತ್ತದೆ. ನೋಡಿಕೊಡಿಎಂದರು. ‘ಸರ್ಕಾರವೂ ತುಂಬಾ ಸಹಾಯ ಮಾಡುತ್ತಿದೆಎಂದು ಒಂದೆರಡು ನಂಜಿನ ಮಾತನ್ನಾಡಿದರು. ಆದರೆ ಒಂದು ಮನೆಗೆ ದಿನಸಿ ಕೊಟ್ಟಾಗತಮ್ಮ ಹಿಂಬದಿಯ ಮನೆಯ (ಬೇರೊಂದು ಧರ್ಮದ) ಬಡ ಕುಟುಂಬಕ್ಕೂ ಕೊಡಿ, ಅವರೂ ಬಡವರು. ಕಡಿಮೆ ಇದ್ದರೆ ಇದೇ ಹಂಚಿಕೊಳ್ಳುತ್ತೇವೆ ಬಿಡಿಎಂದು ಹೇಳುವ ಗುಣ ಭಾರತದ ನಿಜವಾದ ಅಂತಃಸ್ಸತ್ವ. ಭಾರತ ತನ್ನೊಳಗೆ ಪ್ರೀತಿಯ ಬೀಜವನ್ನೇ ಇಟ್ಟುಕೊಂಡಿದೆ. ಹೊರಗಿನ ಸುಡುಬೆಂಕಿ ಆರಿದ ಮೇಲೆ ಚಿಗುರುವುದು ಇದೇ ಬೀಜವೇ ಅಲ್ಲವೇ?
ಘಟನೆ:2 ನಮ್ಮಲ್ಲಿ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮವನ್ನು ಮೊದಲೇ ಹೇಳಿದಂತೆ ಸಂತ್ರಸ್ಥರಿಗೆ ದಿನಸಿ ಹಂಚುವ ಮೂಲಕ ಆಚರಿಸಲಾಯಿತು. ಇದರ ಭಾಗವಾಗಿ ದಿನೇಶ್ ಎನ್ನುವ ವ್ಯಕ್ತಿಗೆ ದಿನಸಿಗಳ ಪೊಟ್ಟಣ ನೀಡುವ ಮೂಲಕ ಉದ್ಘಾಟಿಸಲಾಯಿತು. ಆತ ಅಟೆಂಡರ್ ನೌಕರಿ ಮಾಡುವವನಾದರೂ ಬಡವನೆ. ಕಾರ್ಯಕ್ರಮ ಮುಗಿಸಿ ಹೊರಡುವಾಗ ಆತ ನನ್ನ ಬಳಿ ಬಂದ. ‘ನನಗೆ ಏನಿಲ್ಲವೆಂದರೂ ತಿಂಗಳ ಸಂಬಳ ಬರುತ್ತಿದೆ. ಹಾಗಾಗಿ ನೀವು ಕೊಟ್ಟ ದಿನಸಿಗಳನ್ನು ನಿಮಗೆ ವಾಪಸ್ ಮಾಡುತ್ತಿದ್ದೇನೆ. ನನಗಿಂತ ಬಡವರಿಗೆ ಕೊಡಿಎಂದು ಹೇಳಿದ. ‘ಇರಲಿ ಬಿಡು, ತೆಗೆದುಕೊಂಡು ಹೋಗು ಎಂದೆ- ಆತನ ಗುಣಕ್ಕೆ ಹೆಮ್ಮೆ ಪಟ್ಟು. ಆತ ಒಪ್ಪಿಕೊಂಡ. ‘ಇದನ್ನು ನಮ್ಮ ಸುತ್ತಲಿದ್ದವರಿಗೆ ಹಂಚಲು ಒಪ್ಪಿಗೆ ನೀಡಿದರೆ ಮಾತ್ರಎಂದ. ಹ್ಞೂಂ ಎಂದೆ. ಆತ ತನ್ನ ಓಣಿಗೆ ಹೋಗಿ ಅದನ್ನು ಹಂಚಿದ್ದು ಮಾತ್ರವಲ್ಲ ಆತನ ಮನೆಯಿರುವ ಪ್ರದೇಶವನ್ನು ಸುತ್ತಿ, ಊಟಕ್ಕೂ ತೊಂದರೆ ಇರುವ ತೀರಾ ಬಡ 10-15 ಕುಟುಂಬಗಳ ಹೆಸರು ಪಟ್ಟಿ ತಯಾರಿ ಮಾಡಿ ಕಳುಹಿಸಿದ. ‘ಸರ್, ಇವರಿಗೂ ನೀವು ಸಹಾಯ ಮಾಡಿದರೆ ಒಳ್ಳೆಯದು ಎಂದ.’ ಅಷ್ಟು ಮಾತ್ರವಲ್ಲ ನಮ್ಮ ಅಧ್ಯಾಪಕರ ವಾಟ್ಸ ಎಪ್ ಗುಂಪಿಗೆ ಹೋಗಿ ನೋಡಿದರೆಸರ್ ನೀವು ಬಡವರಿಗೆ ದಿನಸಿ ಹಂಚುತ್ತಿರುವುದು ಖುಷಿಯ ಸಂಗತಿ. ಕಾರ್ಯಕ್ಕೆ ನನ್ನ ದೇಣಿಗೆಯಾಗಿ 1000 ರೂ. ಕೊಡುತ್ತೇವೆ ಎಂದ; ನಂತರ ಭೇಟಿಯಾದಾಗ ಹಣವನ್ನು ನೀಡಿದ ಕೂಡ. ಆತ ಲಕ್ಷ ರೂಪಾಯಿ ಸಂಬಳ ಬರುವವನಲ್ಲ. ಸಿದ್ದಾಪುರದಲ್ಲಿ ಸ್ವಂತ ಮನೆ ಹೊಂದಿದವನೂ ಅಲ್ಲ. ಆದರೆ ಇನ್ನೊಬ್ಬರ ನೋವಿಗೆ ಮಣಿಯುವ ಮನಃಸ್ಥಿತಿ ಎಂತವರ ಕಣ್ಣನ್ನೂ ತೇವಗೊಳಿಸದೇ ಇರದು. ಹೃದಯದ ಕಣ್ಣಿದ್ದವರಿಗೆ ಇಂಥ ಸಾವಿರ ಘಟನೆಗಳು ನಮ್ಮ ಸುತ್ತಲೇ ಕಾಣುತ್ತವೆ.
ಆಗ ನೆನಪಾದದ್ದು ಭಾರತದೊಳಗಿನ ಸೌಹಾರ್ದ ಪರಂಪರೆ ಎಂದರೆ ಭೂಮಿಯೊಳಗೆ ಹುಗಿದು ಹೋದ ಬೀಜದಂತೆ. ಸಣ್ಣ ಮಳೆ ಹನಿಯ ಸಿಂಚನವಾದರೂ ಸಾಕು. ಅದು ಮೊಳಕೆಯೊಡೆದು ಮರುಭೂಮಿಯನ್ನೂ ಹಸಿರು ಮಾಡುವ ಶಕ್ತಿ ಹೊಂದಿದೆ. ನಮಗೆ ಮಳೆ ಆಗಲು ಸಾಧ್ಯವಿಲ್ಲದಿದ್ದರೂ ಸಣ್ಣ ಹನಿಯಾದರೂ ಆಗೋಣ.
-ವಿಠ್ಠಲ ಭಂಡಾರಿ








"ದಮನದ ಕೇಡಿನೆದುರು ಬುದ್ದನ ಕರುಣೆಯ ಬೆಳಕು"



ದೇಶವೆಂದರೆ ಮನುಷ್ಯರು. ಈ ದೇಶದ ಪ್ರಜ್ನೆಯಂತಿರುವ ಪ್ರಜೆಗಳ ಮೇಲೆ ಮತ್ತೆ ಮತ್ತೆ ಹಲ್ಲೆ, ದೌರ್ಜನ್ಯ ನಡೆದಾಗ ಅವರ ಪರವಾಗಿ ಅನೇಕ ಬುದ್ದಿಜೀವಿಗಳು, ಚಿಂತಕರು, ಲೇಖಕರು, ಮಾನವ ಹಕ್ಕುಗಳ ಹೋರಾಟಗಾರರು ದನಿಯೆತ್ತಿದ್ದಾರೆ. ಶೋಷಿತರ ಬೆಂಬಲಕ್ಕೆ ನಿಂತಿದ್ದಾರೆ.  ಆದರೆ ದಮನಿತರ ಹಕ್ಕುಗಳಿಗೆ ಹೋರಾಡಿದವರನ್ನೆ ದೇಶದ್ರೋಹಿಗಳೆಂದು ಕರೆದು ಅವರನ್ನು "ಯುಎಪಿಎ" (ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ) ಎನ್ನುವ ಕರಾಳ ಶಾಸನವನ್ನು ಬಳಸಿಕೊಂಡು ಬಂದಿಸಿರುವುದು ನಮಗೆಲ್ಲಾ ಅಘಾತ ತಂದಿದೆ. ಇದು ಕಟುಕನ ಕತ್ತಿ ದೇಶದ ಮನಸ್ಸಿನ ಮೇಲೆ ನಡೆಸಿದ ಹಲ್ಲೆಯಾಗಿದೆ.  ಕಟ್ಟಡದ ಹೊರಗಿನ ಮೇಲ್ಮೈಯನ್ನು ಬದ್ರವಾಗಿದೆ ಎಂದು ವಂಚಿಸುವುದರ ಮೂಲಕ ಒಳಗಿನ ರಚನೆಯನ್ನು ಸಂಪೂರ್ಣ  ಟೊಳ್ಳುಗೊಳಿಸಿ ದೇಶವೆನ್ನುವ ಇಡೀ ಕಟ್ಟಡವನ್ನು ಅಭದ್ರಗೊಳಿಸುವುದು ಇವರ ಹುನ್ನಾರವಾಗಿದೆ. ಈ ಮೇಲು ರಚನೆಯ ಅಗಾಧವಾದ ಕೊಂಬೆಗಳು ಪ್ರಜೆಗಳ ಮೇಲಿನ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿ ಅವರ ಉಸಿರುಗಟ್ಟಿಸಿ ಪ್ರಭುತ್ವದ ಮುಂದೆ ಮಂಡಿಯೂರುವಂತೆ ಮಾಡಿವೆ. ಇಂತಹ ಸಂದರ್ಭದಲ್ಲಿ ದೇಶದ ಆತ್ಮಸಾಕ್ಷಿಯಂತೆ ವರ್ತಿಸಬೇಕಾದ ಸಾರ್ವಜನಿಕ ಸಂಸ್ಥೆಗಳು ಪ್ರಭುತ್ವದೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ, ಪುರಾವೆಗಳಿಲ್ಲದ ಆರೋಪಗಳಿಗೆ ಬಲಿಯಾದ ಮಾನವ ಹಕ್ಕುಗಳ ಹೋರಾಟಗಾರರಿಗೆ ಜಾಮೀನು ಕೊಡಲು ಸಹ ನ್ಯಾಯಾಲಯಗಳು ನಿರಾಕರಿಸಿವೆ. ಎಲ್ಲ ಆಧಾರಸ್ತಂಬಗಳು ಕೈಕೊಟ್ಟಾಗ ಈ ದೇಶ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಅಲ್ಲಿನ ನಾಗರಿಕ ಜವಬ್ದಾರಿಯಾಗಿದೆ
ಕ್ರೂನಿ ಬಂಡವಾಳಶಾಹಿಗಳ ಈ ಕಾಲದಲ್ಲಿ ಜಾಗತಿಕವಾಗಿ ಅನೇಕ ದೇಶಗಳಲ್ಲಿ ನಿರಂಕುಶ ಪ್ರಬುತ್ವದ ಆಡಳಿತ ಕಂಡುಬರುತ್ತದೆ. ಕರೋನ ವೈರಾಣು ಈ ಸಂದರ್ಬವನ್ನು ಮತ್ತಷ್ಟು ಜಟಿಲಗೊಳಿಸಿದೆ. ಈ ಬಿಕ್ಕಟ್ಟಿನಲ್ಲಿ ಬಡಜನರು ಬೀದಿ ಪಾಲಾಗಿದ್ದಾರೆ ಮತ್ತು ಹಸಿವಿನಿಂದ ಬಳಲುತ್ತಿದ್ದಾರೆ, ಇವರ ಪರವಾಗಿ ದನಿ ಎತ್ತಿದವರು ಜೈಲು ಪಾಲಾಗಿದ್ದಾರೆ. ಈ ದೇಶವನ್ನು ಕಟ್ಟಿದ ಈ  ಜನರು ತುತ್ತು ಕೂಳಿಗೆ ಪರದಾಡುವಂತಹ ವಾತಾವರಣ ಸೃಷ್ಟಿಸಲಾಯಿತು. ಯಾವುದೇ ಪೂರ್ವ ತಯಾರಿ ಇಲ್ಲದೆ ದಿಗ್ಭಂದನ ಹೇರಿದ್ದರ ಪರಿಣಾಮವಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಬೀದಿಗೆ ಬಂದರು ಮತ್ತು ಮಹಿಳೆಯರು, ಸಣ್ಣ ಸಣ್ಣ ಮಕ್ಕಳು ಸಾವಿರಾರು ಕಿ.ಮೀ. ತಮ್ಮ ಊರಿನ ಕಡೆಗೆ ಬರಿಗಾಲಿನಲ್ಲಿ ನಡೆಯುತ್ತಿರುವ ದೃಶ್ಯ ನೋಡಿದಾಗ ನಮ್ಮೆಲ್ಲರ ಎದೆ ಒಡೆಯುತ್ತದೆ. ಅನೇಕ ಕಡೆಗಳಲ್ಲಿ ಅವರನ್ನು ಪ್ರಾಣಿಗಳಂತೆ ಬಂದಿಸಿಡಲಾಗಿದೆ
ಈ ಎಲ್ಲಾ ಯಾತನಾಮಯ ದಿನಗಳ ನಡುವೆ ಅಂಬೇಡ್ಕರ್ ಜಯಂತಿಯಾದ ಎಪ್ರಿಲ್  14ರಂದು ಆನಂದ ತೇಲ್ತುಂಬ್ಡೆ ಮತ್ತು ಗೌತಮ್ ನವಲ್ಕ ಅವರನ್ನು ಸುಳ್ಳು ಆರೋಪಗಳನ್ನು ಹೊರೆಸಿ ’ಯುಎಪಿಎ’ ಅಡಿಯಲ್ಲಿ ಬಂದಿಸಿದ್ದಾರೆ. ಈ ಬಂದನದ ಇಡೀ ಪ್ರತಿಕ್ರಿಯೆ ಸೇಡಿನಿಂದ ಮತ್ತು ಕ್ರೌರ್ಯದಿಂದ ಕೂಡಿದೆ. ಎರಡು ವರ್ಷಗಳ ಹಿಂದೆ ಬಡಜನರ ಸಬಲೀಕರಣಕ್ಕಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ಒಂಬತ್ತು ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳನ್ನು ಇದೇ ರೀತಿಯ ಸುಳ್ಳು ಆರೋಪಗಳ ಅಡಿಯಲ್ಲಿ ಅಕ್ರಮವಾಗಿ ಬಂದಿಸಿದ್ದರು. ಈಗ ತೇಲ್ತುಂಬ್ಡೆ ಮತ್ತು ನವಲ್ಕ ಅವರನ್ನು ಬಂದಿಸಿದ್ದಾರೆ. ಮೌನವಾಗಿದ್ದರೆ ಮುಂದಿನ ದಿನಗಳಲ್ಲಿ ಬಂದನಕ್ಕೊಳಗಾಗುವ ಸರದಿ ನಮ್ಮದಾಗುತ್ತದೆ. ಈ ಎಲ್ಲಾ ಬಂದನದ ಹಿಂದೆ ಬಡಜನರನ್ನು ಶೋಷಿಸುವುದು ಮತ್ತು ಅವರ ಪರವಾಗಿ ಹೋರಾಡುವವರನ್ನು ಬಂದಿಸುವ ಕಾರ್ಯಸೂಚಿ ಇದೆ
ಇಂತಹ ದುರಿತ, ಆತಂಕದ ದಿನಗಳಲ್ಲಿ ಬಂದಿಸಲ್ಪಟ್ಟ ಒಡನಾಡಿಗಳ ಪರವಾಗಿ ನಾವೆಲ್ಲಾ ಒಗ್ಗಟ್ಟಾಗಿ ಬೆಂಬಲಿಸಬೇಕಾಗಿದೆ.ಈ ಒಡನಾಡಿಗಳು ಏಕಾಂಗಿಗಳಲ್ಲ ಎಂದು ತೋರಿಸಿಕೊಡಬೇಕಾಗಿದೆ. ಅವರ ಪರವಾಗಿ ನಿಲ್ಲುವುದು ಈ ಕ್ಷಣದ ಅಗತ್ಯವಾಗಿದೆ. ಈ ಮೂಲಕ ಮಾನವ ಹಕ್ಕುಗಳನ್ನು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಬೇಕಾಗಿದೆ. ಇದು ನಮ್ಮ ಕರ್ತವ್ಯ.
ನಾವೆಲ್ಲಾ ಭಾರತದ ಆತ್ಮವನ್ನು ರಕ್ಷಿಸಬೇಕಾಗಿದೆ
ಜೊತೆಯಾಗಿ ನಿಲ್ಲೋಣ, ಅಕ್ರಮ ಬಂದನವನ್ನು ವಿರೋದಿಸೋಣ
ಎಪ್ರಿಲ್ ೭ ಬುದ್ದ ಪೂರ್ಣಿಮೆ
ಅಂದು ಪ್ರಗತಿಪರ ಸಂಘಟನೆಗಳು, ಚಿಂತಕರು ಮುಮ್ತಾದವರು  ದಿಗ್ಬಂದನ ಸಡಿಲಗೊಳಿಸಿದ ಜಿಲ್ಲೆ, ತಾಲೂಕುಗಳಲ್ಲಿ ದೈಹಿಕ ಅಂತರ ಕಾಯ್ದುಕೊಂಡು ಸಾರ್ವಜನಿಕವಾಗಿ ಪ್ರತಿಭಟಿಸಬೇಕು. ಇದು ಸಾದ್ಯವಿಲ್ಲದವರು ತಮ್ಮ ತಮ್ಮ ಮನೆಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟಿಸಬೇಕು
ನಮ್ಮ ಘೋಷಣೆಗಳು
ಬುದ್ದನ ಕರುಣೆಯ ಬೆಳಕನ್ನು ಹಿಡಿದುಕೊಂಡು ನಾವು ನ್ಯಾಯದ ಪರವಾಗಿ ನಿಂತಿದ್ದೇವೆ
ಸುಳ್ಳು ಆರೋಪದಡಿಯಲ್ಲಿ ಬಂದಿಸಲ್ಪಟ್ಟ ಎಲ್ಲಾ ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳು, ಲೇಖಕರನ್ನು ಕೂಡಲೆ ಬಿಡುಗಡೆಗೊಳಿಸಿ
ಕರಾಳ ಶಾಸನ "ಯುಎಪಿಎ" ಯನ್ನು ಹಿಂತೆಗೆದುಕೊಳ್ಳಿ
ಜೈಲಿನಲ್ಲಿರಬೇಕಾದ ಮತಾಂದರು, ಭ್ರಷ್ಟರು ಸಾರ್ವಜನಿಕವಾಗಿ ಅಡ್ಡಾಡಿಕೊಂಡಿದ್ದಾರೆ, ಜನರ ನಡುವೆ ಇರಬೇಕಾದ ಮಾನವೀಯ, ಜೀವಪರ ವ್ಯಕ್ತಿಗಳು ಬಂದನಕ್ಕೊಳಗಾಗಿದ್ದಾರೆ ಇದು ನಾಚಿಕೆಗೇಡು
ವಿ.ಸೂ. : ಈ ಮೇಲ್  ಜೊತೆ ಇಂಗ್ಲೀಷ್ ನಲ್ಲಿ ಬರೆದ ಒಂದು ಪತ್ರವನ್ನು ಲಗತ್ತಿಸಲಾಗಿದೆ. ಅದನ್ನು ಪ್ರತಿಯೊಬ್ಬರೂ ರಾಷ್ಟ್ರಪತಿ, ಪ್ರದಾನ ಮಂತ್ರಿ ಕಾರ್ಯಾಲಯ, ಗೃಹ ಇಲಾಖೆಗೆ ಕಳುಹಿಸಬೇಕು

presidentofindia@rb.nic.in ,  PMO, Home ministry 
--
"ಕರ್ನಾಟಕ ಪ್ರಗತಿಪರ ಸಂಘಟನೆಗಳ ಒಕ್ಕೂಟ"ದ ಪರವಾಗಿ