Wednesday 4 November 2020

ರಾಜ್ಯ ನಾಗರಿಕ ಸೇವಾ ಅಧಿನಿಯಮ- 202೦ ಕರಡಿಗೆ ವಿರೋಧ

ಚಿಂತನ ಉ.ಕ 
ಸಹಯಾನ ಕೆರೆಕೋಣ
ಚಿಂತನ ರಂಗ ಅಧ್ಯಯನ ಕೇಂದ್ರ

ಪತ್ರಿಕಾ ಪ್ರಕಟಣೆ 

ಇತ್ತೀಚೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ ರಾಜ್ಯ ನಾಗರಿಕ ಸೇವಾ ಅಧಿನಿಯಮ- 202೦ ಇದು ಸಂಪೂರ್ಣವಾಗಿ  ಸರಕಾರಿ ನೌಕರರ ಸಾಹಿತ್ಯ, ಕಲೆ, ಸಾಂಸ್ಕೃತಿ ಅಭಿವ್ಯಕ್ತಿಯನ್ನೊಳಗೊಂಡ ಸೃಜನಶೀಲ ಚಟುವಟಿಕೆಯನ್ನೇ ಕಿತ್ತುಕೊಳ್ಳಲು ಮುಂದಾಗಿದೆ. ಈ ನಾಡಿನ ಎಚ್ಚೆತ್ತ ಪ್ರಜ್ಞೆ ಯಾಗಿ, ಸಂವಿಧಾನದ ಕಾವಲುಗಾರರಾಗಿ ಕೆಲಸ ಮಾಡುತ್ತಿರುವ ಈ ನಾಡಿನ ಕವಿ, ಬರಹಗಾರರ, ಕಲಾವಿದ ಮತ್ತು ನಟರ ಕೊಡುಗೆಯನ್ನು  ಗೌರವಿಸಲು ಒಪ್ಪದ ಈ ಕರಡು ಸಂವಿಧಾನ ವಿರೋಧಿಯಾದದ್ದು ಮತ್ತು ಸರ್ಕಾರಿ ನೌಕರರನ್ನು ಮತ್ತು ಅವರ ಕುಟುಂಬವನ್ನು ಸರಕಾರದ ಜೀತದಾಳಾಗಿಸುವ ಉದ್ದೇಶ ಹೊಂದಿರುವುದಾಗಿದೆ. ಹಾಗಾಗಿ ಚಿಂತನ ಉತ್ತರ ಕನ್ನಡ ಮತ್ತು ಸಹಯಾನ ಕೆರೆಕೋಣ ಮತ್ತು ಚಿಂತನ ರಂಗ ಅಧ್ಯಯನ ಕೇಂದ್ರ ಈ ಕರಡನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ ಮತ್ತು ಇದನ್ನು ಹಿಂತೆಗೆದುಕೊಳ್ಳಲು  ಆಗ್ರಹಿಸುತ್ತದೆ.

 ಈವರೆಗೆ ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿದ್ದ ಈ ನಿಯಮಾವಳಿಯನ್ನು  ತಿದ್ದುಪಡಿ ಮಾಡಿ ನೌಕರರ ಕುಟುಂಬವನ್ನು, ಅವರ ಅವಲಂಬಿತರನ್ನು ಇದರ ವ್ಯಾಪ್ತಿಗೆ ತಂದಿದೆ. ಮತ್ತು ಅವರು ಯಾವುದೇ ಹೋರಾಟ, ಪ್ರತಿಭಟನೆ, ಬರವಣಿಗೆಯಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ. ಹೀಗೆ ಸರ್ಕಾರಿ ನೌಕರರನ್ನು ಅವಲಂಬಿಸಿದ ಎಲ್ಲರೂ ಈ ಸೇವಾ ಅಧಿನಿಯಮದಲ್ಲಿ ಬರುವಂತೆ ಮಾಡಿರುವುದು ಕೂಡ ಹಾಸ್ಯಾಸ್ಪದವಾಗಿದೆ. 

ಭಾರತ ಸಂವಿಧಾನವು ವಿಧಿ ೧೯ರಡಿ ಭಾರತದ ಪ್ರಜೆಗಳಿಗೆ  ಕೊಡಮಾಡಿದ ಸ್ವಾತಂತ್ರ್ಯದ ಹಕ್ಕಿನಲ್ಲಿ "ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ"ವೂ ಒಂದು. ಹಾಗೆ ಅನುಚ್ಛೇದ 51 ಎ ದಲ್ಲಿ  ಪ್ರಜೆಗಳ ಕರ್ತವ್ಯದ ಬಗ್ಗೆ ಗಮನ ಸೆಳೆಯುತ್ತಾ "ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು ಮತ್ತು ಇತರರಲ್ಲಿ ಬೆಳೆಸುವುದು" ಅತಿಮುಖ್ಯವಾದದ್ದು ಎಂದು ಹೇಳುತ್ತದೆ. 
ಆದರೆ ಈ ಕರಡಿನಲ್ಲಿ "ಯಾವುದೇ ರೀತಿಯ ಸಾಹಿತ್ಯಕ ಅಥವಾ ಕಲಾತ್ಮಕ ಅಥವಾ ವೈಜ್ಞಾನಿಕ ಕಾರ್ಯದಲ್ಲಿ ರೂಢಿಗತವಾಗಿ ತನ್ನನ್ನು ತೊಡಗಿಸಿಕೊಳ್ಳತಕ್ಕದ್ದಲ್ಲ" ಎಂದೂ  ಹೇಳುತ್ತದೆ. 
ಇನ್ನೊಂದೆಡೆ
 "ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಸರ್ವೋಚ್ಛತೆಗೆ ಸ್ವತಃ ಬದ್ಧನಾಗಿರತಕ್ಕದ್ದು ಮತ್ತು ಎತ್ತಿ ಹಿಡಿಯತಕ್ಕದ್ದು" ಎಂದು ಸರಕಾರಿ ನೌಕರರ ವರ್ತನೆ ಬಗ್ಗೆ ಮೊದಲು ಹೇಳಿದ ಈ ಕರಡು ಆಳದಲ್ಲಿ ಸಂವಿಧಾನಕ್ಕೆ ವಿರೋಧಿಯಾದ, ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುವ ಅಜೆಂಡಾ ಹೊಂದಿದೆ. ಇದೊಂದು ಸಾಂಸ್ಕೃತಿಕ ಪ್ರಶ್ನೆ ಕೂಡ ಹೌದು. ಸಾಮಾನ್ಯ ಸರಕಾರಿ ನೌಕರರ ಮತ್ತು ನೌಕರಿಯಲ್ಲಿರುವ ಸಂವೇದನಾಶೀಲ ಲೇಖಕರು, ಕಲಾವಿದರ ಸ್ವಾತಂತ್ರವನ್ನು, ಅನ್ಯಾಯವನ್ನು ವಿರೋಧಿಸಿ ಮಾಡಬಹುದಾದ ಹೋರಾಟ, ಒತ್ತಾಯದಂತಹ ಸೌಲತ್ತುಗಳನ್ನು ಕಿತ್ತುಕೊಳ್ಳುವ ಈ ಕರಡು ವಾಪಸ್ ಆಗಬೇಕೆಂದು ಚಿಂತನ ಮತ್ತು ಸಹಯಾನ ಒತ್ತಾಯಿಸುತ್ತದೆ.

 ಬದುಕಿನಲ್ಲಿ ತಾನು ಮಾಡಿದ ಸಾಧನೆಗಾಗಿ ಗೌರವ ಪ್ರಶಸ್ತಿಗಳನ್ನು ಸ್ವೀಕರಿಸುವ ಅವಕಾಶವನ್ನು ಮತ್ತು ಸಂವಿಧಾನಬದ್ಧವಾಗಿ ತನಗೆ ಸಿಗಬೇಕಾದ ಹಕ್ಕುಗಳು ಮತ್ತು ಅವಕಾಶಗಳು ಸಿಗದಿದ್ದಾಗ ಅದರ ವಿರುದ್ಧ ತಾನು ಮಾಡಬಹುದಾದ ಪ್ರತಿಭಟನೆ, ಹಕ್ಕೊತ್ತಾಯದ ಕ್ರಮವನ್ನೂ ನಿಯಂತ್ರಿಸಲು ಹೊರಟಿರುವುದು ಖೇದಕರ. ಅದರಲ್ಲೂ ಎಲ್ಲರ ಹೋರಾಟದ ಮೂಲಕ ಗಳಿಸಿದ ರಾಜ್ಯೋತ್ಸವದ ಸಂದರ್ಭದಲ್ಲಿ ಇದನ್ನು ತಂದಿರುವುದು ಇಲಾಖೆಯ  ನೌಕರ ವಿರೋಧೀ, ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧೀ     ನಿಲುವಿಗೆ ಕೈಗನ್ನಡಿಯಾಗಿದೆ.
ಒಂದರ ಹಿಂದೊಂದರಂತೆ‌ ತರುತ್ತಿರುವ ಅವೈಜ್ಞಾನಿಕ ನೀತಿಗಳ ಜೊತೆ ಈಗ ಸಾಹಿತ್ಯ ಸಾಂಸ್ಕೃತಿಕ ಅಭಿವ್ಯಕ್ತಿಯ ಸ್ವಾತಂತ್ರ್ಯ ವನ್ನೂ ನಿಯಂತ್ರಿಸ ಹೊರಟಿರುವ ಕ್ರಮವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕೆಂದು  ಒತ್ತಾಯಿಸುತ್ತದೆ. ಮತ್ತು     ನಾಡಿನ ಸಂವೇದನಾಶೀಲ ಜನತೆ ಸರಕಾರವನ್ನು ಒತ್ತಾಯಿಸಬೇಕೆಂದು ಮನವಿ ಮಾಡುತ್ತದೆ.

 *ಶಾಂತಾರಾಮ ನಾಯಕ ಹಿಚ್ಕಡ* , ಅಧ್ಯಕ್ಷರು, ಸಹಯಾನ ಕೆರೆಕೋಣ.
 *ಕಿರಣ ಭಟ್* ಚಿಂ.ರಂ.ಅ.ಕೇಂದ್ರ 
 *ವಿಠ್ಠಲ ಭಂಡಾರಿ,*  ಸಂಚಾಲಕ, ಚಿಂತನ ಉತ್ತರ ಕನ್ನಡ

No comments:

Post a Comment