Sunday 19 July 2020

ಡಿ.ಎನ್. ಶಂಕರ ಭಟ್: ಕನ್ನಡ ಸ್ವರಾಜ್ಯದ ಹರಿಕಾರ. ಲೇಖಕ: ಮೇಟಿ ಮಲ್ಲಿಕಾರ್ಜುನ

ಭಾಷೆ ಕುರಿತ ಚರ್ಚೆ – 07 

ಕನ್ನಡ ನುಡಿ ಬಗೆಗಿನ ಸಾಂಪ್ರದಾಯಿಕ ತಿಳುವಳಿಕೆಯಲ್ಲಿ ಒಂದು ದೊಡ್ಡ ಪಲ್ಲಟವನ್ನು ಡಿ.ಎನ್.ಶಂಕರ ಭಟ್ ಅವರು ಉಂಟುಮಾಡಿರುತ್ತಾರೆ. ಕರ್ನಾಟಕದ ಬಹುಜನರ ಬದುಕಿನ ದಾರಿಗಳಲ್ಲಿಯೇ ಈ ಪಲ್ಲಟವು ಅತ್ಯಂತ ಮಹತ್ವದ ನಡೆಯಾಗಿದೆ. ಶಂಕರಭಟ್ ಅವರು ಕನ್ನಡದ ಮಾತಿನ ಸ್ವರೂಪ, ಉಚ್ಚಾರಣೆಯನ್ನು ಕುರಿತು ಮಾತ್ನಾಡುವುದಿಲ್ಲ. ಬದಲಾಗಿ ಬರಹ ಕನ್ನಡ ಎದುರಿಸುತ್ತಿರುವ ಸವಾಲುಗಳು, ತೊಡಕುಗಳು ಹಾಗೂ ಈ ಬರಹ ಕನ್ನಡದ ವ್ಯಾಕರಣವನ್ನು ಕುರಿತು ಇವರು ತಮ್ಮ ವಿಚಾರಗಳನ್ನು ಕಳೆದ ಎರಡು ದಶಕಗಳಿಂದ ಅತ್ಯಂತ ಗಟ್ಟಿ ದನಿಯಲ್ಲಿ ಮಂಡಿಸುತ್ತಲೇ ಬಂದಿರುತ್ತಾರೆ. ಕನ್ನಡದ ರಚನೆ ಮತ್ತು ಬಳಕೆಯು ಸಂಸ್ಕೃತದ ಹೇರಿಕೆಯಿಂದ ತುಂಬಿ ಹೋಗಿರುವುದನ್ನು ಗುರುತಿಸಿ, ಈ ಭಾರದಿಂದ ಕನ್ನಡವನ್ನು ಬಿಡುಗಡೆಗೊಳಿಸುವ ಹಾಗೂ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವನ್ನು ಕಟ್ಟುವ ಕಾಯಕದಲ್ಲಿ ಭಟ್ ಅವರು ತೊಡಗಿಕೊಂಡಿದ್ದಾರೆ. ಈ ನಡೆಯನ್ನು ಸಂಸ್ಕೃತ ವಿರೋಧಿ ನಿಲುವನ್ನಾಗಿ ಗುರುತಿಸುವ ಹುನ್ನಾರವು ಇವತ್ತು ಕರ್ನಾಟಕದಲ್ಲಿ ನಡೆಯುತ್ತಿದೆ. ಆದರೆ ಶಂಕರಭಟ್ಟರು  ಕನ್ನಡದ ಪರವಾಗಿ ಮಾತ್ರ ತಿಳುವಳಿಕೆಯನ್ನು ಬೆಳೆಸುವ ಹಾಗೂ ಈ ತಿಳಿವನ್ನೇ ಕನ್ನಡದ ಅರಿಮೆಯ ತಿಳಿವನ್ನಾಗಿ ರೂಪಿಸಿ, ಕನ್ನಡದ ಸ್ವರಾಜ್ಯವನ್ನು ನೆಲೆಗೊಳಿಸುವ ಇರಾದೆಯನ್ನು ಹೊಂದಿರುತ್ತಾರೆ. ಕೇವಲ ಸಂಸ್ಕೃತದ ವ್ಯಾಕರಣದಿಂದ ಕನ್ನಡವನ್ನು ಬಿಡುಗಡೆಗೊಳಿಸುವ ಸೀಮಿತ ಗುರಿಗೆ ಭಟ್ಟರು ಬದ್ಧರಾಗದೇ, ಕನ್ನಡದ ಮೂಲಕವೇ ಎಲ್ಲ ಬಗೆಯ ತಿಳಿವನ್ನು ಪ್ರಕಟಿಸಲು ಸಾಧ್ಯವಾಗಬೇಕು ಎಂಬ ನಂಬಿಕೆಯನ್ನು ಇವರು ಹೊಂದಿರುತ್ತಾರೆ. 
ಈ ನಂಬಿಕೆಯನ್ನು ಸಾಕಾರಗೊಳಿಸಲು ಕನ್ನಡವು ಹೇಗೆ ಸಜ್ಜಾಗಬೇಕು ಎಂಬ ನಿಟ್ಟಿನಲ್ಲಿ, ಕನ್ನಡ ಬರಹದ ಸೊಲ್ಲರಿಮೆ, ಪದಕೋಶ, ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟುವ ಬಗೆಗಳು, ಇಂಗ್ಲಿಶಿನ ಪದಗಳಿಗೆ ಕನ್ನಡದ್ದೇ ಪದಗಳು, ಲಿಪಿಕ್ರಾಂತಿ ಹಾಗೂ ಪದಕ್ರಾಂತಿಗಳಂತಹ ಅತ್ಯಂತ ಮಹತ್ವದ ನಿಲುವುಗಳನ್ನು ಶಂಕರ್ ಭಟ್ಟರು ತೆಗೆದುಕೊಂಡಿದ್ದಾರೆ. ಕನ್ನಡ ಸಮುದಾಯಗಳ ಬೆಳವಣಿಗೆ ಎಂಬುದು, ಅದು ಕನ್ನಡ ನುಡಿ ಬೆಳವಣಿಗೆಯನ್ನು ನೆಮ್ಮಿಕೊಂಡಿರುವ ಸಂಗತಿಯಾಗಿದೆ. ವಿಜ್ಞಾನದಂತಹ ಬರಹಗಳಲ್ಲಿ ಸಂಸ್ಕೃತ ಪದಗಳ ಬಳಕೆಯ ಪ್ರಮಾಣ ಶೇಕಡಾ 80%ಕ್ಕಿಂತ ಹೆಚ್ಚಾಗಿರುವುದನ್ನು ನೋಡಬಹುದು. ಹಾಗಂತ ನುಡಿ ಎರವಲು ಬಗೆಗೆ ಶಂಕರಭಟ್ಟರು ಯಾವುದೇ ನಿರಾಕರಣೆಯನ್ನು ತೋರಿಸುವುದಿಲ. ಬದಲಾಗಿ ಕನ್ನಡದ ತಿಳಿವು, ಸಂವಹನ ಹಾಗೂ ಹೊಸಗಾಲದ ಅಗತ್ಯಗಳನ್ನು ಪೋರೈಸುವುದಕ್ಕೆ ಕನ್ನಡ ಹೇಗೆಲ್ಲ ಸಜ್ಜುಗೊಳ್ಳಬೇಕು ಎಂಬ ನಿಲುವೂ ಇವರ ಇಡೀ ಬರಹಗಳಲ್ಲಿ ಕಾಣುತ್ತದೆ. ಬರಹ ಕನ್ನಡದ ಬಹುತೇಕ ಪದಕೋಶವು ಕೇವಲ ಸಂಸ್ಕೃತದಿಂದ  ತುಂಬಿಹೋಗಿದೆ. ಆದರೆ ಕನ್ನಡ ನುಡಿಯು ಬೇರೆ ನುಡಿಗಳಿಂದ ಎರವಲು ಪಡೆದುಕೊಂಡು, ತನ್ನ ಕಸುವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಕೇವಲ ಸಂಸ್ಕೃತದಿಂದ ಮಾತ್ರ ಹೇರಳವಾಗಿ ಪದಗಳನ್ನು ಎರವಲು ಪಡೆಯುವುದರಿಂದ, ಕನ್ನಡದ ಸ್ವರಾಜ್ಯಕ್ಕೆ ಧಕ್ಕೆಯಾಗುತ್ತದೆ. ಶುದ್ಧತೆ ಎನ್ನುವುದು ಜನಬಳಕೆಯ ಯಾವುದೇ ನುಡಿಯ ಮೂಲ ಗುಣವೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಶುದ್ಧತೆಯ ನೆಲೆಯಿಂದ ಶಂಕರಭಟ್ಟರ ಕನ್ನಡದ ಬಗೆಗಿನ ಚಿಂತನೆಗಳನ್ನು ಬಿಡಿಸಿ ನೋಡುವ ಅಗತ್ಯವಿಲ್ಲ.      
ಡಿ.ಎನ್. ಶಂಕರಭಟ್ಟರು ಕಟ್ಟುತ್ತಿರುವ ತಿಳಿವಿನ ಮಾದರಿಗಳು ನಮಗೆ ಯಾಕೆ ಬೇಕು? ಅವುಗಳಿಂದ ಕನ್ನಡದ ಸಮುದಾಯಗಳ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳು ಉಂಟಾಗುತ್ತವೆ? ಈ ಪರಿಣಾಮಗಳು ಈ ನಾಡಿನ ಸಮುದಾಯಗಳ ಬದುಕಿಗೆ ಹೇಗೆ ಒತ್ತಾಸೆಯಾಗುತ್ತವೆ? ಕನ್ನಡದ ಮೂಲಕವೇ ಚಿಂತನೆಯನ್ನು ಕಟ್ಟಿ ಬೆಳೆಸಲು ಇವುಗಳು ಹೇಗೆ ದಾರಿಯಾಗಬಲ್ಲವು? ಎಂಬಿತ್ಯಾದಿ ವಿಷಯಗಳನ್ನು ಮಾತ್ರ ಇಲ್ಲಿ ಚರ್ಚಿಸಲು ಬಯಸುತ್ತೇನೆ. ಏಕೆಂದರೆ ಭಟ್ರ ಇಡೀ ತಾತ್ವಿಕತೆಯು ನೆಲೆಗೊಂಡಿರುವುದು ಕೂಡ ಈ ನಿಲುವುಗಳಲ್ಲಿಯೇ. 
ಕನ್ನಡವನ್ನು ಕುರಿತಾಗಿ ಚಿಂತಿಸುವುದೆಂದರೆ, ಅದು ಕೇವಲ ಲಿಪಿ ಮತ್ತು ಕಾಗುಣಿತಗಳ ಸ್ವರೂಪವನ್ನು ಯಾವ ಕಾಲಕ್ಕೂ ಬದಲಿಸದೆ ಹಾಗೇ ಮುಂದುವರಿಸಿಕೊಂಡು ನಡೆಯುವುದಲ್ಲ. ಆಯಾ ಕಾಲದ ಬದುಕಿನ ದಾರಿಗಳನ್ನು ಹೇಗೆ ರೂಪಿಸಿಕೊಳ್ಳಬೇಕು? ಇದಕ್ಕೆ ಒತ್ತಾಸೆಯಾಗಿ ಆ ಸಮೂಹಗಳ ನುಡಿಯನ್ನು ಹೇಗೆ ಸಜ್ಜುಗೊಳಿಸಬೇಕು? ನುಡಿಯೆಂಬುದು ಕೇವಲ ಮಾತಲ್ಲ, ಅದು ಬದುಕೂ ಆಗಿರುತ್ತೆ. ಈ ಬದುಕಿಗೆ ಬೇಕಾದ ಮೂಲತತ್ವಗಳು ಆಯಾ ನುಡಿಗಳಲ್ಲಿಯೆ ಹೇಗೆ ಹುದುಗಿರುತ್ತವೆ. ಎಂಬ ದಿಟವನ್ನು ಅರಿಯದೇ, ನುಡಿಯೊಂದನ್ನು ಕುರಿತು ಚಿಂತಿಸುವುದು ಅಗತ್ಯವಿಲ್ಲವೆಂದು ತೋರುತ್ತದೆ. ಆದರೆ ಡಿ.ಎನ್.ಎಸ್. ಭಟ್ ಮತ್ತು ಈ ಆಲೋಚನೆಯ ಕ್ರಮವನ್ನು ನಂಬಿದವರ ಮೊದಲ ಗುರಿಯೇ, ಸಮೂಹಗಳ ಬದುಕಿನ ವಿನ್ಯಾಸಗಳನ್ನು ಅರಿಯುವ ಮತ್ತು ಆಯಾ ಬದುಕಿಗೆ ತಕ್ಕುದಾದ ದಾರಿಗಳನ್ನು ಅವರವರ ನುಡಿಗಳ ಮೂಲಕವೇ ಕಾಣುವುದಾಗಿದೆ. ಎತ್ತುಗೆಗಾಗಿ ಕರ್ನಾಟಕದಲ್ಲಿ ಆಡಳಿತ ನುಡಿಯಾಗಿ ಕನ್ನಡವೇ ಇರಬೇಕು ಎಂದು ಅರೆ ಶತಮಾನಕ್ಕಿಂತಲೂ ಹೆಚ್ಚುಕಾಲ, ನಮ್ಮ ಸರಕಾರಗಳು ಒತ್ತಾಯಿಸುತ್ತಲೇ ಬಂದಿವೆ. ಆದರೆ ಪರಿಣಾಮ ಏನಾಗಿದೆಯೆಂದರೆ ಸೊನ್ನೆ. ಆಡಳಿತ ಇಲ್ಲವೇ ಸರಕಾರ ಎಂಬುದು ಜನರ ಬದುಕಿಗೆ ಹೊಣೆಯಾಗದೇ, ಕೇವಲ ಬದುಕಿನ ಸನ್ನಿವೇಶಗಳಲ್ಲಿ ಕನ್ನಡನುಡಿಯನ್ನು ಬಳಕೆಗೆ ಒತ್ತಾಯಿಸುವ ಮೂಲಕ ಏನನ್ನೂ ಗೆಲ್ಲಲು ಆಗುವುದಿಲ್ಲ. ಆಡಳಿತವು ಜನರಿಗೆ ಉತ್ತರದಾಯಿತ್ವವಾಗದೇ, ಕನ್ನಡ ಯಾವತ್ತಿಗೂ ನೆಲೆಗೊಳ್ಳಲಾರದು. ಹಾಗೊಂದು ಕನ್ನಡ ನೆಲೆಗೊಂಡರೆ, ಅದೊಂದು ಸಮೂಹಗಳ ಚಹರೆಯನ್ನು ಕಳೆದುಕೊಂಡ ಕನ್ನಡವಾಗುತ್ತದೆ. ಕನ್ನಡದ ಚಹರೆಗಳಿರುವುದು, ಈ ನುಡಿಯನ್ನೇ ನೆಮ್ಮಿಕೊಂಡು ಬದುಕುವ ಸಮುದಾಯಗಳಲ್ಲಿಯೇ ಹೊರತು ಕೇವಲ ನುಡಿಯಲ್ಲಿ ಅಲ್ಲ. ಗುರುತುಗಳು ಬದುಕಿನ ವಿನ್ಯಾಸಗಳಲ್ಲಿ ಹುದುಗಿರುತ್ತವೆ ಎಂಬ ವಾಸ್ತವನ್ನು ಈ ಮಾತುಗಳು ಹೇಳುತ್ತವೆ. ಆದರೆ ಇಂತಹ ಗುರುತುಗಳನ್ನು ಕಡೆಗಣಿಸುವ ಇಲ್ಲವೇ ಅಮಾನ್ಯಮಾಡುವ ಹುನ್ನಾರಗಳು ಚರಿತ್ರೆಯುದ್ದಕ್ಕೂ ನಡೆದುಕೊಂಡು ಬಂದಿವೆ. ಕನ್ನಡ ನುಡಿಯು ಕೀಳರಿಮೆಯಿಂದ ಬಳಲುತ್ತಿರಲೂ ಕಾರಣವೇ ಈ ಚಾರಿತ್ರಿಕ ನಡೆಗಳು. ಹಾಗಾಗಿ ಕನ್ನಡಕ್ಕೆ ಅಂಟಿರುವ ಇಂತಹ ಕೀಳರಿಮೆಯ ಸೋಂಕನ್ನು ತೊಲಗಿಸುವ ಕ್ರಮಗಳನ್ನು ಶಂಕರಭಟ್ಟರು ಆಲೋಚನೆಯ ಕ್ರಮದಲ್ಲಿ ಕಾಣುತ್ತೇವೆ.
ಬೇರೆ ನುಡಿಗಳಿಂದ ಮಾತ್ರ ತಿಳಿವು ತೆಗೆದುಕೊಳ್ಳುವ ನುಡಿಯನ್ನಾಗಿ ಕನ್ನಡವನ್ನು ರೂಪಿಸಲಾಗಿದೆ. ಅಂದರೆ ಕನ್ನಡವೂ ಕೂಡ ಕೊಡುವ ನುಡಿಯಾಗಿ ಬೆಳೆದು ನಿಲ್ಲಬೇಕಿದೆ. ಯಾರಿಗೆ? ಏನನ್ನು? ಕನ್ನಡ ಕೊಡಬೇಕಿದೆ ಎಂದು ಕೇಳಿದರೆ, ಕರ್ನಾಟಕದ ಸಮೂಹಗಳಿಗೆ ಬದುಕಲು ಬೇಕಿರುವ ತಿಳಿವು, ವಿಚಾರ, ಕಲಿಕೆ, ಅನ್ನ, ಕೆಲಸವನ್ನು ಕನ್ನಡದ ಮೂಲಕವೇ ಪಡೆಯಬೇಕು ಎಂಬುದೇ ಈ ಮಾತಿನ ತಿರುಳು. ಏಕೆಂದರೆ ತಿಳುವಳಿಕೆ ಇರುವುದು ಕೇವಲ ತಿಳುವಳಿಕೆಗಾಗಿ ಮಾತ್ರವಲ್ಲ, ಅದು ಬದುಕಿಗಾಗಿ ಮತ್ತು ಬದುಕಿನ ಏಳ್ಗೆ ಹಾಗೂ ಬದಲಾಣೆಗಾಗಿ ನೆಲೆಗೊಳ್ಳಬೇಕು. ಯಾವುದೇ ನುಡಿ ತಿಳುವಳಿಕೆ ಸಮೂಹಗಳ ತಿಳುವಳಿಕೆಯಾಗದೇ ಅದರಿಂದ ಯಾರಿಗೂ ಏನು ಪ್ರಯೋಜವಿರುವುದಿಲ್ಲ. ಈ ದಿಟವನ್ನು ಸರಿಯಾಗಿ ಅರಿತುಕೊಂಡ ಶಂಕರಭಟ್ಟರು ಕನ್ನಡ ಮತ್ತು ಕನ್ನಡಿಗರಪರವಾಗಿ ಚಿಂತಿಸುತ್ತಿದ್ದಾರೆ. 
ಶಂಕರಭಟ್ಟರು ಈಗಾಗಲೇ ಕೈಗೊಂಡಿರುವ ನುಡಿ ಮತ್ತು ನುಡಿಯರಿಮೆ ಕುರಿತಾದ ಎಲ್ಲ ಬಗೆಯ ಬರಹಗಳಲ್ಲಿಯೂ, ಕರ್ನಾಟಕ ಸಮೂಹಗಳ ಬದುಕಿಗೆ ಬೇಕಾಗಿರುವ ತಿಳಿವಿನ ಮಾದರಿಗಳು ಅಡಕವಾಗಿವೆ. ಎತ್ತುಗೆಗಾಗಿ ಈ ಮಾತುಗಳನ್ನು ನೋಡಿ; “ಕನ್ನಡ ಬರಹ ಮೇಲ್ವರ್ಗದದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗಬೇಕು ಮತ್ತು ಕನ್ನಡ ಬರಹದ ಮೂಲಕ ಇವತ್ತು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿರುವ ಹಲವು ರೀತಿಯ ಪ್ರಯೋಜನಗಳನ್ನು ಎಲ್ಲಾ ವರ್ಗದ ಕನ್ನಡಿಗರಿಗೂ ಸಮಾನವಾಗಿ ಪಡೆಯುವ ಹಾಗಾಗಬೇಕು” - ಕನ್ನಡ ಬರಹವನ್ನು ಸರಿಪಡಿಸೋಣ! ಎಂಬೀ ಹೊತ್ತಿಗೆಯ ಮಾತುಗಳನ್ನು ನಿಗಾಯಿಟ್ಟು ನೋಡಿದರೆ, ಶಂಕರಭಟ್ಟರ ಕನ್ನಡ ಪರವಾದ ಕಾಳಜಿಗಳು ಎಂತಹವು ಅನ್ನುವುದು ನಮ್ಮರಿವಿಗೆ ಬರುತ್ತವೆ. ದಲಿತ ಮತ್ತು ತಳಸಮುದಯಗಳ ಪರವಾಗಿ ಹೋರಾಟ ನಡೆಸುವವರು ಭಟ್ಟರ ಈ ಚಿಂತನೆಗಳನ್ನು ಲೆಕ್ಕಿಸದೆ ಇರುವುದು ಕೇವಲ ಅಚ್ಚರಿಯ ಸಂಗತಿ ಮಾತ್ರವಲ್ಲ. ಅದೊಂದು ಚಾರಿತ್ರಿಕ ವ್ಯಂಗ್ಯವೂ ಹೌದು. ಈ ಹೊತ್ತಿನ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳಿಗೆ ಬೇಕಾಗಿರುವ ಪ್ರಣಾಳಿಕೆಯೊಂದನ್ನು ಶಂಕರಭಟ್ಟರು ತಮ್ಮೀ ಬರಹಗಳ ಮೂಲಕ ರೂಪಿಸಿ ಕೊಟ್ಟಿದ್ದಾರೆ. ಭಟ್ಟರು ಬೀದಿಗಿಳಿಯದೆ ಸಾಮಾಜಿಕ ನ್ಯಾಯದ ಪರವಾಗಿ ಹೋರಾಡುತ್ತಿದ್ದಾರೆ. ಇದು ಕೂಡ ಹೋರಾಟದ ಒಂದು ಮಾದರಿ. ಇದುವೇ ಕನ್ನಡದ್ದೇ ಮಾದರಿಯೂ ಆಗಿರುತ್ತದೆ.  
ದಲಿತ ಮತ್ತು ತಳಸಮುದಾಯಗಳನ್ನೇ ನೆಲೆಯಾಗಿಸಿಕೊಂಡು ಇಡೀ ಭಾರತದಲ್ಲಿಯೇ ನುಡಿಯರಿಮೆಯ ಚಿಂತನೆಗಳು ಬೆಳೆದು ಬಂದಿರುವುದು ಅತ್ಯಂತ ಕಡಿಮೆಯೆಂದೇ ಹೇಳಬೇಕು. ಇಂತಹವೊಂದು ಆಲೋಚನೆಯ ಕ್ರಮವನ್ನು ಕನ್ನಡದಲ್ಲಿ ಶಂಕರಭಟ್ಟರು  ಮೊದಲಾದವರು ಹುಟ್ಟು ಹಾಕಿರುತ್ತಾರೆ. ಕರ್ನಾಟಕ ಇಲ್ಲವೇ ಭಾರತದಲ್ಲಿ ನುಡಿ ಬಗೆಗಿನ ಯಾವುದೇ ತೀರ್ಮಾನವು ಇಡೀ ಸಮುದಾಯವನ್ನೇ ನೆಚ್ಚಿಕೊಂಡು ರೂಪುಗೊಳ್ಳುವದಿಲ್ಲ. ಬದಲಾಗಿ ಮೇಲು ಜಾತಿಯ ಇಲ್ಲವೇ ಅಧಿಕಾರ ನಂಟು ಹೊಂದಿರುವ ಜನ ಸಮೂಹಗಳ ನುಡಿ ಬಗೆಗಳು ಮಾತ್ರ ಶಿಕ್ಷಣ, ಸಾಹಿತ್ಯ, ಮಾಧ್ಯಮ ಹಾಗೂ ಇತರೆ ತಿಳಿವಿನ ವಲಯಗಳಲ್ಲಿ ಮುಂಚೂಣೆಗೆ ಬರುತ್ತವೆ. ಈ ಬೆಳವಣಿಗೆಗಳು ದಲಿತ. ಹಿಂದೂಳಿದ, ತಳಸಮುದಾಯಗಳ ನುಡಿ ಚಹರೆಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ. ಮೇಲುಜಾತಿಗಳು ನುಡಿಯುವ ಮಾತಿನ ಪ್ರಕಾರಗಳು ಮೇಲುಹಿರಿಮೆಯನ್ನು ಪಡೆದರೆ, ದಲಿತ ಮುಂತಾದವರ ಮಾತುಗಳು ಕೀಳುಹಿರಿಮೆಗೆ ಒಳಗಾಗುತ್ತವೆ. ಈ ಸಾಂಕೇತಿಕ ಹಿಂಸೆಯನ್ನು ಹೋಗಲಾಡಿಸುವ ದಾರಿಗಳು ನುಡಿಯೊಳಗೇ ಹುದುಗಿರುತ್ತವೆ ಎಂಬ ದಿಟವನ್ನು ಕೂಡ ಶಂಕರಭಟ್ಟರು ತಮ್ಮ ಬರಹಗಳ ಮೂಲಕ ನಮ್ಮುಂದೆ ಮಂಡಿಸುಡುತ್ತಿದ್ದಾರೆ. ಹಾಗಾಗಿ ಮಾತು ಮತ್ತು ಬರಹದ ನುಡುವಣ ಅಂತರಗಳನ್ನು ಯಾಕೆ ಇಲ್ಲವಾಗಿಸಬೇಕು ಎಂಬಿವರ ಚಿಂತನೆಗಳು ಇಲ್ಲಿ ಮಹತ್ವವನ್ನು ಪಡೆಯುತ್ತವೆ. 
ಯಾಕೆ ಕಲಿಕೆಯ ವಲಯದಿಂದ ಕೆಲವೇ ಸಮೂಹಗಳ ಮಕ್ಕಳು ಹೊರಗುಳಿಯುತ್ತಾರೆ ಎಂಬ ಅನುಮಾನಕ್ಕೂ ಭಟ್ಟರ ಚಿಂತನೆಗಳಲ್ಲಿ ಸುಳಿವುಗಳು ಸಿಗುತ್ತವೆ. ಅಂದರೆ ಯಾವುದೇ ಸಾಮಾಜಿಕ ಮುಂಚಲನೆಗೂ ಮತ್ತು ಆಯಾ ಸಮೂಹಗಳು ನೆಚ್ಚಿಕೊಂಡಿರುವ ಒಳನುಡಿಗಳಿಗೂ ನೇರವಾದ ನಂಟಿರುತ್ತದೆ. ಒಳನುಡಿಯ ಸ್ವರೂಪ, ಕನ್ನಡ ನುಡಿಯ ಸ್ವರೂಪ ಮತ್ತು ಕಲಿಕೆಯ ಸಮಸ್ಯೆಗಳ ನಡುವಿನ ತೊಡಕುಗಳೆಂತಹವು, ಈ ತೊಡಕುಗಳೇ ತಳಸಮುದಾಯಗಳ ಮಕ್ಕಳ ನುಡಿ ಕಲಿಕೆಯ ಮೇಲೆ ಹೇಗೆಲ್ಲ ಸವಾರಿ ನಡೆಸುತ್ತಿವೆ ಅನ್ನುವ ಇಕ್ಕಟ್ಟುಗಳನ್ನು ಇವರ ನುಡಿಯರಿಮೆಯ ಚಿಂತನೆಗಳು ತೋರಿಸುತ್ತವೆ. ಯಾವ ನುಡಿಯನ್ನು ಕಲಿಯಬೇಕು ಮತ್ತು ಯಾವ ನುಡಿಯ ಮೂಲಕ ಕಲಿಯಬೇಕು ಎಂಬ ನಿಲುವಿಗೆ ಈ ಚಿಂತನೆಗಳಲ್ಲಿ ದಾರಿಗಳಿವೆ. ಏಕೆಂದರೆ ನುಡಿಯೆಂಬ ವಿದ್ಯಮಾನವು ವ್ಯಕ್ತಿ, ಸಮೂಹ ಮತ್ತು ಪರಂಪರೆ ಎಂಬ ಮೂರು ಬಗೆಯಲ್ಲಿ ಸಂಪನ್ಮೂಲವಾಗಿ ನೆಲೆಗೊಂಡಿರುತ್ತದೆ. ಈ ಮೂರು ನುಡಿ ಬಗೆಗಳ ನಡುವೆ ಸಮಾನ ಚಹರೆಗಳನ್ನು ರೂಪಿಸಿಕೊಳ್ಳುವ ಮೂಲಕ ನುಡಿಯೊಳಗೆಯೇ ಹುದಿಗಿರುವ ಸಾಮಾಜಿಕ ಅಸಮಾನತೆಯ ನೆಲೆಗಳನ್ನು ಹೋಗಲಾಡಿಸಲು ಅನುವಾಗುತ್ತದೆ. ಒಳನುಡಿಗಳ ನಡುವಣ ವ್ಯತ್ಯಾಸಗಳನ್ನು ಅಳಿಸಿ ಇಲ್ಲವೇ ಒರಸಿ ಹಾಕುವ ಹುನ್ನಾರಕ್ಕೆ ಕಡಿವಾಣ ಹಾಕಲೂ ಈ ಚಿಂತನೆಗಳಿಂದ ಬೆಂಬಲ ಸಿಗುತ್ತದೆ. ನುಡಿ ವ್ಯತ್ಯಾಸಗಳನ್ನು ಕುರಿತಾಗಿ ತಾಳಿಕೆಯ ಗುಣವನ್ನು ಬೆಳೆಸಿಕೊಳ್ಳುವ ದಾರಿಗಳು ಕೂಡ ಈ ಮೂಲಕ ನಮಗೆ ದೊರೆಯುತ್ತವೆ. 
ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಶು ನುಡಿಗಳ ನಡುವಣ ನಂಟು ಯಾವ ಬಗೆಯದು? ಆ ನಂಟಸ್ತಿಕೆಯ ಮರುಹೊಂದಾಣಿಕೆಯ ಸ್ವರೂಪ ಹೇಗಿರಬೇಕು? ಕನ್ನಡನುಡಿ ಓದನ್ನು ಬೆಳಸುವವರಿಗೆ ಕನ್ನಡ ನುಡಿ ರಚನೆಯೇ ಯಾಕೆ ಮಹತ್ವದ ಸಂಗತಿಯಾಗುತ್ತದೆ? ಎಂಬಿತ್ಯಾದಿ ಕೇಳ್ವಿಗಳಿಗೆ ತಕ್ಕುದಾದ ಬದಲುಗಳು ಶಂಕರಭಟ್ಟ ಅವರ ಚಿಂತನೆಗಳಲ್ಲಿ ಸಿಗುತ್ತವೆ. ಕನ್ನಡ ಪರವಾಗಿ ಮತ್ತು ಕನ್ನಡದ್ದೇ ತಿಳಿವಿನ ಮಾದರಿಗಳನ್ನು ರೂಪಿಸುವವರಿಗೆ, ಸಂಸ್ಕೃತ, ಇಂಗ್ಲಿಶು ಇಲ್ಲವೇ ಕನ್ನಡದ ವಿರೋಧಿಗಳೆಂದು ಹಣೆಪಟ್ಟಿಯನ್ನು ಲಗತ್ತಿಸುವುದು ಎಷ್ಟರಮಟ್ಟಿಗೆ ತಕ್ಕುದಾದ ನಿಲುವು? ಇಲ್ಲಿ ಶಂಕರಭಟ್ಟರು ಯಾವುದೇ ನುಡಿಯನ್ನು ವಿರೋಧಿಸುವ ಮತ್ತು ಕಡೆಗಣಿಸುವ ರಾಜಕಾರಣವನ್ನು ಮಾಡುತ್ತಿಲ್ಲ. ಬದಲಾಗಿ ನಮ್ಮ ಸಮೂಹಗಳಿಗೆ ಈ ಹೊತ್ತು ಜರೂರು ಅನ್ನಿಸಿರುವ ತಿಳಿವಿನ ದಾರಿಗಳನ್ನು ಹುಡುಕುತ್ತಿರುವರು. ಹಾಗಾಗಿ ಕನ್ನಡ ನುಡಿಯರಿಮೆ ಇಲ್ಲವೇ ಕನ್ನಡ ಭಾಷಾಶಾಸ್ತ್ರವೆಂದರೆ, ಅದು ಕೇವಲ ಕನ್ನಡದಲ್ಲಿ ನುಡಿಗಳ ಕುರಿತಾಗಿ ತಿಳುವಳಿಕೆಯನ್ನು ಬೆಳೆಸುವ ಕ್ರಮವಲ್ಲ. ಬದಲಾಗಿ ಕನ್ನಡದ್ದೇ ಮತ್ತು ಕನ್ನಡವನ್ನೇ ಕುರಿತಾದ ಅರಿಮೆ ಇಲ್ಲವೇ ಶಾಸ್ತ್ರವನ್ನು ರೂಪಿಸುವ ಬಗೆಯಾಗಿರುತ್ತದೆ. ಕನ್ನಡ ನುಡಿಯರಿಮೆಯ ಸರಿಯಾದ ಮತ್ತು ಹೊಸದಾದ ಚೌಕಟ್ಟನ್ನು ಕಟ್ಟಿಕೊಳ್ಳುವ ದಾರಿಯಾಗಿ ಡಿ.ಎನ್. ಶಂಕರಭಟ್ಟ ಅವರು ನಮ್ಮ ನುಡಿ ಸಮುದಾಯಕ್ಕೆ ಈಗ ಸಿಕ್ಕಿರುತ್ತಾರೆ. ಕನ್ನಡ ನುಡಿಯ ಜಾಯಮಾನಕ್ಕೆ ಒಗ್ಗುವ ಹಾಗೂ ಕನ್ನಡದ್ದೇ ಅರಿವಿನ ವಿನ್ಯಾಸಗಳನ್ನು ನೆಲೆಗೊಳಿಸುವ ಹೊಣೆಗಾರಿಕೆಯನ್ನು ಇವರು ಅತ್ಯಂತ ಇರಾದೆಯಿಂದ ನೆರವೇರಿಸುತ್ತಿದ್ದಾರೆ.  

*ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

Wednesday 15 July 2020

ಯಮುನಾ ಗಾಂವ್ಕರ್ ಅವರ ಅಬ್ಬೆ ಮಡಿಲು.-ರಂಜಾನ್ ದರ್ಗಾ

ಹಿರಿಯ ಪತ್ರಕರ್ತರಾದ ರಂಜಾನ್ ದರ್ಗಾ ರವರು ಯಮುನಾ ಗಾಂವ್ಕರ್ ರವರ ಕವನ ಸಂಕಲನ ಕುರಿತು ತಮ್ಮ ಮುನ್ನುಡಿಯಲ್ಲಿ ಹೇಳಿದ್ದು 
"ಹನ್ನೆರಡನೆಯ ಶತಮಾನದ ಶರಣ ಚೆನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ‘ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು’ ಎಂದು ತಿಳಿಸಿದ್ದಾರೆ. ಕವಿಗಳು ಕರುಣಾರಸವನ್ನೇ ಹರಿಸುತ್ತಾರೆ. ಆದರೆ ದುಃಖಾರ್ಥರ ಬದುಕನ್ನು ಬದಲಿಸುವಲ್ಲಿ ಅವರು ತಮ್ಮ ಜ್ಞಾನವನ್ನು ಕ್ರಿಯೆಗೆ ಇಳಿಸುವುದಿಲ್ಲ ಎಂದು ಸೂಚಿಸಿದ್ದಾರೆ. ಆದರೆ ಇಪ್ಪತ್ತೊಂದನೆಯ ಶತಮಾನದ ಯಮುನಾರಂಥವರು ಇದಕ್ಕೆ ಅಪವಾದವಾಗಿದ್ದಾರೆ. 
ತಮ್ಮ ಕಾವ್ಯಶಕ್ತಿಯನ್ನು ಜನಶಕ್ತಿಯಲ್ಲಿ ಒಂದಾಗಿಸುತ್ತ ಹೋರಾಟದ ಹಾದಿಯಲ್ಲಿ ಮುನ್ನಡೆದಿದ್ದಾರೆ. ‘ಒಳಗಣ್ಣ ಹೊರದಾರಿ ತೋರಿಸಿದೆ ಈ ಕವನ’ ಎಂದು ಹೇಳುವ ಮೂಲಕ ಯಮುನಾ ಕಾವ್ಯದ ಮೂಲ ಉದ್ದೇಶವನ್ನು ಸೂಚಿಸುತ್ತಾಳೆ.
 ಖುದ್ದು ಕುದಿದು ಬರೆಯುವೆ.
ಒಂದು ದಿನ 
ಬರುವೆ
ನಿನ್ನೊಳಗಿನ ಜ್ವಾಲೆ ಉದ್ದೀಪಿಸಲು
ಅಲ್ಲಿಯ ತನಕ ಆರಬೇಡ.
                     -ಆರಬೇಡ
 ಕೆಚ್ಚನ್ನು ತುಂಬಿಕೊಂಡಿರುವ ಈ ಕಾಮ್ರೇಡ್ ಕವಯಿತ್ರಿಗೆ ಶೋಷಣೆಯ ವಿರುದ್ಧದ ಹೋರಾಟವೇ ಒಂದು ಮಹಾಕಾವ್ಯವಾಗಿ ಕಾಣುತ್ತಿದೆ. ಅನ್ಯಾಯ, ಅಪಮಾನ, ಶೋಷಣೆ, ಕ್ರೌರ್ಯ ಮತ್ತು ದುಡಿಯುವ ವರ್ಗದ ಜೀವಹಿಂಡುವ ಅವಸ್ಥೆಯನ್ನು ಬುಡಮೇಲು ಮಾಡಬಯಸುವ ಸಂಗಾತಿ ಯಮುನಾ ಮಾನವೀಯ ಸ್ಪಂದನದ ಜ್ವಾಲೆಯನ್ನು ನಿರಂತರವಾಗಿ ಉದ್ದೀಪನಗೊಳಿಸುವ ಕ್ರಿಯೆಯಲ್ಲಿ ಮಗ್ನಳಾಗಿದ್ದಾಳೆ.
 ಕಮ್ಯೂನಿಜಂ ಶಕ್ತಿಯೆ ಅಂಥದ್ದು. ಅದು ಅನ್ಯಾಯವನ್ನು ಎದುರಿಸುವ ಧೈರ್ಯ ತುಂಬುತ್ತದೆ. ಆತ್ಮಗೌರವದ ಅರಿವು ಮೂಡಿಸುತ್ತದೆ. ಪ್ರಶ್ನಿಸುವ ಎದೆಗಾರಿಕೆಯನ್ನು ಹೆಚ್ಚಿಸುತ್ತದೆ. ಸಮೂಹ ಪ್ರಜ್ಞೆಯ ಮಹತ್ವವನ್ನು ಸಾರುತ್ತದೆ. ಇಂಥ ಎಲ್ಲ ಗುಣಗಳನ್ನು ಯಮುನೆಯ ಕಾವ್ಯನದಿ ಒಳಗೊಂಡಿದೆ.
 ಜಗತ್ತಿನ ನೋವಿಗೆ ಸ್ಪಂದಿಸಿ, ಹೋರಾಡಿ ಸಾಮ್ರಾಜ್ಯಶಾಹಿಗಳ ಕ್ರೌರ್ಯದ ವಿರುದ್ಧ ಗೆಲವು ಸಾಧಿಸಿದ ಸಂಗಾತಿಗಳ ಹೋರಾಟದ ಬದುಕಿನಿಂದ ಈಕೆ ಸ್ಫೂರ್ತಿಗೊಂಡಿದ್ದಾಳೆ. ಇಂಥ ವಿಶ್ವಚೈತನ್ಯವನ್ನು ಹೃದಯದೊಳಗೆ ತುಂಬಿಕೊಂಡು ಅದನ್ನೇ ಕಾವ್ಯ ಮತ್ತು ಹೋರಾಟದ ಮೂಲಕ ತನ್ನ ಗ್ರಾಮಾಂತರದ ಜನಸಮುದಾಯಕ್ಕೆ ಹಂಚುತ್ತಿದ್ದಾಳೆ. ಅವಳು ಪಾದರಸದಂತೆ ಚಲನಶೀಲ ಗುಣವುಳ್ಳವಳು. ಜೀವದ್ರವ್ಯದಿಂದ ಕೂಡಿ ಕ್ರಿಯಾಶೀಲತೆ ಅವಳದು. ತನ್ನ ಜೀವನ ಸಂಗಾತಿ ವಿಠ್ಠಲನಿಗೆ ಸರಿಸಾಟಿಯಾಗಿ ಹೋರಾಟದ ಹಾದಿ ತುಳಿದಿದ್ದಾಳೆ. ಅವಳಿಗೆ ಹೋರಾಟ ಎಂಬುದು ತಾಯ್ತನದ ಪ್ರತೀಕವಾಗಿದೆ. ಈ ಪರಿಕಲ್ಪನೆ ಅವಳು ಕನ್ನಡ ಕಾವ್ಯಲೋಕಕ್ಕೆ ಕೊಟ್ಟ ಕಾಣಿಕೆ ಎಂದು ಹೇಳುವೆ.
 ತಾಯ್ತನದ ಸಮುದ್ರವನ್ನೇ ಹೃದಯದಲಿ
ಇಳಿಬಿಟ್ಟವ ನೀನು
ಮಗ್ಗುಲ ಮುಳ್ಳು ಬಡವರ ಬರಿಗಾಲಿಗೆರಗಲು
ಬಿಡದವ ನೀನು.
                              _ಫಿಡೆಲ್ ಕ್ಯಾಸ್ಟ್ರೋ
 ಅಂತಃಕರಣವು ಕ್ರಾಂತಿಯ ಜೀವಾಳವಾಗಿದೆ. ಜ್ಞಾನಿಗಳು, ವಿಜ್ಞಾನಿಗಳು, ಕಲಾವಿದರು, ಕುಲೀನರು ಎಂದು ಕರೆಯಿಸಿಕೊಳ್ಳುವವರು ಮತ್ತು ಆಗರ್ಭ ಶ್ರೀಮಂತರು ಕೂಡ ತಮ್ಮೊಳಗೆ ಕಾಡುವ ಅಂತಃಕರಣದಿಂದಾಗಿಯೆ ಕಮ್ಯೂನಿಜಂನ ತೆಕ್ಕೆಗೆ ಬಂದಿದ್ದಾರೆ. ಫಿಡೆಲ್ ಕ್ಯಾಸ್ಟ್ರೋ, ಚೇ ಗುವೆರಾ, ಹೊ ಚಿ ಮಿನ್, ಭಗತ್ ಸಿಂಗ್, ಮಾಕ್ರ್ಸ್, ಎಂಗೆಲ್ಸ್, ಲೆನಿನ್, ರೋಸಾó ಲಗ್ಸಂಬರ್ಗ್, ಪಾಬ್ಲೊ ನೆರೂದಾ ನಂಬೂದಿರಿಪಾಡ್, ಭೂಪೇಶ ಗುಪ್ತಾ, ಕಯ್ಯೂರಿನ ವೀರರು ಮುಂತಾದವರ ಹೃದಯಗಳಲ್ಲಿ ತಾಯ್ತನದ ಸಮುದ್ರವಿದ್ದದ್ದರಿಂದಲೇ ಹೊಸ ಜಗತ್ತಿನ ಉದಯದತ್ತ ಮಾನವಕುಲವನ್ನು ಸಾಗಿಸಲು ಅವರಿಂದ ಸಾಧ್ಯವಾಗಿದೆ.
 ಬಂಡವಾಳಶಾಹಿಗಳು ಜಗತ್ತನ್ನು ವಸ್ತುಮೋಹಿಗಳನ್ನಾಗಿಸುವಲ್ಲಿ ತಲ್ಲೀನರಾಗಿದ್ದಾರೆ. ಕೊಳ್ಳುಬಾಕ ಸಂಸ್ಕøತಿಯನ್ನು ಹಬ್ಬಿಸುವುದರ ಮೂಲಕ ಅವರು ಜಗತ್ತಿನ ಎಲ್ಲ ಸಂಸ್ಕøತಿಗಳ ಮೇಲೆ ವಿಜಯವನ್ನು ಸಾಧಿಸುತ್ತಿದ್ದಾರೆ. ಆ ಮೂಲಕ ವಸ್ತುಗಳ ಬೆಲೆಯ ಮುಂದೆ ಮನುಷ್ಯನ ಬೆಲೆ ನಿರರ್ಥಕವಾದುದು ಎಂಬುದನ್ನು ಸಾಧಿಸುವ ನಿಟ್ಟಿನಲ್ಲಿ ಸತತವಾಗಿ ಕ್ರಿಯಾಶೀಲವಾಗಿದ್ದಾರೆ. ಇಂಥ ವಿಷಮಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯಮುನಾಳ ಕಾವ್ಯ ತಲ್ಲೀನವಾಗಿದೆ.
 ಫಳಫಳ ಹೊಳೆಯುವ ಚತುಷ್ಪಥದಲಿ
ಬೊಕ್ಕೆಗಳೆದ್ದು ಸೋತ ಬರಿಗಾಲುಗಳು
ನನ್ನವರದೇ... ನನ್ನವರದೇ.
                         -ನನ್ನವರದೇ ನನ್ನವರದೇ
 ದೇಶದಲ್ಲಿ ಅಭಿವೃದ್ಧಿಯಾಗಿದೆ ಎಂಬುದನ್ನು ಚತುಷ್ಪಥ ಹೇಳುತ್ತಿದೆ. ಆದರೆ ಸರ್ವತೋಮುಖ ಅಭಿವೃದ್ಧಿಯಾಗಿಲ್ಲ ಎಂಬುದನ್ನು ಬರಿಗಾಲುಗಳು ಸಾರುತ್ತಿವೆ. ಈ ರೀತಿಯಲ್ಲಿ ‘ಸೋತ ಬರಿಗಾಲುಗಳು ನನ್ನವರದೇ’ ಎನ್ನುವುದು ಬದುಕಿನಲ್ಲಿ ವಿಶಿಷ್ಟ ಅರ್ಥವನ್ನು ಸೃಷ್ಟಿಸುತ್ತದೆ. ಜಾತಿ, ಮತ, ಪಂಥ, ಧರ್ಮ, ದೇಶ, ಭಾಷೆಯನ್ನು ಮೀರಿದ ಸಂಬಂಧವನ್ನು ಇದು ಸೃಷ್ಟಿಸುತ್ತದೆ. ವಿಶ್ವಮಾನವ ಪ್ರಜ್ಞೆಯನ್ನು ಮೂಡಿಸುತ್ತದೆ.
 ಇಂದು ನಮ್ಮ ದೇಶದಲ್ಲಿ ಬಂಡವಾಳಶಾಹಿಗಳು ಬಹುರಾಷ್ಟ್ರೀಯ ಬಂಡವಾಳಶಾಹಿಗಳಾಗಿ ಬೆಳೆಯುವುದನ್ನೇ ಅಭಿವೃದ್ಧಿ ಎಂದು ಸಾಧಿಸಲಾಗುತ್ತಿದೆ. ಹೀಗೆ ಸಾಮ್ರಾಜ್ಯಶಾಹಿ ವ್ಯವಸ್ಥೆ ನಮ್ಮ ದೇಶದಲ್ಲಿ ಕಾಲಿಡುತ್ತಿದೆ. ಅದಕ್ಕಾಗಿ ಎಂಥ ಹಿಂಸಾಯಂತ್ರವನ್ನು ಕೂಡ ಬಳಸಲು ಆಳುವ ವರ್ಗ ಹೇಸುತ್ತಿಲ್ಲ. ಎರಡನೇ ಮಹಾಯುದ್ಧಕ್ಕೆ ಮೊದಲು ಹಿಟ್ಲರ್ ಜರ್ಮನಿಯಲ್ಲಿ ಬಳಸಿದ ತಂತ್ರಗಳನ್ನೇ ಇಲ್ಲಿಯೂ ಬಳಸಲಾಗುತ್ತಿದೆ. ಜರ್ಮನಿಯಲ್ಲಿ ಹಿಟ್ಲರ್ ಬೆಳೆದದ್ದು ಅಲ್ಲಿನ ಯಹೂದಿ ಜನಾಂಗವನ್ನು ಮತ್ತು ಕಮ್ಯೂನಿಸ್ಟರನ್ನು ದ್ವೇಷಿಸುತ್ತ ಎಂಬುದು ಜಗತ್ತಿಗೇ ಗೊತ್ತಿದೆ. ಜರ್ಮನಿಯಲ್ಲಿ ಜನಾಂಗವಾದವನ್ನು ಮುಂದೆ ಮಾಡಿ ದ್ವೇಷ ಸಂಸ್ಕøತಿಯ ಬೆಳೆಸಲಾಯಿತು. ಭಾರತದಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷಸಂಸ್ಕøತಿ ಹಬ್ಬುತ್ತಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಕಮ್ಯೂನಿಸ್ಟರು ಈ ದ್ವೇಷಸಂಸ್ಕøತಿಗೆ ಗುರಿಯಾಗುವ ಎಲ್ಲ ಲಕ್ಷಣಗಳು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಾತಾವರಣದಲ್ಲಿ ಹೊರಹೊಮ್ಮುತ್ತಿವೆ. 
 ಆಗಲೇ ಹೆಗಲ ಮೇಲೆ ಹೆಣ ಬಂದು ಕೂತಿದೆ
ದ್ವೇಷದ ಗಡಿಯೊಳಗೆ ಮನುಷ್ಯನ ಹುಡುಕುತ್ತ.....
                          -ಕಾಲ - ಸಮಕಾಲೀನ
 ಸಾವಿನ ವಾರಸುದಾರರು ಮಾನವತೆಯ ಬೇಟೆಯಲ್ಲಿ ತೊಡಗಿದ್ದಾರೆ. ಲಫಂಗರು ಹಾಡಹಗಲೇ ರಸ್ತೆಯ ಮೇಲೆ, ಪೊಲೀಸರ ಮುಂದೆಯೆ, ಗೋರಕ್ಷಕರ ಸೋಗಿನಲ್ಲಿ ಅಮಾಯಕ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಅವರ ಕ್ರೂರ ಕೃತ್ಯಕ್ಕೆ ಅನೇಕರು ಜೀವ ಕಳೆದುಕೊಂಡಿದ್ದಾರೆ. ವ್ಯವಸ್ಥೆಯು ತಳಸ್ತರದಲ್ಲಿ ಕ್ರೌರ್ಯವನ್ನು ಮತ್ತು ಮೇಲ್ ಸ್ತರದಲ್ಲಿ ಧರ್ಮದ ಹೆಸರಿನಲ್ಲಿ ಸುಂದರ ಭವಿಷ್ಯದ ಭ್ರಮೆಗಳನ್ನು ಸೃಷ್ಟಿಸುತ್ತಿದೆ. ಕ್ರೌರ್ಯವೇ ಧರ್ಮವಾದಾಗ ಕೋಮುವಾದಿಗಳು ಮತ್ತು ಉಗ್ರಗಾಮಿಗಳು ವಿಜೃಂಭಿಸುತ್ತಾರೆ. 
ಅದು ಬಿದ್ದಿದ್ದಲ್ಲ ಬೀಳಿಸಿದ್ದು
ಸದ್ದು ಕೇಳದ ಕಿವುಡುತನದಲ್ಲಿ...
ಅದು ನಿಂತೇ ಇತ್ತು ದೃಢವಾಗಿ
ಸುಂದರವಿತ್ತು ಸೌಹಾರ್ದ ನೋಟ
ಪಕ್ಷಿ ಸಾಕ್ಷಿಗಳೇ ಚಿಲಿಪಿಲಿ
ಉಲಿದು ತಂಗಿ ಗೂಡು ಕಟ್ಟಿ
ಮರಿ ಸಂಸಾರ ಹೂಡಿ ಮುಂದೆ ಹಾರುತ್ತಿದ್ದವು
ಆದರೀಗ ಅದಿಲ್ಲ.

ಕೆಡವಿದಲ್ಲಿ ಗಾಯವಿದೆ
ಕಟ್ಟಡ ಗೋಡೆ ಮೇಲೇಳುತ್ತಿದೆ
ಹಕ್ಕಿ ಕೂರದ ಹಾಗೆ.
                        -ಗರಿ ಮುರಿದು ಬಿದ್ದಲ್ಲೆಲ್ಲ
 ಈ ತೆರನಾದ ಅಭಿವೃದ್ಧಿಯನ್ನು ನಾವು ಕಾಣುತ್ತಿದ್ದೇವೆ. ನಮ್ಮ ಸಹಜ ಬದುಕು ಕಳೆದುಹೋಗುತ್ತಿದೆ. ಎಲ್ಲೆಲ್ಲೂ ಕೃತ್ರಿಮತೆ ಎದ್ದು ಕಾಣುತ್ತಿದೆ. ಶಾಂತಿ ಮತ್ತು ಸೌಹಾರ್ದದ ಬದುಕಿಗೆ ಬೆಂಕಿ ಇಟ್ಟು ತಮ್ಮ ಸುಲಿಗೆ ಸಾಮ್ರಾಜ್ಯದ ಕನಸುಗಳನ್ನು ಸಾಕಾರಗೊಳಿಸುವಂಥ ನವಭಾರತದ ನಿರ್ಮಾಣ ಮಾಡುವಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ತಲ್ಲೀನವಾಗಿವೆ. ಇಂಥ ಭಯಾನಕ ಸ್ಥಿತಿಯನ್ನು ಮರ, ಪಕ್ಷಿ ಮತ್ತು ಗೂಡಿನಿಂದ ಕೂಡಿದ ರೂಪಕದೊಂದಿಗೆ ಕವಯಿತ್ರಿ ತಣ್ಣನೆಯ ಶಬ್ದಗಳಲ್ಲಿ ವರ್ಣಿಸುತ್ತ ಓದುಗರ ಹೃದಯದಲ್ಲಿ ತಾಪದ ಜ್ವಾಲೆಗಳನ್ನು ಸೃಷ್ಟಿಸುತ್ತಾಳೆ. ಹಕ್ಕಿಗಳು ಕೂರದ ಹಾಗೆ ಕಟ್ಟಡದ ಗೋಡೆಗಳು ಮೇಲೇಳುವ ಸ್ಥಿತಿ ಭಾರತಕ್ಕೆ ಬಂದೊದಗಿದೆ. ಜನ ಜಾಗೃತವಾಗುವ ವರೆಗೆ ಎಲ್ಲವನ್ನೂ ಕಳೆದುಕೊಳ್ಳುತ್ತಲೇ ಇರುತ್ತಾರೆ. ಹೋರಾಟ ತೀವ್ರವಾಗುವ ವರೆಗೂ ಇದು ಹೀಗೇ ಮುಂದುವರಿಯುತ್ತದೆ.
 ಮೈ ಮನಕೆ
ಅಂಟಿದೆ ಅನಾದಿಯ ಸುಟ್ಟ ಗಾಯದ ಕಲೆ
ಮುಚ್ಚಿಟ್ಟ ಅಬ್ಬೆಯ ವಸ್ತ್ರಕ್ಕೆ ಮತ್ತೆ ತಗುಲಿದೆ...
ಬೆಂಕಿ
ಗೀರುವ ಕಡ್ಡಿ ಮಾತ್ರ ಸುಟ್ಟು ಹೋಗುತ್ತಿಲ್ಲ.
ಮತ್ತೆ ಮತ್ತೆ ಹಸಿನಾಥ
ಅರೆ ಕೊಳೆತ ಹೆಣಗಳವು.
ಮಠದ ವಠಾರಗಳಲ್ಲಿ
ಮಸೀದಿಯ ಸಂಧಿಗಳಲ್ಲಿ
ಇಗರ್ಜಿಯ ವಾಡೆಗಳಲ್ಲಿ
ಸೌಧದ ಪ್ರಾಂಗಣದಲ್ಲಿ
ಪಿಶಾಚಗ್ರಸ್ಥ ಸ್ಮಾರಕಗಳಲ್ಲಿ.
                    -ಬೆಂಕಿಯನ್ನೇ ದೀಪವಾಗಿಸುವ

 ಎಲ್ಲೆಡೆ ಕ್ರೌರ್ಯ ಮತ್ತು ಅಶಾಂತಿಯೆ ಎದ್ದು ಕಾಣುತ್ತಿದೆ. ದೇಶಕ್ಕೆ ಬೆಂಕಿ ಹಚ್ಚಲು ಗೀರಿದ ಕಡ್ಡಿ ಮಾತ್ರ ಸುಟ್ಟುಹೋಗುತ್ತಿಲ್ಲ. ಆದರೆ ಅದಕ್ಕೆ ತಾಗುವುದೆಲ್ಲವೂ ಸುಟ್ಟು ಹೋಗುತ್ತಿವೆ. ಮಠ, ಮಂದಿರ, ಮಸೀದಿ, ಚರ್ಚುಗಳು ಅಸಹಾಯಕರಂತೆ ಮೌನವಾಗಿವೆ. ಅವುಗಳನ್ನು ನಂಬಿದವರು ಹೆಣವಾಗುವಂಥ ವಿಕೃತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಫ್ಯಾಸಿಸಂ ತಲೆ ಎತ್ತುವ ಸಂದರ್ಭದಲ್ಲಿನ ಲಕ್ಷಣಗಳಿವು. 
 ಸ್ಥಿತಪ್ರಜ್ಞ ಗೀತೆಯ ಬೋಧೆ
ನನ್ನೊಳಗಿನ ಕ್ರೌರ್ಯ
                  -ಕ್ರೌರ್ಯ
 ಬೀದಿಯ ಮೇಲೆ ರಕ್ತ ಹರಿಯುವಾಗ ಸ್ಥಿತಪ್ರಜ್ಞನಾಗಿರುವುದು ಕ್ರೌರ್ಯ ಎಂಬುದನ್ನು ಸಂವೇದಾನಶೀಲ ಕಾಮ್ರೇಡ್ ಯಮುನಾ ಬಹಳ ಮಾರ್ಮಿಕವಾಗಿ ನುಡಿದಿದ್ದಾಳೆ. ಕಳೆದ ಐದು ಸಾವಿರ ವರ್ಷಗಳ ಇತಿಹಾಸದಲ್ಲಿ ಈ ಸ್ಥಿತಪ್ರಜ್ಞೆಯ ಟೆಕ್ನಿಕ್ ಬಳಸಿಯೆ ದೇಶದ ಪ್ರತಿಶತ 90 ರಷ್ಟು ಜನರ ಸುಲಿಗೆಯನ್ನು ಅವ್ಯಾಹತವಾಗಿ ಮಾಡುತ್ತ ಬರಲಾಗುತ್ತಿದೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಪಟ್ಟಭದ್ರರು ಜನಸಮುದಾಯವನ್ನು ಮಾನಸಿಕ ಗುಲಾಮಗಿರಿಗೆ ತಳ್ಳುತ್ತಲೇ ಇದ್ದಾರೆ. ಇಂದು ವಿದ್ಯನ್ಮಾನ ಮಾಧ್ಯಮಗಳ ಮೂಲಕ ಈ ದಂಧೆ ಇನ್ನೂ ವಿಕಾರ ಸ್ವರೂಪದಲ್ಲಿ ಪಸರಿಸುತ್ತಿದೆ.
 ಕವನ ಬರೆಯುವ ಸಮಯವಲ್ಲವಿದು
ಹೊರಗೆ ಗದ್ದಲವಿದೆ
ಜಗಳವಿದೆ; ರಕ್ತಪಾತವಿದೆ
ಮತ್ತೆ ಮನದೊಳಗೆ 
ಜಂಝಾವಾತವಿದೆ.
ಇದು ಕವನ ಬರೆಯುವ ಸ್ಥಳವೂ ಅಲ್ಲ
ಇಲ್ಲಿ ಈಗಷ್ಟೇ ಅತ್ಯಾಚಾರ ಆಗಿದೆ
ದೇವಗುಡಿಯ ಹಿಂಭಾಗದ ಗೋಡೆಗೊರಗಿದೆ
ಆ ಹೆಣ.
ಬೆಳಗಿನ ಅಜಾó ಆಗುವಾಗಲೇ
ಪ್ರಾಣಿಯ ತಲೆ 
ಮಸೀದಿಯ ಮೆಟ್ಟಿಲ ಮೇಲೆ ಅಂಗಾತ ಬಿದ್ದಿದೆ.
ಇಗರ್ಜಿಯ ಕ್ರಾಸಿಗೆ ಯಾರೋ ರಕ್ತ ಲೇಪಿಸಿದ್ದಾರೆ.
ಇಲ್ಲಿ ಕವನ ಬರೆಯಲು ಸ್ಥಳವಿಲ್ಲ.
                                -ಸಮಯವಲ್ಲವಿದು
 ಹೀಗೆ ನಮ್ಮ ದೈನಂದಿನ ಬದುಕಿನ ದುರಂತವನ್ನು ಪಾಬ್ಲೊ ನೆರೂದಾ ಹಾಗೆ ಕಣ್ಣಿಗೆ ಕಟ್ಟುವಂತೆ ಶಬ್ದಗಳಲ್ಲಿ ಹಿಡಿದಿಡುತ್ತಾಳೆ. ವಾಸ್ತವದ ಕುರಿತು ನಮ್ಮನ್ನು ಎಚ್ಚರಿಸುತ್ತಾಳೆ. ಇದು ಯಾವುದರ ಮುನ್ಸೂಚನೆ ಎಂಬುದನ್ನು ಸೂಚಿಸುತ್ತಾಳೆ. ಮತ್ತೆ ಮತ್ತೆ ನಮ್ಮ ಮನದಲ್ಲಿ ಹಿಟ್ಲರನ ಜರ್ಮನಿ ಸುಳಿಯುವಂತೆ ಮಾಡುತ್ತಾಳೆ.  
 ಬೀದಿಗೆ ಬಂದು ಮಾತನಾಡಬೇಕಿದೆ.
ಕಲ್ಲು ಹೊಡೆಯ ಬಹುದು, ಬೂಟು ತೂರಬಹುದು
ದೊಣ್ಣೆರಾಶಿ ಬೀಳಬಹುದು ನಡುಬೀದಿಯಲ್ಲಿ
ಆದರೂ ಮಾತಾಡಬೇಕಿದೆ.

ಹಾಡೇ ಹಗಲು ಹೆಣ ಬೀಳಬಹುದು
ಕತ್ತಿ ಚಾಕು ಕೆಲಸ ತ್ರಿಶೂಲ ಮಾಡಬಹುದು
ನಾಡಿ ಬದಲು ಲಾಡಿ ಬಿಚ್ಚಿ ನೋಡಬಹುದು
ಆದರೂ ಮಾತಾಡಬೇಕಿದೆ...

ಕೊಲೆಗಾರನ ಪತ್ತೆಯಾಗುವ ತನಕ
ಶಿಕ್ಷೆಯಾಗುವ ತನಕ
ಮತ್ತೆ ಮತ್ತೆ ಮಾತಾಡಬೇಕಿದೆ
ಮುರುಟಿದ ಕನಸನ್ನು
ಮರಗೆಟ್ಟ ಮನಸನ್ನು
ಕೂಡಿಸಬೇಕಿದೆ ತೇವದಿಂದ...
                        -ಮಾತಾಡಬೇಕಿದೆ
 ಕವಯಿತ್ರಿಯ ಅದಮ್ಯ ಶಕ್ತಿಯ ದ್ಯೋತಕವಾಗಿ ಈ ಕವನ ಓದುಗರ ಮನದಾಳಕ್ಕಿಳಿಯುತ್ತದೆ. ಇಲ್ಲಿ ಮಾತೆಂಬುದು ಕ್ರಿಯೆಯ ಪ್ರತೀಕವಾಗಿದೆ. ಫ್ಯಾಸಿಸ್ಟರು ಮಾತನ್ನು ಅಪರಾಧ ಎಂದು ವ್ಯಾಖ್ಯಾನಿಸುತ್ತಾರೆ. ಅವರು ಹೇಳಿದಂತೆ ಕೇಳಿಕೊಂಡು ಮೌನವಾಗಿ ಬದುಕುವುದೊಂದೇ ಮಾರ್ಗವಾಗಿರುತ್ತದೆ. ಮಾತೇ ಕ್ರಾಂತಿಯಾದಾಗ ತ್ರಿಶೂಲಗಳು ಕತ್ತಿ ಚಾಕುಗಳ ಅವತಾರ ತಾಳುತ್ತವೆ. ಹಾಡೇ ಹಗಲು ಹೆಣ ಬೀಳುತ್ತವೆ. ಅದರೂ ಮಾತಾಡಲೇಬೇಕು ಎಂಬುದು ಈ ಕಾವ್ಯದ ಆಶಯವಾಗಿದೆ. ವಿಧ್ವಂಸಕ ಕೃತ್ಯಗಳ ಮಧ್ಯದಲ್ಲಿ ಕೂಡ ಕನಸುಗಳನ್ನು ಹೆಣೆಯುವಲ್ಲಿ ಮತ್ತು ಮನಸ್ಸುಗಳನ್ನು ಕೂಡಿಸುವಲ್ಲಿ ಕವಯಿತ್ರಿ ತಲ್ಲೀನಳಾಗಿದ್ದಾಳೆ.
 ಕಾವ್ಯವೇ ನೀ ಜೋಗಿಯಾಗಿ ಬಿಡು
ಹಂಗಿನ ಭಯ ಬಿಟ್ಟು
ಅಡಿಯಾಳ್ತನದ ಸಂಕಲೆ ಎಸೆದು
ಬೀದಿ ಬೀದಿಯಲಿ ಸಂಚರಿಸು.

ಹಸಿದವರ ರಟ್ಟೆಯಲಿ
ಮಕ್ಕಳ ಭಾವದಲಿ
ಹೆಂಗಳೆಯರ ಕಣ್ಣಗೂಡಿನಲಿ
ದರಿದ್ರರ ಗುಡಿಸಲಲಿ
ಶಕ್ತಿಯ ಕೊಡು.
               -ಜೋಗಿಯಾಗು

 ಬಂಡವಾಳಶಾಹಿ ವ್ಯವಸ್ಥೆ ಕವಿಗಳನ್ನೂ ಖರೀದಿಸುತ್ತದೆ. ಅಂತೆಯೆ ಜೋಗಿಯಾಗೆಂದು ಕಾವ್ಯಕ್ಕೆ ಯಮುನಾ ಕರೆ ಕೊಡುತ್ತಾಳೆ. ಹಂಗಿಲ್ಲದ ಕಾವ್ಯ ಮಾತ್ರ ಬೀದಿಯಲ್ಲಿ ಜನರ ಮಧ್ಯೆ ಬಂದು ನಿಲ್ಲುವ ಶಕ್ತಿಯನ್ನು ಹೊಂದಿರುತ್ತದೆ. ಜನಸಮುದಾಯಕ್ಕೆ ಹೋರಾಡುವ ಶಕ್ತಿಯನ್ನು ಕೊಡುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಚಿಲಿಯ ಕವಿ ಪಾಬ್ಲೊ ನೆರೂದಾ ನಿಗೂಢವಾಗಿ ನಿಧನರಾದಾಗ 50 ಸಾವಿರ ಜನ ಮೈದಾನದಲ್ಲಿ ಕೈ ಕೈ ಹಿಡಿದು ‘ಎಲ್ ಪ್ಯಾಬ್ಲೊ ವುನಿದೊ ಹಮಾಸ್ಸಿರಾ ವೆನ್ಸಿದೊ’ (ಒಗ್ಗಟ್ಟಾದ ಜನರನ್ನು ಸೋಲಿಸಲು ಸಾಧ್ಯವಿಲ್ಲ) ಎಂಬ ಒಂದು ಸಾಲಿನ ಹಾಡನ್ನು ಹಾಡುವುದರ ಮೂಲಕ ಒಗ್ಗಟ್ಟನ್ನು ಪ್ರದರ್ಶಿಸಿದರು. ಆ ಹಾಡು ವಿಶ್ವದ ಕ್ರಾಂತಿಕಾರಿಗಳಲ್ಲಿ ಹೊಸ ಚೈತನ್ಯ ಮೂಡಿಸಿತು.
 ಸಂಗಾತಿ... ಕವನ ಹುಟ್ಟುವಾಗ ಜೀವ ಹಿಂಡಲಿಲ್ಲ
ಅದು ನನ್ನ ಪ್ರೇಮಿಸಿತು ಶಬ್ದಾರ್ಥದಲ್ಲಿ
ನಿನಗಿಂತ ಮೊದಲೇ
ಬಯಲಲ್ಲಿ ಗುಹೆಯಲ್ಲಿ ಕತ್ತಲಲ್ಲಿ
ಕಾಡಿದ್ದು ನಿಜ
ಬೇಗ ಮನಸ್ಸು ಬಿಚ್ಚು ಎಂದು.
ಒಪ್ಪುವೆ
ಅದು ಬಳಿ ಸುಳಿವ ಸುಳಿವಿದ್ದಾಗ
ನಿನ್ನ ಆಲಿಂಗನದಲ್ಲಿ
ನನ್ನ ಬೆಸುಗೆ ಇರಲಿಲ್ಲ 
ಮೋಸವೂ ಇರಲಿಲ್ಲ ನಿನಗೆ
ನಾನೇ
ಕವನವಾಗಿದ್ದೆ.
                           -ನಿನ್ನ ಜೊತೆ ನನ್ನ ಕವನ
 ಈ ಕವಯಿತ್ರಿಯದು ಪ್ರಗಲ್ಭ ಪ್ರೇಮ. ವೈಯಕ್ತಿಕ ಬದುಕನ್ನೂ ಕಾವ್ಯವಾಗಿಸುವ ಪ್ರತಿಭೆ ಇದು. ಹೀಗೆ ಬಡತನ, ಬಾಲ್ಯ, ಹೆಣ್ತನ, ಪರಿಸರ ಮತ್ತು ಯುದ್ಧದ ಕ್ರೌರ್ಯದಿಂದಾಗಿ ಬಳಲಿದ ಜಪಾನ್, ಪ್ಯಾಲೆಸ್ಟೀನ್ ಮುಂತಾದ ದೇಶಗಳು ಅವಳ ಕಾವ್ಯದ ವಸ್ತುಗಳಾಗಿವೆ.
 ಅವಳು ಹೆಣ್ಣಾಗಿದ್ದಕ್ಕೆ 
ಮೌನಕ್ಕೂ ಮಾತಿನ ಶಕ್ತಿ.
               -ಅವಳು ಮಾತ್ರ
 ಪುರಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಮೌನದ ಮೂಲಕವೂ ಮಾತನಾಡ ಬಲ್ಲಳು ಎಂಬುದು ಆಕೆಯ ಅದಮ್ಯಶಕ್ತಿಗೆ ಹಿಡಿದ ಕನ್ನಡಿಯಾಗಿದೆ. ಕಾಲಕಸವಾಗಿ ಕಾಣುವಂಥ ಸಂದರ್ಭದಲ್ಲಿ ಕೂಡ ಗಾಂಭೀರ್ಯ ಮತ್ತು ಘನತೆಯೊಂದಿಗೆ ಹೆಣ್ಣು ತನ್ನತನವನ್ನು ಕಾಪಾಡಿಕೊಂಡು ಬಂದದ್ದು ಅವಳ ಇಂಥ ಶಕ್ತಿಯಿಂದಲೇ ಇರಬೇಕು.
 ಹೀಗೆ ಕಾವ್ಯದ ಮೂಲಕ ಹೋರಾಟಕ್ಕೆ ಸ್ಫೂರ್ತಿ ನೀಡುತ್ತ ಮತ್ತು ಹೋರಾಟದಲ್ಲೂ ಕಾವ್ಯವನ್ನು ಕಾಣುತ್ತ ಬದುಕನ್ನು ಸಹ್ಯಗೊಳಿಸುವಲ್ಲಿ ತಲ್ಲೀನಳಾಗಿರುವ ಕಾಮ್ರೇಡ್ ಯಮುನಾ ಗಾಂವ್ಕರ್ ಹೆಚ್ಚು ಹೆಚ್ಚು ಕಾವ್ಯಕೃಷಿ ಮಾಡುತ್ತ ಹೋರಾಟದ ಹಾದಿಯಲ್ಲಿ ಜನಸಾಗರ ಸೃಷ್ಟಿಯಾಗುವಂತೆ ಮಾಡಲಿ.
                                     ರಂಜಾನ್ ದರ್ಗಾ
01.05.2017

Saturday 4 July 2020

ಏಕವಚನದ ಬೆರಗು- ವಿಠ್ಠಲ ಭಂಡಾರಿ, ಕೆರೆಕೋಣ


  ಒಂದು ದಿನ ಹೀಗಾಯ್ತು. ನಮ್ಮ ಮನೆಹೊಳ್ಳಿಯ ಆರಾಮಖುರ್ಚಿಯಲ್ಲಿ ಕುಳಿತು ಅಣ್ಣ (ಆರ್.ವಿ.ಭಂಡಾರಿ) ಯಾರೊಂದಿಗೋ ಮಾತನಾಡುತ್ತಿದ್ದ. ಒಳಗಿನಿಂದ ಅವರ ಮಾತು ಆಲಿಸುತ್ತಿದ್ದ ನನಗೆ ಆಶ್ಚರ್ಯ ಕಾದಿತ್ತು. ಅಣ್ಣನೆದುರು ಕುಳಿತವರು ಯಾರು? ಎಲ್ಲಿಯವರು?. ಯಾಕೆಂದರೆ ಇಬ್ಬರೂ ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ತೀರಾ ಹತ್ತಿರದ ನೆಂಟರನ್ನು ಬಿಟ್ಟರೆ ಅಣ್ಣ ಯಾರಿಗೂ ಏಕವಚನ ಬಳಸುತ್ತಿರಲಿಲ್ಲ. ಶಾಲೆಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಆತ ಏಕವಚನ ಬಳಸುತ್ತಿರಲಿಲ್ಲ. ಈಕಡೆಯಿಂದಲೂ ಹಾಗೆ, ತೀರಾ ಹತ್ತಿರದವರನ್ನು, ಬಾಲ್ಯದ ಒಡನಾಡಿಗಳನ್ನು ಬಿಟ್ಟರೆ ಸಾಮಾನ್ಯವಾಗಿ ಆತನಿಗೆ ಏಕವಚನ ಯಾರು ಬಳಸುತ್ತಿರಲಿಲ್ಲ. ಯಾಕೆಂದರೆ ಊರಲ್ಲಿ ಆತ ಮಾಸ್ತರ್. ಹೊರಗಡೆ ಹೋರಾಟಗಾರ, ಸಾಹಿತಿ ಎನ್ನುವ ಗೌರವ. ಆದರೆ ಹೊರಗಡೆ ಏಕವಚನದ ಲೋಕಾಭಿರಾಮದ ಮಾತುಗಳನ್ನು ಆಲಿಸುತ್ತಾ ಹೊರಬಂದು ನೋಡಿದರೆ ಅಪರಿಚಿತ ಮುಖ. “ಈತ ಜೈರಾಮ್ ಹೆಗಡೆ, ನನ್ನ ಸ್ನೇಹಿತ. ಒಳ್ಳೆಯ ಕವಿ ಮತ್ತು ಪತ್ರಕರ್ತ” ಎಂದು ಪರಿಚಯಿಸಿದ. ಅವರ ಸ್ನೇಹಶೀಲ ಮಾತು, ನಗು, ಸಣ್ಣ ತಮಾಷೆ ಖುಷಿಕೊಟ್ಟಿತು.  ಬಹುಬೇಗ ಅವರು ನನಗೂ ಆತ್ಮೀಯರಾದರು. ಅಣ್ಣ ಮತ್ತು ಜೈರಾಮ ಹೆಗಡೆಯವರು ಭೇಟಿಯಾಗಿ ಏಕವಚನದಲ್ಲಿ ಮಾತನಾಡಿಕೊಳ್ಳುವುದನ್ನು ನಾನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಣ್ಣನಿಗೆ ಏಕವಚನದಲ್ಲಿ ಮಾತನಾಡುವುದನ್ನು ಕೇಳಿಸಿಕೊಳ್ಳುವುದು ನನಗೆ ಯಾಕೋ ಯಾವತ್ತೂ ಖುಷಿಯ ಸಂಗತಿಯಾಗಿತ್ತು. -ಅಲ್ಲೊಂದು ಹುದ್ದೆ, ಅಂತಸ್ತಿನ ಯಾವ ಕಂದಕವೂ ಇಲ್ಲದ ಆತ್ಮೀಯ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ಕಾರಣಕ್ಕಿರಬೇಕು. ಅವನಿಗೆ ಏಕವಚನದಲ್ಲಿ ಮಾತನಾಡುವ ಸಾಹಿತಿಗಳೆಂದರೆ ಜಯರಾಮ ಹೆಗಡೆಯವರೊಬ್ಬರೇ ಇರಬೇಕು ಎನ್ನುವುದು ನನ್ನ ನೆನಪು.
  ಜಯರಾಮ ಹೆಗಡೆಯವರು ಬಹುಶಃ ಒಂದೆರಡು ವರ್ಷ ನಾವೆಲ್ಲಾ  ಕಲಿತ ನಮ್ಮೂರಿನ ಎಸ್.ಕೆ.ಪಿ ಜೂನಿಯರ್ ಕಾಲೇಜಿನಲ್ಲಿ ಇಂಗ್ಲೀಷ್ ಅಧ್ಯಾಪಕರಾಗಿದ್ದರು. ಅದೊಂದು ಅನುದಾನಿತ ಖಾಸಗಿ ಕಾಲೇಜು. ‘ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಿದ್ದರೆ ಆತ ಅಲ್ಲೇ ಇರಬಹುದಾಗಿತ್ತು’ ಎಂದು ಅಣ್ಣ ಹೇಳುತ್ತಿದ್ದ. ಅರೇಅಂಗಡಿ ಸಣ್ಣ ಊರಾಗಿರುವುದರಿಂದ ಅಲ್ಲಿರುವ ಬೆರಳೆಣಿಕೆಯಷ್ಟು ಸಾಹಿತ್ಯಾಸಕ್ತರು ಒಟ್ಟಾಗುವುದು ಸಹಜ. ಶಾಲೆ ಬಿಟ್ಟೊಡನೆ ಆ ಕಾಲದ ಪ್ರಸಿದ್ಧ ಅಧ್ಯಾಪಕ ಜಿ.ಆರ್ ಭಟ್ ಅವರ ರೂಮಿನಲ್ಲಿ ದಿನನಿತ್ಯ ಸಾಹಿತ್ಯ ಚರ್ಚೆ ಮತ್ತು ಕರ್ನಾಟಕ ಸಂಘದ ಕಾರ್ಯಕ್ರಮ, ತಾಳಮದ್ದಲೆ..ಇತ್ಯಾದಿÀ ರೂಪುರೇಷೆ ಸಿದ್ಧಗೊಳ್ಳುತ್ತಿತ್ತು. ಇದೂ ಒಂದು ರೀತಿಯಲ್ಲಿ ಧಾರವಾಡದಲ್ಲಿದ್ದಂತೆ ಸಣ್ಣ ಗೆಳೆಯರ ಬಳಗ. ಆ ಕಾಲದಿಂದಲೂ ಅವರು ನಮ್ಮ ಕುಟುಂಬದೊAದಿಗೆ ಆತ್ಮೀಯ ಸಂಬAಧ ಉಳಿಸಿಕೊಂಡು ಬಂದಿದ್ದರು.
  ನಾನು ಸಂಘಟನಾ ಕೆಲಸಕ್ಕೆ ಹಾಸನದ ಕಡೆ ಹೋದಾಗ ‘ಶಿರಸಿ’ ಅಥವಾ ‘ಉತ್ತರ ಕನ್ನಡ’ದ ಸುದ್ದಿ ಬರುತ್ತಿದ್ದಂತೆ ಹಲವು ಲೇಖಕರು, ಸಂಘಟನೆಯ ಮುಖಂಡರು ಜಯರಾವi ಹೆಗಡೆಯವರನ್ನು ವಿಚಾರಿಸುತ್ತಿದ್ದರು. ಅಲ್ಲಿ ಅವರು ರೈತ ಹೋರಾಟಗಾರರಾಗಿ, ಪತ್ರಿಕೆಯ ಸಂಪಾದಕರಾಗಿ ಒಳ್ಳೆಯ ಹೆಸರು ಸಂಪಾದಿಸಿದ್ದರು. ಇತ್ತೀಚೆಗೆ ಸಿರ್ಸಿಗೆ ಬಂದಾಗ ಭಾನು ಮುಷ್ತಾಕ್ ಅವರು ಹೆಗಡೆಯವರನ್ನು ಖುದ್ದಾಗಿ ಭೇಟಿಯಾಗಿ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದನ್ನು ನೋಡಿದ್ದೇನೆ. ಅವರ ಪತ್ರಿಕಾ ವ್ಯವಸಾಯ ಅರ್ಥಪೂರ್ಣವಾಗಿ ಪ್ರಾರಂಭವಾಗಿದ್ದು ಅಲ್ಲೇ ಎಂದುಕೊಂಡಿದ್ದೇನೆ. ಅಲ್ಲಿಂದ ನಮ್ಮ ಜಿಲ್ಲೆಗೆ ಬಂದು ಅವರು ಜನಮಾಧ್ಯಮ ಪ್ರಾರಂಭಿಸಿ ಕಾಲು ಶತಮಾನಗಳು ಕಳೆದವು ಎನ್ನುವುದು ನಮಗೂ ಸಂಭ್ರಮದ ಸಂಗತಿ. ಮಾಧ್ಯಮ ಲೋಕದಲ್ಲಿ ಇದ್ದೆ ಅವರು ಅದರ ಮಿತಿಯನ್ನೂ ಅರಿತವರು ಮಾಧ್ಯಮಗಳು ವ್ಯಾಪಾರೀಕರಣಕ್ಕೆ ತೆರೆದುಕೊಂಡು ಕೆಟ್ಟ ಉದ್ಯಮದ ಸ್ವರೂಪ ಪಡೆದುಕೊಂಡಿರುವ (ಉದ್ಯಮ ಮತ್ತು ವ್ಯಾಪಾರೀಕರಣದಿಂದ ಬರುವ ಎಲ್ಲಾ ಅಪಮೌಲ್ಯಗಳಿಗೆ, ಅನೈತಿಕತೆಗೆ ಪಾಲುದಾರರಾಗುತ್ತಿರುವ) ಹೊತ್ತಿನಲ್ಲಿ ನಿಜವಾದ ಅರ್ಥದಲ್ಲಿ ಒಂದು ಜನಪರ, ಅಭಿವೃದ್ಧಿಶೀಲ ಪತ್ರಿಕಾ ವ್ಯವಸಾಯ ನಡೆಸಿದ ಜೈರಾಮ ಹೆಗಡೆಯವರನ್ನು ಅಭಿನಂದಿಸುವುದು ನನಗಂತೂ ಖುಷಿಯ ಸಂಗತಿ. ಆ ಮೂಲಕ ಪತ್ರಿಕಾ ವ್ಯವಸಾಯವನ್ನು ‘ಸೇವೆ’ ಅಂದುಕೊAಡಿರುವ ಕಾಲಘಟ್ಟದಿಂದ ‘ಉದ್ಯಮ’ ಎಂದುಕೊಳ್ಳುವ ಈವರೆಗಿನ ಒಟ್ಟೂ ಬೆಳವಣಿಗೆಯನ್ನು ಕಣ್ಮುಂದೆ ತಂದುಕೊಳ್ಳಲು ಸಾಧ್ಯ. ಜೈರಾಮ ಹೆಗಡೆಯವರ ‘ಆತ್ಮಕತೆ’ ಆಕಾಲ ಎದುರಿಸಿದ ಬಿಕ್ಕಟ್ಟುಗಳನ್ನು, ರೂಢಿಸಿಕೊಂಡ ರ‍್ಯಾಯಗಳನ್ನು ದಾಖಲಿಸುವ ಒಂದು ಚಾರಿತ್ರಿಕ ಬರಹ ಆಗಿರಬಹುದು.(ನಾನು ಬೇಗ ಓದಬೇಕು.) ಅವರ ಸಂಪಾದಕೀಯವನ್ನು ಒಟ್ಟಾಗಿ ನೋಡಿದರೂ ಈ ಹೊಳಹುಗಳನ್ನು ನೋಡಬಹುದು.
ತಾನೊಬ್ಬ ಪತ್ರಿಕೆಯ ಸಂಪಾದಕನೆನ್ನುವ ಯಾವ ಹಮ್ಮೂ ಇಲ್ಲದೆ ಹೆಗಡೆಯವರು ಶಿರಸಿಯಲ್ಲಿ ನಮ್ಮೆಲ್ಲ ಜನಪರ ಚಳುವಳಿಗಳ ಜೊತೆ ನಿಂತವರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ, ಗಲಭೆ ಪ್ರಾರಂಭವಾದ ದಿನದಲ್ಲಿ ಒಂದು ಸೌಹಾರ್ದ ವಾತಾವರಣ ಸೃಷ್ಟಿಸುವ ಪ್ರಧಾನ ಕಾರಣಕ್ಕೆ ಹುಟ್ಟಿಕೊಂಡ ಲೇಖಕರು, ಪತ್ರಕರ್ತರು, ವಿವಿಧ ವಲಯದ ಚಿಂತಕರನ್ನು ಒಳಗೊಂಡ ಒದು ಸಾಂಸ್ಕೃತಿಕ ಸಂಘಟನೆಯಾದ  ‘ಚಿಂತನ ಉತ್ತರ ಕನ್ನಡ’ದ ಮೊದಲ ಸಮಾವೇಶದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಚಿಂತನ ಕನ್ನಡ ಪುಸ್ತಕ ಮಳಿಗೆಯನ್ನು ಪಂಡಿತ್ ಗ್ರಂಥಾಲಯದ ಒಂದು ಭಾಗದಲ್ಲಿ ಪ್ರಾರಂಭಿಸಿದಾಗ, ಕಿರು ಪುಸ್ತಕ ಮಾಲೆಯನ್ನು ಪ್ರಾರಂಭಿಸಿದಾಗ  ಅವರು ಕಾರ್ಯಕರ್ತರಂತೆ ನಮ್ಮೊಂದಿಗೆ ಇದ್ದರು. ಸ್ವತಃ ಬಂದು ವರದಿ ಮಾಡಿದ್ದಿದೆ. ಜಯರಾವi ಹೆಗಡೆಯವರು ಸಂಘಟನೆ ಮುನ್ನೆಲೆಗೆ ತಂದ ವೈಚಾರಿಕತೆಯ ಜೊತೆಗೆ ಈವರೆಗೂ ನಿಂತರು. ಅವರೇ ಸಂಪಾದಕರಾಗಿರುವ ‘ಜನ ಮಾಧ್ಯಮ’ದಲ್ಲಿ ಪ್ರತಿ ಕಾರ್ಯಕ್ರಮಕ್ಕೂ ಅಂತಹ ದೊಡ್ಡ ಸ್ಥಳ ನೀಡಿದರು. ಜಿಲ್ಲೆಯಲ್ಲಿ ‘ಚಿಂತನ’ದ ಬೆಳವಣಿಗೆಯಲ್ಲಿ ಅವರ ಕೊಡುಗೆ ಕೂಡ ಮಹತ್ವದ್ದು. ಹಮ್ಮಿಕೊಂಡ ಕಾರ್ಯಕ್ರಮ ಮತ್ತು ಅದರ ಮಹತ್ವದ ಬಗ್ಗೆ ಸಂಪಾದಕೀಯ ಬರೆದು ಪ್ರೋತ್ಸಾಹಿಸಿದವರು. ಚಿಂತನದ ಮೊದಲ ಸಮಾವೇಶದಿಂದ ಮೊದಲ್ಗೊಂಡು ಮೊನ್ನೆ ಮೊನ್ನೆ ಶಿರಸಿಯಲ್ಲಿ ಸಂಘಟಿಸಿದ ‘ಸಂವಿಧಾನ ನಡೆ’ ಜಾಥಾ ಮತ್ತು ಸಮಾವೇಶದವರೆಗೆ ನಮ್ಮೊಂದಿಗಿದ್ದು ಅಗತ್ಯ ಸಲಹೆ ಸೂಚನೆ ನೀಡಿದವರು.
ಅಣ್ಣನೊಂದಿಗೆ ಅವರ ಪಯಣ ಅರೇಅಂಗಡಿಯ ಜೂನಿಯರ್ ಕಾಲೇಜಿನಿಂದ ಪ್ರಾರಂಭವಾಗಿ, ಅದು ಬಂಡಾಯ ಸಾಹಿತ್ಯ ಸಂಘಟನೆಯನ್ನು ಹಾಯ್ದು, ‘ಜನಮಾಧ್ಯಮ’ ಪತ್ರಿಕೆಯವರೆಗೂ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡೇ ಸಾಗಿತು. ಉತ್ತರ ಕನ್ನಡದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟುವಾಗ ಆರ್.ವಿ. ಭಂಡಾರಿ, ಜಿ.ಎಸ್. ಅವಧಾನಿ, ವಿ. ಜೆ. ನಾಯಕ, ಶಾಂತಾರಾಮ ನಾಯಕ, ವಿಷ್ಣು ನಾಯಕ, ವಿ. ಮುನಿವೆಂಕಟಪ್ಪ,  ಮಾಸ್ತಿ ಗೌಡ, ನಜೀರ್ ಚಂದಾವರ, ಕಶ್ಯಪ ಪರ್ಣಕುಟಿ, ಶಶಿಧರ್ ಭಟ್, ವಿಠ್ಠಲ ಪೇರುಮನೆ, ಬಿ.ಟಿ.ಶ್ರೀಪಾದ, ಸುಬ್ರಾಯ ಮತ್ತೀಹಳ್ಳಿ, ಪ್ರಕಾಶ ಕಡಮೆ, ಕೃಷ್ಣ ಹಿಚ್ಕಡ, ಮೋಹನ ಕುರುಡಗಿ, ಶಂಕರ..... ಮುಂತಾದವರೊಂದಿಗೆ ಜಯರಾಮ ಹೆಗಡೆಯವರೂ ಸಕ್ರಿಯರಾಗಿದ್ದರು. ಬಂಡಾಯ ಅನ್ನುವುದನ್ನು ಹೊಸತಲೆಮಾರಿನ ಬರಹಗಾರರ ಮನೋಧರ್ಮವಾಗಿಸಿದ ಶೇಯಸ್ಸು ಇವರೆಲ್ಲರಿಗೆ ಸೇರಬೇಕು. ಬೇರೆಬೇರೆ ಕಾರಣಕ್ಕೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಯಾವುದೇ ಸಂದರ್ಭವನ್ನು ಇವರು ಈಗಲೂ ಬಿಟ್ಟುಕೊಡುವವರಲ್ಲ. ಆಗ ಬಂಡಾಯ ಸಾಹಿತ್ಯ ಸಂಘಟಿಸುವ ಬಹುತೇಕ ಕವಿಗೋಷ್ಠಿಯಲ್ಲಿ (ಜಿಲ್ಲೆಯಲ್ಲಾದರೂ ಹಲವು ಬಾರಿ ಹೊರಜಿಲ್ಲೆಯಲ್ಲಾದರೂ) ಜಯರಾವi ಹೆಗಡೆಯವರ ಕವಿತೆ ಇರಲೇಬೇಕು. ಹಾಗಂತ ಹೆಸರಿಗಾಗಿ ಅವರೆಂದೂ ಹಪಹಪಿಸಿದವರಲ್ಲ. ಕರೆಯೋಲೆಯಲ್ಲಿ ಹೆಸರಿಲ್ಲದಿದ್ದರೂ ಕಾರ್ಯಕ್ರಮದಲ್ಲಿ ಇಡೀ ದಿನ ಹಾಜರಿದ್ದು ಎಲ್ಲರ ಮಾತು ಕೇಳುವ ಅಪರೂಪದ ಸಹೃದಯತೆ ಅವರದು. ಬಂಡಾಯ ಸಾಹಿತ್ಯ ಇಂದು ಸಂಘಟನಾ ರೂಪದಲ್ಲಿ ಶಿಥಿಲವಾಗಿದ್ದರೂ ಅದು ರೂಪಿಸಿದ ಆಲೋಚನಾ ಕ್ರಮ, ಜೀವಪರ ಕಾಳಜಿ ಈಎಲ್ಲಾ ಲೇಖಕರಲ್ಲಿ ಈಗಲೂ ಇರುವುದನ್ನು ಕಾಣುತ್ತೇವೆ. ಹಾಸನದಲ್ಲಿ ಪತ್ರಕರ್ತರಾಗಿ ರೂಢಿಸಿಕೊಂಡು ಬಂದ ಸಮಾಜವಾದಿ ಆಲೋಚನಾಕ್ರಮ ಬಂಡಾಯ ಚಳುವಳಿಯ ಜೊತೆ ಹೆಚ್ಚು ಗಟ್ಟಿಗೊಂಡಿತು. ಇದನ್ನು ಅವರ ಎಲ್ಲಾ ಕೃತಿಗಳಲ್ಲಿ, ಬರೆದ ಸಂಪಾದಕೀಯದಲ್ಲಿ ಸ್ಪಷ್ಟವಾಗಿಯೇ ಗುರುತಿಸಬಹುದು.
ನಾನು ವಿದ್ಯಾರ್ಥಿ ಸಂಘಟನೆಯಲ್ಲಿ (SFI) ಮತ್ತು ಯುವಜನ ಸಂಘಟನೆಯಲ್ಲಿ (DYFI) ಕೆಲಸ ಮಾಡುತ್ತಿದ್ದ ಕಾಲ. ಶಿರಸಿ ನಮ್ಮ ಕೇಂದ್ರಸ್ಥಾನ ಕೂಡ ಆಗಿತ್ತು. ಸಂಘಟನೆ ಹೆಚ್ಚು ಕ್ರಿಯಾಶೀಲವಾಗಿದ್ದು ಕೂಡ ಇಲ್ಲಿಯೇ. ಎಂಎಸ್ ಧಾರೇಶ್ವರ, ಮಂಜುನಾಥ ಪುಲ್ಕರ್, ಪಿ.ಜಿ. ಮಶಾಲ್ದಿ, ಬಂಗಾರೇಶ್ವರ ಗೌಡ......ಮುಂತಾದವರು ನಡೆಸಿದ ಹೋರಾಟಗಳಿಂದ ಈ ನೆಲ  ಎಡಪಂಥೀಯ ಆಲೋಚನೆಯ ಸಂಘಟನೆ ಕಟ್ಟಲು ಉಳಿದ ಪ್ರದೇಶಕ್ಕಿಂತ ಹೆಚ್ಚು ಪೂರಕವಾಗಿತ್ತು. ನಮ್ಮ ಜಿಲ್ಲಾ ಕೇಂದ್ರ ಕಾರವಾರವಾದರೂ ಒಂದು ರೀತಿಯಿಂದ ಶಿರಸಿಯೇ ಕೇಂದ್ರವಾಗಿತ್ತು. ಹಾಗಾಗಿಯೇ ಜಿಲ್ಲೆಯ ಅತಿ ಹೆಚ್ಚು ಪತ್ರಿಕೆಗಳು ನಡೆಯುತ್ತಿದ್ದುದು ಶಿರಸಿಯಲ್ಲಿಯೆ. ಆಗ ಜಯರಾಮ ಹೆಗಡೆಯವರೊಂದಿಗೆ ಹೆಚ್ಚು ಸಂಪರ್ಕ ಬಂತು. ಯಾವುದೇ ಕಾರ್ಯಕ್ರಮದ ಸುದ್ದಿ ನೀಡಲು, ಹೇಳಿಕೆ ನೀಡಲು ಜನಮಾಧ್ಯಮ ಮತ್ತು ಮುನ್ನಡೆ ಪತ್ರಿಕಾ ಕಚೇರಿಗೆ ಹೋಗುತ್ತಿದ್ದೆವು. ಕೆಲವು ಬಾರಿ ಪತ್ರಿಕಾ ಹೇಳಿಕೆಯನ್ನು ಬರೆಯುವುದು ಹೇಗೆ ಎಂದು ನಮಗೆ ಪಾಠ ಮಾಡಿದ ನೆನಪು ಇದೆ. ಹಾಗೆ ಸುದ್ದಿ ಬಂದ ಪತ್ರಿಕೆಯ ಒಂದೆರಡು ಪ್ರತಿ ಕೊಡುತ್ತಿದ್ದರು. ನಮಗೆ ಪತ್ರಿಕೆ ಮುದ್ರಣ ಗೊಳ್ಳುವ ಖಾಲಿ ಪೇಪರ್ ಮೇಲೆ ಕಣ್ಣು. ಪೋಸ್ಟರ್ ಬರೆಯಲು ಇದು ಉಪಯೋಗ.  ಅಂಗಡಿಯಿAದ ಹಣ ಕೊಟ್ಟು ಖರೀದಿ ಮಾಡುವಷ್ಟು ಸಾಮರ್ಥ್ಯ ಆಗ ಇರಲಿಲ್ಲ. ಸಂಜೆ ಬಂದಾಗ ಅವರೊಂದಿಗೆ ಮಾತನಾಡಿದ್ದು, ಅವರು ನನ್ನ ಅಪ್ಪನ ಬಗ್ಗೆ ವಿಚಾರಿಸಿದ್ದನ್ನು ನೋಡಿ ಈತ ಸಂಪಾದಕರಿಗೆ ಹತ್ತಿರದವನೆಂದುಕೊAಡು ಅಲ್ಲಿಯ ಕೆಲಸಗಾರರು ಪೇಪರ ಕೊಡುತ್ತಿದ್ದರು. ಹಾಗಾಗಿ ಸಂಪಾದಕರಿದ್ದರೆ ಸುದ್ದಿ ಕೊಡುತ್ತಿದ್ದೆವು. ಇಲ್ಲದಿದ್ದರೆ ಖಾಲಿ ಪೇಪರ್ ಎತ್ತಿಕೊಂಡು ಬರುತ್ತಿದ್ದೆವು. ಶಿರಸಿಯ ಉಳಿದೆರಡು ಪತ್ರಿಕೆಗಳು ಪ್ರತಿಗಾಮಿ ಆಲೋಚನೆಯನ್ನು ಹಾಸಿ ಹೊದೆದುಕೊಂಡಿರುವುದರಿAದ ನಾವು ಜನ ಮಾಧ್ಯಮದ ಕಟ್ಟಾ ಬೆಂಬಲಿಗರಾಗಿದ್ದೆವು. ನಮ್ಮ ಸುದ್ದಿ ಸರಿಯಾಗಿ ಬರದಿದ್ದಾಗ ಜಗಳವಾಡಿದ್ದೂ ಇದೆ. ಈ ಜಗಳ ನಮ್ಮ ನಡುವಿನ ವಿಶ್ವಾಸಕ್ಕೆ, ಪ್ರೀತಿಗೆ ಯಾವ ತಡೆಯನ್ನು ಒಡ್ಡಿಲ್ಲ. ಈ ಜಗಳ ತಾತ್ಕಾಲಿಕವಾಗಿತ್ತು.  ಅವರ ಆಲೋಚನೆ  ಪೂರ್ತಿ ಕೆಂಪಲ್ಲದಿದ್ದರೂ ಆಗಾಗ ಅವರು ಹಾಕುವ ಕೆಂಪಂಗಿ ಕೂಡ ಅವರನ್ನು ಹೆಚ್ಚು ಪ್ರೀತಿಸುವಂತೆ ಮಾಡಿರಬೇಕು.
  ಆಮೇಲೆ ನಾನು ಸಿದ್ದಾಪುರ ಕಾಲೇಜಿಗೆ ಉಪನ್ಯಾಸಕನಾಗಿ ಬಂದಮೇಲೆ ಸಂಘಟನೆಯ ಕೆಲಸಕ್ಕಾಗಿ ಹೆಚ್ಚೆಚ್ಚು ಶಿರಸಿ ಕಡೆಗೆ ಇರುತ್ತಿದ್ದೆ. ಅವರ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದೆ. ಸಾಮಾನ್ಯವಾಗಿ ಚರ್ಚೆ ರಾಜಕಾರಣದ ಸುತ್ತಲೇ ಇರುತ್ತಿತ್ತು. ‘ನಿಮ್ಮ ಪತ್ರಿಕೆಯನ್ನು ಸ್ವಲ್ಪ ಆಕರ್ಷಕವಾಗಿ ಮಾಡಿ, ಅದರ ಪ್ರಸರಣವೂ ಹೆಚ್ಚಿಸಬಾರದೇ?’ ಎಂದು ಹಲವು ಬಾರಿ ಕೇಳಿದ್ದೆ. ಮುಗುಳ್ನಕ್ಕಿದ್ದರು. “ಪತ್ರಿಕೆಗಳು ಈಗ ಬದುಕಿಕೊಳ್ಳಲು ಪತ್ರಿಕಾ ಧರ್ಮವನ್ನೂ ಅಲಕ್ಷಿಸಿ ತಮ,ಗೆ ಬದುಕಲು ಬೇಕಾದ ಮಾರ್ಗ ಹಿಡಿದಿವೆ; ಜಾಹಿರಾತಿಗಾಗಿ ಸತ್ಯ ಮರೆಮಾಚುವುದು, ರಾಜಕೀಯ ಪಕ್ಷಗಳಿಗೆ ತಮ್ಮ ಪತ್ರಿಕೆಯನ್ನು ಮುಖವಾಣಿಯನ್ನಾಗಿಸುವುದು ಅಥವಾ ರಾಜಕಾರಣಿಗಳಿಗೆ ಪತ್ರಿಕೆ ಮಾರಿ ತಾವು ಹೆಸರಿಗೆ ಮಾತ್ರ ಸಂಪಾದಕರಾಗಿ ರಾಜಕಾರಣಿಗಳ ಬಾಲಬಡುಕರಾಗುವುದು; ಹಣ ಮಾಡುವುದೇ ಪತ್ರಿಕೋದ್ಯಮದ ಮುಖ್ಯಗುರಿಯೇ ಹೊರತು ಸಮಾಜಸುಧಾರಣೆಯಲ್ಲವೆಂದು ಬಲವಾಗಿ ನಂಬಿರುವುದು; ಈ ವಿಷವೃತ್ತದಲ್ಲಿ ಪತ್ರಿಕೆಗಳಿರುವಾಗ ಯಾರಾದರೂ ಸಮಾಜದ ಓರೆಕೋರೆ ಸರಿಪಡಿಸುವ ಉದ್ದೇಶದ ಪತ್ರಕರ್ತನಿದ್ದರೆ ಆತ ಪತ್ರಿಕೆ ಮುಚ್ಚಬೇಕು ಅಥವಾ ಆತ್ಮ ಹತ್ಯೆ ಮಾಡಿಕೊಳ್ಳಬೇಕು ಇಂಥ ಪರಿಸ್ಥಿತಿ ಇದೆ.(೧೭-೨-೨೦೦೩ರಂದು ಬರೆದ ಸಂಪಾದಕೀಯದಿಂದ) ಆ ಮುಗುಳ್ನಗುವಿನಲ್ಲೂ ಹಣಕಾಸಿನ ಬಿಕ್ಕಟ್ಟಿನಿಂದ ಪತ್ರಿಕೆಯನ್ನು ಅಂದುಕೊಂಡಂತೆ ಬೆಳೆಸಲಾರದ ಅಸಹಾಯಕತೆಯೂ ತ್ತು ನೈತಿಕತೆಯನ್ನು ಕಳೆದುಕೊಳ್ಳುತ್ತಿರುವ ಈ ವೃತ್ತಿಯ ಜೊತೆ ಬಹುದಿನ ಏಗಲಾರದ ಮನೋಸ್ಥಿತಿಗೆ ಸವರು ಬಂದಿದ್ದರು ಎನ್ನುವುದು ಈ ಮೇಲಿನ ಅವರ ಮಾತು ಧ್ವನಿಸುತ್ತದೆ. ಹಲವು ಕನಸುಗಳೊಂದಿಗೆ ತಾನೇ ಆಯ್ಕೆ ಮಾಡಿಕೊಂಡು ಮುನ್ನಡೆಸಿದ, ಬದುಕಾಗಿಸಿಕೊಂಡ ಪತ್ರಿಕೆಯೊಂದರ ಮಾಲಿಕತ್ವವನ್ನು ಇಳಿ ವಯಸ್ಸಿನಲ್ಲಿ  ಬೇರೆಯವರಿಗೆ ಕೊಟ್ಟಾಗಲಂತೂ ನನಗೆ ತುಂಬಾ ಬೇಸರವಾಗಿತ್ತು. ಅದನ್ನು ಹಲವುಬಾರಿ ಅವರಲ್ಲಿ ತೋಡಿಕೊಂಡಿದ್ದೆ ಕೂಡ. ಆದರೆ ಅವರ ನೋವನ್ನು ಕೆದಕುವ ಮನಸ್ಸಾಗಿರಲಿಲ್ಲ.
  ಇತ್ತೀಚಿಗಂತೂ ಶಿರಸಿಯನ್ನು ಕೋಮುವಾದ ಮತ್ತು ಮೂಲಭೂತವಾದದ ಪ್ರಯೋಗಶಾಲೆಯನ್ನಾಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಸುತ್ತಿರುವುದು ಪ್ರಜ್ಙಾವಂತರ ಗಮನಕ್ಕೆ ಬಂದಿರುತ್ತದೆ. ಇದರ ಹಿಂದೆ ಸಂಸ್ಕೃತಿಯ ಕುರಿತ ಪ್ರೀತಿ, ಅಭಿಮಾನಕ್ಕಿಂತ ಚುನಾವಣಾ ರಾಜಕೀಯದ ಹುನ್ನಾರವೇ ಹೆಚ್ಚಿರುವುದು. ಇಂದಿನ ಈ ಬೆಳವಣಿಗೆಗೆ ಹತ್ತಾರು ವರ್ಷದ ಇತಿಹಾಸವಿದೆ. ಇದಕ್ಕೆ ಶಿರಸಿಯ ಕೆಲವು ಪತ್ರಿಕೆಯ ಕೊಡುಗೆಯೂ ಇದೆ. ಜಿಲ್ಲೆಯ ಸೌಹಾರ್ದ ನೆಲೆಗೆ ಭಂಗ ತರುವ ಕೆಲಸ ನಡೆದಾಗಲೆಲ್ಲ ಜೈರಾಮ ಹೆಗಡೆಯವರು ಎಚ್ಚರಿಸುವ ಕೆಲಸ ಮಾಡುತ್ತಲೇ ಬಂದಿದ್ದಾರೆ. “ಕಾಲಕಾಲಕ್ಕೆ ಧರ್ಮಗ್ರಂಥಗಳ ಪುನರ್ ಮೌಲ್ಯೀಕರಣ ಕೂಡ ಆಗುತ್ತಲೇ ಹೋಗಬೇಕಾಗುತ್ತದೆ.......ವೈಜ್ಞಾನಿಕ ಬೆಳವಣಿಗೆಯ ಬೆಳಕಿನಲ್ಲಿ ಧರ್ಮಗ್ರಂಥಗಳ ಪುನರ್ ಮೌಲ್ಯೀಕರಣಕ್ಕೆ ತೊಡಗಬೇಕಾಗಿದೆ. ಯಾಕೆಂದರೆ ವಿಜ್ಞಾನ ಮನುಷ್ಯನಿಗೆ ವರವಾಗುವ ಜೊತೆಗೆ ಅನೇಕ ಹಾನಿ ಮಾಡಲು ಕಾರಣವಾಗಿದ್ದರೂ ಅದು ಸತ್ಯವಾಗಿದೆ....ಎಲ್ಲಾ ಧರ್ಮಗ್ರಂಥಗಳನ್ನು ರಚಿಸಿದವನು ಮನುಷ್ಯನೇ ವಿನಃ ದೇವರಲ್ಲ.”(ಆಯ್ದ ಸಂಪಾದಕೀಯಗಳು; ೨೦೧೬;ಪು.೨೦೭-೮) ಎನ್ನುವ ನಿಲುವಾಗಲೀ, “ಹಿಂದೂ ಧರ್ಮದ ಪ್ರತಿಪಾದಕರು ಬೇರೆ ಧರ್ಮಗಳ ಬಗ್ಗೆ ಅಸಹನೆ ತೋರುವ ಮೊದಲು ಹಿಂದೂ ಧರ್ಮದಲ್ಲಿರುವ ಜಾತಿಗಳಲ್ಲಿನ ಮೇಲು ಅಸಮಾನತೆ ಹೋಗಲಾಡಿಸಲು ಏನು ಕೆಲಸ ಮಾಡುತ್ತಿದ್ದಾರೆ? ಎಂಬ ಸಮಯದಲ್ಲಿ ಸಹಜವಾಗಿ ಏಳುತ್ತದೆ.”(ಅದೇ:೨೦೬) ಎನ್ನುವ ಮೂಲಭೂತ ಪ್ರಶ್ನೆ ಎತ್ತುವ ಅವರ ಸ್ವಭಾವವಾಗಲೀ “ ಹಿಂದೂ ಧರ್ಮದೊಳಗಿನ ದೋಷವನ್ನು ಮೊದಲು ಸರಿಪಡಿಸಿಕೊಳ್ಳುವ ಪ್ರಯತ್ನಕ್ಕಿಳಿಯಬೇಕು. ಮತಾಂತರ ವಿರುದ್ಧ ವೀರಾವೇಶ ಮಾತಾಡುವುದರ ಬದಲು ಹಿಂದೂ ಧರ್ಮದಲ್ಲಿ ಶತಶತಮಾನಗಳಿಂದ ನಡೆದುಕೊಂಡು ಬಂದಿರುವ ಜಾತಿಯ, ಮೇಲು, ಕೀಳು, ಅಸಮಾನತೆ, ಶೋಷಣೆ, ಬಡತನ ನಿವಾರಣೆಗೆ ಸಕ್ರಿಯವಾಗಿ ಕೆಲಸ ಮಾಡುವುದು ಅಪೇಕ್ಷಣೀಯ.ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಪಂಚಮರ ಎಂದು ಕರೆಸಿಕೊಳ್ಳುವ ದಲಿತರ ಶೋಷಣೆ ಅವರ ಮೇಲಿನ ಹಲ್ಲೆ, ಕೀಳು ಭಾವನೆ ನಿಲ್ಲಿಸುವಂತೆ ನೋಡಿಕೊಳ್ಳಬೇಕಾಗಿದೆ.” (ಅದೇ:೧೮೩) ಎಂದು ಕೋಮುವಾದಿ ಶಕ್ತಿಗಳಿಗೆ ಹಾಕುವ ಎದುರೇಟಾಗಲೀ ಇದು ಜೈರಾಮ ಹೆಗಡೆಯವರು ಅನುದಿನ ಕಾಪಿಟ್ಟುಕೊಂಡ ಬಂದ ಸಾಮಾಜಿಕ ಎಚ್ಚರ. ಕೋಮುವಾದವನ್ನು ಮಾತ್ರವಲ್ಲ ಜಾತಿವಾದ, ಕಂದಾಚಾರ, ಭ್ರಷ್ಟಾಚಾರ, ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ, ಸಂವಿಧಾನ ವಿರೋಧಿ ನಡವಳಿಕೆ, ಜಾಗತೀಕರಣ... ಹೀಗೆ ಅರ್ಥಪೂರ್ಣವಾಗಿ  ವಿರೋಧಿಸುತ್ತಲೇ ಬಂದವರು. ಸಾಮಾನ್ಯವಾಗಿ ಪತ್ರಿಕೆಯ ಸಂಪಾದಕರಾದ ಸಂದರ್ಭದಲ್ಲಿ ಕೆಲವರು ಹಣದ ಆಮಿಷಕ್ಕೆ, ಸ್ಥಾನದ ಮತ್ತು ಆಸ್ತಿಯ ಆಮಿಷಕ್ಕೆ ಬಲಿಯಾಗುತ್ತಾರೆ. ಆದರೆ ಜಯರಾಮ ಹೆಗಡೆಯವರ ಪತ್ರಿಕಾ ಕಛೇರಿ ಪ್ರಾರಂಭದಿಂದ ಕೊನೆಯವರೆಗೂ ಯಾವ ವೈಭವವಿಲ್ಲದೆ - ಹಣ ಮಾಡಿದ ಒಂದೇ ಒಂದು ಕುರುಹೂ ಇರದಂತೆ- ಹಾಗೇ ಇತ್ತು. ಬಡತನವೇ ರೂಪುತಳೆದಂತೆ. ಶ್ರೀಮಂತಿಕೆಗೆ ಸಡ್ಡು ಹೊಡೆದಂತೆ.
ವಿಠ್ಠಲ ಭಂಡಾರಿ, ಕೆರೆಕೋಣ