Wednesday 6 June 2018

ಆ ಒಂದು ಜಗಲಿ ಕಟ್ಟೆ..ನೆನಪು 12

ಆ ಒಂದು ಜಗಲಿ ಕಟ್ಟೆ..

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು 12
ಹಕ್ಕೆ ಜಗಲಿ ಪುರಾಣ
ನಮ್ಮಲ್ಲಿ ‘ಹಕ್ಕೆ ಜಗುಲಿ ಪುರಾಣ’ ಎಂದರೆ ಕೆಲಸಕ್ಕೆ ಬಾರದ ಮಾತುಕತೆ ಎಂದರ್ಥ. ಅಂಗಳಕ್ಕೆ ಇಳಿಯದೇ ಮನೆಯ ಒಳಗೇ ಕುಳಿತು ಮಾಡುವ ಕಾಲಹರಣ. ಉತ್ತರನ ಪೌರುಷ ಎಂತಲೂ ಬಳಕೆ ಇದೆ.
ಅದು ಏನೇ ಇರಲಿ. ನಮ್ಮ ಹಳ್ಳಿಯಲ್ಲಿ ಪ್ರತಿ ಮನೆಯಲ್ಲಿ ಒಂದು ಜಗಲಿ ಮತ್ತು ಹೊರಗೆ ಕುಳಿತುಕೊಳ್ಳಲು ಒಂದು ಹಕ್ಕೆ ಜಗುಲಿ (ಹಕ್ಕೆ ಚಿಟ್ಟೆ ಅಂತಲೂ ಹೇಳುತ್ತಾರೆ) ಇದ್ದೇ ಇರುತ್ತದೆ. ಸಾಮಾನ್ಯವಾಗಿ ಸಂಜೆ ಹೊತ್ತು ಈ ಹಕ್ಕೆ ಜಗುಲಿಯಲ್ಲಿ ಕುಳಿತೇ ಸುದ್ದಿ ಹೇಳುವುದು.
ಆದರೆ ನಮ್ಮ ಮನೆಯಲ್ಲಿ ಹಕ್ಕೆ ಜಗುಲಿ ಇರಲಿಲ್ಲ. ಮಣ್ಣಿನ ಗೋಡೆಯಿರುವ ಸಣ್ಣ ಮನೆ. ನಮ್ಮ ಮನೆಯ ಹಿಂದಿನ ಮನೆಯಲ್ಲಿರುವ ಸುಬ್ರಾಯ ಶೆಟ್ಟರು ಈ ಗೋಡೆ ನಾನೇ ಹಾಕಿದ್ದು ಎಂದು ವರ್ಣಿಸುತ್ತಿದ್ದರು. ಮನೆಯಲ್ಲಿ ಸಣ್ಣ ಹೊಳ್ಳಿ (ಜಗಲಿ); ಅದಕ್ಕೆ ಕಟ್ಟಿಗೆ ರೀಪಿನ ಶಿರವಾಳ್ತೆ (ಕಡಕಟ್ಟು, ಕಟಾಂಜನ); ಶಿರವಾಳ್ತೆಗಿರುವ ಬಾಗಿಲು ದಾಟಿದರೆ ಅಂಗಳ. ಹೊಳ್ಳಿ ಕೂಡ ಸಣ್ಣದು. ಆಚೆ ಈಚೆ ಎರಡು ಖುರ್ಚಿ ಹಾಕಿದರೆ ಮೂರನೆಯವರು ಸ್ವಲ್ಪ ಅಡ್ಡಾಡುವುದೂ ಕಷ್ಟವೇ.
ನಮ್ಮ ಮನೆಗೆ ಬಂದುಹೋಗುವವರು ಸ್ವಲ್ಪ ಹೆಚ್ಛೇ ಅನ್ನಬೇಕು. ಅಣ್ಣ ಮಾಸ್ತರ್ ಆಗಿರುವುದು ಒಂದಾದರೆ ಒಬ್ಬ ಲೇಖಕನಾಗಿರುವದರಿಂದಲೂ ಸ್ನೇಹದಿಂದ, ಗೌರವದಿಂದ ಆತನ ಸಲಹೆ ಕೇಳಲು, ಮಾತಾಡಿಸಲು ಬರುತ್ತಿದ್ದರು. ಹಾಗಾಗಿ ಹೊಳ್ಳಿಯನ್ನು ಸ್ವಲ್ಪ ವಡಾಯಿಸಲು (ವಿಸ್ತರಿಸಲು) ನಿರ್ಧರಿಸಿ, ಯಾವಾಗಲೂ ನಮ್ಮ ಮನೆಯ ಕೆಲಸ ಮಾಡಿಕೊಡುತ್ತಿದ್ದ ಅಯ್ಯನಿಗೆ ಹೇಳಲಾಯಿತು.
ಇದರ ಭಾಗವಾಗಿ ಒಂದಿಷ್ಟು ಕಡಗಲ್ಲು (ಚೀರೆ ಕಲ್ಲು) ಮನೆ ಎದುರು ಬಂದಿತು. ಮನೆಯ ಮುಂದಿನ ಮಾಡನ್ನು (ಚಾವಣಿ) ಉದ್ದ ಮಾಡಲು “ಕಟ್ಟಿಗೆ ತರುವುದು ಬೇಡ; ಕಾಡಿನ ಮರ ನಾಶ ಮಾಡುವುದು ಸರಿ ಅಲ್ಲ” ಎಂದು ಅಣ್ಣನ ಆದೇಶ ಆಗಿರುವುದರಿಂದ ತೆಂಗಿನ ಪಟ್ಟಿ ತರಲಾಯಿತು. ಹೊಳ್ಳಿಯ ತುದಿಗೆ 2 ಫೂಟಿನಲ್ಲಿ ಕಲ್ಲುಕಟ್ಟಿ ಅದರ ಮೇಲೆ ಶಿರವಾಳ್ತೆ ಕಟ್ಟುವುದು, ಅದರ ಮುಂದೆ ಬೇಸಿಗೆಯಲ್ಲಿ ಕುಳಿತುಕೊಳ್ಳಲು ಅನುಕೂಲ ಆಗುವಂತೆ ಒಂದುವರೆ ಫೂಟಿನ ಹಕ್ಕೆ ಜಗುಲಿ ಕಟ್ಟುವುದೆಂದು ನಾವು ತೀರ್ಮಾನಿಸಿ, ಅದರಂತೆ ಕಲ್ಲು ಕಟ್ಟಲು ಪ್ರಾರಂಭಿಸಿದರು.
ಮಧ್ಯಾಹ್ನದೊಳಗೆ ಸುಮಾರು ಅರ್ಧ ಕೆಲಸ ಮುಗಿದಿರಬೇಕು. ಶಾಲೆ ಬಿಟ್ಟು ಬಂದ ಅಣ್ಣ ಹಿಂದೆ ಮುಂದೆ ಅಡ್ಡಾಡಿ ಹೊರಗೆ ಕಟ್ಟುತ್ತಿರುವುದು ಏನು ಎಂದು ವಿಚಾರಿಸಿದ. ಹೊರಗೆ ಒಂದು ಕಟ್ಟೆ, ಯಾರಾದರೂ ಬಂದರೆ, ನೀವು ಸಂಜೆ ಒಂದು ಗಳಿಗೆ ಕುಳಿತುಕೊಳ್ಳುವುದಕ್ಕೆ ಒಂದು ಕಟ್ಟೆ ಕಟ್ಟುತ್ತೇವೆ; ಚೆನ್ನಾಗಿರುತ್ತದೆ ಎಂದು ಅಯ್ಯ ಹೇಳಿದ.
ಇದಕ್ಕೆ ಅಣ್ಣ ಗ್ರೀನ್ ಸಿಗ್ನಲ್ ನೀಡಲಿಲ್ಲ. ಯಾವುದೇ ಕಾರಣಕ್ಕೂ ಈ ಕಟ್ಟೆ ಕಟ್ಟ ಬಾರದೆಂದು ಅಣ್ಣ ಹಠ ಹಿಡಿದ. ತಾನು ಮಾಡುವ ಕೆಲಸಕ್ಕೆ ಶಹಬ್ಬಾಸ್ ಗಿರಿ ಪಡೆಯಬೇಕೆಂದುಕೊಂಡು ಉತ್ಸಾಹದಿಂದ ವಿವರಿಸಿದ ಅಯ್ಯನಿಗೆ ನಿರಾಶೆಯಾಯಿತು.
ನಮಗೂ ನಿರಾಸೆಯೇ.
ಯಾಕೆ ಬೇಡ ಎಂದು ನಾವೂ ಕೇಳಿದೆವು. ಆದರೆ ಆತ ಅದಕ್ಕೆ ಕಾರಣ ಹೇಳಲು ತಯಾರಿರಲಿಲ್ಲ. ಅಂತೂ ಇಂತೂ ತುಂಬಾ ಒತ್ತಾಯಿಸಿದ ಮೇಲೆ ಆತ “ಮನೆಗೆ ಯಾರೇ ಬಂದರೂ ಇಷ್ಟು ದಿನ ಒಳಗೆ ಹೊಳ್ಳಿಯ ಮೇಲೆ ಕುಳ್ಳಿರಿಸಿಕೊಳ್ಳುವುದು, ಅಲ್ಲಿಯೇ ನಮ್ಮೊಂದಿಗೆ ಚಹ ತಿಂಡಿ ಕೊಡುವುದು ಮಾಡುತ್ತಿದ್ದೆವು. ಇನ್ನು ಬೇರೆ ಬೇರೆ ಜಾತಿಯವರು ಬಂದರೆ ಹೊರಗೆ ಹಕ್ಕೆ ಜಗುಲಿಯ ಮೇಲೆ ಕುಳ್ಳಿರಿಸಿ ಚಾ ತಿಂಡಿ ಕೊಡುವುದಿಲ್ಲ ಎಂದು ಯಾವ ಗ್ಯಾರಂಟಿ? ನಮ್ಮೂರಲ್ಲಿ ಹಲವು ಮನೆಗಳಲ್ಲಿ ಜಾತಿಯಲ್ಲಿ ಕೀಳು ಎಂದು ಪಟ್ಟಕಟ್ಟಿ ಹೊರಗೆ ಕುಳ್ಳಿರಿಸಿ ಚಾ ಕೊಡುತ್ತಾರೆ. ಅದು ನಮ್ಮಲ್ಲಿ ಆದರೆ ನಮಗೂ ಉಳಿದವರಿಗೂ ಏನು ವ್ಯತ್ಯಾಸ?” ಎಂದು ತನ್ನ ಭಯ,ಆತಂಕ ವ್ಯಕ್ತಪಡಿಸಿದ.
ಎಂಥ ಅದ್ಭುತ ಆಲೋಚನೆ ಅನ್ನಿಸಿತು. ಹೊರಗೆ ಹಕ್ಕೆ ಜಗಲಿ ಇಲ್ಲದಿದ್ದರೆ ಹೊರಗೆ ಕೂಡ್ರಿಸುವ ಪ್ರಶ್ನೆಯೇ ಇರುವುದಿಲ್ಲ. ಅನಿವಾರ್ಯವಾಗಿಯಾದರೂ ಯಾವುದೇ ಜಾತಿಯವರು ಬಂದರೂ ಒಳಗೇ ಕರೆಯಬೇಕಲ್ಲಾ ಎನ್ನುವುದು ಆತನ ಆಶಯ.
ಹಾಗಾಗುವುದಿಲ್ಲವೆಂದು ನಾವೆಲ್ಲಾ ಭರವಸೆ ಕೊಟ್ಟು ಅವನನ್ನು ಒಪ್ಪಿಸಲಾಯಿತು.
ಹಕ್ಕೆ ಜಗಲಿ ಕಟ್ಟಿದ ಮೇಲೂ ಯಾವುದೇ ಜಾತಿಯವರು, ದಲಿತರು ಮನೆಗೆ ಬಂದರೂ ಒಳಗೆ ಕರೆದು ಚಹಾ ಕೊಟ್ಟಾಗಲೇ ಅವನಿಗೆ ಸಂಶಯ ಪರಿಹಾರವಾಗಿದ್ದು. ಬೇಸಿಗೆಯಲ್ಲಿ ಚಪ್ಪರ ಹಾಕಿದ್ದಾಗ ಆತನೂ ಹೊರಗೆ ಬಂದು ಕುಳಿತುಕೊಳ್ಳುತ್ತಿದ್ದ. ಮೊಮ್ಮಕ್ಕಳೊಂದಿಗೆ ಆಟವಾಡುವಾಗಲೂ ಇಲ್ಲಿ ಕುಳಿತಿರುತಿದ್ದ. ಆತ ಹೊರಗೆ ಕುಳಿತಿರುವಾಗ ಯಾರಾದರೂ ಬಂದರೆ ತಕ್ಷಣ ಒಳಗೆ ಕರೆದುಕೊಂಡು ಹೋಗಿ ಮಂಚದ ಮೇಲೆ ಅಥವಾ ಖುರ್ಚಿಯ ಮೇಲೆ ಕುಳ್ಳಿರಿಸಿ ಮಾತನಾಡುತ್ತಿದ್ದ.
ಹೀಗೆ ಆತನ ಪ್ರತಿ ವ್ಯವಹಾರವೂ ಅತ್ಯಂತ ಸೂಕ್ಷ್ಮವಾಗಿರುತ್ತಿತ್ತು. ಜಾತಿನಿಷ್ಠ ಸಮಾಜದ ಬದಲಾವಣೆಗೆ ತುಡಿಯುವ ಆತನ ಮನಸ್ಸು ಇಂತಹ ಸಣ್ಣ ಸಣ್ಣ ಕಾರ್ಯದಲ್ಲಿಯೂ, ವಿವರಗಳಲ್ಲಿಯೂ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತಿತ್ತು.

ಪ್ರಶಸ್ತಿಯೇ ಬೇಕಾಗಿಲ್ಲ ಎಂದವರನ್ನು ಪ್ರಶಸ್ತಿ ಹುಡುಕಿ ಬಂತು..ನೆನಪು 11

ಪ್ರಶಸ್ತಿಯೇ ಬೇಕಾಗಿಲ್ಲ ಎಂದವರನ್ನು ಪ್ರಶಸ್ತಿ ಹುಡುಕಿ ಬಂತು..

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು 11
‘ಪ್ರಶಸ್ತಿಯೇ ಬೇಕಾಗಿಲ್ಲ. ನನಗೆ ನನ್ನ ವೃತ್ತಿಯಲ್ಲಿ ಸಂಪೂರ್ಣ ಸಂತೃಪ್ತಿ ಇದೆ’
ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ನಿವೃತ್ತನಾಗುವ ವರ್ಷವೇ (1994ರಲ್ಲಿ) ಆತನಿಗೆ ರಾಜ್ಯ ಸರ್ಕಾರ ನೀಡುವ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿತು.
ಇದಕ್ಕೆ ಮೊದಲು 1992-93ರ ರಾಜ್ಯ ಶಿಕ್ಷಣ ಕಲ್ಯಾಣ ಜಿಲ್ಲಾ ಪ್ರಶಸ್ತಿಯು ಬಂದಿತ್ತು.
ಈಗೆಲ್ಲಾ ನಿವೃತ್ತಿಗೆ 10-15 ವರ್ಷ ಇರುವ ಮೊದಲೇ ರಾಜ್ಯ ಪ್ರಶಸ್ತಿ ಪಡೆದುಕೊಳ್ಳುವವರೂ(!)ಇದ್ದಾರೆ. ಹಾಗೆ ಪಡೆದುಕೊಂಡವರೆಲ್ಲಾ ವಶೀಲಿಬಾಜಿ ಹಚ್ಚಿ ಪಡೆದುಕೊಂಡವರು ಎನ್ನುವ ವಾದವೂ ನನ್ನದಲ್ಲ. ನಿಜವಾಗಿ ಸಿಗಬೇಕಾದವರೂ ತುಂಬಾ ಜನ ಇದ್ದರು. ಕೆಲವೊಮ್ಮೆ “ಪ್ರಶಸ್ತಿ ಎಂದರೆ ಕೇಳಿ ಪಡೆಯುವುದು; ಅಲೆದಾಡಿ ಪಡೆಯುವುದು” ಎಂದಾಗಿ ಬಿಟ್ಟಿದೆ.
ಆದರೆ ಅಣ್ಣನ ಕಾರ್ಯವ್ಯಾಪ್ತಿ ನೋಡಿದ ಹಲವರು ಅವನಿಗೆ ಈಗಾಗಲೇ ರಾಜ್ಯ ಶಿಕ್ಷಕ ಪ್ರಶಸ್ತಿ ಬಂದು ಬಿಟ್ಟಿದೆ ಅಂದುಕೊಂಡಿದ್ದರು. ಬರಲಿಲ್ಲ ಎಂದು ಗೊತ್ತಾದಾಗ ಆಶ್ಚರ್ಯದಿಂದ ಯಾಕೆ ಇನ್ನೂ ಬಂದಿಲ್ಲ ಎಂದು ಕೇಳುತ್ತಿದ್ದರು. ಆತ “ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವ ಹರಕತ್ತು ತನಗಿಲ್ಲ. ಪ್ರಶಸ್ತಿ ಯಾರನ್ನೂ ದೊಡ್ಡವರನ್ನಾಗಿಸುವುದಿಲ್ಲ. ನನಗೆ ನನ್ನ ವೃತ್ತಿಯಲ್ಲಿ ಸಂಪೂರ್ಣ ಸಂತೃಪ್ತಿ ಇದೆ.” ಎಂದು ಹೇಳುತ್ತಿದ್ದ.
ಪ್ರಶಸ್ತಿ ಬಂದಿಲ್ಲವೆಂದು ಅವನ ಆತ್ಮೀಯರು ಬೇಸರ ಪಟ್ಟಿದ್ದಿದೆಯೇ ಹೊರತು ಅವನೆಂದೂ ತಲೆಕೆಡಿಸಿಕೊಂಡಿದ್ದಿಲ್ಲ. ಒಂದೆರಡು ಬಾರಿ ಆತನ ಇಲಾಖೆಯಿಂದ ಸೂಚನೆ ಬಂದಾಗಲೂ ಅರ್ಜಿ ಹಾಕಿ ಪಡೆಯುವ ಪ್ರಕ್ರಿಯೆಯನ್ನೇ ಆತ ವಿರೋಧಿಸಿದ್ದ.
ಒಂದು ದಿನ ಉತ್ತರ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ (ಡಿ.ಡಿ.ಪಿ.ಐ) ಶ್ರೀ. ಜಿ.ಎಲ್. ಹೆಗಡೆಯವರೂ ಅಣ್ಣನೂ ಒಂದು ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡಿರುವಾಗ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಅರ್ಜಿ ತುಂಬಿ ಕೊಡುವಂತೆ ಸೂಚಿಸಿದರು.
ಈ ಮೊದಲೇ ಶಿಕ್ಷಕರಿಗೆ ನೀಡುವ ವಾಜಂತ್ರಿ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ಹಾಗೂ ಕೊಗ್ರೆ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ ಬಂದಿದ್ದು ಅವರಿಗೆ ತಿಳಿದಿತ್ತು. ಅವರು ಒಬ್ಬ ಪ್ರಾಮಾಣಿಕ ಅಧಿಕಾರಿಯೆಂದೂ ಯಾವ ರಾಜಕೀಯ ಒತ್ತಡಕ್ಕೆ ಒಳಗಾಗುವ ವ್ಯಕ್ತಿಯಲ್ಲವೆಂದೂ ಪ್ರಸಿದ್ಧರಾಗಿದ್ದರು. ನಂತರ ಅವರು ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರೂ ಆಗಿ ನಿವೃತ್ತರಾದರು.
ಶ್ರೀ ಜಿ.ಎಲ್. ಹೆಗಡೆಯವರಿಗೆ ಅಣ್ಣನ ಬಗ್ಗೆ ಅಪಾರ ಗೌರವ. ‘ಆರ್.ವಿ ಯಂಥವರು ನಮ್ಮ ಇಲಾಖೆಗೆ ಗೌರವ’ ಎಂದು ಅವರು ಹಲವರಲ್ಲಿ ಹೇಳಿದ್ದಿದೆ. ಮೇಲಾಧಿಕಾರಿಗಳ ಈ ಸೂಚನೆಯನ್ನೂ ಆತ ವಿನಯದಿಂದ ತಿರಸ್ಕರಿಸಿದ್ದ.
ಆಮೇಲೆ ಬೇರೆ ದಾರಿ ಕಾಣದೇ ಶ್ರೀ. ಜಿ.ಎಲ್. ಹೆಗಡೆಯವರು ಕಾರವಾರದಿಂದ ಹೊನ್ನಾವರಕ್ಕೆ ಬಂದಾಗಲೂ ಇದೇ ಆತಂಕವನ್ನು ಆತ ವ್ಯಕ್ತಪಡಿಸಿದಾಗ (ಬಹುಶಃ ನಮ್ಮ ಮನೆಗೆ ಬಂದಿದ್ದರೆಂದು ನನ್ನ ನೆನಪು.) ‘ನಿನಗೆಲ್ಲಿ ಅರ್ಜಿ ಹಾಕಲು ಹೇಳಿದರು? ಮಾಹಿತಿ ತರಿಸಿಕೊಳ್ಳುವುದು ನನ್ನ ಕೆಲಸ. ಇಲ್ಲಿ ಬಂದು ನಾನು ಮಾಡಲಾಗುತ್ತದೆಯೇ? ಮಾಹಿತಿ ಕಳಿಸಿ. ಈ ಅರ್ಜಿ ನೀವು ತುಂಬ ಬೇಕಾಗಿದ್ದಲ್ಲ. ಯಾವ ಶಿಕ್ಷಕನೂ ತಮ್ಮ ಅರ್ಜಿಯನ್ನು ತಾವೇ ಹಾಕಿ ಪ್ರಶಸ್ತಿ ಪಡೆಯುವುದಲ್ಲ.
ಇದು ನಿಮ್ಮ ತಪ್ಪು ಅಭಿಪ್ರಾಯ. ಅದನ್ನು ನಮ್ಮ ಅಧಿಕಾರಿಗಳು ಮಾಡಬೇಕು. ಆದರೆ ಅವರು ತಮ್ಮ ಕೆಲಸ ತಪ್ಪಿಸಿಕೊಳ್ಳಲು ನಿಮಗೆ ಹೇಳಿ ಬಿಡುತ್ತಾರೆ. ಡಿ.ಡಿ.ಪಿ.ಐ ಆಗಿ ನಾನು ತುಂಬಬೇಕು. ಆದರೆ ನಿಮ್ಮ ಹಲವು ಚಟುವಟಿಕೆಯ ವಿವರವಾಗಲಿ, ನೀವು ಸಲ್ಲಿಸಬೇಕಾದ ಶಾಲಾ ಚಟುವಟಿಕೆಗಳ ವಿವರವಾಗಲಿ ನನ್ನಲ್ಲಿ ಇರಲು ಹೇಗೆ ಸಾಧ್ಯ? ನಾನು ಇಲಾಖೆಗೆ ಸಲ್ಲಿಸಬೇಕಾದ ನಿಮ್ಮ ವಿವರವನ್ನು ನನ್ನ ಪರವಾಗಿ ನೀವು ಸಂಗ್ರಹಿಸಿ ನನಗೆ ಕೊಡಿ. ನಾನು ಮುಂದೆ ಕಳಿಸಬೇಕೋ ಬೇಡವೋ ಎಂದು ತೀರ್ಮಾನಿಸುತ್ತೇನೆ.” ಎಂದು ವಿನಂತಿಸಿದ ಮೇಲೆ ಆತ ಇದಕ್ಕೆ ಒಪ್ಪಿದ.
ಆತ ಒಪ್ಪಿದ್ದು ನನಗಂತೂ ತುಂಬಾ ಖುಷಿಯಾಯಿತು. ಆಗ ತಾನೆ ಎಂ.ಎ ಮುಗಿಸಿ ಬಂದಿದ್ದೆ. ಹಲವು ದಾಖಲೆ ಸಂಗ್ರಹಿಸುವಲ್ಲಿ ನಾನೂ ಸಹಕರಿಸಿದೆ. ಪ್ರತಿಗಳನ್ನು ಮಾಡಿ ನಾನು ಕಾರವಾರ ಡಿ.ಡಿ.ಪಿ.ಐ ಕಛೇರಿಗೆ ಸಲ್ಲಿಸಿ ಬಂದೆ. “ನಿನ್ನ ಅಪ್ಪನಿಂದ ಈ ಕೆಲಸ ಮಾಡಿಸಲು ನಾನು ಸುಸ್ತಾದೆ” ಎಂದು ಹೇಳಿ ತಂದ ದಾಖಲೆಯನ್ನು ಟೇಬಲ್ ಮೇಲೆ ಇರಿಸಲು ಹೇಳಿದರು. ಇಷ್ಟರ ಒಳಗೇ ಕೆಲವು ಶಿಕ್ಷಕರು ಯಾವ ಒತ್ತಾಯವೂ ಇಲ್ಲದೇ ತಾವೇ ಸಿದ್ಧಪಡಿಸಿಕೊಂಡು ಬಂದು ಸಲ್ಲಿಸಿದ 3-4 ಅರ್ಜಿಗಳು ಅವರ ಟೇಬಲ್ ಮೇಲೆ ಅನಾಥವಾಗಿ ಬಿದ್ದಿದ್ದವು.
ಅಣ್ಣ ಸಲ್ಲಿಸಿದ ದಾಖಲೆಯೇ ಸುಮಾರು ಇನ್ನೂರುಮುನ್ನೂರು ಪುಟ ಆಗಿತ್ತು. ಝೆರಾಕ್ಸ ಮಾಡಿಸಲು ಹಣ ಖರ್ಚಾಗುತ್ತದೆ ಎಂದು ಹಲವು ಡಾಕ್ಯುಮೆಂಟ್ ಗಳನ್ನು ಕೈಬಿಡಲಾಗಿತ್ತು. ಮನೆಯಲ್ಲಿ ಇದ್ದ ಒಂದು ಪ್ರತಿ ವರಲೆ ಹಿಡಿದು ಹಾಳಾಯಿತು. ಆತನ ಶೈಕ್ಷಣಿಕ ಹಿರಿಮೆಯ ಕುರಿತು ಇರುವ ಹಲವು ದಾಖಲೆಗಳು ಇದರೊಂದಿಗೆ ನೇಪಥ್ಯಕ್ಕೆ ಸರಿಯಿತು. ಅಣ್ಣ ನಮ್ಮೊಂದಿಗೆ ಇರುವವರೆಗೂ ಇದು ಮುಖ್ಯ ಅನಿಸಲೇ ಇಲ್ಲ. ಆಮೇಲೆ ಕೆಲವು ವರ್ಷಗಳ ಹಿಂದೆ ಡಿಡಿಪಿಐ ಮತ್ತು ಬಿಇಓ ಕಛೇರಿಯಲ್ಲಿ ಅರಸಿದರೂ ಅದರ ಕಛೇರಿ ಪ್ರತಿಗಳು ಕೂಡ ಸಿಕ್ಕಲೇ ಇಲ್ಲ.
ಈ ಬಾರಿ ಡಾ. ಎಚ್. ನರಸಿಂಹಯ್ಯನವರು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರೆಂದೂ, ಯಾರಿಗೂ, ಮೂಗುತೂರುವ ಅವಕಾಶ ಇದ್ದಿರಲಿಲ್ಲವೆಂದೂ ತಿಳಿಯಿತು. ಈತನ ವಿವರ ನೋಡಿದ ಡಾ. ಎಚ್. ನರಸಿಂಹಯ್ಯನವರೇ ಸ್ವತಃ ಜಿ.ಎಲ್.ಹೆಗಡೆಯವರಿಗೆ ಎರಡು ಸಲ ಫೋನ್ ಮಾಡಿ ಖಾತ್ರಿ ಮಾಡಿಕೊಂಡರಂತೆ.
ಅದೇ ವರ್ಷ(1994 ರಲ್ಲಿ) ಆತನಿಗೆ ರಾಜ್ಯ ಪ್ರಶಸ್ತಿ ಬಂತು. ಆಗಿನ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯಿಲಿಯವರ ಕೈಯಿಂದ ಅದನ್ನು ಸ್ವೀಕರಿಸಿದ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಾನು ಹೋಗಬೇಕಾಗಿತ್ತು ಎಂದು ಈಗ ಅನ್ನಿಸುತ್ತದೆ. ಹೋಗಿರಲಿಲ್ಲ ನಾನು.
ಎಚ್ ನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ಸಿಕ್ಕ ಪ್ರಶಸ್ತಿಯೆನ್ನುವ ಕಾರಣಕ್ಕೂ ಲಂಚ, ಪ್ರಭಾವ ಮುಂತಾದ ಕೆಟ್ಟ ರಾಜಕೀಯವೇ ಪ್ರಶಸ್ತಿ ಕೊಡುವಲ್ಲಿ ಕೆಲಸ ಮಾಡುತ್ತದೆ ಎಂಬ ಪ್ರಚಾರದ ವಾತಾವರಣ ಇರುವಾಗ ಅದ್ಯಾವುದೂ ಇಲ್ಲದೇ ತನ್ನನ್ನು ಗುರುತಿಸಿದ ಬಗ್ಗೆ ಆತನಿಗೆ ಖುಶಿಯಿತ್ತು. ಹಾಗೆ ನೋಡಿದರೆ ಪ್ರಶಸ್ತಿ ಬಂದಿರುವುದು ಆತನಿಗಿಂತ ಆತನ ಸ್ನೇಹಿತರಿಗೆ ಖುಶಿ ಕೊಟ್ಟಿತ್ತು.
ಆಗೇನಾದರೂ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಿದ್ದರೆ ಅದನ್ನು ತಿರಸ್ಕರಿಸುತ್ತಿದ್ದನೋ ಏನೋ !?
ಅವನು ಶಿಕ್ಷಕನಾಗಿ ಮಾಡಿದ ಹಲವು ಪ್ರಯೋಗಗಳು, ಶಾಲೆಯಾಚೆ ಮಾಡಿದ ಸಾಹಿತ್ಯ-ಸಾಂಸ್ಕೃತಿಕ ಕೆಲಸಗಳು ಆತನ್ನು ಆದರ್ಶ ಶಿಕ್ಷಕನನ್ನಾಗಿಸಿದ್ದವು. ಅಣ್ಣನಂತೆ ಶಿಕ್ಷಕನಾಗಬೇಕೆಂದು ಅನ್ನಿಸಿದ್ದು ಕೂಡ ಆಗಲೇ.
ಬಹುಶಃ 3-4 ಪ್ರಶಸ್ತಿ ಕೊಡಬಹುದಾದಷ್ಟು ಮಹತ್ವದ ವಿವರಗಳಿದ್ದವು. ರಾಜ್ಯ ಸರ್ಕಾರ ಮುತುವರ್ಜಿಯಿಂದ ರಾಷ್ಟ್ರ ಪ್ರಶಸ್ತಿಗೆ ಇದೇ ವಿವರಗಳನ್ನು ಕಳಿಸಿದ್ದರೂ ಆತನಿಗೆ ಮಹತ್ವದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯೂ ಸಿಗಬಹುದಾಗಿತ್ತು. ಆದರೆ ಸಿಗಲಿಲ್ಲ. ಇದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನಕ್ಕೆ ಒಂದು ಉದಾಹರಣೆ ಅಷ್ಟೆ.

ಇಂತಹ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನನಗೆ ಬೇಡ..

ಇಂತಹ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ನನಗೆ ಬೇಡ..

ನನ್ನ ಅಪ್ಪ ಆರ್ ವಿ ಭಂಡಾರಿ..
ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

ನೆನಪು: 10
ರಾಜ್ಯೋತ್ಸವ ಪ್ರಶಸ್ತಿ ಶಿಫಾರಸ್ಸಿಗೆ ವಿರೋಧ
ಅಣ್ಣ ಎಂದೂ ಪ್ರಶಸ್ತಿಗಳ ಹಿಂದೆ ಬಿದ್ದವನಲ್ಲ.
ಆ ಮಟ್ಟಿಗೆ ಆತ ಒಬ್ಬ ಸಂತನಂತಿದ್ದ. ಯಾವುದೇ ಪ್ರಶಸ್ತಿಯ ಪ್ರಸ್ತಾವನೆ ಬಂದರೂ ಬೇರೆ ಯಾರನ್ನೋ ತೋರಿಸುತ್ತಿದ್ದ.
‘ಪ್ರತಿಸಲ ನೀನು ಪ್ರಶಸ್ತಿಗೆ ಬೇರೆಯವರನ್ನೇ ಬೆರಳು ಮಾಡಿ ತೋರಿಸುತ್ತೀಯಲ್ಲಾ ಯಾಕೆ?’ ಎಂದು ನಾನು ಹಲವು ಬಾರಿ ಅಸಮಾಧಾನದಲ್ಲಿ ಪ್ರಶ್ನಿಸಿದ್ದಿದೆ.
ಆಗೆಲ್ಲ ಆತ “ನಾನೇನು ಕರ್ನಾಟಕದ ಮೇಜರ್ ರೈಟರ್ ಅಲ್ಲ. ಜಿಲ್ಲೆಯಲ್ಲಿ ಹಿರಿಯ ಇರಬಹುದು. ಆದರೆ ನಾನಿನ್ನೂ ಬರೆಯಬೇಕಾದುದು ಬಹಳ ಇದೆ. ಅದಾದಮೇಲೆ ನೋಡೋಣ. ಹೊಸ ತಲೆಮಾರಿನ ಲೇಖಕರಿಗೆ ಅದು ಮೊದಲು ಸಿಗಬೇಕು. ಬಂದ ಪ್ರಶಸ್ತಿ ನಮ್ಮನ್ನು ಚಿಕ್ಕವರನ್ನಾಗಿಸಬಾರದು.” ಎನ್ನುತ್ತಿದ್ದ. “ನಾನಿನ್ನೂ ಬರೆಯಬೇಕಾದುದು ತುಂಬಾ ಇದೆ; ಈ ಶಾಲೆಯ ಕೆಲಸದಲ್ಲಿ ಅದು ಸಾಧ್ಯವಾಗುತ್ತಿಲ್ಲ’ ಎಂಬ ಕೊರಗು ಅವನಿಗೆ ಇದ್ದೇ ಇತ್ತು.
ಇದೆಲ್ಲದರ ಆಚೆಯೂ ಅವನಿಗೆ ವಾಜಂತ್ರಿ ಪ್ರಶಸ್ತಿ, ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯ ಶಿಕ್ಷಣ ಕಲ್ಯಾಣ ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ, ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ, ಸಿಸು ಸಂಗಮೇಶ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಫೆಲೋಶಿಪ್, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಮತ್ತು ವಾರ್ಷಿಕ ಗೌರವ ಪ್ರಶಸ್ತಿ…. ಹೀಗೆ ಹಲವು ಪ್ರಶಸ್ತಿಗಳು ಅವನ ಬದುಕಿನ ಕೊನೆಯ ಹಂತದಲ್ಲಿ ಬಂದಿದ್ದವು.
ಇದ್ಯಾವುದೂ ಅವನು ಒಪ್ಪಿಗೆ ಪಡೆದು ಕೊಟ್ಟಿದ್ದಲ್ಲ. ಹಾಗೇನಾದರೂ ಸಂಘಟಕರು ಮೊದಲೇ ಕೇಳಿದ್ದರೆ ಈತ ಅದನ್ನು ಬೇರೆಯವರಿಗೆ ಕೊಡಿಸುತ್ತಿದ್ದನೇನೋ!!. ಶಿಕ್ಷಕ ಪ್ರಶಸ್ತಿ ಬಂದಾಗ, ಅಕಾಡೆಮಿ ಪ್ರಶಸ್ತಿ ಬಂದಾಗ ಹಲವರು ಅವನಿಗೆ ಸನ್ಮಾನಿಸಲು ಸನ್ಮಾನ ಸಮಾರಂಭ ನಿಗದಿ ಮಾಡಿಕೊಂಡು ಬರುತ್ತಿದ್ದರು. ನಿರಾಸೆಯಿಂದ ಹಿಂತಿರುಗುತ್ತಿದ್ದರು. ಕೆಲವರು ಮೊದಲೇ ನನ್ನನ್ನು ಭೇಟಿ ಆಗಿ ಆತನನ್ನು ಒಪ್ಪಿಸಲು ಹೇಳುತ್ತಿದ್ದರು. ಯಾರು ಹೇಳಿದರೂ ಅಷ್ಟೆ. ಆತನ್ನು ಅತಿಥಿಯೆಂದು ಕರೆದು ಆತನಿಗೆ ಮೊದಲೇ ಗೊತ್ತಾಗದಂತೆ ಸನ್ಮಾನ ಮಾಡಬೇಕು ಅಷ್ಟೆ!
ಆದರೆ ಅವನಿಗೆ ಸಿಗಬೇಕಾದ ಪ್ರಶಸ್ತಿಗಳಲ್ಲಿ ಒಂದಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ – ಈ ಪ್ರಶಸ್ತಿ ಪಡೆದವರನ್ನು ಸಂಶಯದಿಂದ ನೋಡುವ ಸ್ಥಿತಿ ಇತ್ತು. ಅಪಾತ್ರರೇ ತುಂಬಿ ತುಳುಕುತ್ತ ಪ್ರಶಸ್ತಿ ತನ್ನ ಮೌಲ್ಯ ಕಳೆದುಕೊಂಡಿದ್ದು ಒಂದು ದೊಡ್ಡ ಕತೆ.
ಆದರೆ ಇತ್ತೀಚೆಗೆ ಅದು ಸ್ವಲ್ಪ ಸರಿದಾರಿಗೆ ಬರುವಂತಿದೆ.- ನೀಡಬಹುದಾಗಿತ್ತು. ಆದರೆ ಬೆಂಗಳೂರಿನ ಆತನ ಯಾವ ಸ್ನೇಹಿತರಾಗಲಿ, ಕನ್ನಡ ಸಂಸ್ಕೃತಿ ಇಲಾಖೆಯಾಗಲಿ ಈತನ ಹೆಸರನ್ನು ಬಹುಕಾಲ ಸೂಚಿಸಿದಂತಿಲ್ಲ. (ಸೂಚಿಸಿದ್ದರೆ ಆತನ ವ್ಯಕ್ತಿ ವಿವರವನ್ನಾದರೂ ನನ್ನಲ್ಲಿ ಕೇಳುತ್ತಿದ್ದರು.) ನಾನು ನಮ್ಮ ಜಿಲ್ಲೆಯ ಕೆಲವು ಅರ್ಹರ ಹೆಸರನ್ನು ಸೂಚಿಸಿ ಅಗತ್ಯ ಮಾಹಿತಿ ನೀಡಿದ್ದಿದೆ. ಹಾಗೆ ನೀಡಿದವರಲ್ಲಿ ಹಲವರಿಗೆ ಪ್ರಶಸ್ತಿಯೂ ಬಂದಿದೆ. ಹೀಗಿದ್ದೂ ಅಣ್ಣನ ಹೆಸರನ್ನು ನಾನು ಪ್ರಶಸ್ತಿಗಾಗಿ ಸೂಚಿಸುವುದಕ್ಕೆ ನನ್ನ ಮನಸ್ಸು ಒಪ್ಪಲಿಲ್ಲ. ಒಂದು ರೀತಿಯಲ್ಲಿ ಅಣ್ಣ ಪಾಲಿಸಿಕೊಂಡು ಬಂದ ತತ್ವಕ್ಕೆ ಇದು ವಿರುದ್ಧವಾಗಿತ್ತು.
ಬಹುಶಃ 2006-07 ಇರಬೇಕು. ಬೆಂಗಳೂರಿನ ಒಬ್ಬ ಸ್ನೇಹಿತರು ಫೋನ್ ಮಾಡಿ ಆರ್.ವಿ ಯವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಸೂಚಿಸುವುದಾಗಿಯೂ, ಆತನ ಬಗ್ಗೆ ವಿವರ ಕಳಿಸಿಕೊಡಬೇಕೆಂದು ಕೇಳಿದರು. ಅವನಿಗೆ ಗೊತ್ತಿಲ್ಲದೇ ಕಳುಹಿಸಿ ಬಿಡಬೇಕೆಂದುಕೊಂಡಿದ್ದೆ. ಆದರೆ ಈವರೆಗೆ ಯಾವುದನ್ನೂ ಆತನ ಒಪ್ಪಿಗೆ ಇಲ್ಲದೇ ಮಾಡದಿರುವುದರಿಂದ ಇದನ್ನೂ ಅವನಿಗೆ ಹೇಳಿ ಒಪ್ಪಿಗೆ ಕೇಳಿದೆ.
ಆತ ನಗುತ್ತಲೇ ಇದನ್ನು ತಿರಸ್ಕರಿಸಿದ ಮತ್ತು ಇದಕ್ಕೆ ಆತ ನೀಡಿದ ಕಾರಣ ಇದು: “ಯಾರೇ ಆಯ್ಕೆ ಮಾಡಿದರೂ ಅದು ರಾಜ್ಯ ಸರ್ಕಾರ ನೀಡುವ ಪ್ರಶಸ್ತಿ. ಅಕಾಡೆಮಿಯಂಥ ಸ್ವಾಯತ್ತ ಸಂಸ್ಥೆ ನೀಡುವಂತಹುದಲ್ಲ. ರಾಜ್ಯದ ಮುಖ್ಯಮಂತ್ರಿಯ ಕೈಯ್ಯಲ್ಲಿ ಈ ಪ್ರಶಸ್ತಿ ಸ್ವೀಕರಿಸಬೇಕು. ರಾಜ್ಯದಲ್ಲಿ ಈಗ ಎಚ್. ಡಿ. ಕುಮಾರ ಸ್ವಾಮಿ ಮತ್ತು ಬಿ. ಎಸ್. ಯಡಿಯೂರಪ್ಪ ನಾಯಕತ್ವದ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದೆ. ನಾವೆಲ್ಲ ಬೆಂಬಲಿಸಿದ ಜಾತ್ಯತೀತ ಸರ್ಕಾರವೊಂದು ನಾವು ಜೀವನ ಪರ್ಯಂತ ವಿರೋಧಿಸಿದ ಕೋಮುವಾದಿ ಬಿಜೆಪಿ ಸರ್ಕಾರದೊಟ್ಟಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದೆ. ಯಾವುದನ್ನು ನಾನು ತಾತ್ವಿಕವಾಗಿಯೂ ಪ್ರಾಯೋಗಿಕವಾಗಿಯೂ ವಿರೋಧಿಸುತ್ತಿದ್ದೇನೋ ಅದೇ ಸರ್ಕಾರ ರಾಜ್ಯದಲ್ಲಿ ಇರುವಾಗ ನನಗೆ ಅವರು ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಲು ಮನಸ್ಸು ಬರುತ್ತಿಲ್ಲ.” ಎಂದು ಖಡಾಖಂಡಿತವಾಗಿ ಹೇಳಿದ.
“ಅಧಿಕಾರಕ್ಕಾಗಿ ಬಿಜೆಪಿಯ ಜೊತೆಗೆ ಕೈಜೋಡಿಸಿದ್ದು ಈ ನಾಡಿಗೆ ಜಾತ್ಯಾತೀತ ಜನತಾದಳ ಬಗೆದ ದ್ರೋಹ ಇದು. ಸಾಂಸ್ಕೃತಿಕ ಐಕ್ಯತೆಗೆ ಇದು ಅಪಾಯಕಾರಿ. ಇತ್ತೀಚಿನ ರಾಜಕೀಯ ನಡೆಯ ಬಗ್ಗೆ ನನ್ನ ಮನಸ್ಸು ಕಳವಳದಲ್ಲಿದೆ. ಇಂಥ ಹೊತ್ತಿನಲ್ಲಿ ಒಮ್ಮೆ ಪ್ರಶಸ್ತಿ ಬಂದುಬಿಟ್ಟರೆ …. ಮನಸ್ಸು ಒಪ್ಪುತ್ತಿಲ್ಲ, ಬೇಡ” ಎಂದು ಹೇಳಿದ.
ಅವನಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಗ್ಗೆ ತೀರಾ ನೋವಿತ್ತು. ಆ ಸಂದರ್ಭದಲ್ಲಿ ಆತ ಕೋಮುವಾದದ ಅಪಾಯದ ಬಗ್ಗೆ ತುಂಬಾ ಲೇಖನ ಬರೆದ ಮತ್ತು ಪತ್ರಿಕೆಯಲ್ಲಿ ಸಾಧ್ಯವಾದಾಗಲೆಲ್ಲ ಪ್ರತಿಕ್ರಿಯೆ ಬರೆದ. ಈ ಬಗ್ಗೆ ಮತ್ತೊಮ್ಮೆ ಕೇಳಿದಾಗಲೂ “ಈ ಸರ್ಕಾರದವರು ನನಗೆ ಕೊಡುವುದಿಲ್ಲ ಬಿಡು. ನನಗೆ ಒಮ್ಮೆ ಬಂದರೂ ನಾನು ತಿರಸ್ಕರಿಸಿ ಹೇಳಿಕೆ ನೀಡುತ್ತೇನೆ. ಆಗ ನನ್ನ ಹೆಸರು ಸೂಚಿಸಿದವರಿಗೆ ಮುಜುಗರ ಆಗಬಹುದು.” ಎಂದಾಗ ಆ ವಿಚಾರವನ್ನೇ ಕೈಬಿಟ್ಟೆವು.
ಮುಂದೆ ಯಾವಾಗಾದರೂ ನೋಡೋಣ ಎಂದುಕೊಂಡೆವು. ಆದರೆ ಮುಂದೆ ಅಂತದ್ದೊಂದು ದಿನ ಬರಲಿಲ್ಲ. ಬರದಿದ್ದ ಬಗ್ಗೆ ಕೂಡ ಬೇಸರವಿಲ್ಲ.
ಹಾಗಾಗಿ ಯಾವ ಸಂದರ್ಭದಲ್ಲೂ ತಾನು ನಂಬಿದ ತತ್ವದ ವಿರುದ್ಧ ನಡೆಯದ ಯಾವ ಆಮಿಷಕ್ಕೂ ತನ್ನ ತತ್ವವನ್ನು ಬಲಿಕೊಡದ ಅವನ ಗಟ್ಟಿತನ ಯಾವಾಗಲೂ ನಮಗೆ ಆದರ್ಶವೇ ಆಗಿದೆ.

ಯಾಕಾದರೂ ಆರ್.ವಿ. ಭಂಡಾರಿಯ ಮಗನಾದೆ ಎನಿಸುತ್ತಿತ್ತು..ವಿಠ್ಠಲ ಭಂಡಾರಿ

ಯಾಕಾದರೂ ಆರ್.ವಿ. ಭಂಡಾರಿಯ ಮಗನಾದೆ ಎನಿಸುತ್ತಿತ್ತು..

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು 7
ಭಾಷಣ ಕಲಿತಿದ್ದು
ಅಣ್ಣ ಆ ಕಾಲದ, ಆ ಭಾಗದ ಒಳ್ಳೆಯ ಭಾಷಣಕಾರನಾಗಿದ್ದ.
ಎಷ್ಟೇ ಜನರಿದ್ದರೂ ತನ್ನತ್ತ ಸೆಳೆದುಕೊಳ್ಳುವ ಕಂಚಿನ ಕಂಠ, ಯಾವ ಸಂಗತಿಯನ್ನೂ ಹೊಸ ರೀತಿಯಲ್ಲಿ ಆಕರ್ಷಕವಾಗಿ ಹೇಳುವ ಕಲೆ, ಸಾಮಾನ್ಯ ಸಂಗತಿಯನ್ನೂ ಹೊಸ ಆಯಾಮದಲ್ಲಿ ತೆರೆದಿಡುವ ಆತ್ಮ ವಿಶ್ವಾಸ, ಮಾತಿಗೆ ಮುಕ್ತಾಯಕ್ಕೆ ಕೊಡುವ ಒಂದು ಸಣ್ಣ ಭಾವನಾತ್ಮ ಸ್ಪರ್ಷ… ಆತ ಈ ಕಾರಣಕ್ಕಾಗಿ ಜಿಲ್ಲೆಯಲ್ಲಿಯೇ ಪ್ರಸಿದ್ದನಾಗಿದ್ದ.
ಇವನಂತೆ ಜಿ.ಎಸ್. ಅವಧಾನಿಯವರು ಮತ್ತು ಜಿ.ಯು.ಭಟ್ ಅವರು ಕೂಡ ಬಹು ಬೇಡಿಕೆಯ ಭಾಷಣಕಾರರಾಗಿದ್ದರು. ಆತನ ಬರವಣಿಗೆ ಕೂಡ ಆಕರ್ಷಕವಾದದ್ದೇ ಆಗಿತ್ತು. ಎಲ್ಲೇ ಭಾಷಣ ಸ್ಪರ್ಧೆಯಾಗಲಿ, ಪ್ರಬಂಧ ಸ್ಪರ್ಧೆಯಾಗಲಿ ಆತನಲ್ಲಿ ಹಲವರು ಬಂದು ಬರೆಸಿಕೊಂಡು ಹೋಗುತ್ತಿದ್ದರು. ಅದನ್ನೆಲ್ಲಾ ಕಾಯ್ದಿಟ್ಟರೆ ಒಂದು ಸಂಪುಟವೇ ಆಗಿಬಿಡುತ್ತಿತ್ತು. ಯಾರಿಗೂ ಇಲ್ಲ ಎನ್ನುತ್ತಿರಲಿಲ್ಲ. ಭಂಡಾರಿ ಮಾಸ್ತರರ ಹತ್ತಿರ ಭಾಷಣ ಬರೆಸಿಕೊಂಡರೆ ಬಹುಮಾನ ಬರುತ್ತದೆಂದು ಪ್ರತೀತಿಯೇ ಬಿದ್ದಿತ್ತು.
ನಾನು ಭಾಷಣ ಮಾಡಲು ಸ್ವಲ್ಪಮಟ್ಟಿಗೆ ಕಲಿತದ್ದು ಪ್ರಾಥಮಿಕ ಶಾಲೆಯಲ್ಲಿ. ಮೊದಲಬಾರಿಗೆ ಸ್ಟೇಜು ಹತ್ತಿದಾಗ ಜನರೆದುರು ನಿಲ್ಲುವುದೆಂದರೇ ಕೈಕಾಲು ನಡುಗುತ್ತಿತ್ತು. ಬಾಯಿ ಪಾಠ ಮಾಡಿದ್ದು ಮರೆತು ಹೋಗುತ್ತಿತ್ತು. ಕನ್ನಡ ಶಾಲೆಯಲ್ಲಿ ಆಟೋಟ ಸ್ಪರ್ಧೆಯಿದ್ದಾಗ ನನ್ನನ್ನು ಹೆಚ್ಚು ಸೇರಿಸುತ್ತಿರಲಿಲ್ಲ. ನಮ್ಮ ಶಾಲೆಯ ಶಾಸ್ತ್ರೀ ಮಾಸ್ತರರು ನನ್ನನ್ನೇ ಸಾಂಸ್ಕೃತಿಕ ಕಾರ್ಯದರ್ಶಿ ಮಾಡುತ್ತಿದ್ದರು. ಯಾಕೆಂದರೆ ನಾನು ಆರ್.ವಿ. ಭಂಡಾರಿಯವರ ಮಗ ಆಗಿರುವುದರಿಂದ. ನನ್ನನ್ನು ಕೇಳದೇ ಭಾಷಣ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗೆ ಹೆಸರನ್ನು ಮೊದಲೇ ಹಚ್ಚಿಡುತ್ತಿದ್ದರು.
ಅಣ್ಣನ ಮಗನಾಗಿದ್ದುದರಿಂದ ನನಗೆ ಜನ್ಮದತ್ತವಾಗಿ ಇಂತಹ ಕೆಲವು ಅರ್ಹತೆಗಳು ಬಂದು ಬಿಟ್ಟಿದ್ದವು!!??. ಇದೇ ಪೀಕಲಾಟಕ್ಕೆ ಕಾರಣ ಆಗುತ್ತಿದ್ದುದು. ಒಮ್ಮೆ ಇನ್ಸ್ಪೆಕ್ಟರ್ (ಕೆಲವು ವರ್ಷ ಇನ್ಸ್ಪೆಕ್ಟರ್ ಎನ್ನಲು ವಿನಾಯಕ ಭಟ್ ಎನ್ನುತ್ತಿದ್ದೆವು.) ಬಂದಾಗ ಏಕಾಏಕಿ ಸ್ವಾಗತ ಭಾಷಣ ಮಾಡು ಎಂದು ಬಿಟ್ಟರು.
ಅವರು ಹಿಂದಿನಿಂದ ಹೇಳಿಕೊಡುವುದು ನಾನು ಜೀವ ಎಡಕೈಲಿ ಕಟ್ಟಿಕೊಂಡು ಹೇಳುವುದು. ಮುಂದಿದ್ದ ಹುಡುಗರು ಶಾಸ್ತ್ರಿ ಮಾಸ್ತರರ ಭಯಕ್ಕೆ ದೊಡ್ಡದಾಗಿ ನಗುತ್ತಿರಲಿಲ್ಲ. ಮೇಲಿಂದ ಈತ ಭಂಡಾರಿ ಮಾಸ್ತರರ ಮಗನೆಂದು ಅವರಿಗೆ ಹೇಳುವುದು. ಅವರು ನನಗೆ ಪ್ರಶ್ನೆ ಕೇಳುವುದು. ಆಗೆಲ್ಲಾ ಯಾಕಾದರೂ ಆರ್.ವಿ. ಭಂಡಾರಿಯ ಮಗನಾದೆ ಎನಿಸುತ್ತಿತ್ತು.
ನನ್ನ ಭಾಷಣವನ್ನು ಅಣ್ಣನ ಭಾಷಣಕ್ಕೆ ಹೋಲಿಸುತ್ತಿದ್ದರು. ಆತನ ಮರ್ಯಾದೆ ಕಾಪಾಡಲು ಸ್ಟೇಜಿನ ಮೇಲೆ ನಿಲ್ಲುವುದು ಅನಿವಾರ್ಯವಾಯಿತು. ಬಹುಶಃ 6 ನೇ ತರಗತಿಯಲ್ಲಿ “ಉತ್ಥಾನಪಾದ ಮತ್ತು ಸುರುಚಿಯ ಮಗ ಧ್ರುವ. ಅವನೆದುರು ಪ್ರತ್ಯಕ್ಷನಾದ ದೇವರು ‘ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಮಗು. . . .’ ಎಂದು ಒಂದಿಷ್ಟು ಕಂಠಪಾಠ ಮಾಡಿಕೊಂಡು ಹೊನ್ನಾವರದಲ್ಲಿ ಎರಡೋ ಮೂರೋ ಬಹುಮಾನ ತಂದೆ. ಒಂದಿಷ್ಟು ವಿಶ್ವಾಸ ಬಂತು.
ಕಾಲೇಜಿಗೆ ಹೋದಾಗಲೂ ಹಾಗೆಯೇ. ಅಪ್ಪನ ಹಾಗೆ ಭಾಷಣ ಮಾಡುವುದಿಲ್ಲ ಎಂಬ ಅಪವಾದ ನನ್ನೊಂದಿಗೆ ಇದ್ದೇ ಇತ್ತು. ಹಾಗಾಗಿ ನಾನು ಭಾಷಣ ಮಾಡಲು ಕಲಿಯುವುದು ನನಗೆ ಅನಿವಾರ್ಯ ಆಯಿತು. ವಿದ್ಯಾರ್ಥಿ ಸಂಘಟನೆಗೆ (SFI) ಸೇರಿದ್ದರಿಂದ ಅಲ್ಲಿ ನಾನು, ಸುರೇಶ ತಾಂಡೇಲ ಮೊದಲಾದವರೇ ನಾಯಕರು. ಸದಸ್ಯತ್ವ ಮಾಡಲು, ಹೋರಾಟಕ್ಕೆ ಜನರನ್ನು ಎಬ್ಬಿಸಲು ಮಾತು ಆಡಲೇಬೇಕಾಯಿತು. ಅದರೊಂದಿಗೆ ಹಿಂದೆ ಮುಂದೆ ಅವಧಾನಿಯವರು ಭಾಷಣ ಮಾಡಲು, ಅತಿಥಿಗಳನ್ನು ಪರಿಚಯಿಸಲು, ನಿರೂಪಣೆ ಮಾಡಲು ಕರೆದು ಬಿಡುತ್ತಿದ್ದರು.
ಒಮ್ಮೆಯಂತೂ ಹೊನ್ನಾವರದ ಮಂಕಿಯಲ್ಲಿ ಸಾಕ್ಷರತೆ ಆಂದೋಲನದ ಕಾರ್ಯಕ್ರಮ ನಡೆಯುತ್ತಿತ್ತು. ನಮ್ಮ ಇಡೀ ತಂಡ ಅದರಲ್ಲಿ ಪಾಲ್ಗೊಂಡಿದ್ದೆವು. ಅವಧಾನಿಯವರು ತಾಲೂಕು ಸಂಚಾಲಕರು. ಅಣ್ಣ ಪ್ರಚಾರ ಸಮಿತಿ ಸಂಚಾಲಕ. ಇವರಿಬ್ಬರಿರುವುದರಿಂದ ನಾವು ಅಲ್ಲಿರಬೇಕಲ್ಲಾ! -ನಾನು ಮತ್ತು ಶ್ರೀಪಾದ ಭಟ್ ಒಟ್ಟಿಗೇ ಹೋಗಿದ್ದೆವು. (ಯಾವಾಗಲೂ ಒಟ್ಟಿಗೇ ಹೋಗುತ್ತಿದ್ದೆವು)- ಸಭೆ ಪ್ರಾರಂಭ ಆಯಿತು. ನಮ್ಮನ್ನು ಭಾಷಣ ಮಾಡಲು ನಿಲ್ಲಿಸಿಯೇ ಬಿಟ್ಟರು.
ಶ್ರೀಪಾದ ಆಗಲೇ ಒಳ್ಳೆ ಡಿಬೇಟರ್ ಅಂಥ ಕಾಲೇಜಿನಲ್ಲಿ ಹೆಸರುಗಳಿಸಿದ್ದ. ನಾನೂ ಭಾಷಣದಲ್ಲಿ ಅಲ್ಲಲ್ಲಿ ಭಾಗವಹಿಸಿದ್ದೆ. ಆದರೆ ಮೊದಲೇ ಸಣ್ಣ ತಯಾರಿ ಇರುತ್ತಿತ್ತು. ತೀರಾ ಗಂಭೀರ ವಿಷಯ ಇದ್ದರೆ ಅಣ್ಣನೇ ಬರೆದುಕೊಡುತ್ತಿದ್ದ ಅಥವಾ ಬರೆದದ್ದನ್ನ ತಿದ್ದಿಕೊಡುತ್ತಿದ್ದ. ಆದರೆ ಇಲ್ಲಿ ಯಾವ ಮುನ್ಸೂಚನೆ ಇಲ್ಲದೆ ಇರುವುದು ಒಂದಾದರೆ ಎದುರಿಗೆ ಅಣ್ಣ ಇದ್ದಾನೆ ಎನ್ನುವುದು ಇನ್ನೊಂದು ಸಮಸ್ಯೆ. ಭಾಷಣ ಮಧ್ಯ ಬಿಟ್ಟರೆ ಅಣ್ಣನ ಮರ್ಯಾದೆ ಹರಾಜು. ಇಂತಹ ಇಕ್ಕಟ್ಟಿನಿಂದ ಪಾರಾಗಲು ನಾನು ಸ್ವಲ್ಪವಾದರೂ ಭಾಷಣ ಕಲಿಯುವುದು ಅನಿವಾರ್ಯವಾಯಿತು. ಹೀಗೆ ಅಣ್ಣನನ್ನು ಮೆಚ್ಚಿಸುವಂತಹ ಭಾಷಣ ಅವನೆದುರು ಮಾಡಬೇಕೆಂದು ಹಂಬಲಿಸುತ್ತಿದ್ದೆ.
ಆಮೇಲೆ ರಾಜ್ಯದಾದ್ಯಂತ ಭಾಷಣಕ್ಕೆ ಹೋದೆ; ಆದರೆ ಅಣ್ಣನ ಎದುರು ಭಾಷಣ ಮಾಡಲು ಧೈರ್ಯ ಬರಲೇ ಇಲ್ಲ. ಆತ ಎದುರು ಕುಳಿತಿದ್ದಾನೆಂದರೆ ವಾಲಿಯೆದುರು ಶಸ್ತ್ರ ಹಿಡಿದು ನಿಂತಂತೆ; ಅರ್ಧ ಶಕ್ತಿ ಪಾತಾಳಕ್ಕೆ ಇಳಿಯುತ್ತಿತ್ತು. ಬೇರೆಯವರಿಂದ ಕೇಳಿ ಆತ ಬಲ್ಲ; ಚೆನ್ನಾಗಿ ಮಾತಾಡಿದ್ಯಂತಲ್ಲೋ! ತಯಾರಿ ಇಲ್ಲದೇ ಮಾತನಾಡಬಾರದು; ಟಿಪ್ಪಣೆ ಮಾಡ್ಕೋಬೇಕು ಅಂತ ಎಚ್ಚರಿಸುತ್ತಿದ್ದ. ಸ್ಪರ್ಧೆಗೆ ಹೋಗುವಾಗ ನಾನು ನಾಲ್ಕಾರು ಪಾಯಿಂಟನ್ನ ಹೇಳಿದರೆ ಮಾತ್ರವೇ ಆತ ಮತ್ತೆ ಏನಾದರೂ ಹೇಳಿಕೊಡುತ್ತಿದ್ದ. ಇಲ್ಲದಿದ್ದರೆ ಯಾವುದಾದರೂ ಪುಸ್ತಕ, ಲೇಖನ ಕೊಟ್ಟು ಓದಲು ಹೇಳುತ್ತಿದ್ದ. ಚೆನ್ನಾಗಿ ಆದರೆ ಖುಷಿಪಡುತ್ತಿದ್ದ. ಈಗಲಾದರೂ ಅಣ್ಣ ಮೆಚ್ಚುವಂತ ಒಂದು ಭಾಷಣ ಮಾಡ್ಬೇಕು ಅಂತ ಅನ್ನಿಸ್ತಿರ್ತದೆ.

ಕೊನೆಗೂ ಆತ ಉಪನ್ಯಾಸಕನಾಗಲೇ ಇಲ್ಲ...ವಿಠ್ಠಲ ಭಂಡಾರಿ

ಕೊನೆಗೂ ಆತ ಉಪನ್ಯಾಸಕನಾಗಲೇ ಇಲ್ಲ..

ನನ್ನ ಅಪ್ಪ ಆರ್ ವಿ ಭಂಡಾರಿ..

ಬಂಡಾಯ ಸಾಹಿತ್ಯದ ಹಲವು ಮುಖಗಳಲ್ಲಿ ನನಗೆ ಆರ್ ವಿ ಭಂಡಾರಿಯವರದ್ದು ಮರೆಯಲಾಗದ ಮುಖ.
ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.
ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.
ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ
ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ
ನೆನಪು 8
ಕೊನೆಗೂ ಆತ ಉಪನ್ಯಾಸಕನಾಗಲೇ ಇಲ್ಲ
ಅಣ್ಣ ಮಾಡಿದ್ದು ಎರಡು ಎಂ.ಎ.
ಒಂದು ಕನ್ನಡ ಸಾಹಿತ್ಯದಲ್ಲಿ, ಇನ್ನೊಂದು ಇಂಗ್ಲೀಷ್ ಸಾಹಿತ್ಯದಲ್ಲಿ; ಸಂಸ್ಕೃತ ಎಂ.ಎ ಯನ್ನು ಒಂದು ವರ್ಷ ಮುಗಿಸಿದ್ದ. ಹಿಂದಿಯ ರಾಷ್ಟ್ರ ಭಾಷಾ ಪರೀಕ್ಷೆ.. ಇನ್ನೂ ಕೆಲವು ಪರೀಕ್ಷೆ ಮುಗಿಸಿದ್ದಾನೆ.
ಕನ್ನಡ ಶಾಲೆಯ ಮಾಸ್ತರು ಹೀಗೆಲ್ಲಾ ಮಾಡುವುದು ಆಗ ಅಪರೂಪವೇ. ಇಷ್ಟೆಲ್ಲಾ ಆದರೂ ಅವರಿಗೆ ಕಾಲೇಜು ಉಪನ್ಯಾಸಕ ಆಗಲು ಸಾಧ್ಯ ಆಗಲಿಲ್ಲ.
ಮೊದಲು ಅವನು ಅರೇಅಂಗಡಿಯ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ಕಾಲದಲ್ಲಿ ಅಣ್ಣ ಶೂದ್ರ ವರ್ಗದ ಸ್ವಾಭಿಮಾನ ಎತ್ತಿ ಹಿಡಿಯುವ, ಅವರ ಮೇಲೆ ಆಗುತ್ತಿರುವ ಮೇಲ್ಜಾತಿಯ ದೌರ್ಜನ್ಯವನ್ನು ಬಯಲಿಗೆಳೆಯುವ ಕೆಲಸವನ್ನು ತನ್ನ ಭಾಷಣ, ಲೇಖನದ ಮೂಲಕ ಮಾಡುತ್ತಿದ್ದ.
ಹಾಗಾಗಿ ಅವನನ್ನು ಹಲವರು ಬ್ರಾಹ್ಮಣ ವಿರೋಧಿ ಎಂದೇ ತಪ್ಪಾಗಿ ಅರ್ಥೈಸುತ್ತಿದ್ದರು. (ಆದರೆ ಅವನನ್ನು ಆಪ್ತವಾಗಿ ಪ್ರೀತಿಸುತ್ತಿದ್ದವರು ಬುದ್ಧಿಶೀಲ ಬ್ರಾಹ್ಮಣರು ತುಂಬಾ ಜನ ಇದ್ದರು). ಅರೇಅಂಗಡಿಯ ಕಾಲೇಜಿನ ಆಡಳಿತ ಸಂಸ್ಥೆಯಲ್ಲಿ ಬಹುತೇಕರು ಬ್ರಾಹ್ಮಣರೇ ಇರುವುದರಿಂದ ಇವನನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ.
ಈ ಸಂಸ್ಥೆಯೊಂದಿಗೆ ಅವನಿಗೆ ಒಂದು ಸಣ್ಣ ಭಾವನಾತ್ಮಕ ಸಂಬಂಧ ಕೂಡ ಇತ್ತು. ಯಾಕೆಂದರೆ ಏಳನೇ ತರಗತಿ ಮುಗಿದು ಬೇರೆ ಕಡೆ ಶಾಲೆಗೆ ಹೋಗಲು ಸಾಧ್ಯವೇ ಆಗದೆ ಬೇರೆ ಮನೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ಹೈಸ್ಕೂಲು ಪ್ರಾರಂಭ ಆಯ್ತು. ಈತ ಮೊದಲ ಬ್ಯಾಚಿನ ವಿದ್ಯಾರ್ಥಿ ಆಗಿದ್ದನು. ಇಲ್ಲಿಯ ಶಿಕ್ಷಕರಾದ ಜಿ. ಆರ್ ಭಟ್, ಲೋಕೇಶ್ವರ ಮಾಸ್ತರರು.. ಇವರೆಲ್ಲಾ ಇವನ ಪ್ರೀತಿಯ ಶಿಕ್ಷಕರಾಗಿದ್ದರು. ಈ ಆರ್ ಭಟ್ ಅವರು ಈತನ್ನು ತೆಗೆದುಕೊಳ್ಳು ತುಂಬಾ ಪ್ರಯತ್ನ ಮಾಡಿದ್ದರೂ ಬ್ರಾಹ್ಮಣರ ಲಾಬಿಯಿಂದ ಅದು ಸಾಧ್ಯ ಆಗಲಿಲ್ಲ.
ಇನ್ನೊಮ್ಮೆ ಹೊನ್ನಾವರ ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ವಿಷಯದ ಉಪನ್ಯಾಸಕ ಹುದ್ದೆಗೆ ಅರ್ಜಿ ಕರೆದಿದ್ದರು. ಪ್ರೊ. ಜಿ. ಎಸ್.ಅವಧಾನಿಯವರ ಒತ್ತಾಯಕ್ಕೆ ಅಣ್ಣನೂ ಅರ್ಜಿ ಹಾಕಿದ್ದ. ಅವನನ್ನೇ ತೆಗೆದುಕೊಳ್ಳಬೇಕೆಂದು ಅವಧಾನಿಯವರು, ಅವರ ಸ್ನೇಹಿತರು ಒತ್ತಾಯ ಹೇರಿದ್ದರು. ಆದರೆ ಕನ್ನಡಕ್ಕೆ ಆಯ್ಕೆಯಾದವರು 4 ಪಿರಿಯಡ್‍ನ್ನು ಸಂಸ್ಕೃತ ವಿಷಯ ಪಾಠ ಮಾಡಬೇಕಾಗಿ ಆಡಳಿತ ಮಂಡಳಿ ಹೇಳಿತು. ಅಣ್ಣನಿಗೆ ಸಂಸ್ಕೃತ ಮಾತನಾಡುವಷ್ಟು ಬರುತ್ತಿರಲಿಲ್ಲ. ಆಗ ಅವಧಾನಿಯವರು ಸಂಸ್ಕೃತವನ್ನು ನಾನೇ ಮಾಡುವುದಾಗಿಯೂ ಆರ್.ವಿ. ಎಲ್ಲಾ ಅವಧಿಯಲ್ಲಿ ಕನ್ನಡವನ್ನೇ ಮಾಡಬಹುದೆಂದು ಹೇಳಿ ಅಣ್ಣನ ಬೆನ್ನೆಲುಬಾಗಿ ನಿಂತರು.
ಆದರೆ ಸಂದರ್ಶನಕ್ಕೆ ಹೊನ್ನಾವರದವರೇ ಆದ ಶ್ರೀಪಾದ ಶೆಟ್ಟಿಯವರಯ ಹಾಜರಾಗಿದ್ದರು. ಆಗತಾನೆ ಅವರು ಎಂ. ಎ ಮುಗಿಸಿಕೊಂಡು ಬಂದಿದ್ದರು. ಆಗ ಅವರ ತಂದೆ ಕೂಡ ತೀರಿಕೊಂಡಿದ್ದರೆಂದು ಕಾಣುತ್ತದೆ. ಅದನ್ನೇ ಮುಂದೊಡ್ಡಿ, ತನ್ನ ಬಡತನವನ್ನು ಪಣಕ್ಕಿಟ್ಟು ಶ್ರೀಪಾದ ಶೆಟ್ಟರು ಕರುಣೆ ಸಂಪಾದಿಸಿದರು. ಅಣ್ಣನ ಬಳಿ ಬಂದು ‘ನಿಮಗಾದರೆ ಕನ್ನಡ ಶಾಲೆಯ ಸಣ್ಣ ನೌಕರಿಯಾದರೂ ಇದೆ. ನನಗೆ ಅದೂ ಇಲ್ಲ. ದಾರಿಯ ಮೇಲೆ ಬೀಳಬೇಕಾಗುತ್ತದೆ. ನೀವು ಇದರಿಂದ ಹಿಂದೆ ಸರಿದರೆ ನನಗೆ ಕೆಲಸ ಸಿಗುತ್ತದೆಂದು ವಿನಂತಿಸಿದರು.” ಅಣ್ಣನಿಗೆ ಬೇರೆ ದಾರಿ ಇರಲಿಲ್ಲ; ಸಂದರ್ಶನ ಮುಗಿಸಿದರು. ಶ್ರೀಪಾದ ಶೆಟ್ಟರೇ ಉಪನ್ಯಾಸಕರಾಗಿ ಆಯ್ಕೆಯೂ ಆದರು.
ಈ ಬಗ್ಗೆ ಅಣ್ಣ ಇನಿತೂ ಬೇಸರ ಮಾಡಿಕೊಳ್ಳಲಿಲ್ಲ. ನನಗಾದರೆ ಸಣ್ಣ ನೌಕರಿಯಾದರೂ ಇದೆ. ಅವರಿಗೆ ಅದೂ ಇಲ್ಲ. ಅವರಾದದ್ದೇ ಒಳ್ಳೆಯದಾಯಿತು ಎಂದು ಖುಷಿಪಟ್ಟರು. ಅಕ್ಕ ಬೇಸರ ಪಟ್ಟಾಗ ಅವಳಿಗೂ ಹೀಗೇ ಸಾಂತ್ವನ ಹೇಳಿದರು.
ಆದರೆ ಶ್ರೀಪಾದ ಶೆಟ್ಟರು ಈ ಕಾಲೇಜಿನಲ್ಲಿ ಉಳಿಯುವ ಬದಲು ಅಂಕೋಲಾ ಕಾಲೇಜಿನಲ್ಲಿ ಅಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿ, ಅಲ್ಲಿ ಆಯ್ಕೆಯಾಗಿ ಹೊನ್ನಾವರ ಕಾಲೇಜಿಗೆ ರಾಜಿನಾಮೆ ಕೊಟ್ಟರು. ಇಲ್ಲಿಯ ಹುದ್ದೆ ಭಂಡಾರಿಗೂ ಇಲ್ಲ; ಶೆಟ್ಟರಿಗೂ ಇಲ್ಲಿ ಎನ್ನುವಂತಾಯಿತು.
ಒಮ್ಮೆ ಶ್ರೀಪಾದ ಶೆಟ್ಟರು ಆಸಕ್ತಿ ವಹಿಸದಿದ್ದರೆ ಅಣ್ಣ ಎಸ್.ಡಿ.ಎಂ ಕಾಲೇಜಿನ ಅಧ್ಯಾಪಕನಾಗಿ ನಿವೃತ್ತನಾಗುತ್ತಿದ್ದ. ಹಾಗಾಗಿದ್ದರೆ ಬಹುಶಃ ಆತನ ಇನ್ನಷ್ಟು ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತಿತ್ತೇನೋ. ಅಥವಾ ಆನಂತರದ ದಿನಗಳಲ್ಲಿ ಸಂಸ್ಥೆಯ ಅಧ್ಯಕ್ಷರು ಬಿಜೆಪಿಯವರಾಗಿದ್ದರಿಂದ ಕೆಲಸ ಮಾಡಲಾಗದೇ ರಾಜಿನಾಮೆಯನ್ನೂ ಕೊಡಬೇಕಾಗುತ್ತಿತ್ತೇನೋ!
ಆಮೇಲೆ ನಾನು ಅಲ್ಲಿಯ ವಿದ್ಯಾರ್ಥಿಯೂ ಆಗಿದ್ದೆ, ಅಣ್ಣನ ಪಾಠವನ್ನು ಕೇಳುವ ಭಾಗ್ಯವಿರುತ್ತಿತ್ತು. ಅಲ್ಲಿಯೇ ಪಾರ್ಟ್ ಟೈಂ ಉಪನ್ಯಾಸಕನಾಗಿ ಸೇರಿಕೊಂಡೆ. ಏನೋ ಪಾಠ ಮಾಡುವಾಗ ಆರ್.ಎನ್ ಶೆಟ್ಟಿಯವರನ್ನು ಟೀಕಿಸಿದೆ ಎಂದು ಆರು ತಿಂಗಳಲ್ಲಿ ಕಾಲೇಜಿನಿಂದ ತೆಗೆದು ಹಾಕಿದರು.