Monday 5 January 2015

ಹೊಸ ವರ್ಷದ ಅಂಗವಾಗಿ ಜರುಗಿದ 'ಕಾವ್ಯ ಸಂಜೆ'

ಕ್ಯಾಲೆಂಡರ್ ಮುಂದಕ್ಕೆ ಚಲಿಸಿದರೆ ನಾವು ಹಿಂದಕ್ಕೆ ಚಲಿಸುತ್ತಿದ್ದೇವೆ: ಮುನೀರ್ ಕಾಟಿಪಳ್ಳ 

 ಕಾಲವನ್ನು ನಿರ್ಧರಿಸುವ ಕ್ಯಾಲೆಂಡರ್ಗಳು ಮುಂದಕ್ಕೆ ಚಲಿಸಿದರೆ, ನಾವು ಮನುಷ್ಯರು ಜಾತಿಯತೆ, ಕೋಮುವಾದಗಳನ್ನು, ಭವಿಷ್ಯ, ಮೌಢ್ಯಗಳನ್ನು ಆಚರಿಸುವ ಮೂಲಕ ಹಿಂದಕ್ಕೆ ಚಲಿಸುತ್ತಿದ್ದೇವೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟರು.
ನಗರದ ಕಡಲತೀರದಲ್ಲಿರುವ ಯುದ್ದನೌಕೆಯ ಆವರಣದಲ್ಲಿ ಚಿಂತನ ರಂಗಅಧ್ಯಯನ ಕೇಂದ್ರ ಉತ್ತರ ಕನ್ನಡ, ಸಹಯಾನ ಕೆರೆಕೋಣ, ಕಸಾಪ ಕಾರವಾರ, ಮಂಥನ, ಎಸ್ ಎಫ್ ಐ ಕಾರವಾರ- ಸಂಘಟನೆಗಳ ಆಶ್ರಯದಲ್ಲಿ ಹೊಸ ವರ್ಷದ ಅಂಗವಾಗಿ ಜರುಗಿದ 'ಕಾವ್ಯ ಸಂಜೆ'ಯಲ್ಲಿ  ಭಾಗವಹಿಸಿ ಅವರು ಮಾತನಾಡಿದರು. 
muneer

ಇತ್ತೀಚೆಗೆ ಪಾಕಿಸ್ತಾನನ ಪೇಶಾವರದಲ್ಲಿ ನೂರಾರು ಮಕ್ಕಳ ಮಾರಣಹೋಮ ನಡೆದಾಗ ಅದನ್ನು ಪ್ರತಿರೋಧಿಸುವ ಹಕ್ಕನ್ನು ನಮ್ಮಂಥವರಿಂದ ಕಸಿಯಲಾಗುತ್ತಿದೆ.  ಹೀಗೇಕೆ ಅಲ್ಲಾ ? ಎಂದು ಪ್ರಶ್ನಿಸಿದರೆ ಅಲ್ಲಾನನ್ನೆ ಪ್ರಶ್ನಿಸಿದ ಮುಸ್ಲಿಂ ನಾಸ್ತಿಕ ಎಂದು ಜರಿಯಲಾಗುತ್ತದೆ. ಮುಸ್ಲಿಂರಿಂದ ನಡೆದಾಗ ಮಾತ್ರ ನೀನು  ಯಾಕೆ ಮಾತಾಡುತ್ತಿ ಎಂದು ಮುಸ್ಲಿಂ ಎಂದರೆ, ಹಿಂದೂಗಳು ನಿಮ್ಮ ಧರ್ಮದವರಿಂದಲೇ ಹೀಗಾಗಿದೆ ಎಂದು ದೂರುತ್ತಾರೆ. ಮುಸ್ಲಿಮರ ಮೇಲಿನ ದಾಳಿಯನ್ನು ಖಂಡಿಸಿದರೆ ಮುಸ್ಲಿಮ್ ಹುಡುಗನಿಗೇಕೆ ಇದೆಲ್ಲಾ ಉಸಾಬರಿ ಎಮದು ಕೇಳುತ್ತಾರೆ.  ಎಂದು ವಿಷಾದ ವ್ಯಕ್ತಪಡಿಸಿದರು. 
 'ಪಿಕೆ ಸಿನೆಮಾದಲ್ಲಿ ಎಲ್ಲ ಧರ್ಮಗಳ ನ್ಯೂನ್ಯತೆಗಳು ಕುರಿತು ಅಮೀರ್ಖಾನ ಲೇವಡಿ ಮಾಡಿದ್ದಾರೆ. ಕೇವಲ ಹಿಂದೂ ಧರ್ಮಗಳ ಕುರಿತು ಎಂಬ ಅಪಾದನೆ ಸರಿಯಲ್ಲ.  ನಮ್ಮ ಧರ್ಮ ನಿಮ್ಮ ಧರ್ಮ ಎಂದು ಬಡಿದಾಡುವುದಕ್ಕಿಂತ ಆತ ಹೇಳಿರುವ ವಾಸ್ತವ ಅಂಶಗಳ ಕುರಿತು ಚಿಂತಿಸಬೇಕಿದೆ. ಅನ್ಯಗೃಹದ ವ್ಯಕ್ತಿಯಾದ ಅಮೀರಖಾನ್ ಮಸೀದಿಗೆ ಮದ್ಯದ ಬಾಟಲಿಗಳನ್ನು ಅಪರ್ಿಸಲು ಹೋದಾಗ ಅಲ್ಲಿನ ಮೌಲ್ವಿಗಳು ಬೆನ್ನಟ್ಟುವ ಒಂದು ದೃಶ್ಯ ಸಾಕು ಆತ ಮುಸ್ಲಿಂ ಧರ್ಮವನ್ನು ವಿಶ್ಲೇಷಿಸದೆ ಬಿಟ್ಟಿಲ್ಲ ಎನ್ನುವುದಕ್ಕೆ' ಎಂದರು.
  ಪ್ರೇಮ ಕವಿತೆಗಳನ್ನು ಮಾತ್ರ ಬರೆಯುವ ಸಮಯ ಈಗ ಇಲ್ಲ. ಎಲ್ಲರೂ ಮಾನವೀಯತೆಯನ್ನು ಹರಡುವ ಬರಹಗಳನ್ನು,ಸಕಾರಾತ್ಮಕ ಚಿಂತನೆಗಳನ್ನು ಹರಡುವತ್ತ  ಚಿಂತಿಸಬೇಕಿದೆ. ಈ ಬಲವನ್ನು 2015ನೇ ಇಸ್ವಿ ಕೊಡಲಿ ಎಂದು ಆಶಿಸಿದರು.
basavaraj hugar

 
 'ಕಾವ್ಯ ಸಂಜೆ'ಗೆ  ಉರಿವ ಎದೆಯಲ್ಲಿ ಉಳಿದ ಪ್ರಶ್ನೆ ಎಂಬ ಕವಿತೆ ಓದುವ ಮೂಲಕ ಚಾಲನೆ ನೀಡಿದ ಕವಿ ಬಸವರಾಜ ಹೂಗಾರ, ಯುದ್ದದ ಸ್ಮಾರಕದ ಮುಂದೆ ನಾವು ಮನಸ್ಸು ಮನಸ್ಸುಗಳನ್ನು ಕೂಡಿಸುವ ಕವಿತೆಗಳನ್ನು ಓದುತ್ತಿರುವುದು ಆಶಾದಾಯಕ.  ಯುದ್ದದ ಚಿಹ್ನೆಗಳನ್ನು ಮತ್ತು ಸ್ಮಾರಕಗಳನ್ನು ನೋಡಿದಾಗ ನಮಗೆ ದುಖಃವಾಗಬೇಕು. ಯುದ್ದವೆಂದರೆ ಇನ್ನೊಬ್ಬರ ಬದುಕನ್ನು, ಅಸ್ತಿತ್ವವನ್ನು ಅಲ್ಲಗಳೆಯುವುದಕ್ಕಾಗಿ ನಡೆಸುವ ಮಾರಣಹೋಮವಾಗಿರುತ್ತದೆ. ಜಗತ್ತಿನ ಎಲ್ಲ ಯುದ್ದದ ಸಾಧನಗಳು ಈ ಯುದ್ದನೌಕೆಯಂತೆ ವಿಶ್ರಾಂತಿ ಪಡೆಯುವಂತಾಗಬೇಕು. ಎಲ್ಲರಲ್ಲಿ ತಾಯ್ತನದ ಗುಣಗಳು ಅರಳುವಂತಾಗಬೇಕು ಎಂದು ಆಶಿಸಿದರು.
naveen suranje
 
ಪತ್ರಕರ್ತ ನವೀನ್ ಸೂರಿಂಜೆ ಮಾತನಾಡಿ, ಹೊಸ ವರ್ಷವೆಂದರೆ ಕೇವಲ ಕ್ಯಾಲೆಂಡರ್ ಬದಲಾವಣೆಯಷ್ಟೆ. ಅಮಾಯಕರ ಮೇಲೆ ಕೋಮುವಾದ, ಭಯೋತ್ಪಾದಕತೆಗಳು ಎಂದಿನಂತೆ ಮುಂದುವರೆಯವುದನ್ನು ತಡೆಗಟ್ಟಿದರೆ ಮಾತ್ರ  ಮುಂಬರುವ ವರ್ಷವನ್ನು ಸಂಭ್ರಮಿಸಬಹುದಾಗಿದೆ. ಎಂದರು. ಮುಂದುವರಿದು ಭಯೋತ್ಪಾದನೆ ಎಂದರೆ ಕೇವಲ ಮುಸ್ಲಿಂರು ನಡೆಸುವದಷ್ಟೆ ಭಯೋತ್ಪಾದನೆಯಲ್ಲ. ನೈತಿಕ ಪೋಲೀಸ್ಗಿರಿ ಹೆಸರಲ್ಲಿ ಮಂಗಳೂರು, ಉಡುಪಿ, ಗುಜರಾತಿನಲ್ಲಿಯೂ ನಡೆಯುವುದೆಲ್ಲವೂ ಭಯೋತ್ಪಾದನೆಯೇ ಆಗಿದೆ. ಇಂಥ ನೈತಿಕ ಪೋಲಿಸ್ಗಿರಿಯನ್ನು ವಿರೋಧಿಸಲು ಹೋಗಿ ನಾನು 2013ರ ಹೊಸವರ್ಷವನ್ನು ಜೈಲಿನಲ್ಲಿಯೇ ಕಳೆಯುವಂತಾಗಿತ್ತು. ಆಗ ನಾನು ಗಮನಿಸಿದ್ದೆಂದರೆ  ಜೈಲಿನಲ್ಲಿ ಕೇವಲ ಹಿಂದುಳಿದ, ತಳಸಮುದಾಯದವರೇ ಜೈಲಿನಲ್ಲಿದ್ದರು. ಮೇಲುವರ್ಗದವರು ಯಾರೊಬ್ಬರು ಜೈಲಿನಲ್ಲಿರಲಿಲ್ಲ. ಇದೊಂಥರಾ ಭಯೋತ್ಪಾದನೆ ಇದ್ದಂತೆಯೇ ಎಂದರು.
ಕಾರವಾರ ಕಸಾಪ ಕಾರವಾರ ತಾಲೂಕು ಅಧ್ಯಕ್ಷ ರಾಮಾ ನಾಯ್ಕ ಉಪಸ್ಥಿತರಿದ್ದರು. ಸಹಯಾನದ ವಿಠ್ಠಲ್ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿ  ಕಾವ್ಯ ಮತ್ತು ಕನಸುಗಳು ಮನುಷ್ಯನಿಂದ ದೂರಸರಿಯುತ್ತಿದೆ. ಅದನ್ನು ಮತ್ತೆ ಮನುಷ್ಯ ಕೇಂದ್ರಕ್ಕೆ ತರಬೇಕಾಗಿದೆ. ಇಲ್ಲದಿದ್ದರೆ ಮನುಷ್ಯ ವಿರೋಧಿಯಾದ ಮಡೆಸ್ನಾನ, ಪೇಶಾವರದ ಮಕ್ಕಳ ಮಾರಣ ಹೋಮ, ದಲಿತರ ಮೇಲಿನ ದೌರ್ಜನ್ಯ, ಮಹಿಳೆಯ ಮೇಲಿನ ಅತ್ಯಾಚಾರ, ಮರುಮತಾಂತರ, ನೈತಿಕ ಪೋಲಿಸುಗಿರಿಹೀಗೆ ಮುಂದುವರಿಯುತ್ತದೆ. ಸಾಮ್ರಾಜ್ಯಶಾಹಿ ಶಕ್ತಿಗಳು ಯುದ್ಧವನ್ನು ವಿಜೃಂಭಿಸುತ್ತಿರುವ ಹೊತ್ತಿನಲ್ಲಿ ಜಗತ್ತಿನಲ್ಲಿರುವ ಎಲ್ಲಾ ಯುದ್ಧಹಡಗುಗಳು, ಯುದ್ಧವಿಮಾನಗಳು ಹೀಗೆ ಯುದ್ದ ನಿಲ್ಲಿಸಿ ನಿಂತಿರುವ ದಿನಗಳು ಬೇಗ ಬರಲಿ ಎಂಬಾಶಯದಿಂದ ಪ್ರತಿ ವರ್ಷ ಇಲ್ಲಿ 'ಕಾವ್ಯ ಸಂಜೆ' ಕಾರ್ಯಕ್ರಮವನ್ನು ಆಚರಿಸುತ್ತಿದ್ದೇವೆ ಎಂದರು. ಮಂಥನದ ರಮೇಶ ಭಂಡಾರಿ ವಂದಿಸಿದರು. ರಾಮಾನಾಯ್ಕ, ದಾಮೋದರ ನಾಯ್ಕ ನೆನಪಿನ ಕಾಣಿಕೆ ಅಪರ್ಿಸಿದರು.
vittal bhandari

 ಕಾರವಾರ ಆಕಾಶವಾಣಿ ಮುಖ್ಯಸ್ಥ  ಬಸು ಬೇವಿನಗಿಡದ್, ಎಂ. ಖಲೀಲುಲ್ಲಾ, ಶ್ರೀದೇವಿ ಕೆರೆಮನೆ, ಕೃಷ್ಣಾನಂದ ಬಾಂದೇಕರ್, ನಾಗರಾಜ ಹರಪನಹಳ್ಳಿ, ಪ್ರೇಮಾ ಟಿ.ಎಂ.ಆರ್, ಹನುಮಂತ ಹಾಲಿಗೇರಿ, ಜಯಶೀಲ ಆಗೇರ, ಎಂ.ಎ.ಖತೀಬ್, ಕಡವಾಡ, ಯಮುನಾ ಗಾಂವ್ಕರ, ವಸಂತ ಬಾಂದೇಕರ್, ಜಿ.ಡಿ.ಪಾಲೇಕರ್, ಶಂಕರ ಗೌಡ, ಶ್ರೀನಿವಾಸ ನಾಯ್ಕ ಅಣ್ವೇಕರ್ ಮುತಾದವರು ಕವಿತೆ ವಾಚಿಸಿದರು. 
Show less  ·  Translate

No comments:

Post a Comment