Tuesday 21 July 2015

ಕಾಗೆಗಳು- ಆರ್.ವಿ. ಭಂಡಾರಿ.

ಕಾಗೆಗಳು                 ಆರ್.ವಿ. ಭಂಡಾರಿ.
ಈ ಬಸ್ಸುಗಳು ನಮ್ಮ ಮಂತ್ರಿಗಳ ಪ್ರೋಗ್ರ್ಯಾಮಿನ ಹಾಗೆ. ಒಂದು ಒಂದೂವರೆ ತಾಸು ಲೇಟು. ಆರುಗಂಟೆಗೆ ಸ್ಟಾಂಡಿಗೆ ಬಂದಿದ್ದೆ. ಏಳೂವರೆಯಾದರೂ ಬಸ್ಸು ಬರಲಿಲ್ಲ. ಸ್ಟಾಂಡಿನಲ್ಲಿ ಜನರ ನೂಕುನುಗ್ಗಲು. ಒಂದು ಬಸ್ಸು ಬಂದರೆ ಸಾಕು. ನೂರು ಜನರು ನುಗ್ಗುತ್ತಿದ್ದರು. ಹತ್ತುವವರು ಕೆಲವರಾದರೆ ನೋಡುವವರು ಹಲವರು. ಬಸ್ಸು ಹೊಂಟಿತೊ ಮತ್ತೆ ಜನ ತಿರುಗುತ್ತಿದ್ದರು. ಪತ್ರಿಕೆಯವರು ಓಡಾಡುತ್ತಿದ್ದರು. ಕೆಲವರು ನಾಲ್ಕೈದು ಪಿಳ್ಳೆಗಳನ್ನು ಕಟ್ಟಿಕೊಂಡು ಪೇಚಾಡುತ್ತಿದ್ದರು. ಕೆಲ ಹೆಂಗಸರು ತಮ್ಮ ಗಂಡಂದಿರನ್ನು ಮಾತು ಕೇಳಿಸುವ ಧಿಮಾಕು ನೋಡಬೇಕಿತ್ತು. ಬಸ್ಸು ಹೊರಟಾಗ ಗುರುತಿಲ್ಲದವರಿಗೆ ಕೈಮಾಡಿ 'ಟಾಟಾ' ಎಂದು ಯುವಕರು ನಗುತ್ತಿದ್ದರು. ಅದನ್ನು ನೋಡಿ ಕೆಲವರು ನಗುತ್ತಿದ್ದರು. ವತ್ಸಲಾ ಹೇಳುತ್ತಿದ್ದಳು. ಈ ಬಸ್ಸು ಪ್ರಯಾಣವೆಂದರೆ ಬೇಸರ. ಬೇಕಂತಲೇ ಒತ್ತಿ ಒತ್ತಿ ನುಗ್ಗುವ ಗಂಡಸರು. ಸೀಟು ಸಿಕ್ಕಿದರಾಯಿತು. ಸಿಕ್ಕದಿದ್ದರೆ ಅವರಿಗೆ ಹಬ್ಬ. ತೂಗು ಪಟ್ಟಿಹಿಡಿದು ಜೋಲಿ ಹೋಗುವುದು. ಬಸ್ಸು ಚಲಿಸಿದೊಡನೆ ಮೈಯಿಗೆ ಹಾಯುವುದು.
ಥ್ರಿಲ್ ಎನ್ನಿಸುವುದಿಲ್ಲವಾ ನಿನಗೆ?
ಥ್ರಿಲ್ಲು! ಅದೆಂತ ಥ್ರಿಲ್ಲು ಮಾರಾಯಾ? ಅದೆಲ್ಲ ಮಾನಸಿಕ. ಯಾರೊ ಯಾರನ್ನೋ ಹಾಯಿಸಿಕೊಂಡರೆ ಥ್ರಿಲ್ಲಾ? ಈ ಯಾತನೆ ಯಾವಾಗ ಮುಗಿದೀತೋ ಎನ್ನಿಸುತ್ತದೆ.
ಕಾಲೇಜಿನಲ್ಲಿ ಕಾಗದದ ಬಾಣ ಚುಚ್ಚಿದಾಗ ಥ್ರಿಲ್ ಎನ್ನಿಸುವುದಿಲ್ಲವಾ?
ನುಸಿ ಕಚ್ಚಿದಾಗ ಥ್ರಿಲ್ ಆಗುವುದಾ? ಒಂದು ಸಲ ಏನಾಯಿತಂತಿಯಾ? ನಮ್ಮ ಕಾಲೇಜಿನಲ್ಲಿ ಸಂಗೀತ ಪ್ರೊಗ್ಯಾಂ ಇತ್ತು. ಒಬ್ಬ ಚೆನ್ನಾಗಿ ಭಾವಗೀತೆ ಹಾಡಿದ್ದ. ನನಗೆ ಸಂತೋಷವಾಗಿತ್ತು. ನನಗೂ ಹಾಡಬೇಕೆನ್ನುವಷ್ಟು. ಹೊರಬಿದ್ದಾಗ ನಾನು ಅವನ ಮೋರೆ ನೊಡಿ ನಕ್ಕೆ, ಅಷ್ಟೆ. ಏನಂತಿಯಾ ಅವನು ನನಗೇ ಗಂಟುಬೀಳಬೇಕೆ. ಸಾಯ್ಕಲ್ ಹಿಡಿದು ತನ್ನ ಗೆಳೆಯರ ಸಂಗಡ ಸ್ಟಾಂಡಿನವರೆಗೂ ಬರುತ್ತಿದ್ದ. ನಾನು ಹತ್ತಿದ ಬಸ್ಸು ಚಲಿಸಿದ ಮೇಲೆ ಹೋಗುತ್ತಿದ್ದ.
ಅಥವಾ ಮತ್ತಾರನ್ನಾದರೂ ಬೀಳ್ಕೊಡಲು ನಿಲ್ಲುತ್ತಿದ್ದರೊ.
ಅದೂ ಇರಬಹುದು. ಮೊದ ಮೊದಲು ತಮಾಶೆ ಎನ್ನಿಸಿತು. ಒಂದು ರೀತಿಯ ನೀನು ಹೇಳಿದೆಯಲ್ಲ ಥ್ರಿಲ್ಲು ಅಂತ ಹಾಗೆ ಆಗಿರಬೇಕು. ಒಮ್ಮೆ ಹೀಗೆ ಬಸ್ಸಿನ ಬಳಿ ಹಾದು ಬಂದ. ತನ್ನ ಹಿಪ್ಪಿ ಕೂದಲನ್ನು ನೇವರಿಸುತ್ತ ಪಕ್ಕದಲ್ಲಿ ಕುಳಿತ ನನ್ನ ಕಡೆ ಬಾಗಿ 'ಬ್ಯೂಟಿಪುಲ್' ಎಂದ. ನಾನು ಶಾರದೆ ಬಿದ್ದು ಬಿದ್ದು ನಕ್ಕೆವು. ಆ ಮೇಲೆ ಆ ಮೋರೆ ನೋಡಲಿಲ್ಲ. ಬೇಸರ ಬಂದಿರಬೇಕು ಅಂತೂ ಕಾಟ ತಪ್ಪಿತು.
ಕಾಲೇಜ ಜೀವನ ರಾಮೆನ್ಸ ಅಲ್ಲವಾ? ಇರಬಹುದು. ಅದಕ್ಕಾಗಿಯೇ ಹೋದವರಿಗೆ. ನಾನು ವಿದ್ಯೆಗಾಗಿ ಹೋಗಿದ್ದೆ. ನನಗೆ ಹೊಸ ಹೊಸ ಪುಸ್ತಕ ಕಂಡಾಗ ಥ್ರಿಲ್ ಆಗುತ್ತಿತ್ತು. ನಿಮ್ಮ ಗಂಡುಗಳ ಕೋತಿ ಮೋರೆ ನೋಡಿದಾಗಲ್ಲ?
ನೀನು ವಿಚಿತ್ರ.
ಏನೋ, ನೀನು ಹೇಳಿ ಹಾಗೇ ಆಗಿತ್ತಿತ್ತೇನೋ. ಆದರೆ ನೀನು ಗಂಟು ಬಿದ್ದೆಯಲ್ಲ. ನನ್ನ ಥ್ರಿಲ್ ಎಲ್ಲ ನಿನಗೆ ಗುತ್ತಿಗೆಯಾಯಿತು. ನನ್ನ ಜೋಲಿ ಹಾಳು ಮಾಡಿಬಿಟ್ಟೆ. ಎಷ್ಟು ದಿನದಿಂದ ಕಾದಿತ್ತೊ ನಿನಗಾಗಿ. ನೀನು ಏಳು ಸುತ್ತಿನ ಕೋಟೆ ಒಡೆದು ಬಂದೆ ರಾಜಕುಮಾರ ನಿನ್ನನ್ನು ಕಂಡರೂ ಥ್ರಿಲ್ಲು. ನಿನ್ನ ನೆನೆದರೂ ಥ್ರಿಲ್ಲು ಶುರುವಾಯಿತು.
ಮದುವೆ ಆದ ಮೇಲೆ ಶಮನವಾಯಿತೆ?
ವತ್ಸಲ ಮಾಯ್ ಡಿಯರ್ ಬಾಯ್ ಎಂದು ತುಟಿಕಚ್ಚಿ ಮುತ್ತು ಕೊಟ್ಟಿದ್ದಳು.
ನಗೆಯು ಬರುತಿದೆ ನನಗೆ ರಾಗ ಮಾಲಿಕೆ ಶುರುವಾಯಿತು. ನನಗೂ ನಗೆಬಂತು. ಮೂತ್ರ ಮಾಡಿ ಬರಬೇಕೆಂದು ರೋಡಿನ ಆಚೆಗೆ ನಡೆದೆ. ಚರಂಡಿಯಲ್ಲಿ ಯಾರೊ ಸತ್ತ ಬೆಕ್ಕನ್ನು ಒಗೆದಿದ್ದರು. ಕಾಗೆಗಳು ಹತ್ತಾರು ಜಮಾಯಿಸಿದ್ದವು. ತಮ್ಮ ಕಬ್ಬಿಣದ ಕೊಕ್ಕಿನಲ್ಲಿ ಕಚ್ಚಿ ಕಚ್ಚಿ ಬಿಡಿಸುತ್ತಿದ್ದವು. ಎಷ್ಟು ತಲ್ಲೀನ. ಸ್ವರ್ಗ ಸುಖ ಅನುಭೋಗಿಸುತ್ತಿದ್ದವು. ಸರ್ವ ಪ್ರಪಂಚವೂ ಅಲ್ಲಿಯೇ. ನಾನು ನೋಡುತ್ತಲೇ ನಿಂತಿದ್ದೆ. ಒಂದು ತರದ ಅಸಹ್ಯತೆ ಮನಸ್ಸನ್ನು ವ್ಯಾಪಿಸಿತು. ಅಯ್ಯೊ ಜೀವವೇ ಎನ್ನಿಸಿತು. ಇನ್ನು ಎಷ್ಟು ಹೊತ್ತು ನಿಲ್ಲುತ್ತಿದ್ದೆನೊ ಆ ಕಡೆಯಿಂದ ಗಾಳಿ ಬೀಸಿತು. ಗೊಕ್ ಎಂದು ವಾಕರಿಗೆ ಬಂತು. ಪ್ಯಾಂಟಿನ ಗುಂಡಿ ಹಾಕಿಕೊಳ್ಳುತ್ತಲೇ ಓಡಿದೆ.
ಗಾಡಿ ಬರಲಿಲ್ಲ. ಒಂದು ಪೇಪರನ್ನು ಕೊಂಡೆ. ಓದಲು ಮನಸ್ಸೇ ಬರಲಿಲ್ಲ. ಪೇಪರು ತುಂಬ ಕಾಗೆಗಳು. ಅಷ್ಟು ಹೊತ್ತಿಗೆ ಲಿಂಗಪ್ಪ ಬಂದ. ಹಲ್ಲೊ ಎಲ್ಲಿ?
ಇಲ್ಲೇ ಸದ್ಯ.
ನಿಮ್ಮ ಬಸ್ಸು ಇನ್ನೂ ಬರಲಿಲ್ಲವಾ? ಆರೂವರೆಯದು. ಎಲ್ಲೊ 'ಪುಸ್' ಎಂದಿರಬೇಕು. ಸುಟ್ಟು ಬಸ್ಸುಗಳು. ಈ ಗೌರ್ನಮೆಂಟ ಕೈಹಾಕಿದ್ದೆಲ್ಲ ಹೀಗೆ. ತನ್ನ ಜನರಲ್ ಪಾಲಿಟಿಕ್ಸಿನ ಜ್ಞಾನಕೋಶಕ್ಕೆ ಕೈ ಹಾಕಿದ. ಒಂದು ಶಿಂಗಲ್ ಚಾ ಹೊಡೆಯುವಾ ಎಂದು ಎಳೆದ. ಕ್ಯಾಂಟೀನನ್ನು ಹೊಕ್ಕೆವು.
ಬಿಸಿ ಬಿಸಿ ಇಡ್ಲಿ ಎರಡು ಎಂದ.
ಬೇಡ ಅಕ್ಕಿಯದನ್ನೆ ನಾನು ಈಗ ತಿನ್ನುವುದಿಲ್ಲ.
ಎನು?
ಅಪ್ಪನಿಗೆ ಅನ್ನ ಹಾಕುವುದಿದೆ.
ಹಾಗಾದರೆ ಬಿಸಿ ಬಿಸಿ ದೋಸೆ ಶುದ್ಧ ಗೋದಿಯದು.
ಮಾತಾಡು ಮಾರಾಯಾ?
ಏನು ಗಲಾಟೆ.
ಎಂದು ಲಿಂಗಪ್ಪ ಕಿಡಕಿಗೆ ಮುಖ ತಿರುಹಿದ. ಚರಂಡಿಯಲ್ಲಿ ಕಾಗೆಗಳ ಮೇಲಾಟ ನಡೆದಿತ್ತು. ಥೂ ಎಲ್ಲಿ ಹೋದರೂ ಈ ಕಾಗೆಗಳ ಕಾಟ ತಪ್ಪದು. ಎನ್ನುತ್ತಿರುವಾಗ ಮಾಳಿಗೆಯಿಂದ ಯಾರೊ ಇಳಿದರು. ಲಿಂಗಪ್ಪನಿಗೆ ಆಕರ್ಿಮಿಡಿಸಿನ ಹಾಗೆ ಆಗಿರಬೇಕು. ಅಕೊ! ಎಂದ. ನನಗೆ ಏನೆಂದು ತಿಳಿಯದೆ ಒಂದೇ ಸಲ ಚಹ ನುಂಗಿ ಗ್ಲಾಸು ಕೆಳಗಿಟ್ಟೆ.
ಕಂಡೆಯಾ ಕ್ಷಿಯೊಪಾತ್ರ. ಈಗ ನೋಡುತ್ತಿರು. ಇಲ್ಲೇ ಕುಳಿತಿದ್ದರೆ ಎರಡು ಮೂರು ಜನರಾದರೂ ಮಾಳಿಗೆಯಿಂದ ಇಳಿದುಬರುತ್ತಾರೆ.
ಬಂದರೆ?
ಬಂದರಲ್ಲ. ಅವರು ಈಗ ಅವಳ ಮಗ್ಗುಲಲ್ಲಿ ಮಲಗಿ ಎದ್ದರು. ಅಂಥಾದ್ದನ್ನು ಹೇಳುವುದರಲ್ಲಿ ಲಿಂಗಪ್ಪನಿಗೆ ಎಲ್ಲಿಲ್ಲದ ಉತ್ಸಾಹ. ಯಕ್ಷಗಾನ ಕಲಾವಿದರು. ರಾಜಕಾರಣಿಗಳು ಚೇರಮನ್ನರುಗಳು ಎಲ್ಲರೂ ರುಚಿ ಉಂಡವರೆ. ಏನಂತಿಯಾ ಊರ್ವಶಿ, ಮೇನಕಿ ಮೊದಲಾದವರ ಜಾತಿ ಅವಳು. ಮೊನ್ನೆನ ಮಜಾ ಕೇಳಿದ್ದಿಯಾ ಆ ವೇದಾಂತ ಭಟ್ಟ ಸೋಗೆ ಅಟ್ಟಣಗಿಯಲ್ಲಿ ಈಕೆ ಜೊತೆ ಮಲಗಿದ್ದನಂತೆ. ಅಕಸ್ಮಾತ್ ಅವಳ ಗಂಡ ಕಂಡು ಬಿಟ್ಟನಂತೆ. ಪಾಪ ಏನಾಗಬೇಡ. ಒಂದು ಸೊಟ್ಟ ತೆಗೆದುಕೊಂಡು ಬಡಿದನಂತೆ. ವೇದಾಂತಿ ಪಾರಾದ. ಈಕೆ ಹೋಗಿ ಬಾವಿ ಹಾರಿಬಿಟ್ಟಳಂತೆ. ಕೇಳಬೇಕೆ ಆಗ ಗಂಡನೇ ಓಡಿ ಹೋಗಿ ಎತ್ತಿ ಬದುಕಿಸಿದನಂತೆ.
ಹಾಳು ಬೀಳಲಿ ಮಾಡಿದವರ ಪಾಪ ಆಡಿದವರಿಗೆ. ನಿನಗೆ ಯಾಕೆ ಅಷ್ಟು ನಾಲಿಗೆ ತುರಿಕೆ.
ಹೌದು ಮಾರಾಯಾ ಈ ಕಾಗೆಗಳು ಯಾಕೆ ಹೀಗೆ ಒದರುತ್ತಾವೊ. ಹುಶ್ ಶ್ಚು ಎಂದು ಎದ್ದ. 
ಅಂಗಡಿ ಬಾಗಿಲಲ್ಲಿ ಯಾರೋ ಕಫ ಉಗಿದಿದ್ದರು. ಮೂರುನಾಲ್ಕು ಕಾಗೆಗಳು ಚುಂಚಿನಿಂದ ತೆಗೆಯುವಾಗ ಮಾಲೆ ಮಾಲೆಯಾಗಿರುತ್ತಿತ್ತು. ಕುಡಿದ ಚಾವೆಲ್ಲ ತಿರುಗಿ ಬರುತಿತ್ತು. ಅಷ್ಟು ಹೊತ್ತಿಗೆ ಬಸ್ಸು ಬಂತು. ಆ ಕಡೆ ನುಗ್ಗಿದೆ.
ನಮ್ಮದು ಹಳ್ಳಿಯ ಬಸ್ಸಾದ್ದರಿಂದ ಜನ ಕಡಿಮೆ. ನಿರಾತಂಕವಾಗಿ ಹತ್ತಿ ಕುಳಿತೆ. ಲಿಂಗಪ್ಪ ಬೇರೆ  ಬಸ್ಸಿನ ಕಡೆ ನಡೆದ. ಕಂಡಕ್ಟರ್ ಟಿಕೇಟ್ ಪಂಚುಮಾಡಿ ಆಫೀಸಿಗೆ ಹೋದ. ಆಗ ಕ್ಲಿಯೋಪಾತ್ರ ಬಸ್ಸು ಹತ್ತಿದಳು. ಕ್ಲಿಯೋಪಾತ್ರ ಆಕೆಯ ನಿಜವಾದ ಹೆಸರಲ್ಲ. ಆಕೆಯ ಸೌಂದರ್ಯಕ್ಕೂ, ಕಾಮಕ್ಕೂ ಮೆಚ್ಚಿ ನಮ್ಮ ಲಿಂಗಪ್ಪನಂತಹರು ಕೊಟ್ಟ ಬಿರುದು. ಏನಿದ್ದರೂ ಲಿಂಗಪ್ಪ ರಸಿಕ ಎನ್ನಿಸಿತು.
ತನ್ನ ನಿರಿ, ಸೆರಗುಗಳನ್ನು ಪಕ್ಕದವರಿಗೆ ಹಾಯಿಸಿಕೊಳ್ಳುತ್ತ ಮುಂದಿನ ಸೀಟಿಗೆ ಹೋಗಿ ಕುಳಿತಳು. ಜನವೆಲ್ಲ ಸ್ತಬ್ಧವಾಯಿತು. ನನಗೆ ಆಶ್ಚರ್ಯ ಜನ ಮಾತಾಡುವುದಿಲ್ಲವೇಕೆ?
ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ರೀತಿ ಆಡುತ್ತಿದ್ದಳೇನು ಕ್ಲಿಯೋಪಾತ್ರ.
ಬಸ್ಸು ಚಲಿಸಿತು. ಸತ್ಯ, ವತ್ಸಲಾ ಎಲ್ಲರ ಮನಸ್ಸೂ ಆ ಕಡೆಯೇ ಇತ್ತು. ಅವಳ ಚಲನೆ, ಅವಳ ಬ್ಲೌಸಿನಿಂದ ಹೊಕ್ಕಳು ಕೆಳಗೆ ತೀರಾ ಜಾರಿದ ಸೀರೆಯವರೆಗಿನ ಎಣ್ಣೆಗಪ್ಪಿನ ಉದರಭಾಗ, ಲೂಸು ಬ್ಲೌಸಿನ ಹೊರಗೊತ್ತಿದ ಮೊಲೆಯ ಮಾಂಸವನ್ನೇ ಅನೇಕರು ಕಣ್ಣಲ್ಲಿ ನೆಕ್ಕುತ್ತಿದ್ದರು.
ನನಗೂ ನೋಡಬೇಕೆನ್ನಿಸಲಿಲ್ಲವೆ? ನೀನಿದ್ದರೆ ಏನನ್ನುತ್ತಿದ್ದಿ ವತ್ಸಲಾ. ನಾನೂ ಅಷ್ಟೆಯೆ? ಮೈಯ್ಮೇಲೆಲ್ಲ ಆ ಕಾಗೆಗಳು ಕುಳಿತಂತೆ. ಚರಂಡಿಯ ನೆನಪು. ಪಕ್ಕದಲ್ಲಿ ಕುಳಿತ ಯುವಕ 'ಮೈಯಲ್ಲಿ ಚನ್ನಾಗಿಲ್ಲವಾ? ಎಂದು ಮಾತು ತೆಗೆದ. ನನಗೆ ಮಾತು ಬೇಕಿರಲಿಲ್ಲ, ಬಸ್ಸಿನ ಮೇಲೆಲ್ಲ ಹರಟುವುದು ನನ್ನ ಸ್ವಭಾವವೂ ಅಲ್ಲ. ಆದರೂ ದಾಕ್ಷಿಣ್ಯಕ್ಕೆ ಮಾತಾಡಿದೆ.
ನೋಡಿ ಆಕೆಯಾ?
ಹ್ಞಾಂ
ಎಂಥ ಹೆಣ್ಣು ಮಾರಾಯರೆ ಮಾತು ನನಗೆ ಬೇಡವಾಗಿತ್ತು. ಆದರೂ ಆತ ಕೊರೆದ. ನೋಡಿ ನೋಡಿ ಅವರನ್ನು ಹಿಂದಿನ ಸೀಟಿನಲ್ಲಿ ಇಬ್ಬರು ಕುಳಿತವರು. ಮಧ್ಯವಯಸ್ಸು ದಾಟಿದೆ. ಚಪ್ಪರಕು ಸ್ವಭಾವದವರಾಗಿರಬೇಕು. ಕಾಲಿಗೆ ಹಲಸಿನ ಮೇಣ ತಾಗಿದ ನೊಣದಂತೆ ಒದ್ದಾಡುತ್ತಿದ್ದರು. ಮುಂದಿನ ಸೀಟಿಗೆ ತಮ್ಮ ಎರಡೂ ಕೈ ತೋಳಿಟ್ಟು ಬಗ್ಗಿದ್ದರು. ಗಾಡಿ ಅಲುಗಿದಾಗಲಾದರೂ ಅವಳ ಸ್ಪರ್ಶವಾಗಲೆಂದು. ಅವಳು ಆದಷ್ಟು ಹಿಂದೇ ತನ್ನ ಕೊರಳನ್ನು ಬಾಗಿಸಿ, ಮುಡಿಯನ್ನೇ ಅವರ ಕೈ ಮೇಲೆ ಕೆಡವುತ್ತಿದ್ದಳು. ಅವರಿಗೆ ಅತ್ತ ಚಪಲ. ಆದರೆ ಸುತ್ತಲೂ ಗುರುತಿನವರು. ನಿಜವಾಗಿಯೂ ವತ್ಸಲಾ ನನಗೆ ಪಾಪವೆನ್ನಿಸಿತು. ಅಷ್ಟಿದ್ದರೆ ಅವರೇಕೆ ಹೆದರಬೇಕು. ಮುಂದಿನ ಸೀಟಿನಲ್ಲೇ ಹೋಗಿ ಕುಳಿತರಾಗದೆ? ಮನುಷ್ಯನ ಈ ಅವಸ್ಥೆ ಯಾರಿಗೂ ಬೇಡ.
ಆ ಬೋಳಿ ಮಕ್ಕಳ ನೋಡಿ ಹಲ್ಕಟ್ ಬಾಂಚೋದ್ ಎಂದ ಪಕ್ಕದವ. ನನಗೆ ರೇಗಿತು.
ಅಯ್ಯಾ, ನೀನು ಸಂಭಾವಿತನ? ನೀನು ಮಾಂಸ ಭಕ್ಷಕನಲ್ಲವಾ? ಹಾಗಾದರೆ ಯಾಕೆ ಕೊರೆಯುತ್ತಿ. ಅವರಿವರಿಗೆ ಬೇಕಾದದ್ದು ಅವರವರಿಗೆ.
ಅವನಿಗೆ ಬೇಸರ ಆಗಿರಬೇಕು. ನಾನು ಮುಖ ತಿರುಗಿಸಿ ಕುಳಿತೆ. ಬಸ್ಸು ನಿಂತಿತು. ಕ್ಲಿಯೋಪಾತ್ರ ಇಳಿದಳು. ಅವರೂ ಇಳಿದರು.
ಎಲ್ಲ ಅಷ್ಟೇ ವತ್ಸಲಾ. ಹಾಗೆ ಕೇಳಿದರೆ ಅವಳ ಬಗ್ಗೆ ನನಗೆ ಅಭಿಮಾನ ಅನ್ನಿಸಿತು. ಈ ಗಂಡಸರೆಲ್ಲ ಹುಳಿತಿಂದ ಹಾಗೇ ಒದ್ದಾಡುವಾಗ ಆ ಹೆಣ್ಣು ಹೇಗೇ ಧಿಮಾಕು ಮಾಡಿದಳು.
ನೀವೆಲ್ಲ ನನಗೆ ತೃಣ ಎಂಬಂತೆ ನಡೆದುಬಿಟ್ಟಳು.
ಬಸ್ಸಿನಲ್ಲಿ ಉಸಿರು ಬಂತು. ಒಬ್ಬೊಬ್ಬರು ಒಂದೊಂದು ಮಾತು. ಇವರೆಲ್ಲ ಸಂಭಾವಿತರು ಅಂತಿಯಾ ವತ್ಸಲಾ? ಎಲ್ಲ ಅಷ್ಟೆ ಅಲ್ಲದಿದ್ದರೆ ಗುರುನಾಥ ಏನಾದ ಗೊತ್ತಲ್ಲ. ಗುರುನಾಥ ಅವನ ಹೆಂಡತಿಯ ಚಲುವಿಕೆಯೇನು ಕಡಿಮೆ. ಅಲ್ಲದೆ ಎಷ್ಟು ನಾಜೂಕು. ಮಕ್ಕಳು ರತ್ನದಂತವು. ಆದರೆ ಅವನು ಯಾವುದೋ ಒಂದು ಮಲೆಯಾಳಿ ಹೆಣ್ಣಿಗೆ ಗಂಟುಬಿದ್ದ. ಅಂಥ ಹೆಂಡತಿ ಮಕ್ಕಳು ಇದ್ದರೂ ಅವನಿಗೆ ಹಳಸಿದ ಮಾಂಸದ ಘಾಟು ಹೊಡೆಯಿತು. ನಾನು ಎಷ್ಟು ಹೇಳಿದೆ. ನೀನು ಹೇಳಿದೆ. ಆದರೆ ಗುರುನಾಥ ಹುಚ್ಚನಾದ. ಕೊನೆಗೆ ಆಕೆಯ ಮತ್ತೊಂದು ಗಿರಾಕಿ ಚೂರಿ ಹಾಕಲು ಬಂದನಂತೆ. ಹೇಗೆ ಜೀವದಿಂದ ಪಾರಾಗಿ ಬಂದ. ಈಗ ಎಷ್ಟು ಸಲೀಲಾಗಿ ಇದ್ದಾನೆ. ಶುದ್ಧ ಪ್ರೇಮ ಸಾಧ್ಯವಿಲ್ಲ. ಅದು ಕಾವ್ಯದಲ್ಲಿ ಮಾತ್ರ ಇರಬಹುದು. ನಾನೂ ಅದಕ್ಕೆ ನಿನಗೆ ಗಂಟು ಬಿದ್ದಿದ್ದಿರಬಹುದು. ನಿನ್ನನ್ನು ನಾನು ಬಿಟ್ಟುಳಿಯಲಾಗುವುದಿಲ್ಲ. ಆದರೆ ನನಗೆ ಹೊಟ್ಟೆ ಕಿಚ್ಚಿಲ್ಲ ಅಲ್ಲವೇನೆ? ನನ್ನನ್ನು ಎಲ್ಲಿ ಬಿಡಲೂ ಹೆದರಿಕೆಯಿಲ್ಲ ಅಂತಿಯಲ್ಲ ನೀನು? ಹೌದೇನೆ ನಾನೂ ಅಷ್ಟೇ ಇರಬಹುದು. ವತ್ಸಲಾ. ಇದೆಲ್ಲ ಏನು? ಪ್ರೀತಿ ಅರ್ಥವಾಗುವುದಿಲ್ಲ. ಕ್ಲಿಯೊಪಾತ್ರ ಎಷ್ಟು ಪ್ರೀತಿಯನ್ನು ದಕ್ಕಿಸಿಕೊಂಡಳು. ಆ ಮಲೆಯಾಳಿ ಹೆಂಗಸು ಹೋಗಲಿ ಬಿಡು. ನಿನ್ನ ಮಾವನನ್ನೇ ನೋಡು. ನೀನೇ ಹೇಳಿದ್ದಿಯಲ್ಲ. ಗಂಡು-ಹೆಣ್ಣು ಇರುವುದೆಂದರೆ ಕಾಮಕ್ಕಾಗಿ ಎಂದೇ ಅವನ ಸಿದ್ಧಾಂತ. ತಾನೂ ಏಕಾಂತ ಅವನ ದೃಷ್ಟಿಗೆ ಸಿಕ್ಕುವುದಿಲ್ಲ ಎಂದು. ಇದೆಲ್ಲ ಏನು? ನನಗೆ ನನ್ನ ವತ್ಸಲಾ ಸಾಕು. ನನಗೆ ಕಾಗೆಯ ಬಗ್ಗೆ ಅಸಹ್ಯ.
ಬಸ್ಸು ನಿಂತಿತು. ನಾನು ಇಳಿದೆ. ಬಿಸಿಲೇರುತಿತ್ತು. ಅಂಗಡಿ ಹೊಕ್ಕಿ ಬಾಳೆ ಹಣ್ಣು ತಿನ್ನಬೇಕೆನಿಸುತ್ತಿತ್ತು. ಆದರೆ ಮನಸ್ಸಿಗೆ ಸ್ವಸ್ಥವಿರಲಿಲ್ಲ. ಸುಮ್ಮನೆ ನಡೆದೆ. ಪೇಪರನ್ನು ಬಿಸಿಲಿಗೆ ಅಡ್ಡವಾಗಿ ಹಿಡಿದೆ. ಸೆಟ್ಟಿ ಮನೆ ದಾಟುವಾಗ ನಿಂತೆ. ಸೆಟ್ಟಿ ಹೆಂಡತಿಯನ್ನು ಹಿಡಿದು ಸೌದೆಕೋಲುನಿಂದ ಬಡಿಯುತ್ತಿದ್ದ. ಅವಳು ಅರಚಿಕೊಳ್ಳುತ್ತಿದ್ದಳು. ಎಲ್ಲಿ ಕೊಂದು ಬಿಟ್ಟು ಪೇಚಾಟಕ್ಕೆ ಸಿಕ್ಕುತಾನೇನೋ ಎಂದು ಹೊಕ್ಕಿದೆ.
ಏನೊ ಸೆಟ್ಟಿ ಹೀಗೆ ಬಡಿಯೂದಾ? ಎಂದೆ.
ನೋಡಿ ಒಡೆಯಾ? ಇವಳು ಬೀದಿ ಬಸವಿ ಆಗುತ್ತಿದ್ದಾಳೆ. ಸೌದೆಗೆ ಹೋದರೆ ಎಷ್ಟು ಹೊತ್ತು ಇವಳಿಗೆ. ಆ ದುರ್ಗನಾಯ್ಕನ ಕೈಲಿ ಕೊಮಣೆ ಮಾಡುತ್ತ ವೇಳೆ ಕಳೆಯುತ್ತಾಳೆ, ರಂಡೆ.
ನಾನು ಹೋದದ್ದರಿಂದಲೋ ಏನೋ. ಅವನ ಹೆಂಡತಿ ಕಣ್ಣೀರು ಒರೆಸಿಕೊಂಡಳು. ಶೆಟ್ಟಿ ಅವಳನ್ನು ಬಿಟ್ಟ. ಎರಡೂ ಕೈಗಳನ್ನು ಮೇಲೆ ಮಾಡಿ ಮುಡಿಕಟ್ಟಿಕೊಳ್ಳುತ್ತ ನಿಂತಳು. ಬ್ಲೌಸ್ ಇಲ್ಲದ್ದರಿಂದ ಅರ್ಧಮರ್ಧ ಮೊಲೆ ಇಣುಕುತಿತ್ತು.
ನೋಡಿ ಒಡೆಯಾ? ತಾ ಕಳ್ಳ ಪರರ ನಂಬ. ಸೌದೆ ಹೊರೆ ಒಜ್ಜೆ ಆಗಿತ್ತು. ಇವರು ಮುಂದೆ ಬಂದಿದ್ದರು. ನಾನು ಹೊರೆ ಚಾಚಿದೆ. ಜಾರಿಬಿದ್ದು ಹೋಯಿತು. ಎತ್ತಲು ಆಗಲಿಲ್ಲ. ಅಲ್ಲೇ ಕರಡಕೊಯ್ಯುತ್ತಿದ್ದ ದುರ್ಗಪ್ಪನ ಹತ್ತಿರ ನಗೆಯೆಂದೆ. ಅವನು ಕವಳ ಹಾಕುತ್ತ ಕುಳಿತನೂ ಒಂದು ತೆಗೆದುಕೊಂಡು ಹಾಕಿದೆ. ಅಷ್ಟೇ ಅಷ್ಟಕ್ಕೆಲ್ಲ ಈ ರಂಪಾಟ.
ನೀವು ನಂಬಬೇಡಿ. ಈ ರಂಡೆ ಏನು ಮಾಡಿದಳೆಂದು ನನಗೆ ಗೊತ್ತ ಎಂದು ನನಗೆ ಕೂಡ್ರಲು ಸ್ಥಳಮಾಡಿಕೊಟ್ಟ ಶೆಟ್ಟಿ. ನಾನು ಬಂದುದರಿಂದಲೇನೊ ಅವನ ಹೆಂಡತಿ ಗೆಲುವಾದಳು. ಅಲ್ಲಿಯೇ ಮೆಟ್ಟಗತ್ತಿ ಇಟ್ಟು ಹರಿಗೆಸೊಪ್ಪು ಕೊರೆಯಲು ಶುರುಮಾಡಿದಳು. ಕಂಪೌಂಡಿನಲ್ಲಿ ಆಕಳು ಬಂತು. 'ಹಾತ್ ಹುಶ್' ಹಾಕುತ್ತ ನಡೆದ. ಅವಳು ಮೆಟ್ಟಗತ್ತಿಯ ಮೇಲೆ ಕುಳಿತಳು. ತನ್ನ ಸೀರೆಯನ್ನು ಮೇಲೆ ಸರಿಸಿ, ಸರಿಸಿ ಬೆಳ್ಳ ಬೆಳ್ಳಗಿನ ತೊಡೆಯನ್ನು ನಿರ್ಲಕ್ಷ್ಯಿತವೊ ಎನ್ನುವಂತೆ ತೋರಿಸುತ್ತಿದ್ದಳು. ಸರಿಸುವ ನೆವದಿಂದ ತನ್ನ ಎದೆಯ ಗುಂಡಿಕೆಯನ್ನು ಪ್ರದಶರ್ಿಸುತ್ತಿದ್ದಳು. ನಾನು ಹೆದರಿದೆ. ಸಿಟ್ಟೂ ಬಂತು. ಹೀಗೆಲ್ಲ ಮಾಡಿದರೆ ಸಂಸಾರ ಹೇಗೆ ನಡೆಯುತ್ತದೆ ಎಂದೆ. ಅವರಿಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಒಂದು ಥರ ನಗೆಯಾಡಿದಳು. ಇನ್ನು ಕೂಡ್ರುವುದು ಕ್ಷೇಮವಲ್ಲವೆನ್ನಿಸಿತು. ಬರುತ್ತೇನೆ ಎಂದು ಎದ್ದೆ. ಸೀರೆ ಕೊಡಹುತ್ತ ಎದ್ದು ನಿಂತಳು. ದಣಪೆಯವರೆಗೂ ಬಂದು ಬರುತ್ತೇನೊ ಎಂದೆ. ಹೊರಟು ಬಿಟ್ಟಿರಾ? ಎಂದ ಶೆಟ್ಟಿ ಬಾಳೆಕೊನೆ ಶಿಲ್ಕ ಅದೆಯಾ ಎಂದ. ನೋಡುವಾ ನಾಳೆ ಆ ಕಡೆ ಬಾ ಎಂದೆ. ಅವನ ಹೆಂಡತಿ ಅಂಗಳಕ್ಕೆ ಬಂದಿರಬೇಕು. ತಿರುಗಿ ನೋಡಬೇಕನ್ನಿಸಿತು. ಮನುಷ್ಯನನ್ನೇ ಮನುಷ್ಯನು ದೌರ್ಬಲ್ಯಕ್ಕೆ ಸಿಲುಕಿಸುವುದಾದರೆ ಯಾವುದು ಅಸಾಧ್ಯ.
ಇದೇ ನಿಸರ್ಗವೇನೆ ವತ್ಸಲಾ? ಹಾಗಾದರೆ ಸಂಸ್ಕೃತಿಯೆಂದರೇನು? ಅದೆಲ್ಲಾ ಸುಳ್ಳು ಅಲ್ಲವಾ? ಕಾಗೆಗಳು, ಚರಂಡಿ, ಕೊಳೆತ ಮಾಂಸ, ಅದೇ ಸತ್ಯ ಥೂ.
ನಿನಗೂ ಅಂಥಾ ಚಪಲತೆ ಉಂಟಾಗುವುದಿಲ್ಲವಾ? ಅಥವಾ ಅದನ್ನೆಲ್ಲ ನೀನೂ ಹತೋಟಿಯಲ್ಲಿಟ್ಟು, ನನ್ನನ್ನೂ ಹತೋಟಿಯಲ್ಲಿಟ್ಟುಕೊಂಡಿದ್ದಿಯಾ? ನೀನು ಸತ್ತು ಹೋದರೆ ನಾನೂ ಕೊಳಕು ಕೂಳನ್ನು ಆರಿಸುತ್ತೇನೆಯೆ? ನಮಗೆ ಇದು ಸಾಧ್ಯವಿಲ್ಲ ಅಲ್ಲವಾ? ಅವರವರ ದಾರಿ ಅವರಿಗೆ. ನಾನೇಕೆ ತಲೆಕೆಡಿಸಿಕೊಳ್ಳಬೇಕು.
ಮಧ್ಯಾಹ್ನ ಹನ್ನೆರಡಕ್ಕೆ ಸಮೀಪ. ಗೇಟಿನಲ್ಲಿ ವತ್ಸಲಾ ನಿಂತಿದ್ದಳು. ಸುಳ್ಳು ಸಿಟ್ಟಿನಿಂದ ಇಷ್ಟು ಹೊತ್ತಾ? ನೋಡಿ ಮನೆಗೆ ಬಂದವರೆಲ್ಲ ನಿಮ್ಮನ್ನೇ ಕೇಳುತ್ತಿದ್ದಾರೆ. ಆಗಲೇ ಭಟ್ಟರು ಬಂದಿದ್ದಾರೆ. ನಿಮ್ಮದು ಯಾವಾಗಲೂ ಹೀಗೆ.
ನಾನು ವತ್ಸಲೆಯನ್ನೇ ನುಂಗುವ ದೃಷ್ಟಿಯಿಂದ ನೋಡುತ್ತ ನಿಂತೆ.
ಇಂದು ಮಾವನ ದಿನ ಎಂದು ಅರ್ಥಗಭರ್ಿತವಾಗಿ ನಕ್ಕಳು ವತ್ಸಲ. ತುಂಟಿ ಎಂದು ಕೆನ್ನೆ ಚಿವುಟಿದೆ.
ಸಾಕು ಎಂದರೆ, ನೋಡಿಯಾರು ಎಂದಳು ವತ್ಸಲ.
ವಿಧಿಯಂತೆ ಎಲ್ಲ ನಡೆಯಿತು. ಕಾಗೆಗೆ ಎಡೆ ಇಟ್ಟೆ. ಹಾಯ್ ಹಾಯ್ ಎನ್ನಲು ಬಾಯ್ತೆಗೆದೆ. ಅಯ್ಯೊ! ಆ ಚರಂಡಿಯ ನೆನಪು. ಸತ್ತ ಬೆಕ್ಕಿನ ಮಾಂಸ, ಕಫವನ್ನೇ ನಾರು ನಾರಾಗಿ ಎಳೆಯುತ್ತಿರುವ ಕಾಗೆ, ಅದೇ ಕಾಗೆಯೆ ನನ್ನ ಅಪ್ಪನಿಗೆ ಅನ್ನ ಮುಟ್ಟಿಸುತ್ತದೆಯೆ!
ವಾಕರಿಕೆ ಬಂತು. ಆದರೂ ರೂಢಿ ಯಾಕೆ ಹಾಗೆ ನಿಂತಿದ್ದೀರಿ ಕರೆಯಿರಿ ಎಂದಳು ವತ್ಸಲ. ಅವಳಿಗೆ ಕೂಡಲೇ ಗೊತ್ತಾಗುತ್ತದೆ ನನ್ನ ಮಿಡಿತ. ನನ್ನ ಭಾವನಾಪರವಶತೆ ಅವಳಿಗೆ ಗೊತ್ತು. ಇಂದು ಏನಾದರೂ ನೋಡಿಬಂದಿರಬೇಕು. ಅಥವಾ ಜಗಳ ಮಾಡಿಬಂದಿರಬೇಕು. ಅಥವಾ ರಾಜಕೀಯ ಭಾಷಣ ಕೇಳಿರಬೇಕು. ಇಲ್ಲವೆ, ಯಾವುದೊ ಪುಸ್ತಕ ಓದಿರಬೇಕು. ಅಥವಾ ಯಾವುದೋ ಸಿನೇಮಾಕ್ಕೆ ಹೋಗಿರಬೇಕು. ಇನ್ನು ಮಧ್ಯಾಹ್ನ ತರಾಟೆಗೆ ತೆಗೆದು ಕೊಳ್ಳುತ್ತಾ ಕೇಳುತ್ತಾಳೆ. ಚಚರ್ೆನಡೆಸುತ್ತಾಳೆ. ನನ್ನ ಮುದ್ದು ಮಗು ಎನ್ನುತ್ತಾಳೆ. ವತ್ಸಲೆಯ ಮಾತಿಗೆ ಎಚ್ಚತ್ತು 'ಹ್ಯಾ ಹಾಯ್' ಕರೆದೆ. ಕಾಗೆ ಬರಲಿಲ್ಲ. ವತ್ಸಲೆಯ ಮನಸ್ಸಿನಲ್ಲಿ ಭಯ. ಆಯಿಯ ಮನಸ್ಸಿನಲ್ಲಿ ಶಂಕೆ. ಹುಡುಗರಿಗೆ ಊಟದ ಚಿಂತೆ.
ಎಲ್ಲಿ ಮೈಲಿಗೆಯಾಗಿದೆಯೊ ಎಂದು ಆಯಿಗೆ ಭಯ. ಸ್ನಾನ ಆದ ಮೇಲೆ ಉಚ್ಚೆ ಹೊಯ್ದು ಬಿಟ್ಟಿದ್ದೇನೇನೊ ಎಂದು ಭಟ್ಟರಿಗೆ ಭಯ. ಈ ತಪ್ಪಿಗೆ ತನ್ನ ಗಂಡ ಪಕ್ಕಾಗುತ್ತಾನೆಂದು ವತ್ಸಲೆಗೆ ಭಯ. ನನಗೆ ಸ್ಥಾನಮಾನದ ಭಯ. ಮತ್ತೆ ಕರೆದೆ ಮತ್ತೆ ಕರೆದೆ.
ಮೌನವೇ ರಾಜ್ಯ ಪಸರಿಸುತ್ತದೆ. ಅರ್ಧ ತಾಸು ಆದರೂ ಕಾಗೆಯಿಲ್ಲ. ಕೊನೆ ಆಯಿತು. ತಾನು ನೀರು ಬಿಡುತ್ತೇನೆ ಎಂದು ಬಂದಳು. ಮತ್ತೆ ಕರೆದೆ. ಹತ್ತುನಿಮಿಷದ ಮೇಲೆ ಕರ ಕರ ಎಂದು ಹಾರಿಬಂತು.
ಕೊಳೆ ಹೆಕ್ಕುವ ಈ ಕಾಗೆಗಳಿಗೆ ಸೂಕ್ಷ್ಮವಿಷ್ಟು ಎಂದು ಹಲ್ಲು ಕಡಿದೆ. ಬೇರೆ ಸಮಯವಾಗಿದ್ದರೆ ಚಿಟ್ ಬಿಲ್ಲಿನಿಂದ ಎದುರಿಸಿ ಬಿಡುತ್ತಿದ್ದೆ. ಈಗ ಹಾಗಲ್ಲ ಅಪ್ಪನಿಗೆ ಪಾರ್ಸೆಲ್ ಮುಟ್ಟಿಸಬೇಕಲ್ಲ.
ಬಂತು ಕಾಗೆ ಒಂದೋ ಎರಡೋ ಎಡೆ ತಿಂದಿತು. ಎಲ್ಲರಿಗೂ ಸಮಾಧಾನ. ಹೆಚ್ಚು ಮಾತಾಡದೇ ಊಟ ಮಾಡಿ ಮುಗಿಸಿದೆ. ಎಲ್ಲರೂ ಹೊರಟು ಹೋದರು. ರೂಮನ್ನು ಹೊಕ್ಕಿ ನಿರುಂಬಳವಾಗಿ ಮಲಗಿದೆ.
ಮನಸ್ಸು ವೇದನೆಗೊಳಗಾಗುತ್ತಿತ್ತು. ಆದರೂ ದಣಿವು. ಅದರಲ್ಲಿ ಶ್ರಾದ್ಧದ ಊಟ. ಬಳಲಿಕೆ ಹಾಯಾಗಿ ಗಾಳಿಬೀಸಿತು. ನಿದ್ದೆ ಬಂತು.
ಎಚ್ಚರಾದಾಗ ಐದು ಗಂಟೆ. ತಲೆ ಹಗುರಾಗಿತ್ತು. ಇಷ್ಟು ತಣ್ಣೀರು ಚಿಮುಕಿಸಿ ಬಂದು ಕುಳಿತೆ. ಹಿತ್ತಲಲ್ಲಿ ತೆಂಗಿನ ಹೆಡೆ ನೇಯುತ್ತಿದ್ದ ವತ್ಸಲೆ ಕಂಡಿರಬೇಕು. ಚಹಾ ಮಾಡಿ ತಂದಳು.
ಏನು ಆರಾಮ ಆಯ್ತಾ.
ನಗೆಯಾಡಿದೆ, ಅಷ್ಟೆ.
ನೋಡಿ ದಿನವಿಡೀ ಕಾಗೆಗೆ ಬಯ್ಯುತ್ತಿರಬೇಡಿ. ಅದಕ್ಕೆ ಕೋಪ ಬರುತ್ತದೆ. ನಕ್ಕಳು ವತ್ಸಲೆ. ನಕ್ಕರೆ ಮಿಂಚು ತೋಕುತ್ತದೆ.
ಹೌದಾ?
ಕಣ್ಣು ಕಾಣಲಿಲ್ಲವಾ? ಇಂದು ಕಾಗೆ ಬರದಿದ್ದರೆ ಎಷ್ಟು  ಪಜೀತಿಯಾಗುತಿತ್ತು.
ವತ್ಸಲಾ ಕಾಗೆಗಳು.....
ಉಶ್ ವತ್ಸಲಾ ತುಟಿಯ ಮೇಲೆ ಕೈಯಿಡುತ್ತಾ ಈ ಕಾಗೆ ಬರುವ ಮುನ್ನ ಈ ಇಲ್ಲಿ ಏನಿತ್ತಣ್ಣ. ಬರೀಶೂನ್ಯ ಸಿಂಹಾಸನ. ಇದರ ಸುಖದ ಸೋಂಕಿನಿಂದಲೆ ಕಣಾ ಪ್ರಕೃತಿಯ ಮೃದಂಗ ಚೇತರಿಸಿ ಹರಿಸಿತ್ತು ತಾನಸೇನನ ಗಾನ ಎಂದು ಮುತ್ತಿಕ್ಕಿದಳು.
ತುಂಟಿ ಎಂದು ಸೊಂಟ ಬಳಸಿಕೊಂಡು ಮಂಚದಲ್ಲಿ ಬಿದ್ದೆ.

No comments:

Post a Comment