Sunday 19 January 2020

ಕಾಮ್ರೆಡ್ ಮೇರಿದೇವಾಸಿಯಾ...ಎಂ.ಎ. ಖತೀಬ


ಸಂಘಟನೆ ಮತ್ತು ಹೋರಾಟದ ರಂಗದಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾ ಒಂದು ಅಚ್ಚಳಿಯದ ನೆನಪು. ಚಳುವಳಿ ನಮ್ಮ ಸಮಾಜವನ್ನು ಕ್ರಿಯಾಶೀಲವಾಗಿಸುವ ಮತ್ತು ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಗತಿ ಎಂದು ತಿಳಿದಿದ್ದ ಮೇರಿ ದೇವಾಸಿಯಾ 1965 ರಲ್ಲಿ ನಡೆಸಿದ ಐತಿಹಾಸಿಕ ಹೋರಾಟವನ್ನು ಒಳಗೊಂಡಂತೆ ತನ್ನ ಬದುಕನ್ನು ಪೂರ್ತಿಯಾಗಿ ಸಂಘಟನೆ ಮತ್ತು ಹೋರಾಟ ಕ್ಕೆ ಮುಡಿಪಾಗಿಟ್ಟವರು. ಕರ್ನಾಟಕದಲ್ಲಿ ಇಂದು ವಿಸ್ತಾರವಾಗಿ ಬೆಳೆದಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಪ್ರಾರಂಭಿಸಿದವರು ಅವರು. 
ಅಂದು ಓರ್ವ ಮಹಿಳೆ ನಾಯಕತ್ವಕ್ಕೆ ಬರುವುದೆಂದರೆ ಹುಬ್ಬೇರಿಸುವ ಕಾಲ. ಅದರಲ್ಲೂ ಪ್ರಭುತ್ವ ಮತ್ತು ಸರ್ಕಾರವನ್ನು ಎದುರಿಸಿ ಇಡೀ ದುಡಿಯುವ ವರ್ಗಕ್ಕೆ ಸಂಘಟನಾತ್ಮಕ ಹಕ್ಕುಗಳನ್ನು ಹಾಗೂ ನ್ಯಾಯ ಬದ್ದ ಸೌಲಭ್ಯಗಳನ್ನು ಒದಗಿಸಿ ಕೊಡಲು ಮುಂಚೂಣಿಯಲ್ಲಿದ್ದು ಯಶಸ್ವಿಯಾಗುವುದೆಂದರೆ ಸಾಧಾರಣ ಮಾತಲ್ಲ. ಇಂದು ಸಂವಿಧಾನ ಬದ್ಧವಾದ ಸೌಲತ್ತುಗಳನ್ನು, ಭದ್ರತೆಯನ್ನು ನೌಕರರು ಪಡೆಯುತ್ತಿದ್ದಾರೆ ಎಂದರೆ ಅದರಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾರವರ ತ್ಯಾಗಪೂರ್ಣ ಕೊಡುಗೆ ಮಹತ್ವಪೂರ್ಣವಾದುದು.

ಇಂದಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಸ್ವಾಭಿಮಾನಿ ಹೋರಾಟ ನಡೆಸಬೇಕಾದ ಸಂಘಟನೆಗಳು ಆಳುವ ಪಕ್ಷಗಳ ಬಾಲಂಗೋಚಿ ಗಳಾಗುತ್ತಿರುವ ಕೆಲವು ಉದಾಹರಣೆಗಳು ನಮ್ಮೆದುರಿಗಿದೆ. ನೌಕರರ ಹಿತಾಸಕ್ತಿಗಾಗಿ ರಾಜಿ ರಹಿತ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಸಂಘಟನೆಗಳನ್ನು ವ್ಯಕ್ತಿಕೇಂದ್ರಿತವಾಗಿ, ಯಾರದೋ ಹಿತಾಸಕ್ತಿಯ ರಕ್ಷಣೆಗಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎನ್ನುವ ಅನುಮಾನ ಕೂಡ ಕಾಡುತ್ತಿದೆ. ಪಾರದರ್ಶಕತೆಯನ್ನು ಪ್ರಜಾಸತ್ತಾತ್ಮಕ ತೆಯನ್ನು ಕಳೆದುಕೊಳ್ಳುವ ಮೂಲಕ ಸಂಘಟನೆ, ಚಳುವಳಿ ದುರ್ಬಲಗೊಳ್ಳುತ್ತಿದೆ. ದೇಶ ಜಾಗತೀಕರಣ ಸುಳಿಯಲ್ಲಿ ಸಿಲುಕಿರುವ ಈ ಸಂದರ್ಭದಲ್ಲಿ ಆಳುವ ವರ್ಗ ಜಾತಿ, ಧರ್ಮ, ಹಣ, ಅಧಿಕಾರದ ಆಮೀಷ ಒಡ್ಡಿ ಚಳುವಳಿಯನ್ನು ಮುರಿಯಲು ಉತ್ಸುಕವಾಗಿರುವ ಕಾಲದಲ್ಲಿ ಕಾಮ್ರೆಡ್ ಮೇರಿ ದೇವಾಸಿಯಾರವರ ಬದ್ಧತೆ ಮತ್ತು ಹೋರಾಟದ ದಾರಿ ನಮಗೆ ಮಾರ್ಗದರ್ಶಿಯಾಗಿರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಾರವಾರದ ಎಂ.ಎ. ಖತೀಬ್ ಅವರು ಬರೆದಿರುವ ಈ ಕಿರು ಪುಸ್ತಕವನ್ನು ಬಂಡಾಯ ಪ್ರಕಾಶನ ಪ್ರೀತಿಯಿಂದ ಪ್ರಕಟಿಸುತ್ತದೆ. ಎಂ.ಎ. ಖತೀಬರವರು ಮೂಲತಃ ಕಾರವಾರದ ಕಡವಾಡದವರು. ಅವರ ಕುಟುಂಬದ ಹಿರಿಯರು ಸ್ವಾತಂತ್ರ್ಯ ಹೋರಾಟ ಮತ್ತು ರೈತ ಚಳುವಳಿ ಯನ್ನು ಜಿಲ್ಲೆಯಲ್ಲಿ ಕಟ್ಟಿದ ಮೊದಲಿಗರು ಹೌದು. ಮುಜಾಫರ್ ಖತೀಬರವರು ಉಪ ತಹಶಿಲ್ದಾರರಾಗಿ ನಿವೃತ್ತರಾದವರು. ಈ ಹಿಂದೆ ಅವರ “ಎಚ್ಚರ ಇದ್ದ ಕಾಶಿ ಮತ್ತು ಬಾಳಸುನ ಔಷಧಿ” ಎನ್ನುವ ಕಿರು ಕತೆಗಳ ಪುಸ್ತಕವನ್ನು ಪ್ರಕಾಶನ ಪ್ರಕಟಿಸಿತು. ಇದು ಅವರ ಎರಡನೇ ಪುಸ್ತಕ, ಸರ್ಕಾರಿ ನೌಕರರಾಗಿರುವಾಗಲೂ ಮನೆ ಕೆಲಸ ಕ್ಕಿಂತಲೂ ಹೆಚ್ಚು ಮುತುವರ್ಜಿಯಿಂದ ತನ್ನ ಸರ್ಕಾರಿ ನೌಕರಿ ಮಾಡುವ ಮೂಲಕ ಜನಾನುರಾಗಿ ಯಾಗಿರುವ ಖತೀಬರಿಗೆ ಅನಂತ ಕೃತಜ್ಞತೆಗಳು. ಪುಸ್ತಕ ವಿನ್ಯಾಸಗೊಳಿಸಿದ ಎಂ ರಾಮು ಮತ್ತು ಮುದ್ರಿಸಿದ ಕ್ರಿಯಾ ಸಂಗಾತಿ ಗಳಿಗೆ ಕೃತಜ್ಞತೆಗಳು. ಎಂದಿನಂತೆ ಕೊಂಡು ಓದುವ ತಮಗೂ ವಂದನೆ.

ವಿಠ್ಠಲ ಭಂಡಾರಿ
 ಬಂಡಾಯ ಪ್ರಕಾಶನದ ಪರವಾಗಿ.



No comments:

Post a Comment