Thursday 2 October 2014

ಯುಮುನಾ, ಸೊಲಬಕ್ಕನವರ್ ನೆನಪಿಸಿದ ವಿಶ್ವ ಶಾಂತಿ ದಿನ

ಯುಮುನಾ, ಸೊಲಬಕ್ಕನವರ್ ನೆನಪಿಸಿದ ವಿಶ್ವ ಶಾಂತಿ ದಿನ

Standard
ಈ ವರ್ಷ ಮತ್ತೆ ವಿಶ್ವದಾದ್ಯಂತ ಯುದ್ಧದ ಕಾರ್ಮೋಡಗಳು ಕವಿದಿವೆ. ಸಿರಿಯಾ, ಗಾಜಾ, ಉಕ್ರೇನ್ ಗಳಲ್ಲಿ ಭೀಕರ ಯುದ್ಧ ನಡೆದಿವೆ. ಈ ವರ್ಷ ಮೊದಲ ಮಹಾಯುದ್ಧದ ಆರಂಭದ ಶತವಾರ್ಷಿಕ ಸಹ. ಹಿರೊಶಿಮಾ-ನಾಗಸಾಕಿ (ಅಗಸ್ಟ್ 6 ಮತ್ತು 9) ದಿನದಂದು ಪ್ರತಿ ವರ್ಷ ಆ ನಗರಗಳಲ್ಲಿ ‘ಗೆನುಸುಕಿಯೊ’ ಎಂಬ ಜಪಾನಿ ಸಂಘಟನೆ ಸಂಘಟಿಸುವ “ಅಣು ಬಾಂಬುಗಳ ವಿರುದ್ಧ ಅಂತರ್ರಾಷ್ಟ್ರೀಯ ಸಮ್ಮೇಳನ” ನಡೆಯುತ್ತದೆ. ಈ ಸಮ್ಮೇಳನ 1955ರಿಂದ ಪ್ರತಿ ವರ್ಷ ಸತತವಾಗಿ ನಡೆಯುತ್ತಾ ಬಂದಿದೆ. ಈ ಸಮ್ಮೇಳನಕ್ಕೆ ಈ ಬಾರಿ ಸಿ.ಐ.ಟಿ.ಯು. ಪ್ರತಿನಿಧಿಯಾಗಿ ಕರ್ನಾಟಕದಿಂದ ಪ್ರಗತಿಪರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ಕವಯಿತ್ರಿ ಕೂಡಾ ಆಗಿರುವ ಯುಮುನಾ ಗಾಂವ್ಕರ್ ಆಯ್ಕೆಯಾಗಿದ್ದು ವಿಶೇಷವಾಗಿತ್ತು.
ನೂರಡಿ ಬಣ್ಣದ ನಡೆ ಜಪಾನಿನತ್ತ
ಯಮುನಾ ಅಣುಬಾಂಬು-ವಿರೋಧಿ ಸಮ್ಮೇಳನಕ್ಕೆ ಕರ್ನಾಟಕದಿಂದ ಏನು ಒಯ್ಯಲಿ ಎಂದು ಸಮುದಾಯವನ್ನು ಕೇಳಿದಾಗ ನಮಗೆ ನೆನಪಾದದ್ದು ಸೊಲಬಕ್ಕನವರ 1986ರ ನೂರಡಿ ಬಣ್ಣದ ಅಣು-ಬಾಂಬು ವಿರೋಧಿ ಚಿತ್ರ. ಅದು ಆ ವರ್ಷ ಸಮುದಾಯದ ವಿಶ್ವಶಾಂತಿ ಜಾಥಾದಲ್ಲಿ ರಾಜ್ಯದ (ಮಾತ್ರವಲ್ಲ, ದೇಶದ ಹಲವು ಕಡೆ ಸೇರಿದಂತೆ) ಉದ್ದಗಲ ಸುತ್ತಿತ್ತು. ಆ ಚಿತ್ರದ ಜತೆ ‘ನೂರಡಿ ಬಣ್ಣದ ನಡೆಯಣ್ಣ, ಅಣು ಸಮರಕ್ಕೆ ತಡೆಯಣ್ಣ’ ಹಾಡು ಸಹ ರಾಜ್ಯದ ಮೂಲೆಮೂಲೆಯಲ್ಲೂ ಮಾರ್ದನಿಸಿತ್ತು. ಈಗ ಹಾವೇರಿಯಲ್ಲಿ ಸೊಲಬಕ್ಕನವರು ಸ್ಥಾಪಿಸಿರುವ ‘ರಾಕ್ ಗಾರ್ಡನ್’ನಲ್ಲಿ ಪ್ರದರ್ಶಿಸಿರುವ ಅದನ್ನು ಒಯ್ಯುವುದು ಶಕ್ಯವಿರಲಿಲ್ಲ. ಅದಕ್ಕಾಗಿ ಅದರ ಡಿಜಿಟಲ್ ಅವತಾರವನ್ನು ಡಿವಿಡಿ ರೂಪದಲ್ಲಿ ತಯಾರಿಸಿ ಯಮುನಾ ಅವರಿಗೆ ಕೊಡಲಾಯಿತು. ಯಮುನಾ ಗಾಂವ್ಕರ್ ಅವರು ಅಗಸ್ಟ್ ಮೊದಲ ವಾರದಲ್ಲಿ ಹಿರೊಶಿಮಾ-ನಾಗಸಾಕಿಗೆ ಹೋಗಿ ಅಲ್ಲಿ ಮನೆ-ಮನೆಗೂ ಮನ-ಮನಕ್ಕೂ ಹಬ್ಬಿದ ಶಾಂತಿ ಸಂದೇಶ ಹೊತ್ತು ತಂದರು.
ಅಷ್ಟು ಹೊತ್ತಿಗೆ ವಿಶ್ವ ಸಂಸ್ಥೆ 1986ರಲ್ಲಿ ಘೋಷಿಸಿದ (ಇತ್ತೀಚೆಗೆ ನಾವು ಮರೆತು ಬಿಟ್ಟಿರುವ) ವಿಶ್ವ ಶಾಂತಿ ದಿನ (ಸೆಪ್ಟೆಂಬರ್ 21) ಹತ್ತಿರ ಬರಲಾರಂಭಿಸಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿ ಸಮುದಾಯ ಈ ಬಾರಿಯ ವಿಶ್ವ ಶಾಂತಿ ದಿನವನ್ನು ಸೆಪ್ಟೆಂಬರ್ 20ರಂದು ಬೆಂಗಳೂರಿನ ಜೈ ಭೀಮ್ ಭವನದಲ್ಲಿ ವಿಶಿಷ್ಟವಾಗಿ ಆಚರಿಸಿತು. ಅದೊಂದು ವಿಶಿಷ್ಟ ಸಾಂಸ್ಕೃತಿಕ ಅನುಭವವಾಗಿತ್ತು. ಮಹಾಂತೇಶ್ ಲಿಂಗರಾಜು ಮತ್ತು ಸಂಗಡಿಗರು ಅವರು ಪ್ರಸ್ತುತಪಡಿಸಿದ 1986ರ ಜಾಥಾದ ಮತ್ತು ಇತರ ಶಾಂತಿ ಹಾಡುಗಳಿಂದಲೇ ಅದು ಆರಂಭವಾಯಿತು. ಯುದ್ಧ-ವಿರೋಧಿ ಕವನಗಳನ್ನು ರವಿಕುಮಾರ್ ಬಾಗಿ, ಹುಲಿಕುಂಟೆ ಮೂರ್ತಿ ಮತ್ತು ಮಂಜುನಾಥ್ ಅವರು ಓದಿದರು.
shanti dvd bidugade (2)
ಸಂಗ್ರಹಯೋಗ್ಯ ಡಿವಿಡಿ
ಅಂದು ಸೊಲಬಕ್ಕನವರ ವಿಶ್ವಶಾಂತಿ ಮತ್ತು ಅಣುಯುದ್ಧದ ಅಪಾಯವನ್ನು ಸಮರ್ಥವಾಗಿ ಬಿಂಬಿಸುವ ‘ನೂರಡಿ ಬಣ್ನದ ಚಿತ್ರದ ಬಗೆಗಿನ ಡಿವಿಡಿ ಬಿಡುಗಡೆ ಮತ್ತು ಪ್ರದರ್ಶನ ಮುಖ್ಯ ಆಕರ್ಷಣೆಯಾಗಿತ್ತು. ಡಿವಿಡಿಯನ್ನು ಕಲಾವಿದ ಕೃಷ್ಣ ರಾಯಚೂರು ಅವರು ಕರ್ನಾಟಕದ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನಾಗಮೋಹನ ದಾಸ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಿದರು. 25 ಮಿನಿಟಿನ ಈ ಡಿವಿಡಿಯನ್ನು ಪ್ರದರ್ಶಿಸಲಾಯಿತು. ನೂರಡಿ ಬಣ್ನದ ಚಿತ್ರವನ್ನು ಅದರ ಬಗೆಗಿನ ನಿರೂಪಣೆ ಜತೆ ತೋರಿಸುವುದಲ್ಲದೆ, – ಜಾಥಾದ ಹಾಡುಗಳು, ಚಿತ್ರದ ರಚನೆಯ ಹಿನ್ನೆಲೆ ಪ್ರಕ್ರಿಯೆಗಳ ಆಸಕ್ತಿಕಾರಕ ವಿವರಗಳು, ಯುದ್ಧ-ವಿರೋಧಿ ನಾಟವೊಂದರ ದೃಶ್ಯಗಳು, ಆ ಜಾಥಾದಲ್ಲಿ ಭಾಗವಹಿಸಿದ ಗಣ್ಯರ ನುಡಿಗಳಿಂದ – ಕೂಡಿದ್ದು ಸಂಗ್ರಹ ಯೋಗ್ಯ ದಾಖಲೆಯಾಗಿದೆ. ಮನುಕುಲದ ಚರಿತ್ರೆಯಲ್ಲಿ ಯುದ್ಧ ಹುಟ್ಟಿದ ಬಗೆ ಮತ್ತು ಸಮಾಜದ ಬೆಳವಣಿಗೆಯೊಂದಿಗೆ ಭೂತಾಕಾರದಲ್ಲಿ ಬೆಳೆದಿರುವ ಅದರ ಭೀಕರತೆ ಅಪಾಯಗಳನ್ನು ಅದು ಸಮರ್ಥವಾಗಿಯೂ ಮನೋಜ್ಞವಾಗಿಯೂ ಸೆರೆಹಿಡಿಯುತ್ತದೆ. ಇದು ಹಿಂದಿನಷ್ಟೇ, ಅಥವಾ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯವಾಗಿರುವ ವಿಶ್ವಶಾಂತಿ ಚಳುವಳಿಯ ಪ್ರಮುಖ ಆಶಯದ ಅತ್ಯಂತ ಸಮರ್ಥ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿದೆ. ಕೃಷ್ಣ ರಾಯಚೂರು ಅವರು ನೂರಡಿ ಬಣ್ನದ ಚಿತ್ರದ ಮಹತ್ವ ಮತ್ತು ಇಂದೂ ಅದರ ಪ್ರಸ್ತುತತೆ ಬಗ್ಗೆ ಮಾತನಾಡಿದರು.
ಇದಕ್ಕಿಂತ ಮೊದಲು ನ್ಯಾಯಮೂರ್ತಿ ನಾಗ್ ಮೋಹನದಾಸ್ ಅವರು ಮೊದಲ ಮಹಾಯುದ್ಧದ ಆರಂಭದಿಂದ ಈ ವರೆಗಿನ ಯುದ್ಧದ ಅಪಾಯದ ಬೆಳವಣಿಗೆಯ ಹಾದಿಯನ್ನು ಗುರುತಿಸಿದರು. ಮೊದಲ ಮಹಾಯುದ್ಧದ ಮೊದಲಿನ ಮತ್ತು ನಂತರದ ಯುದ್ಧಗಳ ನಡುವಿನ ವ್ಯತ್ಯಾಸವಾದ ಭಾರೀ ಪ್ರಮಾಣದಲ್ಲಿ ನಾಗರಿಕರ ಸಾವು-ನೋವು ಬಗ್ಗೆ ಗಮನ ಸೆಳೆದರು. ಎರಡನೇ ಮಹಾಯುದ್ಧದ ನಂತರ ಇನ್ನೊಂದು ಮಹಾಯುದ್ಧ ನಡೆದಿರದಿದ್ದರೂ, ಸುಮಾರು 250 ಯುದ್ಧಗಳು ನಡೆದಿವೆ ಈಗ ಇಡೀ ಜಗತ್ತನ್ನು ನೂರಾರು ಬಾರಿ ನಾಶ ಮಾಡುವಷ್ಟು ಶಸ್ತ್ರಾಸ್ತ್ರ ಪೇರಿಸಲಾಗಿದೆ ಎಂದು ಎಚ್ಚರಿಸಿದರು. 1986ರ ಸಮುದಾಯದ ಶಾಂತಿ ಜಾಥಾ ನಡೆದ ಅವಧಿಯಿಂದ ಈ ವರೆಗೆ ಆಗಿರುವ ಯುದ್ಧದ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳನ್ನು ಅವರು ಗುರುತಿಸಿ, ಇಂದಿನ ಸಂದರ್ಭದಲ್ಲಿ ಯುದ್ಧದ ಅದರಲ್ಲೂ ಅಣು ಬಾಂಬುಗಳ ಬಳಕೆಯ ಅಪಾಯ ಮತ್ತು ಅವುಗಳ ನಾಶಕ್ಕಾಗಿಯೂ ವಿಶ್ವಶಾಂತಿಗಾಗಿಯೂ ನಡೆಯಬೇಕಾದ ಚಳುವಳಿಯ ಮಹತ್ವದ ಬಗ್ಗೆ ವಿವರಿಸಿದರು.
das at shanti dina (2)
ಯುದ್ಧ-ವಿರೋಧಿ ಗಾಢ ಮಲ್ಟಿಮೀಡಿಯಾ ಅನುಭವ
ಯುಮುನಾ ಗಾಂವ್ಕರ್ ತಮ್ಮ ಜಪಾನ್ ಪ್ರವಾಸದ ಮೊದಲು ಮತ್ತು ನಂತರ ಬರೆದ ಅತ್ಯಂತ ಅರ್ಥಪೂರ್ಣ ಕವನಗಳ ಓದಿನ ನಡುವೆ ತಮ್ಮ ಅನುಭವವನ್ನು ಹಂಚಿಕೊಂಡರು. ಹಿರೊಶಿಮಾ ನಾಗಾಸಾಕಿಗಳಲ್ಲಿ ನಡೆದ “ಅಣು ಬಾಂಬುಗಳ ವಿರುದ್ಧ ಅಂತರ್ರಾಷ್ಟ್ರೀಯ ಸಮ್ಮೇಳನ”ದ ಕಲಾಪಗಳು, ಅಲ್ಲಿ ನೆರೆದ ವಿವಿಧ ದೇಶಗಳ ಸರಕಾರಗಳ, ಶಾಂತಿ ಸಂಘಟನೆಗಳ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ, ಸಮ್ಮೇಳನದ ಘೋಷಣೆ, ಅಗಸ್ಟ್ 6 ರಂದು ಹಿರೊಶಿಮಾ ದಲ್ಲಿ ಮತ್ತು ಅಗಸ್ಟ್ 9 ರಂದು ನಾಗಾಸಾಕಿಯಲ್ಲಿ ಬೃಹತ್ ರ್ಯಾಲಿ, ಹಿರೊಶಿಮಾ ನಾಗಾಸಾಕಿ ಮ್ಯೂಸಿಯಂನ ಅನುಭವಗಳು, ಮನೆ-ಮನೆಗಳನ್ನೂ ಮುಟ್ಟುವ ಮತ್ತು ಮನ-ಮನಗಳನ್ನು ತಟ್ಟುವ ಅಲ್ಲಿನ ಶಾಂತಿ ಚಳುವಳಿಯ ವ್ಯಾಪಕತೆ – ಬಗ್ಗೆ ಅವರ ಅನುಭವಗಳು ವಿಶಿಷ್ಟ ಅನುಭವ ನಿಡಿದವು. ಅಲ್ಲಿ ಅವರು ತೆಗೆದ ಫೋಟೋಗಳು, ವಿಡಿಯೊಗಳ ಮತ್ತು ನೆನಪಿನ ಕಾಣಿಕೆಗಳ ಪ್ರದರ್ಶನದೊಂದಿಗೆ ಅವರು ಹಂಚಿಕೊಂಡ ‘ಮಲ್ಟಿಮೀಡಿಯಾ’ ಅನುಭವದಿಂದಾಗಿ, ನಾವೆಲ್ಲರೂ ಹಿರೊಶಿಮಾ, ನಾಗಾಸಾಕಿಗಳ ಪ್ರವಾಸ ಮಾಡಿ ಬಂದಂತಾಗಿತ್ತು.
yamuna @ shanti dina (2)
ಇತ್ತೀಚಿನ ಭೀಕರ ಗಾಜಾ ನರಮೇಧದ ಮೇಲೆ ಸುಮಾರು 10 ಪೋಸ್ಟರುಗಳ ಪೋಸ್ಟರ್ ಪ್ರದರ್ಶನ, ಮೊದಲ ಮಹಾಯುದ್ಧಕ್ಕೆ ಕಾರಣವಾದ ಬೆಳವಣಿಗೆಗಳ ಬಗೆಗಿನ ವಿಡಿಯೋ ಪ್ರದರ್ಶನ, ಇತ್ತೀಚಿನ ಗಾಜಾ ನರಮೇಧದ ಹಿನ್ನೆಲೆಯಲ್ಲಿ ಪ್ಯಾಲೆಸ್ಟೈನ್ ಸಮಸ್ಯೆ ಮತ್ತು ಅದರ ಬಗ್ಗೆ ಅಂತರ್ರಾಷ್ಟ್ರಿಯ ಧೋರಣೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸುತ್ತಾ ಪ್ಯಾಲೆಸ್ಟೈನ್ ಕವಯಿತ್ರಿ ರಫಿಫ್ ಜೈದಾ ಅವರ ಕವನವೋದುವುದರ ಪರಿಣಾಮಕಾರಿ ವಿಡಿಯೋ ಮತ್ತು ಪ್ರೊ, ಅರ್,ಕೆ.ಹುಡಗಿ ಅದರ ಕನ್ನಡ ಅನುವಾದವನ್ನು ಅಷ್ಟೇ ಪರಿಣಾಮಕಾರಿಯಾಗಿ ಓದುವುದರ ಜತೆ ಆಢಿದ ಸಮಾರೋಪದ ನುಡಿಗಳು ಮರೆಯಲಾಗದ ಯುದ್ಧ-ವಿರೋಧಿ ಗಾಢ ಮಲ್ಟಿಮೀಡಿಯಾ ಅನುಭವವನ್ನು ಇನ್ನಷ್ಟು ಗಟ್ಟಿಗೊಳಿಸಿದವು.

gaza poster set (2)

No comments:

Post a Comment