Tuesday 20 April 2021

ಸಂವಿಧಾನ ಓದು: 25 ಪ್ರಶ್ನೋತ್ತರ’

 

 ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ ಅವರ ಸಂವಿಧಾನದ ಓದು ಪುಸ್ತಕದ ಮೊದಲ ಮುದ್ರಣ ಬಿಡುಗಡೆ ಮತ್ತು 'ಸಂವಿಧಾನ ಓದು' ಅಭಿಯಾನದ ಉದ್ಘಾಟನೆ ಒಟ್ಟಿಗೆ ನಡೆದದ್ದು 2018 ಅಗಸ್ಟ 25, ಬೆಂಗಳೂರಿನಲ್ಲಿ. ಅದಕ್ಕಿಂತ ಕೆಲವು ದಿನ/ತಿಂಗಳ ಮೊದಲು ಅಥವಾ ಅದೇ ಸಂದರ್ಭದಲ್ಲಿ   ಕೆಲವು ದುಷ್ಕರ್ಮಿಗಳು ಸಂವಿಧಾನವನ್ನು ಸುಟ್ಟು ಹಾಕುವ ಕಾರ್ಯಕ್ರಮ ನಡೆಸಿದರು. ಹಲವರ ಒತ್ತಾಯದ ನಂತರ ಅವರ ಮೇಲೆ ಒಂದು ಕೇಸ್ ಹಾಕಲಾಯಿತು. ಶಿರಸಿಯಲ್ಲಿ ಕೆಲವು ಧರ್ಮಾಂಧರು 'ಸಂವಿಧಾನ ನಡೆ' ಕಾರ್ಯಕ್ರಮದ ಮೆರವಣಿಗೆ ನಡೆಸಿದ ರಸ್ತೆ ಮತ್ತು ಸಾರ್ವಜನಿಕ ಸಭೆ ನಡೆದ ಸಭಾಭವನಕ್ಕೆ ಸಗಣಿ ನೀರು, ಗೋಮೂತ್ರ ಹಾಕಿ ಶುದ್ದೀಕರಿಸಿರುವುದಾಗಿ(!?) ಹೇಳಿದರು. 'ನಾವು ಅಧಿಕಾರಕ್ಕೆ ಬಂದಿದ್ದೆ ಸಂವಿಧಾನ ಬದಲಿಸಲಿಕ್ಕೆ' ಎಂದು ಜನಪ್ರತಿನಿಧಿಯೊಬ್ಬರು ಕೂಗಾಡಿದರು...... ಇವೆಲ್ಲವೂ ಒಂದೆಡೆ ಚರ್ಚೆಯಾಗುತ್ತಿರುವಾಗಲೇ 'ಸಂವಿಧಾನ ಓದು' ಅಭಿಯಾನವನ್ನು 'ಸಹಯಾನ (ಡಾ. ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ, ಕೆರೆಕೋಣ) ಮತ್ತು 'ಸಮುದಾಯ ಕರ್ನಾಟಕ' ಜಂಟಿಯಾಗಿ ಕರ್ನಾಟಕದಾದ್ಯಂತ ಪ್ರಾರಂಭಿಸಿದವು. ಪ್ರಜ್ಞಾವಂತ ಜನರು, ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಈ ಅಭಿಯಾನದ ಸಹಯಾನಿಗಳಾದರು. ಕರ್ನಾಟಕದ ತುಂಬಾ ಎಲ್ಲಾ ಜಿಲ್ಲೆಗಳಲ್ಲಿ ಅಭಿಯಾನದ ಕಾರ್ಯಾಗಾರ ನಡೆದವು. ಕೆಲವು ಜಿಲ್ಲೆಗಳಲ್ಲಂತೂ ಹಲವು ಬಾರಿ ನಡೆದವು. ಹಲವು ವಿಶ್ವವಿದ್ಯಾಲಯಗಳಲ್ಲಿ ಎನ್.ಎಸ್.ಎಸ್ ಅಡಿಸಂವಿಧಾನ ಓದು' ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕರ್ನಾಟಕದ ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲಾ ಜಿಲ್ಲೆಗಳಲ್ಲಿ, ಎಲ್ಲಾ ತಾಲೂಕುಗಳಲ್ಲಿ ಕಾರ್ಯಕ್ರಮ ನಡೆಸುವ ಮಹತ್ವದ ತೀರ್ಮಾನ ಕೈಗೊಂಡಿತು. ಬಹುಶಃ ತಾವೂ ಅಭಿಯಾನದಲ್ಲಿ ಒಮ್ಮೆಯಾದರೂ ಪಾಲ್ಗೊಂಡಿದ್ದೀರಿ ಮತ್ತು ಅದರ ಯಶಸ್ಸಿನಲ್ಲಿ ಪಾಲುದಾರರಾಗಿದ್ದೀರಿ ಎಂದುಕೊಂಡಿದ್ದೇವೆ.

 

ಕರ್ನಾಟಕದ ಹೈಕೋರ್ಟಿನ ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ಅಭಿಯಾನದ ನೇತೃತ್ವವಹಿಸಿದ್ದರಿಂದ ಅಭಿಯಾನಕ್ಕೆ ಆನೆಬಲ ಬಂದಂತಾಯಿತು. ಈವರೆಗೆ ಸರಿ ಸುಮಾರು400-450 ಕಾರ್ಯಕ್ರಮಗಳು ಕರ್ನಾಟಕದಲ್ಲಿ ನಡೆದವು. ಕನ್ನಡದ ಪ್ರಕಾಶನದ ಇತಿಹಾಸದಲ್ಲಿಯೇ ದಾಖಲೆ ಅನ್ನುವಷ್ಟರ ಮಟ್ಟಿಗೆ ಪುಸ್ತಕ 50 ಮುದ್ರಣ ಕಂಡಿದೆ.

  'ಸಂವಿಧಾನ ಓದು' ಪುಸ್ತಕವು(ಬೆಲೆ: 50 ರೂ) ನಮ್ಮ ನಾಡಿನ ಎಲ್ಲಾ ವರ್ಗದ, ಸಮುದಾಯದ, ವಿದ್ಯಾರ್ಥಿ, ಯುವಜನರ, ಮಹಿಳೆಯರ ಅರಿವನ್ನು ವಿಸ್ತರಿಸಿತು. ಸಂವಿಧಾನದ ಕುರಿತು ಉದ್ದೇಶಪೂರ್ವಕವಾಗಿ ಹುಟ್ಟಿಸಿದ ಹಲವು ಪೂರ್ವಾಗ್ರಹಕ್ಕೆ ಸೂಕ್ತ ಉತ್ತರವಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಇನ್ನೂ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ಸಂವಿಧಾನವನ್ನು ತಾವೂ ತಿಳಿದುಕೊಳ್ಳಬಹುದು ಮಾತ್ರವಲ್ಲ. ಅದಕ್ಕನುಗುಣವಾಗಿ ಬದುಕಬೇಕಾದ ಅವಶ್ಯಕತೆಇದೆ ಎನ್ನುವ ಭಾವನೆಯನ್ನು ಬೆಳೆಸಲು ಪುಸ್ತಕಕ್ಕೆ ಸಾಧ್ಯವಾಯಿತು. 30 ಜಿಲ್ಲೆಗಳಲ್ಲಿಯೂ ನಡೆದ ಕಾರ್ಯಕ್ರಮಗಳಲ್ಲಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಸಂವಾದವೇ ನಡೆಯಿತು. ತಾವು ವಾಸ್ತವದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ, ಅನುಮಾನಗಳಿಗೆ ಸಂವಿಧಾನ ರಿತ್ಯಾ ಉತ್ತರ ಬಯಸುತ್ತಿದ್ದರು. ಹತ್ತು ಹಲವು ಪ್ರಶ್ನೆ ಕೇಳಿ ಅಲ್ಲಿ ಉತ್ತರ ಪಡೆದರು. ಒಂದರ್ಥದಲ್ಲಿ ಸಂವಿಧಾನವನ್ನು ಅನುಸಂಧಾನಿಸುವ ಕೆಲಸ ತಳಮಟ್ಟದಿಂದ ಪ್ರಾರಂಭ ಆಯಿತು. ಕಾರ್ಯಕ್ರಮ ಮುಗಿಸಿ ಬಂದಾಗಲೂ ವಾಟ್ಸಪ್ ಮೂಲಕ, ದೂರವಾಣಿಯ ಮೂಲಕ ಒಂದಿಷ್ಟು ಪ್ರಶ್ನೆಗಳು ಬರುತ್ತಿದ್ದವು. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸದೇ ಅಭಿಯಾನ ಪೂರ್ಣಗೊಳ್ಳದು ಎನ್ನುವ ಕಾರಣದಿಂದಅಭಿಯಾನದಲ್ಲಿ ಬಂದ ಎಲ್ಲಾ ಪ್ರಶ್ನೆಗಳಿಗೆ ನ್ಯಾಯಮೂರ್ತಿಗಳು ಸೂಕ್ತ ಉತ್ತರವನ್ನು ನೀಡಿದರು. ಅಭಿಯಾನದ ಬಹು ಮಹತ್ತರ ಭಾಗವೆಂದರೆ ಸಂವಾದ ಕಾರ್ಯಕ್ರಮ. ರೀತಿಯ ಸಂವಿಧಾನ ಓದು ಅಭಿಯಾನದ ಸಂವಾದದ ಬಹು ಚರ್ಚಿತ 25 ಪ್ರಶ್ನೆಗಳಿಗೆ ನ್ಯಾಯಮೂರ್ತಿಗಳು ನೀಡಿದ ಉತ್ತರಗಳನ್ನು ಸಂವಿಧಾನ ಓದು: 25 ಪ್ರಶ್ನೋತ್ತರ ಕೃತಿಯಲ್ಲಿ ಪ್ರಕಟಿಸಿದ್ದೇವೆ.(ಬೆಲೆ-30 ರೂ) ಅದರ ಧ್ವನಿ ಮುದ್ರಣವನ್ನು ಮೂಲಕ ನೀಡುತ್ತಿದ್ದೇವೆ. ಉತ್ತರ ಓದಿದ ಎಲ್ಲರಿಗೆ ಅನಂತ ಕೃತಜ್ಞತೆಗಳು. ಈವರೆಗೆ ನಮ್ಮ ಅಭಿಯಾನವನ್ನು ಆಯೋಜಿಸಿದ, ಬೆಂಬಲಿಸಿದ ತಮಗೆ ಅನಂತ ಕೃತಜ್ಞತೆಗಳು. ಸಂವಿಧಾನದ ಆಶಯ ನಿಮ್ಮ ನಮ್ಮ ಮನೆಗೂ ಮನಕ್ಕೂ ತಲುಪಲಿ ಎಂಬ ಆಶಯ ನಮ್ಮದು ಪುಸ್ತಕಕ್ಕಾಗಿ ಸಂಪರ್ಕಿಸಿರಿ ಡಾ. ವಿಠ್ಠಲ ಭಂಡಾರಿ ಕಾರ್ಯದರ್ಶಿ, ಸಹಯಾನ vittalbhandari@gmail.com 9448729359

No comments:

Post a Comment