Monday 19 August 2013

ಗೋಡೆ ದಶಾವತಾರ 'ಗೋಡೆ ಚಿತ್ತಾರ' -ಡಾ. ವಿಠ್ಠಲ್ ಭಂಡಾರಿ,

ಗೋಡೆ ದಶಾವತಾರ 'ಗೋಡೆ ಚಿತ್ತಾರ'

ಮೂಲತಃ ಯಕ್ಷಗಾನ ಮೌಖಿಕ ಪರಂಪರೆಗೆ ಸೇರಿದ್ದು. ಹಲವು ವರ್ಷಗಳ ಕಾಲದ ಬೆಳವಣಿಗೆ ಮತ್ತು ಬದಲಾವಣೆಗಳು ಮಾತ್ರದಲ್ಲಿ ಅದರ ವಿಮಶರ್ೆಯೂ ಮೌಖಿಕವಾಗಿಯೇ ಇತ್ತು. ಅನಕ್ಷರಸ್ಥನೂ ಗ್ರಾಮೀಣ ಎನಿಸಿಕೊಂಡ ಸಾಮಾನ್ಯ ನೋಡುಗನೂ ತಾನು ನೋಡಿದ ಯಕ್ಷಗಾನದ ನಡೆ ಮತ್ತು ನಟನಾ ಸಾಮಥ್ರ್ಯದ ಕುರಿತು ತೌಲನಿಕವಾಗಿ ಮಾತನಾಡಬಲ್ಲ. ನಟನೊಬ್ಬನ ಕುಣಿತ ಅಭಿನಯ, ಮಾತುಗಾರಿಕೆಯ ಬಗ್ಗೆ ಪ್ರತಿ ಪಾತ್ರದಲ್ಲಿ ಆತ ಮಾಡಿಕೊಂಡ ಬದಲಾವಣೆಯ ಪ್ರಸ್ತುತತೆಯ ಬಗ್ಗೆ, ಪಾತ್ರಪೋಷಣೆಯ ಬಗ್ಗೆ, ಒಟ್ಟಾರೆಯಾಗಿ ಕಲಾವಿದನೊಬ್ಬನ ಅನನ್ಯತೆಯ ಕುರಿತು ಸಾಮಾನ್ಯ ನೋಡುಗ ಕೂಡ ವಿವರಿಸಬಲ್ಲ. ಹಾಗಾಗಿಯೇ ಯಾವುದೇ ಯಕ್ಷಗಾನ, ತಾಳಮದ್ದಳೆಯ ಒಂದೇ ಪ್ರಸಂಗವನ್ನು ಹತ್ತಾರು ಸಲ ಮಾಡಿದರೂ ನೋಡಲು ಹೋಗುತ್ತಾರೆ. ನೋಡುಗನಿಗೆ ಕಿಂಚಿತ್ತಾದರೂ ವಿಮರ್ಶಕ ಪ್ರಜ್ಞೆ ಇಲ್ಲದಿದ್ದರೆ ಇದು ಸಾಧ್ಯವಿಲ್ಲ. ಪ್ರೇಕ್ಷಕರಲ್ಲಿ ನಡೆದ ಚಚರ್ೆ ಮತ್ತು ಅವರ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಕಲಾವಿದ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತಿದ್ದ.

ಹಾಗಾಗಿಯೇ ನಮ್ಮಲ್ಲಿ ಲಿಖಿತ ಕೃತಿಗಳಿಗೆ ಬಂದಂತೆ ಮೌಖಿಕ ಪರಂಪರೆಗೆ ಸೇರಿದ ಯಕ್ಷಗಾನ, ಸಣ್ಣಾಟ, ದೊಟ್ಟಾಟಗಳಿಗೆ ದೊಡ್ಡರೀತಿಯ ವಿಮಶರ್ೆಗಳಾಗಲೀ ವಿಶ್ಲೇಷಣೆಗಳಾಗಲೀ ಲಿಖಿತವಾಗಿ ಬಂದಿಲ್ಲ. ಆದರೆ ಇಂದು ಕಲಾವಿದರ ಜೀವನ ಚರಿತ್ರೆ, ಜೀವನ ನಿರೂಪಣೆ, ಅಭಿನಂದನಾ ಗ್ರಂಥಗಳ ಮೂಲಕ ಯಕ್ಷಗಾನ ಕಲಾಪ್ರಕಾರದ ವಿಮಶರ್ೆ, ಪಾತ್ರ ವಿಶ್ಲೇಷಣೆ ನಡೆಯುತ್ತಿವೆ. ಶತಮಾನಗಳ ಕಾಲದ ಮೌಖಿಕ ಪರಂಪರೆ ಲಿಖಿತ ರೂಪವನ್ನು ಪಡೆಯುತ್ತಿದೆ. ಸಹಜವಾಗಿಯೆ ಜಾನಪದ ಕಲಾಪ್ರಕಾರವೊಂದು ಲಿಖಿತ ರೂಪಕ್ಕೆ ಬರುವಾಗ ಒದಗುವ ಬಿಕ್ಕಟ್ಟು ಇತ್ತೀಚಿನ ಎಲ್ಲಾ ಕೃತಿಯಲ್ಲಿ ಇದೆ. ನಮ್ಮ ಬಹುತೇಕ ಕಲಾವಿದರು ಅನಕ್ಷರಸ್ಥರು ಮತ್ತು ಅಕ್ಷರಸ್ಥರಾದ ಬಹುತೇಕರು ಬರವಣಿಗೆಯನ್ನು ಒಗ್ಗಿಸಿಕೊಂಡವರಲ್ಲ. ಹಾಗಾಗಿಯೇ ಕಲಾವಿದನೊಬ್ಬನ ಶ್ರೀಮಂತ ಅನುಭವ ಅದೇ ಸಹಜತೆ ಮತ್ತು ವಸ್ತು ನಿಷ್ಠತೆಯಿಂದ ಹೊರಬರಲಾರದು. ಬಂದ ಹಲವು ಬರವಣಿಗೆಗಳು ಬೇರೊಂದು ಕೃತಿಯ 'ಅನುವಾದ' ವಿದ್ದಂತೆ ಇರುತ್ತವೆ. ಈ ಬಿಕ್ಕಟ್ಟು ತಿಳಿಯಾಗಲು ಇನ್ನಷ್ಟು ಕಾಲ ಬೇಕಾಗಬಹುದು. ನಮ್ಮ ನಡುವಿನ ಪ್ರಸಿದ್ಧ ಕಲಾವಿದ ಗೋಡೆ ನಾರಾಯಣ ಹೆಗಡೆಯವರ 'ಬದುಕು ಬಣ್ಣದ ಕಥನ' 'ಗೋಡೆ ಚಿತ್ತಾರ' ಕೃತಿಯಲ್ಲಿ ನಾವು ಕಾಣುವ ಕೆಲವು ತೊಡಕುಗಳು ಕೇವಲ ಈ ಲೇಖಕರದ್ದಲ್ಲ. ಈ ಕಾಲದ್ದೂ ಹೌದು ಎನ್ನುವದನ್ನು ನಾವು ಗಮನಿಸಬೇಕಾಗಿದೆ. ಯಕ್ಷಗಾನ ರಂಗಭೂಮಿಯಲ್ಲಿ ಹಲವು ಬದಲಾವಣೆಗಳು ನಡೆದಿವೆ. ಶಿಷ್ಟ ಪರಂಪರೆಯ ಚಹರೆಗಳನ್ನು ಅದು ಸಾಧ್ಯಂತವಾಗಿ ರೂಪಿಸಿಕೊಳ್ಳುತ್ತಿವೆ. ಅದರ ಜಾನಪದ ಸ್ವರೂಪ ಬದಲಾಗುತ್ತಿದೆ. ಇಲ್ಲಿ ಆದ ಬದಲಾವಣೆ ಸರಿ ಅಥವಾ ತಪ್ಪು ಎಂದೇನೂ ನಾನು ಇಲ್ಲಿ ವಾದ ಮಂಡಿಸುತ್ತಿಲ್ಲ. ಅದೊಂದು ಪ್ರಕ್ರಿಯೆ. (ಪ್ರೋಸೆಸ್). ಐದು ಹತ್ತು ಶತಮಾನಗಳ ಹಿಂದಿನಂತೆ ಈಗಲೂ ಇರಬೇಕು, ಇರುತ್ತದೆ ಎಂದು ನಾವೇನಾದರೂ ಎಣಿಸಿದರೆ ಅದಕ್ಕಿಂತ ಮೂರ್ಖತನ ಬೇರೊಂದಿಲ್ಲ. ಆದರೆ ಈ ಬದಲಾವಣೆಯ ಹಿಂದಿನ ಒತ್ತಡದ ಬಗ್ಗೆ, ಈ ಬದಲಾಗುವ ಪ್ರಕ್ರಿಯೆಯ ಹಿಂದೆ ಇರುವ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಮಾತ್ರ ಎಚ್ಚರ ಇರಲೇ ಬೇಕು. ಮತ್ತು ಅದನ್ನು ಗುರುತಿಸುವದು ಕೂಡ ಇಂದಿನ ವಿಮಶರ್ೆಯ ಅಗತ್ಯವಾಗಿದೆ. 'ಗೋಡೆ ಚಿತ್ತಾರ' ಕೃತಿಯನ್ನು ಸೂಕ್ಷ್ಮವಾಗಿ ನೋಡಿದಾಗ ಆ ಕಾಲದ ಸಾಂಸ್ಕೃತಿಕ ರಾಜಕಾರಣದ ಹೊಳಹುಗಳನ್ನು ಗುರುತಿಸಬಹುದಾಗಿದೆ.

ಗೋಡೆ ನಾರಾಯಣ ಹೆಗಡೆಯವರ ದಶಾವತಾರದ ಕಥೆ ಇದು. ಅನಾಥ ಬಾಲಕ, ನಾಟಕದ ನಟ, ಸ್ತ್ರೀ ವೇಷಧಾರಿ, ಅಂಗಡಿಕಾರ, ಹೋಟೆಲ್ ಮಾಲಿಕ, ಬಾಣಸಿಗ, ಮೇಳದ ಯಜಮಾನ, ಕೃಷಿಕ, ಮೇಳದ ಪ್ರಮುಖ ವೇಷಧಾರಿ, ಸಂಸಾರಿ ಹೀಗೆ ತಮ್ಮ 70 ವರ್ಷಗಳಲ್ಲಿ ಕಂಡ ಏಳು ಬೀಳುಗಳನ್ನು ನೋವು ನಲಿವುಗಳನ್ನು ಗೋಡೆಯವರು ಇಲ್ಲಿ ಭಾಸ್ಕರ ರಾವ್ ಮೂಲಕ ತೆರೆದಿಟ್ಟಿದ್ದಾರೆ. ನಿಜವಾದ ಬದುಕಿನಲ್ಲಿ ಕಂಡುಂಡ ಅನುಭವ ಅವರ ಅರ್ಥಗಾರಿಕೆಯಲ್ಲಿ ಯಾವಾಗಲೂ ಪ್ರತಿಧ್ವನಿಸುತ್ತಿರುವುದನ್ನು ನೋಡಬಹುದಾಗಿದೆ.

ಒಂದರ್ಥದಲ್ಲಿ ಈ ಪುಸ್ತಕ ಚರಿತ್ರೆ ಕೂಡ ಹೌದು. ಒಂದು ಕಾಲದ ಯಕ್ಷಗಾನ ಕಲೆಯ ನಡೆಯನ್ನು ನಮ್ಮೆದುರು ಇದು ತೆರೆದಿಡುತ್ತದೆ. ಒಬ್ಬ ಕಲಾವಿದನೊಂದಿಗೆ ಆತನ ಬದುಕಿನ ಕಾಲದ ಅನೇಕ ದಾಖಲೆಗಳು ಹೊರಟು ಹೋಗಿಬಿಡುತ್ತದೆ. ಅದು ಮತ್ತೆಲ್ಲೂ ಸಿಗಲಾರದು. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಅಂತಹ ದಾಖಲೆಗಳು ಮರೆಯಾಗಿ ಹೋಗಿದೆ. ಕೆಲವೊಂದನ್ನು ಮಾತ್ರ ಒಂದು ಮಿತಿಯೊಳಗೆ ದಾಖಲಿಸಲಾಗಿದೆ. ಗೋಡೆಯವರು ಇಲ್ಲಿ ಎಷ್ಟೊಂದು ಮೇಳಗಳನ್ನು, ನಟರನ್ನು, ಪ್ರಯೋಗಗಳನ್ನು, ಪಾತ್ರ ವೈವಿಧ್ಯಗಳನ್ನು ಹೆಸರಿಸುತ್ತಾರೆ! ಸಿದ್ಧಿವಿನಾಯಕ ಯಕ್ಷಗಾನ ನಾಟ್ಯ ಕಲಾಸಂಘ, ಕೆರೆಮನೆ ವೆಂಕಟಾಚಲ ಮಿತ್ರ ಮಂಡಳಿ, ಕೊಳಗಿಬೀಸ್, ಹಣಜಿಬೈಲ್ ಮೇಳ, ಪಂಚಲಿಂಗ ಹೀಗೆ 12-13 ಮೇಳಗಳ ಕುರಿತು, ಮೇಳಗಳ ಸ್ಥಿತಿಗತಿ, ಮೇಳ ಹುಟ್ಟುವ ಅಗತ್ಯತೆ, ಕಲಾಪೋಷಕರ ಸ್ವಭಾವ, ಸ್ವರೂಪ, ಕಲಾವಿದ - ಯಜಮಾನರ ಸಂಬಂಧ ಇತ್ಯಾದಿ ಕುರಿತು ವಿವರಿಸಿದ್ದಾರೆ. ಇಲ್ಲಿ ಹೆಸರಿಸಿರುವ ಬಹುತೇಕ ಮೇಳಗಳು ಈಗ ಅಸ್ತಿತ್ವದಲ್ಲಿಲ್ಲ. ಆದರೆ ಅವೆಲ್ಲ ಯಕ್ಷಗಾನ ರಂಗಭೂಮಿಯ ಏಳ್ಗೆಗೆ ತಮ್ಮದೇ ಆದ ಕೊಡುಗೆ ನೀಡಿವೆ.

ಇದರೊಂದಿಗೆ ತೀರಾ ಮಹತ್ವದ ಭಾಗವೆಂದರೆ ಇವರ ಅವಧಿಯಲ್ಲಿ ರೂಢಿಸಲ್ಪಟ್ಟ ಹಲವು ಪೌರಾಣಿಕ ಪಾತ್ರಗಳ ಬಗ್ಗೆ ಹೇಳುತ್ತಾರೆ. ಋತುಪರ್ಣ, ಬ್ರಹ್ಮ, ಕೌರವ, ಪ್ರಚಂಡ ವಿಶ್ವಾಮಿತ್ರ, ಸಹಸ್ರಾನೀಕ, ದೃಮಿಳಾಸುರ ಮುಂತಾದ ಹೊಸ ಪಾತ್ರಗಳನ್ನು ತಾನು ನಿರ್ವಹಿಸಿದ್ದಾಗಿ ಮತ್ತು ಅದಕ್ಕೊಂದು ಹೊಸತನವನ್ನು, ಮೆರಗನ್ನು ತಂದುಕೊಟ್ಟಿರುವುದಾಗಿ ಹೇಳುತ್ತಾರೆ. ಇದನ್ನು ಸರಿಯಾಗಿ ಯಾರೂ ಗುರುತಿಸಲಿಲ್ಲವಲ್ಲ ಎಂಬ ಕೊರಗೂ ಇಲ್ಲಿ ವ್ಯಕ್ತವಾಗಿದೆ. ಅದನ್ನು ತನ್ನ ದುದರ್ೈವ ಎಂದು ನೊಂದುಕೊಳ್ಳುತ್ತಾರೆ. ಆದರೆ ಪಾತ್ರಗಳಲ್ಲಿ ಮಾಡಿಕೊಂಡ ಬದಲಾವಣೆಯ ಕುರಿತು ಪ್ರಾಸಂಗಿಕವಾಗಿ ಬಂದಿದೆ. ಆದರೆ ಇದು ಇನ್ನಷ್ಟು ಹೆಚ್ಚು ದೀರ್ಘವಾಗಿದ್ದರೆ ಅಧ್ಯಯನಕ್ಕೆ ಅನುಕೂಲವಾಗುತ್ತಿತ್ತು (ಜಿ. ಎಸ್. ಭಟ್ಟ ಅವರು ಶಂಭು ಹೆಗಡೆಯವರ ಪಾತ್ರದ ಕುರಿತು ಮಾಡಿದ ವಿಶ್ಲೇಷಣೆಯ ರೀತಿ). ಆ ಸಂದರ್ಭ ಬಂದಾಗಲೆಲ್ಲ ಅವರು ಅವಸರವಾಗಿ ಮುಂದೆ ಹೋಗಿಬಿಡುತ್ತಾರೆ.

ತನ್ನ ವೃತ್ತಿ ಬದುಕಿನಲ್ಲಿ ದುರಂತ ಪಾತ್ರವನ್ನೇ ಜನ ಇಷ್ಟಪಟ್ಟಿದ್ದನ್ನು ಮತ್ತು ಒಂದು ಹಂಗಾಮಿನಲ್ಲಿ 90ಕ್ಕೂ ಅಧಿಕ 'ಗದಾಯುದ್ಧ' ಪ್ರಸಂಗದ ಆಟ ನಡೆದುದನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮ ಜೀವಿತಾವಧಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಸಲ ಕೌರವ ಪಾತ್ರ ನಿರ್ವಹಿಸಿದ್ದು ಒಂದು ದಾಖಲೆಯೇ ಸರಿ.

ಶಿವರಾಮ ಹೆಗಡೆ, ಕೊಂಡದಕುಳಿ, ಮಹಾಬಲ ಹೆಗಡೆ, ಚಿಟ್ಟಾಣಿ, ಶಂಭು ಹೆಗಡೆ, ಜಲವಳ್ಳಿ ವೆಂಕಟೇಶ ರಾವ್ ಮುಂತಾದ ಕಲಾವಿದೊಂದಿಗಿನ ಜೋಡಿ ಪಾತ್ರ, ಒಡನಾಟಗಳ ಸ್ವಾರಸ್ಯದ ಕುರಿತು ಲೇಖಕರು ಇಲ್ಲಿ ಪ್ರಸ್ತಾಪಿಸುತ್ತಾರೆ. ಗೋಡೆಯವರು ನಿರ್ವಹಿಸಿದ ಕೆಲವು ಪಾತ್ರಗಳಿಗೆ ಸಿದ್ಧಮಾದರಿಗಳಿದ್ದವು (ಉದಾ: ಗದಾಯುದ್ಧದ ಕೌರವ). ಆದರೆ ಬ್ರಹ್ಮ, ಋತುಪರ್ಣ, ಅಕ್ರೂರ, ತ್ರಿಶಂಕು ಮೊದಲಾದ ಪಾತ್ರಗಳಿಗೆ ಇಂತಹ ಸಿದ್ಧ ಮಾದರಿಗಳಿರಲಿಲ್ಲ. ಗೋಡೆಯವರೇ ರೂಪಿಸಿದರು. ಟಿಕೆಟ್ ಕೌಂಟರಿನಲ್ಲಿ ಗೋಡೆಯವರು ಇದ್ದಾರೆಯೇ ಎನ್ನುವುದನ್ನು ಕೇಳಿ ಅವರಿಲ್ಲ ಎಂದಾದರೆ ಹಿಂದಿರುಗುತ್ತಿದ್ದ ಪ್ರೇಕ್ಷಕ ಸಮುದಾಯವಿತ್ತೆಂದರೆ ಅವರ ಪಾತ್ರದ ಪರಿಣಾಮ ಎಷ್ಟೆತ್ತರಕ್ಕೆ ಬೆಳೆದಿತ್ತೆನ್ನುವುದನ್ನು ತಿಳಿಯಬಹುದು ಎನ್ನುತ್ತಾರೆ ಲೇಖಕರಾದ ಭಾಸ್ಕರ ರಾವ್ ಅವರು. 

ಇಡೀ ಕೃತಿ ಆ ಕಾಲದ ಪ್ರಮುಖ ವಾಗ್ವಾದಗಳನ್ನು ಅನಾವರಣ ಮಾಡುತ್ತದೆ. ಇಂದೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಘಟ್ಟದ ಮೇಲೆ, ಘಟ್ಟದ ಕೆಳಗೆ ಎನ್ನುವ ಭೌಗೋಲಿಕ ಬೇಧ, ಸಾಂಸ್ಕೃತಿಕ ಬೇಧವಾಗಿ ಪರಿಣಮಿಸಿ ಘಟ್ಟದ ಮೇಲಿನ ಕಲಾವಿದರು ತಾತ್ಸಾರಕ್ಕೆ ಒಳಗಾಗಿದ್ದು, ಮೂರುತಾಸಿನ ಯಕ್ಷಗಾನವನ್ನು ತಾವೇ ಮೊದಲು ಪ್ರಾರಂಭಿಸಿದರೂ ಕೆರೆಮನೆ ಮೇಳಕ್ಕೆ ಅದರ ಕ್ರೆಡಿಟ್ ಹೋಗಿದ್ದು, ಪ್ರಸಂಗಕರ್ತನಿಗೆ ನಿಷ್ಠನಾಗಿ ಬ್ರಹ್ಮನ ಪಾತ್ರ ನಿರ್ವಹಿಸಿದರೂ ಶೇಣಿಯವರಿಂದ 'ಬೀದಿಕಾಮಣ್ಣ'ನಂತಹ ಬ್ರಹ್ಮ ಎನಿಸಿಕೊಂಡಿದ್ದು, ಮಲೆನಾಡಿನ ಯಕ್ಷಗಾನ ಸಮಾವೇಶಕ್ಕೆ ತನ್ನನ್ನು ಕರೆಯದಿದ್ದುದು, ಶಿರಸಿಯಲ್ಲಿ ಚಿಟ್ಟಾಣಿಯವರೊಂದಿಗೆ ಸ್ಪಧರ್ೆಗಿಳಿಸಿ ಚೆನ್ನಾಗಿ ಮಾಡಿದರೂ ಬಹುಮಾನ  ಕೊಡದಿದ್ದುದು, ಸಿದ್ದಾಪುರದ ಭುವನೇಶ್ವರೀ ತಾಳಮದ್ದಳೆ ಕೂಟ ತನ್ನ ಮೇಲೆ ಹಗೆ ಸಾಧಿಸಿದ್ದು, ಕೆರೆಮನೆ ಮೇಳ, ಅಮೃತೇಶ್ವರೀ ಮೇಳ ಸೇರಿದ್ದು ಬಿಟ್ಟಿದ್ದು, ಅದಕ್ಕಿರುವ ಕಾರಣಗಳು ಇತ್ಯಾದಿ ಇತ್ಯಾದಿ ಅನೇಕ ಚಚರ್ೆಗಳನ್ನು ಈ ಕೃತಿ ಒಳಗೊಂಡಿದೆ. ಪುಸ್ತಕದ ತುಂಬ ಹರಡಿಕೊಂಡಿರುವ ಅವರ ಅನುಭವದಲ್ಲಿ ಅರಸಿದರೂ ಒಂದೆರಡು ಹೆಸರನ್ನು (ಜಲವಳ್ಳಿ, ಗಜಾನನ ಭಂಡಾರಿ ಇತ್ಯಾದಿ) ಹೊರತುಪಡಿಸಿದರೆ ಉಳಿದಂತೆ ಶೂದ್ರ ಕಲಾವಿದರ ಹೆಸರಿನ ಪ್ರಸ್ತಾಪವೇ ಇಲ್ಲದಿರುವುದು ಕೂಡ ಆಶ್ಚರ್ಯ ಹುಟ್ಟಿಸುತ್ತದೆ. ಅಥವಾ ಮೇಲ್ಜಾತಿಯನ್ನು ಹೊರತುಪಡಿಸಿದರೆ ಬೇರೆ ಜನಸಮುದಾಯದಿಂದ ಆ ಕಾಲದಲ್ಲಿ ಕಲಾವಿದರಾಗಿ ಕಲಾವಿದರು ರೂಪುಗೊಂಡಿರಲಿಲ್ಲವೇ ಎಂಬ ಚಚರ್ೆಯನ್ನು ಇದು ಹುಟ್ಟುಹಾಕುತ್ತದೆ. ಪ್ರಾಜ್ಞರು ಈ ಕುರಿತು ಮುಕ್ತವಾಗಿಯೇ ಚಚರ್ಿಸಬೇಕಾಗಿದೆ. ಪ್ರಾಜ್ಞರು ಈ ಕುರಿತು ಮುಕ್ತವಾಗಿಯೇ ಚಚರ್ಿಸಬೇಕಾಗಿದೆ. ಯಾಕೆಂದರೆ ಈ ವಾಗ್ವಾದ ಅಂತಿಮವಾಗಿ ಅಸ್ತಿತ್ವದಲ್ಲಿರುವ ಕಲ್ಚರಲ್ ಪಾಲಿಟಿಕ್ಸ್ನ ಸೂಕ್ಷ್ಮವನ್ನು ತೆರೆದಿಡಬಹುದು ಮತ್ತು ಕಲೆಯ ಬೆಳವಣಿಗೆಗೂ ಅನುಕೂಲವಾಗಬಹುದು.

ಏಕೋ ಓದುವುದು ನನ್ನ ತಲೆಗೆ ಹತ್ತಲೇ ಇಲ್ಲ ಎಂದು ಬಾಲ್ಯವನ್ನು ನೆನಪಿಸುವ ಗೋಡೆಯವರು ನಂತರದ ಕಲಿಕೆಯೇನಿದ್ದರೂ ಜೀವನ ಶಾಲೆಯಲ್ಲಿಯೇ ಎನ್ನುವರು. ಅವರದು ಯಕ್ಷಗಾನ ಕಲಾವಿದರ ಪರಂಪರೆಯುಳ್ಳ ಕುಟುಂಬವೇನಲ್ಲ. ಬಡತನವೊಂದನ್ನು ಹೊರತುಪಡಿಸಿದರೆ ಉಳಿದದ್ದೆಲ್ಲ ಅವರ ಸ್ವಯಾಜರ್ಿತವೇ. ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅನಾಥ ಮಗು ನಾರಾಯಣ, ಮುಂದಿನ ಹಲವು ವರ್ಷ ಕಾಲ ಅವರು ಉಸಿರಾಡಿದ್ದು, ತಿಂದಿದ್ದು, ಉಂಡಿದ್ದೆಲ್ಲ ಬಡತನವನ್ನೇ. ಒಂದು ಹೊತ್ತಿನ ಕೂಳಿಗೂ ತತ್ವಾರವಾಗಿದ್ದ ಅಂಥ ಸ್ಥಿತಿಯಲ್ಲಿ ಅವರಿಗೆ ಯಕ್ಷಗಾನ ಬಯಲಾಟ ನೋಡುವ ಅದೃಷ್ಟ ಎನ್ನಬಹುದಾದ ಅವಕಾಶವೊಂದು ಹೇಗೋ ದೊರೆಯಿತು. ಆಮೇಲೆ ಕಲಾವಿದರಾಗಿ, ಸಂಸಾರಿಯಾಗಿ ಗೋಡೆಯವರು ಖ್ಯಾತನಾಮರಾದುದನ್ನು ಲೇಖಕರು ವಿವರವಾಗಿಯೇ ನಮೂದಿಸಿದ್ದಾರೆ.

ಈ ಮಧ್ಯೆ ನಡೆದ ಹಲವು ಸ್ವಾರಸ್ಯಕರ ಘಟನೆಗಳನ್ನು ಲೇಖಕರು ಗೋಡೆಯವರ ಸ್ಮೃತಿಪಟಲದಿಂದ ಹೊರತೆಗೆದಿಟ್ಟಿದ್ದಾರೆ.
1. ಯಕ್ಷಗಾನವನ್ನು ಸಮಯ ಮಿತಿಯೊಳಗೆ ಪ್ರದಶರ್ಿಸುವುದರಿಂದ ಪ್ರೇಕ್ಷಕರ ಹತ್ತಾರು ಸಮಸ್ಯೆ ನೀಗುತ್ತದೆ. ಪ್ರಸಂಗದ ಕಲಾವಿದರ ಶ್ರಮವೂ ತಗ್ಗುತ್ತದೆ ಎಂಬ ತೀಮರ್ಾನವೇ ಯಕ್ಷಗಾನವನ್ನು ಮೂರು ತಾಸಿನ ಆಟವಾಗಿಸಲು ಉತ್ತೇಜನವಾಯಿತು. ಈ ಹಿನ್ನೆಲೆಯಲ್ಲಿ ಸಮಯ ಮಿತಿಯ ಪ್ರಯೋಗಕ್ಕೆ 1954-55 ರಲ್ಲಿಯೇ ಶ್ರೀಕಾರ ಹಾಕಿದ್ದು ಗೋಡೆ, ಕೊಳಗಿ ಮತ್ತಿತರ ಗೆಳೆಯರು ಆದರೆ ಇದು 'ಮೂರುಕಾಸಿನ ಪ್ರಯೋಗ' ಎಂಬ ಮೂದಲಿಕೆಗೆ ಒಳಗಾಯಿತು. 2. ಶ್ರೀ ಸಿದ್ಧಿವಿನಾಯಕ ನಾಟ್ಯ ಕಲಾಸಂಘ ಆರಂಭವಾಗಿದ್ದು ಒಂದು ಅಮಾವಾಸ್ಯೆಯ ದಿವಸ! ಮೂರು ತಾಸಿನ ಪ್ರಯೋಗ ಮಾಡಿ ಮೂರು ಕಾಸಿನ ಪ್ರಯೋಗ ಎಂಬ ಮೂದಲಿಕೆಗೆ ಒಳಗಾಗಿದ್ದ ಗೆಳೆಯರು ಈಗ 'ಅಮಾವಾಸ್ಯೆ ಮೇಳ ಇದು. ಆಯುಷ್ಯ ಬಹಳವಿಲ್ಲ' ಎಂಬ ಮಾತನ್ನೂ ಕೇಳಬೇಕಾಗಿ ಬಂತು. 3. ಇದು ಒಂದೆರಡು ಪ್ರಸಂಗ ಮಾತ್ರ. ಇನ್ನುಳಿದಂತೆ ಶಿವರಾಮ ಹೆಗಡೆಯವರ ಮುಂದೆ ಸೈರಂದ್ರಿ ಪಾತ್ರಮಾಡಿ 'ಮಾಣಿಗೆ ಉತ್ತಮ ಭವಿಷ್ಯವಿದೆ' ಎಂತ ಹೊಗಳಿಸಿಕೊಂಡಿದ್ದು, ಶೇಣಿಯವರ ವಿಮಶರ್ೆಯಲ್ಲಿ ಬ್ರಹ್ಮನ ಪಾತ್ರ ಬೀದಿಕಾಮಣ್ಣನಾಗಿದ್ದು, ರಂಗದಲ್ಲಿ ವಲಲ ಭೀಮ ಮನೆಯಲ್ಲಿ ಸೌಟು ಹಿಡಿದು ಅಡಿಗೆ ಮಾಡಿದ್ದು, ರಾತ್ರಿಯಿಡೀ ರಂಗದಲ್ಲಿ ಮೀನಾಕ್ಷಿಯಾಗಿ ತಲೆಸುತ್ತಿ ಬಂದು ಗಟಾರ ಸೇರಿದ್ದು, ಪೇಟೆಗೆ ಅವಲಕ್ಕಿ ಮಾರಾಟಕ್ಕೆ ಹೋಗುತ್ತಿದ್ದುದು, ಮೊದಲಬಾರಿಗೆ ಆಟಕ್ಕೆ 15 ರೂ. ವೀಳ್ಯ ಪಡೆದಿದ್ದು, 'ದ್ರೌಪದಿ ಪ್ರತಾಪ' ನಡೆದಾಗ ಭೂಕಂಪವಾದರೂ ಜನಕ್ಕೆ ಅರಿವಿಗೆ ಬರದಿರುವುದು..... ಹೀಗೆ ಕೆಲವು ಲಹರಿ, ಕೆಲವು ಪುಳಕ, ಕೆಲವು ಎಚ್ಚರಿಕೆ, ಕೆಲವು ಕಟುವಾಸ್ತವ ತಿಳಿಸುವ ಘಟನೆಗಳು.

'ಪ್ರಕೃತಿ ನಮ್ಮಿಚ್ಛೆಯಂತೆ ಇರುವುದಿಲ್ಲ' ಎನ್ನುವುದು ಸ್ವತಃ ಅರಿವಿಗೆ ಬರುವ ಹೊತ್ತಿಗೆ ನಾರಾಯಣ ಹೊಳೆಯ ಅರ್ಧಕ್ಕೆ ಬಂದಾಗಿತ್ತು. ಆ ಕಡೆ ಇಲ್ಲವೇ ಈ ಕಡೆ ದಡ ಅಷ್ಟು ದೂರ. ಹಸಿವು, ನೀರಡಿಕೆ ನಮ್ಮನ್ನು ಕೇಳಿ ಬರುವುದಿಲ್ಲ. ಹಸಿವಿಗೆ ಪರಿಹಾರ ಹುಡುಕುತ್ತಾ ಹೊರಟ ನಾರಾಯಣ ಹೋಟೇಲ್ ಸೇರಿದ, ಹೋಟೇಲ್ ಕಾಮರ್ಿಕನಾಗಿ ಚಹಾ ಸಿದ್ಧಪಡಿಸಿ ಗಿರಾಕಿಗಳಿಗೆ 'ಸಪ್ಲೈ' ಮಾಡುವ ಮಾಣಿಯಾಗಿ, ಅಡುಗೆ ಭಟ್ಟನಾಗಿ...... ಏನೆಲ್ಲ ಪಾತ್ರಗಳನ್ನು ನಾರಾಯಣ ಮಾಡಿದ. ಈ ಇತಿಹಾಸ ಈಗ ಸ್ವತಃ ಗೋಡೆಯವರಿಗೂ ವಿಸ್ಮಯ ಬರಿಸುತ್ತದೆ. ಇದು ಭಾಸ್ಕರ ರಾವ್ ಅವರ ಬರವಣಿಗೆಯ ಶೈಲಿಗೆ ಒಂದು ಉದಾಹರಣೆ ಅಷ್ಟೇ. ಭಾಸ್ಕರ ರಾವ್ ಅವರು ಯಕ್ಷಗಾನದ ಒಳಹೊರಗನ್ನು ಒಳಗಿನವರಾಗಿಯೇ ಅನುಭವಿಸಿದವರಾದ್ದರಿಂದ ನಿರೂಪಣೆಯಲ್ಲಿ ಸಹಜತೆಯೂ ಆಪ್ತತೆಯೂ ಒಡಮೂಡಿದೆ.

ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಮಕಾಲೀನರೂ, ಸಮಬಲರೂ ಆದ ಗೋಡೆಯವರು ಜನಪ್ರಿಯತೆಯ ತಕ್ಕಡಿಯಲ್ಲಿ ಸ್ವಲ್ಪ ಸೋತರೆನ್ನಬೇಕು. ಇದಕ್ಕೆ ಕಾರಣ ಏನಿರಬಹುದು? ಅದರಲ್ಲಿ ಗೋಡೆಯವರ ಪಾಲೆಷ್ಟು? ಉಳಿದವರ ಪಾಲೆಷ್ಟು? ಎಂದು ವಿಶ್ಲೇಷಿಸಿ ಗೋಡೆಯವರ ಈವರೆಗಿನ ಸಾಧನೆಯನ್ನು ತೆರೆದಿಡಬೇಕೆನ್ನುವ ಲೇಖಕರ ಹಂಬಲ ಈ ಕೃತಿಯ ಆಳದಲ್ಲಿದೆ. ಕಲಾವಿದನೊಬ್ಬ ಹೇಳಿದಂತೆ ಇಲ್ಲಿ ದಾಖಲಾಗಿಲ್ಲ. ಆದರೆ ಲೇಖಕ, ಒದಗಿಸಿದ ಮಾಹಿತಿಯನ್ನ ಬಳಸಿಕೊಂಡೇ ತನ್ನ ಅಭಿಪ್ರಾಯವನ್ನೂ ಒಳನೋಟವನ್ನು ಜೊತೆ ಜೊತೆಗೆ ನೀಡಿದ್ದಾರೆ. ಕೆಲವೊಮ್ಮೆ ಗೋಡೆಯವರ ಹೇಳಿಕೆ ಯಾವುದು? ಭಾಸ್ಕರ ರಾವ್ ಅವರ ವ್ಯಾಖ್ಯಾನ ಯಾವುದು ಎನ್ನುವ ಗೊಂದಲ ಕೂಡ ಎದುರಾಗುತ್ತದೆ. ಇಲ್ಲಿ ಲೇಖಕರ ಆಶಯ ಗೋಡೆಯವರನ್ನು ಮಾತ್ರವೇ ಚಿತ್ರಿಸುವುದಲ್ಲ ಬದಲಾಗಿ ಗೋಡೆಯವರ ಮೂಲಕ ಆ ಕಾಲಘಟ್ಟದ ಯಕ್ಷಗಾನವನ್ನೂ, ಆಗಿನ ಜನಮನವನ್ನೂ ದಾಖಲೆಗೊಳಿಸುವ ಒಂದು ಯತ್ನವಾಗಿ ಈ ಕೃತಿ ಇರಬೇಕೆನ್ನುವುದು ನನ್ನ ಆಶಯ ಎನ್ನುವ ಅವರ ಹಂಬಲ ತೀರಾ ಮಹತ್ವವಾದದ್ದೇ. ಒಂದು ಕೃತಿಯ ಸಫಲತೆ ಇರುವುದೂ ಇಲ್ಲಿಯೇ.

ಇದರ ಪ್ರಯತ್ನವಾಗಿ ಲೇಖಕಕರು ಸ್ವಾತಂತ್ರ್ಯ ಚಳುವಳಿಯೊಂದಿಗೆ (ಅಧ್ಯಾಪ ಲಕ್ಷ-ಅಲಕ್ಷ್ಯ), ತುತರ್ುಪರಿಸ್ಥಿತಿಯ ಕಾಲದೊಂದಿಗೆ (ಕೆರೆಮನೆ ದೂರ), ಜೆ.ಪಿ.ಚಳುವಳಿಯೊಂದಿಗೆ, ಜನತಾಪಕ್ಷದ ಉಗಮದೊಂದಿಗೆ ಯಕ್ಷಗಾನ ಕ್ಷೇತ್ರದಲ್ಲಿ ಆದ ಬದಲಾವಣೆಯನ್ನು ಇಟ್ಟು ನೋಡುವ ಮಹತ್ವದ ಪ್ರಯತ್ನವನ್ನು ಅಲ್ಲಲ್ಲಿ ನೋಡಬಹುದು. ಆದರೆ ಈ ಪ್ರಯತ್ನವನ್ನು ಇನ್ನಷ್ಟು ವಿಸ್ತರಿಸಬಹುದಾಗಿತ್ತು. ಹಾಗೆಯೇ ಪಾತ್ರ ವಿಶ್ಲೇಷಣೆ ಕೂಡ ಇನ್ನಷ್ಟು ವಸ್ತು ನಿಷ್ಟಗೊಳ್ಳಬಹುದಾಗಿತ್ತು ಎನ್ನುವುದು ನನ್ನ ಆಶಯವೇ ಹೊರತು ಪುಸ್ತಕದ ಮಿತಿಯನ್ನು ಹೇಳಲು ಇದನ್ನು ಹೇಳುತ್ತಿಲ್ಲ.

ಗೋಡೆಯವರಿಗೂ 'ಗೋಡೆ ಚಿತ್ತಾರ'ವನ್ನು ಬರೆದ ಎಂ. ಕೆ. ಭಾಸ್ಕರ ರಾವ್ ಅವರಿಗೂ ಅಭಿನಂದನೆಗಳು.

- ಡಾ. ವಿಠ್ಠಲ್ ಭಂಡಾರಿ, ಉಪನ್ಯಾಸಕರು, ಸಿದ್ದಾಪುರ.

No comments:

Post a Comment