Sunday 18 August 2013

ದೀಪಾರಾಧನೆ - vittal bhandari

ಅರ್ಥಪೂರ್ಣ ಅಭಿನಂದನೆ . . . . . . . .


ದೀಪಾರಾಧನೆ
(ಎನ್.ಆರ್.ನಾಯಕ ದಂಪತಿಗಳ ಅಭಿನಂದನಾ ಗ್ರಂಥ)
ಜಾನಪದ ಪ್ರಕಾಶನ, ಹೊನ್ನಾವರ (ಉ.ಕ)


     ಪ್ರೊ.ಜಿ.ಎಸ್ ಅವಧಾನಿ ಮತ್ತು ಡಾ.ಆರ್.ವಿ.ಭಂಡಾರಿಯವರು ಸೇರಿ ಸಂಪಾದಿಸಿದ ಈ ಕೃತಿ `ದೀಪಾರಾಧನೆ' ಜಾನಪದ ಪ್ರಕಾಶನದ ದಶಮಾನೋತ್ಸವದ ಸಂದರ್ಭದಲ್ಲಿ ಡಾ. ಎನ್.ಆರ್. ನಾಯಕ ಮತ್ತು ಶಾಂತಿ ನಾಯಕ ದಂಪತಿಗಳಿಗೆ ಅಪರ್ಿಸಿದ ಅರ್ಥಪೂರ್ಣ ಅಭಿನಂದನಾ ಕೃತಿ. ಹಾಗೆಯೇ ಜಾನಪದ ಪ್ರಕಾಶನವು ಆವತ್ತಿನವರೆಗೆ ಪ್ರಕಟಿಸಿದ ಕೃತಿಗಳ ಸಮೀಕ್ಷೆಯೂ  ಹೌದು.
  
 ಮುನ್ನುಡಿಯಲ್ಲಿ ಪೊ.ಜಿ.ಎಸ್. ಅವಧಾನಿಯವರು ಬರೆದಂತೆ ದಶಮಾನೋತ್ಸವವನ್ನು ಕೇವಲ ಹಬ್ಬವನ್ನಾಗಷ್ಟೇ ಆಚರಿಸದೆ ಅದಕ್ಕೊಂದು ಹೊಸ ಆಯಾಮ ಒದಗಿಸಬೇಕು ಎನ್ನುವ ಹಂಬಲದಿಂದ, ಡಾ,ನಾಯಕ ದಂಪತಿಗಳ ಎಲ್ಲಾ ಕೃತಿಗಳನ್ನು ವಿಮಶರ್ಿಸಿ, ತನ್ಮೂಲಕ ಪ್ರಕಾಶನವನ್ನು ಅಥರ್ೈಸುವುದೇ ಅವರಿಗೆ ಸಲ್ಲಿಸುವ ಅಭಿನಂದನೆ ಎನ್ನುವ ಕಾರಣದಿಂದ ಸಿದ್ಧಪಡಿಸಿದ ಈ ಗ್ರಂಥ ಜಾನಪದ ಅಧ್ಯಯನಕ್ಕೊಂದು ಆಕರ ಗ್ರಂಥವಾಗಿದೆ.
       
ಅಭಿನಂದನೆ ಎಂದಾಕ್ಷಣ ಸಹಜವಾಗೇ ಹೊಗಳುವುದು ಅಂತ ತಿಳಿವ ವಾಡಿಕೆ ಇದೆ. ಹಾಗಾಗದ ಹಾಗೆ ನೋಡಿಕೊಳ್ಳವುದು ನಮ್ಮ ಕಾಳಜಿಯಾಗಿತ್ತು ಎನ್ನುವ ಸಂಪಾದಕರ ಮಾತು ಸಂಪೂರ್ಣ ಈಡೇರಿದೆ. ಸೇಸೆ, ಕೃತಿ ಪರಿಶೀಲನೆ, ವ್ಯಕ್ತಿವಿಚಾರ, ಪತ್ರಿಕೆ ಎನ್ನುತ ನಾಲ್ಕು ವಿಭಾಗಗಳಲ್ಲಿ ಇಲ್ಲಿಯ ಲೇಖನಗಳು ಸಮಾಹಿತ ಗೊಂಡಿದೆ.
     
           ಕೃತಿ ಪರಿಶೀಲನೆ ಗ್ರಂಥದ ಪ್ರಮುಖ ಭಾಗ. ಕನ್ನಡದ ಹಿರಿಯ ಲೇಖಕರಾದ ಹಿ.ಶಿ.ರಾಮಚಂದ್ರೇಗೌಡ,ಡಾ.ತೀ.ನಂ.ಶಂಕರನಾರಾಯಣ, ಡಾ.ಪುರುಷೊತ್ತಮ ಬಿಳಿಮಲೆ, ಡಾ.ಆರ್.ಪಿ.ಹೆಗಡೆ, ಡಾ.ಚೆನ್ನಣ್ಣ ವಾಲೀಕಾರ, ಡಾ.ಎಲ್.ಜಿ.ಭಟ್ಟ, ಡಾ.ಜಿ.ಎಸ್.ಭಟ್ಟ, ಡಾ.ಶಾಲಿನಿ ರಘುನಾಥ್ ,ಡಾ.ಚಿನ್ನಪ್ಪ ಗೌಡ . . . ಮುಂತಾದವರ ಮಹತ್ವಪೂರ್ಣ ಒಳನೋಟಗಳುಳ್ಳ ಬರಹಗಳು ಡಾ.ನಾಯಕ ದಂಪತಿಗಳ ಕೃತಿಗಳ ಗುಣದೋಷಗಳನ್ನು ನಿದರ್ಿಷ್ಠ ಸಾಂಸ್ಕೃತಿಕ ಸಂದರ್ಭದಲ್ಲಿಟ್ಟು ನೋಡುವುದರಿಂದ ಇಲ್ಲಿಯ ಯಾವ ಲೇಖನವೂ ಕೇವಲ ಪುಸ್ತಕದ ಪರಿಚಯದ ಹಂತಕ್ಕೆ ನಿಲ್ಲುವುದಿಲ್ಲ. ಬದಲಾಗಿ ಜಾನಪದ ಅಧ್ಯಯನದ ತಾತ್ವಿಕ ಚಚರ್ೆಯ ಕಡೆಗೆ ಗಮನ ಹರಿಸುತ್ತದೆ. 
      ನಾಯಕರಿಗೆ ಜಾನಪದ ಅಧ್ಯಯನ ಒಂದು ಹವ್ಯಾಸವಲ್ಲ. ಅದು ಅವರ ಜೀವನ ಪ್ರೇಮ ಹಾಗೂ ಶ್ರದ್ಧೆ ಎಂದು ಗುರುತಿಸುವ ರಾಮಚಂದ್ರೇಗೌಡರು ನಾಯಕರದು ಮೃತ ಚಿಂತನೆಯಲ್ಲ; ಸಂಬಂಧಾತ್ಮಕವಾದದ್ದು ಹಾಗೂ ಪ್ರಗತಿ ಮನೋಧರ್ಮದಿಂದ ಕೂಡಿದ್ದು. ಆದುದರಿಂದಲೇ ಅವರು ಜಾನಪದವಿಲ್ಲದ ನಾಗರಿಕತೆಯಿಲ್ಲ ಹಾಗೂ ಜಾನಪದ ಮೃತ್ಸುವಿನ ಕಪಿಮುಷ್ಟಿಗೆ ಸಿಗದು ಎಂದು ಸರಿಯಾಗಿಯೇ ಜಾನಪದದ ಪ್ರಕ್ರಿಯೆಯನ್ನು ದಾಖಲಿಸುತ್ತಾರೆ. .ಜಾನಪದ ಗೀತೆ ತತ್ವದ ಮೂಲಕ ಜಾನಪದ ತತ್ವ ಹಾಗೂ ಸತ್ವವನ್ನು ಹೇಳ ಹೊರಡುತ್ತಾರೆ(ಪು.18) ಎಂದು ಉ.ಕ ಜಿಲ್ಲೆಯ ಜಾನಪದ ಸಂಸ್ಕೃತಿಯ ಕೋಶಕ್ಕೆ ಎನ್.ಆರ್.ನಾಯಕರ ಕೊಡುಗೆಯನ್ನು ವಿವರಿಸುತ್ತಾರೆ.
      
      'ಜಾನಪದ ಸಂಬಾರ ಬಟ್ಟಲು' ಕೃತಿಯ ಬಗ್ಗೆ ಬರೆಯುತ್ತಾ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಸಮೃದ್ಧವಾದ ಆಕರಗಳನ್ನು ಸಂಗ್ರಹಿಸಿ ಕೊಡುತ್ತಾರೆ. ಸಂಗ್ರಹಿಸಿದ ಆಕರಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿಕೊಂಡು ಒಂದೊಂದಾಗಿ ಮಂಡಿಸುತ್ತಾರೆ. ವಿಷಯ ಮಂಡನೆಯಲ್ಲಿ ಜಾನಪದ ವಿದ್ವಾಂಸನೊಬ್ಬನ ಶಿಸ್ತನ್ನು ಉದ್ದಕ್ಕೂ ಉಳಿಸಿಕೊಂಡು ಹೋಗುತ್ತಾರೆ(ಪು,22) ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರೆ. `ಗಾಮೊಕ್ಕಲ ಭಾರತ' ಕೃತಿಯನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿದ ಡಾ.ಕೇಶವಶರ್ಮ ಪ್ರಧಾನ ಸಂಸ್ಕೃತಿಯಾಗಲೀ ಅಧೀನ ಸಂಸ್ಕೃತಿಯಾಗಲೀ ಪರಸ್ಪರ ಭಿನ್ನತೆಯನ್ನು ಕಾಪಾಡಿಕೊಂಡು ಕೂಡಾ ಅನೇಕ ಸಂದರ್ಭಗಳಲ್ಲಿ ಸಾಮಾನ್ಯ ಸಂವಾದವೊಂದನ್ನು ಉಳಿಸಿಕೊಳ್ಳುತ್ತವೆ ಎನ್ನುವುದಕ್ಕೆ ಈ ಕೃತಿಯೂ ಒಂದು ಆಧಾರವಾಗಿದೆ(ಪು,7) ಮತ್ತು ಸಾಂಸ್ಕೃತಿಕ ರಾಜಕಾರಣದ ಸಂದರ್ಭದೊಳಗಡೆ ಈ ರೀತಿಯ ಕೃತಿಗಳಿಗೆ ವಿಶೇಷವಾದ ಪ್ರಾಶಸ್ತ್ಯ ಸಲ್ಲುತ್ತದೆ.(ಪು,7) ಎಂದು ಕೃತಿಯೊಂದರ ಸಾಂಸ್ಕೃತಿಕ ಮುಖದ ಕಡೆ ಗಮನ  ಸೆಳೆಯುತ್ತಾರೆ.
      `ಕೂಸಾಯ್ತು ನಮ್ಮ ಕೊಮರಗೆ' ಕೃತಿಯ ಕುರಿತು ವಿಸ್ತಾರವಾಗಿ ಬರೆದಿರುವ ಡಾ.ಜಿ.ಎಸ್.ಭಟ್ ಇಂಥ ರಚನೆಗಳ ಸಾಹಿತ್ಯೇತರ ಮೌಲ್ಯಗಳೂ ಗಮನಾರ್ಹ. ಬದುಕಿನ ಒಂದು ಮಹತ್ವದ ಸಂದರ್ಭದ ವಿವರ-ವಿವರಗಳನ್ನು ಹಿಡಿದಿಡುವ ದಾಖಲೆಗಳಾಗುತ್ತವೆ.(ಪು,14-15) ಎನ್ನುತ್ತಾರೆ. ಇಂತಹ ಸಂಕಲನಗಳಿಗೆ ಪ್ರಾಪ್ತವಾಗುವ ಸಾಮಾಜಶಾಸ್ತ್ರೀಯ ಮಹತ್ವವನ್ನು ವಿವರಿಸಿದ್ದಾರೆ. ಮಾತ್ರವಲ್ಲಬದುಕಿನ ನಿಶ್ಚಿತ ಸಂದರ್ಭಗಳಲ್ಲಿ ಎಲ್ಲ ಜನಾಂಗಗಳ ಒಳಮನಸ್ಸು ಕೆಲಸ ಮಾಡುವ ರೀತಿ ಒಂದೇ. ಹೊರ ಆವರಣಗಳು ಮಾತ್ರ ಬೇರೆಬೇರೆಯಾಗುತ್ತವೆ. ಜಾತಿಜಾತಿಗಳ ವೈಶಿಷ್ಟ್ಯಗಳಲ್ಲಿ ಶ್ರೇಷ್ಠ ಕನಿಷ್ಠಗಳ ಪ್ರಜ್ಞೆ ಉದ್ಬವಿಸದೆ ಮೌಖಿಕತೆ ಮಾತ್ರ ಮುಖ್ಯವಾಗುತ್ತದೆ. ಅವನ್ನು ಗುರುತಿಸುವ, ದಾಖಲಿಸುವ, ಗೌರವಿಸುವ ಮನಸ್ಸು ಜನಾಂಗ ಸಾಮರಸ್ಯಕ್ಕೆ ನಾಂದಿಯಾಗಿ ರಾಷ್ಟ್ರೀಯ ಸಾಮರಸ್ಯಕ್ಕೆ ಬುನಾದಿಯಾಗುತ್ತದೆ ಎನ್ನುವ ಮೂಲಕ ಆಧುನಿಕ ಸಮಾಜವೊಂದು ತನ್ನೊಡಲಿನಲ್ಲಿ ಬೆಳೆಸಿಕೊಳ್ಳುತ್ತಿರುವ ವೈಷ್ಯಮದ, ಮತ್ಸರದ ಪ್ರವೃತ್ತಿಗೆ ಪರ್ಯಾಯವೊಂದನ್ನು  ಸೂಚಿಸುತ್ತಾರೆ.
     
            `ಬಂದಾನೆ ಬಲೀಂದ್ರರಾಯ' ಪುಸ್ತಕವನ್ನು ವಿಶ್ಲೇಷಿಸಿದ ಡಾ.ಆರ್.ವಿ.ಭಂಡಾರಿಯವರು ಬ್ರಾಹ್ಮಣದಿಂದ ಮೊದಲ್ಗೊಂಡು ಕೆಳ ಜಾತಿಯ ಶೂದ್ರರ ವರೆಗಿನ ಹಾಡುಗಳು ಈ ಸಂಕಲನದಲ್ಲಿದ್ದರೂ ಮುಕ್ರಿ ಮುಂತಾದ ದಲಿತರಲ್ಲಿ ಬಲಿಂದ್ರನ ಕುರಿತು ಇರಬಹುದಾದ ಹಾಡುಗಳು ಇಲ್ಲಿ ಇಲ್ಲ. ಎನ್ನುವ ತಕರಾರಿನ ಮೂಲಕವೇ ಕೃತಿ ಪ್ರವೇಶಿಸುತ್ತಾರೆ. ಒಮ್ಮೆ ದಲಿತರಲ್ಲಿ ಇಂತಹ ಹಾಡುಗಳು ಇಲ್ಲದಿದ್ದರೂ ಅದರ ಅಧ್ಯಯನ ತುಂಬಾ ಕುತೂಹಲಕರ ಸಂಗತಿ ಆಗಬಹುದಿತ್ತು ಎನ್ನುತ್ತಾರೆ. ಇಡೀ ಪುಸ್ತಕದಲ್ಲಿ ಬಲಿ-ವಾಮನನ ಕತೆ ಒಂದು ಸಂಸ್ಕೃತಿಯ ಸ್ಥಾನಪಲ್ಲಟದ ಸಂಕೇತವಾಗಿ ಬಂದಿರುವುದನ್ನು ಹೀಗೆ ಉಲ್ಲೇಖಿಸುತ್ತಾರೆ, ಬಲಿ-ವಾಮನರ ಪುರಾಣ ಕೇವಲ ಆಯರ್ೀಕರಣದ್ದು ಮಾತ್ರವಾಗಿರದೆ ಚರಿತ್ರೆಯ ನಡೆಯಲ್ಲಿ ಕೃಷಿ ಸ್ತ್ರೀಯರ ಕೈತಪ್ಪಿದ ಒಂದು ಮಹಾಪರ್ವಕ್ಕೆ ಪ್ರತೀಕವಾದಂತಾಯಿತು. ಆದ್ದರಿಂದಲೇ ಬಲಿಯ ಆರಾಧನೆ ಒಂದು ಸಾಂಸ್ಕೃತಿಕ ಸಂಕೇತವಾಗಿದೆಯೇ ಹೊರತು `ಬಲಿ'ಯೆಂಬ ರೈತ ಮುಂದಾಳುವಿಗೇ ಸಂಬಂಧಿಸಿದ್ದಾಗಿರಲಿಕ್ಕಿಲ್ಲ ಎಂಬ ನಿಲುವಿಗೆ ತಲ್ಪ ಬೇಕಾಗುತ್ತದೆ. (ಪು,51)ಎನ್ನುತ್ತಾರೆ.

 ಇದೇ ಪುಸ್ತಕದ ಬಗ್ಗೆ ಜಾನಪದ ವಿದ್ವಾಂಸರಾದ ವಿ.ಗ.ನಾಯಕರು ಬರೆದ ಇನ್ನೊಂದು ಲೇಖನವೂ ಇದೆ. ಇದರಲ್ಲಿಆದರೆ ಜಿಲ್ಲೆಯಲ್ಲಿಯೇ ಬೇರೆಬೇರೆ ಕಡೆಗಳಲ್ಲಿ ಬಲಿಪಾಡ್ಯದ ದಿನವೂ ಹಿರಿಯರಿಗೆ ನಮಸ್ಕರಿಸುವ `ಸಣ್ಣ ಮಾಡುವುದು' ಎಂಬ ರಿವಾಜಿರುವುದನ್ನು ನಿರ್ಲಕ್ಷಿಸಿದ್ದಾರೆ. . . .  ಅದರಂತೆ ಬೋರಜ್ಜಿಗಾಗಿಯೇ ಹಿಂದೊಮ್ಮೆ ಇದ್ದ ಎಂಡು ದಿನಗಳ ಹಬ್ಬ; ಆಕೆ ಬಲಿಂದ್ರನ ತಾಯಿ, ಮೊಮ್ಮಕ್ಕಳಿಗೆ ಎಣ್ಣೆ ಸ್ನಾನ ಮಾಡಿದಲೆಂದು ಬಂದ ಅಜ್ಜಿ ಎಂದೆಲ್ಲಾ ಇರುವ ನಂಬಿಕೆಯನ್ನು ನಾಯಕರು ಕಡೆಗೆಣಿಸಿದ್ದಾರೆ (ಪು,114) ಎಂದು ಪುಸ್ತಕದಲ್ಲಿ ಸೇರ್ಪಡೆಯಾಗಬೇಕಾದ ಮಾಹಿತಿಯೊಂದನ್ನು ವಿ.ಗ.ನಾಯಯಕರು ಕೊಟ್ಟಿದ್ದಾರೆ.( ಇಂತಹ ಮಾಹಿತಿ ಕೊಟ್ಟಿದ್ದಕ್ಕಾಗಿ ಎನ್.ಆರ.ನಾಯಕರು ವಿನಯದಿಂದ ಕೃತಜ್ಞತೆ ಸಲ್ಲಿಸಿದ್ದಾರೆ ಕೂಡ.) ಸಣ್ಣಪುಟ್ಟ ಕೊರತೆಗಳ ನಡುವೆ ಕೂಡ ದೀಪಾವಳಿಯ ಕುರಿತು ಜಾನಪದರಲ್ಲಿ ಬಂದ ಅಗದೀ ಚಲೋದಾದ ಪ್ರಯತ್ನವಾಗಿದೆ. (ಪು.115) ಎಂದು ಶರಾ ಬರೆದಿದ್ದಾರೆ.

  ಈಪುಸ್ತಕದ ಇನ್ನೊಂದು ಮಹತ್ವಪೂರ್ಣ ಲೇಖನ `ದೇಜಗೌ' ಅವರು `ಪಡು ಕೋಗಿಲೆ' ಬಗ್ಗೆ ಬರೆದ ಬರಹ. ಜನಾಂಗೀಯ ಹಿನ್ನೆಲೆಯಲ್ಲೂ ಪ್ರಾದೇಶಿಕ ಹಿನ್ನಲೆಯಲ್ಲಿ ಜಾನಪದ ಸಂಶೋಧನೆ ನಡೆದಾಗ ಮೂಲ ಅಧ್ಯಯನಕ್ಕೆ ಒಂದು ವ್ಯಾಪಕತೆ ಬರುತ್ತದೆ.' ಎಂದು ಹೇಳುತ್ತಾ `ಪಡು ಕೋಗಿಲೆ' ಸಂಕಲನ ಜನಾಂಗದ ಜಾನಪದದ ಕಡೆಗೆ ನಮ್ಮ ದೃಷ್ಠಿಯನ್ನು ಸೆಳೆಯುವ ಉಪಯುಕ್ತ ಕೃತಿ ಎನ್ನುತ್ತಾರೆ.

  ಶಾಂತಿನಾಯಕರ ಮುಖ್ಯ ಕೃತಿಗಳ ಬಗ್ಗೆಕೂಡ ಇಲ್ಲಿ ಮಹತ್ವದ ಲೇಖನಗಳಿವೆ. ತನ್ನ ಸಿದ್ಧಾಂತದ ಸಮರ್ಥನೆಗೆ ಬೇಕಾದಷ್ಟನ್ನು ಮಾತ್ರ ಸಂಗ್ರಹಿಸಿ ಕೊಡುವ ಬದಲು ಯಾವುದೇ ಪೂವರ್ಾಗ್ರಹವಿಲ್ಲದೆ ಮಾಹಿತಿಗಳನ್ನೆಲ್ಲಾ ಸುಂದರವಾಗಿ ಒದಗಿಸುವ ಪ್ರಯತ್ನ ವನ್ನು ಶಾಂತಿನಾಯಕರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿರುವ ಡಾ.ಕೆ.ಚಿನ್ನಪ್ಪಗೌಡ ಮುಖ್ಯವಾಗಿ ಇತರ ಪರಂಪರೆಗಳಿಗಿಂತ ನೀವು ನೊಡುವ ಪರಂಪರೆಯು ಭಿನ್ನ ಮತ್ತು ಅನನ್ಯವಾಗಿರುವ ನೆಲೆಗಳತ್ತ ನಿಮ್ಮ ಲಕ್ಷಸೆಳೆಯುವುದು - ಈ ದೃಷ್ಟಿಯಿಂದ ಶಾಂತಿನಾಯಕರ ಳೇಖನಗಳು ಆಧುನಿವಾಗಿವೆ. ಜಾನಪದರ ಜೀವನ ಕ್ರಮಗಳ ಕುರಿತಂತೆ ಮಾಹಿತಿಗಳನ್ನು ಕೊಡುವ ಈ ಲೇಖನಗಳಲ್ಲಿ 'ಖಂಡಿತವಾಗಿ ಇದರ ಅರ್ಥ ಹೀಗೆ ಮತ್ತು ಇಷ್ಟು ಮಾತ್ರ ಎಂಬ ಅಂತಿಮ ನಿಧರ್ಾರಗಳಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದರೆ ಶಾಂತಿನಾಯಕರ ಲೇಖನಗಳು ಭವಿಷ್ಯದಲ್ಲಿಯೂ ಪ್ರಸ್ತುತವಾಗಿ ಉಳಿದುಕೊಳ್ಳುತ್ತವೆ.(ಪು,10) ಎನ್ನುತ್ತಾ ಜನಪದ ಅಧ್ಯಯನದಲ್ಲಿ ಪ್ರಸ್ತುತ ವಾಗಬೇಕಾದ ಮಾರ್ಗವನ್ನು ಸೂಚಿಸುತ್ತಾರೆ.

  ಉ.ಕ.ಜಿಲ್ಲೆಯ ಹವ್ಯಕ ಕತೆಗಳ ಸಂಗ್ರಹದ ಬಗ್ಗೆ ಡಾ.ಎಲ್.ಜಿ.ಭಟ್ ಅವರು ಬರೆದ ಲೇಖನದಲ್ಲಿ ಕತೆಗಳನ್ನು ತೌಲನಿಕ ಅಧ್ಯಯನವಿದೆ. ಕತೆಯ ಭಾಷಾ ವೈವಿದ್ಯವನ್ನು ಮತ್ತು ಆಧುನಿಕಜಗತ್ತಿನಲ್ಲಿ ಮರೆಯಾಗಿ ಬಿಡಬಹುದಾದ ಹವ್ಯಕ ಆಡುಭಾಷೆಯನ್ನು ದಾಖಲಿಸಿದ್ದನ್ನು ಮಹತ್ವದ ಕ್ರಿಯೆಯೆಂದು ಹೇಳುತ್ತಾರೆ. ಭಾಷಾಬಳಕೆಯಲ್ಲಿ ಆದ ಸಣ್ಣಪುಟ್ಟ ದೋಷವನ್ನು ಪಟ್ಟಿಮಾಡುತ್ತಾರೆ ಮತ್ತು ಈ ಎಲ್ಲಾ ಕತೆಗಳು ಬೇರೆ ಜಾತಿಯವರು ಹೇಳುವ ಕತೆಯಲ್ಲೂ ಇರುವುದನ್ನು ಹೇಳುತ್ತಾ ಮೂಲತಃ ಇದು ಯಾವ ವರ್ಗದಲ್ಲಿ ಹುಟ್ಟಿಕೊಂಡಿದ್ದೆಂದು ಅಧ್ಯಯನ ಮಾಡುವುದು ಸೂಕ್ತ ಎನ್ನುತ್ತಾರೆ.

   ಶಾಂತಿನಾಯಕರ ಜಾನಪದ ಸಂಗ್ರಹದ ವಿಶಿಷ್ಠತೆಯ ಕುರಿತು ಡಾ.ಶಾಲಿನಿ ರಘುನಾಥ ಅವರು ಮತ್ತು ಡಾ.ಬಿ.ಪಿ.ರಾಮಯ್ಯನವರ ಲೇಖನ ಗಮನರ್ಹವಾದದ್ದು.

  ಪತ್ರಿಕೆಗಳಿಂದ ಆಯ್ದುಕೊಂಡ ಜಾನಪದ ವಿದ್ವಾಂಸರ ಮಾತುಗಳು ಕೂಡ ಜಾನಪದ ಪ್ರಕಾಶನದ ಕೊಡುಗೆಯನ್ನು ಉಲ್ಲೇಖಿಸುತ್ತದೆ. ಶಂಬಾಜೋಶಿ, ಕಾಳೇಗೌಡ ನಾಗವಾರ, ಶ್ರೀಕಂಠ ಕೂಡಿಗೆ, ಕೃಷ್ಣಮೂತರ್ಿ ಹನಾರ .. .....ಮುಂತಾದವರು ಮಹತ್ವಪೂರ್ಣ ಮಾತುಗಳು ಜಾನಪದ ಅಧ್ಯಯನ ರೂಢಿಸಿಕೊಳ್ಳಬೇಕಾದ ಶಿಸ್ತನ್ನು ಒತ್ತಿ ಹೇಳುತ್ತದೆ.

    ಡಾ.ಎನ್ ಆರ್ ನಾಯಕ ಮತ್ತು ಶಾಂತಿನಾಯಕರ ವ್ಯಕ್ತಿತ್ವದ ಕುರಿತು ಡಾ.ಆರ್.ವಿ. ಭಂಡಾರಿ, ಜಿ.ಎನ್.ಹರೇಗುತ್ತಿ ಮತ್ತು ಟಿ.ಕೆ ಮಹಮದ್ರ ಲೇಖನ ಕೂಡ ಅವರ ಜೀವನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

             ಹೀಗೆ ಕೃತಿಯೊಂದರ ಗುಣಾವಗುಣಗಳ ವಸ್ತುನಿಷ್ಠ ವಿಶ್ಲೆಷಣೆಗೆ ಮತ್ತು ಜಾನಪದ ಅಧ್ಯಯನದ ಪರಂಪರೆ ಮತ್ತು ಪ್ರಯೋಗದ ಕುರಿತು ನಮ್ಮ ಗಮನ ಸೆಳೆದ ಕೃತಿ ನಿಜಕ್ಕೂ ದೀಪಾರಾಧನೆಯೇ ಆಗಿದೆ.
- ಡಾ. ವಿಠ್ಠಲ ಭಂಡಾರಿ.ಕೆರೆಕೋಣ
- (ಮರು ದಿಬ್ಬಣ -ಕೃತಿಯಲ್ಲಿ ಪ್ರಕಟಿತ-2010)

No comments:

Post a Comment