Saturday 17 August 2013

ವೃತ್ತಿ + ಹವ್ಯಾಸಿ = ರಂಗಭೂಮಿ --ಶ್ರೀಪಾದ ಭಟ್ಟ್

                    ವೃತ್ತಿ +  ಹವ್ಯಾಸಿ  = ರಂಗಭೂಮಿ 
            ಆಧುನಿಕ ರಂಗಭೂಮಿ, ತನ್ನೆಲ್ಲ ಬದ್ಧತೆಗಳ ನಡುವೆಯೂ ಜನಪ್ರಿಯತೆಯ ಮಾನದಲ್ಲಿ ತೀವ್ರ ಕೆಳಮುಖವನ್ನು ಅನುಭವಿಸುತ್ತಿದೆ. ರಂಗಭೂಮಿಯ ಸಾಮಾಜಿಕ ಅವಶ್ಯಕತೆಯನ್ನು ಮನಗಂಡ ರಂಗತಜ್ಞರು, ರಂಗಭೂಮಿಯನ್ನು ಮತ್ತೆ ಜನರ ಅವಶ್ಯಕತೆಯನ್ನಾಗಿ ಮಾಡುವ ತೀವ್ರ ಪ್ರಯತ್ನದಲ್ಲಿದ್ದಾರೆ. ವರ್ತಮಾನದ ಗಾಯಗಳಿಗೆ ಗತಕಾಲದಲ್ಲಿ ಉಪಚಾರ ದೊರೆಯಬಹುದೆನೋ ಎಂಬ ಆಸೆ ಸಹಜವಾದದ್ದು. ಹಾಗಾಗಿ ಒಮ್ಮೆ ಜನಪ್ರಿಯತೆಯ ಉತ್ತುಂಗದಲ್ಲಿದ್ದ ವೃತ್ತಿರಂಗಭೂಮಿ ಅಥವಾ ಕಂಪನಿ ನಾಟಕಗಳು ಗೆದ್ದಿರುವ ಕಾರಣಗಳೇನು? ಮತ್ತು ನಾವು ಆಧುನಿಕರು ಸೋಲುತ್ತಿರುವುದೆೆಲ್ಲಿ ಎಂಬುದನ್ನು ಒಟ್ಟೊಟ್ಟಿಗೆ ಇಟ್ಟು ನೋಡುವ ಪ್ರಯತ್ನ ಈ ಲೇಖನದ್ದು.
            ಕಂಪನಿ ನಾಟಕ ಅಥವಾ ವೃತ್ತಿರಂಗಭೂಮಿಯ ಹಾಗೂ ಹವ್ಯಾಸಿ ರಂಗಭೂಮಿಯ ಅನ್ವಯಿಕ ಸಾಧ್ಯತೆಗಳ ಕುರಿತು ನನ್ನ ಟಿಪ್ಪಣೆಗಳನ್ನು ಮಂಡಿಸುವ ಆರಂಭದಲ್ಲೇ ಈ ಪರಿಕಲ್ಪನೆಗಳಿಗಿರುವ ತೊಡಕುಗಳನ್ನು ತಮ್ಮ ಮುಂದಿಡುತ್ತಿದ್ದೇನೆ.
ಒಂದನೇ ತೊಡಕು ವಗರ್ಿಕರಣಕ್ಕೆ ಸಂಬಂಧಿಸಿದ್ದು. ಯಾವುದನ್ನು ನಾವು ಈಗ `ವೃತ್ತಿ ರಂಗಭೂಮಿ ಎಂದು ಕರೆಯುತ್ತಿದ್ದೇವೋ ಮತ್ತು ಯಾವುದನ್ನು ನಾವು `ಹವ್ಯಾಸಿ ರಂಗ ಭೂಮಿ ಎಂದು ಕರೆಯುತ್ತಿದ್ದೇವೊ ಅವು ಒಂದು ಸಿದ್ಧ ಪ್ರೊಡಕ್ಟ್ ಗಳಲ್ಲ. ಅದರಲ್ಲಿ  ಹಲವಾರು ಬೆಳವಣಿಗೆಯ ಅಂಶಗಳಿವೆ. ವೃತ್ತಿ ರಂಗಭೂಮಿ ಆರಂಭದಲ್ಲಿ  ಸ್ವೀಕರಿಸಿದ ಜನಪದ ಆಟಗಳಾಗಿರಬಹುದು ಅಥವಾ ಸ್ಥಳೀಯ ವಿವಿಧ ಮಾದರಿಗಳಿರಬಹುದು,  ಅವನ್ನೆಲ್ಲ ಬೇರೆ ಬೇರೆ ಕಾಲಘಟ್ಟದಲ್ಲಿ ಸೇರಿಸಿಕೊಳ್ಳುತ್ತ  ಬೆಳವಣಿಗೆ ಹೊಂದುತ್ತ ಬಂದಿದೆ. ಈಗ ನಾವು ಇಲ್ಲಿ ಪ್ರಸ್ತಾಪಿಸುವ ಕಂಪನಿನಾಟಕಗಳು, ಯಾವುದನ್ನು ನಾವು ಲೆಜೆಂಡ್ ಆಗಿ ನೋಡುತ್ತಿದ್ದೇವೆಯೋ ಅವು ಅದರ ಉಚ್ಛ್ರಾಯ ಕಾಲದಲ್ಲಿ,  ಸಿದ್ಧರೂಪವಾಗಿ ನಿಂತ ಕಾಲಘಟ್ಟಕ್ಕೆ ಸೇರಿದುದಾಗಿದೆ. ಅದನ್ನು ಮಾತ್ರ ಉಲ್ಲೇಖಿಸಲು ಸಾಧ್ಯ; ಹೊರತು ಈ ರೂಪದ ಹಿಂದಿನ ಬೆಳವಣಿಗೆಯ ಹಂತಗಳನ್ನಲ್ಲ.
ಅದೇ ರೀತಿ `ಹವ್ಯಾಸಿ ರಂಗಭೂಮಿ ಅಂತ ಕರೆಯುವಾಗ ಕೂಡ ಒಂದು ಸರ್ವ ಗ್ರಾಹ್ಯ ಆದ ಘಟ್ಟ ಅಂತ ಸಿಗೋದಿಲ್ಲ. ಅದೂ ಸಹ ಬೆಳವಣಿಗೆ ಹೊಂದುತ್ತಲೇ ಇದೆ. ಹಾಗಾಗಿ ನಾವು ಮಾತನಾಡುವಾಗ ಅವುಗಳ ಈ ಓಘವನ್ನು ಕಡೆಗಣಿಸಿ ಒಂದುಕಡೆ ಸ್ಥಗಿತಗೊಳಿಸಿ ಮಾತನಾಡಬೇಕಾಗುತ್ತದೆ. ಈಗ ನೋಡಿ ಜನಪದ ರಂಗಭೂಮಿಯ ಅಂಶಗಳನ್ನು, ಸಂವಹನೆಯ ಮಾದರಿಗಳನ್ನು ಅರಗಿಸಿಕೊಳ್ಳುತ್ತ ಕಂಪನಿ ನಾಟಕ ಹೊಸ ಆಕೃತಿಯೊಡನೆ ಬಂತು. ಹಾಗಾಗಿ ಇದನ್ನು ಪ್ರತ್ಯೇಕವಾಗಿ ಒಡೆಯುವುದು ಹೇಗೆ? ಅಲ್ಲದೇ ಹವ್ಯಾಸಿ ರಂಗಭೂಮಿಯಲ್ಲಿಯೇ ನಗರದ  ರಂಗಚಟುವಟಿಕೆಗಳಿಗೂ, ಗ್ರಾಮೀಣ ರಂಗ ಚಟುವಟಿಕೆಗಳಿಗೂ ಅಗಾಧವಾದ ವ್ಯತ್ಯಾಸಗಳಿವೆ. ಯಾವುದರ ಲಕ್ಷಣಗಳನ್ನು ಹಿಡಿದಿರಿಸುವುದು? ಇದರರ್ಥ. ಅಂತದ್ದೊಂದು ಲಕ್ಷಣಗಳೇ ಈ ಎಲ್ಲ ರಂಗಭೂಮಿಗೂ  ಇಲ್ಲ ಅಂತಲ್ಲ. ಆದರೆ ನಾವಂದುಕೊಂಡಷ್ಟು  ಪ್ರತ್ಯೇಕವಾದ `ಈಸ್ಥೆಟಿಕ್ ಇದರ ಹಿಂದಿದೆಯೇ ಎಂಬುದು ಅನುಮಾನ. ವಗರ್ಿಕರಣದ ಈ ನಮೂನೆಯನ್ನು ಸಧ್ಯ ಅಧ್ಯಯನದ ಅನುಕೂಲಕ್ಕಾಗಿ ಮಾತ್ರವೇ ಸ್ವೀಕರಿಸಿ ನಂತರ ಅದನ್ನು ವಿಸಜರ್ಿಸಲೇ ಬೇಕಾಗುತ್ತದೆ.
                 ಎರಡನೇಯದಾಗಿ ಪಾರಿಭಾಷಿಕ ಪದಕ್ಕೆ ಸಂಬಂಧಿಸಿದ ತೊಡಕು. ಇದನ್ನು ವಿಸ್ತರಿಸಲು ಹೋಗುವುದಿಲ್ಲ. ಈ ಪ್ರಬಂಧದ ಮಟ್ಟಿಗೆ ವೃತ್ತಿ ರಂಗಭೂಮಿ = ಕಂಪನಿ ನಾಟಕಗಳು ಅಂತಲೂ, ಹವ್ಯಾಸಿ ರಂಗಭೂಮಿ = ಆಧುನಿಕ ರಂಗಭೂಮಿ ಅಂತಲೂ ಇಟ್ಟು ಮಾತನಾಡಲು ಬಯಸುತ್ತೇನೆ. ಆಧುನಿಕ ರಂಗಭೂಮಿ ಅಂದಾಗ ಅದು ವಸಾಹತು ಕಾಲಕ್ಕೆ ಸಂಬಂಧಿಸಿದ್ದರಿಂದ ಕಂಪನಿ ನಾಟಕಗಳೂ ಅದರಲ್ಲೇ ಬರುತ್ತವೆ ಎಂಬ ಎಚ್ಚರ ನನಗಿದೆ. ಆದಾಗ್ಯೂ ಅದನ್ನು ನವ್ಯ ಫೇಸ್ನ ಕಾಲಘಟ್ಟ ಅಂತ ಗುರುತಿಸಲು ಇಷ್ಟಪಡುತ್ತೇನೆ. ಮತ್ತು ಈ ಟಿಪ್ಪಣಿ ಮುಗಿದಕೂಡಲೇ ನೀವು ಈ ಪಾರಿಭಾಷಿಕ ಪದದ ಒಪ್ಪಂದವನ್ನು ಸಹ ವಿಸರ್ಜಿಸಬಹುದು..
             ಹವ್ಯಾಸಿ ರಂಗಭೂಮಿಯ ಆದ್ಯರಾದ ರಂಗಾಚಾರ್ಯರು ಅಂದರೆ ಶ್ರೀರಂಗರ ರಂಗಪ್ರಜ್ಞೆಯನ್ನು ರೂಪಿಸಿದ್ದು, ಅವರೂರಿನಲ್ಲಿ ನಡೆದ ಹರಿಶ್ಚಂದ್ರದಂತ ಆಟಗಳು, ವಿಜಾಪುರದಲ್ಲಿ ಅವರ ಮೇಲೆ ಅಪಾರ ಪ್ರಭಾವ ಬೀರಿದ ನಾರಂಗಿ ನಿಶಾನ್ನಂತಹ ಮರಾಠಿ ಕಂಪನಿ ನಾಟಕಗಳು. ಈ ಕಾಲಘಟ್ಟದ ನಮ್ಮ ನಡುವಿನ ಹೆಮ್ಮೆಯ ಗಿರಿಶ್ ಕಾನರ್ಾಡರು ನಾನು ಆಧುನಿಕ ನಾಟಕ ಎಂದು ಯೋಚನೆ ಮಾಡಿದರೂ ಕಂಪನಿ ನಾಟಕದಿಂದಲೇ ಹೊರಟು ಬರಬೇಕು ಅನ್ನುತ್ತಾರೆ. ಅವರ ರಚನೆಯ ಹಿಂದಿನ ಸ್ಪೂತರ್ಿಯನ್ನು, ಆಕೃತಿಯನ್ನು ನಾವು ಹೀಗೆ ಗೃಹಿಸಲು ಸಾಧ್ಯ. ಕಾರಂತರಂತೂ ಆಧುನಿಕವಾದ ತಮ್ಮ ಪ್ರಯೋಗಕ್ಕೆ ಕಂಪನಿ ನಾಟಕದ ಮಾಂತ್ರಿಕ ಸ್ಪರ್ಶ ನೀಡಿದ ಉದಾಹರಣೆ ನಮ್ಮ ಕಣ್ಣೆದುರಿಗೇ ಇದೆ.
                ಈ ಹಿನ್ನೆಲೆಯಲ್ಲಿ ನಾನು ಈ ಎರಡೂ ರಂಗಭೂಮಿಯ ಶಕ್ತಿ ಮತ್ತು ಮಿತಿಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಮಂಡಿಸುತ್ತಿದ್ದೇನೆ : ಮತ್ತು ಕನರ್ಾಟಕದ ಸಂದರ್ಭವನ್ನು ಮಾತ್ರ ಪರಿಗಣಿಸಿ ಮಾತನಾಡುತ್ತಿದ್ದೇನೆ. ಅಲ್ಲದೇ ನಾನು ವೃತ್ತಿರಂಗಭೂಮಿಯಿಂದ ಕಲಿತುಕೊಳ್ಳಬಹುದಾದ ಸಂಗತಿಗಳ ಕುರಿತು ಹೇಳುವಾಗ ನಿಮಗೆ ಕಂಪನಿ ನಾಟಕ ಅಂದರೆ ಸವರ್ಾಲಂಕಾರ ಭೂಷಿತ,  ಸರ್ವಗುಣ ದೋಷರಹಿತವಾದ ಒಂದು ಆತ್ಯಂತಿಕ ಸ್ಥಿತಿಯ ರಂಗಭೂಮಿ ಅಂತಲೂ, ಹವ್ಯಾಸಿ ರಂಗಭೂಮಿ ಎಂದರೆ ಪರಮ ಭ್ರಷ್ಟಾತಿ ಭ್ರಷ್ಟವಾದ ಆಶಾದಾಯಕವೇ ಅಲ್ಲದ ರಂಗ ಅಭ್ಯಾಸವೆಂತಲೂ ಕಂಡುಬರುವ ಅಪಾಯವಿದೆ. ಆದರೆ ಹಾಗೇನು ಅಲ್ಲ ಎಂಬುದನ್ನು ಆರಂಭದಲ್ಲೇ ಸ್ಪಷ್ಟಪಡಿಸುತ್ತಿದ್ದೇನೆ. ಈ ಸಂದರ್ಭದ ಅಧ್ಯಯನದ ಚೌಕಟ್ಟಿನ ಮಿತಿಯಲ್ಲಿ ವೃತ್ತಿ ರಂಗಭೂಮಿಯ ಶಕ್ತಿ ಹಾಗೂ ಹವ್ಯಾಸಿ ರಂಗಭೂಮಿಯ ಮಿತಿ ಇವೆರಡನ್ನೂ ಮಾತ್ರ ಒತ್ತುಕೊಟ್ಟು ಮಾತನಾಡುತ್ತಿದ್ದೇನೆ. ಅಂದರೆ ಇಲ್ಲಿ ಹವ್ಯಾಸಿ ರಂಗಭೂಮಿಯ ಸಾಧನೆಯನ್ನು, ವೃತ್ತಿರಂಗಭೂಮಿಯ ಮಿತಿಯನ್ನು ಎಲ್ಲೂ ಚರ್ಚಿಸುತ್ತಿಲ್ಲ.. ಅದು ಸಧ್ಯದ ನನ್ನ ತುರ್ತಲ್ಲ.

                ಕಂಪನಿ ನಾಟಕ ನಮಗೆ ಬಹಳ ಮುಖ್ಯವಾಗಿ ರಂಗಭೂಮಿಯ ಸಂಭ್ರಮವನ್ನು ಕಾಣಿಸಿತು. ರಂಗಭೂಮಿಗೆ ಇರುವ ಅದರ ರೋಚಕತೆಯನ್ನು ಅನುಭವವಾಗಿಸಿತ್ತು. ಹವ್ಯಾಸಿ ರಂಗಭೂಮಿಯ ಪ್ರಧಾನವಾದ ದೌರ್ಬಲ್ಯವೇ ಅದರ ಅತಿವಾಸ್ತವತೆ. ವಾಸ್ತವದ ನಮ್ಮ ಕಣ್ಣ ನೇರದ ಸಂಗತಿಗಳ ಆಚೆ ಏನೂ ಇಲ್ಲ ಎಂದು ನಂಬಿಕೊಂಡ ಗೃಹಿಕೆ ಅದು. ಈ ಅತಿವಾಸ್ತವತೆಯ ವ್ಯಾಮೋಹ ನವ್ಯ ಹೇಳಿಕೊಟ್ಟ ಪಶ್ಚಿಮದ ರ್ಯಾಶನಾಲಿಸ್ಟ್ ಧೋರಣೆಗೆ ಸಂಬಂಧಿಸಿದ್ದು,  ಇದಕ್ಕೆ  ಭವಿಷ್ಯದ ಕನಸಿಲ್ಲ. ಗತಕಾಲದ ಕುರಿತು ಅತ್ಯಂತಿಕ ತಿರಸ್ಕಾರ ಇದೆ. ತೀರ ಕೌಟುಂಬಿಕವಾದ ಪಠ್ಯಗಳಾಚೆ ಉಳಿದ ಪಠ್ಯಗಳನ್ನು ಅದು ನಿರಾಕರಿಸತೊಡಗುತ್ತದೆ. ಹಾಗಾಗಿ ಇದೆಲ್ಲದರ ಆಚೆ ಬೇರೊಂದು ಪ್ರಪಂಚವೂ ಇದೆ ಎಂಬುದನ್ನು ಅದು ನಿರಾಕರಿಸಿತು. ಆ ಇತರ ಜಗತ್ತಿನವರಿಗೆ ಇಲ್ಲಿ ಪ್ರವೇಶ ಸಾಧ್ಯವಾಗಲೇ ಇಲ್ಲ. ಪಶ್ಚಿಮದ ಕಲಿತ ಬುದ್ದಿ ಆಡಿಸಿದ ನುಡಿ ನಾಟಕದ ನಾಡಿಯನ್ನು ಆಡಿಸತೊಡಗಿತು. ಹವ್ಯಾಸಿ ರಂಗಭೂಮಿಯನ್ನು ಉದ್ಘೋಷಿಸಿದ ಶ್ರೀರಂಗರು ಅಂತೆಯೇ ಕೈಲಾಸಂ ಇಂಗ್ಲೇಂಡಿಗೆ ಹೋಗಿ ಬಂದದ್ದು, ಅವರ ಚಟುವಟಿಕೆಗಳ ಬೆನ್ನ ಹಿಂದೆಯೇ ನವ್ಯ ಮೂಮೆಂಟ ಇಲ್ಲಿ ಬೆಳವಣಿಗೆ ಹೊಂದಿದ್ದು, ಜನಪ್ರಿಯತೆಯನ್ನು ಅನುಮಾನಿಸುವ ದೃಷ್ಟಿ ಇವೆಲ್ಲ ರಂಗಭೂಮಿ ಇತಿಹಾಸ ಬಲ್ಲವರಿಗೆ ಗೊತ್ತು. ಆದರೆ ಬಹುಮುಖ್ಯ ಸಂಗತಿ ಎಂದರೆ ನಾಟಕದ ಒಳಗಡೆಯೇ ಅವರು ವೃತ್ತಿರಂಗಭೂಮಿಗೆ ಹೊಡೆದ ಹೊಡೆತ ಸಾಮಾನ್ಯವಾದದ್ದಲ್ಲ. ಅವರ ನಾಟಕಗಳು ತಲುಪಿದ್ದು, ತೀರ ಎಲೈಟ್ ಆದ ಮಧ್ಯಮವರ್ಗದ ಬುದ್ದಿಜೀವಿಗಳನ್ನು ಎಂದಾದರೂ ಅವರ ಅಭಿಪ್ರಾಯ ಜನಾಭಿಪ್ರಾಯ ರೂಪಿಸಿದ್ದು ಸುಳ್ಳಲ್ಲ. ನಮ್ಮ ವಸಾಹತು ಬದುಕಿನ ಸಂದರ್ಭದಲ್ಲಿ ಇಂಗ್ಲೆಂಡಿನಿಂದ ಬಂದವರ ಮಾತಿಗೊಂದು ತೂಕ ಒದಗುವದು ಆಶ್ಚರ್ಯವೇನಲ್ಲ. ಅದು  ಎಷ್ಟರಮಟ್ಟಿಗೆ ಆಯಿತೆಂದರೆ ಕಂಪನಿ ನಾಟಕ ನೋಡುವುದೇ ಒಂದು ಪಾಪ ಎಂಬಷ್ಟರ ಮಟ್ಟಿಗೆ ಹೋಯಿತು.
  ಈ ಅತಿವಾಸ್ತವದ ರೋಗ ಬಡಿದಿದ್ದರಿಂದ ಆದ ಮೊದಲ ಸಮಸ್ಯೆಯೇ ರಂಗಭೂಮಿ ಎನಿಮಿಕ್ ಆಗಿದ್ದು, ತನ್ನೆಲ್ಲ ಜೀವರಸವನ್ನು ಕಳೆದುಕೊಂಡಿದ್ದು. ಅದಕ್ಕೆ ಅನಂತರದ ರಸಸ್ಪರ್ಶ ಕಂಪನಿ ಪ್ರಭಾವದ ಕಾರಂತರಿಂದ ಆಯಿತು. ಆದರೆ ಕಾರಂತರು ಆ ಸಮಯದಲ್ಲಿ ಎಷ್ಟೆಲ್ಲ ನಿಂದೆಗೂ ಗುರಿಯಾಗಬೇಕಾಯಿತು. ನವ್ಯ ವಲಯ ಅವರ ಪ್ರಯೋಗವನ್ನು ಗಿಮಿಕ್ ಎಂದೂ, ಹಾಡು ಹಸೆಯಲ್ಲಿ ಆದ ಪಲಾಯನವಾದವೆಂದೂ, ಕೇವಲ ಅಲಂಕರಣ ಎಂದೂ ಮೂದಲಿಸಿತ್ತು. 80 ರ ನಂತರ ಕಾರಂತರ ಮಹತ್ವ ಅರಿವಾಗತೊಡಗಿದೆ.
                ಯುನಿವಸರ್ಿಟಿ ವಿಟ್ ಎಂದು ಕರೆಯಲ್ಪಡುವ ವಿಶ್ವವಿದ್ಯಾಲಯದ ರಂಗ ವಿಮರ್ಶಕರ ಗುಂಪು ಷೇಕ್ಸ್ಪಿಯರನ್ ಕಾಲದಲ್ಲೂ ಹೀಗೆ ವತರ್ಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಮಾತಿನ ಮಧ್ಯ ಹಾಡನ್ನು ತಂದ ಆತನನ್ನು `ಬೇರೆ ಬೇರೆ ಗರಿಗಳನ್ನು ಸಿಕ್ಕಿಸಿಕೊಂಡ ಕಾಗೆ ಅಂತ ಕರೆದಿದ್ದುಂಟು. ಆದರೆ ಕಂಪನಿ ನಾಟಕದ  ಷೇಕ್ಸ್ಪಿಯರ್ ಇಂದು ಯುನಿರ್ವಸಿಟಿಯ ಪಠ್ಯದಲ್ಲಿದ್ದಾನೆ.

               ವೃತ್ತಿ ರಂಗಭೂಮಿಯ ಒಂದು ಶಕ್ತಿ ಎಂದರೆ ಅದರ ಸ್ಥಿತಿ ಸ್ಥಾಪಕತ್ವದಗುಣ ಹಾಗೂ ಒಳಗೊಳ್ಳುವ ಗುಣ. ಕಾಲಕಾಲಕ್ಕೆ ಸಮಾಜದಲ್ಲಾದ ಬದಲಾವಣೆಗಳನ್ನು ಒಳಗೊಳ್ಳುತ್ತಾ ಪ್ರತಿಕ್ರಿಯಿಸುತ್ತಾ ಬಂದ ಈ ರಂಗಭೂಮಿ ಬೇಕಾದರೆ ದ್ರೌಪದಿ ವಸ್ತ್ರಾಪಹರಣದಲ್ಲಿ ಖಾದಿ ಮಹತ್ವದ ಕುರಿತು ಮಾತನಾಡುತ್ತದೆ. ಜನರಿಗೆ ಅದರಲ್ಲಿ ಜೀವಂತಿಕೆ ಕಾಣುವ ಹಾಗೆ, ನಮ್ಮದೇ ಜೀನವದ ಅಂಗ ಅದರಲ್ಲಿ ಪ್ರತಿನಿಧಿಸಲ್ಪಡುತ್ತದೆ ಅಂತ ಅನ್ನಿಸುವ ಹಾಗೆ ಅದು ಮಾಡಿತು. ಅದರ ಒಳಗೊಳ್ಳುವ ಕ್ರಿಯೆ ಬಹಳ ಆಸಕ್ತಿದಾಯಕವಾದದ್ದು.
 ಕಂಪನಿ ನಾಟಕದ ಕುರಿತು ನನ್ನಲ್ಲಿ ಅಪಾರವಾದ ಆಸಕ್ತಿ ಮೂಡಿಸಿದ ಒಂದು ಚಿಕ್ಕ ಕಂಪನಿ ಕರಾವಳಿ ತೀರದ ನನ್ನೂರಿಗೆ ಬಂದಿತ್ತು. ಅದೊಂದು ಅಲೆಮಾರಿಗಳ ರಂಗತಂಡ. ಹಗಲಿನಲ್ಲಿ ಮನೆ ಮನೆಗಳಿಗೆ ಹೋಗಿ ಬಟ್ಟೆ, ಅಕ್ಕಿ, ಕಾಯಿಗಳನ್ನು ಬೇಡುತ್ತ, ರಾತ್ರಿ ನಾಟಕ ಪ್ರದಶರ್ಿಸುತ್ತಿತ್ತು. ಆಯಾದಿನ ಸಂಗ್ರಹಿಸಿದ ಹಳೆ ಬಟ್ಟೆಗಳನ್ನು ನಾಟಕದಲ್ಲಿ ಹೊಸರೂಪದೊಂದಿಗೆ ಅವರು ಬಳಸುತ್ತಿದ್ದರು. ಆಗ ಸದಾರಮೆ ನಾಟಕ ಮಾಡುತ್ತಿದ್ದರು. ನಾನು ನನ್ನಮ್ಮನ ಸೀರೆಯೊಂದನ್ನು (ಸ್ವಲ್ಪ ಚೆನ್ನಾಗಿರೋದು) ಅವರಿಗೆ ಕದ್ದು ಕೊಟ್ಟಿದ್ದೆ. ಅವತ್ತಿಂದ ನನಗೆ ನಾಟಕಕ್ಕೆ ಫ್ರೀ ಪಾಸ್, ಆದಿನ ಆ ಸೀರೆಯ ಅಂಚನ್ನು ತೆಗೆದು ಹಳೆಯ ಸೀರೆಯ ಬಾರ್ಡರ್ ಅಂಟಿಸಿಕೊಂಡು ಸದಾರಮೆ ಫ್ರೆಶ್ ಆಗಿ ನಗುತ್ತ ನಾಟಕಕ್ಕೆ ಕಳೆ ಏರಿಸಿದ್ದಳು. ಇದೊಂದು ರೂಪಕವಾಗಿ ನನಗೆ ಈ ಹೊತ್ತು ಕಾಣಿಸುತ್ತಿದೆ. ಆಧುನಿಕ ರಂಗಭೂಮಿಯ ಅಪಾರ ಮಡಿವಂತಿಕೆ ಒಂದು ಬಗೆಯ ಟ್ರಿಮ್ ಮಾಡಿದಂತಿರುವ ಅತಿ ಶಿಸ್ತು ಈ ಯಾವ ಒಳಗೊಳ್ಳುವಿಕೆಯನ್ನೂ ಬಯಸುವುದಿಲ್ಲ.

              ಕಂಪನಿ ನಾಟಕಗಳು ಭಾರತದ ರಂಗಸಂಪ್ರದಾಯಗಳ ಕಥನವನ್ನು ಮುಂದುವರಿಸಿ ಕೊಂಡು ಬಂದವು. ನಿರೂಪಣಾತ್ಮಕವಾದ ರಂಗಭೂಮಿ ಅದು. ಆದರೆ ನಾವು ಆಧುನಿಕರು, ಪ್ರಸ್ತುತ ಪಡಿಸುತ್ತಿರುವುದು ವ್ಯಾಖ್ಯಾನ ಪ್ರಧಾನ ರಂಗಭೂಮಿಯನ್ನು. ನಿರೂಪಣೆಯೇ ವ್ಯಾಖ್ಯಾನವೂ ಆಗಬಲ್ಲದು ಎಂಬುದನ್ನೂ,  ಒಂದು ಕಥೆಯನ್ನು ನಾವು ಹೇಗೆ ನಿರೂಪಿಸುತ್ತೇವೆ ಎಂಬುದೇ ಅದರ ವ್ಯಾಖ್ಯಾನವು ಕೂಡ ಆಗುತ್ತದೆ ಎಂಬುದನ್ನೂ ಮರೆತು, ವ್ಯಾಖ್ಯಾನಕ್ಕಾಗಿಯೇ ಇಡೀ ನಾಟಕವನ್ನು ಹವ್ಯಾಸಿ ರಂಗಭೂಮಿ ದುಡಿಸಿಕೊಳ್ಳುತ್ತದೆ.  ಹೀಗಾಗಿ ಪ್ರೇಕ್ಷಕರಿಗಾಗಿ ಏನನ್ನೂ ಬಿಡದೆ ಒಂದು ಸಿದ್ದ ಪ್ರಾಡೆಕ್ಟನ್ನು ಇದು ನೀಡುತ್ತಿದೆ. ಹಾಗಾದಾಗ ಅದರ ಜೀವಂತಿಕೆಯೇ ಮರೆಯಾಗುತ್ತದೆ. ನಿದರ್ೆಶಕ ಕೊಟ್ಟ ಒಂದೇ ಬಗೆಯ ವ್ಯಾಖ್ಯಾನದಿಂದಾಗಿ ಪ್ರದರ್ಶನ ತೆರೆದಿಡುವ ಹಲವಾರು ವ್ಯಾಖ್ಯಾನಗಳು, ಸಾಧ್ಯತೆಗಳು ಮುಚ್ಚಿ ಹೋಗುತ್ತವೆ. ಎಲ್ಲ ನಟರೂ ನಿದರ್ೆಶಕರಂತೆ ಮಾತನಾಡುತ್ತಾರೆ. ಮುಂದುವರಿದು ನಿದರ್ೆಶಕರ ಲೋಕಗೃಹಿಕೆಯೇ ನಾಟಕದ ಲೋಕಗೃಹಿಕೆಯೂ ಆಗುವ ಹಾಗೆ, ಅದನ್ನು ಪ್ರೇಕ್ಷಕ ಒಪ್ಪುವ ಹಾಗೆ ಅದು ಒತ್ತಾಯಿಸುತ್ತದೆ. ಕಥನದ ನೂರೆಂಟು ಸಾಧ್ಯತೆಗಳು ಮಾಯವಾಗುತ್ತಿವೆ.

                ಒಂದು ನಿರ್ದಿಷ್ಟ ವೈಚಾರಿಕ ಆಕೃತಿಗೆ ಮಾತ್ರವೇ ಮಾತು ಕೊಡುವ ಇರಾದೆ ಹೊಂದಿದ ಹವ್ಯಾಸಿ ರಂಗಭೂಮಿ ಆ ಕಾರಣಕ್ಕಾಗಿಯೇ ಶುಷ್ಕವಾದ ಅಭಿನಯವನ್ನು ಆತುಕೊಳ್ಳುತ್ತಿದೆ. ನಟನಾದವನ ಜವಾಬ್ದಾರಿ ಈ ಕಲಿತ ಮಾತುಗಳನ್ನು ಒಪ್ಪಿಸುವುದು ಮಾತ್ರವಾಗಿರುವುದರಿಂದ ಅಭಿನಯ ಸಲೀಸಾಗುತ್ತದೆ. ಅದಕ್ಕಾಗಿ ಯಾವ ವಿಶೇಷ ರಿಯಾಜ್ಗಳೂ ಅಗತ್ಯ ಎನಿಸುತ್ತಿಲ್ಲ. ಬದಲಾಗಿ ನಾವು ಈಚಿನ ರಂಗಭೂಮಿಯವರು ಕಂಪನಿ ನಾಟಕದ ನಟರ ಅಭಿನಯವನ್ನು `ಮೆಲೋಡ್ರಾಮಾ, `ಭಾವಾತಿರೇಕ ಎಂದು ನಮಗೆ ಕಲಿಸಿಕೊಟ್ಟ ಮಾತುಗಳನ್ನೇ ಉರು ಹೊಡೆದು ಹೇಳುತ್ತ ಬಂದೆವು. ಭಾವ ತನ್ಮಯತೆಯನ್ನು ಬ್ರೆಕ್ಟನ ಹೆಸರಲ್ಲಿ ತಪ್ಪು ತಪ್ಪಾಗಿ, ಜಾಳು ಜಾಳಾಗಿ ವಿಶ್ಲೇಷಿಸಿ ಅದನ್ನೊಂದು ಅಪರಾಧ ಎನ್ನುವಂತೆ ನೋಡಿದೆವು. ಈ ತನ್ಮಯತೆ ಮತ್ತು  ವಾಸ್ತವ ಪ್ರಜ್ಞೆಗೆ ಸಂಬಂಧಿಸಿದ ಒಂದು ಸಂಗತಿ ಹೀಗಿದೆ. ಗರುಡರ ಕಂಪನಿಯಲ್ಲಿ ನಾಟಕ ಶಿಕ್ಷಕರಾಗಿ ಸೇರಿ ನಂತರ ಪ್ರಧಾನ ಪಾತ್ರವಹಿಸಿ ಮುಂದೆ `ಜಯಕನರ್ಾಟಕ ನಾಟಕ ತಂಡ ಕಟ್ಟಿದ ಹುಲಿಮನೆ ಸೀತಾರಾಮ ಶಾಸ್ತ್ರಿಯವರನ್ನು ಗೌರೀಶ ಕಾಯ್ಕಿಣಿಯವರು ಸಂದರ್ಶನ ಮಾಡಿದ್ದರು. ಆ ಕುರಿತ ಕಾಯ್ಕಿಣಿಯವರ ಬರೆಹವನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ..... ಹುಲಿಮನೆ ಶಾಸ್ತ್ರಿ ಅಸಾಮಾನ್ಯ ಅಭಿನಯಪಟು. ಅಭಿನಯವಲ್ಲ ಥೇಟು ಯತಾರ್ಥ. ಯಾವ ಪಾತ್ರವನ್ನೂ ಸಹ ಸಮರ್ಥವಾಗಿ ಸಜೀವಗೊಳಿಸುತ್ತಿದ್ದರು. ಪಾತ್ರಾಭಿನಯದಲ್ಲಿ ತನ್ಮಯರಾಗಿ ಕಾಣುತ್ತಿದ್ದರು. ಅಥರ್ಾತ್ ಪ್ರೇಕ್ಷಕರ ರೋಮಾಂಚಿತ ದೃಷ್ಟಿಗೆ. ಆ ಕುರಿತು ನಾನು ಅವರನ್ನು ಕೇಳಿದೆ ಶಾಸ್ತ್ರಿಗಳೇ ರಂಗದಲ್ಲಿ ಅಷ್ಟೊಂದು ತನ್ಮಯ ಭಾವದಿಂದಲೇ ನಟಿಸುತ್ತೀರಾ? ಅದಕ್ಕೆ ಅವರು ಅಂದರು  `ಹಾಗೆ ಅಭಿನಯಿಸುವುದು ಉಂಟು. ಯಾವ ಪಾತ್ರವೇ ಇರಲಿ ಅದರ ಪ್ರಭಾವಕ್ಕೆ ತಕ್ಕಂತೆ ಅಂತ ನಟರು ತನ್ಮಯರಾಗಿ ಬಿಡುತ್ತಾರೆ. ಆದರೆ ತಾನೇ ಆಯಾ ಪಾತ್ರದ ಭೂಮಿಕೆಯೊಡನೆ ಒಂದಾದರೆ ಅದು ನಟನೆಯಾದೀತೆ? ನಾನು ಅಥವಾ ಗರುಡ ಸದಾಶಿವರಾಯ ಹಾಗಲ್ಲ.  ನಮಗೆ ಎಂಥ ಅಮೋಘ ಅಭಿನಯದಲ್ಲಿಯೂ ಆತ್ಮಪ್ರಜ್ಞೆ ಜಾಗೃತವಾಗಿರುತ್ತಿತ್ತು. ಕೀಚಕವಧೆ ನಾಟಕದಲ್ಲಿ ನಾನು ಭೀಮ, ಗರುಡರು ಕೀಚಕ. ಭೀಮನು ಕೀಚಕನನ್ನು ರೋಷಾವೇಷದಲ್ಲಿ ಎತ್ತಿಹಿಡಿದಾಗ ಪ್ರೇಕ್ಷಕನು ಉಸಿರುಗಟ್ಟಿ ಹಿಡಿದು ನೋಡುತ್ತಿದ್ದಾಗ ಗರುಡರು `ಶಾಸ್ತ್ರಿ ನನ್ನನ್ನು ಗಟ್ಟಿ ಹಿಡಿ. ಬಿದ್ದೇನು ಎಂದು ಪಿಸುಗುಡುತ್ತಿದ್ದರು.
ಅಭಿನಯದ ಕುರಿತ ಈ ಚಿಂತನೆಯನ್ನು ನಾವು ಆಧುನಿಕರು ಏನೆಂದು ಗುರುತಿಸಿದ್ದೇವೆ?

           ನಮ್ಮ ರಂಗ ಪರಂಪರೆ ಕಾವ್ಯಾಭಿನಯಕ್ಕೆ ಸಂಬಂಧಿಸಿದ್ದು, ಕಾವ್ಯದೊಡನೆಯ ಸಾಹಚರ್ಯ ಅದರ ಅಭಿಯನದ ವ್ಯಾಕರಣವನ್ನು ರೂಪಿಸಿದೆ.  ಮಾತು-ಗೀತ ಇವೆರಡೂ ಒಡೆಯದ ಒಂದು ನಿದರ್ಿಷ್ಟ ಶ್ರುತಿಯಲ್ಲಿ ಇದನ್ನು ಮೇಳೈಸಿಕೊಂಡ ಅಭಿನಯ ಪರಂಪರೆ ನಮಗಿದೆ. ಮಾತು ಸಾಧಿಸಲಾರದ ಹಲವು ಭಾವಗಳನ್ನು ಗೀತ ಸಂವಹಿಸುತ್ತದೆ. ಕಂಪನಿ ನಾಟಕ ಇದನ್ನು ಚೆನ್ನಾಗಿ ನಿರ್ವಹಿಸಿಕೊಂಡು ಬಂದಿತು.ಆಧುನಿಕ ರಂಗಭೂಮಿಯ ಸಂಕಟ ಗದ್ಯಾಭಿನಯಕ್ಕೆ ಸಂಬಂಧಿಸಿದ್ದು. ಅವಾಸ್ತವ ಎಂದು ಮೊದಲ ಹಾಡನ್ನು ಪಕ್ಕಕ್ಕಿಟ್ಟ ಈ ರಂಗಭೂಮಿ ಅನಂತರ ಕಷ್ಟಪಟ್ಟು ಸಂಗೀತವನ್ನು ತೇಪೆ ಹಾಕಿಕೊಳ್ಳಲು ಆರಂಭಿಸಿದೆ. ಗದ್ಯಾಭಿನಯದ ವ್ಯಾಕರಣ ನಮಗಿನ್ನೂ ತಿಳಿದಿಲ್ಲ. ಹಾಗಾಗಿ ಸಂವಹನದ ಕೊರತೆ ನೀಗಿಸಲು ಅತಿಯಾದ ಪರಿಕರಗಳನ್ನು ರಂಗದಲ್ಲಿ ಇಡಿಕಿರಿಸಿದ್ದೇವೆ. ನಟನ ದೇಹಕ್ಕೆ ಅವಮಾನ ಮಾಡುವಷ್ಟು ಪರಿಕರಗಳನ್ನು ಆ ಸ್ಥಾನದಲ್ಲಿ  ತುಂಬಿದ್ದೇವೆ, ಇಲ್ಲವೇ ಅತಿಯಾದ ಶೈಲಿಕೃತ  ಅಭಿನಯಕ್ಕೆ ಮೊರೆಹೋಗುತ್ತಿದ್ದೇವೆ.
ಈ ಎಲ್ಲ ಹಿನ್ನೆಲೆಯಲ್ಲಿ ನಾವು ಆಧುನಿಕರು, ಹವ್ಯಾಸಿ ರಂಗ ಕಮರ್ಿಗಳು ನಾವು ಕಳೆದುಕೊಂಡದ್ದೇನು ಎಂಬುದನ್ನು ತಿರುಗಿ ನೋಡಲೇಬೇಕಿದೆ. ನಮ್ಮನ್ನು ನಾವು ಆಧುನಿಕಗೊಳಿಸಿಕೊಳ್ಳಲು ಇತಿಹಾಸದ ಏನೆಲ್ಲ ಅರಿವನ್ನು ಹೊರಗೆಸೆದಿದ್ದೇವೆ ಎಂಬುದನ್ನು ಮತ್ತೆ ಪರಿಶೀಲಿಸಬೇಕಿದೆ. ಅದಕ್ಕೇ ಈ ಅನ್ವಯ ಮಾರ್ಗದ ಶೋಧವನ್ನು ಪರಿಶೀಲಿಸಬೇಕಿದೆ. ಅದರೆ ಈ ದಾರಿ ಸುಲಭ ಸಾಧ್ಯವೇನಲ್ಲ. ಅನ್ವಯ ಮಾರ್ಗದ ಎರಡೂ ತುದಿಗಳ ತಾತ್ವಿಕತೆಯೇ ತೀರ ಭಿನ್ನವಾದುದು.

                ಮೂಲಭೂತವಾಗಿ ಕಂಪನಿ ನಾಟಕಗಳ ಹಿಂದಿನ ತಾತ್ವಿಕತೆ ಸದ್ಯಪರ ನಿವರ್ೃತಯೆ ಎಂಬ ಮಿಮಾಂಸೆಯದು. ಆಧುನಿಕ ರಂಗಭೂಮಿ `ಮರೆಯಬಾರದ ನೋವುಗಳನ್ನು ತಲ್ಲಣಗಳನ್ನು ಹಿಡಿದಿಡುವಂಥದ್ದು. ಇವೆರಡೂ ತಾತ್ವಿಕ ಮಾರ್ಗಗಳ ಅರಿವು ಈ ಅನ್ವಯ ಮಾರ್ಗದಲ್ಲಿ ನಡೆಯುವವನಿಗೆ ಸ್ಪಷ್ಟವಾಗಿ ಇರಬೇಕಾಗುತ್ತದೆ. ಇಲ್ಲವಾದರೆ ಶಿವರಾಮ ಕಾರಂತರು ಹೇಳುವ ಹಾಗೆ ರಂಗ ಪ್ರದರ್ಶನವೆಂಬುದು `ನಾವೆಲ್ಟಿ ಷೋ ಆಗಿ `ಜನತಾ ಬಜಾರ್ ಆಗಿ ಪರಿಣಮಿಸಿ ಬಿಡುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ನಡುವಿನ ಸಾಧ್ಯತೆಗಳನ್ನು ಶೋಧಿಸುವ ಪ್ರಯತ್ನ ನಡೆಯಬೇಕಿದೆ. ಕ್ರೀಡಾ ನೀಯಕ ವನ್ನು ಸ್ಥಾಪಿಸಿಕೊಳ್ಳುತ್ತ ನಮ್ಮ ಪರಂಪರೆಯಲ್ಲಿರುವ ಕಥನಗಳನ್ನು ಎತ್ತಿಕೊಳ್ಳಬೇಕಿದೆ. ಅಂದರೆ ನಾವು ಹವ್ಯಾಸಿ ರಂಗಭೂಮಿಯವರು ಮತ್ತೆ ಪರದೆ ಹಾಕಿಯೇ ನಾಟಕ ಮಾಡಬೇಕೆಂದಲ್ಲ .  ಆದರೆ ಅವರ ಪರದೆ ವ್ಯವಸ್ಥೆಯ ಹಿಂದಿನ ತಾತ್ವಿಕತೆಯನ್ನು, ಅದನ್ನು ಬಳಸಿಕೊಳ್ಳಬೇಕಾದ ಹೊಸ ಸಾಧ್ಯತೆಯನ್ನು ಗಮನಿಸಲೇಬೇಕಾಗಿದೆ.
ನಾವು ಇಂದು ಏಕಕಾಲದಲ್ಲಿ ಸಾಂಪ್ರದಾಯಿಕವೂ ಆಗುವ ಆಧುನಿಕವೂ ಆಗಬೇಕಾದ ಪಾಕವನ್ನು ಸಿದ್ಧಿಸಿಕೊಳ್ಳಬೇಕಿದೆ. ಇದನ್ನು ಸಾರಸಗಟಾಗಿ ಮಿಸಳಬಾಜಿ ಎಂದು ತಳ್ಳಿ ಹಾಕುವಂತಿಲ್ಲ. ನಾನು ನಿಮಗೆ ಈ ಕುರಿತು ಉದಾಹರಣೆಯೊಂದನ್ನು ನಿಡುತ್ತೇನೆ. ಯಕ್ಷಗಾನದಂತಹ ಸಂಪ್ರದಾಯಿಕ ಪ್ರಕಾರಗಳಲ್ಲಿ ಅತ್ಯುನ್ನತ ಸಿದ್ಧಿ ಸಾಧಿಸದ ನಟರೂ ಸಹ ರಂಗಭೂಮಿಯ ಅಂಶಗಳನ್ನು ಮೇಳೈಸಿಕೊಂಡು ಬೆಳೆದ ಉದಾಹರಣೆಗಳು ಇವು.  ರಾಷ್ಟ್ರಪ್ರಶಸ್ತಿ ಪಡೆದ ಶಿವರಾಮ ಹೆಗಡೆವರು ಶ್ರೀರಂಗರಂತವರ ಸಂಪರ್ಕ ಹೊಂದಿದ್ದರು. ಮಹಾಬಲ ಹೆಗಡೆಯವರು ಕೈಲಾಸಂ ಅವರು ಕಟ್ಟಿಕೊಟ್ಟ ಕೀಚಕನ್ನನ್ನು, ಕಂದಗಲ್ಲರ ರಕ್ತರಾತ್ರಿ ನಾಟಕದಲ್ಲಿ ನಿಮರ್ಿತಿಗೊಂಡ ಅಶ್ವತ್ಥಾಮನನ್ನು ಹಾಗೂ ಬಿ.ಎಂ.ಶ್ರೀಯವರ ಆಶ್ವತ್ಥಾಮ ನಾಟಕದ ಆಶ್ವತ್ಥಾಮ ನನ್ನು ಅನುಸರಿಸಿ ಆಯಾ ಪಾತ್ರಗಳ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಶಂಭು ಹೆಗಡೆಯವರು ಎನ್.ಎಸ್.ಡಿ.ಯಲ್ಲಿ ಪಡೆದ ಕೋರಿಯೋಗ್ರಪಿ ತರಬೇತಿ ಯಕ್ಷಗಾನ ರಂಗಕ್ಕೂ ಹೊಸಕಳೆ ತಂದಿತು.
ಕಂಪನಿ ನಾಟಕದ ಪ್ರಸಿದ್ಧ ಕಲಾವಿದರರಾಗಿದ್ದ ಏಕ್ಟರ್ ಜೋಶಿ ಮುಂದೆ ಯಕ್ಷಗಾನದಲ್ಲಿ ಪಾತ್ರವಹಿಸುತ್ತ ಅಲ್ಲಿಯೂ ಏಕ್ಟರ್ ಜೋಶಿಯಾಗಿಯೇ ಉಳಿದರು. ಮೂರೂರು ದೇವರು ಹೆಗಡೆ ಕಂಸನನ್ನು ಚಿತ್ರಿಸುವಾಗ ಅದ್ಭುತ ನಾಟಕೀಯ ತಂತ್ರಗಳನ್ನು ಬಳಸುತ್ತಿದ್ದರು. ಇವರೆಲ್ಲ ಯಕ್ಷಗಾನದ ಮೇರುನಟರೆನಿಸಿಕೊಂಡವರು ಎಂಬುದಕ್ಕಾಗಿಯೇ ಇಲ್ಲಿ ಉಲ್ಲೇಖಿಸಿದ್ದೇನೆ. ಪಾಸರ್ಿ ನಾಟಕದ ನಂಜುಂಡ ಎಂಬ ನಟ ಹನುಮಂತನ ಪಾತ್ರದಲ್ಲಿ ಅದ್ಭುತ ಹೆಸರುಗಳಿಸಿದ್ದ. ಆತನ ನಾಟಕಗಳು ಕರಾವಳಿಯಲ್ಲಿ ಪ್ರದರ್ಶನಗೊಂಡ ನಂತರ ಇಂದಿಗೂ ಯಕ್ಷಗಾನದ ಹನುಮಂತ ನಾಟಕದ ಹನುಮಂತನಾಗಿಯೇ ಜೀವ ಹಿಡಿದಿದ್ದಾನೆೆ ಎಂಬುದು ಕರಾವಳಿ ಯಕ್ಷಗಾನದ ಇತಿಹಾಸ ಬಲ್ಲವರಿಗೆಲ್ಲ ಗೊತ್ತು.
              ಈ ಉದಾಹರಣೆಗಳನ್ನು ನಾನು ಇಲ್ಲಿ ನೀಡುತ್ತಿರುವುದರ ಉದ್ದೇಶ ಈ ಒಳಗೊಳ್ಳುವಿಕೆ ಹೇಗೆ ಆಯಾ ಕಲಾಪ್ರಕಾರಗಳನ್ನು ಜನಪ್ರಿಯಗೊಳಿಸುತ್ತದೆ ಅಲ್ಲದೇ ಅವುಗಳ ವಿಸ್ತರಣೆಯ ಅಂಗವೂ ಆಗಿ ಪರಿಣಮಿಸುತ್ತದೆ ಎಂಬುದನ್ನು ಸೂಚಿಸಲು ಮಾತ್ರ.                                                              
                                                                                                                 -ಶ್ರೀಪಾದ ಭಟ್ಟ್

No comments:

Post a Comment